March 2017
Our social:

ಇತ್ತೀಚಿನ ಬರಹಗಳು

Wednesday, March 29, 2017

ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು


ಯುಗಾದಿ ಹಬ್ಬದ ಹಾರ್ಧಿಕ  ಶುಭಾಷಯಗಳು

ಮನವು ಹಸನಾಗಿ, ಬಾಳು ಹಸುರಾಗಿ
ಒಲವೆಂಬ ಒರತೆ ಸದಾ ಚಿಮ್ಮುತಿರಲಿ
ಕಷ್ಟ-ಕೋಟಲೆಗಳ ಬಾಳ ಪಥದಲ್ಲಿ
ಸದಾ ಹರ್ಷವು, ಮೊಳಗುತಿರಲಿ.

ಸುಖಕೆ ದುಖವು ಸೇರಿ
ಬಾಳು ಹದವಾಗಿರಲಿ
ಬದುಕಿನ ಪಯಣದಲಿ
ಯಸಸ್ಸು ನಿಮ್ಮದಾಗಿರಲಿ

ಯುಗದ ಆದಿಯೂ ನಿಮಗೆ
ಹರ್ಷ ತರಲಿ
ಈ ವರ್ಷ ಪೂರ್ತಿ ನಿಮಗೆ
ಶುಭವ ತರಲಿ.


ಶುಭ ಹಾರೈಕೆಗಳೊಂದಿಗೆ,

ಇಂತಿ ನಿಮ್ಮವ
ಮಂಜು ಹಿಚ್ಕಡ್ 

Sunday, March 19, 2017

ಅಪ್ಪನೇಕೇ ಹಾಗೆ ಎಂದು ತಿಳಿದುದ್ದು ನಾ ಅಪ್ಪನಾದಾಗಲೇ.


ಅದು ತೊಂಬತ್ತರ ದಶಕದ ಕೊನೆಯ ಸಾಲುಗಳು, ಆಗಿನ್ನೂ ನಾವು ಅ-ಅರಸ, ಆ- ಆನೆ ಎನ್ನುವ ಕನ್ನಡ ಅಕ್ಷರಮಾಲೆಗಳನ್ನು ಕಲಿಯುತಿದ್ದ ಕಾಲ. ಸ್ಲೇಟು ಬಳಪಗಳಲ್ಲೇ ನಮ್ಮ ಬರವಣಿಗೆ. ಆಗಿನ್ನೂ ಈಗಿನಂತೆ ಪೆನ್ಸಿಲ್ ನೋಟ್ ಬುಕ್ಕುಗಳಿರಲಿಲ್ಲ. ಆಗೀನ ಕಾಲಕ್ಕೆ ನಮಗೆ ವರ್ಷಕ್ಕೊಂದು ಹೊಸ ಸ್ಲೇಟು ಸಿಗುತಿದ್ದುದು ಅಪರೂಪವೇ. ಒಮ್ಮೊಮ್ಮೆ ಅರ್ಧ ಗೀರುಬಿಟ್ಟ ಇಲ್ಲವೇ ತುದಿ ಮುಕ್ಕಾದ ಸ್ಲೇಟಿನಲ್ಲಿಯೇ ಕಾಲ ಕಳೆದಿದ್ದು ಇದೆ. ನನಗೆ ನೆನಪಿರುವ ಪ್ರಕಾರ ಆಗಿನ್ನೂ ಬಳಪಕ್ಕೆ ಅಬ್ಬಬ್ಬಾ ಎಂದರೆ ಐದು ಪೈಸೆ ಇರಬಹುದೇನೋ. ಅಂತಹ ಒಂದೆರೆಡು ಬಳಪಕೊಂಡರೆ ಅದು ನಮಗೆ ಒಂದು ವಾರಕ್ಕಾದರೂ ಆಗಬೇಕು. ಅದೇನಾದರೂ ಒಂದೈದು ದಿನದೊಳಗೆ ಕಳೆದೋಗಿ ಅಥವಾ ಕಾಲಿಯಾಗಿ ನಾವೇನಾದರು ಇನ್ನೊಂದು ಬಳಪ ಬೇಕೆಂದರೆ ನಮ್ಮ ತಂದೆಯವರು ಕೋಪದಿಂದ ಕುದಿದು ಬಿಡುತಿದ್ದರು. "ನೀವೇನು ಬಳಪವನ್ನು ಬರೆಯಲು ಉಪಯೋಗಿಸುತ್ತಿರೋ ಅಥವಾ ತಿನ್ನುತ್ತಿರೋ, ವಾರಕ್ಕೊಂದು ಬಳಪ ಸಾಲುವುದಿಲ್ಲವೇ? ಅದೇನು ಸುಮ್ಮನೆ ಬರುತ್ತದಯೇ? ಕಾಸು ಕೊಡಬೇಡವೇ?" ಹೀಗೆ ಒಂದರ್ಧ ಗಂಟೆಯ ಭಾಷಣ. ಅದು ಕೂಡ ಅಷ್ಟೇ ಹೊತ್ತು, ಆಮೇಲೆ ತಾವೇ ಹೋಗಿ ಬಳಪ ತಂದು ಕೊಡುತಿದ್ದರು. ಆ ಕಾಲ ಕೂಡ ಹಾಗೆಯೇ ಇತ್ತು ಬಿಡಿ.

