Sunday, August 31, 2014

ಬೀದಿ ದೀಪ

ಮಧ್ಯಾಹ್ನವಾದರೂ ಉರಿಯುವುದಿಲ್ಲಿ, ಬೀದಿ ದೀಪ
ಹೇಳಿ ಕೊಳ್ಳಬೇಕಾಗಿದೆ, ನಮಗೆ ನಾವೇ ಸಂತಾಪ.
ಹುಣ್ಣಿಮೆಯ ಬೆಳದಿಂಗಳೊಡನೆ, ರಸ್ತೆ ದೀಪಗಳ ಸುಗ್ಗಿ
ಅಮವಾಸ್ಯೆ ಬಂದರೆ ಹುಡುಕಬೇಕು ರಸ್ತೆ, ತಗ್ಗಿ ಬಗ್ಗಿ!

--ಮಂಜು ಹಿಚ್ಕಡ್

Thursday, August 21, 2014

ತಿಮ್ಮನ ಹುಚ್ಚು!

[೧೮-ಅಗಷ್ಟ-೨೦೧೪ ರ ಪಂಜು ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಥೆ ’ತಿಮ್ಮನ ಹುಚ್ಚು!’ http://www.panjumagazine.com/?p=8332]

ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ ಹೊತ್ತು ಕಳೆದು, ಸೂರ್ಯ ನೆತ್ತಿಯನ್ನೇರಿದ್ದು, ಹೊಟ್ಟೆ ತಾಳ ಹಾಕುತ್ತಿದ್ದುದು ಅರಿಕೆಯಾಗಲಿಲ್ಲ. ಹೀಗೆ ಮಲಗಿದ್ದರೆ ರಾತ್ರಿಯಾಗುವವರೆಗೂ ಮಲಗಿರುತ್ತಿದ್ದನೇನೋ ಆದರೆ ಆ ಊರಿನ ಪಟೇಲ ಸುಬ್ರಾಯ ನಾಯ್ಕರು ಬಿಡಬೇಕಲ್ಲ.

ಸುಬ್ರಾಯ ನಾಯ್ಕರ ಮನೆಯ ಮುಂದಿನ ತೋಟದಲ್ಲಿದ್ದ ನಾಲ್ಕಾರು ತೆಂಗಿನ ಮರಗಳ ಕಾಯಿ ಬೆಳೆದು ನಿಂತಿದ್ದವು. ಒಂದೆರಡು ಮರದ ಕಾಯಿಗಳು ಆಗಲೇ ಬೀಳ ತೊಡಗಿದ್ದವು. ಒಂದೆರಡು ಮರದ ತೆಂಗಿನ ಹೆಡೆಗಳು ಕೂಡ ಒಣಗಿನಿಂತಿದ್ದವು. ಇನ್ನೆರಡು ವಾರದಲ್ಲಿ ಮಕ್ಕಳು, ಮೊಮ್ಮಕ್ಕಳು ಬೇಸಿಗೆ ರಜೆ ಕಳೆಯಲು ಊರಿಗೆ ಬರುವವರಿದ್ದರು. ಅವರು ಬರುವುದರೊಳಗೆ ಬೆಳೆದ ಕಾಯಿಗಳನ್ನು, ಒಣಗಿದ ಹೆಡೆಗಳನ್ನು ತೆಗೆಸಿ ಬಿಡಬೇಕೆಂದು ನಿಶ್ಚಯಿಸಿ ಸುಬ್ರಾಯ ನಾಯ್ಕರು ಮೂರ್ನಾಲ್ಕು ಬಾರಿ ತಿಮ್ಮನಿಗೆ ಹೇಳಿ ಕಳಿಸಿದ್ದರು. ಎರಡು ದಿನದ ಹಿಂದೆ ಅವರ ಮನೆಯವರೆಗೂ ಸ್ವತಃ ಅವರೇ ಹೋಗಿ ತಿಮ್ಮನ ತಾಯಿಯಲ್ಲಿ, "ನಿನ್ನ ಮಗ ಬಂದರೆ, ಮನೆಯ ಹತ್ತಿರ ಕಳಿಸಿಕೊಡು" ಎಂದು ಕೂಡ ಹೇಳಿ ಬಂದಿದ್ದರು. ಒಂದು ವಾರದಿಂದ ತಿಮ್ಮನಿಗಾಗಿ ಪ್ರಯತ್ನಿಸುತ್ತಿದ್ದರೂ ತಿಮ್ಮ ಮಾತ್ರ ಕೈಗೆ ಸಿಗುತ್ತಿರಲಿಲ್ಲ. ಈ ಯಕ್ಷಗಾನದ ಸಮಯದಲ್ಲಿ ತಿಮ್ಮನನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟ. ಯಾವಾಗ, ಯಾವ ಊರಿನಲ್ಲಿ, ಏನು ಮಾಡುತ್ತಿರುತ್ತಾನೇ ಎನ್ನುವುದೇ ತಿಳಿಯುವುದಿಲ್ಲ. ಎಲ್ಲಿ ಯಕ್ಷಗಾನವಿರತ್ತದೋ ಆ ಊರಿನಲ್ಲಿ ತಿಮ್ಮನಿರುತ್ತಾನೆ ಎನ್ನುವುದು ಈಗೀಗ ಎಲ್ಲರಿಗೂ ಕಂಡು ತಿಳಿದ ವಿಷಯ. ಈ ವಿಷಯ ಸುಬ್ರಾಯ ನಾಯ್ಕರಿಗೂ ಕೂಡ ತಿಳಿದು ಹೋಗಿತ್ತು. ಹಾಗಾಗಿಯೇ ತಿಮ್ಮನನ್ನು ಹುಡುಕಿ ಅಲ್ಲಿಯವರೆಗೆ ಬಂದಿದ್ದು.

