Saturday, December 28, 2013

ಯಕ್ಷಗಾನ, ಇಂದು ನಮ್ಮಿಂದ ನಿಧಾನವಾಗಿ ಮರೆಯಾಗುತ್ತಿದೆಯೇ?

ಜನವರಿ ೨೬ ಹತ್ತಿರ ಬರುತ್ತಿದ್ದಂತೆ ನನಗೆ ನೆನಪಾಗುವುದು ನಮ್ಮೂರಲ್ಲಿ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದೊಡನೆ, ನಮ್ಮೂರಲ್ಲಿ ಯಾವ ಪ್ರಸಂಗ ನಡೆಯಲಿದೆ, ಅದರಲ್ಲಿ ಯಾರು - ಯಾರು ಭಾಗವಹಿಸುತಿದ್ದಾರೆ, ಹಿಮ್ಮೆಳದಲ್ಲಿ ಯಾರಿದ್ದಾರೆ, ಮ್ಮುಮ್ಮೆಳದಲ್ಲಿ ಯಾರಿದ್ದಾರೆ, ವಿಧೂಷಕರೂ ಯಾರು, ಶ್ತ್ರೀ ಪಾತ್ರದಲ್ಲಿ ಯಾರಿದ್ದಾರೆ, ಎಂದೆಲ್ಲ ತಿಳಿದುಕೊಳ್ಳುವ ಕುತೂಹಲ. ಪ್ರಸಂಗ ನಿಶ್ಚಯವಾದೊಡನೆ, ಅದರ ಕರ ಪತ್ರಕ್ಕಾಗಿ ಹುಡುಕಾಟ. ಸಿಕ್ಕೊಡನೆ, ಅದರ ಒಂದೊಂದು ಶಬ್ಧವನ್ನು ಬಿಡದೇ ಓದುವುದು. ಶಾಲೆಗೆ ಹೋಗಿ ಗಣರಾಜೋತ್ಸವದ ಧ್ವಜ ಹಾರಾಟ ಮುಗಿಸಿದ ತಕ್ಷಣ ಮನೆಗೆ ಬಂದು, ಊಟದ ಶಾಸ್ತ್ರ ಮಾಡಿ, ಬಯಲಾಟ ನಡೆಯುವ ಸ್ಥಳಕ್ಕೆ ಆಗಮಿಸುವುದು. ಅಲ್ಲಿ ಚಪ್ಪರ ಹಾಕುವುದರಿಂದ ಹಿಡಿದು, ಬಜನೆ ಪ್ರಾರಂಭವಾಗುವವರೆಗೂ ಅಲ್ಲಿದ್ದು ಮತ್ತೆ ಮನೆಗೆ ಬಂದು ಮತ್ತೆ ರಾತ್ರಿ ಊಟದ ಶಾಸ್ತ್ರ ಮಾಡಿ, ಹಣ್ಣು ಹಂಪಲುಗಳ ಸವಾಲು ಪ್ರಾರಂಭವಾಗುತ್ತಿದಂತೆ ಮತ್ತೆ ಬಯಲಾಟದ ಸ್ಥಳಕ್ಕೆ ಹಾಜಾರ್. ಆಟ ಪ್ರಾರಂಭವಾಗುವುದರೊಳಗೆ ಎಲ್ಲಿ ಯಾವ ಅಂಗಡಿ ಇದೆ, ಏನೇನು ಇಟ್ಟು ಕೊಂಡಿದ್ದಾರೆ, ಎಲ್ಲ ವಿಕ್ಷಿಸಿ ಬರುವುದಷ್ಟೇ ನಮ್ಮ ಕೆಲಸ, ತೆಗೆದುಕೊಳಲ್ಲಂತು ಆಗುತ್ತಿರಲಿಲ್ಲ. ಯಾಕೆಂದರೆ ಆಗ ನಾವೆಲ್ಲ ಯಕ್ಷಗಾನ ನೋಡಲು ಬರುತ್ತಿದ್ದುದು ಬರೀ ಕೈಯಲ್ಲಿ. ಎಲ್ಲೋ ಅಪರೂಪಕ್ಕೆ ೨೫ ಪೈಸೆನೋ, ೫೦ ಪೈಸೆನೋ ಸಿಕ್ಕರೆ ನಮ್ಮ  ಖುಷಿಗೆ ಮಿತಿಯೇ  ಇರುತ್ತಿರಲಿಲ್ಲ. ಸಿಕ್ಕ ಹಣದಲ್ಲಿ ಹುರಿದ ಕಡಲೆಯನ್ನೋ, ಚೊಕಲೇಟನ್ನೋ ತೆಗೆದುಕೊಳ್ಳುತ್ತಾ, ಅಲ್ಲಿ ಇಲ್ಲಿ ಸುತ್ತಾಡುತ್ತಾ, ಆಮೇಲೆ ಯಕ್ಷಗಾನ ಪ್ರಾರಂಭವಾದ ಒಂದೆರಡು ಗಂಟೆಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಹೋಗಿ ಮಲಗಿಬಿಡುತ್ತಿದ್ದೆವು. ಆಗಾಗ ಏಳುತ್ತಾ ಮತ್ತೆ ಮಲಗುತ್ತಾ, ಕಡೆಯಲ್ಲಿ ಮಂಗಳ ಹಾಡು ಕಿವಿಗೆ ಬಿಳುತ್ತಿದ್ದಂತೆ ಎದ್ದು ಕಣ್ಣೊರಿಸುತ್ತಾ ಮನೆಗೆ ಬಂದು ಬಿಡುತ್ತಿದ್ದೆವು. ಆಗ ಮನೆಯಲ್ಲಿ ಅಪ್ಪ- ಅಮ್ಮನ್ನ ಬಿಟ್ಟರೆ ನಮ್ಮನ್ನ ಕೇಳುವವರಾರಿರಲಿಲ್ಲ, ನಾವು ಮಾಡಿದ್ದೇ ರಾಜ್ಯ. ಆಗಿನ್ನು ಮೀಸೆ ಮೂಡದ, ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳು. ನನಗಿನ್ನು ನೆನಪಿದೆ ಮೊದಲ ಯಕ್ಷಗಾನ ನಡೆಯುತ್ತಿದ್ದದು, ನಮ್ಮೂರ ಕೆಳಗಿರುವ ಗದ್ದೆ ಬಯಲಲ್ಲಿ. ಮೊದಲು ಯಕ್ಷಗಾನಗಳು ನಡೆಯುತ್ತಿದ್ದುದು ಬಯಲಲ್ಲಿ ಆದ್ದರಿಂದ ಅದಕ್ಕೆ ಬಯಲಾಟ ಅಂತ ಕರೆಯುತ್ತಿದ್ದರು ಅನಿಸುತ್ತೆ. ಹಾಗೆ ಯಾವುದಾದರೂ ಮೇಳದವರು ಬಂದು ನಡೆಸಿಕೊಡುವ ಯಕ್ಷಗಾನಕ್ಕೆ ಮೇಳದ ಆಟ ಅಂತಾ ಹೇಳುತ್ತಿದ್ದರು.

ನನಗಿನ್ನೂ ನೆನಪಿದೆ, ಮೊದಲು ನಮ್ಮೂರಲ್ಲಿ ಜನವರಿ ೨೬ ರಂದು ಒಂದು ಆಟವಾದರೆ, ಹಾಗೆ ಮಾರ್ಚ, ಎಪ್ರಿಲ್ ನಲ್ಲಿ ಬಜನೆ ಆಟ, ಹಾಗೆ  ಮೇ ನಲ್ಲಿ ಮಕ್ಕಳ ಆಟಗಳು ನಡೆಯುತ್ತಿದ್ದವು. ನಾವು ಚಿಕ್ಕವರಿದ್ದಾಗ ಹೊಸ್ತೋಟ ಮಂಜುನಾಥ ಭಾಗವತರು ಬಂದು ನಮ್ಮೂರಲ್ಲೇ ಉಳಿದು, ನಮ್ಮೂರ ಯುವಕ ಸಂಘದಲ್ಲಿ ಚಿಕ್ಕ-ಚಿಕ್ಕ ಮಕ್ಕಳಿಗೆಲ್ಲ ಯಕ್ಷಗಾನ ಹೇಳಿಕೊಟ್ಟು ಅವರಿಂದ ಒಂದು ಆಟ ಆಡಿಸಿ ಹೋಗುತ್ತಿದ್ದರು. ಆದರೆ ಕ್ರಮೇಣ ಅವರಿಗೆ ವಯಸ್ಸಾದಂತೆ ಅವರು ಬರುವುದು -ಉಳಿಯುವುದು ಇಲ್ಲಿ ಕಷ್ಟವಾದ್ದರಿಂದ, ಅವರು ಇಲ್ಲಿಗೆ ಬರುವುದು ತಪ್ಪಿಹೋಯಿತು. ಹಾಗೆ ಮುಂದೆ ಬಜನೆ ಆಟ ಮತ್ತು ೨೬ರ ಎರಡು ಆಟಗಳನ್ನೂ ಒಂದು ಗೂಡಿಸಿ ವರ್ಷಕ್ಕೆ ಒಂದೇ ಆಟವಾಗಿ ಮಾರ್ಪಟ್ಟಿತು. ಅಷ್ಟೇ ಅಲ್ಲ ಮೊದಲು ವರ್ಷಕ್ಕೆ ಒಂದಾದರೂ ಮೇಳದ ಆಟವಾಗುತ್ತಿತ್ತು. ಆದರೆ ಇವತ್ತು ಅವೆಲ್ಲ ನಿಂತೂ ಹೋಗಿವೆ. ಕಾರಣಗಳು ಹಲವು, ಅದರಲ್ಲಿ ಮೊದಲನೆಯದಾಗಿ ನುರಿತ ಯಕ್ಷಗಾನ ಪಟುಗಳ ಕೊರತೆ, ಇವತ್ತು ಯಕ್ಷಗಾನ ನೋಡುವುದನ್ನ ಬಿಟ್ಟರೆ ಅದನ್ನ ಕಲಿಯಬೇಕು ಅನ್ನುವ ಆಸಕ್ತಿ ನಮ್ಮ ಜನತೆಯಲ್ಲಿ ಕಡಿಮೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಅಂದರೆ ಇವತ್ತಿನ ಚಲನಚಿತ್ರ, ದೂರದರ್ಶನ, ರೇಡಿಯೋಗಳಿಲ್ಲದ ಸಮಯದಲ್ಲಿ ಯಕ್ಷಗಾನ ಒಂದು ಮನರಂಜನೆಯ ಸಾಧನವಾಗಿತ್ತು. ಕ್ರಮೇಣ ಚಲನಚಿತ್ರ ಯಕ್ಷಗಾನವನ್ನ ಹಿಂದಿಕ್ಕಿ, ತನ್ನ ಮುನ್ನಡೆಯನ್ನ ಸಾಧಿಸತೊಡಗಿತು. ಹಾಗೆ ಮುಂದೆ ದೂರದರ್ಶನ ಎಲ್ಲವನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಅಷ್ಟೇ ಅಲ್ಲ ನೂರಾರು ಚಾನೆಲಗಳು, ನೂರಾರು ಧಾರವಾಹಿಗಳು ಇವೆಲ್ಲವು ಯಕ್ಷಗಾನವನ್ನ ಹಿಂದ್ದಿಕ್ಕಿ ಮುನ್ನಡೆಯನ್ನು ಸಾಧಿಸಿವೆ. ಜನ ಇವತ್ತು ದೂರ ದರ್ಶನಗಳ ದಾಸರಾಗುತ್ತಿದ್ದಾರೆ. ವೇಷಧರಿಸಿ ಕುಣಿದು, ರಾತ್ರಿಯೆಲ್ಲ ನಿದ್ದೆಗೆಟ್ಟು ಮನರಂಜನೆ ನೀಡುವ ಕಲಾವಿಧರು ಕಡಿಮೆಯಗುತ್ತಿದ್ದಾರೆ. ಕೆಲವು ಸಂಸ್ಥೆಗಳು ಯಕ್ಷಗಾನವನ್ನು ಜೀವಂತ ಇಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಇದು ಇವತ್ತಿನ ದೂರದರ್ಶನಗಳ ಮುಂದೆ, ತನ್ನ ಜನಪ್ರೀಯತೆಯನ್ನ ಕಳೆದುಕೊಳ್ಳುತ್ತಿದೆ. ಮುಂದೆ ಹೀಗಾದಲ್ಲಿ ಯಕ್ಷಗಾನ, ಅವನತಿಯ ಹಂತಕ್ಕೆ ತಲುಪಿದ್ದಲ್ಲಿ ಆಶ್ಚರ್ಯವೇನಿಲ್ಲ. ಹೀಗೆ ಮುಂದುವರೆದರೆ ಮುಂದೆ ನಮ್ಮ ಮಕ್ಕಳಿಗೆ ಯಕ್ಷಗಾನ ಹೀಗಿತ್ತು, ಹಾಗಿತ್ತು ಅಂತಾ ತೋರಿಸಲು ಸಾಕ್ಷಿಗಳಿರಲಿಕ್ಕಿಲ್ಲ.

ಇಷ್ಟೆಲ್ಲ ಹೇಳಿ ಯಕ್ಷಗಾನ ಅಂದರೇನು ಅಂತ ಹೇಳದಿದ್ದಲ್ಲಿ ಈ ಲೇಖನ ಪೂರ್ತಿಯಾಗುವುದಿಲ್ಲ. ಮಾನವ ಸಮಾಜ ಜೀವಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಮನುಷ್ಯ ಒಂದು ಕಡೆ ನೆಲೆನಿಂತು, ಸಮಾಜ ಜೀವಿಯೊಡನೆ ತನಗಿರುವ ವಿಶ್ರಾಂತಿ ಸಮಯವನ್ನ ಮನರಂಜನೆಗಾಗಿ ಉಪಯೋಗಿಸಿಕೊಳ್ಳುತ್ತಿದ್ದ. ಹಾಗೆ ಮನರಂಜನಾ ಸಮಯದಲ್ಲಿ ಉದ್ಭವಿಸಿದ ಕಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ತಲೆ ತಲಾಂತರದಿಂದ ಹರಿದು ಬಂದ ಜನಪದ ಕಲೆಗಳೆನಿಸಿಕೊಂಡಿವೆ. ಮಾನವ ವಿಕಾಶದೊಂದಿಗೆ ಕೆಲವು ಕಲೆಗಳು ಅವನತಿಯನ್ನ ಹೊಂದಿದ್ದರೆ, ಕೆಲವು ಕಲೆಗಳು ಇನ್ನೂ ಜೀವಂತವಾಗಿವೆ. ಅಂತಹ ಕಲೆಗಳಲ್ಲಿ ಯಕ್ಷಗಾನವು ಒಂದು. ಯಕ್ಷಗಾನ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜನರ ಒಂದು ಜಾನಪದ ಕಲೆ. ಇದು ಎಂದು, ಎಲ್ಲಿ, ಯಾವಾಗ ಹುಟ್ಟಿತು, ಹೇಗೆ ಹುಟ್ಟಿತು, ಅನ್ನುವುದು ಇನ್ನೂ ನಿಗೂಡ. ಜನರಿಂದ ಜನರಿಗಾಗಿ ತಲೆತಲಾಂತರದಿಂದ ನಡೆದು ಬಂದ ಜಾನಪದ ಕಲೆ. ಕೇರಳದ ಕಥಕ್ಕಳಿಗೆ ಸ್ವಲ್ಪ ಹತ್ತಿರದಲ್ಲಿರುವ ಕಲೆ.

ಸಾವಿರಾರು ವರ್ಷಗಳ ಹಿಂದಿನ ಮಾತು, ಅಂದು ಭಾರತದ ಸಾಂಸ್ಕ್ರತಿಕ ಲೋಕದಲ್ಲಿ ಸಂಸ್ಕ್ರತ ರಾರಾಜಿಸುತ್ತಿದ್ದ ಕಾಲ. ಅಂದು ಸಂಸ್ಕ್ರತ ಕೇವಲ ಮೇಲ್ವರ್ಗದವರ ಭಾಷೆಯಾಗಿದ್ದರಿಂದ ಅಂದಿನ ಬಹುತೇಕ ಗ್ರಂಥಗಳು ಸಂಸ್ಕ್ರತದಲ್ಲೆ ಇದ್ದುದರಿಂದ ಸ್ತ್ರೀ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಅಂಥ ಒಂದು ಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಸಂಸ್ಕ್ರತವನ್ನ ಹಾಡು - ಕುಣಿತ ಮತ್ತು ಮಾತಿನ ಮೂಲಕ ಜನಸಾಮಾನ್ಯರಿಗೆ ತಿಳಿಹೇಳುವ ಮೂಲಕ ಯಕ್ಷಗಾನ ಉಗಮವಾಗಿರಬಹುದು. ಮುಂದೆ ಕ್ರಮೇಣ ಹಳೆಗನ್ನಡ ಬೆಳೆಯುತ್ತಿದ್ದ ಹಾಗೆ ಹಳೆಗನ್ನಡದ ಹಾಡುಗಳನ್ನ, ನವೀನ ಕನ್ನಡದಲ್ಲಿ ಜನಸಾಮಾನ್ಯರಿಗೆ ತಿಳಿಹೇಳುತ್ತಾ ಯಕ್ಷಗಾನ ಬದಲಾಗುತ್ತಾ ಬಂದಿರಬಹುದು ಎನ್ನುವುದು ನನ್ನ ಅನಿಸಿಕೆ. ಒಂದು ಕಾಲದಲ್ಲಿ ಕೇವಲ ಪೌರಾಣಿಕ ಪ್ರಸಂಗಗಳಿಗೆ ಮೀಸಲಾಗಿದ ಯಕ್ಷಗಾನ ಇವತ್ತು ಸಾಮಾಜಿಕ ಪ್ರಸಂಗಗಳತ್ತಲೂ ಹೆಜ್ಜೆ ಹಾಕುತ್ತಿದೆ.

ಯಕ್ಷಗಾನದಲ್ಲಿ ನ್ರತ್ಯವಿದೆ, ಸಂಗೀತವಿದೆ, ತಾಳ ಮದ್ದಳೆಗಳಿವೆ, ಮಾತಿದೆ, ತನ್ನದೇ ಆದ ವೇಷ ಭೂಷಣವಿದೆ, ಹಾಸ್ಯ ಶ್ರಂಗಾರಗಳಿವೆ. ತನ್ನದೇ ಆದ ಒಂದು ವಿಭಿನ್ನತೆಯನ್ನ ಹೊಂದಿದೆ. ಆದರೆ ಇಂದು ಅಂತಹ ಮಹಾನ ಕಲೆ ತನ್ನ ಅವನತಿಯತ್ತ ಮುಖಮಾಡಿ ನಿಂತಿದೆ. ಶಿವರಾಮ ಕಾರಂತರಂತಹ ಕೆಲವು ಬುದ್ದಿಜೀವಿಗಳು ಇದನ್ನ ಜೀವಂತ ಇಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಕಷ್ಟ ಸಧ್ಯದ ಮಾತು. ಯಕ್ಷಗಾನ ಜೀವಂತ ಇಡಬೇಕು ಅಂತಾದಲ್ಲಿ ಊರಿಗೊಬ್ಬ ಶಿವರಾಮ ಕಾರಂತರೂ ಹುಟ್ಟಿ ಬಂದರೆ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಈಗ ದೇವಸ್ಥಾನಗಳಲ್ಲಿ ಭಜನೆಗಳ ಬದಲಾಗಿ ಧ್ವನಿಮುದ್ರಿಕೆಗಳನ್ನ ಬಳಸಲಾಗುತ್ತದೆಯೋ, ಹಾಗೆ ಮುಂದೆ ಯಕ್ಷಗಾನ ಅಂದರೆ ಹೀಗಿತ್ತು, ಹಾಗಿತ್ತು ಅಂತಾ ಛಾಯಾಚಿತ್ರವನ್ನೊ, ಅಥವಾ ಧ್ವನಿ ಚಿತ್ರಗಳನ್ನು ತೋರಿಸಬೇಕಾದ ಅವಶ್ಯಕತೆ ಬರಬಹುದಾದಂತಹ ಪ್ರಸಂಗ ಬಂದರೂ ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ.

--ಮಂಜು ಹಿಚ್ಕಡ್

Monday, December 23, 2013

ಅಕ್ಷರಗಳು!

ಮನಸಿನ ಭಾವಗಳು
ಮನದ ತಿರುಳುಗಳು
ಹೇಳಲಾಗದೇ, ಹೇಳಲಿರಲಾಗದೇ
ಸೋತು ತೊಳಲಾಡಿ,
ಹೀಗೆ ಸುಮ್ಮನೆ ಗೀಚಿದ
ಅಕ್ಷರದ ರೂಪಗಳಿವು.

ಒಮ್ಮೆ ಸುಮ್ಮನೆ
ಒಮ್ಮೆ ಭಿಮ್ಮನೆ
ಆಗೊಮ್ಮೆ, ಈಗೊಮ್ಮೆ
ಅಲ್ಲಿ, ಇಲ್ಲಿ, ಎಲ್ಲಂದರಲ್ಲಿ
ಹೀಗೆ ಸುಮ್ಮನೆ
ಗೀಚಿದ ಅಕ್ಷರಗಳಿವು.

ಬಿಳಿಯ ಹಾಳೆಯ ಮೇಲೆ
ಒಮ್ಮೊಮ್ಮೆ ಈ
ಅಕ್ಷರಗಳದೇ ಕಾರುಬಾರು
ಮತ್ತೊಮ್ಮೆ ಯೋಚಿಸಿದರೂ
ಬರಲಾರೆನೆಂದು ಅದರ ತಕರಾರು.

ಒಮ್ಮೆ ಹೊರಬರಲು
ಎಲ್ಲಿಲ್ಲದ ಆವೇಶ
ಮತ್ತೊಮ್ಮೆ ಬರಲೋ, ಬೇಡವೋ
ಎನ್ನುವ ಮೀನಾ ಮೇಷ.
ಗೀಚಿದ್ದು ಅಕ್ಷರವಾದಾಗ
ಮನಕೇಕೋ ಹರುಷವೋ, ಹರುಷ.

ಒಮ್ಮೆ ಕಥೆಯಾಗಿ
ಒಮ್ಮೆ ಕವಿತೆಯಾಗಿ
ಹೊರ ಬರುವವು
ಒಂದೊಂದು ಅಕ್ಷರಗಳು
ರೂಪಾಂತರವಾಗಿ.
ವ್ಯಕ್ತಿಯ, ವ್ಯಕ್ತಿತ್ವದ
ಬಿಂಬವಾಗಿ.

--ಮಂಜು ಹಿಚ್ಕಡ್ 

Friday, December 20, 2013

ನಿನ್ನ ಪ್ರೀತಿ.

ಹೊತ್ತಿರದ ಹೊತ್ತಿನಲಿ
ಗೊತ್ತಿರದ ವೇಳೆಯಲಿ
ಸುಮ್ಮನೆ ಒಳಹೊಕ್ಕು
ಮನವ ತಣಿಸುವುದು
ನಿನ್ನ ಪ್ರೀತಿ.

ದರವಿರದೇ ಸ್ವರವಿರುವ
ಉಸಿರಲ್ಲಿ ಹೆಸರ ನೆನಪಿಡುವ
ನಡು ಹಗಲ, ನಡು ಬಿಸಿಲಲ್ಲೂ
ಕನಸ ತೋರಿಸುವುದು
ನಿನ್ನ ಪ್ರೀತಿ.

ಒಲವಲ್ಲಿ ನಲಿವಿಟ್ಟು
ನಲಿವಲ್ಲಿ ಕನಸಿಟ್ಟು
ಕನಸಲ್ಲಿ ಬದುಕಿಟ್ಟು
ಮನವ ತಣಿಸುವುದು
ನಿನ್ನ ಪ್ರೀತಿ!

ಕಂಡ ಕಂಡಲ್ಲೆಲ್ಲಾ
ನಿನ್ನಯ ರೂಪ
ಹೋದ ಹೋದಲ್ಲೆಲ್ಲಾ
ನಿನ್ನಯ ನೆನಪು
ನೀ ಜೊತೆಯಿರದರೇನಂತೆ
ತಾವು ಜೊತೆಯಿರುವು
ನಾನಿರುವಲ್ಲೆಲ್ಲಾ.

--ಮಂಜು ಹಿಚ್ಕಡ್

Monday, December 16, 2013

ನಾ ಬರಲಾರೆ ಈಗ!

ನಿಮ್ಮೂರವರೆಗೆ ನಾನೀಗ
ಬರಲಾರೆ ಗೆಳೆಯ
ಬರಲು ನೀಡು ನನಗೆ
ಒಂದಿಷ್ಟು ಸಮಯ.