ಆಗೆಲ್ಲ ನಮ್ಮ ತಂದೆ, ನಾವೇನಾದ್ರೂ ಬೇಕು ಎಂದು ಕೇಳಿ, ಕೋಪಗೊಂಡು ಬಯ್ಯುವಾಗಲೆಲ್ಲ, ನಮಗೆ ಅವರೇಕೆ ಹೀಗೆ ಬಯ್ಯುತ್ತಾರೆ? ನಾವೇನು ಬೇಕಂತಲೇ ಕೇಳುತ್ತೇವೆಯೇ? ಎಂದು ನಮ್ಮಲ್ಲೇ ಅಂದು ಕೊಳ್ಳುತಿದ್ದೇವೆಯೇ ಹೊರತು ಅವರು ನಮಗಾಗಿ ಶ್ರಮಿಸುತ್ತಿರುವುದರ ಬಗ್ಗೆಯಾಗಲೀ, ನಮಗಾಗಿ ಕಷ್ಟಪಡುವುದರ ಬಗ್ಗೆಯಾಗಲೀ ಆಸಕ್ತಿ ಇರಲಿಲ್ಲ. ನಮಗಾಗ ನಮ್ಮ ಕೆಲಸವಾಗ ಬೇಕಷ್ಟೇ. ಹೇಗೆ ಆಗುತ್ತದೆ ಎನ್ನುವುದು ಮುಖ್ಯವಾಗಿರಿಲಿಲ್ಲ, ಅದರ ಅವಶ್ಯಕತೆಯೂ ನಮಗಿರಲಿಲ್ಲ.

ಮುಂದೆ ದೊಡ್ಡವರಾಗುತ್ತಾ ಹೋದ ಹಾಗೆ ಅದು ಬೇಕು, ಇದು ಬೇಕು ಎನ್ನುವ ನಮ್ಮ ಬೇಡಿಕೆಗಳು ಕಾಲಕ್ಕನುಗುಣವಾಗಿ, ವಯಸ್ಸಿಗೆ ಅನುಗುಣವಾಗಿ, ನಾವು ಓದುತ್ತಿರುವ ತರಗತಿಗಳಿಗೆ ಅನುಗುಣವಾಗಿ ಬೆಳೆಯುತ್ತಲೇ ಹೋಯಿತೇ ಹೊರತು ಅದೆಂದು ಕೊನೆಯಾಗಲಿಲ್ಲ. ತಂದೆ ನಮಗಾಗಿ ಶ್ರಮ ಪಡುತ್ತಿದ್ದಾರೆ ಎಂದು ಒಮ್ಮೊಮ್ಮೆ ಎಂದನಿಸಿದರೂ, ಅದು ಕೇಳುವಾಗ ಇರುತ್ತಿರಲಿಲ್ಲ, ಅದು ನಮಗೆ ಆಗ ಅರ್ಥವಾಗುತ್ತಲು ಇರಲಿಲ್ಲ.