ತಿಮ್ಮನಿಗೆ ಇರೋದು ಎರಡೇ ಎರಡು ಹವ್ಯಾಸ. ಒಂದು ತೆಂಗಿನ ಮರ ಹತ್ತುವುದು, ಇನ್ನೊಂದು ಯಕ್ಷಗಾನ ನೋಡುವುದು. ಅದನ್ನು ತಿಮ್ಮನ ವಿಷಯದಲ್ಲಿ ಹವ್ಯಾಸ ಅನ್ನುವುದಕ್ಕಿಂತ ಉದ್ಯೋಗ ಎನ್ನುವುದೇ ವಾಸಿ. ಯಾಕಂದರೆ ಅವೆರಡನ್ನು ಬಿಟ್ಟು ತಿಮ್ಮ ಮತ್ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಅದರಲ್ಲೂ ಯಕ್ಷಗಾನ ಅಂದರೆ ಮುಗಿದೇ ಹೋಯ್ತು ಅದನ್ನು ಎಲ್ಲಿಯೂ ಬಿಡುತ್ತಿರಲಿಲ್ಲ. ಮೊದ ಮೊದಲು ಯಕ್ಷಗಾನ ನೋಡಲು ಹೋದವನು ವೇದಿಕೆಯ ಮುಂಬಾಗದಲ್ಲಿ ಕುಳಿತು ಯಕ್ಷಗಾನ ನೋಡುತಿದ್ದ. ಕ್ರಮೇಣ ಕಾಲ ಕಳೆಯುತ್ತಾ ಹೋದಂತೆ ಯಕ್ಷಗಾನದಲ್ಲಿ ಪಾತ್ರ ಮಾಡುವ ಕಲಾವಿದರನ್ನು ಪರಿಚಯ ಮಾಡಿಕೊಂಡ. ಹಾಗೆ ಪರಿಚಯವಾದವರಿಂದ ಮುಂದಿನ ಯಕ್ಷಗಾನ ಮತ್ತು ಅಲ್ಲಿ ನಡೆಯುವ ಪ್ರಸಂಗವನ್ನು ತಿಳಿದುಕೊಂಡು ಅಲ್ಲಿಗೂ ಹೋಗುತ್ತಿದ್ದ. ಮುಂದೆ ಕೆಲವು ದಿನಗಳ ನಂತರ ಆತ ವೇದಿಕೆಯ ಮುಂಬಾಗದಲ್ಲಿ ಕುಳಿತು ಕೊಳ್ಳುವುದನ್ನು ಬಿಟ್ಟು ಬಿಟ್ಟು, ವೇದಿಕೆಯ ಮೇಲಿನ ಹಿಮ್ಮೇಳದವರೊಂದಿಗೆ ಹೋಗಿ ಕುಳಿತುಕೊಳ್ಳಲು ಪ್ರಾರಂಬಿಸಿದ. ಒಂದೆರಡು ಬಾರಿ ಸುಮ್ಮನೆ ಹಿಂದೆ ಕುಳಿತ ಅವನಿಗೆ ಭಾಗವತರು ಸುಮ್ಮನೆ ಕುಳ್ಳುವ ಬದಲು ಕೈಗೆ ಪೇನು ಪೆಟ್ಟಿಗೆ ಕೊಟ್ಟು ಕುಳ್ಳಿಸಿದರು. ಈಗೀಗಂತೂ ಅವನಿಗೆ ಅದೇ ಕೆಲಸ. ಯಕ್ಷಗಾನಕ್ಕೆ ಹೋಗುವುದು, ಅಲ್ಲಿ ಹಿಮ್ಮೇಳದವರಂತೆ ಬಿಳಿಯ ಅಂಗಿ, ಬಿಳಿಯ ಪಂಚೆ, ತಲೆಗೆ ಕೇಸರಿಯ ರುಮಾಲು ಸುತ್ತಿ ಪೇನು ಪೆಟ್ಟಿಗೆ ಹಿಡಿದು ಕುಳಿತು ಕೊಳ್ಳುವುದು. ಇದು ಅವನ ಉಚಿತ ಸೇವೆಯೂ ಕೂಡ. ಆ ಕೆಲಸಕ್ಕಾಗಿ ಆತ ಯಾರಿಂದಲೂ ಏನನ್ನೂ ಬಯಸ್ಸುತಿರಲಿಲ್ಲ.

ರಾತ್ರಿ ಪೂರ್ತಿ ಯಕ್ಷಗಾನದಲ್ಲಿ ಪೇನು ಪೆಟ್ಟಿಗೆ ನುಡಿಸಿ, ಆ ಊರಲ್ಲೇ ಎಚ್ಚರವಾಗುವವರೆಗೆ ಮಲಗಿ. ಎದ್ದ ಮೇಲೆ ಆ ಊರಲ್ಲಿ ಯಾರಾದರೂ ಕೇಳಿದರೆ ಅವರ ಮನೆಯ ತೆಂಗಿನ ಮರ ಹತ್ತಿ ಮರದಿಂದ ಕಾಯಿ ತೆಗೆದುಕೊಟ್ಟು, ಸಾದ್ಯವಾದರೆ ಮರ ಹತ್ತಿದವರ ಮನೆಯಲ್ಲೇ ಊಟ ತಿಂಡಿ ಮುಗಿಸಿ, ಅವರು ಕೊಟ್ಟ ಹಣವನ್ನು ಜೇಬಿಗೆ ತುರುಕಿ ಮುಂದಿನ ಊರಿಗೆ ಹೊರಡುತ್ತಿದ್ದ. ಮತ್ತೆ ಆ ಊರಿನಲ್ಲಿ ನಡೆಯಲಿರುವ ಯಕ್ಷಗಾನ ನೋಡಲು. ಹಾಗೆ ಊರಿಂದ ಊರಿಗೆ ಹೋಗುವಾಗ ನಿದ್ದೆ ಆದರೆ ಆಯಿತು, ಇಲ್ಲ ಅಂದರೆ ಇಲ್ಲ. ಒಮ್ಮೊಮ್ಮೆ ನಿದ್ದೆ ಆವರಿಸಿದಾಗ ಎಲ್ಲಿ ಜಾಗ ಸಿಗತ್ತೋ ಅಲ್ಲಿ ಮಲಗಿ ಬಿಡುತ್ತಿದ್ದ. ಅದು ಮರದ ಬುಡವಿರಬಹುದು, ಬಸ್ ನಿಲ್ದಾಣವಿರಬಹುದು ಅಥವಾ ಯಾವುದೋ ಶಾಲೆಯ ಆವರಣವಿರಬಹುದು, ಇಲ್ಲಾ ಯಕ್ಷಗಾನ ಬಯಲಾಟ ನಡೆದ ಸ್ಥಳದ ಸಮೀಪವೇ ನೆರಳಿರುವ ಇನ್ನಾವುದೇ ಸ್ಥಳವಿರಬಹುದು. ಆ ಸಮಯದಲ್ಲಿ ಅವನಿಗೆ ಸ್ಥಳ ಮುಖ್ಯವಲ್ಲ, ನಿದ್ದೆ ಮುಖ್ಯ. ಯಾರಾದರೂ ಮರ ಹತ್ತಲು ಹೇಳುವವರನ್ನು ಬಿಟ್ಟರೆ ಬೇರ್ಯಾರು ತಿಮ್ಮನನ್ನು ನಿದ್ದೆಯಿಂದ ಎಬ್ಬಿಸುವವರು ಇರಲಿಲ್ಲ. ಅದು ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ. ಹಾಗೆ ಬಂದವರಲ್ಲಿ ಇಂದು ಬಂದ ಸುಬ್ರಾಯ ನಾಯ್ಕರು ಒಬ್ಬರು ಕೂಡ. ಬಹುಷಃ ಮರ ಹತ್ತುವ ಕೆಲಸವಿಲ್ಲದಿದ್ದರೆ ಅವರು ಕೂಡ ಅಲ್ಲಿಗೆ ಬರುತ್ತಿರಲಿಲ್ಲವೇನೋ?