ನಿಮ್ಮೂರು ಬರೀಯ ಊರಲ್ಲ
ಊರ ತುಂಬ ಇಹವು
ವರದಿಗಾರರ ಸೂರು.

ಮೊದಲನೆಯ ಮನೆಯ
ಸುಬ್ಬಮ್ಮನಿಗೆ ಒಮ್ಮೆ
ತಿಳಿದರೆ ಸಾಕಂತೆ
ವಿಷಯ ಪರವೂರಿಗೂ
ಹೋಗಿ ತಲುಪುವುದಂತೆ.

ಕೆಳ ಮನೆಯ ಶಾರದಮ್ಮ
ಇನ್ನೂ ಚುರುಕಂತೆ
ಅವಳಿಗೆ ಒಮ್ಮೆ ತಿಳಿದರೆ ಸಾಕಂತೆ
ಹೋಗಿ ತಿಳಿಸಿ ಬರುವಳು
ಪ್ರತೀ ಮನೆಗೂ
ಜೀವಂತ ಪತ್ರಿಕೆಯಂತೆ.

ಆ ಮೂಲೆಮನೆ ವೆಂಕಮ್ಮ
ಇನ್ನೂ ಭಿಷಣವಂತೆ
ಇಲಿ ಹೋದರೆ, ಹುಲಿ ಹೋಯಿತು
ಎಂದು ಹೇಳುವವಳಂತೆ
ನಡೆಯಲಾರದ್ದನ್ನೂ ಬಾಯಲ್ಲಿಯೇ
ನಡೆಸಿ ಬಿಡುವವಳಂತೆ
ಇಂದಿನ ಚುನಾವಣೆಯ ಸಮೀಕ್ಷೆಯಂತೆ.

ಇಂದು ನಾ ಬಂದರೆ
ಆ ವರದಿಗಾರರ ಬಾಯಲ್ಲಿ
ಈ ನಮ್ಮ ನಿರ್ಮಲ ಪ್ರೀತಿ
ಹಾದರದಂತೆ ಕಂಡರೂ ತಪ್ಪಿಲ್ಲ
ಅವರ ನಾಲಿಗೆಗೆ ಸಿಕ್ಕು, ನಮ್ಮ ಪ್ರೀತಿ
ಬೆತ್ತಲಾಗದೇ ಉಳಿಯಲ್ಲ.

ನಾ ಬರಲಿಲ್ಲ ಎಂದು
ನೀ ಚಿಂತಿಸದಿರು ಇಂದು
ನೀ ಹೋಗು ಈಗ
ನಾ ಬರುವೆ ಇಂದಲ್ಲ, ಮುಂದೆ
ನೀ ತಾಳಿಕಟ್ಟಿ
ನಾ, ನಿನ್ನವಳಾದ ದಿನದಂದು.

--ಮಂಜು ಹಿಚ್ಕಡ್

Thursday, December 12, 2013

ಹುಟ್ಟು-ಸಾವು

ಹುಟ್ಟು:
ನಾ ಬಯಸದೇ
ಈ ಭೂಮಿಗೆ ಬಂದು
ಬಯಸಿದವರ ಮೊಗದಲ್ಲಿ
ಸಂತೋಷ ತಂದು.

ನವ ವಸಂತಗಳವರೆಗೆ
ಗರ್ಭ ಹೊತ್ತವಳ
ಕಾಡಿಸಿ, ಸತಾಯಿಸಿ ಈ
ಲೋಕಕೆ ಬಂದು.
ಜಾತಿ ಗೊತ್ತಿಲ್ಲ
ಹಣದ ಹಂಗಿಲ್ಲ
ಹೆಣ್ಣೋ, ಗಂಡೋ
ನನಗೆ ತಿಳಿದಿಲ್ಲ
ಮುಂದಿಡುವ ಹೆಸರು
ನನಗೇ ಗೊತ್ತಿಲ್ಲ
ಕನಸುಗಳಿಲ್ಲ, ಕಲ್ಪನೆಗಳಿಲ್ಲ
ನಗುವೋ, ಅಳುವೋ
ನನಗೆ ಪ್ರಶ್ನೆಯೇ ಎಲ್ಲ.

ಸಾವು:
ಈಗ ತನು ಒಪ್ಪಿದರೂ
ಮನ ಒಪ್ಪದು.
ಒಂದೊಮ್ಮೆ ಬಯಸಿ ಕರೆದರೂ
ನಮ್ಮ ಬಳಿ ಬಾರದು

ಸಾವಿರ ಕಲ್ಪನೆಗಳುಂಟು
ಆದರೆ ಉತ್ತರವಿಲ್ಲ.
ಮನಸು ಬಯಸಿದ್ದಲ್ಲ ಕನಸುಗಳೇ
ಹೊರತು ಎಂದು ನನಸಾಗಲ್ಲ.

ಬದುಕಿನ ಪ್ರಜ್ನೆ ಬಂದು,
ಬಾಳು ಕಟ್ಟುವಾಗ
ಈ ಜೀವನದ ಕನಸೆಲ್ಲ
ಬರೀ ಹಣ ಹಣ ಹಣ
ಇಂದು ಸಾವು ಬಂದಾಗ
ನಾವೀಗ ಕರೆಯಲು
ಹೆಸರಿಲ್ಲದ ಬರೀಯ ಹೆಣ.

--ಮಂಜು ಹಿಚ್ಕಡ್

Monday, December 9, 2013

ಶೀತಕ್ಕೆರಡು ಸಲಹೆ!

ಅವನಿಗೆ ಶೀತ, ನೆಗಡಿಯಂತೆ
ಮೂಗು ಕೂಡ ಸೋರುತ್ತಿದೆಯಂತೆ
ಗಂಟಲ ನೋವು ಉಂಟಂತೆ
ಅದಕೆ ಆ ಈರ್ವರ ಸಲಹೆ ಹೀಗಂತೆ

ಆತ:
ನಿನ್ನೆ ಕುಡಿದಿರಬೇಕು ಆತ
ತಂಪು ಬಿಯರು
ಇಲ್ಲಾ ಜಾಸ್ತಿ ತಿಂದಿರಬೇಕು
ಎಣ್ಣೆ ಹಾಕಿದ ಸಾರು.

ಇಂದು ಹಾಕಿದರೆ ಸಾಕು
ಬಿಸಿನೀರ ಜೊತೆಗೆ
ಒಂದೆರಡು ಪೆಗ್ಗು ರಮ್ಮು
ಕಡಿಮೆಯಾಗಿಯೇ ಹೋಗುವವು,
ನಾಳೆ ಶೀತ ನೆಗಡಿ ಕೆಮ್ಮು.

ಈತ:
ಮಾತ್ರೆ ಸೈರಪ್ಪು ಏಕೆ
ಅವುಗಳೆಂದರೆ ಏಕೋ ವಾಕರಿಕೆ
ಹಾಕಿ ಕುಡಿದರೆ ಸಾಕು
ಜೇನುತುಪ್ಪಕ್ಕೆ ಒಂದೆರಡು
ಹನಿ ಲಿಂಬೆರಸ
ಇವುಗಳ ಮುಂದೆ
ಬಿಯರು, ಬ್ರಾಂದಿ,
ರಮ್ಮುಗಳೆಲ್ಲವೂ ಏಕೆ

--ಮಂಜು ಹಿಚ್ಕಡ್

Friday, December 6, 2013

ಅವಲಂಬನೆ!

ನನ್ನ ಮನೆಯಂಗಳದಿ
ನಾಲ್ಕಾರು ಹೂ ಕುಂಡಗಳು
ಬಿಸಿಲು ಕಂಡಿಲ್ಲ
ಮಳೆ ನೀರು ನೋಡಿಲ್ಲ
ಕಾತರಿಸಿ ಕುಳಿತಿವೆ
ನನ್ನಕೆಯೊಡ್ಡುವ
ಬೊಗಸೆ ನೀರಿಗಾಗಿ!

ವಿದ್ಯುತ್ ದೀಪದ ಅರಿವುಂಟು
ದಿನಕರನ ಅರಿವಿಲ್ಲ
ಮಣ್ಣು ಗೊಬ್ಬರದ ಚಿಂತೆ
ಎಂದೂ ಕಾಡಿಲ್ಲ
ಆ ರೀತಿ ಬೆಳಸಿಹಳು ನನ್ನಾಕೆ!

ಪಂಕದ ಗಾಳಿಗೆ ಮೈಯೊಡ್ಡಿ
ಕುಣಿಯುತಿಹ ಇವಕೆ
ಹೊರಗಾಳಿ, ಬಿರುಗಾಳಿಯ
ಅರಿವಿಲ್ಲ ಇವಕೆ!

ಹುಟ್ಟುತ್ತ ಸ್ವಾವಲಂಬಿಗಳಿವು
ಆದರೂ ಅವಲಂಬನೆಯ ಬದುಕು
ನನ್ನವಳ ಆಸರೆಯ
ನಂಬಿ ಬದುಕಬೇಕು
ಇವು ತಮ್ಮದಲ್ಲದ ತಪ್ಪಿಗೆ!

--ಮಂಜು ಹಿಚ್ಕಡ್

Tuesday, December 3, 2013

ಅಂದು ಸವಿದ ಆ ನಾಟಿ ಮಾವಿನ ಹಣ್ಣುಗಳು!

ಅಂದು ನಾವು ಚಿಕ್ಕವರಿದ್ದಾಗ ನಮ್ಮೂರಿನ ಮೂಡಣ ದಿಕ್ಕಿನಲ್ಲಿ ನೂರಾರು ಜಾತಿಯ ನಾಟಿ ಮಾವಿನ ಮರಗಳಿದ್ದವು. ಜನವರಿ, ಪೆಬ್ರುವರಿ ತಿಂಗಳು ಮುಗಿಯುವ ಹೊತ್ತಿಗೆ ಮರಗಳೆಲ್ಲ ಹೂ ಬಿಟ್ಟು, ಎಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಆ ಹೂವುಗಳೆಲ್ಲ ಕಾಯಾಗಿ, ಹಣ್ಣಾಗುತ್ತಿದ್ದವು. ಆಗ ನಮಗೆಲ್ಲ ಬೇಸಿಗೆಯ ರಜೆ, ಆ ರಜೆ ನಮಗೆ ಮಾವಿನ ಹಣ್ಣನ್ನು ತಿನ್ನಲೆಂಬಂತೇ ಇದ್ದಂತಿತ್ತು. ಒಂದೊಂದು ಮರಕ್ಕು ಒಂದೊಂದು ತರಹದ ಹಣ್ಣುಗಳು, ಕೆಲವು ಅರ್ಧ ಅಂಗುಲದಷ್ಟು ಚಿಕ್ಕದಾಗಿದ್ದರೆ, ಕೆಲವು ಐದಾರು ಅಂಗುಲದಷ್ಟು ದೊಡ್ಡ ಹಣ್ಣುಗಳು. ಐದಾರು ಮರದ ಹಣ್ಣುಗಳು ಹುಳಿ ಎನಿಸಿದರೂ, ಉಳಿದ ಮರಗಳ ಹಣ್ಣುಗಳು ಸಿಹಿಯಾಗಿದ್ದವೂ. ಕೆಲವು ಹಣ್ಣುಗಳು ತುಂಬಾ ರುಚಿಯಿದ್ದರೂ ಆ ಹಣ್ಣುಗಳ ಅರ್ಧದಷ್ಟು ಸೊನೆ ತುಂಬಿರುತಿತ್ತು. ಅದೆಂತಹ ಸೊನೆಯೆಂದರೆ ಸಂಪೂರ್ಣ ತುಟಿ, ಬಾಯಿಗಳೆಲ್ಲವೂ ಹುಣ್ಣಾಗುವಷ್ಟು ಸೊನೆ. ಕೆಲವು ಹಣ್ಣುಗಳ ಗೊರಟೆಗಳು ಒಳಗೆ ತುಂಬಾ ದೊಡ್ಡದಾಗಿದ್ದರೆ, ಕೆಲವಕ್ಕಂತೂ ತುಂಬಾ ಚಿಕ್ಕ ಗಾತ್ರದ ಗೊರಟೆಗಳು. ಕೆಲವು ಹಣ್ಣುಗಳಿಗಂತೂ ತುಂಬಾ ಬಿಗಿಯಾದ ನಾರುಗಳಿದ್ದರೂ ರುಚಿ ತುಂಬಾ ಸೊಗಸಾಗಿರುತಿತ್ತು. ರಸ ಎಳೆಯಲು ಸಾಧ್ಯವಾಗದೇ, ಸಿಪ್ಪೆ ಸುಲಿದು ತಿನ್ನುತಿದ್ದೆವು. ಕೆಲವು ಮರಕ್ಕೆ ಮಾರ್ಚ-ಎಪ್ರಿಲಗಳಲ್ಲಿ ಹಣ್ಣು ಬಿಡುತಿದ್ದರೆ, ಕೆಲವು ಮರಗಳಿಗೆ ಮಳೆಗಾಲ ಪ್ರಾರಂಬವಾಗುತಿದ್ದಂತೆ ಹಣ್ಣು ಬಿಡಲು ಆರಂಭವಾಗುತಿದ್ದವು. ಹೀಗೆ ಒಂದೊಂದು ತರನಾದ ಮಾವಿನ ಮರಗಳು ನಮ್ಮ ಊರಿನಲ್ಲಿದ್ದವು.

ಮಾರ್ಚ ತಿಂಗಳಲ್ಲಿ ನಮ್ಮ ಪರೀಕ್ಷೆಗಳು ಮುಗಿದೊಡನೆ, ನಮ್ಮ ಮಾವಿನ ಹಣ್ಣಿನ ಬೇಟೆ ಪ್ರಾರಂಭವಾಗುತ್ತಿತ್ತು. ಯಾವ ಯಾವ ಮರಕ್ಕೆ ಹೂಬಿಟ್ಟಿದೆ, ಯಾವ ಮರಕ್ಕೆ ಹಣ್ಣುಗಳಾಗಿವೆ ಎಂಬೆಲ್ಲ ವಿವರಗಳನ್ನು ಸಂಗ್ರಹಿಸಿ ಹೊರಡುತ್ತಿದ್ದೆವು. ಬೆಳಿಗ್ಗೆ ಮಾವಿನ ಹಣ್ಣಿನ ಮರ ಸುತ್ತಿ ಹಣ್ಣು ತಿಂದು ಮನೆಗೆ ಬರುವಾಗ ಮಧ್ಯಾಹ್ನವಾಗುತಿತ್ತು. ಹೊಟ್ಟೆ ಪೂರ್ತಿ ಮಾವಿನ ಹಣ್ಣು ತಿಂದದ್ದರಿಂದ ಊಟವು ಅಷ್ಟಕಷ್ಟೇ. ಆ ಸುಡು ಬೇಸಿಗೆಯಲ್ಲಿ ಊಟವು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಮಧ್ಯಾಹ್ನ ಒಂದಿಷ್ಟು ಗಂಜಿ, ಬೆರಕೆ ಹಾಕಿದ ಬಸಲೆ ಹುಳಗಾ ತಿಂದು, ಮಲಗಬೇಕೆನಿಸಿದರೆ ಒಂದಿಷ್ಟು ಹೊತ್ತು ಮಲಗಿ, ಇಲ್ಲಾ ಅಂದರೆ ಮತ್ತೆ ಮಾವಿನ ಹಣ್ಣು ಹುಡುಕಿ ಹೋಗುತಿದ್ದೆವು.
.                  
ಆಗ ನಮಗೆ ಜೋರಾಗಿ ಗಾಳಿ ಬಿಸಿದರೆ ಅಥವಾ ಮಂಗಗಳ ಹಾರಾಟ ಜಾಸ್ತಿಯಾಗಿದ್ದರೆ ತುಂಬಾ ಸಂತೋಷವಾಗುತಿತ್ತು. ಆ ಸಂದರ್ಭದಲ್ಲಿ ಮರದ ಕೊಂಬೆಗಳೆಲ್ಲ ಅಲುಗಾಡಿ ಹಣ್ಣಾದ ಮಾವೆಲ್ಲವು ನೆಲಕುದುರುತ್ತಿದ್ದುದರಿಂದ ನಮಗೆಲ್ಲ ಸಂತೋಷ. ಒಂದೊಂದು ಹಣ್ಣು ಬಿದ್ದಾಗಲೂ, ಓಡಿ, ಓಡಿ ಹೋಗಿ ಆರಿಸಿ ತಂದು ತಿನ್ನುವುದು, ಅದರಲ್ಲೂ ಚಿಕ್ಕ ಹಣ್ಣುಗಳಾಗಿದ್ದರೆ, ಮೇಲಿನ ಸೊನೆ ತೆಗೆದು ಇಡಿ ಹಣ್ಣನ್ನೆ ಬಾಯಿಯಲ್ಲಿ ಸ್ವಾಹ ಮಾಡಿ, ಗೊರಟೆಯನ್ನು ಹೊರಗೆಸೆಯುವುದು. ಅದು ಕೂಡ ಇನ್ನೊಂದು ಮಾವಿನ ಹಣ್ಣು ಬಿಳುವವರಿಗೆ, ಇಲ್ಲಾ ಸಿಹಿಯ ಅಂಸ ಸಂಪೂರ್ಣ ಮಾಯವಾಗಿ ಸಪ್ಪೆಯಾಗುವರೆಗೆ, ನಮ್ಮ ಬಾಯಲ್ಲಿಯೇ ಬದ್ರವಾಗಿರುತಿತ್ತು.    

ನಮ್ಮ ಮನೆಯ ಅಣತಿ ದೂರದಲ್ಲಿ ಒಂದು ಮಾವಿನ ಮರವಿತ್ತು. ಅದರ ಹಣ್ಣು ಸ್ವಲ್ಪ ಹುಳಿ ಇದ್ದುದರಿಂದ ಅದಕ್ಕೆ ಊರವರೆಲ್ಲ " ಹುಳಿಯಪ್ಪಿ " ಮಾವಿನ ಮರ ಎಂದೇ ಕರೆಯುತ್ತಿದ್ದರೂ. ಬೇಡುವವರಿಗೆ ಕುಸಲಕ್ಕಿಯಾದರೇನು, ಬೆಣತಕ್ಕಿಯಾದರೇನು ಅಂತಾರಲ್ಲಾ, ಹಾಗೆ ಬಾಲ್ಯದಲ್ಲಿ ನಮಗೆ ಮಾವಿನ ಹಣ್ಣು ಸಿಹಿಯಾದರೇನು, ಹುಳಿಯಾದರೇನು? ಎಳೆಯ ಹುಳಿಯ ಮಾವಿನ ಕಾಯಿಯನ್ನೇ ತಿನ್ನುವ ನಮಗೆ, ಈ ಹಣ್ಣು ಅದ್ಯಾವ ಲೆಕ್ಕ. ಆ ಹುಳಿಯಪ್ಪಿ ಮಾವಿನ ಮರದ ಸುತ್ತಲು ನಮ್ಮ ಮನೆಯನ್ನು ಸೇರಿ ನಾಲ್ಕು ಮನೆಗಳು, ನಾಲ್ಕು ಮನೆಗಳಲ್ಲಿ, ಮೂರು ಮನೆಯ ಮಕ್ಕಳು ಹೆಚ್ಚು ಕಡಿಮೆ ನನ್ನ ವಯಸ್ಸಿನವರೇ. ಎಲ್ಲರ ಅಭಿರುಚಿಯೂ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು. ಆ ಮರಕ್ಕೆ ಹಣ್ಣು ಬಿಡಲು ಪ್ರಾರಂಭಿಸಿದಾಗ ನಮ್ಮ ಲಕ್ಷವೆಲ್ಲ ಆ ಮರದತ್ತಲೇ ಕೇಂದ್ರಿಕ್ರತವಾಗಿರುತ್ತಿತ್ತು. ಹಣ್ಣು ಗಾಳಿಗೆ ಕೆಳಕ್ಕೆ ಬಿದ್ದು "ಡಪ್" ಎನ್ನುವ ಶಬ್ಧ ಬಂದರೆ ಸಾಕು, ಶತ್ರು ಸೈನ್ಯದ ಮೇಲೆ ದಾಳಿಯಿಡುವ ಯುದ್ದ ವಿಮಾನಗಳಂತೆ, ನಾವು ಮೂರು ಕಡೆಯಿಂದಲೂ ಅಲ್ಲಿಗೆ ದಾಳಿ ಮಾಡುತಿದ್ದೆವು. ಯುದ್ದದಲ್ಲಿ ಶತ್ರು ಯಾರಿಗೆ ಸೆರೆ ಸಿಕ್ಕರೇನು, ಒಟ್ಟಿನಲಿ ಅದು ಆ ದೇಶಕ್ಕೆ ಹೆಮ್ಮೆ. ಆದರೆ ಇಲ್ಲಿ ಹಾಗಲ್ಲ, ಎಲ್ಲರೂ ಹಣ್ಣಿನ ವಿಷಯದಲ್ಲಿ ಶತ್ರುಗಳೇ. ಸಿಕ್ಕವನಿಗೆ ಗೆದ್ದ ಸಂಭ್ರಮ, ಸಿಗದಿದ್ದವರಿಗೆ ಸಿಗಲಿಲ್ಲ ಎನ್ನುವ ಚಿಂತೆ. ಸೋತರು, ಮುಂದೆ ಬಿಳಲಿರುವ ಹಣ್ಣು ನನಗೆ ಸಿಕ್ಕೀತು ಎನ್ನುವ ಆತ್ಮವಿಶ್ವಾಸ. ಆ ಆತ್ಮವಿಶ್ವಾಸವೇ ಇನ್ನೋಂದು ಹಣ್ಣಿಗಾಗಿ ಮತ್ತೆ ಕಾಯಲು ಪ್ರೇರೇಪಿಸುತ್ತಿತ್ತು.                        

ಅದೆಷ್ಟು ಹಣ್ಣು ತಿನ್ನುತ್ತಿದ್ದೇವೆಂದರೆ, ಮಾವಿನ ಹಣ್ಣಿನ ಸೊನೆಗೆ ಸೀತವಾಗಿ ಮೂಗು ಸೋರುತಿದ್ದರೂ ಮಾವಿನ ಹಣ್ಣನ್ನು ಬಿಡುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ಮಾವಿನ ಹಣ್ಣಿನ ಮೇಲೆ. ಆಗ ಮನೆಯಲ್ಲಿ ಈಸಾಡ ಹಾಗೂ ಹೈಬ್ರಿಡ್ ತಳಿಯ ಮಾವಿನ ಹಣ್ಣುಗಳಿದ್ದರೂ, ನಮಗೆ ಆ ನಾಟಿ ತಳಿಯ ಮಾವಿನ ಹಣ್ಣಿನಷ್ಟು ರುಚಿಯೆನಿಸುತ್ತಿರಲಿಲ್ಲ. ಇಂದು ಊರಿನಲ್ಲಿ ಅಂದಿನಷ್ಟು ನಾಟಿತಳಿಯ ಮಾವಿನ ಮರಗಳಿಲ್ಲ. ಕೆಲವು ಬಹುಗಾತ್ರದ ಮರಗಳು, ಇಂದಿನ ಹೈಬ್ರಿಡ್ ತಳಿಯ ಮಾವುಗಳಿಗಾಗಿ ಹುತಾತ್ಮವಾಗಿ ಬಿಟ್ಟಿವೆ. ಅಂದು ನಾಟಿ ಮಾವಿನ ಹಣ್ಣುಗಳನ್ನು ಸವಿದ ಮೇಲೆ ಹೈಬ್ರಿಡ್ ಹಣ್ಣುಗಳು ಅಷ್ಟೊಂದು ರುಚಿಯೆನಿಸುವುದಿಲ್ಲ. ಅದರಲ್ಲೂ ಇಂದಿನ ಹೈಬ್ರಿಡ್ ಹಣ್ಣುಗಳಲ್ಲಿ ರುಚಿಯಾದರೂ ಎಲ್ಲಿರುತ್ತೆ? ಎಳೆಯ ಕಾಯಿಯನ್ನೇ ಕೊಯ್ದು ರಾಸಾಯನಿಕಗಳನ್ನು ಹಾಕಿ, ಹಣ್ಣಿನಂತೆ ಮಾಡಿ ದುಪ್ಪಟ್ಟು ಬೆಲೆಗೆ ಮಾರುವ ಇಂದಿನ ಹೈಬ್ರಿಡ್ ಹಣ್ಣುಗಳು, ನಾಟಿ ಹಣ್ಣುಗಳ ಮುಂದೆ ರುಚಿಯಲ್ಲಿ ಎಂದೂ ಸರಿಸಾಟಿಯಾಗಲಾರವು ಎನ್ನುವುದು ನನ್ನ ಅನಿಸಿಕೆ. ಈಗಂತೂ ಹೈಬ್ರಿಡ್ ಹಣ್ಣುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಅದರಲ್ಲೂ ಮಾವಿನ ಹಣ್ಣು ಸುರುವಾದ ಹೊಸದರಲ್ಲಂತೂ ಅದರ ಬೆಲೆ ಕೇಳಿದರೆ ಸಾಕು ತಲೆತಿರುಗತ್ತೆ, ಇನ್ನೆಲ್ಲಿ ಆ ಮಾವಿನ ಹಣ್ಣು. ಮಳೆಗಾಲ ಸುರುವಾದರೆ ಆ ಹಣ್ಣುಗಳನ್ನ ತಿನ್ನಲಾಗಲ್ಲ.