ಈಗ ಬೆಳೆದು ದೊಡ್ಡವನಾಗಿದ್ದೇನೆ, ನನಗೂ ಮದುವೆಯಾಗಿ ಮಗು ಇದೆ. ಮಗು ಇನ್ನೂ ಯುಕೇಜಿ, ಪ್ರಾಥಮಿಕ ಶಿಕ್ಷಣಕ್ಕೆ ಕಾಲಿಡಲು ಇನ್ನೂ ಮೂರು ತಿಂಗಳ ಸಮಯ ಬಾಕಿ ಇದೆ. ಆಗಿನಂತೆ ಇದು ಸ್ಲೇಟು ಬಳಪಗಳ ಕಾಲವಲ್ಲ. ಪೆನ್ನು, ಪೆನ್ಸಿಲ್, ನೋಟ್ ಬುಕ್ ಗಳ ಕಾಲ. ಆಗ ನಾವು ಐದನೇ ತರಗತಿಗೆ ಸೇರಿದಾಗಲೇ ನೋಟ್ ಬುಕ್ಕನ್ನ ಹಿಡಿದು ಬರೆಯಲು ಪ್ರಾರಂಭಿಸಿದ್ದು. ಆದರೆ ಈಗ ನರ್ಸರಿಯಿಂದಲೇ ನೋಟ್ ಬುಕ್. ಅದು ಕೂಡ ಒಂದೊಂದು ವಿಷಯಕ್ಕೆ ಒಂದೊಂದು. ಆಗ ನಾವು ವಾರಕ್ಕೊಂದು ಬಳಪ ಬಳಸಿದರೆ, ಈಗ ನನ್ನ ಮಗುಗೆ ವಾರಕ್ಕೊಂದು ಪೆನ್ಸಿಲ್ ಸಾಲುವುದಿಲ್ಲ. ಇನ್ನೂ ಬಣ್ಣದ ಪೆನ್ಸಿಲಗಳನ್ನು ನಾವು ನೊಡಿದ್ದು ಕಾಲೇಜು ಮೆಟ್ಟಿಲು ಏರಿದಾಗಲೇ. ಈಗ ನರ್ಸರಿಯಿಂದಲೇ ಅದರ ಉಪಯೋಗ. ನಮಗೆ ಶಾಲೆ ಸುರುವಾದಾಗ ತಂದು ಕೊಡುತಿದ್ದ ಪಠ್ಯ ಪುಸ್ತಕಗಳು ಆ ಕ್ಲಾಸು ಮುಗಿಯುವವರೆಗು ಸಾಲುತಿತ್ತು. ಅಪರೂಪಕ್ಕೆ ಒಮ್ಮೆ ಎಂಬಂತೆ ನಾವು ಕೊಳ್ಳುತ್ತಿದ್ದುದು ಬಳಪ ಇಲ್ಲವೇ, ೩೫ ಪೈಸೆಯ ಪೆನ್ನಿನ ರಿಪೀಲ್. ಒಮ್ಮೆ ಒಂದು ಪೆನ್ನನ್ನು ಕೊಂಡರೆ ಒಂದೆರಡು ವರ್ಷ ಆ ಪೆನ್ನಿಗೆ ರಿಪೀಲ್ಲೇ ಗತಿ. ಒಮ್ಮೊಮ್ಮೆ ಪೆನ್ನು ಕಳೆದು ಹೋದರೆ, ಇಲ್ಲ ಬಿದ್ದು ಒಡೆದು ಹೋದರೆ ಅಥವಾ ಇನ್ನೂ ಅದನ್ನು ಹಿಡಿದು ಬರೆಯಲು ಸಾದ್ಯವೇ ಇಲ್ಲವೆಂದಾಗ ಮಾತ್ರ ಇನ್ನೊಂದು ಪೆನ್ನಿಗೆ ಮೊರೆ ಹೋಗುತಿದ್ದುದು. ಆದರೆ ಇಂದು ಆ ಕಾಲವೆಲ್ಲಿ, ಪೆನ್ನು ಕಾಲಿಯಾದ ಮೇಲೆ ರಿಪೀಲ್ ಹಾಕುವ ಮಾತೆಲ್ಲಿ. ಪೆನ್ನಲ್ಲಿಯ ಸಾಹಿ ಮುಗಿಯಲೀ, ಒಡೆದು ಹೋಗಲೀ, ಕಳೆದು ಹೋಗಲೀ, ಇನ್ನೂ ಸಾಹಿ ಕಟ್ಟಿ ಬರೆಯದಂತಾಗದಿರಲೀ ನಮ್ಮ ಮಕ್ಕಳಿಗೆ ಇನ್ನೊಂದು ಪೆನ್ನು ಬೇಕೇ ಬೇಕು.