ಸುಬ್ರಾಯ ನಾಯ್ಕರು ಬಂದು "ಏ ತಿಮ್ಮಾ, ಏಳೋ. ಎಷ್ಟು ಹೊತ್ತು ಅಂತ ಮಲಗರ್ತಿಯಾ ಏಳೋ" ಎಂದು ಕೂಗಿದಾಗ, ನಿದ್ದೆಯ ಗುಂಗಿನಲ್ಲಿದ್ದ ತಿಮ್ಮನಿಗೆ ನಿನ್ನೆಯ ಗದಾಯುದ್ಧ ಪ್ರಸಂಗದಲ್ಲಿ, ಕೌರವ ವೈಸಂಪಾಯನ ಕೆರೆಯಲ್ಲಿ ಮುಳುಗಿದ್ದಾಗ, ಭೀಮ ಕೌರವನನ್ನು ಹೀಯಾಳಿಸುತ್ತಾ "ಎಲವೋ ದುರ್ಯೋಧನ ಏಳೋ" ಎಂದು ಕೂಗಿ ಕರೆದಂತೆನಿಸಿತು. ಒಮ್ಮೆ "ಹೂಂ" ಎಂದು ಮತ್ತೆ ನಿದ್ದೆಗೆ ಜಾರಿದ ತಿಮ್ಮ.

"ಏನೋ ತಿಮ್ಮಾ ಇನ್ನೂ ಮಲಗೇ ಇದ್ದಿಯಾ ಮದ್ಯಾಹ್ನ ಆಯ್ತಲ್ಲೋ, ಏಳೋ" ಎಂದು ಮತ್ತೊಮ್ಮೆ ನಾಯ್ಕರು ಕೂಗಿದಾಗ ತಿಮ್ಮನಿಗೆ ಯಾರೋ ತನ್ನನ್ನು ಕರೆಯುತ್ತಿದ್ದಾರೆ ಎಂದನಿಸಿ, ಎದ್ದು ನೋಡಿದ. ಎದುರಿಗೆ ಸುಬ್ರಾಯ ನಾಯ್ಕರು ನಿಂತಿದ್ದನ್ನು ನೋಡಿ ಗಡಿಬಿಡಿಯಿಂದ ಎದ್ದು "ನಮಸ್ಕಾರ ನಾಯ್ಕರೇ" ಎಂದ.

"ಏನಪ್ಪಾ, ತಿಮ್ಮ ಮಧ್ಯಾಹ್ನ ಆಯ್ತಲ್ಲೋ, ಇನ್ನೂ ಮಲಗೇ ಇದ್ದಿಯಾ, ನಿನಗಾಗಿ ಎಷ್ಟು ಸಾರಿ ಹೇಳಿ ಕಳಿಸಿದೆ ಗೊತ್ತಾ, ನೀನು ನೋಡಿದ್ರೆ ಸಿಗೋದೇ ಇಲ್ಲಾ ಅಂತಿಯಾ"

"ಹೌದಾ ನಾಯ್ಕರೇ? ಏನಾಗ್ಬೇಕಿತ್ತು, ಏನಾದ್ರೂ ಮರ ಹತ್ತೋ ಕೆಲಸ ಇತ್ತೇ?" ಎಂದು ಕೇಳಿದ ತಿಮ್ಮ. ತಿಮ್ಮನಿಗೆ ಗೊತ್ತಿಲ್ಲವೇ ಅವನನ್ನು ಕರೆಯಲು ಬರುವವರೆಲ್ಲ ಆ ಕೆಲಸಕ್ಕೆ ತನ್ನನ್ನು ಕರೆಯುವುದೆಂದು.

"ಹೌದೋ ಮಾರಾಯ, ಐದಾರು ಮರಕ್ಕೆ ಕಾಯಿ ಒಣಗಿ ಹೋಗಿದೆ, ಸ್ವಲ್ಪ ಬಂದು ಕಾಯಿ ಕೊಯ್ದು ಕೊಟ್ಟು ಹೋದರೆ ನಿನ್ನಿಂದ ಉಪಯೋಗವಾಗುತ್ತದೆ" ಎಂದರು ನಾಯ್ಕರು.

"ಆಯ್ತ್ರಾ ನಾಯ್ಕರೆ, ನಡಿರಿ ಹಂಗಾರೆ" ಎಂದು ಸುಬ್ರಾಯ ನಾಯ್ಕರನ್ನು ಹಿಂಬಾಲಿಸಿದ ತಿಮ್ಮ. ಗಂಟೆ ಆಗಲೇ ಹನ್ನೆರಡು ದಾಟಿ ಒಂದರ ಸಮೀಪ ಬಂದಿತ್ತು. ಬೆಳಿಗ್ಗೆಯಿಂದ ಏನು ತಿನ್ನದ ತಿಮ್ಮನಿಗೆ ಹಸಿವೆಯಾದಂತೆ ಅನ್ನಿಸಿತು. ಹೇಗೂ ಇವತ್ತಿನ ಊಟ ಸುಬ್ರಾಯ ನಾಯ್ಕರ ಮನೆಯಲ್ಲೇ ಎಂದನಿಸಿ ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು.