ಕೊನೆಯಲ್ಲಿ ಒಂದು ಮಾತು, ನಮ್ಮ ತಂದೆಯವರು ಆಗಾಗ ಹೇಳುತಿದ್ದರು ಅವರು ಚಿಕ್ಕವರಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವೂ ಅಂತ, ಈಗ ನಾನು ಹೇಳುತಿದ್ದೇನೆ ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವು ಅಂತ. ನಾವು ಚಿಕ್ಕವರಿರುವಾಗಲೇ ಅಷ್ಟೊಂದು ಮಾವಿನ ಮರಗಳಿದ್ದುದು ನಮ್ಮ ತಂದೆಯವರು ಚಿಕ್ಕವರಿರುವಾಗ ಇನ್ನೆಷ್ಟು ನಾಟಿ ಮಾವಿನ ಮರಗಳಿರಬೇಕು ಅಲ್ಲವೇ!

--ಮಂಜು ಹಿಚ್ಕಡ್

Monday, December 2, 2013

ಮತ್ತೆ ಕಟ್ಟಲಾದಿತೇ ರಾಮರಾಜ್ಯ!

[ಈ ವಾರದ ಪಂಜು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಇನ್ನೊಂದು ಕವನ www.panjumagazine.com/?p=5502]
ಹುಚ್ಚೆದ್ದು ಕುಣಿಯುತಿದೆ
ನಾಡಿನ ಜನತೆ.
ಮರೆಯಾಗಿ ಹೋಗುತಿದೆ
ಒಲವಿನ ಒರತೆ.

ಇತ್ತ ರೋಡಲಿ ಕಾರು
ಅತ್ತ ಬಾರಲಿ ಬೀರು
ಎಲ್ಲಿ ನೋಡಿದರಲ್ಲಿ
ಹಣದ ಕಾರುಬಾರು.

ಮಾನಕ್ಕೆ ಬೆಲೆಯಿಲ್ಲ
ಮಾನವಂತರು ಇಲ್ಲ.
ಆಗಿಹುದು ನಾಡು, ಸುಡುಗಾಡು
ಎರಡು ಮಾತಿಲ್ಲ.

ಹಣಕಾಗಿ ಜನ ಮರಳು
ಹಣಕಾಗಿ ಜಾತ್ರೆ ಮರಳು.
ಮರೆತು ಹೋಗಿದೆ ಇಂದು
ಮಾನವತೆಯ ತಿರುಳು.

ದ್ವೇಷದ ದಳ್ಳುರಿಯಲ್ಲಿ
ಪ್ರೀತಿ ಹೋಗಿದೆ ಸೋತು.
ಪ್ರೀತಿ-ಪ್ರೇಮ ಎನ್ನುವುದು
ಮರೀಚಿಕೆಯ ಮಾತು.

ಬೆಳೆದು ನಿಂತಿದೆ ಅಹಂ
ಇಂದು ಕಾಳ್ಗಿಚ್ಚಿನ ರೀತಿ
ಹುಡುಕಿದರು ಸಿಗಲಾರದು
ಇಲ್ಲಿ ನ್ಯಾಯ ನೀತಿ.

ಅಲ್ಲಿ ಕೊಲೆ ಅಂತೆ
ಇಲ್ಲಿ ಸುಲಿಗೆಯೂ ಅಂತೆ
ಅತ್ತ ಸ್ವಿಸ್ ಬ್ಯಾಂಕಲ್ಲಿ
ನೋಟುಗಳ ಕಂತೆ.

ಅಣ್ಣ-ತಮ್ಮರ ನಡುವೆ
ಅಕ್ಕ-ತಂಗಿಯರ ನಡುವೆ
ಬೆಳೆದು ನಿಂತಿದೆ ವ್ಯಾಜ್ಯ
ಮತ್ತೊಮ್ಮೆ ಹುಟ್ಟಿ ಬಂದರು ರಾಮ
ಕಟ್ಟಲಾಗದು ಮತ್ತೆ ರಾಮರಾಜ್ಯ.

ಛಲದಲ್ಲಿ ದುರ್ಯೋಧನನಾಗು
ದಾನಕ್ಕೆ ನೀ ಕರ್ಣನಾಗು
ಗುರುಭಕ್ತಿಯಲಿ ನೀ
ಏಕವಲವ್ಯನು ಆಗು.

ಮುಳ್ಳಲ್ಲಿರುವ ಹೂವಾಗಿ
ಎಲ್ಲರಿಗೂ ಹಿತವಾಗಿ
ಬಾಳಿದರೆ ನೀ ಬದುಕುವೆ
ಎಂದೆಂದು ಸುಖವಾಗಿ!

--ಮಂಜು ಹಿಚ್ಕಡ್ 

Sunday, December 1, 2013

ಯಾವುದು ಹುಚ್ಚು!

ಪ್ರೀತಿ ಹೆಚ್ಚಾದರೆ ಹುಚ್ಚು
ಮಮತೆ ಹೆಚ್ಚಾದರೆ ಹುಚ್ಚು
ಈಡೇರದ ಬಯಕೆಗಳು ಹೆಚ್ಚಾದರು ಹುಚ್ಚು
ಆಶೆ ಆಕಾಂಕ್ಷೆಗಳು ಹೆಚ್ಚಾದರೂ ಹುಚ್ಚು,
ಎನ್ನುವುದಾದರೆ?
ಹಣ ಐಶ್ವರ್ಯಗಳು ಹೆಚ್ಚಾದರೆ?

ಹೆಚ್ಚಾದ ಪ್ರೀತಿ ಮಮತೆಗಳೆಲ್ಲಾ
ಹುಚ್ಚೆನ್ನುವುದಾದರೆ,
ಹೆಚ್ಚಾದ ಹಣ, ಐಶ್ವರ್ಯಗಳೇಕೆ
ಹುಚ್ಚಲ್ಲ ಸ್ವಾಮಿ.

--ಮಂಜು ಹಿಚ್ಕಡ್

ತಾಂಬೂಲದ ಮಹಿಮೆ!

ಹಚ್ಚ ಹಸುರಿನ ಎಲೆಯ ಮೇಲೆ
ಒಂದಿಷ್ಟು ಬಿಳಿ ಸುಣ್ಣ ನೇವರಿಸಿ.
ನಾಲ್ಕಾರು ತುಂಡು ಅಡಿಕೆಗಳನು ಹಾಕಿ
ಮೆಲ್ಲಗೆ ಸುತ್ತಿಟ್ಟು ಬಾಯಿಗೆ ಸೇರಿಸಿ.

ಮಸಾಲೆ ಅರಿಯುವ ರುಬ್ಬುಕಲ್ಲಿನಂತೆ
ಅಲ್ಲಲ್ಲಿ ಕರಿ ಹಿಡಿದ ಹಲ್ಲುಗಳಿಂದ
ಅಗಿದು, ಅಗಿದು ಹೊರಸೂಸಿದರೆ ಆ ತಾಂಬೂಲ
ಕೆಂಪು ರಕ್ತಕಣಗಳಿಗಿಂತ ಮಿಗಿಲಾಗಿ
ಕಾಣುವುದು ಉಗಿದ ಆ ಜಿಹ್ವಾಜಲ

ಉಗಿದದ್ದು ಭೂಮಿ ತಲುಪಬೇಕಂದಿಲ್ಲ
ಯಾರ ಮೈ, ಬೆನ್ನ ಸವರಿದರೇನು?
ಯಾವ ಗೋಡೆಗೆ ತಗುಲಿ ಕೆಂಬಣ್ಣವಾದರೇನು?
ಬಸ್ಸಾದರೇನು? ಗಿಡ ಮರವಾದರೇನು?
ಕ್ಷಣಾರ್ಧದಲ್ಲಿ ಉಗಿದವ ನಾಪತ್ತೆ
ಉಗಿದ ಸಾಕ್ಷಿಯಿಲ್ಲದಂತೆ.

ಒಂದೊಮ್ಮೆ ಉಗಿಸಿಕೊಂಡಲ್ಲಿ ಮುಗಿಯಿತು
ಧರಿಸಿದ ಧಿರಿಸು ತೋಳೆಯಲು ಬೇಕು
ಒಂದರ್ಧ ಬಾರು ಸೋಪು
ಒಂದರ್ಧ ಗಂಟೆಯ ಸಮಯ
ನಮ್ಮದಲ್ಲದ ತಪ್ಪಿಗಾಗಿ.

--ಮಂಜು ಹಿಚ್ಕಡ್

Saturday, November 30, 2013

ಬಯಕೆಗಳು!

ಹುಟ್ಟಿನಲ್ಲಲ್ಲದಿರೂ
ಹುಟ್ಟಿನನಂತರ ಜನ್ಮತಳೆಯುವವು
ಹಲವಾರು ಬಯಕೆಗಳು
ಮಳೆಗಾಲದ ಜವುಗು ಭೂಮಿಯಲಿ
ಒಂದಾದ ಮೇಲೊಂದರಂತೆ
ಜನ್ಮತಳೆವ ನಾಯಿಕೊಡೆಗಳಂತೆ
ಈ ನಮ್ಮ ಮನದ ಮೂಲೆಯಲ್ಲಿ.

ಆಕಾರ, ಪ್ರಾಕಾರವಿಲ್ಲದಿರೂ,
ಬಣ್ಣ, ರೂಪವಿಲ್ಲದಿರೂ
ನಮ್ಮ ರೂಪ ಬದಲಾಯಿಸುವಂತೆ
ಮಾರ್ಪಡಿಸುವವು
ತಾವು ಒಳಹೊಕ್ಕ ಮನಸನ್ನು ಆಗಾಗ.

ಒಂದೊಂದು ಬಯಕೆಗಳಿಗೂ
ಒಂದೊಂದು ವೇಷ
ಹಲವು ಬಯಕೆಗಳು
ಕೇವಲ ಆಶೆಗಳಾಗಿ
ಕೊನೆಗೊಳ್ಳುವವು,
ಒಳಹೊಕ್ಕ ವ್ಯಕ್ತಿಯ ಮರೆವಿನೊಂದಿಗೆ.

ಕೆಲವು ಅತಿಯಾಗಿ
ಪ್ರತಿಯಿಲ್ಲದಂತಾಗಿ
ಅಳಿದು ಹೋಗುವವು
ಕಾಲದೊಂದಿಗೆ.

ಕೆಲವಂತು ಆಕಾಂಕ್ಷೆಗಳಾಗಿ
ಕೈಗೆಟುಕದ ಹುಳಿದ್ರಾಕ್ಷಿಯಂತಾಗಿ
ಕಾಡುತ್ತಲೇ ಹೋಗುವವು
ಬದುಕು ಸಾಗುವವರೆಗೆ.

ಅಪರೂಪಕ್ಕೆಂಬಂತೆ,
ಅಲ್ಲೊಂದು, ಇಲ್ಲೊಂದು ಬಯಕೆಗಳು
ಗುರಿಯಾಗಿ ಮಾರ್ಪಟ್ಟು
ಒಂದಡೆಯೂ ನಿಲ್ಲದಂತೆ
ಓಡಿಸುವವು ಮನಸನ್ನ
ಗುರಿಯ ಸೇರುವವರೆಗೆ,
ಮತ್ತೊಂದು ಗುರಿಯೆಡೆಗೆ!

--ಮಂಜು ಹಿಚ್ಕಡ್

Saturday, November 23, 2013

ಸೈಕಲ್ ಪಥ..

ಸೈಕಲ್ ಪಥವಂತೆ ಇದು
ಸೈಕಲ್ಲುಗಳೇ ಕಾಣಲ್ಲ ಇಲ್ಲಿ
ಗುಳಿ ಬಿದ್ದ ರಸ್ತೆ
ಅರ್ಧಂಬರ್ಧ ಸೈಕಲ್ಲುಗಳ
ಚಿತ್ರಗಳು, ಕಾಣಿಸುವವು ಅಲ್ಲಲ್ಲಿ.

ಚಿತ್ರಗಳಲ್ಲಿದ್ದಷ್ಟು ಸೈಕಲ್ಲುಗಳಿದ್ದರೆ
ಸಾಕಿತ್ತು ಇಂದು ಇಲ್ಲಿ
ಹೊಗೆ ದೂಳು ಸ್ವಲ್ಪ ಕಡಿಮೆಯಾಗಿ
ಇಂದನವೂ ಸ್ವಲ್ಪ ಉಳಿಯುತಿತ್ತು.

ಸೈಕಲ್ ತುಳಿಯುವವರಾರು
ಆಗಲೇ ತುಳಿಯುತ್ತಿದ್ದೇವಲ್ಲ
ಕನಸು ಕಾಣುವ ಅಮಾಯಕರನು
ಇನ್ನೆಲ್ಲಿಯ ಬಿಡುವುಂಟು ನಮಗೆ.

ಹೊಂಡ ತುಂಬಿದ ಆ
ರಸ್ತೆಗಳನು ಅತಿಕ್ರಮಿಸಿ ನಿಂತಿವೆ
ಅಲ್ಲೊಂದು ಇಲ್ಲೊಂದು ಕಾರುಗಳು
ಆ ರಸ್ತೆಯೂ ತಮ್ಮದೆಂಬಂತೆ.

ಸೈಕಲ್ ಪಥವಲ್ಲ ಇದು
ಕಾರು ಆಟೋಗಳಿಗಾಗಿ
ಮೀಸಲಿಟ್ಟಂತೆ ಇರುವ
ಉಚಿತ ಪಾರ್ಕಿಂಗ್ ಸೇವೆ.
ತೆರಿಗೆಯ ಹೆಸರಲ್ಲಿ
ಸುಲಿದ ಹಣವಲ್ಲವೇ ಇದು
ಅಷ್ಟಾದರೂ ಮಾಡ ಬೇಕಲ್ಲವೇ?

--ಮಂಜು ಹಿಚ್ಕಡ್ 

ಪಾತ್ರ ಅನ್ವೇಷಣಾ.

ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ". ಈ ಕವನ ಸಂಕಲನದ ಏನಿದೆ, ಏನಿಲ್ಲ? ಇಲ್ಲಿ ಪ್ರೀತಿಯ ಸೆಳತವಿದೆ, ನೋವಿದೆ, ಬದುಕಿನ ವಿವಿಧ ಮಜಲುಗಳನ್ನು ನೋಡಿದ ಅನುಭವವಿದೆ, ಕಾಳಜಿಯಿದೆ, ಸಂಬ್ರಮವಿದೆ ಹೀಗೆ ಎಲ್ಲವೂ ಇವೆ.

ಪಾಚಿ ಬೆಳೆದ ಹೊಂಡದಲ್ಲಿ ಹೇಗೆ ಆ ಹೊಂಡದ ಆಳವನ್ನು ತಿಳಿಯಲಾಗುವುದಿಲ್ಲವೋ ಹಾಗೆ, ನಮ್ಮ ಜೊತೆಯಲ್ಲೇ ಇದ್ದು ನಮ್ಮ ವಿರುದ್ದ ಪಿತೂರಿ ನಡೆಸುವ ಹಿತ ಶತ್ರುಗಳನ್ನು ಅರಿಯುವುದು ಕಷ್ಟ ಎನ್ನುವ ಈ ಕೆಳಗಿನ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ ಗೆಳೆಯ ಬದರಿನಾಥ ಪಲವಳ್ಳಿಯವರ "ಪಾತ್ರ ಅನ್ವೇಷಣಾ" ಕವನ ಸಂಕಲನ.

ಎಲ್ಲೆಲ್ಲಿ ವಾಮನರೋ
ಪಿತೂರಿ ಸಾಧಕರೋ
ಬುಡ ಘಾತುಕರೋ
ತಿಳಿಯಲ್ಲ್ ಪಾಚಿ ಹೊಂಡ...

ಹೀಗೆ ಪ್ರಾರಂಭವಾಗುವ ಕವನ ಸಂಕಲನ, ಸೇದು ಹೊಗೆಯುಗುಳುವ ಧೂಮಪಾನದ ಜೊತೆಗೆ ಮದ್ಯಪಾನದಂತಹ ಚಟಗಳು ಮನುಷ್ಯನನ್ನು ಬಹು ಬೇಗ ಚಟ್ಟ ಹತ್ತಿಸಿ ಮನೆ ಮುಂದೆ ಹೊಗೆಯಾಡಿಸುವುಂತೆ ಮಾಡೀತು ಎನ್ನುವ ಎಚ್ಚರಿಕೆಯೊಂದಿಗೆ ಮುಕ್ತಾಯವಾಗುತ್ತದೆ.

ಚಟ ಚಟ್ಟವ ಹತ್ತಿಸೀತು,
ಸೇದಿದರೆ ಧೂಮಪಾನ
ಜೊತೆಗೆ ಮದ್ಯಪಾನ
ಮನೆ ಮುಂದೆ ಹಾಕ್ತಾರೆ
ಹೊಗೆ ಜೋಪಾನ!

ಆರಂಭ ಮುಕ್ತಾಯಗಳ ನಡುವೆ ಇಂತಹ ಹಲವು ಸಾಲುಗಳಿರುವ ೯೮ ಕವನಗಳ , ಕವನ ಸಂಕಲನ " ಪಾತ್ರ ಅನ್ವೇಷಣಾ". ಒಂದೊಂದು ಸಾಲಲ್ಲೂ ಒಂದೊಂದು ಬಗೆಯ ಅರ್ಥ, ಭಾವಾರ್ಥಗಳು ಹುದುಗಿಕೊಂಡಿವೆ ಎನ್ನುವುದು ಒಂದೊಂದು ಸಾಲುಗಳನ್ನು ಓದಿದಾಗಲೂ ಭಾಸವಾಗುತ್ತದೆ. ಅಂತಹುಗಳಲ್ಲಿ ನನಗಿಷ್ಟವಾದ ಒಂದೆರಡು ತುಣುಕುಗಳನ್ನು ಇಲ್ಲಿ ಪ್ರಕಟಿಸಿದ್ದೇನೆ.

ಇಂದಿನ ರಸ್ತೆಯ ಪಯಣದಲ್ಲಿ ಅಂಗಾಂಗಳಿಗೆ ಯಾವುದೇ ಹಾನಿಯಾಗದೇ, ಮನೆಗೆ ಜೀವಂತವಾಗಿ ತಲುಪಿಸಿ ಬಿಡು ಎಂದು, ತಮ್ಮ "ಪಾಪಿಷ್ಠ ಕೆಟ್ಟ ರಸ್ತೆ..." ಎಂಬ ಕವನದಲ್ಲಿ ಹೀಗೆ ಬರೆಯುತ್ತಾರೆ,

ಪಾಪಿಷ್ಠ ಕೆಟ್ಟ ರಸ್ತೆ ಇದು
ಬ್ರೇಕು ಬ್ರೇಕಿಗೂ ಭೂನರಕ
ಜೋರು ಗೇರೂ ಕಂಗಾರು,
ದಾಟಿಸಿ ಬಿಡು ಲೆಕ್ಕಿಗನೇ
ಬದುಕಲಿನ್ನೂ ಬೇಜಾರಿದೆ
ಸವಿಯಲು ಮಧುಪಾನ!
ಜೀವಂತ ತಲುಪಿಸಿ ಬಿಡು
ಮನೆಗೆ ಪೂರ್ಣ ಅಂಗಾಂಗ....

ನಾಳೆಗೆ ಬಾಡಿ ಹೋಗುವ ಮಾವಿನ ಎಲೆಯನ್ನು ಹಣಕೊಟ್ಟು ತಂದು ಅದರಿಂದ ತೋರಣ ಕಟ್ಟಿ ಪಜೀತಿಪಟ್ಟಿಕೊಳ್ಳುವುದಕ್ಕಿಂತ ಪ್ಲಾಸ್ಟಿಕಿನ ಸಿದ್ದ ತೋರಣವೇ ಬಾಗಿಲಿಗೆ ಓಳ್ಳಯದಲ್ಲವೇ, ಬಾಡುವುದಿಲ್ಲ, ತೋರಣ ಕಟ್ಟುವ ಪಜೀತಿಯಿಲ್ಲ, ಈ ವರ್ಷದನ್ನು ಮುಂದಿನ ವರ್ಷವೂ ಬಳಸಬಹುದಲ್ಲ ಎಂದು "ಬಂತು ಉಗಾದಿ" ಎನ್ನುವ ಕವನದಲ್ಲಿ ಹೀಗೆ ಹೇಳುತ್ತಾರೆ,

ಮಾವಿನ ಎಲೆ ತೋರಣ
ತಂದು ಕಟ್ಟುವ ಪಜೀತಿ
ಪ್ಲಾಸ್ಟಿಕಿನ ಸಿದ್ದ ತೋರಣ
ಅಲಂಕರಿಸಲಿ ಬಾಗಿಲಿಗೆ!

ಕಾರಾಗೃಹದಲ್ಲಿ ಕುಳಿತು ಭಗವದ್ಗೀತೆ ಪಠಿಸಿದರೆ ಮೈದಾನದಲ್ಲಿ ಮೈ ಮಾರಿಕೊಂಡು ಕಳ್ಳಾಟವಾಡಿದ್ದು ಕಳೆದು ಹೋಗುತ್ತದೆಯೇ ಎಂದು ಬದರಿಯವರು ಹೀಗೆ ಬರೆಯುತ್ತಾರೆ,

ಕಾರಾಗೃಹದಲಿ ಕುಳಿತು
ಭಗವದ್ಗೀತೆ ಪಠಿಸಿದರೆ
ಕಳೆಯುವುದೇ ಮೈದಾನದಲಿ
ಮೈಮಾರಿಕೊಂಡ ಕಳ್ಳಾಟ.

ಹೀಗೆ ಇಂತಹ ಹಲವಾರು ಸುಂದರ ಸಾಲುಗಳು ಈ ಕವನ ಸಂಕಲನದಲ್ಲಿದೆ. ತಮ್ಮ ಕವನ ಸಂಕಲನದ ಒಂದು ಪ್ರತಿಯನ್ನು ನನಗೆ ನೀಡಿ, ಆ ಕವನ ಸಂಕಲನದ ಕವನಗಳನ್ನು ಓದಲು ಅವಕಾಶ ಮಾಡಿಕೊಟ್ಟ ಗೆಳೆಯ ಬದರಿಯವರಿಗೆ ಹಾಗೂ ಅದನ್ನು ಪ್ರಕಟಿಸಿದ ಕುಶಿ ಪ್ರಕಾಶನ ಬಳಗಕ್ಕೂ ನನ್ನ ಅಭಿನಂದನೆಗಳು. ಬದರಿಯವರಿಂದ ಹಾಗೂ ಅವರ ಕವನಗಳಿಗೆ ಪುಸ್ತಕ ರೂಪಕೊಟ್ಟು ಪ್ರಕಟಿಸಿದ ಕುಶಿ ಪ್ರಕಾಶನ ಇವರಿಂದ ಇಂತಹ ಹಲವು ಕವನ ಸಂಕಲನಗಳು ಮೂಡಿ ಬರಲಿ ಎಂದು ಹಾರೈಸಿ, ಶುಭಕೋರುತ್ತೇನೆ.

--ಮಂಜು ಹಿಚ್ಕಡ್

ಅಂಕೋಲಾ ಬಸ್ ನಿಲ್ದಾಣದ ಒಂದಿಷ್ಟು ಸವಿ ನೆನಪುಗಳು!