ಈಗಿನ ಮಕ್ಕಳ ಬೇಡಿಕೆಯನ್ನು ಕೇಳಿದರೆ ಮುಗಿದೇ ಹೋಯಿತು. ಶಾಲೆಯಲ್ಲಿ ಪಕ್ಕದ ವಿದ್ಯಾರ್ಥಿ ಏನು ತರುತ್ತಾಳೋ ಅದೇ ರೀತಿಯ ವಸ್ತುಗಳು ಬೇಕು. ಪಕ್ಕದ ಹುಡುಗಿ ಕೆಂಪು ಬಣ್ಣದ ಬಾಟಲ್ ತಂದರೆ, ನಮ್ಮ ಮಕ್ಕಳು ಅದೇ ದಿನ ಬಂದು ಹೇಳುತ್ತಾರೆ, "I don't want this blue color bottle, I want a red color one." (ನನಗೆ ನೀಲಿ ಬಣ್ಣದ ಬಾಟಲ್ ಬೇಡ, ಕೆಂಪು ಬಣ್ಣದ ಬಾಟಲ್ ಬೇಕು ಅಂತಾ. ಅದು ಕುಡ ಈ ಕೂಡಲೇ. ಇಲ್ಲವೆಂದರೆ ಮುಗಿಯಿತು ಅಪ್ಪ ಅಮ್ಮ ಕೆಲಸ ಮಾಡಿದ ಹಾಗೆಯೇ. ಆ ಕೂಡಲೇ ಹತ್ತಿರದ ವಾಣಿಜ್ಯ ಮಳಿಗೆಗೆ ದೌಡಾಯಿಸಿ ಕೊಂಡು ತಂದಾಗಲೇ ಸಮಾಧಾನ. ನಾಳೆ ಇನ್ನೊಬ್ಬಳು ಇನ್ನಾವುದೋ ಬಣ್ಣದ ಊಟದ ಡಬ್ಬ ತಂದರೆ ಇವರಿಗೆ ನಾಳೆ ಅದು ಬೇಕು.

ಅಪ್ಪ ಏನು ಮಾಡುತ್ತಾನೆ, ಹೇಗೆ ತರುತ್ತಾನೆ ಎಲ್ಲಿಂದ ತರುತ್ತಾನೆ ಅದೆಲ್ಲ ಅವರಿಗೆ ಬೇಕಿಲ್ಲ. ಅವರಿಗೆ ಬೇಕಿರುವುದಿಷ್ಟೇ ಪಕ್ಕದಲ್ಲಿರುವ ವಿದ್ಯಾರ್ಥಿಯ ಬಳಿಯಿರುವಂತಹ ವಸ್ತುಗಳು ಅವರಿಗೂ ಬೇಕು. ಅದನ್ನು ಅಪ್ಪ ಕೇಳಿದಾಗಲೆಲ್ಲ ತಂದು ಕೊಡಬೇಕು ಅಷ್ಟೇ. ಒಂದು ಕಾಲದಲ್ಲಿ ಇದೇ ರೀತಿ ನಮಗನಿಸುತಿದ್ದುದು ನಿಜ. ಪಕ್ಕದ ವಿದ್ಯಾರ್ಥಿ ಹೊಸ ರೀತಿಯ ಪೆನ್ನು ಕೊಡರೆ ನಮಗೂ ಆಸೆಯಾಗಿ, ಕೇಳಿ ಮನೆಯಲ್ಲಿ ಬೈಸಿಕೊಂಡು ಸುಮ್ಮನಾಗುತಿದ್ದೆವು. ನಾವು ಬೈಸಿಕೊಂಡು ಸುಮ್ಮನಾಗುತಿದ್ದೆವು ಆದರೆ ಈಗ ನಮ್ಮ ಮಕ್ಕಳು ಹಾಗಲ್ಲ ಎಷ್ಟು ಬೈದರು ಅಷ್ಟೇ, ಅವರು ಆಸೆ ಪಟ್ಟಿದ್ದು ಬೇಕೇ ಬೇಕು.

ಅಂದು ನಮಗೇನಾದರೂ ಬೇಕಿದ್ದಲ್ಲಿ ನಾವು ನಮ್ಮ ತಂದೆಯ ಬಗ್ಗೆ ಯೋಚಿಸದೇ ಅವರನ್ನು ಕೇಳುತಿದ್ದೆವು, ಈಗ ನನ್ನ ಮಗಳು ಕೂಡ ನನ್ನನ್ನು ಕೇಳುತ್ತಾಳೆ ನನ್ನ ಬಗ್ಗೆ ಯೋಚಿಸದೇ. ಅಪ್ಪನ ಸ್ಥಿತಿ, ಪರಿಸ್ಥಿತಿ ಏನು ಎನ್ನುವುದು ಅಪ್ಪನಾದಾಗಲೇ ಗೊತ್ತಾಗುತ್ತಯಲ್ಲವೇ?

--ಮಂಜು ಹಿಚ್ಕಡ್

English Summary:

When I was a kid, and if I do some mistakes, and then my father used start scolding or giving a lecturer, that time I used think 'why he is telling such things to me?'. Whenever my daughter do same mistake and if I starts giving the lecturers then she will also experience the same thing which I experienced during my childhood. Similarly I will also realize the things which my father thought during my child hood. 