ಸುಬ್ರಾಯ ನಾಯ್ಕರ ಮನೆಗೆ ಬಂದು ಒಂದೆರಡು ಮರ ಹತ್ತಿ ಕಾಯಿ ಇಳಿಸುವ ಹೊತ್ತಿಗೆ ಗಂಟೆ ಎರಡು ದಾಟಿ ಹೋಗಿತ್ತು. ಆಗಲೇ ಸುಬ್ರಾಯ ನಾಯ್ಕರ ಹೆಂಡತಿ ಪಾರ್ವತಿ, ಸುಬ್ರಾಯ ನಾಯ್ಕರನ್ನು ಊಟಕ್ಕೆ ಕರೆದು ಹೋಗಿದ್ದರೂ. ಸುಬ್ರಾಯ ನಾಯ್ಕರಿಗೂ ಹಸಿವೆ ಆದಂತೆ ಎನಿಸಿ ಮನೆಯತ್ತ ಹೆಜ್ಜೆ ಹಾಕುತ್ತಾ, "ಏ ತಿಮ್ಮಾ ಬಾರೋ, ಊಟ ಮಾಡಿ ಆಮೇಲೆ ಮತ್ತೆ ಮರ ಹತ್ತುವೆಯಂತೆ, ಹೋಗಿ ಕೈಕಾಲು ತೊಳೆದುಕೊಂಡು ಬಾ" ಎಂದು ತಿಮ್ಮನ್ನನ್ನು ಊಟಕ್ಕೆ ಆಹ್ವಾನಿಸಿದರು.

ತಿಮ್ಮನಿಗೆ ಬೇಕಾಗಿದ್ದೂ ಅದೇ. ಸುಬ್ರಾಯ ನಾಯ್ಕರ ಹೆಂಡತಿ ನಾಯ್ಕರಿಗೆ ಒಳಗೆ ಬಡಿಸಿದರೆ, ತಿಮ್ಮನಿಗೆ ಹೊರಗೆ ಬಾಳೆ ಎಲೆ ಇಟ್ಟು ಬಡಿಸಿದಳು. ತಿಮ್ಮ ಸಾಕು ಸಾಕು ಎನ್ನುತ್ತಲೇ ಮೂರ್ನಾಲ್ಕು ಬಾರಿ ಅನ್ನ ಹಾಕಿಸಿಕೊಂಡು ಉಂಡ. ಹೊಟ್ಟೆ ಈಗ ಸ್ವಲ್ಪ ತಣ್ಣಗೆನಿಸಿತು. ನೀರು ಕುಡಿದು ಉಂಡ ಎಲೆ ಎತ್ತಿ ತೋಟದ ಮೂಲೆಗೆ ಎಸೆದು ಬಂದ. ಕೈ ತೊಳೆದು ಬಂದು ಜಗುಲಿಯ ಮೇಲೆ ಕುಳಿತು ಕಿಸೆಯಿಂದ ಬೀಡಿ ತೆಗೆದು ಬಾಯಿಗೆ ತುರಿಕಿದ. ಅದರ ಮುಂದಿನ ತುದಿಗೆ ಬೆಂಕಿ ಹಚ್ಚಿ, ತುದಿ ಸಂಪೂರ್ಣ ಕೆಂಪಗಾಗಿದೆ ಎಂದ ಮೇಲೆ ಇನ್ನೂ ಉರಿಯುತ್ತಿದ್ದ ಬೆಂಕಿ ಕಡ್ಡಿಯನ್ನು ಹೊರಗೆಸೆದು, ಬೀಡಿ ಎಳೆಯುತ್ತಾ ಕುಳಿತ. ಸುಬ್ರಾಯ ನಾಯ್ಕರು ಆಗಲೇ ಊಟ ಮುಗಿಸಿ ತಾಂಬೂಲ ಹಾಕಿ ಅದರ ಸ್ವಾದವನ್ನು ಸವಿಯುತ್ತಾ ಆರಾಂ ಕುರ್ಚಿಯ ಮೇಲೆ ಕುಳಿತಿದ್ದರು. ಹೊರಗೆ ಜಗುಲಿಯ ಮೇಲೆ ಬೀಡಿ ಎಳೆಯುತ್ತಾ ಕುಳಿತ ತಿಮ್ಮನನ್ನು, "ಏನ್ ತಿಮ್ಮಾ, ಈ ವರ್ಷನಾದ್ರೂ ಮದುವೆ ಪಾಯಸ ಇದಯಾ ಹೇಗೆ?" ಎಂದು ಕೇಳಿದರು.

"ನೋಡ್ಬೇಕು ನಾಯ್ಕರೆ, ಎಲ್ಲಾದ್ರೂ ಹೊಂದಿಕೆಯಾದ್ರೆ ಈ ಮಳೆಗಾಲದಲ್ಲಿ ನೋಡ್ಬೇಕು" ಎಂದ ತಿಮ್ಮ.

"ಯಾಕೋ ನಿನಗೆ ಮದುವೆಯಾಗಲು ಮಳೆಗಾಲನೇ ಬೇಕೇನೋ" ಎಂದು ನಗುತ್ತಾ ಕೇಳಿದರು ನಾಯ್ಕರು.