ಇಂದಿಗೆ ಹನ್ನೆರಡು ವರ್ಷಗಳು ಕಳೆದು ಹೋದವು ನಾನು ನ್ನನ್ನೂರನ್ನ ಬಿಟ್ಟು, ಹಾಗಂತ ನಾನು ಸಂಪೂರ್ಣ ಊರು ಬಿಟ್ಟವನೇನಲ್ಲ. ಆಗಾಗ ರಜೆ ಇದ್ದಾಗ ಊರಿಗೆ ಹೋಗಿ ಬರ್ತಾ ಇದ್ದಿನಿ, ಇರ್ತಿನಿ ಕೂಡ. ಪ್ರತಿ ಬಾರಿ ಊರಿಗೆ ಹೋದಾಗಲು ಮೊದಲು ನೆನಪಾಗುವುದು ಅಂಕೋಲಾ ಬಸ್ ನಿಲ್ದಾಣ. ಊರಿಗೆ ಹೋದಾಗ ಒಮ್ಮೆಯಾದರೂ ಅಂಕೋಲಾ ಬಸ್ ನಿಲ್ದಾಣಕ್ಕೆ ಹೋಗಿ ಬರಲೇ ಬೇಕು. ಅಲ್ಲಿಗೆ ಹೋಗದೇ ತಿರುಗಿ ಬೆಂಗಳೂರಿಗೆ ಬಂದರೆ ಏನನ್ನೋ ಬಿಟ್ಟು ಬಂದ ಹಾಗೆ, ಅಂಕೋಲಾ ಬಸ್ ನಿಲ್ದಾಣದ ಮಹಿಮೆಯೇ ಹಾಗೆ. ಅಂಕೋಲಾ ಬಸ್ ನಿಲ್ದಾಣ ಅಂದ ತಕ್ಷಣ ನೆನಪಾಗುವುದು ಬಸ್ ನಿಲ್ದಾಣದ ಮುಂದಿರುವ ತೇಗದ ಮರ, ಅದರ ಅಕ್ಕ ಪಕ್ಕದಲ್ಲಿರುವ ಜೈಹಿಂದ ಹೈಸ್ಕೂಲ್ ಮೈದಾನ ಹಾಗೂ ಗಾಂದಿ ಮೈದಾನಗಳು, ಹಿಂಬಾಗದ ಕೋಟೆ ಬೇಣ, ಬಸ್ ನಿಲ್ದಾಣದ ಒಳಗಿದ್ದ ಪೈ ಬುಕ್ ಸ್ಟಾಲ್ ಇತ್ಯಾದಿ ಇತ್ಯಾದಿ.

ಬಸ್ ನಿಲ್ದಾಣದ ಬಲಭಾಗಲ್ಲಿ ಜೈಹಿಂದ್ ಹೈಸ್ಕೂಲ್ ಮೈದಾನ, ಇದೊಂದು ಐತಿಹಾಸಿಕ ಮೈದಾನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಅಂಕೋಲೆಯಲ್ಲಿ ಉಪ್ಪಿನ ಸತ್ಯಾಗೃಹ ನಡೆದಿದ್ದು ಇದೇ ಮೈದಾನದಲ್ಲಿ. ಅಂಕೋಲೆಗೆ ಕರ್ನಾಟಕದ ಬಾರ್ಡೋಲಿ ಎನ್ನುವ ಹೆಸರು ಬರಲು ಈ ಮೈದಾನದಲ್ಲಿ ನಡೆದ ಅಂದಿನ ರಾಜಕೀಯ ಚಟುವಟಿಕೆಗಳೇ ಕಾರಣ ಎಂದರೆ ತಪ್ಪಾಗಲಾರದು. ಈ ಮೈದಾನದಲ್ಲಿ ಯಾವಾಗಲೂ ಒಂದಲ್ಲ, ಒಂದು ಕ್ರೀಡೆಗಳು ನಡೆಯುತ್ತಲೇ ಇರುತ್ತಿದ್ದವು. ಒಮ್ಮೊಮ್ಮೆ ರಾತ್ರಿ ಯಕ್ಷಗಾನ ಬಯಲಾಟಗಳು ನಡೆಯುತಿದ್ದವು. ಅಂಕೋಲಾದಲ್ಲಿ ಬಹುತೇಕ ಯಕ್ಷಗಾನಗಳು ನಡೆಯುವುದು ಇದೇ ಮೈದಾನದಲ್ಲಿ. ಅದರಲ್ಲೂ ಮೇಳದ ಆಟಗಳೇ ಜಾಸ್ತಿ.

ಬಸ್ ನಿಲ್ದಾಣದ ಎಡಬಾಗದಲ್ಲಿ ಗಾಂದಿ ಮೈದಾನ. ೨೮-ಪೆಬ್ರುವರಿ-೧೯೩೪ ರಲ್ಲಿ ಮಹಾತ್ಮಾ ಗಾಂದಿಯವರು ಅಂಕೋಲಾಕ್ಕೆ ಬೆಟ್ಟಿ ಕೊಟ್ಟಾಗ ಇದೇ ಸ್ಥಳದಲ್ಲಿ ಅಂಕೋಲಾ ಜನತೆಯನ್ನುದ್ದೇಸಿಸಿ ಮಾತನ್ನಾಡಿದ್ದರಿಂದ ಆ ಸ್ಥಳಕ್ಕೆ ಗಾಂದಿ ಮೈದಾನ ಎಂದು ಕರೆಯುತ್ತಾರೆ. ಇಂದು ಅಲ್ಲಿ ಮೈದಾನವಿಲ್ಲ, ಒಂದು ಕಾಲದಲ್ಲಿ ಪಾಳು ಬಿದ್ದಿದ್ದ  ಮೈದಾನದಲ್ಲಿ ಇವತ್ತು ಸುಂಧರ ಉದ್ಯಾನವನವಿದೆ, ಹಾಗೆ ಅದರ ಪಕ್ಕದಲ್ಲಿ ಗಾಂದಿ ಭವನವಿದೆ.

ಹಾಗೆ ಬಸ್ ನಿಲ್ದಾಣದ ಹಿಂದೆ, ಪಾಳು ಬಿದ್ದ ಕೋಟೆ ಇದೆ, ಸರ್ಪ ಮಲ್ಲಿಕನ ಅಥವಾ ಸರ್ಫ್-ಉಲ್-ಮಲ್ಲಿಕನ ಕಾಲದಲ್ಲಿ ಅಂದರೆ ೧೬೫೦-೧೬೭೨ ಇಸ್ವಿಯ ನಡುವಲ್ಲಿ ಕಟ್ಟಿದ ಕೋಟೆ ಎನ್ನುತ್ತಾರೆ. ಆದರೆ ಇಂದು ಕೋಟೆಯ ಬಹುಬಾಗ ಪಾಳು ಬಿದಿದ್ದು, ಅಲ್ಲಲ್ಲಿ ಅವುಗಳ ಅವಶೇಷಗಳನ್ನು ಕಾಣಬಹುದು.

ಇವೆಲ್ಲವುಗಳ ನಡುವಲ್ಲಿ ನಮ್ಮ ಪುಟ್ಟ ಅಂಕೋಲಾ ಬಸ್ ನಿಲ್ದಾಣ. ಬಸ್ ನಿಲ್ದಾಣದ ಮುಂಬಾಗ ಹಳ್ಳಿ ಕಡೆ ಹೋಗುವ ಲೋಕಲ್ ಬಸ್ಸುಗಳಿಗೂ , ಹಿಂಬಾಗ ದೂರದ ಊರಿಗೆ ಹೋಗಿ ಬರುವ ವೇಗದೂತ ಬಸ್ಸುಗಳಿಗೆ ಮೀಸಲಾಗಿತ್ತು. ಲೋಕಲ್ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಒಂದು ತೇಗದ ಮರ, ಅದು ಎಷ್ಟು ವರ್ಷಗಳಿಂದ ಅಲ್ಲಿದೆ ಎನ್ನುವುದು ನನಗೂ ಸರಿಯಾಗಿ ತಿಳಿದಿಲ್ಲ. ಚಿಕ್ಕವರಿದ್ದಾಗ ನಮ್ಮ ತಂದೆಯವರ ಜೊತೆ ಅಂಕೋಲಾಕ್ಕೆ ಹೋದಾಗ ಅದೇ ತೇಗದ ಮರದ ಕೆಳಗೆ ನಿಂತು, ಊರಿಗೆ ಹೋಗುವ ಬಸ್ಸುಗಳಿಗಾಗಿ ಕಾಯ್ತಾ ನಿಲ್ಲುತ್ತಿದ್ದೆವು. ಬಸ್ ಏನಾದ್ರೂ ತಪ್ಪಿ ಹೋದರೆ ಇನ್ನೊಂದು ಬಸ್ಸಿಗಾಗಿ ಕಾಯುತ್ತಾ ಅಥವಾ ಹತ್ತಿರದ ಕಣಗಿಲ ಊರಿಗೆ ಹೋಗುವ ಬಸ್ಸಿಗೋ, ಇಲ್ಲಾ ನಮ್ಮ ಊರಿನ ಕ್ರಾಸ್ ವರೆಗೆ ಹೋಗುವ ಬಸ್ಸುಗಳಿಗೆ ಕಾಯುತ್ತಲೋ ನಿಲ್ಲುತಿದ್ದೆವು.

ಬಸ್ ನಿಲ್ದಾಣದ ಒಳಗೆ ಆಗಿರುವ ಪೈ ಬುಕ್ ಸ್ಟಾಲ್ ಅಂತೂ ಅಂದು ತುಂಭಾ ಪ್ರಸಿದ್ದವಾಗಿತ್ತು. ಅಂಕೋಲಾದ ಬಹುತೇಕ ಜನ ವೃತ್ತ ಪತ್ರಿಕೆಗಳನ್ನು, ವಾರ ಪತ್ರಿಕೆಗಳನ್ನು ಕೊಂಡು ತಂದು ಓದುತಿದ್ದುದು ಇದೇ ಬುಕ್ ಸ್ಟಾಲ್ನಿಂದ. ನಾವು ಕಾಲೇಜಿಗೆ ಹೋಗುವಾಗ ಆಗಾಗ ಬಂದು, ಇವತ್ತಿನ ಸುದ್ದಿಗಳೇನು? ಮುಖಪುಟದಲ್ಲಿ ಏನಿದೆ? ಎಂದು ಬುಕ್ ಸ್ಟಾಲ್ ಎದುರುಗಡೆ ನಿಂತು ಹೊರಗಿನಿಂದಲೇ ಕಣ್ಣಾಡಿಸುತಿದ್ದೆವು. ಹೀಗೆ ಕಣ್ಣಾಡಿಸುತ್ತಾ ನಿಂತಾಗ ಅದೆಷ್ಟೋ ಬಾರಿ ಪೈ ಮಾಮನಿಂದ (ಬುಕ ಸ್ಟಾಲ್ನ್ ಮಾಲಿಕ) ಬೈಸಿ ಕೊಂಡದ್ದು ಇದೆ.

ಕಾಲೇಜು ದಿನಗಳಲ್ಲಿ ಕಾಲೇಜು ಮುಗಿಸಿ, ಬೇಗ ಬೇಗನೇ ಬಂದು ಬಸ್ ನಿಲ್ದಾಣ ತಲುಪುತಿದ್ದೆವು. ಕಾಲೇಜಿನ ದಿನಗಳಲ್ಲಿ ಈ ಬಸ್ ನಿಲ್ದಾಣದಲ್ಲಿ ಸುತ್ತಾಡುವುದೆಂದರೆ ಎಲ್ಲಿಲ್ಲದ ಸಂತೋಷ. ಬಣ್ಣ ಬಣ್ಣದ ಬಟ್ಟೆ ಧರಿಸಿ ತಮ್ಮ ತಮ್ಮ ಊರಿಗೆ ಹೋಗುವ ಬಸ್ಸುಗಳನ್ನು ಕಾಯುತ್ತಾ ಒಂದು ಕಡೆ ಸಾಲಾಗಿ ನಿಂತಿರುವ ಹುಡುಗಿಯರನ್ನು ನೋಡುತ್ತಾ ನಿಂತರೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ನಮ್ಮೂರ ಬಸ್ಸು ಬಂದು ಬಿಟ್ಟರೆ ಈ ಹಾಳಾದ ಬಸ್ಸು ಇಷ್ಟು ಬೇಗ ಬರಬೇಕಿತ್ತೇ ಎಂದು ಹಲವು ಬಾರಿ ಅನ್ನಿಸಿದ್ದು ಉಂಟು. ಆಗ ಯಾವ ಹುಡುಗಿ ಯಾವ ಊರಿನವಳು, ಅವಳ ಊರಿನ ಬಸ್ಸು ಎಷ್ಟೊತ್ತಿಗೆ ಬರುತ್ತದೆ ಎನ್ನುವುದು ಆ ಬಸ್ ನಿಲ್ದಾಣದ ನಿರ್ವಾಹಕರಿಗಿಂತ ನಮಗೆ ಜಾಸ್ತಿ ತಿಳಿದಿತ್ತು ಅನ್ನುವುದು ತಪ್ಪಾಗಲಾರದು. ಅಷ್ಟರಮಟ್ಟಿಗೆ ನಮಗೆ ಬಸ್ಸುಗಳ ವೇಳೆ ತಿಳಿದಿತ್ತು. ಈಗಲೂ ಅಂಕೋಲಾ ಬಸ್ಸು ನಿಲ್ದಾಣಕ್ಕೆ ಹೋದಾಗ ಆಗಿನ ಈ ನೆನಪುಗಳು ಆಗಾಗ ಕಾಡುತ್ತಲೇ ಇರುತ್ತದೆ.

ಆಗಾಗ ಅಪರೂಪಕ್ಕೆ ಕುಳಿತು ತಿಂಡಿ ತಿಂದು ಹೊರಬರುತಿದ್ದ ಅಂಕೋಲಾ ಬಸ್ ನಿಲ್ದಾಣದ ಕ್ಯಾಂಟಿನ್. ಕಾಲೇಜು ವಿದ್ಯಾರ್ಥಿಗಳಿಂದಾಗಿ ತುಂಬಿ ಸಾಗುವ ಅವೆರ್ಸಾ, ತದಡಿ-ಗೋಕರ್ಣ, ಬೆಲೇಕೇರಿ ಬಸ್ಸುಗಳು. ಅಪರೂಪಕ್ಕೆ ನಮ್ಮ ಕೈಯಲ್ಲಿ ಇತರೆ ಸಾಮಾನುಗಳಿದ್ದರೆ, ಅದು ನಮ್ಮ ಸುತ್ತಾಟಕ್ಕೆ ತೊಂದರೆಯಾಗುತ್ತದೆ ಎಂದು ನಮ್ಮ ಸಾಮಾನುಗಳನ್ನು ಇಟ್ಟು ಹೋಗುತಿದ್ದ ಬಸ್ ನಿಲ್ದಾಣದ ಒಳಗಿನ ಸಂತೋಷನ ಅಂಗಡಿ ಇವೆಲ್ಲ ಮರೆಯುತ್ತೇನೆ ಎಂದರೂ ಹೇಗೆ ಮರೆಯಲು ಸಾದ್ಯ.

--ಮಂಜು ಹಿಚ್ಕಡ್

Thursday, November 21, 2013

ಕಲಿತು ಬಾಳು ನೀ ಕನ್ನಡ!

ನೆಲವು ನಮ್ಮದು, ಜಲವು ನಮ್ಮದು
ಪ್ರೀತಿ ನಮ್ಮದು, ಕಿರ್ತಿ ನಿಮ್ಮದು
ಗಾಳಿ ನಮ್ಮದು, ಕೂಳು ನಮ್ಮದು
ಭಾಷೆ ಏಕೆ ಬೇಕು ನಿಮ್ಮದು?

ಕುಡಿಯಲು ಬೇಕು ನಿಮಗೆ
ಕಾವೇರಿಯ ನೀರು
ವಾಸಿಸಲು ಬೇಕು ನಿಮಗೆ
ಕನ್ನಡಿಗರ ಸೂರು.

ಮರೆಯದಿರು ಗೆಳೆಯ
ಇದು ನಿನ್ನ ತವರಲ್ಲ
ನೀ ವಾಸಿಸುವ ಊರು.
ಇನ್ನೂ ತಡವೇಕೆ?
ಕಲಿತು ಏರು
ನೀ ಕನ್ನಡದ ತೇರು.

ಇಲ್ಲಾರಿಗೆ ಬೇಕು
ನಿನ್ನ ಎನ್ನಡ, ಎಕ್ಕಡ.
ಇಲ್ಲಿರುವವರೆಗಾದರೂ ನೀ
ಕಲಿತು ಬಾಳು, ಕನ್ನಡ ಕನ್ನಡ!

--ಮಂಜು ಹಿಚ್ಕಡ್
ನವೆಂಬರ್ ೧, ೨೦೧೩

ಇಂಟರ್ನೆಟ್, ಅಲ್ಲಿರುವುದೆಲ್ಲಾ ಹಳಸಿದ್ದಾದರೆ?

ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು ಕಂಡಿದ್ದೇ ನಿಜ ಎಂದು ಸಾಧಿಸುವ ಜಿಜ್ನಾಸು ಆತ. ಆತ ನನಗೇನು ಅಪರಿಚಿತ ವ್ಯಕ್ತಿ ಏನಲ್ಲ, ಹಾಗಂತ ತುಂಭಾ ಬೇಕಾದಷ್ಟು ಪರಿಚಿತನಂತು ಅಲ್ಲ. ವಯಸ್ಸಿನಿಂದಲೂ ನನಗಿಂತ ಹದಿನೈದು ಇಪ್ಪತ್ತು ವರ್ಷ ದೊಡ್ಡವನು. ಮಕ್ಕಳೆಲ್ಲ ಆಗಲೇ ಕಾಲೇಜಿನಲ್ಲಿ ಒದುತ್ತಿದ್ದರು. ಆತ ನನಗೆ ಸ್ವಲ್ಪ ಮಟ್ಟಿಗೆ ಪರಿಚಿತನಾದ್ದರಿಂದ ಮತ್ತೆ ಇಂಟರ್ನೆಟ್ ಬಗ್ಗೆ ಮಾತು ಮುಂದುವರೆಸಲು ಮುಂದಾದೆ. ಅಷ್ಟರಲ್ಲೇ ಆ ವ್ಯಕ್ತಿ ನನ್ನನ್ನು ತಡೆದು, "ಅಲ್ಲಾ, ಇಂಟರ್ನೆಟ್ ಅಲ್ಲಿ ಏನಿರುತ್ತೆ? ಅದೊಂತರಹ ಹಳಸಿದ ಅನ್ನದ ತರಹ. ಎಲ್ಲರೂ ಓದಿ, ನೋಡಿ ಬಿಟ್ಟಿರುವುದೇ ಅಲ್ಲಿರುವುದು, ಅದರಲ್ಲಿ ಹೊಸದೇನು ಇರುವುದಿಲ್ಲ, ಅದರಲ್ಲಿರುವುದೆಲ್ಲ ಹಳಯದೇ" ಎಂದು ಬಿಟ್ಟ. ನನಗೆ ಆತನ ಮಾತು ಸಹ್ಯವಾಗದೇ, ಚಿಕ್ಕ ಧ್ವನಿಯಲ್ಲಿ ಆತನನ್ನು ಕೇಳಿದೆ "ನಾವು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣ? ಅದು ಹಳಸಿದ್ದಲ್ಲವೇನು?" ಎಂದು. ಆತನಲ್ಲಿ ಉತ್ತರವಿರಲಿಲ್ಲ. ನನ್ನ ಮಾತು ಕೇಳಿಸಿಕೊಂಡ ನನ್ನ ಪರಿಚಿತರ ಮನೆಯಾಕೆಗೆ ನನ್ನ ಮನೆಯಾಕೆಗೆ ಅರ್ಥವಾಗಿ, ನಕ್ಕು ಚಹಾಮಾಡುವ ನೆಪದಿಂದ ಒಳಗೆ ಹೋದಳು.

ಅದೊಂದು ಚಿಕ್ಕ ಪ್ರಶ್ನೆಯಾದರೂ, ನನ್ನ ಮನದಾಳದಲ್ಲಿ ಹೊಕ್ಕು ಬಹಳದಿನಗಳಿಂದ ಕೊರೆಯುತಿತ್ತು. ಇಂಟರ್ನೆಟಲ್ಲಿರುವುದೆಲ್ಲಾ ಹಳೆಯದೇ, ಹಳಸಿದ್ದೇ ನಿಜ ಒಪ್ಪಿಕೊಳ್ಳೋಣ, ಆದರೆ ನಾವು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣ, ಇದೇನು ಹೊಸತೇ? ನಾವು ಓದುವಾಗಿನ ವಿಷಯಗಳನ್ನು, ನಮ್ಮ ತಮ್ಮಂದಿರೂ, ನಮ್ಮ ತಂಗಿಯರೂ ಕೂಡ ಓದಲಿಲ್ಲವೇ? ಇನ್ನೂ ನಮ್ಮ ಇತಿಹಾಸ ಇದೇನು ಹೊಸತೇ, ಎಲ್ಲರೂ ಓದಿದ ಇತಿಹಾಸವನ್ನೇ ನಾವು ಓದಲಿಲ್ಲವೇ? ನಮ್ಮ ಸಂವಿಧಾನ, ನಮ್ಮ ಭಾಷೆ, ನಮ್ಮ ವಿಜ್ನಾನ ಇವುಗಳಲ್ಲಿ ಎಷ್ಟು ಹೊಸತಿದೆ? ಇವುಗಳಲ್ಲೂ ಬಹುಪಾಲು ಹಳೆಯದೇ ಅಲ್ಲವೇ? ಹಾಗಂತ ಇವುಗಳನ್ನು ನಾವು ನಮ್ಮ ಮಕ್ಕಳಿಗೆ ಹೇಳಿ ಕೊಡುವುದಿಲ್ಲವೇ? ನಮ್ಮ ರಾಮಾಯಣ, ಮಹಾಭಾರತಗಳು, ಪಂಚತಂತ್ರ ಕಥೆಗಳು ಇವೆಲ್ಲವೂ ಹಳತಲ್ಲದೇ ಹೊಸದೇನಲ್ಲವಲ್ಲ.

ಇನ್ನೂ ಈ ಜಗತ್ತಿನಲ್ಲಿ ಹೊಸತು ಎನ್ನುವುದಾದರೂ ಎಷ್ಟಿದೆ? ಒಂದೊಮ್ಮೆ ಹೊಸದೊಂದು ಘಟನೆ ನಡೆದರೂ, ಅದು ಎಷ್ಟು ದಿನ ಹೊಸತಾಗಿರುತ್ತದೆ. ಘಟನೆ ನಡೆಯುವುದೇ ತಡ, ದಿನಕ್ಕೆ ಹತ್ತಿಪ್ಪತ್ತು ಭಾರಿ ಬ್ರೆಕಿಂಗ್ ಸುದ್ದಿಯಾಗಿ ದೂರದರ್ಶನದಲ್ಲಿ ಬಿತ್ತರವಾಗುತ್ತಿರುತ್ತದೆ. ಹಾಗಂತ ನಾವು ದೂರದರ್ಶನವನ್ನು ಮತ್ತೆ ಮತ್ತೆ ನೋಡುವುದಿಲ್ಲವೇ. ಇಂದು ದೂರದರ್ಶನದಲ್ಲಿ ಹತ್ತಾರು ಭಾರಿ ಪ್ರಸಾರವಾದ ಸುದ್ದಿ, ಮರುದಿನ ಮತ್ತೆ ವ್ರತ್ತ ಪತ್ರಿಕೆಯಲ್ಲಿ ಪ್ರಕಟವಾದಾಗ ನಾವದನ್ನು ಮತ್ತೆ ಓದುವುದಿಲ್ಲವೇ? ಅದೇ ವ್ರತ್ತ ಪತ್ರಿಕೆ ನಾಳೆ ಹಳತಾಗಿ ರದ್ದಿಯಾದ ಮೇಲೂ ಅದೇ ಸುದ್ದಿ ಮತ್ತೆ ವಾರ ಪತ್ರಿಕೆಯಲ್ಲಿ ಪ್ರಕಟವಾಗುವುದಿಲ್ಲವೇ?

ಇಲ್ಲಿ ನಮಗೆ ವಿಷಯ ಹಳೆಯದೋ, ಹೊಸತೋ ಮುಖ್ಯವಲ್ಲ. ಕೆಲವರಿಗೆ ಹಳೆತಾಗಿರುವ ವಿಷಯ ಇನ್ನು ಕೆಲವರಿಗೆ ಹೊಸತಾಗಿರಬಹುದು. ಕೆಲವರು ವಿಷಯ ಹಳತಾಗಿದ್ದರೂ ಮತ್ತೆ ಮತ್ತೆ ಓದುವುದಿಲ್ಲವೇ? ಒಂದೇ ವಿಷಯದ ಬಗ್ಗೆ ಹಲವಾರು ಜನ ಹಲವಾರು ರೀತಿ ಬರೆಯುವುದಿಲ್ಲವೇ? ಸೂರ್ಯ ಚಂದ್ರರ ಬಗ್ಗೆ ಅದೆಷ್ಟು ಜನರಿಗೆ ಗೊತ್ತಿಲ್ಲ ಹೇಳಿ, ಅವುಗಳ ಬಗ್ಗೆ ಅದೆಷ್ಟು ಜನ ಕವಿತೆ, ಲೇಖನ ಬರೆದಿಲ್ಲ. ನಮಗೆ ಸೂರ್ಯ ಚಂದ್ರ ಬಗ್ಗೆ ತಿಳಿದಿದೆ ಎಂದು ನಾವದನ್ನು ಓದುವುದಿಲ್ಲವೇ? ಇಲ್ಲಿ ನಮಗೆ ವಿಷಯ ಮುಖ್ಯವಲ್ಲ, ವ್ಯಕ್ತಿಯ ಬರವಣಿಗೆ, ಅವನು ಮಾಡಿದ ವಿಷಯದ ಪ್ರಸ್ತಾಪ ಮುಖ್ಯವಾಗಿರುತ್ತೆ ಅಲ್ಲವೇ?