I think father is the one of the best and perfect teacher who teaches many things in our life. Father will try to teach many things in his own way during our childhood. It may be related to study, or it may be related to life, or it may be related to money.  Kids will not be able to understand most of things during that time. They understand the things which are only related to them or their world. Once they grow up and become a father, and whenever they come across the similar situation which was similar to their childhood, then they will also start thinking about their fathers and the lessons they thought during those days. This is what called as an experience of life. Experience itself teaches a lot in the journey of life. 


Saturday, March 11, 2017

ನಾಳೆ ಸುಗ್ಗಿ ಹಬ್ಬವಂತೆ... ಹೋ ಹೋ ಹೋಹೋಚೋ.....


"ನಾಳೆ ಹೋಳಿ, ಬಣ್ಣ ಹಚ್ಚಬೇಕು" ಎಂದು ಮಗಳು ಹೇಳಿದಾಗ ಮತ್ತೆ ಹೋಳಿ ಬಂದುದರ ನೆನಪಾಯಿತು. ನನಗಿದು ೩೬ ನೇ ಹೋಳಿಯಾದರೂ, ಬಣ್ಣ ಹಚ್ಚಿ ಆಡಿದ್ದು ತುಂಬಾ ಕಡಿಮೆಯೇ. ನನಗೆ ಅಥವಾ ನಮ್ಮ ಕಡೆಯವರಿಗೆ ಹೋಳಿ ಎಂದ ತಕ್ಷಣ ನೆನಪಾಗುವುದು ಸುಗ್ಗಿ ಹಬ್ಬವೇ ಹೊರತು ಬಣ್ಣದ ಆಟವಲ್ಲ. ಹಾಗಾಗಿಯೇ ಏನೋ  ಮನಸ್ಸು ಮತ್ತೆ ಮತ್ತೆ ಸುಗ್ಗಿ ಹಬ್ಬದ ಕಡೆಯೇ  ಓಡುತಿತ್ತು.