"ಹಂಗಲ್ರಾ ನಾಯ್ಕರೇ, ಉಳಿದ ಟೈಮಲ್ಲಿ ನನಗೆ ಬಿಡುವೆಲ್ಲಿರತ್ತೆ ಹೇಳಿ. ಮಳೆಗಾಲ ಯಾಕಂದ್ರೆ ಆ ಟೈಮಲ್ಲಿ ಯಕ್ಷಗಾನನೂ ಇರಲ್ಲ, ಮರ ಹತ್ತಕ್ಕೂ ಆಗಲ್ಲ. ಅದಕ್ಕೆ ಆ ಟೈಮಲ್ಲೇ ನಾನು ಸ್ವಲ್ಪ ಆರಾಂ ಆಗಿ ಇರೋದಲ್ವೇ" ಎಂದು ತಿಮ್ಮ ಹೇಳಿದಾಗ ಸುಬ್ರಾಯ ನಾಯ್ಕರಿಗೆ ನಗೆ ತಡೆದು ಕೊಳ್ಳಲು ಆಗದೇ "ಆಯ್ತಪ್ಪಾ ನಿಂಗೆ ಯಕ್ಷಗಾನ ಇದ್ರೆ ಮದುವೆನು ಬೇಡ, ಹೆಂಡತಿನು ಬೇಡ." ಎಂದು ಹೇಳಿ ನಕ್ಕರು.

ಅವರ ಮಾತಿನ ನಡುವೆಯೇ ಪಾರ್ವತಿ ಊಟ ಮುಗಿಸಿ, ಚಹಾ ಮಾಡಿ ಇಬ್ಬರಿಗೂ ತಂದಿಟ್ಟಳು. ಚಹಾ ಕುಡಿದು, ಇನ್ನೊಂದು ಬೀಡಿ ಹೊತ್ತಿಸಿ ಎಳೆದು, "ನಾಯ್ಕರೆ ನಂಗೆ ಆಮೇಲೆ ಲೇಟಾಗುತ್ತೆ ಮರ ಹತ್ತತಿನಿ ಆಯ್ತಾ" ಎನ್ನುತ್ತಾ ಅವರ ಉತ್ತರಕ್ಕೂ ಕಾಯದೇ ಮತ್ತೆ ಮರ ಹತ್ತಲು ಅಣಿಯಾದ. ಉಳಿದ ಮರಗಳನ್ನು ಹತ್ತಿ ಕಾಯಿ, ಒಣಗಿದ ಹೆಡೆ ಕೀಳುವುದರೊಳಗೆ ಸಂಜೆಯ ಭಾನು ಕೆಂಪಾಯಿತು. ಬೇಗ ಬೇಗ ಮರದಿಂದ ಕಿತ್ತ ಕಾಯಿಗಳಲ್ಲೆವನ್ನು ಕೊಟ್ಟಿಗೆಯ ಮೇಲಿನ ಅಟ್ಟಕ್ಕೆ ಸಾಗಿಸಿ, ಮತ್ತೆ ಮನೆಯ ಎದುರಿಗೆ ಬಂದು "ನಾಯ್ಕರೇ ನಾನು ಬರ್ತಿನಿ ಆಯ್ತಾ" ಎಂದ.

"ಎಲ್ಲಿಗೋ ಮಾರಾಯಾ, ನಿಲ್ಲೋ ಬರ್ತಿನಿ." ಎಂದು ಹೇಳುತ್ತಾ ನಾಯ್ಕರು ಕೊಟ್ಟಿಗೆಗೆ ಹೋಗಿ ಕೈಯಲ್ಲಿ ಏಳೆಂಟು ತೆಂಗಿನ ಕಾಯಿ ಹಿಡಿದು ಹೊರಗೆ ಬಂದರು. ನಾಯ್ಕರ ಕೈಯಲ್ಲಿದ್ದ ತೆಂಗಿನ ಕಾಯಿಯನ್ನು ನೋಡಿದ ತಿಮ್ಮ,  "ನಾಯ್ಕರೇ ನನಗೆ ಕಾಯಿ ಬೇಡ, ನಾನು ಈಗ ಹನುಮಟ್ಟಾಗೆ ಯಕ್ಷಗಾನಕ್ಕೆ ಹೋಗ್ಬೇಕು. ಈ ಕಾಯಿ ತೆಗೆದುಕೊಂಡು ಅಲ್ಲಿಗೆ ಹೋಗಿ ಏನು ಮಾಡಲಿ, ಕೊಡೋದಿದ್ರೆ ರೊಕ್ಕನೇ ಕೊಡಿ" ಎಂದ ತಿಮ್ಮ.

"ಹೋ ಹೌದೆ, ಆಯ್ತ ಹಂಗಾರೆ ಬಂದೆ ನಿಲ್ಲು" ಎಂದು ಹೇಳಿ ತಾವು ತಂದ ತೆಂಗಿನ ಕಾಯಿಗಳನ್ನು ಅಲ್ಲಿಯೇ ಜಗುಲಿಯ ಮೇಲಿಟ್ಟು, ಒಳಗೆ ಹೋಗಿ ಅಂಗಿಯ ಕಿಸೆಯಿಂದ ಹತ್ತರ ಎಂಟ ಹತ್ತು ನೋಟುಗಳನ್ನು ತಂದು ತಿಮ್ಮನ ಕೈಗಿತ್ತರು.

ಅದಕ್ಕಾಗಿಯೇ ಇಷ್ಟೊತ್ತು ನಿಂತ ತಿಮ್ಮ, ರೊಕ್ಕ ಕೈಗೆ ಬರುತ್ತಿದ್ದಂತೆಯೇ, "ನಾಯ್ಕರೇ ಬರ್ತಿನಿ ಆಗಾ" ಎಂದು ನಾಯ್ಕರ ಉತ್ತರಕ್ಕೂ ಕಾಯದೇ ಹನುಮಟ್ಟಾದತ್ತ ಹೊರಟ. ಅಲ್ಲಿ ಅಂದು ನಡೆಯಲಿರುವ "ಬಸ್ಮಾಸುರ ಮೋಹಿನಿ" ಎನ್ನುವ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಕುಳಿತು ಪೇನು ಪೆಟ್ಟಿಗೆ (ಹಾರ್ಮೋನಿಯಂ) ನುಡಿಸಲು.

--ಮಂಜು ಹಿಚ್ಕಡ್

Friday, August 15, 2014

ಗರುಡಾ ಮೂಲೆಯಲ್ಲಿ ಕಳೆದ ಆ ಒಂದು ದಿನ!