ಇನ್ನೂ ಇಂಟರ್ನೆಟ್, ಇಂಟರ್ನೆಟ್ ಅಲ್ಲಿ ಏನಿದೆ, ಏನಿಲ್ಲ? ಗೂಗಲ್, ಯಾಹೂ ಮುಂತಾದ ಸರ್ಚ ಇಂಜಿನಗಳ ಸಹಾಯದಿಂದ ಅದೆಷ್ಟು ಉಪಯೋಗಕರ ಮಾಹಿತಿಯನ್ನು ಹುಡುಕಿ ಹೊರತೆಗೆಯಬಹುದು. ಅದಷ್ಟೇ ಏನು? ಇಂಟರ್ನೆಟ್ ಇಂದ ಕ್ಷಣಾರ್ಧದಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದು, ಮನೆಯಲ್ಲೇ ಕುಳಿತು ಸಾಮಾನುಗಳನ್ನು ಖರಿದಿಸಬಹುದು, ಸಂದೇಶ ರವಾನಿಸಬಹುದು, ಎಲ್ಲೋ ಇರುವ ಗೆಳೆಯನ ಜೊತೆ ಮಾತನ್ನಾಡಬಹುದು, ಚಲನ ಚಿತ್ರಗಳನ್ನು ವೀಕ್ಷಿಸಬಹುದು, ಕಳೆದು ಹೋದ ಗೆಳೆತನವನ್ನು ಮತ್ತೆ ಸಂಪಾದಿಸಬಹುದು, ನಿಮ್ಮದೇ ಆದ ವೆಬ್ ಸೈಟ್ಗಳನ್ನು ರಚಿಸಬಹುದು ಹೀಗೆ ಒಂದೇ, ಎರಡೇ. ಇಲ್ಲಿ ಕೆಟ್ಟದ್ದು ಇಲ್ಲ ಅಂತಲ್ಲ, ಇಲ್ಲೂ ಕೆಟ್ಟದ್ದೂ ಇದೆ. ಇಂದು ಕೆಟ್ಟದೆನ್ನುವುದು ಎಲ್ಲಿಲ್ಲ ಹೇಳಿ, ಎಲ್ಲಿ ಒಳೆಯದಿದೆಯೋ, ಅಲ್ಲಿ ಕೆಟ್ಟದ್ದು ಇದೆ. ಒಳ್ಳೆಯದನ್ನು ತೆಗೆದುಕೊಂಡು, ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಮಾತ್ರ ನಮಗೆ ಒಳ್ಳೆಯದಾಗುತ್ತದೆ ಅಲ್ಲವೇ.

ಯಾವುದೇ ವಿಷಯವನ್ನು ಹಳೆಯದು, ಹಳಸಿದ್ದು ಎನ್ನುವುದಕ್ಕೆ ಮೊದಲು, ಅದರಲ್ಲಿ ಏನಿದೆ, ಅದರಿಂದ ನನಗೇನು ಉಪಯೋಗ ಎನ್ನುವುದರ ಬಗ್ಗೆ ಚಿಂತಿಸುವುದು ಒಳ್ಳಯದಲ್ಲವೇ? ಒಂದೇ ವಸ್ತು ಬೇರೆ ಬೇರೆ ಜನರಿಗೆ ಬೇರೆ, ಬೇರೆ ರೀತಿ ಕಾಣಿಸಬಹುದು. ನಮ್ಮ ನಮ್ಮ ಭಾವನೆಗಳಿಗೆ ತಕ್ಕಂತೆ ನಾವು ಗ್ರಹಿಸುವ ವಿಷಯವೂ ಕೂಡ ಬೇರೆ ಬೇರೆಯಾಗಿರುತ್ತದೆ ಅಲ್ಲವೇ? ಹಾಗಾಗಿ ಯಾವುದೇ ವಿಷಯವನ್ನು ಹಳೆಯದ್ದು ಹಳಸಿದ್ದು ಎನ್ನುವುದರ ಮೊದಲು ಅದರ ಬಗ್ಗೆ ಮೊದಲು ಯೋಚಿಸುವುದು ಒಳ್ಳಯದಲ್ಲವೇ? ನಮಗೆ ಗೊತ್ತಿಲ್ಲದ ವಿಷಯವನ್ನು ಎಲ್ಲಿಂದ, ಯಾವಾಗ, ಯಾರಿಂದ ತಿಳಿದರೇನು?

--ಮಂಜು ಹಿಚ್ಕಡ್ 

Monday, November 18, 2013

ನಮ್ಮ ದಾಂಪತ್ಯ!

ದಿನಗಳೆದಂತೆ ಎಲ್ಲಾ
ಹಳತಾಗುವುದಾದರೆ
ಏಕಿನ್ನೂ ಹೊಸತಾಗಿಹುದು
ನಮ್ಮ ದಾಂಪತ್ಯ.

ದಿನಗಳೆದಷ್ಟು
ಹಳತಾದಷ್ಟು
ಹೊಸ ಬಗೆಯ
ಅನುಭವಗಳನು
ಎರೆಯುವುದು
ದಿನ ನಿತ್ಯ.

ಅಪಥ್ಯವೆನಿಸಿದರೂ
ಪಥ್ಯವಾಗದೂ
ನಿನ್ನ ಸಾಂಗತ್ಯ.

ಹಾಗಾಗಿ ಒಮ್ಮೆ
ಹಳತಂತೆ ಕಂಡರೂ
ನಿತ್ಯ ಹೊಸತೆನಿಸುವುದು
ನಮ್ಮ ದಾಂಪತ್ಯ.

--ಮಂಜು ಹಿಚ್ಕಡ್ 

Sunday, November 17, 2013

ಹೆದರಿಕೆ!

ಅವನ ಆ ಬರೀ
ಬಾಯಿ ಮಾತಿಗೆ
ಹೆದರುವ ಕುವರಿ
ನಾನಲ್ಲ ಎಂದವಳು,

ಹೆದರಿ, ಬೆದರಿ, ಬೆವರಿ
ಬಸವಳಿದು ಕುಳಿತಿದ್ದಳು,
ಅವನ ಬಾಯಿ
ಹೊರಸುಸುತ್ತಿದ್ದ ಆ
ಗುಟ್ಕಾ ವಾಸನೆಗೆ.

--ಮಂಜು ಹಿಚ್ಕಡ್ 

Saturday, November 16, 2013

ನಮ್ಮ ಬೆಂಗಳೂರ ಮಳೆ!

ಜಯನಗರದಲ್ಲುಂಟು, ಜೇಪಿ ನಗರದಲ್ಲಿಲ್ಲ
ಕೊಡೆಯಿಲ್ಲದಿರೆ ಉಂಟು, ಕೊಡೆಯಿದ್ದರೆ ಇಲ್ಲ
ಮೋಡಗಳಿಲ್ಲ, ಇಂದು ಮಳೆ ಬಾರದು ಅಂದರೂ
ಇನ್ನೊಂದು ಕ್ಷಣದಲ್ಲೇ ನಮ್ಮ ಮುಂದೆ ಹಾಜರು.

ಒಮ್ಮೊಮ್ಮೆ ಗುಡುಗು-ಮಿಂಚುಗಳ ಓಕುಳಿಯಾಟ
ಆದರೂ ಸುರುವಾಗದು, ಈ ಮಳೆಯ ಆಟ
ಬಾರದು ಎಂದು ಈ ಮಳೆಯ ನಂಬಿ ಹೋದರೆ
ಮಳೆ ಬಂದು, ಸಿಗಲಾರದು ನಿಂತು ಕೊಳ್ಳಲು ಆಸರೆ.

ಒಮ್ಮೆ ಧೋ ಎಂದು ಹೊಯ್ದು
ಉಬ್ಬು ತಗ್ಗುಗಳನ್ನೆಲ್ಲ ತೊಯ್ದು
ಮತ್ತಿನ್ನು ಬರಬಹುದೇನೋ ಎಂದು
ಸುಸ್ತಾಗುವೆವು, ಕಾಯ್ದು-ಕಾಯ್ದು.

ಬಾರದು ಎಂದರು ಬಂದು, ವಾಹನದಟ್ಟಣೆಯ ಹೆಚ್ಚಿಸಿ
ಮನೆಯ ತಲುಪುವವರ ವೇಳೆಯನು ವ್ಯಯಿಸಿ
ನಿಲ್ಲುವುದೆಂದು ಕಾದವರನು ಕಾಯಿಸಿ ಸತಾಯಿಸಿ
ರಸ್ತೆಯಲ್ಲೆಲ್ಲ ನೀರ್ ಕಾಲುವೆಯನು ಹರಿಸಿ.

ರಸ್ತೆಯಲ್ಲಿದ್ದ ಮಣ್ಣು ದೂಳುಗಳೆಲ್ಲದರ ಸಂಹಾರ
ಮಳೆ ನೀರು, ಚರಂಡಿ ನೀರುಗಳ ಸಮ್ಮಿಶ್ರ ಸರ್ಕಾರ
ಹೀಗುಂಟು ನಮ್ಮ ಬೆಂದಕಾಳೂರ ಮಳೆ
ಮಳೆ ಬಂದರೆ ಅಲ್ಲವೇ, ಈ ಇಳೆಗೊಂದು ಕಳೆ.

--ಮಂಜು ಹಿಚ್ಕಡ್

ಆಶಾಭಂಗ!

ನನ್ನ ಮೋಹಕ ನೋಟಕ್ಕೆ 
ನಿನ್ನ ಕುಹಕ ನಗೆಯಾಕೆ?
ನೋಟವನರಿಯದ ನೀನು
ನನ್ನ ಅರಿತೆಯೇನು?
ಬರೀಯ ಆತುರದಿ ಕಾತರಿಸಿ
ಬಳಿ ಬರುವ ನಿನಗೆ
ನಾನಾದರೇನು?
ಹಿತ್ತಲದಿ ಮುರಿದು ಬಿದ್ದಿಹ
ಒಣ ಮರವಾದರೇನು?

--ಮಂಜು ಹಿಚ್ಕಡ್ 

Wednesday, November 13, 2013

ಈ ಬಾಳಿಗೇನು ಬೇಕು?

ಹಲವು ಭಾವ ಬೇಕು ನಮಗೆ 
ಕ್ಷಣಿಕ ಜೀವ ತೇಯಲು.
ಹಲವು ಕನಸು ಬೇಕು ನಮಗೆ,
ಕೆಲವು ನನಸಾಗಲು.

ನಯವು ಬೇಕು, ವಿನಯ ಬೇಕು
ನಮ್ಮ ಭಾವ ತಿಳಿಸಲು
ಒಮ್ಮೆ ನೀತಿ, ಒಮ್ಮೆ ಭೀತಿ
ಈ ಜೀವನ ಸಾಗಲು.

ಬಯಕೆ ಹಲವು ಬೇಕು ನಮಗೆ
ಬದುಕು ಬೆಳಕ ಕಾಣಲು
ಹಲವು ನೋವ ಕಾಣಬೇಕು
ಕೆಲವು ನಲಿವ ಸವಿಯಲು.

ಸುಖವು ಬೇಕು, ದುಖವು ಬೇಕು
ನಮ್ಮ ಬಾಳ ಪಯಣ ಸಾಗಲು
ಧನವು ಬೇಕು, ಮನವು ಬೇಕು
ತನುವು ಬದುಕಿ ಬಾಳಲು.

ಹಲುವು ತರದ ಪ್ರೀತಿ ಬೇಕು
ಬಾಳು ಮಧುರವಾಗಲು
ಛಲವು ಬೇಕು, ನಿಲುವು ಬೇಕು
ನಾವು ಬೆಳೆದು ನಿಲ್ಲಲು.

--ಮಂಜು ಹಿಚ್ಕಡ್ 

ಹಸಿವು!

ಕಣ್ಣು ಮಂಜಾಗಿ
ಉಸಿರು ಬಿಗಿಯಾಗಿ
ಬಾಯೆಲ್ಲಾ ಒಣಗಿ
ಹೊಟ್ಟೆ ತುಂಬಿದ ಗಾಳಿ
ಹೊರ ಬರುತಲಿವೆ
ಬರೀಯ ತೇಗುಗಳಾಗಿ,
ಕಾತರಿಸುತಿದೆ ಮನಸು
ನೀನೊಡ್ಡಲಿರುವ ಆ
ತುತ್ತು ಅನ್ನಕ್ಕಾಗಿ.

--ಮಂಜು ಹಿಚ್ಕಡ್ 

Wednesday, October 30, 2013

ಹೂ-ದುಂಬಿ

[ಈ ವಾರದ (೨೮-೧೦-೨೦೧೩) ಪಂಜು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಒಂದು ಕವನ http://www.panjumagazine.com/?p=5002 ]
ಹೂಬನದಿ ಆಗತಾನೇ
ಅರಳಿದ ಹೂ
ಕಾದಿಹುದು ದುಂಬಿ
ತನ್ನ ಚುಂಬಿಸಲೆಂದು.

ಮುಂಜಾವಿನ ತಂಗಾಳಿಗೆ
ಮೈಯೊಡ್ಡಿ ಕಾದಿಹುದು
ಎಂದು ಸೂರ್ಯ,
ಉದಯಿಸುವನೆಂದು.

ಪಕಳೆಗಳ ಅರಳಿಸಿ
ಕಾದಿಹ ಸುಮವ ಕಂಡು
ತಾ ಮೋಹಗೊಂಡು
ಹಾರಿತು ದುಂಬಿ
ಆಗತಾನೆ ಅರಳಿನಿಂತ
ಆ ಸುಮದೆಡೆಗೆ.

ಝೇಂಕರಿಸಿ ತನ್ನೆಡೆಗೆ
ಹಾರಿ ಬಂದ ದುಂಬಿಗೆ
ತನ್ನ ಮೈ ಅಲುಗಿಸಿ
ಸ್ವಲ್ಪ ಸತಾಯಿಸಿ
ಸಹಕರಿಸಿತು ದುಂಬಿಗೆ
ತನ್ನ ಮಕರಂದ ಹೀರಲು.

ಮಕರಂದ ಹೀರಿ
ತನ್ನಾಸೆ ತೀರಿತೆಂದು
ಹಾರಿತು ದುಂಬಿ
ಇನ್ನೊಂದರ ಬಳಿಗೆ.

ಆತ ಮತ್ತೆ ಬರಬಹುದೆಂದು
ಸೂರ್ಯ ಮುಳುಗಿ
ಭಾನು ಕೆಂಪಾಗುವವರೆಗೆ ಕಾದು
ತಾನು ಮರುಗಿ, ಸುಸ್ತಾಗಿ
ಹಾರಿ ಹೋದ ಆ
ದುಂಬಿಯ ನೆನಪಾಗಿ
ಪಕಳೆಗಳನ್ನುದಿರಿಸಿತು
ತನ್ನ ಗಿಡದ, ಬುಡದ ಬಳಿಗೆ.

ಮಕರಂದ ಹೀರಿ
ಆಸೆ ಹತ್ತಿದ ದುಂಬಿಗೆ
ಕಂಡ ಕಂಡದ್ದೆಲ್ಲ ಹೂವೆಂದು
ತಿಳಿದು ಹಾರಿತು
ರಸ್ತೆ ದೀಪದ ಬಳಿಗೆ.

ಉರಿವ ದೀಪವ ಸುತ್ತಿ
ಸುಟ್ಟು ಕರಕಲಾಗಿ ಬಿದ್ದಿತು
ದೀಪದ ಕಂಬದ ಬಳಿಗೆ.
–ಮಂಜು ಹಿಚ್ಕಡ್ 

Sunday, October 27, 2013

ಆಗಾಗ ನೆನಪಾಗುವ ನನ್ನ ಬಾಲ್ಯದ ಸೈಕಲ್ ಸವಾರಿಗಳು!

ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅದನ್ನೇ ನೋಡುತಿದ್ದ ನನಗೂ ನನ್ನ ಬಾಲ್ಯದ ದಿನಗಳಲ್ಲಿ ನಾನು ನಡೆಸಿದ ಸೈಕಲ್ ಸವಾರಿಗಳು ನೆನಪಿಗೆ ಬರತೊಡಗಿದವು. ಮನುಷ್ಯ ಎಷ್ಟೇ ದೊಡ್ಡವನಾದರೂ, ಹಣಗಳಿಸಿ ಶ್ರೀಮಂತನಾದರೂ, ಇಂದು ಬೈಕು ಕಾರುಗಳಲ್ಲಿ ಓಡಾಡುತಿದ್ದರೂ ಆತನಿಗೆ ತಾನು ಬಾಲ್ಯದಲ್ಲಿ ನಡೆಸಿದ ಸೈಕಲ್ ಸವಾರಿಯನ್ನು ಮಾತ್ರ ಮರೆಯಲಾರ ಅನ್ನಿಸುತ್ತದೆ. ಆ ಸೈಕಲ್ ನೀಡಿದಷ್ಟು ಸುಖ-ಸಂತೋಷ ಇಂದಿನ ಐಷಾರಾಮಿ ಕಾರುಗಳು ನೀಡಲಾರವು ಎನ್ನುವುದು ನನ್ನ ಅನಿಸಿಕೆ. ಬಹುಷಃ ಹಲವರ ಅನಿಸಿಕೆನೂ ಇರಬಹುದೇನೋ ಏನೋ? ನಾನು ಕೂಡ ಅದಕ್ಕೇನು ಹೊರತಾಗಿಲ್ಲ. ನನ್ನ ಬಾಲ್ಯದ ನೆನಪುಗಳಲ್ಲಿ ಈ ಸೈಕಲ್ ಸವಾರಿಯೂ ಒಂದು. ಅಂತಹ ಕೆಲವು ಘಟನೆಗಳೇ ಇಲ್ಲಿಯ ಲೇಖನ.

ಬೆಲ್ಟಿನ ರುಚಿ ತೋರಿಸಿದ ಮಾವ:
ನಾನಾಗ ಏಳೆಂಟು ವರ್ಷದ ಬಾಲಕ, ಶಾಲೆಗೆ ರಜಾ ಬಿತ್ತು ಎಂದರೆ ನಮ್ಮ ತಾಯಿಯ ತವರು ಮನೆಗೆ ಹೊರಟುಬಿಡುವುದು ವಾಡಿಕೆ. ಒಮ್ಮೆ ಹೀಗೆ ಅಜ್ಜಿ ಮನೆಯಲ್ಲಿದ್ದಾಗ, ನಮ್ಮ ಸಂಬಂಧಿಕರಾರೋ ಅವರ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಮಂತ್ರಿಸಲು ಬಂದಿದ್ದರು. ಅವರ ಊರು ಅದೇ ಊರಿನಿಂದ ಮೂರು ನಾಲ್ಕು ಕಿಲೋ ಮೀಟರ್ ದೂರದಲ್ಲಿತ್ತು. ಆಗೆಲ್ಲಾ ಈಗಿನಷ್ಟು ಬೈಕುಗಳಾಗಲೀ, ಕಾರುಗಳಾಗಲೀಇರಲಿಲ್ಲ. ಹೆಚ್ಚಿನ ಜನ ಬೈಕ್, ಕಾರುಗಳ ಬದಲು ಸೈಕಲ್ಗಳನ್ನೇ ಉಪಯೋಗಿಸುತ್ತಿದ್ದ ಕಾಲ ಅದು. ಅಂದು ಹಾಗೆ ಸೈಕಲ್ ಮೇಲೆ ಮನೆಗೆ ಬಂದವರು ಅದು ಇದು ಮಾತನಾಡುತ್ತಾ ಕುಳಿತಿದ್ದರು. ಹೊರಗೆ ಆಡುತಿದ್ದ ನಮಗೆ ಅಲ್ಲಿ ಸೈಕಲ್ ನಿಲ್ಲಿಸಿರುವುದು ನಮ್ಮ ಗಮನಕ್ಕೆ ಬಂತು. ನನಗಾಗ ಸೈಕಲ್ ಹೊಡೆಯಲು ಬರುತ್ತಿರಲಿಲ್ಲ, ನಮ್ಮ ಮಾವನ ಮಗ ಆಗ ತಾನೇ ಸೈಕಲ್ ಚಲಾಯಿಸಲು ಕಲಿತಿದ್ದರಿಂದ. ನನಗೂ ಆಗ ಸೈಕಲ್ ಕಲಿಯುವ ಆಸೆ ಇದ್ದುದರಿಂದ ಇಬ್ಬರು ಸೈಕಲ್ ತೆಗೆದುಕೊಂಡು ಸಮುದ್ರ ತೀರದತ್ತ ಹೊರಟೆವು. ನಾವು ಹೊರಟಾಗ ಸಾಯಂಕಾಲ್ ೩-೪ ಗಂಟೆಯಿರಬಹುದೇನೋ. ನನಗೂ ಅಷ್ಟು ಇಷ್ಟು ಸೈಕಲ್ ಹೇಳಿ ಕೊಟ್ಟು, ತಾನು ಹೊಡೆಯುತ್ತಾ ಇದ್ದ. ಹೀಗೆ ಸೈಕಲ್ ಹೊಡೆಯುವುದರಲ್ಲಿ ಮಗ್ನವಾಗಿದ್ದ ನಮಗೆ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಇಬ್ಬರಿಗೂ ಮನೆಯ ನೆನಪಾಗಿ ಸೈಕಲ್ ತೆಗೆದುಕೊಂಡು ಮನೆಗೆ ಬಂದೆವು.

ನಾವು ಮನೆಗೆ ಬರುವಷ್ಟರಲ್ಲಿ, ಮನೆಗೆ ಬಂದ ಅತಿಥಿಗಳು ಮನೆಯಲ್ಲಿ ಇರಲಿಲ್ಲ. ಅವರು ನಮಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಹೊದರೆಂದು ತಿಳಿಯಿತು. ಮನೆಗೆ ಬಂದು ಇನ್ನೇನು ಮನೆಯ ಒಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ನಮ್ಮನ್ನು ನೋಡಿದ ನಮ್ಮ ಮಾವ ಒಳ ಹೋಗಿ ಹೊರಬಂದು ಒಂದೇ ಸಮನೇ ಬೆಲ್ಟನ ಸೇವೆ ನೀಡಲಾರಂಭಿಸಿದರು. ಅವರಿಗೆ ನಾವು ಹೇಳದೇ ಕೇಳದೇ ಸೈಕಲ್ ತೆಗೆದುಕೊಂಡು ಹೋಗಿ, ಮನೆಗೆ ಬಂದ ಅತಿಥಿಗಳನ್ನು ಕಾಯಿಸಿ, ಮನೆಗೆ ಬಂದ ಅತಿಥಿಗಳನ್ನು ಕಾಯಿಸಿ, ಅವರು ಸೈಕಲ್ ಇಲ್ಲದೇ ನಡೆದು ಹೊರಡುವಂತೆ ಮಾಡಿ, ನಾವೂ ರಾತ್ರಿ ತಡ ಮಾಡಿ ಮನೆಗೆ ಬಂದುದ್ದು ಅವರಿಗೆ ಸಹಜವಾಗಿ ಕೋಪ ತರಿಸಿತ್ತು. ಈಗಲು ಆ ಬೆಲ್ಟನ ರುಚಿ ಆಗಾಗ ಕಣ್ಣ ಮುಂದೆ ಬರುತ್ತಿರುತ್ತದೆ.