ನಾನು ಆಗಿನ್ನು ಚಿಕ್ಕ ವಯಸ್ಸಿನ ಹುಡುಗ . ಬಹುಷ: ೭-೮ ವರ್ಷಗಳಾಗಿರಬಹುದು. ಆಗ ಅಮ್ಮ ನಾಳೆ ಹಬ್ಬ ಎನ್ನುವ ದ್ರಷ್ಟಿ ಇಂದ ಕೊಟ್ಟೆ ಕಡಬು ಅಥವಾ ಕೊಟ್ಟೆ ರೊಟ್ಟಿಗಾಗಿ ಹಿಟ್ಟನ್ನ ಅರಿತಾ ಇದ್ದಳು. ಆಗ ನಮ್ಮ ಮನೆಯಲ್ಲಿ ಗ್ರೈಂಡರ ಅಥವಾ ಮಿಕ್ಸರಗಳಿರಲಿಲ್ಲ. ಕಲ್ಲಿನಲ್ಲೆ ಅರಿಯಬೇಕಾಗಿತ್ತು. ನಾವು ಆಗತಾನೆ ನಮ್ಮ ಪರೀಕ್ಷೆಗಳನ್ನ ಮುಗಿಸಿದ್ದರಿಂದ, ತರಗತಿಗಳಂತು ಇರಲಿಲ್ಲ. ಹಾಗಾಗಿ ಮನೆಯಲ್ಲೆ ಇದ್ದೆವು. ಬೆಳಿಗ್ಗೆ ಇಂದ "ತನದೇನಿದೋ ತಂದಾನ, ತಂದಂದ ದಂದ ದಂದ್ ತನದೇನಿದೋ ತಾನಾನಾ" ಎಂದು ತಂದಾನ ಹಾಕಲು ಬರುವವರ ಹಾಲಕ್ಕಿ ಹುಡುಗರ ಹಾಡನ್ನಂತೂ ಅದೆಷ್ಟೋ ಭಾರಿ ಕೇಳಿಯಾಗಿತ್ತು. ಇನ್ನು ಕೆಲವೇ ಗಂಟೆಗಳಲ್ಲಿ ಕರಡಿ ವೇಷದವರು ಬರುವವರಿದ್ದರಿಂದ ಮನೆಯ ಎದುರುಗಡೆನೆ ಕಾಯುತ್ತಾ ಕುಳಿತಿದ್ದೆವು. ಎಲ್ಲಾದರೂ ಹೋಗಿಬಿಟ್ಟರೆ ಎಲ್ಲಿ ಕರಡಿ ವೇಷದವರುತಪ್ಪಿ ಹೋಗುತ್ತಾರೆನೋ ಎನ್ನುವ ಯೋಚನೆಯಿಂದ ಮನೆಯ ಜಗುಲಿಯ ಮೇಲೆ ಕುಳಿತಿದ್ದೆವು. ಸಮಯ ಇನ್ನೇನು ೫ ಗಂಟೆಯಾಗಿರಬಹುದು. ಎತ್ತಲಿಂದಲೋ ಗುಮಟೆ, ತಾಳಗಳ ಧ್ವನಿ ಕೇಳಲು ಪ್ರಾರಂಭಿಸಿದವು. ಎಂದಿಗೂ ಅಂತಹ ರೀತಿಯ ಧ್ವನಿಯನ್ನ ನಾನು ಕೇಳಿರಲಿಲ್ಲ. ಓಡಿದವು ಧ್ವನಿ ಬಂದ ಕಡೆ, ನೋಡಿದರೆ ನಮ್ಮೂರ ಅಮ್ಮನವರ ಮನೆಯ ಪಕ್ಕದಲ್ಲಿರು, ಆಡು ಕಟ್ಟೆಯ ಹತ್ತಿರ ಒಂದಿಷ್ಟು ಗುಂಪು ಕೈಯಲ್ಲಿ ಕೊಲನ್ನ ಹಿಡಿದು, ತಲೆಗೆ ತುರಾಯಿಗಳಿಂದ ಕೂಡಿರುವ ಕಿರೀಟವನ್ನ ಧರಿಸಿ "ಹೋ ಹೋ ಹೋಹೋಚೋ" "ಹೋ ಹೋ ಹೋಹೋಚೋ" ಅಂತ ಭಾರಿಸುವ ವಾದ್ಯಗಳಿಗೆ ತಕ್ಕಂತೆ ನರ್ತಿಸುತ್ತಿದ್ದಾರೆ. ನಾನು ಅಲ್ಲಿಗೆ ಹೋದಾಗ ತಿಳಿಯಿತು. ಅದು ಸುಗ್ಗಿ ಕುಣಿತ ಎಂದು. ಅಲ್ಲಿಯವರೆಗೂ ನನಗೆ ಸುಗ್ಗಿ ಕುಣಿತ ಹೇಗಿರುತ್ತದೆ ಅಂತ ಗೊತ್ತಿರಲಿಲ್ಲ. ಪ್ರಥಮ ಭಾರಿಗೆ ಸುಗ್ಗಿ ಕುಣಿತವನ್ನ ನೊಡಿದೆ. ಅಲ್ಲಿಯವರೆಗೆ ಸುಗ್ಗಿ ಹಬ್ಬವನ್ನ ಆಚರಿಸುತ್ತಾರೆ, ಆದರೆ ಆ ಹಬ್ಬಕ್ಕೆ ಸುಗ್ಗಿ ಹಬ್ಬ ಅಂತ ಯಾಕೆ ಕರೆಯುತ್ತಾರೆ ಅನ್ನುವುದು ಗೊತ್ತಿರಲಿಲ್ಲ. ಅಲ್ಲಿ ಆಡು ಕಟ್ಟೆಯ ಹತ್ತಿರ ಸುಗ್ಗಿ ಕುಣಿತ ಮುಗಿದೊಡನೆ, ನಮ್ಮ ಮಕ್ಕಳ ತಂಡ ಸುಗ್ಗಿ ತಂಡವನ್ನ ಹಿಂಬಾಲಿಸಿಕೊಂಡು ಹೋಯಿತು. ಮುಂದೆ ನಮ್ಮೂರ ಸೇವಾ ಸಹಕಾರಿ ಸಂಘದ ಎದುರಿಗೆ, ನಂತರ ಗಾಂವಕರ ಕೇರಿಯಲ್ಲಿ, ಆಮೇಲೆ ಬೀರಜ್ಜನ ಮನೆ ಕೇರಿ ಹೀಗೆ ಎಲ್ಲಿ ಸುಗ್ಗಿಯೋ, ಅಲ್ಲಿ ನಾವುಗಳು. ಕರಡಿ ವೇಷ ಬರುವುದು ಮರತೇ ಹೋಗಿ ಬಿಟ್ಟಿತ್ತು. ಅಂತೂ ಮನೆಗೆ ಬಂದಾಗ ರಾತ್ರಿಯಾಗಿತ್ತು. ಅದಾದ ನಂತರ ನಾನು ಮತ್ತೆ ಸುಗ್ಗಿ ಕುಣಿತವನ್ನು ನೋಡಿದ್ದು ಮೂರು ವರ್ಷಗಳ ಹಿಂದೆ, ಅಂಕೋಲಾದ ಪೋಲಿಸ್ ಸ್ಟೇಷನ್ ಎದುರು, ಅದು ಕೂಡ ಅಂಕೋಲಾದಲ್ಲಿ ಸುಗ್ಗಿ ಕುಣಿತಕ್ಕೆ ಹೆಸರಾದ ಬೆಳಂಬಾರ ತಂಡದವರಿಂದ.