ನಾನು ಚಿಕ್ಕವನಿದ್ದಾಗ, ನನ್ನಪ್ಪ ಸಾಮಾನು ತರಲು ಅಂಕೋಲೆಗೆ ಹೋಗಲಿ, ಗದ್ದೆಗೆ ಹೋಗಲಿ, ಬತ್ತವನ್ನು ಅಕ್ಕಿ ಮಾಡಿಸಲು ಹೋಗಲಿ ಅಥವಾ ಗೋಧಿ ಹಿಟ್ಟು ಮಾಡಿಸಲು ಹಿಟ್ಟಿನ ಗಿರಣಿಗೆ ಹೋಗಲಿ, ಮೀನು ತರಲು ಹೋಗಲಿ, ಯಾರದ್ದಾದರೂ ಸಂಬಂಧಿಕರ ಮನೆಗೆ ಹೋಗಲಿ ಅವನನ್ನು ನಾನು ಬಾಲದಂತೆ ಹಿಂಬಾಲಿಸಿಕೊಂಡು ನಡೆದು ಬಿಡುತ್ತಿದ್ದೆ. ಒಮ್ಮೊಮ್ಮೆ ಎಲ್ಲಾದರೂ ದೂರದ ಊರಿಗೆ ಹೋಗುವುದ್ದಿದ್ದಲ್ಲಿ ಅಥವಾ ತುಂಬಾ ಹೊತ್ತು ನಡೆದು ಕೊಂಡು ಹೋಗುವುದಿದ್ದರೆ, ನನಗೆ ಬರುವುದು ಬೇಡಾ ಅಂತಾ ಹೇಳಿ ಬಿಟ್ಟು ಹೋದರೂ ಕೂಡ ನಾನು ಅಳುತ್ತಾ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತಿದ್ದೆ. ಹೀಗೆ ಒಮ್ಮೆ ನಮ್ಮ ತಂದೆ ಗರುಡಾಮೂಲೆ ಎನ್ನುವ ಊರಿಗೆ ಯಾವುದೋ ಕೆಲಸದ ಮೇಲೆ ಹೊರಟಿದ್ದರು ಅದರ ಜೊತೆಗೆ ಗದ್ದೆ ಕಟಾವಿಗಾಗಿ ಅಲ್ಲಿಯ ಜನರಿಗೆ ಹೇಳುವ ಉದ್ದೇಶವೂ ಇತ್ತು. ನಾನಿನ್ನೂ ಆಗ ಆರೇಳು ವರ್ಷದ ಹುಡುಗ. ಅವರು ಹಾಗೆ ಹೊರಟು ನಿಂತಿದ್ದೇ ತಡ ನಾನು ಬರುತ್ತೇನೆ ಎಂದು ಹಟ ಹಿಡಿದೆ. ಅವರು ಬರುವುದು ಬೇಡ ಎಂದು ಹೇಳಿ ನನ್ನನ್ನು ಮನೆಯಲ್ಲೇ ಬಿಟ್ಟು ಹೊರಟರು. ನಾನು ಬಿಡಲಿಲ್ಲ ಅವರ ಹಿಂದೆ ಓಡಿದೆ, ಅವರಿನ್ನೂ ನಮ್ಮೂರ ಬಸ್ ನಿಲ್ದಾಣವನ್ನು ದಾಟಿರಲಿಲ್ಲ, ನಾನು ಓಡಿ ಹೋಗಿ ಅವರನ್ನು ಹಿಡಿದೆ. ನಾನು ಹಿಂದೆ ಬಿದ್ದಿದ್ದನ್ನು ನೋಡಿ ಮತ್ತೆ ಒಂದೆರಡು ಬಾರಿ ಬೈದು ಹೊರಟು ಹೋಗುವಂತೆ ಹೇಳಿದರೂ ನಾನು ಬಿಡಲಿಲ್ಲ, ಅವರ ಹಿಂದೆನೇ ಮತ್ತೆ ಹೊರಟೆ. ನಾನು ವಾಪಸ್ ಮನೆಗೆ ಹೋಗದ್ದನ್ನು ನೋಡಿ ತಾವಾಗೇ ತಮ್ಮ ಜೊತೆ ಕರೆದುಕೊಂಡು ಹೋದರು.

ಗರುಡಾಮೂಲೆ ಇರುವುದು ನಮ್ಮುರಿನಿಂದ ೫-೬ ಕಿಲೋ ಮೀಟರ್ ದೂರದಲ್ಲಿದ್ದು, ತಳಗದ್ದೆಯಿಂದ ಇನ್ನೂ ಎರಡು ಕಿಲೋ ಮೀಟರ್ ದೂರಕ್ಕೆ ನಡೆದು ಹೋಗಬೇಕು. ಗರುಡಾಮೂಲೆ ಇದು ಸುತ್ತಲು ಸಹ್ಯಾದ್ರಿ ಪರ್ವತ ಶ್ರೇಣಿಗಳಿಂದ ಸುತ್ತುವರೆದಿರುವ ಸುಂದರವಾದ ಊರು. ಅಲ್ಲೊಂದು ಇಲ್ಲೊಂದು ಚಿಕ್ಕ ಪುಟ್ಟ ಹಂಚಿನ ಮನೆಗಳು. ಪ್ರತಿ ಮನೆಯ ಮುಂದು ಸಗಣಿಯಿಂದ ಸಾರಿಸಿದ ಅಂಗಳ, ಆ ಅಂಗಳದ ಮುಂದೆ ಆ ಮನೆಗೆ ಸೇರಿದ ತೋಟ. ಆ ತೋಟದಿಂದ ಮುಂದೆ ಹೋದರೆ ಅವರವರಿಗೆ ಸಂಬಂಧಿಸಿದ ಗದ್ದೆಗಳು. ಆ ಗದ್ದೆಯ ಒಂದು ಬದಿಗೆ ಕಬ್ಬಿನ ತೋಟ. ಕಬ್ಬಿನ ತೋಟದ ಪಕ್ಕದಲ್ಲಿ ಮನೆಯ ಉಪಯೋಗಕ್ಕಾಗಿ ಬಸಲೆ, ಮೂಲಂಗಿ, ಗೆಣಸು, ಈರುಳ್ಳಿ, ಚವಳಿ, ಹರಿಗೆ ಮುಂತಾದ ತರಕಾರಿಗಳನ್ನು ಬೆಳೆದ ಒಂದು ಕೈದೋಟ. ಮನೆಯ ಹಿಂಬಾಗದಲ್ಲಿ ಬೆಟ್ಟ. ಆ ಬೆಟ್ಟದಲ್ಲಿ ಮೊದ ಮೊದಲು ವಿರಳವಾಗಿ ಸಿಗುವ ಮರಗಳು ಒಳಗೆ ಹೋಗುತ್ತಿದ್ದಂತೆ ದಟ್ಟವಾಗುತ್ತಾ ಹೋಗುತ್ತವೆ. ಸುತ್ತಲು ಮನೆಗಳೇ ತುಂಬಿರುವ ಊರಿನಲ್ಲಿ ಬೆಳೆದ ನನಗೆ ಇವೆಲ್ಲವನ್ನು ನೋಡಿದಾಗ ಏನೋ ಒಂದು ರೀತಿಯ ರೋಮಾಂಚನ. ಅದು ನನಗೆ ಪ್ರಥಮ ಅನುಭವ ಕೂಡ. ಗರುಡಾಮೂಲೆ ಕರಾವಳಿ ಸೀಮೆಯ ಭಾಗವಾದರೂ ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದುದರಿಂದ ಅಪ್ಪಟ ಮಲೆನಾಡಿನಂತೆ ತೋರುತ್ತಿತ್ತು. ಅದಕ್ಕೂ ಮೊದಲು ನಾನು ಅಂತಹ ಬೆಟ್ಟಗಳನ್ನು ನೋಡದ್ದರಿಂದ ನನಗೆಲ್ಲವೂ ಆ ಪಯಣದ ಅನುಭವ ರೋಮಾಂಚನಕಾರಿಯಾಗೇ ಇತ್ತು.