ಸಾವಿನ ದವಡೆಯಿಂದ ಪಾರಾಗಿದ್ದು:
ನಾವು ಚಿಕ್ಕವರಿರುವಾಗ, ರಸ್ತೆಯಲ್ಲಿ ಯಾವುದೇ ಸೈಕಲ್ಗಳು ನಿಂತಿರಲಿ, ಅದಕ್ಕೆ ಕೀಲಿ ಹಾಕಿದ್ದಾರೋ, ಇಲ್ಲವೋ ಎಂದು ಪರೀಕ್ಷಿಸಿ, ಕೀಲಿ ಹಾಕಿಲ್ಲ ಎಂದರೆ ಮುಗಿಯಿತು. ಆ ಸೈಕಲ್ ತೆಗೆದುಕೊಂಡು ಹೋಗಿ ಮನಸ್ಸು ಖುಸಿ ಎನ್ನಿಸುವವರೆಗೆ ಅಲ್ಲದಿದ್ದರೂ, ಮನೆಯ ನೆನಪು ಬರುವವರೆಗೆ ಓಡಿಸಿ ತಂದಿಡುತಿದ್ದೆವು. ಅದರಲ್ಲೂ ನಮ್ಮೂರಿಗೆ ದಿನಾ ಬರುವ ಮೇಸ್ತ್ರಿ ಗಣಪತಿಯ ಸೈಕಲ್ಗಳೆಂದರೆ ನಮಗೆ ಎಲ್ಲಿಲ್ಲದ ಪ್ರೀತಿ. ಆತನ ಸೈಕಲ್ಗೆ ಕೀಲಿ ಹಾಕುವ ವ್ಯವಸ್ತೆಯಿಲ್ಲದ ಕಾರಣ, ಆ ಸೈಕಲ್ ನಮಗೆ ಸಿಗಬಾರದು ಎಂದು, ಯಾರದೋ ಮನೆಯಲ್ಲಿ ಬಚ್ಚಿಟ್ಟು, ಯಾರದೋ ಮನೆ ಕೆಲಸಕ್ಕೆ ಹೋಗುತ್ತಿದ್ದ. ಅದರಲ್ಲೂ ನಮಗೆ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟಿದ್ದರಲ್ಲಿ ಪ್ರೀತಿ ಜಾಸ್ತಿ ಅಲ್ಲವೇ, ಹಾಗಾಗಿ ಆತ ಎಲ್ಲೇ ಸೈಕಲ್ ಬಚ್ಚಿಡಲಿ, ಅದನ್ನು ಹುಡುಕಿ ತೆಗೆಯುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಒಮ್ಮೆ ನಾನು ಮತ್ತು ನನ್ನ ಸ್ನೇಹಿತ ಇಬ್ಬರು ಸೇರಿ, ಅವನ ಸೈಕಲ್ ಹುಡುಕುತ್ತಾ ಹೊರಟಾಗ, ಯಾರದೋ ಮನೆಯ ದನದ ಕೊಟ್ಟುಗೆಯಲ್ಲಿ ಆತ ಸೈಕಲ್ ಬಚ್ಚಿಟ್ಟಿರುವುದು ನಮ್ಮ ಕಣ್ಣಿಗೆ ಬಿತ್ತು. ನಮ್ಮ ಕಣ್ಣಿಗೆ ಬಿದ್ದ ಮೇಲೆ ಮುಗಿಯಿತು, ಅದನ್ನು ತೆಗೆದುಕೊಂಡು ಹೋಗಿ ಹೊಡೆಯಲೇ ಬೇಕು. ತಡ ಏನು ಎಂದು ಇಬ್ಬರು ಸೈಕಲ್ ತೆಗೆದುಕೊಂಡು ಹೊರಟೆವು.

ಸೈಕಲ್ ತೆಗೆದುಕೊಂಡು ಬಂದು, ಅಲ್ಲಿಂದ ಬೆಳಸೆ, ಚಂದು ಮಠ ಎಲ್ಲಾ ಊರುಗಳನ್ನು ಸುತ್ತಿ, ವಾಪಸ್ ಬರುತ್ತಿದ್ದೆವು, ಬೆಳಸೆಯ ಏರಿನಲ್ಲಿ ನನ್ನ ಗೆಳೆಯ ನನ್ನನ್ನು ಸೈಕಲ್ ಮುಂದೆ ಕುಳ್ಳಿಸಿಕೊಂಡು ತಾನು ಸೈಕಲ್ ಹೊಡೆಯುತಿದ್ದ. ಆ ಬೆಳಸೆ ಏರು ಎಂದರೆ, ಅದೊಂದು ಯಮನ ಅಚ್ಚು ಮೆಚ್ಚಿನ ಸ್ಥಳ, ವರ್ಷಕ್ಕೆ ಕನಿಷ್ಟ ಹತ್ತಾರು ಅಪಘಾತಗಳಾದರೂ ಸಂಭವಿಸುತ್ತಿದ್ದವು ಅಲ್ಲಿ. ನನ್ನ ಗೆಳೆಯ ಆಕಡೆ, ಈ ಕಡೆ ಸೈಕಲ್ ಚಲಿಸುತ್ತಾ ಬೆಳಸೆಯ ಏರು ಹತ್ತಿಸುತಿದ್ದ. ಇನ್ನೇನು ಅರ್ಧ ಏರು ಹತ್ತಿರಬಹುದು, ನಮ್ಮ ಎದುರುಗಡೆಯಿಂದ ಒಂದು ಕಾರು, ಹಿಂದುಗಡೆಯಿಂದ ಒಂದು ಲಾರಿ ಬರುತ್ತಿತ್ತು. ಲಾರಿಯಾತ ನಮ್ಮ ಸಮೀಪಕ್ಕೆ ಬರುತ್ತಿದ್ದಂತೆ, ಜೋರಾಗಿ ಶಬ್ಧ ಮಾಡತೊಡಗಿದ. ಸೈಕಲ್ ಓಡಿಸುತ್ತಿದ್ದ ನನ್ನ ಗೆಳೆಯ ಹೆದರಿದ್ದರಿಂದ, ಸೈಕಲ್ ನಿಯಂತ್ರಿಸಲು ಆಗದೆ ಬಿಳಿಸಿಬಿಟ್ಟ. ನಮಗೆ ಒಂದು ಕ್ಷಣ ಏನಾಯ್ತು ಅಂತಾ ತಿಳಿಯುವ ಹೊತ್ತಿಗೆ, ನಮ್ಮ ಅರ್ಧ ದೇಹ ರಸ್ತೆಯಲ್ಲೂ, ಇನ್ನರ್ಧ ದೇಹ ರಸ್ತೆಯ ಹೊರಗೂ ಇತ್ತು. ಇಬ್ಬರೂ ಒಬ್ಬರಿಗೊಬ್ಬರು ನೋಡಿಕೊಂಡೆವು, ಅಂತೂ ಬದುಕಿದೆವಲ್ಲ ಎನಿಸಿತು. ನಮ್ಮ ಅದ್ರಷ್ಟಕ್ಕೆ ಲಾರಿ ಅಷ್ಟೋಂದು ವೇಗವಾಗಿರದ ಕಾರಣ, ಆ ಲಾರಿಯವನ ಕೃಪೆಯಿಂದ ಆಗುತಿದ್ದ ಅವಘಡದಿಂದ ತಪ್ಪಿಸಿಕೊಂದಿದ್ದೆವು. ನಮಗೆ ಏನು ಆಗದ ರೀತಿಯಲ್ಲಿ, ನಮ್ಮನ್ನು ತಪ್ಪಿಸಿ ಪಕ್ಕದಿಂದಲೇ ಲಾರಿ ಓಡಿಸಿಕೊಂಡು ಹೋಗಿದ್ದರಿಂದ ನಾವು ಕುದಲೂ ಎಳೆಯಷ್ಟು ಅಂತರದಿಂದ ಪಾರಾದೆವು. ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾವು ಸಾಯದಿದ್ದರೂ, ಬದುಕಿ ಸತ್ತಂತಿರುತಿದ್ದೆವೋ ಏನೋ?

ಸೈಕಲ್ ನಾರಾಯಣನ ಹೃದಯವಂತಿಕೆ:
ನಮ್ಮ ಮನೆಯ ಹತ್ತಿರದ ಮನೆಯಲ್ಲಿ ಓರ್ವ ಬಾಲಕನಿದ್ದ, ನನಗಿಂತ ಐದಾರು ವರ್ಷ ಚಿಕ್ಕವನು, ಆತನ ಬಳಿ ಒಂದು ಚಿಕ್ಕ ಸೈಕಲ್ ಇತ್ತು. ನನಗೆ ಆ ಸೈಕಲ್ ಮೇಲೆ ಏನೋ ಒಂದು ತರಹ ಆಸಕ್ತಿ, ಒಮ್ಮೆಯಾದರೂ ಅದನ್ನು ಓಡಿಸಬೇಕು ಎನ್ನುವ ತವಕ. ಒಮ್ಮೆ ಆ ಹುಡುಗನ ಮನೆಗೆ ಹೋಗಿ ಆತನ ತಾಯಿಯನ್ನು ಕಾಡಿ ಬೇಡಿ ಸೈಕಲ್ ತೆಗೆದುಕೊಂಡು ಹೋದೆ. ಸೈಕಲ್ ಏರಿ ನಮ್ಮೂರ ಏರಿಯನ್ನು ಏರಿ ಮತ್ತೆ ವಾಪಸ್ ಏರಿ ಇಳಿಯುವಾಗ ಸೈಕಲ್ ಹಿಂದಿನ ಗಾಲಿಯಿಂದ 'ಟಪ್' ಎಂದು ಶಬ್ಧ ಬಂತು, ಆಗಲೇ ಗಾಲಿ ಪಂಚರ್ ಆಗಿತ್ತು, ಆ ಶಬ್ಧಕ್ಕೂ, ಗಾಲಿ ಪಂಚರ್ ಆಗಿದ್ದರಿಂದಲೂ ನಾನು ಸೈಕಲ್ ನಿಯಂತ್ರಿಸಲಾಗದೇ, ರಸ್ತೆಯ ಪಕ್ಕದಲ್ಲಿಯ ಮುಳ್ಳು ಕುಂಟೆಯ ಮೇಲೆ ಹೋಗಿ ಬಿದ್ದೆ. ಮೈ ಕೈಗೆಲ್ಲ ಗಾಯ. ಸೈಕಲ್ ನೋಡಿದೆ ಹಿಂದಿನ ಗಾಲಿಯಿಂದ ಗಾಳಿ ಸಂಪೂರ್ಣ ಹೊರ ಹೋಗಿತ್ತು, ಎರಡು ಬ್ರೆಕ್ ಗಳು ಮೇಲೆದಿದ್ದವು, ನನಗೆ ನನಗಾದ ಗಾಯಗಳಿಗಿಂತ, ಸೈಕಲ್ಗಾದ ಗಾಯ ನೋಡಿ ಇನ್ನಷ್ಟು ನೋವಾಯ್ತು. ಮನೆಗೆ ಹಾಗೇ ಹೋಗುವಂತೆಯೂ ಇರಲಿಲ್ಲ, ಅದು ಬೇರೆಯವರ ಸೈಕಲ್ ಬೇರೆ. ರಿಪೇರಿ ಮಾಡಿಸಲು ಕೈಯಲ್ಲಿ ಕಾಸೂ ಇರಲಿಲ್ಲ, ಮನೆಗೆ ಹೋಗಿ ಕೇಳುವಂತೆಯೂ ಇರಲಿಲ್ಲ. ಏನು ಮಾಡುವುದು ಅಂತಾ ಯೋಚಿಸುತಿದ್ದಾಗ ಸೈಕಲ್ ನಾರಾಯಣನ ನೆನಪಾಯಿತು. 

ಸೈಕಲ್ ನಾರಾಯಣ ಇಂದಿನ ಅಂಕೋಲಾ ರೇಲ್ವೆ ನಿಲ್ದಾಣದ ಹತ್ತೀರ, ಜುಮಗೋಡದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ತನ್ನ ಮನೆಯಲ್ಲಿಯೇ ಸೈಕಲ್ ರಿಪೇರಿ ಮಾಡುತ್ತಿದ್ದ. ಆತ ಸೈಕಲ್ ರಿಪೇರಿ ಮಾಡುತ್ತಿದ್ದರಿಂದ ಆತನಿಗೆ ಎಲ್ಲರೂ ಸೈಕಲ್ ನಾರಾಯಣ ಎಂದೇ ಕರೆಯುತ್ತಿದ್ದರು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸೈಕಲ್ ಸವಾರರು, ಆತನ ಬಳಿಯೇ ಸೈಕಲ್ ತಂದು ರಿಪೇರಿ ಮಾಡಿಸಿಕೊಂಡು ಹೋಗುತ್ತಿದ್ದರು. ನನಗೆ ಆತನ ನೆನಪಾದದ್ದೇ ತಡ ಸೈಕಲ್ ನಡೆಸಿಕೊಂಡು ಅವನ ಮನೆಯತ್ತ ಹೊರಟೇ ಬಿಟ್ಟೇ. ಅದೇನು ಸಮೀಪವೇನು ಇರಲಿಲ್ಲ, ನಮ್ಮ ಊರಿನಿಂದ ೩ ಕಿಲೋ ಮೀಟರ್ ಆದರೂ ಹೋಗಬೇಕು. ನನಗಾಗ ಮನಸ್ಸಲ್ಲಿ ಇದ್ದುದು ಸೈಕಲ್ ರಿಪೇರಿ ಮಾಡಿಸಬೇಕು ಎನ್ನುವುದಾದ್ದರಿಂದ, ನನಗಾಗುತ್ತಿದ್ದ ನೋವನ್ನು ಲೆಕ್ಕಿಸದೇ, ಸೈಕಲ್ ತಳ್ಳಿಕೊಂಡು ಹೊರಟೆ. ನಾನು ಹೋದಾಗ ಆತ ಮನೆಯಲ್ಲಿ ಇಲ್ಲದಿದ್ದರೂ ಒಂದರ್ಧ ಗಂಟೆಯಲ್ಲಿ ಮನೆಗೆ ಬಂದ. ನನ್ನ ಸ್ಥಿತಿಯನ್ನು ನೋಡಿ ಆತನಿಗೂ ಮರುಕ ಹುಟ್ಟಿತು. ಬಂದು ಸೈಕಲ್ ರಿಪೇರಿ ಮಾಡಿಕೊಟ್ಟ. ನಾನು "ಹಣ ಎಷ್ಟಾಯ್ತು" ಎಂದು ಕೇಳಿದೆ. ಆತ ನಗುತ್ತಾ, "ನಿನಗಿಂತ, ನೀನು ಸೈಕಲ್ ಮೇಲೆ ಕಾಳಜಿ ತೋರಿಸುವುದನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ" ಎಂದು, ಎಷ್ಟು ಕೇಳಿದರೂ ರೊಕ್ಕ ಎಷ್ಟೆಂದು ಹೇಳಲಿಲ್ಲ. ನಾನು ನಾಳೆ ಬಂದು ಕೊಡುತ್ತೇನೆ, ರೊಕ್ಕ ಎಷ್ಟಾಯ್ತು ಎಂದರೂ, ಬೇಡ ಹೋಗು ಎಂದು ಹೇಳಿ ಕಳಿಸಿಬಿಟ್ಟ. ನಾನು ರಿಪೇರಿಯಾದ ಸೈಕಲ್ ಅನ್ನು ಸಾವಕಾಸವಾಗಿ ತೆಗೆದುಕೊಂಡು ಬಂದು, ಸೈಕಲನ್ನು ಆ ಮೆನೆಯವರಿಗೆ ತಲುಪಿಸಿ, ನಡೆದ ವಿಷಯವನ್ನು ಅವರ ಮನೆಯಲ್ಲೂ, ನಮ್ಮ ಮನೆಯಲ್ಲೂ ಮುಚ್ಚಿಟ್ಟು ಬಿಟ್ಟೆ. ಇಂದು ಸೈಕಲ್ ನಾರಾಯಣ ಇಲ್ಲ ಆದರೆ ಆತನ ನೆನಪು ಮಾತ್ರ ಹಾಗೆ ಅಚ್ಚಳಿಯದೇ ನನ್ನ ಮನಸ್ಸಲ್ಲಿ ಇದೆ.

--ಮಂಜು ಹಿಚ್ಕಡ್ 

ದೀಪಾವಳಿ!

ನಡು ರಾತ್ರಿಯ ತಂಗಾಳಿಯ
ನೀರವತೆಯಲ್ಲಿ, 
ನೀ ತುಸು ದೂರದಿಂದ
ಕೂಗಿ ಕರೆದರೂ ನಾ
ಕೇಳಿಸಿ ಕೊಳ್ಳಲಾಗುತ್ತಿಲ್ಲ ಗೆಳತಿ.

ಆಗಲೇ ನೀ ಮುಂದಿಟ್ಟ
ದೀಪಾವಳಿಯ ಬೇಡಿಕೆಗಳು
ಸದಾ ಕಿವಿಯಲ್ಲಿ
ಗುಂಯ್ ಗುಡುತ್ತಿರುವಾಗ
ನಾ ಹೇಗೆ ಕೇಳಿಸಿಕೊಳ್ಳಲಿ
ನಿನ್ನ ಕರೆಯ ಗೆಳತಿ.

ನಾ ಕೇಳಿಸಿ ಕೊಂಡಿಲ್ಲ
ಎನ್ನುವ ಬಿಗುಮಾನ ಬೇಡ
ಪ್ರೀತಿ ಕಡಿಮೆಯಾಯಿತು
ಎನ್ನುವ ದುಮ್ಮಾನ ಬೇಡ.

ತಿಂಗಳ ಕೊನೆಯಲ್ಲವೇ
ಕಷ್ಟವಿರಬಹುದು ಗೆಳತಿ,
ಆದರೆ ಪ್ರೀತಿ ಕುಂದಿಲ್ಲ
ಬಯಕೆಗಳು ಸತ್ತಿಲ್ಲ. 

ದುಡ್ಡಿಲ್ಲದಿರೇನಂತೆ
ಅಸಲು ಬಡ್ಡಿ ಸೇರಿ ತುಂಬಲು,
ಕಿಸೆಯಲ್ಲಿ ಸಾಲಾಗಿ ಕ್ರೆಡಿಟ್
ಕಾರ್ಡುಗಳುಂಟಲ್ಲ 
ದೀಪಾವಳಿಯ ಸಮಯವಲ್ಲವೇ
ಡಿಸ್ಕೌಂಟು, ಆಫರಗಳಿಗೆ
ಕೊರತೆಯೇನಿಲ್ಲ.
ಹೇಗಾದರೂ ಪ್ರಯತ್ನಿಸುವೆ
ಹೆದರದಿರು ಚಿನ್ನ..

ದಿವಾಲಿಯಲ್ಲಿ ದಿವಾಳಿಯಾಗದೇ
ಹಬ್ಬ ಆಚರಿಸದಿರಲು ಹೇಗೆ ಸಾದ್ಯ
ಅಲ್ಲವೇ ಗೆಳತಿ!

--ಮಂಜು ಹಿಚ್ಕಡ್ 

Saturday, October 26, 2013

ಟ್ರಾಪಿಕ್-ಟ್ರಾಪಿಕ್, ನಮ್ಮ ಬೆಂಗಳೂರ ಟ್ರಾಪಿಕ್!

ಹೆಚ್ಚುತ್ತಲೇ ಇದೆ ಇಂದು, ನಮ್ಮ ಬೆಂಗಳೂರ ಟ್ರಾಪಿಕ್ಕು
ಎಲ್ಲರ ಬಾಯಲ್ಲೂ, ಇದರದ್ದೇ ಟಾಪಿಕ್ಕು
ರಸ್ತೆಯಲಿ ನಿಂತಿರುವವು, ಅಡಿಗೊಂದು ಗಾಡಿ
ನಮಗೇನು? ಹೇಗೂ ಬ್ಯಾಂಕ್ ಸಾಲ ಕೊಡತ್ತಲ್ಲ ನೋಡಿ!

ಹೊಗೆ ಉಗುಳುತ, ಸಿಳ್ಳೆ ಹಾಕುತಾ, ರಭಸದಿಂದಲಿ ಸಾಗುತಾ
ಒಂದಕ್ಕೊಂದು ಉಜ್ಜಿ-ಜಜ್ಜಿ ಮುಖಕೆ ಮುಖವ ತಿವಿಯುತಾ
ಮಾರಿಗೊಂದು ಸಿಗ್ನಲ್ ಉಂಟು, ನಮ್ಮ ಬೆಂಗಳೂರ ರೋಡಲಿ
ಸಿಗ್ನಲ್ ಎಂದು ಬಿಡುವರೋ ಎನ್ನುವ ಚಿಂತೆ ನಮ್ಮ ಮನದಲಿ.

ಗಾಡಿ ಕೊಂಡರೆ ಎಲ್ಲಿ ಉಂಟು, ಗಾಡಿ ನಿಲ್ಲಿಸಲು ನೆಲೆ
ಒಂದಡೆ ಗಗನಕ್ಕೇರುತ್ತಿದೆ, ಇಂದನದ ಬೆಲೆ
ನಡಿಗೆಗೆ ಎಡೆಯಿಲ್ಲ, ಸೈಕಲ್ ತುಳಿಯುವ ಶಕ್ತಿ ನಮಗಿಲ್ಲ
ಮುಂದೇನಾಗುವುದೋ ಕಾಣೆ, ಆ ದೇವನೇ ಬಲ್ಲ.

--ಮಂಜು ಹಿಚ್ಕಡ್ 

ಮರೆತೆನೆಂದರೂ ಮರೆಯಲಾರದ ಬೆಲೇಕೇರಿಯ ನೆನಪುಗಳು!

ಬೆಲೇಕೇರಿ ಎಂದ ತಕ್ಷಣ ಇಂದು ಎಲ್ಲರಿಗೂ ನೆನಪಾಗುವುದು ಮ್ಯಾಂಗನೀಸ್ ಹಾಗೂ ಅದರ ಸುತ್ತ ಆವರಿಸಿರುವ ರಾಜಕೀಯ ಹಗರಣಗಳಿರಬಹುದು, ಆದರೆ ನನಗೆ ನೆನಪಾಗುವುದು ನನ್ನ ಬಾಲ್ಯದ ದಿನಗಳಲ್ಲಿ ನಾ ಅಲ್ಲಿ ಕಳೆದ ರಜಾ ದಿನಗಳು, ಅಲ್ಲಿನ ಜನರ ಪ್ರೀತಿ, ಮುಗ್ಧತೆ, ಆ ಊರಿನ ಸುಂದರ ಕಡಲ ತೀರ ಇತ್ಯಾದಿ. ಇತ್ಯಾದಿ.. ಆ ನೆನಪುಗಳೇ ಇಂದಿಗೂ ನನ್ನನ್ನು ಆ ಊರಿಗೆ ಕರೆದುಕೊಂಡು ಹೋಗುತ್ತದೆ ಅಂದರೂ ತಪ್ಪಾಗಲಾರದು. ನನಗೂ ಬೆಲೇಕೇರಿಗೂ ಹುಟ್ಟಿನಿಂದಲೂ ಏನೋ ಒಂದು ರೀತಿಯ ಆತ್ಮೀಯ ಸಂಭಂದ. ಬೆಲೇಕೇರಿ ನನ್ನ ತಾಯಿಯ ತವರು ಮನೆಯ ಊರು ಹಾಗು ನನ್ನಾಕೆಯ ತವರು ಮನೆಯ ಊರು ಕೂಡ. ನನ್ನ ತಾಯಿಯ ತವರು ಮನೆಯ ಊರಾದ್ದರಿಂದ ನಾನು ಆಗಾಗ ಬೆಲೇಕೇರಿಗೆ ಹೋಗಿಬರುತ್ತಿದ್ದೆ. ಚಿಕ್ಕವರಿದ್ದಾಗ ರಜೆ ಬಿದ್ದರೆ ಸಾಕು ನಾನು ಬೆಲೇಕೇರಿಗೆ ಹೊರಟುಬಿಡುತಿದ್ದೆ. ಅಲ್ಲಿ ನಮ್ಮ ಮಾವನ ಮಕ್ಕಳು, ಆಡಲು ಅಕ್ಕ ಪಕ್ಕದ ಮಕ್ಕಳು, ಜೊತೆಗೆ ಪ್ರೀತಿಯ ಚಿಕ್ಕಮ್ಮಂದರು ಹಾಗು ಅವರ ಆತ್ಮೀಯತೆ ನನ್ನನ್ನೂ ಅಲ್ಲಿಗೆ ಸೆಳೆಯುತ್ತಿದ್ದವೂ. 