ಬಹುಷ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಗುವಂತಹ ಸಾಂಪ್ರದಾಯಿಕ ವೈಸಿಷ್ಟ್ಯಗಳು ಜಗತ್ತಿನ ಯಾವ ಮೂಲೆಯಲ್ಲೂ ಸಿಗಲಾರದು. ಯಾಕೆಂದರೆ ಬಹುಕಾಲದಿಂದ ಇಲ್ಲಿ ನೆಲಸಿರುವ, ವಲಸೆ ಬಂದಿರುವ ವಿವಿಧ ಜನಾಂಗಗಳು. ಆ ಪ್ರತಿಯೊಂದು ಜನಾಂಗಗಳಿಗೂ ತಮ್ಮದೇ ಆದ ಆಡುಭಾಷೆ, ತಮ್ಮದೇ ಆದ ಸಾಂಪ್ರದಾಯಿಕ ಮನೋಭಾವ, ತಮ್ಮದೇ ಆದಂತ ಒಂದು ಕಲೆ ಇದ್ದರೂ ಎಲ್ಲರೂ ಒಟ್ಟಿಗೆ ಜೀವಿಸುತ್ತಿರುವುದು. ಉತ್ತರ ಕನ್ನಡದಲ್ಲಿ ಪ್ರತಿಯೊಂದು ಜನಾಂಗವು ಬೇರೆ ಬೇರೆ ಸ್ಥಳಗಳಿಂದ ವಲಸೆ ಬಂದೂ ಇಲ್ಲಿ ನೆಲಸಿರುವುದು ಕೂಡ ವೈಸಿಷ್ಟ್ಯಕ್ಕೆ ಕಾರಣಗಳಿರಬಹುದು. ಭೂ ಒತ್ತಡಗಳಿಗೆ ಸಿಕ್ಕಿ ಉಗಮಿಸಿದ ಸ್ಥಳಗಳಲ್ಲಿ ಉತ್ತರ ಕನ್ನಡವೂ ಒಂದು. ಒಂದು ಕಡೆ ಸಹ್ಯಾದ್ರಿಯ ಪರ್ವತ ಶ್ರೇಣಿಗಳಾದರೆ ಇನ್ನೊಂದೆಡೆ ಅರಬ್ಬೀ ಸಮುದ್ರ, ನಡುವೆ ಹಚ್ಚ ಹಸುರಿನ ಭೂ ಸಿರಿ. ಇವೆಲ್ಲವುಗಳ ನಡುವೆ ನೆಲೆನಿಂತ ವಿವಿಧ ಜನಾಂಗಗಳು. ಅವು ಎಲ್ಲಿಂದ ಬಂದವೋ, ಹೇಗೆ ಬಂದವೋ ಎನ್ನುವುದು ಯಾರಿಗೂ ಸರಿಯಾಗಿ ವಿವರಿಸಿ ಹೇಳಲಾಗದಂತಹ ಇತಿಹಾಸ. ಅಂತಹ ಜನಾಂಗಗಳಲ್ಲಿ ಹಾಲಕ್ಕಿ ಒಕ್ಕಲಿಗರದು ಒಂದು ಜನಾಂಗ. ಇಲ್ಲಿರುವ ಜನಾಂಗಗಳಲ್ಲಿರೂವ ಇನ್ನೊಂದು ವೈಸಿಷ್ಟ್ಯವೆಂದರೆ, ಪ್ರತಿ ಜನಾಂಗಗಳಿಗೆ ತಮ್ಮದೇ ಭಾಷೆ , ಕಲೆ ಹಾಗೂ ಸಂಪ್ರದಾಯ. ಇದು ಹಾಲಕ್ಕಿ ಒಕ್ಕಲಿಗರಿಗೇನೂ ಹೊರತಾಗಿಲ್ಲ.