ನಾನು ನಮ್ಮ ತಂದೆ ಗರುಡಾಮೂಲೆ ಸೇರಿದಾಗ ಬಹುಶಃ ೯ ರಿಂದ ೧೦ ಗಂಟೆಯ ಒಳಗಿರಬಹುದು. ನಾವು ಅಲ್ಲಿಗೆ ಹೋದ ತಕ್ಷಣ ನಮ್ಮ ತಂದೆ ನನ್ನನ್ನು ಅವರ ಪರಿಚಯದವರ ಮನೆಗೆ ಕರೆದುಕೊಂಡು ಹೋಗಿ, ನನ್ನನ್ನು ಆ ಮನೆಯಲ್ಲಿರುವ ಅಜ್ಜಿಗೆ ಪರಿಚಯಿಸಿ ನನ್ನನ್ನು ಅಲ್ಲೇ ಇರಲು ಹೇಳಿ ತಾವು ಎಲ್ಲಿಗೋ ಹೋಗಿ ಬರುವುದಾಗಿ ಹೇಳಿ ಹೊರಟು ಹೋದರು. ಆ ಮನೆಯಲ್ಲಿ ಆಗ ಇದ್ದುದು ಒಂದು ಅಜ್ಜಿ ಹಾಗೂ ನನ್ನದೇ ವಯಸ್ಸಿನ ಅವಳ ಮೊಮ್ಮಗ. ಮನೆಯಲ್ಲಿರುವ ಉಳಿದ ಇತರರು ಯಾವುದೋ ಕೆಲಸ ಮೇಲೆ ಹೊರಗೆ ಹೋಗಿರಬೇಕು, ಹಾಗಾಗಿ ಅವರಿರ್ವರನ್ನು ಬಿಟ್ಟು ಯಾರು ಇರಲಿಲ್ಲ.

ನಾನು ಹಾಗೂ ಆ ಹುಡುಗ ಆ ಮನೆಯ ಅಂಗಳದಲ್ಲಿ ಆಟವಾಡುತ್ತಾ ಇದ್ದಾಗ ಅಜ್ಜಿ ನಮಗೆ ತೋಟಕ್ಕೆ ಹೋಗಿ ಒಂದಿಷ್ಟು ಮೂಲಂಗಿ ಕಿತ್ತುಕೊಂಡು ಬರುವಂತೆ ತಿಳಿಸಿದಳು. ನಮಗೆ ಅಷ್ಟು ಹೇಳಿದ್ದೇ ತಡ, ಇಬ್ಬರೂ ತೋಟಕ್ಕೆ ಓಡಿದೆವು. ಅಲ್ಲಿಯ ಕಬ್ಬಿನ ತೋಟದಿಂದ ಒಂದು ಕಬ್ಬು ಮುರಿದುಕೊಂಡು ಮೂಲಂಗಿ ಬೆಳೆದ ಕಡೆ ಬಂದೆವು. ಐದಾರು ಮೂಲಂಗಿ ಅಂತಾ ಅಜ್ಜಿ ಹೇಳಿದರೂ ನಾವು ೮-೧೦ ಮೂಲಂಗಿ ಕಿತ್ತು ಬಿಟ್ಟೆವು. ಕಿತ್ತ ಮೂಲಂಗಿಯನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಕಬ್ಬು ತಿನ್ನುತ್ತಾ ಮನೆಗೆ ಬಂದು ಅಜ್ಜಿಗೆ ಮೂಲಂಗಿ ಕೊಟ್ಟವು. "ಏಕೆ ಇಷ್ಟೊಂದು ಮೂಲಂಗಿ ಕಿತ್ತು ತಂದಿದ್ದಿರಾ" ಎಂದು ಅಜ್ಜಿ ಬಯ್ಯುತ್ತಿದ್ದನ್ನು ಲೆಕ್ಕಿಸದೇ ಬೆಟ್ಟದ ಕಡೆ ಓಡಿದೆವು. ನನಗೆ ಬೆಟ್ಟ ಹೇಗಿರುತ್ತೆ ಅಂತಾ ಮೊದಲು ಗೊತ್ತಿರದ ಕಾರಣ ಆ ಹುಡುಗ ಕರೆದು ಕೊಂಡು ಹೊದಲ್ಲೆಲ್ಲಾ ಹೋದೆ.