ನಮ್ಮ ಮಾವನಿಗೆ ಮೂರು ಮಕ್ಕಳಲ್ಲಿ, ಮಗಳು ನನಗಿಂತ ೩ ವರ್ಷ ದೊಡ್ಡವಳು, ಮದ್ಯದವನು ನನ್ನ ಓರಗೆಯವನು, ಚಿಕ್ಕವನು ನನ್ನ ತಮ್ಮನ ಓರಗೆಯವನು, ನನಗಿಂತ ೩ ವರ್ಷ ಚಿಕ್ಕವನು. ನಮ್ಮ ಮಕ್ಕಳ ತಂಡಕ್ಕೆ ಆಗ ನಮ್ಮ ಮಾವನ ಮಗಳೇ ನಾಯಕಿ. ಆಗ ನಾವೇನಿದ್ದರೂ ಅವಳು ಹೇಳಿದ ಹಾಗೆ ಕೇಳುವ ಅನುಯಾಯಿಗಳು ಮಾತ್ರ. ನಮ್ಮ ತಾಯಿಯ ತವರು ಮನೆಯನ್ನು ದಾಟಿ ಆಗ ತೋಟವಿದ್ದ (ಈಗ ಆ ಜಾಗದಲ್ಲಿ ನನ್ನಾಕೆಯ ಚಿಕ್ಕಪ್ಪನ ಮನೆಯಿದೆ) ಸ್ಥಳವನ್ನು ದಾಟಿ ಹೋದರೆ, ಇನ್ನೊಂದು ಚಿಕ್ಕ ತೋಟ. ಆ ತೋಟದಲ್ಲಿ ಒಂದು ತೋತಾಪುರಿ ಮಾವಿನ ಮರ, ಮರದ ತುಂಬಾ ಕಾಯಿಗಳು ಎಂತಹ ಮಕ್ಕಳ ಬಾಯಲ್ಲೂ ನೀರೂರಿಸುವಂತಿತ್ತು. ಒಂದು ದಿನ ಮಧ್ಯಾಹ್ನ ಮನೆಯ ಹೊರಗೆ ಆಟ ಆಡುತಿದ್ದ ನಮಗೆ ನಮ್ಮ ಮಾವನ ಮಗಳು, ಆ ಮಾವಿನ ಮರದಿಂದ ಒಂದೆರೆಡು ಕಾಯಿಗಳನ್ನು ಕಿತ್ತು ತರುವಂತೆಯೂ, ನಾವು ಬರುವರೆಗೆ ಆಕೆ ಉಪ್ಪು ಕಾರ ಕೂಡಿಸಿಡುವುದಾಗಿಯೂ ಹೇಳಿ ನಮ್ಮನ್ನು ಕಳಿಸಿದಳು. ನನಗೆ ಆಗಿನ್ನೂ ಆರೇಳು ವರ್ಷ. ನಮಗೆ ಆಗ ಅದು ಯಾರ ಮರವಾದರೇನು? ನಮಗೆ ಬೇಕಿದ್ದುದು ಆಮರದ ಮಾವಿನ ಕಾಯಿ. ನಾವು ಹೋಗಿ ಆ ತೋಟದ ಒಳಗೆ ಪ್ರವೇಶಿಸಿ ಒಂದೆರೆಡು ಮಾವಿನ ಕಾಯಿ ಕಿತ್ತು ಕೊಂಡಿರಬಹುದು, ಅಷ್ಟರಲ್ಲಿ ಒಂದೆರಡು ಮಕ್ಕಳು ಓಡಿಬಂದು ನಮ್ಮನ್ನು ವಿರೋಧಿಸಿದರು. ಆ ವಯಸ್ಸಿನಲ್ಲಿ ಜಗಳವಾಡುವುದನ್ನು ಹೇಳಿಕೊಡಬೇಕೆ, ಅವರಲ್ಲಿ ಒಬ್ಬಳು ನನಗಿಂತ ಚಿಕ್ಕವಳು, ನನಗೆ ಕೋಪ ತಡೆಯಲಾಗಲಿಲ್ಲ ಅಲ್ಲಿಯೇ ಬಿದ್ದಿದ್ದ ಒಂದು ಒಡೆದ ಹಂಚಿನ ಚಿಕ್ಕ ತುಂಡನ್ನು ತೆಗೆದುಕೊಂಡು ಆಕೆಯ ತಲೆಯತ್ತ ಬೀಸಿದೆ. ಪುಣ್ಯಕ್ಕೆ ಅದು ಅವಳಿಗೆ ತಾಗಿದರೂ ಅಷ್ತೊಂದು ದೊಡ್ಡ ಗಾಯಗಳಾಗಿರಲಿಲ್ಲ. ಅವಳು ಅಳುತ್ತಾ ಅವಳ ಮನೆಯತ್ತಾ ಓಡಿದರೆ, ನಾವು ಕಿತ್ತುಕೊಂಡ ಮಾವಿನಕಾಯಿಗಳನ್ನು ನಮ್ಮ ಮನೆಗೆ ತಂಡು ತಿನ್ನ ತೊಡಗಿದವು. ಆಗ ನಮಗೆ ಮಾವಿನ ಕಾಯಿಯ ರುಚಿ ಹಿಡಿಸುತ್ತಿತ್ತೇ ಹೊರತು ಆಕೆಯ ನೋವಿಲ್ಲ. ಈಗಲೂ ಆ ಸಹೋದರಿಯನ್ನು ನೋಡಿದಾಗ ಆ ಮಾವಿನ ಕಾಯಿಯ ನೆನಪುಗಳು ಒಮ್ಮೆ ಮನಸ್ಸಲ್ಲಿ ಸುಳಿಯದೇ ಇರದು.

ನಾವು ತವರು ಮನೆಯಲ್ಲಿರುವಷ್ಟು ದಿನ, ಆ ಮನೆಯಲ್ಲಿರುವವರಿಗೆ ಒಂದಿಲ್ಲ ಒಂದು ಸಮಸ್ಯೆಯನ್ನು ತಂದೊಡ್ಡುತ್ತಿದ್ದುದು ಸರ್ವೆ ಸಾಮಾನ್ಯ. ನಮ್ಮ ಅಜ್ಜಿಮನೆಯ ಒಂದು ಪಕ್ಕದ ಮನೆಯವರ ತೋಟದಲ್ಲಿ ಒಂದು ದಾಳಿಂಬೆಯ ಗಿಡ, ನಮ್ಮ ಅಜ್ಜಿಮನೆಯವರ ತೋಟಕ್ಕೆ ಹೊಂದಿಕೊಂಡಂತೆ ಇತ್ತು. ಗಿಡ ಪಕ್ಕದ ತೋಟದಲ್ಲಿದ್ದರೂ, ಟಿಸಿಲುಗಳೆಲ್ಲವು ನಮ್ಮ ಅಜ್ಜಿ ಮನೆಯ ತೋಟದಲ್ಲೇ ಇತ್ತು. ಆ ಗಿಡ ಆಗ ತಾನೇ ಕಾಯಿ ಬಿಡಲು ಪ್ರಾರಂಭವಾಗಿ ಒಂದೆರಡು ತಿಂಗಳು ಕಳೆದಿರಬಹುದೇನೋ. ಅದರ ಕಾಯಿಗಳು ಹಣ್ಣಾಗದಿದ್ದರೂ ಕೆಂಪಗಾಗಿದ್ದು ನಮಗೆ ಹಣ್ಣಿನಂತೆಯೇ ಕಾಣುತ್ತಿದ್ದರಿಂದ, ನಮಗೆ ಹೇಗಾದರೂ ಮಾಡಿ ಅದನ್ನು ಕೀಳಲೇ ಬೇಕೆಂದು ಒಂದು ದಿನ ನಿರ್ಧಾರಮಾಡಿದ್ದೆವು. ಹಗಲಲ್ಲಿ ಅದು ಸಾದ್ಯವಿಲ್ಲವೆಂದು ರಾತ್ರಿಗಾಗಿ ಕಾಯುತ್ತಾ ಕುಳಿತೆವು. ಆರಾತ್ರಿ ಊಟ ಮಾಡಿದವರೇ ಹೋಗಿ ಒಂದಿಷ್ಟು ಕಾಯಿಗಳನ್ನು ಕಿತ್ತು ತಂದೆವು. ಮನೆಗೆ ತಂದು ತಿನ್ನಲೂ ನೋಡಿದಮೇಲೆಯೇ ತಿಳಿದಿದ್ದು ಅವು ಕಾಯಿಗಳೆಂದು. ತಿನ್ನಲೂ ಆಗದೇ, ಇಟ್ಟುಕೊಳ್ಳಲು ಆಗದೇ ಹಾಗೆ ಅವನ್ನು ಎಸೆದು ಬಿಟ್ಟೆವು. ಮಾರನೇ ದಿನ ಆ ಗಿಡ ನೋಡಿದ ಆಮನೆಯವರಿಗೆ ಅಲ್ಲಿ ಒಂದಿಷ್ಟು ಕಾಯಿಗಳಿಲ್ಲವೆನ್ನುವುದನ್ನು ತಿಳಿದು ನಮ್ಮ ಮನೆಯಲ್ಲಿ ತಿಳಿಸಿದರು. ನಮ್ಮ ಮನೆಯಲ್ಲಿ ನಮಗೊಂದಿಷ್ಟು ಏಟುಗಳನ್ನು ತಿಂದಿದ್ದು ಆಯಿತು. ಆಗ ಆ ಹೊಡೆತಗಳೆಷ್ಟು ದಿನ ನೆನಪಿರುತ್ತವೆ. ಮತ್ತೊಮ್ಮೆ ತಪ್ಪು ಮಾಡುವವರೆಗೆ ಅವೆಲ್ಲಾ ಮರೆತು ಹೋಗುತ್ತವೆ ಅಷ್ಟೇ. 

ಒಮ್ಮೆ ನಾನು ನಮ್ಮ ಅಜ್ಜಿ ಮನೆಗೆ ಹೋದಾಗ ನಮ್ಮ ಮಾವನ ಮಕ್ಕಳೆಲ್ಲ, ಅವರ ತಾಯಿಯ ತವರು ಮನೆಗೆ ಹೋಗಿದ್ದರು. ಅಮ್ಮನ ಜೊತೆ ಹೋದ ನಾನು ಅಲ್ಲಿ ಅವರು ಇಲ್ಲದ ಮೇಲೆ ನಾನು ಅಮ್ಮನ ಜೊತೆಗೆ ಮತ್ತೆ ಊರಿಗೆ ಹೊರಡುವುದಾಗಿ ತೀರ್ಮಾನಿಸಿದ್ದೆ. ಆದರೆ ನಮ್ಮ ಚಿಕ್ಕಮ್ಮಂದಿರು ನಮ್ಮ ಮಾವನ ಮಕ್ಕಳು ಕೆಲವು ದಿನಗಳಲ್ಲೇ ಬರುತ್ತಾರೆ ಎಂದು ನನಗೆ ಅಲ್ಲಿಯೇ ಇರುವಂತೆ ಹೇಳಿ ಇಟ್ಟುಕೊಂಡರು. ನನಗೆ ಬೇಸರವಾದರೂ ಒಂದೆರಡು ದಿನ ಅಂತಾ ಸುಮ್ಮನಿದ್ದೆ. ಮಾರನೆಯ ದಿನಾ ಹೀಗೆ ಮನೆಯ ಎದುರುಗಡೆಯ ಜಗುಲಿಯ ಹೊರಗಡೆ ಆಡುತ್ತಾ ಕುಳಿತಿದ್ದಾಗ ಒಬ್ಬ ಹುಡುಗ ಬಂದ. ನನಗೆ ಆತನ ನಿಜ ಹೆಸರು ಏನಂತ ತಿಳಿಯದಿದ್ದರೂ ಆತನನ್ನು ಎಲ್ಲರೂ ಮಾಣಿಕೋಸ (ಮಾಣಿಯ ಮಗ) ಎಂದೇ ಕರೆಯುತ್ತಿದುರಿಂದ ನಾನು ಅವನ ಹೆಸರು ಮಾಣಿಕೋಸ ಎಂತನೇ ತಿಳಿದಿದ್ದೆ ಆಗ. ಆಮೇಲೆ ದೊಡ್ಡವನಾದ ಮೇಲೆ ತಿಳಿದಿದ್ದು ಆತನ ಹೆಸರು ಮಹಾಬಲೇಶ್ವರನೆನ್ನುವುದು. ಆತ ಅಲ್ಲಿಗೆ ಬಂದಾಗ ನನಗೆ ಸಂತೋಷವಾಯಿತು. ನಾವಿಬ್ಬರು ಆಟ ಆಡುತ್ತಾ ಹಾಗೆ ಜೈನಬೀರ ದೇವಸ್ಥಾನದ ಹತ್ತಿರ ಹೋದೆವು. ಜೈನಬೀರ ದೇವಸ್ಥಾನದ ಹಿಂದೆ, ಪಾಂಡುರಂಗ ನಾಯಕರ ಮನೆಯ ಪಕ್ಕದ ಹೊಲದಲ್ಲಿ ಯಾರೋ ಕಲ್ಲಂಗಡಿ ಬೆಳೆ ಬೆಳೆಸಿದ್ದರು, ಕಾಯುಗಳಿನ್ನು ಬೆಳೆಯುತ್ತಿದ್ದವು, ಇನ್ನೂ ಹಣ್ಣಾಗಿರದಿದ್ದರೂ ದೊಡ್ಡದಾಗುತ್ತಾ ಬಂದಿದ್ದವು. ಆ ಕಾಯಿಗಳನ್ನು ನೋಡಿ ನಮಗೆ ಅವನ್ನು ತಿನ್ನುವ ಆಸೆ. ಆ ವಯಸ್ಸೇ ಹಾಗಲ್ಲವೇ ತಿನ್ನುವ ವಸ್ತುಗಳನ್ನು ನೋಡಿದಾಗ ಅವು ಯಾರದ್ದಾದರೇನು? ಸಿಕ್ಕರೆ ತಿಂದು ಬಿಡುವುದು ಅಷ್ಟೇ. ನಾವಿಬ್ಬರೂ ಆ ಹೊಲದತ್ತ ಹೋದೆವು ಯಾರು ಇರಲಿಲ್ಲ, ಸಮಯ ಮಧ್ಯಾಹ್ನವಾಗುತ್ತಾ ಬಂದಿತ್ತು. ಇಬ್ಬರು ಒಂದು ಕಾಯಿ ಕಿತ್ತು ಒಡೆದು ನೋಡಿದೆವು  ಹಣ್ಣಾಗಿರಲಿಲ್ಲ. ಅದು ಹಣ್ಣಾಗಿಲ್ಲವೆಂದು ಇನ್ನೊಂದನ್ನು ಕಿತ್ತೆವೂ ಅದು ಹಣ್ಣಾಗಿರಲಿಲ್ಲ. ಹೀಗೆ ಒಂದಾದ ಮೇಲೊಂದರಂತೆ ಐದಾರು ಕಾಯಿಗಳನ್ನು ಕಿತ್ತಿರಬಹುದು. ದೇವಸ್ಥಾನ ಪೂಜೆಗೆ ಬಂದ ಯಾರೋ ನಮ್ಮನ್ನು ನೋಡಿ "ಏಯ್" ಎಂದು ಕೂಗಿದರು. ಅವರಿಗೂ ನಾವ್ಯಾರು ಅಂತ ಬಹುಷಃ ತಿಳಿದಿರಲಿಕ್ಕಿಲ್ಲ ಹಾಗಾಗಿ ಮನೆಗೆ ತಿಳಿಸಿರಲಿಲ್ಲ. ನಮಗೆ ಒಂದಡೆ ನಿರಾಶೆ, ಇನ್ನೊಂದೆಡೆ ಅವರೆಲ್ಲಿ ಮನೆಗೆ ತಿಳಿಸುತ್ತಾರೋ ಎನ್ನುವ ಹೆದರಿಕೆ, ಅಲ್ಲಿಂದ ಓಡಿ, ಗದ್ದೆಯನ್ನು ದಾಟಿ, ಕಂಡಕ್ಟರ್ ಗಿರಿಯಣ್ಣನವರ ಮನೆಯ ಹಿಂಬಾಗದಿಂದ ಊರ ಒಳಗೆ ಸೇರಿ, ಹೇನಜ್ಜಿ ದೇವಸ್ಥಾನವನ್ನು ಬಳಸಿ ಮನೆ ಸೇರಿದ್ದೆವು. ದೇವಸ್ಥನಕ್ಕೆ ಬಂದವರಿಗೆ ನಾವ್ಯಾರು ಅಂತ ತಿಳಿಯದ ಕಾರಣದಿಂದಲೋ ಅಥವಾ ಹೋಗಲಿ ಮಕ್ಕಳು ಅಂತಲೋ ಮನೆಗೆ ತಿಳಿಸದೇ ಇದ್ದುದರಿಂದ ಮನೆಗೆ ಈ ವಿಷಯದ ಬಗ್ಗೆ ಅರಿವಿರದಿದ್ದರಿಂದ ಬೈಸಿಕೊಳ್ಳುವುದೇನೋ ತಪ್ಪಿತು. ಆದರೆ ಕಾಡುವ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾದ್ಯವೇ?

ಇಂದಿಗೂ ನಾನು ಮಾವಿನಕಾಯಿಯನ್ನಾಗಲಿ, ದಾಳಿಂಬೆ, ಕಲ್ಲಂಗಡಿಯ ಹಣ್ಣುಗಳನ್ನಾಗಲಿ ನೋಡಿದರೆ ಮೊದಲು ನೆನಪಾಗುವುದು ಬೆಲೇಕೇರಿಯಲ್ಲಿ ನಡೆದ ಈ ಘಟನೇಗಳೇ. 

--ಮಂಜು ಹಿಚ್ಕಡ್ 

Thursday, October 24, 2013

ಇಚ್ಛೆ!

ಬರಹ ನಿನ್ನಿಚ್ಛೆ
ಬದುಕು ನಿನ್ನಿಚ್ಛೆ
ಇರಬಹುದು, ಹಾಗೆ
ಅಡುಗೆ ನನ್ನಿಚ್ಛೆ,
ರುಚಿಯು ನನ್ನಿಚ್ಛೆ
ಎಂದರೆ ಸಿಡುಕುವುದೇಕೆ?
ಎಲ್ಲಾ ನಿನ್ನಿಚ್ಚೆಗಳಾದರೆ,
ನಿನಗೆ ನಾನೇಕೆ?
ಬೇಕಿತ್ತು ಗೆಳೆಯ!

--ಮಂಜು ಹಿಚ್ಕಡ್

Wednesday, October 23, 2013

ಏರುತಿರುವ ಈರುಳ್ಳಿಯ ಬೆಲೆಯ ಕಂಡು!

ಸ್ಪರ್ಷಿಸುವ ಮೊದಲೇ
ನೂರಾರು ಭಾವಗಳು ಮೇಳೈಸುತಿವೆ
ಈ ಪುಟ್ಟ ಹೃದಯದಲಿ
ನೋಡಿದಾಕ್ಷಣವೇ ತೊಟ್ಟಿಕ್ಕುತ್ತಲಿದೆ
ಹನಿಯಾಗಿ ಕಣ್ಣಿರು
ನಯನಗಳ ಅಂಚಿನಲಿ
ಯೋಚಿಸಿ ಮರುಗದಿರು ಚಲುವೆ
ಇದು ನಿನ್ನ ನೋಡಿಯಲ್ಲ,
ಗಗನಕ್ಕೇರುತಿರುವ ಈರುಳ್ಳಿಯ
ಬೆಲೆಯ ನೋಡಿ.

--ಮಂಜು ಹಿಚ್ಕಡ್ 

Tuesday, October 22, 2013

ಹೂ-ನಗೆ!

ಸಂಜೆಯಾವರಿಸಿ 
ಭಾನು ಕೆಂಪೇರಿ
ಸೂರ್ಯನ ಹೊಂಗಿರಣಗಳು
ದಿಗಂತದಲಿ ಮರೆಯಾಗಿ
ಕತ್ತಲಾವರಿಸತೊಡಗಿದಾಗ
ನಿನ್ನ ಮುಖದಿ ಮೂಡಿದ
ಆ ಹೂ ನಗೆಯು
ಚಂದ್ರನುದಯಿಸಿರಬಹುದೆಂಬ
ಕಲ್ಪನೆಯನೊಮ್ಮೆ ಮನದಿ
ಮೂಡಿಸದೇ ಇರದು ಗೆಳತಿ!

--ಮಂಜು ಹಿಚ್ಕಡ್ 

Monday, October 21, 2013

ಕವಿಗೂ ಕಪಿಗೂ ವ್ಯತ್ಯಾಸವುಂಟೆ!

ಕವಿಗೂ ಕಪಿಗೂ ಇರುವ ವ್ಯತ್ಯಾಸ ಬಾಲ ಮಾತ್ರ
ಕಪಿ ಮರದಿಂದ  ಮರಕೆ ಹಾರಿದರೆ
ಕವಿ  ವಿಷಯದಿಂದ ವಿಷಯಕ್ಕೆ ಹಾರುತಿರುತ್ತಾನೆ
ವೈವಿಧ್ಯತೆಗಳಿರಲೆಂದು
ಕವಿತೆಗಳು ರುಚಿಸಲಿ ಎಂದು ಅಷ್ಟೇ.

--ಮಂಜು ಹಿಚ್ಕಡ್ 

Sunday, October 20, 2013

ಹುಡುಕಾಟ!

ತನ್ನ ಬಾಲದ ಬುಡದಲ್ಲಿ ಬೆಳಕಿದ್ದರೂ
ಬೆಳಕ ಹುಡುಕಿ ಸಾಗುವ ಮಿಂಚುಹುಳದಂತೆ
ನನ್ನಲಿ ಪ್ರೀತಿ ತುಂಬಿದರೂ
ಮತ್ತೆ ಪ್ರೀತಿ ಹುಡುಕುತಾ ಸಾಗಿದೆ
ಈ ಗುರಿಯಿಲ್ಲದ ಬದುಕು!

--ಮಂಜು ಹಿಚ್ಕಡ್ 

Saturday, October 19, 2013

O Jaane - Preetiya Puta ( The Page of LOVE)

ಧನ್ಯವಾದಗಳು!

ಹೀಗೆ ಸುಮ್ಮನೆ, ಮನೆಯಲ್ಲಿ ಕುಳಿತು ಬಿಡುವಿನ ವೇಳೆಯಲ್ಲಿ ಬರೆದು ಪ್ರಕಟಿಸಿದ ನನ್ನ ಬ್ಲಾಗ್ ಹೀಗೆ ಸುಮ್ಮನೆ!ಗೆ ಇಂದು ಇದ್ದಕ್ಕಿದ್ದ್ದಹಾಗೆ ೧೭೫ ಜನ ಪುಟ ವೀಕ್ಷಿಸಿದ್ದು ಒಂದು ಆಶ್ಚರ್ಯವೇ ಸರಿ. ಇದು ನನ್ನ ಬ್ಲಾಗಿನಲ್ಲಿ ಒಂದೇ ದಿನಕ್ಕೆ ಇಷ್ಟೊಂದು ಜನ ವೀಕ್ಷಿಸಿದ್ದು ದಾಖಲೆಯೂ ಕೂಡ. ದಿನಕ್ಕೆ ಸರಾಸರಿ ೪೦ ರಿಂದ ೫೦ ಜನ ಪುಟ ವೀಕ್ಷಿಸುತ್ತಿದ್ದುದು ನಿನ್ನೆಯಿಂದ ಒಮ್ಮೇಲೆ ೧೫೦ ರಿಂದ ೧೭೫ಕ್ಕೆ ಏರಿದೆ. ಇನ್ನೊಂದು ಸಂತೋಷದ ವಿಷಯವೆಂದರೆ ನನ್ನ ಬ್ಲಾಗ ಹೀಗೆ ಸುಮ್ಮನೆ! ಈ ತಿಂಗಳ ೨೧ ಕ್ಕೆ ೭೫ ದಿನಗಳನ್ನೂ ಪೂರೈಸಲಿದ್ದು, ಆಗಲೇ ೨೭೮೫ ಪುಟ ವೀಕ್ಷಣೆಯಾಗಿದ್ದು ೩೦೦೦ ಸಾವಿರದತ್ತ ಮುನ್ನಡೆಯುತ್ತಿದೆ. ಬಹುಷಃ ಇದೇ ರೀತಿ ಮುಂದುವರೆದಲ್ಲಿ ೨೧ನೇ ತಾರೀಖಿನ ಹೊತ್ತಿಗೆ ೩೦೦೦ ಸಾವಿರಕ್ಕೂ ಮಿಕ್ಕಿ ಪುಟ ವೀಕ್ಷಣೆಯಾದಲ್ಲಿ ಆಶ್ಚರ್ಯವಿಲ್ಲ.