ಸುಗ್ಗಿ ಕುಣಿತ ಹಾಲಕ್ಕಿ ಒಕ್ಕಲಿಗರ  ಒಂದು ಜಾನಪದ ಕಲೆ. ಊರ ಜನರಿಂದ ತಯಾರಿಸಲ್ಪಟ್ಟ ಸುಗ್ಗಿ ತುರಾಯಿ ಅಥವಾ ಕುಂಚಗಳನ್ನು ತಲೆಯ ಮೇಲೆ ಹೊತ್ತು ಕೈಯಲ್ಲಿ ಕೋಲು ಹಿಡಿದು ಗುಮ್ಟೆ, ತಾಳ ಜಾಗಟೆಗಳ ನಾದಕ್ಕೆ "ಹೋ ಹೋ ಹೋಹೋಚೋ" ಎಂದು ವೃತ್ತಾಕಾರವಾಗಿ ಕುಣಿಯುವ ಹಾಲಕ್ಕಿ ಸುಗ್ಗಿ ಮಕ್ಕಳ ಕುಣಿತವೇ ಸುಗ್ಗಿ ಕುಣಿತ. ಮೊದಲು ಈ ಸುಗ್ಗಿ ಕುಣಿತ ಒಂದು ಊರಿಂದ ಇನ್ನೊಂದು ಊರಿಗೆ ಸಾಗುತ್ತಾ ಹೋಗಿ ಕೊನೆಯಲ್ಲಿ ಹೋಳಿ ಹುಣ್ಣಿಮೆಯ ದಿನ ತಮ್ಮ ಊರಿಗೆ ವಾಪಸ್ ಬಂದು ಅವರ ದೇವರಾದ ಕರಿ ದೇವರ ಮುಂದೆ ತಮ್ಮ ವೇಷಗಳನ್ನು ಕಳಚಿಡುತಿದ್ದರು. ಆದರೆ ಕಾಲ ಕಳೆದಂತೆ ಈ ಪ್ರವೃತ್ತಿ ಕಡಿಮೆಯಾಗಿ ಊರೂರು ಸುತ್ತುವ ವಾಡಿಕೆ ಕಡಿಮೆಯಾಗಿದೆ. ಈಗಂತು ಸುಗ್ಗಿ ಕುಣಿತವೇ ಅಪರೂಪವಾಗಿದೆ. ಅಂಕೋಲಾದ ಪೋಲಿಸ್ ಸ್ಟೇಷನ್ ಎದುರು ಪ್ರತಿವರ್ಷ ಸುಗ್ಗಿ ಕುಣಿತವನ್ನು ನೋಡಬಹುದಾದರೂ ಅದು ಇನ್ನೆಷ್ಟು ವರ್ಷವೋ ಗೊತ್ತಿಲ್ಲ.  ಕಾರಣಗಳು ಇಲ್ಲ ಎಂದಲ್ಲ, ಹುಡುಕುತ್ತಾ ಹೋದರೆ ಒಂದಲ್ಲ ಹತ್ತಾರು ಕಾರಣಗಳು ಸಿಗಬಹುದು. ಕಾರಣಗಳು ಏನೇ ಇರಲಿ, ಆದರೆ ಮುಂದಿನ ದಿನಗಳಲ್ಲಿ ಸುಗ್ಗಿ ಕುಣಿತ ಇತರ ಜನಪದ ಕಲೆಗಳಂತೆ ತನ್ನ ಹೊಳಪನ್ನು ಕಳೆದುಕೊಂಡು ಅವನತಿಯತ್ತ ಸಾಗಬೇಕಾದ ದಿನಗಳು ಬಹು ದೂರದಲ್ಲೇನಿಲ್ಲ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮಲ್ಲಿ ಸಾದ್ಯವಾದಷ್ಟು ಮಟ್ಟಿಗೆ ಜನಪದ ಕಲೆಯನ್ನು ಜೀವಂತವಾಗಿಸಲು ಪ್ರಯತ್ನಿಸಬೇಕು ಎನ್ನುವುದು ನನ್ನ ಆಶಯ. ನಮ್ಮ ಜನಪದ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸಿದಾಗಲೇ, ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯ

--ಮಂಜು ಹಿಚ್ಕಡ್

ಯೂ ಟ್ಯೂಬ್ ವಿಡಿಯೋ ಕೃಪೆ - ಗಣೇಶ್ ಗೌಡ

English Summary:


Suggi dance (or suggi kunita in Kannada) is one of the folklore dance performed by Halakki Okkaliga tribes during Holi festivals in Northern parts of the costal Karnataka. Because of this famous  suggi dance this Holi festival is also called as Suggi festival in those areas. On that day Halakki people will wear the suggi tuft which is prepared with artificial flowers on their head and they perform the circular dance according to their classical music. That dance is called as suggi dance. 

Thursday, March 2, 2017

ಸಂಧ್ಯಾಕಾಲ


ಮುತ್ತು ಕೇಳೋಕೆ
ಹೊತ್ತು ಕಳೆಯೋಕೆ
ಇದುವೆ ಸಂಧಿಕಾಲ
ಅದುವೆ ಸಂಧ್ಯಾಕಾಲ
-ಮಂಜು ಹಿಚ್ಕಡ್