ಆತ ನನಗೆ ಪ್ರತಿ ವರ್ಷ ಅಲ್ಲಿ ಗಾಣ ನಡೆಯುವ ಸ್ಥಳ, ಅಲ್ಲಿ ಕಬ್ಬಿನ ಹಾಲು ಕಾಸಿ ಅವೆ ಬೆಲ್ಲ ಮಾಡುವ ಒಲೆ ಎಲ್ಲವನ್ನು ತೋರಿಸಿ ಬೆಟ್ಟ ಹತ್ತಿಸಿದ. ಆತ ಅಲ್ಲೇ ಹುಟ್ಟಿ ಬೆಳೆದಿದ್ದರಿಂದ ಅವನಿಗೆ ಆ ಪ್ರದೇಶವಲ್ಲ ಚಿರಪರಿಚಿತವಾದಂತಿತ್ತು. ಆತ ಅಲ್ಲಿ ಹರಿಯುವ ಜರಿ, ಅದರ ಸುತ್ತಲು ಬೆಳೆದ ಕಾಡು ಎಲ್ಲವನ್ನು ತೋರಿಸುತ್ತಾ ಹೋದ. ನಾವು ಹಾಗೆ ಕಾಡುಸುತ್ತುತ್ತಿದ್ದಾಗ ಆ ಕಾಡಿನಲ್ಲಿ ಎರಡು ದೊಡ್ಡ ಹಾವುಗಳು ತೆಕ್ಕೆ ಹಾಕಿಕೊಂಡು ಬುಸ್, ಬುಸ್ ಎನ್ನುತ್ತಾ ಹೊರಳಾಡುತ್ತಿದ್ದುದ್ದನ್ನು ನೋಡಿ ನಾನು ಮೈಮರೆತು ನೋಡುತ್ತಾ ನಿಂತು ಬಿಟ್ಟಿದ್ದೆ. ಆ ಹುಡುಗ ಇಲ್ಲಾ ಅಂದರೆ ಅಲ್ಲೇ ನಿಂತು ಬಿಡುತ್ತಿದ್ದನೇನೋ. ಆ ಹುಡುಗ ನನ್ನನ್ನು ಎಚ್ಚರಿಸಿ, "ಹಾಗೆಲ್ಲಾ ನಾವು ನೋಡಬಾರದು, ಹಾಗೆ ನೋಡಿದರೆ ನಮಗೆ ಪಾಪ ಬರುತ್ತೆ ಅಂತೆ ನಮ್ಮ ಅಜ್ಜಿ ಹೇಳುತ್ತಿದ್ದಳು" ಎಂದು ನನ್ನನ್ನು ಹೆದರಿಸಿ ಮನೆಗೆ ಕರೆದುಕೊಂಡು ಬಂದ.

ನಾವು ಅಲ್ಲೆಲ್ಲಾ ಸುತ್ತಾಡಿ ಮನೆ ತಲುಪುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ನಾವು ಮನೆ ತಲುಪಿದರೂ ನಮ್ಮ ತಂದೆಯಿನ್ನು ಅಲ್ಲಿಗೆ ಬಂದಿರಲಿಲ್ಲ. ನಾವು ಬರುತ್ತಿದ್ದಂತೆ, ಅಜ್ಜಿ ಆ ಹುಡುಗನಿಗೆ ಸ್ನಾನ ಮಾಡಲು ಹೇಳಿ, ಅವನ ಸ್ನಾನ ಮುಗಿಯುತ್ತಿದ್ದಂತೆ ನಮ್ಮಿಬ್ಬರನ್ನು ಊಟಕ್ಕೆ ಕರೆದಳು. ನಾವು ಊಟದ ಮನೆ ಸೇರಿದಾಗ ನಮಗಾಗಿ ದೊಡ್ಡ ದೊಡ್ಡ ಕಂಚಿನ ಬಟ್ಟಲುಗಳಲ್ಲಿ ಗಂಜಿಯನ್ನು ಬಡಿಸಿ, ಅದರ ಮುಂದೆ ಚಿಕ್ಕ ಚಿಕ್ಕ ಬಟ್ಟಲುಗಳಲ್ಲಿ ಮೂಲಂಗಿ ಪಲ್ಯೆ ಹಾಕಿದ್ದಳು. ತುಂಬಾ ರುಚಿ ಕಟ್ಟಾಗಿ ಮಾಡಿದ್ದಳು ಅಜ್ಜಿ. ನಾವು ಆ ಬಟ್ಟಲಲ್ಲಿದ್ದ ಗಂಜಿಯನ್ನೆಲ್ಲ ಕಾಲಿ ಮಾಡಿ ಕೈ ತೊಳೆದು ಮತ್ತೆ ತೋಟದ ಕಡೆ ಹೊರೆಟವು. ತೋಟ ಸುತ್ತಿ ಬರುವ ಹೊತ್ತಿಗೆ ನಮ್ಮ ತಂದೆ ಆ ಮನೆಗೆ ಬಂದು ನನಗಾಗಿ ಕಾಯುತ್ತಾ ಕುಳಿತಿದ್ದರು. ನಾನು ತೋಟದಿಂದ ಬಂದ ಕೆಲವೇ ಸಮಯದಲ್ಲೇ ನಾನು ಮತ್ತು ನಮ್ಮ ತಂದೆ ಅಲ್ಲಿಂದ ಹೊರಟು ನಿಂತೆವು. ನಾವು ಅಲ್ಲಿಂದ ಬಿಟ್ಟು ಮನೆ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಈ ಘಟನೆ ನಡೆದು ಅದಾಗಲೇ ೨೫ ವರ್ಷಗಳು ಕಳೆದು ಹೋದರು ನನಗಿನ್ನು ಅದು ತುಂಬಾ ಇತ್ತೀಚೆಗೆ ನಡೆದಂತಿದೆ.

ಮಂಜು ಹಿಚ್ಕಡ್

Wednesday, August 6, 2014

ನಾಚಿದ ಅವಳ ಮುಖ!

ನಾಚಿ ತಗ್ಗಿಸಿದ
ಅವಳ ಮುಖ
ಇಳಿ ಸಂಜೆಯ
ನಾಚಿಕೆ ಮುಳ್ಳಿನ
ಎಲೆಯಂತೆ.

--ಮಂಜು ಹಿಚ್ಕಡ್