ನಾನಿಲ್ಲಿ ಪ್ರಕಟಿಸಿದ ಅದೆಷ್ಟೋ ಕವಿತೆಗಳು, ಲೇಖನಗಳು ಅದೆಷ್ಟೋ ಪತ್ರಿಕೆಗಳ ನಿಯತಕಾಲಿಕಗಳ ಕದ ತಟ್ಟಿ, ಒಳ ಪ್ರವೇಸಿಸಲೂ ಆಗದೇ, ಹೊರಬರಲು ಆಗದೇ ಕಸದ ಬುಟ್ಟಿ ಸೇರಿದ ದಿನಗಳಲ್ಲಿ, ಉತ್ತರ ಬರಬಹುದೇನೋ ಎಂದು ಕಾತರಿಸಿ ಬೇಸತ್ತಾಗ, ನನ್ನ ಕವನಗಳನ್ನು, ಲೇಖನಗಳನ್ನೂ ತಮ್ಮ ಬ್ಲಾಗನಲ್ಲಿ ಪ್ರಕಟಿಸಲು ಅವಕಾಸವಿತ್ತು, ನನ್ನ ಒಳ್ಳೆಯ ಲೇಖನಗಳನ್ನು ತಮ್ಮ ಮುಖ ಪುಟದಲ್ಲಿ ವಾರಗಟ್ಟಲೇ ಪ್ರಕಟಿಸಿದ ಸಂಪದ ಬಳಗಕ್ಕೂ, ಸಂಪದ ಓದುಗರಿಗೂ, ನನ್ನ ಬ್ಲಾಗ್ ವೀಕ್ಷಿಸಿ ನನ್ನ ಕವಿತೆಗಳಲ್ಲಿನ ಓರೆ ಖೋರೆಗಳನ್ನು ತಿದ್ದಲು ಸಹಕರಿಸಿದ ಬದ್ರಿನಾಥ ಪಲ್ಲವಿಯವರಿಗೆ, ನಾನು ಶೀರ್ಷಿಕೆಗೆ ಹೆಸರು ಸೂಚಿಸುವುದರಲ್ಲಿ ಸ್ವಲ್ಪ ಜಾರಿದಾಗ, ಅದಕ್ಕೆ ಸರಿಯಾಗಿ ಹೆಸರು ಸೂಚಿಸಿದ ಗೆಳೆಯ ಕೃಷ್ಣಮೂರ್ತಿ ನಾಯಕರಿಗೆ, ನಾನು ಬರೆಯುವುದನ್ನು ಸಂಪೂರ್ಣ ಬಿಟ್ಟು ಬಿಟ್ಟದ್ದ ಸಮಯದಲ್ಲಿ ಮತ್ತೆ ಬರೆಯಲು ಪ್ರೋತ್ಸಾಹಿಸಿ ಮುನ್ನೆಡಿಸಿದ ನನ್ನ ಗುರುಗಳು, ಸಾಹಿತಿಗಳು ಆದ ಶಾಂತಾರಾಮ್ ನಾಯಕರಿಗೆ. ನಾನು ಗೀಚಿ ಎಸೆದಿದ್ದನ್ನೆಲ್ಲ ಒಂದೆಡೆ ಕೂಡಿಸಿ ಕ್ರೋಡಿಕರಿಸಿಡುವ ನನ್ನ ಮನದನ್ನೆ ನಾಗರತ್ನಳಿಗೆ, ನನ್ನ ಬದುಕಿನ ಪಯಣದಲ್ಲಿ ನಾನು ಆಗಾಗ ದಾರಿ ತಪ್ಪಿ ನಡೆದಾಗ, ಮತ್ತೆ ಮತ್ತೆ ಕೈ ಹಿಡಿದು ಸರಿ ದಾರಿಗೆ ಕರೆದು ತಂದ ನನ್ನ ತಂದೆ ತಾಯಿಯರಿಗೆ, ನನ್ನ ಹುಚ್ಚು ವಿಚಾರಗಳನ್ನು ಕವಿತೆಗಳ ರೂಪದಲ್ಲಿ, ಲೇಖನಗಳ ರೂಪದಲ್ಲಿ ಬರೆದಾಗ ಅವೆಲ್ಲವನ್ನೂ ಓದಿ ಪ್ರೋತ್ಸಾಹಿಸಿದ ತಮ್ಮಲ್ಲರಿಗೂ ನನ್ನ ಹೃದಯ ಪೂರ್ವಕ ಕೃತಜ್ನತೆಗಳು. ನಿಮ್ಮ ಪ್ರೋತ್ಸಾಹ, ಸಲಹೆ, ಸಹಕಾರ ಹೀಗೆ ಎಂದೆಂದಿಗೂ ಹೀಗೆ ಮುಂದುವರಿಯುತ್ತಿರಲಿ.

ಇಂತಿ ನಿಮ್ಮವ 

ಮಂಜು ಹಿಚ್ಕಡ್ 

ಗಿಡವಾಗಿದ್ದಾಗ ಬಗ್ಗಿಸಲಾಗದ್ದನ್ನು, ಮರವಾದಾಗ ಬಗ್ಗಿಸಲು ಸಾದ್ಯವೇ?

ಮೊನ್ನೆ ಗುರುವಾರ ಮಧ್ಯಾಹ್ನ ಕಛೇರಿಯಲ್ಲಿ ಊಟ ಮುಗಿಸಿ ನನ್ನ ಜೊತೆ ಕೆಲಸ ಮಾಡುವ ಮೂವರು ಸಹೋದ್ಯೋಗಿಗಳೊಂದಿಗೆ, ಕಛೇರಿಯ ಬಲಬಾಗದೆಡೆ ಸುತ್ತಾಡಲು ಹೊರೆಟೆವು. ಕಛೇರಿಯಲ್ಲಿ ಊಟ ಮಾಡಿದ ಮೇಲೆ ಸಮಯವಿದ್ದಲ್ಲಿ ಒಂದು ಸುತ್ತು ಸುತ್ತಾಡಿ ಬರುತ್ತಿದ್ದೆವು. ತಿಂದ ಅನ್ನ ಜೀರ್ಣವಾಗಿ, ನಿದ್ದೆ ಸ್ವಲ್ಪ ದೂರವಾಗಲಿ ಎಂದು. ನಮ್ಮ ಕಛೇರಿಯ ಬಲಬಾಗಲ್ಲಿ ವಾಸವಾಗಿರುವರೆಲ್ಲ ದೊಡ್ಡ ಶ್ರೀಮಂತರೇ. ಹಾಗಾಗಿ ಅಲ್ಲೆಲ್ಲಾ ದೊಡ್ಡ ದೊಡ್ಡ ಮನೆಗಳು, ಮನೆಗಳ ಮುಂದೆ ಚಿಕ್ಕ ಚಿಕ್ಕ ಹೂದೋಟಗಳು. ಮನೆಯ ಜನರನ್ನು ನೋಡಲಾಗದಿದ್ದರು ಅವರು ಸಾಕಿ ಬೆಳೆಸಿರುವ ವಿವಿಧ ತಳಿಗಳ ಡೊಗಿಗಳನ್ನು, (ಕ್ಷಮಿಸಿ, ನಾಯಿಗಳು ಅಂದರೆ ತಪ್ಪಾಗುತ್ತದೆ ಎಂದು ಮುದ್ದಾಗಿ ಡೊಗಿಗಳು ಎಂದು ಕರೆದಿದ್ದೇನೆ. ಎಷ್ಟೇ ಅಂದರೂ ಅವು ಸಿರಿವಂತರ ಮನೆಯ ನಾಯಿಗಳಲ್ಲವೇ?) ಆಗಾಗ ಅಲ್ಲೊಮ್ಮೆ, ಇಲ್ಲೊಮ್ಮೆ ಓಡಾಡುವ, ಬಿ.ಎಮ್.ಡಬ್ಲ್ಯೂ, ಬೆಂಜ್, ಆಡಿಯಂತಹ ಐಶಾರಾಮಿ ಕಾರುಗಳು, ಮನೆಯ ಮುಂದೆ ಮನೆಯವರ ಹೆಸರು, ಹುದ್ದೆ, ಅವರ ಓದು ಮುಂತಾದವುಗಳನ್ನು ತಿಳಿಸಿ ಅಮೃತ ಶಿಲೆಯಲ್ಲಿ ಕೆತ್ತಿ ಬರೆದಿರುವ ಚಿಕ್ಕ ಫಲಕ, ಆಗಾಗ ಓಡಾಡುವ ವಾಹನಗಳ ಶಬ್ದವನ್ನು ಬಿಟ್ಟರೆ ಉಳಿದೆಲ್ಲ ಹೊತ್ತು ಬೇರೆ ಯಾವ ಶಬ್ದಗಳು ಕೇಳಲಾರದಷ್ಟು ಮೌನ. ಮರಗಿಡಗಳಿಂದ ಕೂಡಿದುದರಿಂದ ಬಿಸಿಲು ಕಾಣದ ರಸ್ತೆ, ವಾಹನ ಓಡಾಟ ಕಡಿಮೆ ಇದ್ದುದರಿಂದ, ಅಲ್ಲಲ್ಲಿ ನಿಂತ ವಾಹನಗಳಲ್ಲಿ ಆಗಾಗ ಕಾಣ ಸಿಗುವ ನವ ಪ್ರೇಮಿಗಳ ಸರಸ-ಸಲ್ಲಾಪಗಳು (ಮುದ್ದಣ್ಣ-ಮನೋರಮೆಯರ ಸರಸ-ಸಲ್ಲಾಪಗಳನ್ನೂ ಮೀರಿಸಿದ್ದು, ವ್ಯತ್ಯಾಸವೆಂದರೆ ಒಮ್ಮೊಮ್ಮೆ ಮುದ್ದಣ್ಣನು, ಒಮ್ಮೊಮ್ಮೆ ಮನೋರಮೆಯೂ ಬದಲಾಗುತ್ತಿರುವುದರಿಂದ, ಮುದ್ದಣ್ಣ ಮನೋರಮೆಗೆ ಹೋಲಿಸಲಾಗದು), ಹೀಗೆ ವರ್ಣಿಸುತ್ತಾ ಹೋದರೆ ಇದು ಇಷ್ಟಕ್ಕೆ ಮುಗಿಯುವಿದಿಲ್ಲ. ಅಲ್ಲಿ ಒಂದು ಸುತ್ತು ಸುತ್ತಿ ಬಂದರೆ ಸಾಕು, ಕಣ್ಣು ತಂಪಾಗಿ, ಮನಸು ಹಿತವಾಗಿ, ದೇಹ ಉಲ್ಲಾಸಗೊಂಡಿರುತ್ತದೆ.

ಕಳೆದ ಆರು ವರ್ಷಗಳಲ್ಲಿ ಅದೆಷ್ತು ಬಾರಿ ಹೀಗೆ ಸುತ್ತಾಡಿದ್ದೆವೋ ಗೊತ್ತಿಲ್ಲ. ಪ್ರತಿ ಸಾರಿ ಸುತ್ತುವಾಗಲೂ ಒಂದೊಂದು ಹೊಸ ಅನುಭವ. ಮೊನ್ನೆ ಗುರುವಾರ ನಡೆದ ಘಟನೆ ಮತ್ತು ಅನುಭವಗಳೆ ಈ ಲೇಖನದ ಹುಟ್ಟಿಗೆ ಒಂದು ಕಾರಣ. ನಾವು ಸುತ್ತಾಡುವ ರಸ್ತೆಯ ಪಕ್ಕದಲ್ಲಿ ಒಂದು ಮನೆ. ಇದುವರೆಗೂ ಆ ಮನೆಯಲ್ಲಿ ಯಾರನ್ನೂ ನೋಡಿರಲಿಲ್ಲ. ಆದರೆ ಮೊನ್ನೆ ಗುರುವಾರ ಆ ಮನೆಯಲ್ಲೂ ಜನರಿದ್ದಾರೆ ಎಂದು ನೋಡುವ ಭಾಗ್ಯ ಆಕಸ್ಮಿಕವಾಗಿ ಸಿಕ್ಕಿ ಬಿಟ್ಟಿತು. ಅದು ಮನೆಯ ಆವರಣದಲ್ಲಿ ನಿಂತು, ರಸ್ತೆಯಲ್ಲಿ ಪಟಾಕ್ಷಿ ಹೊತ್ತಿಸಿ ಎಸೆದು, ಅದು ಸ್ಪೋಟಗೊಳ್ಳುವವರೆಗೂ ಅದರ ಶಬ್ಧ ತನಗೆಲ್ಲಿ ಕೇಳಿ ಬಿಡತ್ತದೋ ಎಂದು ಕಿವಿ ಮುಚ್ಚಿನಿಂತಿರುವ ಬಾಲಕನ ರೂಪದಲ್ಲಿ. ಆತನಿಗೆ ಬಹುಷಃ ಹತ್ತು ಹದಿನೈದರ ಪ್ರಾಯವಿರಬಹುದು. 

ಅಂದು ನಾವು ನಮ್ಮ ಕಷ್ಟ ಸುಖಗಳನ್ನು ಮಾತನ್ನಾಡಿಕೊಳ್ಳುತ್ತಾ ಸಾಗುತ್ತಿರುವಾಗ, ಆ ಹುಡುಗ ಮರೆಯಲ್ಲಿ ನಿಂತಿರುವುದನ್ನು ಗಮನಿಸಿದರು, ಆತ ಏನು ಮಾಡುತ್ತಿರಬಹುದೆಂದು ಗಮನಕ್ಕೆ ಬರಲಿಲ್ಲ. ಆತ ಆಗಲೇ ಪಟಾಕ್ಷಿ ಉರಿಸಿ ರಸ್ತೆಗೆ ಎಸೆದಿದ್ದರೂ ಆತನ ಕಡೆ ಗಮನವಿದ್ದುದರಿಂದ ನಮ್ಮ ಕಾಲಬಳಿಯೇ ಇದ್ದ ಪಟಾಕ್ಷಿಯ ಕಡೆ ಗಮನವಿರಲಿಲ್ಲ. ಆತನು ಕೂಡ ನಮ್ಮನ್ನು ನೋಡುತ್ತಿದ್ದರೂ ನಮ್ಮನ್ನು ಎಚ್ಛರಿಸಲಿಲ್ಲ. ಒಮ್ಮೆ ಢಂ! ಎನ್ನುವ ಶಬ್ದ ಪಟಾಕ್ಷಿಯಿಂದ ಕೇಳಿ ಬಂದರೆ, ಹೋ! ಅನ್ನುವ ಉದ್ಗಾರ ಆ ಹುಡುಗನ ಬಾಯಿಂದ ಕೇಳಿ ಬಂತು. ಅದನ್ನು ನಿರೀಕ್ಷಿಸದ ನಮಗೆ ಆತಂಕ, ಉಧ್ವೇಗ, ಕೋಪ, ಭಯ ಎಲ್ಲವೂ ಒಟ್ಟಿಗೆ ಹರಿದು ಬಂದವು. ಅನಿರೀಕ್ಷಿತವಾಗಿ ಇಂತಹ ಘಟನೆಗಳು ಸಂಭವಿಸಿದ್ದರಲ್ಲಿ ಯಾರಿಗಾದರೂ ಹೀಗಾಗುವುದು ಸಹಜವೇ. ಪುಣ್ಯಕ್ಕೆ ನಮ್ಮಲ್ಲಿ ಯಾರಿಗೂ ಹೃದಯ ಸಂಭಂದಿ ಕಾಯಿಲೆಗಳಿರಲಿಲ್ಲ. ಹಾಗೇನಾದರೂ ಇದ್ದರೆ ಬಹುಷಃ ಒಂದು ವಿಕೇಟ್ ಅಲ್ಲಿಯೇ ಹಿಟ್ ವಿಕೇಟ್ ಆಗಿ ಭೂಲೋಕ ಬಿಟ್ಟು ಹೋಗುತಿತ್ತೇನೋ. ಆದರೆ ಹಾಗಾಲಿಲ್ಲ ಅದೇ ನಮ್ಮ ಪುಣ್ಯ. ನಮ್ಮ ಸಹೋದ್ಯೋಗಿಯೊಬ್ಬರಿಗೆ ಆಗಲೇ ಕೋಪವುಕ್ಕಿ ಬಂದು, ಆ ಹುಡುಗನಿಗೆ,

"ಯಾಕೆ ರಸ್ತೆಯಲ್ಲಿ ಜನ ಬರುವುದು ನಿನ್ನ ಕಣ್ಣಿಗೆ ಕಾಣುವುದಿಲ್ಲವೇ?" ಎಂದು ಬೆಂಗಳೂರಿನ ಇಂದಿನ ಆಡು ಭಾಷೆಯಾದ ಇಂಗ್ಲೀಷಿನಲ್ಲಿಯೇ ಕೇಳಿ ಬಿಟ್ಟರು.

ಆ ಹುಡುಗನೇನು ಕಡಿಮೆ ಇರಲಿಲ್ಲ. ನರ್ಸರಿಗಿಂತ ಮೊದಲೇ, ಬೇರೆ ಏನನ್ನು ಕಲಿಯದಿದ್ದರೂ ಇಂಗ್ಲೀಷನ್ನು ಕಲಿಯುವ ಇತರ ಬೆಂಗಳೂರು ಹುಡುಗರಂತೆ ಆತನು ಇಂಗ್ಲೀಷನ್ನು ಕಲಿತಿದ್ದವ ಆತ. "ಯಾಕೆ ನೀವು ಈ ರಸ್ತೆಯಲ್ಲಿ ನಡೆದು ಬರುವಾಗ ಯಾಕೆ ಸುಮ್ಮನೆ ನಡೆದು ಬರುತ್ತಿರಾ? ಆ ಕಡೆ, ಈ ಕಡೆ ನೋಡಿಕೊಂಡು ಬರಲಾಗುವುದಿಲ್ಲವೇ? ನಾನು ನೀವು ಬರುವುದಕ್ಕಿಂತ ಮೊದಲೇ ಇಲ್ಲಿ ನಿಂತು ಪಟಾಕ್ಷಿ ಸಿಡಿಸುತ್ತಿದ್ದೇನೆ. ನೀವು ನಂತರ ಬಂದವರು ನೋಡಿ ಬರಬೇಕು" ಎಂದ, ಅದು ಅಮೇರಿಕಾದ ಶೈಲಿಯಲ್ಲಿ. ಎಂತಹ ನಯ ವಿನಯ ಎನಿಸಿತು ನನಗೆ. 

ನಮ್ಮ ಸಹೋದ್ಯೋಗಿಗಳೆನು ಕಡಿಮೆಯೆ, ಅದೂ ಆ ಹುಡುಗನ ಮುಂದೆ, "ಏನೋ ಇದು, ರಸ್ತೆಯಲ್ಲಿ ಜನರು ಗಾಡಿಗಳು ಓಡಾಡುತ್ತಿರುತ್ತವೆ, ನೋಡಿ ಎಸೆಯುವುದನ್ನು ಬಿಟ್ಟು ಹೀಗೆಲ್ಲಾ ಮಾತನ್ನಾಡುತ್ತೀಯಾ? ಎರಡು ಕೊಡಲೇನು?" ಎಂದು ಗದರಿಸಿ ಮುಂದೆ ಹೋದರು. 

ಆತ ತಕ್ಷಣ ಮನಸ್ಸಿನಲ್ಲಿಯೇ ಬಯ್ದು ಕೊಳ್ಳುತ್ತಾ ಮನೆಯ ಒಳಗೋಡಿದ. ಮನೆಯಿಂದ ಯಾವುದೇ ಶಬ್ಧಗಳು ಕೇಳಿಬರಲಿಲ್ಲ. ಬಹುಷಃ ಮನೆಯಲ್ಲಿ ಬೆಂಗಳೂರಿನ ಇತರ ಬಹುತೇಕ ಮಕ್ಕಳಂತೆ ಈತನು ಒಂಟಿ ಎನಿಸಿ ಮರುಕ ಹುಟ್ಟಿತು. ನನಗೆ ಆತನ ವರ್ತನೆ ನೋಡು ಆಶ್ಚರ್ಯವೆನಿಸಲಿಲ್ಲ. ಅದು ಆತನ ತಪ್ಪು ಅಲ್ಲ. ಆತನನ್ನು ಹುಟ್ಟಿಸಿ ಬೆಳೆಸಿದವರು ತಪ್ಪು ಅನ್ನಿಸಿತು. ಆತನ ತಂದೆ ತಾಯಿಯರು, ಬೆಂಗಳೂರಿನ ಇತರ ತಂದೆ ತಾಯಿಯರಂತೆ ಹಣ ಪ್ರತಿಷ್ಟೆಯ ಬೆನ್ನು ಹತ್ತಿ ಹೋದುದರ ಪರಿಣಾಮವೇ ಆ ಮಗುವಿನ ವರ್ತನೆ. ಇಂದು ನಮಗೆ ಹಣ ಪ್ರತಿಷ್ಟೆಗಳೇ ಮುಖ್ಯವಾಗಿ ಬಿಟ್ಟಿವೆ. ಅವುಗಳ ಮುಂದೆ ನಾವು ಬೇರೆ ಏನನ್ನು ನೋಡಲಾರದಷ್ಟು ಸಂಕುಚಿತಗೊಂಡಿದ್ದೇವೆ. ಹಣ ಪ್ರತಿಷ್ತೆಗಾಗಿ ನಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದೇವೆ. ನಾವು ಗಳಿಸುವ ಹಣ ಯಾರಿಗಾಗಿ? ಏತಕ್ಕಾಗಿ? ಅದು ನಮಗಾಗಿ, ನಮ್ಮ ಪ್ರತಿಷ್ಟೆಗಾಗಿ ಎಂದರೂ ಅದು ನಮ್ಮ ಮಕ್ಕಳಿಗಾಗಿಯೇ ಅಲ್ಲವೇ? ಹಾಗಿದ್ದರೆ ಮಕ್ಕಳಿಗೆ ಹಣ, ಹಣಕ್ಕಾಗಿಯೇ ಶಿಕ್ಷಣಕೊಡುವ ಶೈಕ್ಷಣಿಕ ಸಂಸ್ತೆಗಳಲ್ಲಿ ಒಂದಿಷ್ಟು ಶಿಕ್ಷಣ ಕೊಡಿಸಿದರೆ ಸಾಕೇ? ಅವರಿಗೆ ಮುಂದಿನ ಬದುಕು ಸಾಗಿಸುವ, ತಮ್ಮ ಬದುಕನ್ನೇ ತಾವೇ ಕಟ್ಟಿ ಕೊಳ್ಳುವ ವಿದ್ಯೆಯನ್ನು ಹೇಳಿ ಕೊಡುವುದು ಬೇಡವೆ? ಅವೆಲ್ಲವನ್ನು ಒಂದಿಷ್ಟು ಹಣ ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಹೇಗೆ ಪಾಸು ಮಾಡುವುದು? ಹೇಗೆ ನೌಕರಿಗಿಟ್ಟಿಸಿ ಕೊಳ್ಳುವುದು ಎನ್ನುವುದನ್ನು ಹೇಳಿ ಕೊಡುತ್ತವಯೇ ಹೊರತು, ಬದುಕು ಸಾಗಿಸುವ ದಾರಿಯನ್ನಲ್ಲ. ಅವನ್ನು ನಾವೇ ನಮ್ಮ ಮಕ್ಕಳಿಗೆ ಹೇಳಿ ಕೊಡಬೇಕೇ ಹೊರತು ಬೇರೆಯವರಲ್ಲ. ನಮಗೆ ಅನಿಸಬಹುದು ಈಗೇನು ಬಿಡಿ ಹಣ ಕೊಟ್ಟರೆ ಮಾರು ಕಟ್ಟೆಯಲ್ಲಿ ವ್ಯಕ್ತಿ ವಿಕಸನದ ಪುಸ್ತಕಗಳು ಸಿಗುತ್ತಾವಲ್ಲ ಎಂದು. ಅದಕ್ಕಾಗಿಯೇ ಅಲ್ಲವೇ ಇಂದು ಒಳ್ಳೆಯ ಸಾಹಿತ್ಯದ ಕೃತಿಗಳಿಗಿಂತ ವ್ಯಕ್ತಿ ವಿಕಸನದ ಪುಸ್ತಕಗಳೇ ಜಗತ್ತಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವುದು. ಇಂದು ನಾವು ಹೇಳಿ ಕೊಡದಿದ್ದುದನ್ನು ಮುಂದೆ ಅವರೆಷ್ಟು ಓದಿ ತಿಳಿದು ಕೊಂಡರೇನು ಪ್ರಯೋಜನ? ಚಿಕ್ಕವರಾಗಿದ್ದಾಗ ಏನನ್ನು ತಿಳಿಹೇಳದ ನಾವು , ಮಕ್ಕಳು ದೊಡ್ಡವರಾಗಿ ದಾರಿ ತಪ್ಪಿದ ಮೇಲೆ ಬುದ್ದಿ ಹೇಳಿದರೆ ಏನು ಪ್ರಯೋಜನ? ನಿಮ್ಮ ಮಕ್ಕಳ ವಿಕಸನಕ್ಕಾಗಿ, ಅವರ ಅಬಿವ್ರದ್ದಿಗಾಗಿ ಕನಿಷ್ಟ ಪಕ್ಷ ದಿನದ ಅರ್ಧ ಗಂಟೆಯಾದರೂ ಮೀಸಲಾಗಿಡಿ. ನೆನಪಿಡಿ ಇಂದು ಗಿಡವಾಗಿ ಬಗ್ಗಿಸಲಾಗದ್ದನ್ನು ಮುಂದೆ ಮರವಾಗಿ ಬೆಳೆದ ಮೇಲೆ ಬಗ್ಗಿಸಲಾಗುವುದಿಲ್ಲ.

--ಮಂಜು ಹಿಚ್ಕಡ್