Saturday, July 26, 2014

ಆಗಾಗ ನೆನಪಾಗುವ ಬೆಳಸೆ ಅಜ್ಜಿ!

ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,ಬೆಳಸೆ ಊರಿಗೂ ಹಿಂದಿನಿಂದ ಇಂದಿನವರೆಗೂ ಏನೋ ಒಂದು ರೀತಿಯ ಅವಿನಾಭಾವ ಸಂಭಂದ. ನಮ್ಮ ಊರಿನಲ್ಲಿ ಹಬ್ಬ ಹರಿದಿನಗಳಿರಲಿ, ಮದುವೆ ಸಮಾರಂಭಗಳಿರಲಿ ಅವರು ನಮ್ಮೂರಿಗೆ ಬರುವುದು, ನಾವು ಸಹಾಯಕ್ಕಾಗಿ ಅಲ್ಲಿಗೆ ಹೋಗುವುದು ಸರ್ವೇ ಸಾಮಾನ್ಯ.
ಬೆಳಸಯ ಮಧ್ಯಭಾಗದಿಂದ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ವಿಠೋಬ ದೇವಸ್ತಾನವಿದ್ದು, ಆ ದೇವಸ್ತಾನದ ಹಿಂಬಾಗದಲ್ಲಿ ಒಂದು ಹಳೆಯ ಮನೆ. ಆ ಮನೆಯಲ್ಲಿ ಓರ್ವ ಅಜ್ಜಿ ವಾಸಿಸುತ್ತಿದ್ದಳು. ಆಕೆಯ ಗಂಡ ತೀರಿ ಹೋಗಿ ಅದೆಷ್ಟೋ ವರ್ಷಗಳಾಗಿದ್ದವು. ಅದು ಅವಳದೇ ಮನೆ ಎಂದು ನನಗೆ ತಿಳಿದದ್ದು ಹಲವು ವರ್ಷಗಳ ನಂತರವೇ. ಆಕೆಯ ಹೆಸರು ನಮಗೆ ತಿಳಿಯದ ಕಾರಣ ನಾವೆಲ್ಲರೂ ಅವಳನ್ನೂ ಬೆಳಸೆ ಅಜ್ಜಿ ಎಂದೇ ಕರೆಯುತ್ತಿದ್ದೆವು. ಆಕೆ ಜಾತಿಯಿಂದ, ಗುಣದಿಂದ ಶ್ರೀಮಂತಳಾಗಿದ್ದರೂ, ಹಣ ಐಶ್ವ್ರರ್ಯದಿಂದ ಬಡವಳಾಗಿದ್ದಳು. ಜಾತಿಯಿಂದ, ಗುಣದಿಂದ ಎಷ್ಟೇ ಶ್ರೀಮಂತವಾಗಿದ್ದರೂ, ಅದರಿಂದ ಹೊಟ್ಟೆ ಹೊರೆಯಲು ಸಾಧ್ಯವಿಲ್ಲ ಅಲ್ಲವೇ? ಅದು ವಯಸ್ಸಾಗಿದ್ದರಂತೂ ಇನ್ನೂ ಕಷ್ಟ.
ಆಕೆಯೆಂದರೆ ನಮಗೆ ಅದೇನೋ ಪ್ರೀತಿ. ನಾವಿನ್ನು ಆಗ ಚಿಕ್ಕ ಮಕ್ಕಳು. ಸರಿಯಾಗಿ ಚಡ್ಡಿ ಹಾಕಿಕೊಳ್ಳಲು ಬಾರದ ವಯಸ್ಸು. ಆಗ ನಮ್ಮ ಮನೆಗೆ ಈ ಅಜ್ಜಿ ಆಗಾಗ ಬಂದು ಹೋಗುತ್ತಿದ್ದಳು. ಬರುವಾಗ ನಮಗೆ ಪೆಪ್ಪರಮೆಂಟನ್ನೋ, ಹುರಿದ ಕಡಲೆಯನ್ನೋ ತೆಗೆದುಕೊಂಡು ಬರುತ್ತಿದ್ದಳು. ನಮಗೆ ಆಗ ಅವೇ ಅಮ್ರತವಿದ್ದಂತೆ. ಆಕೆ ಬಂದು ಒಂದೆರಡು ಗಂಟೆ ನಮ್ಮ ಮನೆಯಲ್ಲಿದ್ದು ಹೋಗುತ್ತಿದ್ದಳು. ಎಷ್ಟೇ ಹೊತ್ತು ಇದ್ದರೂ ನಮ್ಮ ಮನೆಯಲ್ಲಿ ಊಟ, ತಿಂಡಿ ಮಾಡುತ್ತಿರಲಿಲ್ಲ. ಹೋಗುವಾಗ ನಮ್ಮಮ್ಮ ಸ್ವಲ್ಪ ಅಕ್ಕಿಯನ್ನೋ ಅಥವಾ ಮನೆಯ ಹಿತ್ತಲಲ್ಲಿ ಬೆಳೆದ ತರಕಾರಿಗಳನ್ನೋ ಕೊಟ್ಟು ಕಳಿಸುತ್ತಿದ್ದಳು. ಆಕೆ ಕನಿಷ್ಟ ತಿಂಗಳಿಗೊಮ್ಮೆಯಾದರೂ ನಮ್ಮ ಮನೆಗೆ ಬಂದು ಹೋಗುತ್ತಿದ್ದಳು. ನನಗಂತೂ ಯಾವಾಗಲು ಅವಳು ಧರಿಸುತ್ತದ್ದ ಕನ್ನಡಕದ ಮೇಲೆಯೇ ಕಣ್ಣು. ಆ ಕನ್ನಡಕವನ್ನು ಆಕೆ ಏಕೆ ಧರಿಸುತ್ತಾಳೆ? ನಾವೇಕೆ ಅದನ್ನು ಧರಿಸುವುದಿಲ್ಲ ಎನ್ನುವ ಪ್ರಶ್ನೆಗಳನ್ನು ಕೇಳಿ ತಲೆಕೆಡಿಸುತ್ತಿದ್ದೆ. ನನಗೆ ಆ ಕನ್ನಡಕವನ್ನು ಕೊಟ್ಟು ಹೋಗುವಂತೆಯೂ ಬೇಡುತಿದ್ದೆ ಕೂಡ. ಒಮ್ಮೆ ನನ್ನ ಒತ್ತಾಯಕ್ಕೆ ಮಣಿದು ತಾನು ಬರುವಾಗ, ಯಾವುದೋ ಜಾತ್ರೆಯಿಂದ ನನಗೊಂದು ಬಣ್ಣದ ಕನ್ನಡಕವನ್ನು ತಂದು ಕೊಟ್ಟಿದ್ದಳು. ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ.
ಆಕೆ ಹಲವಾರು ಬಾರಿ ನಮ್ಮ ಮನೆಗೆ ಬಂದು ಹೋಗುತ್ತಿದ್ದರೂ ಆಕೆ ಯಾರು? ಯಾಕೆ ಹೀಗೆ ಬರುತ್ತಿರುತ್ತಾಳೆ? ಆಕೆ ಏಕೆ ನಮ್ಮ ಮನೆಯಲ್ಲಿ ಊಟ ಮಾಡುವುದಿಲ್ಲ? ಆಕೆಗೇಕೆ ಮಕ್ಕಳೆಂದರೆ ಅಷ್ಟೊಂದು ಪ್ರೀತಿ? ಎಂದು ತಿಳಿದಿರಲಿಲ್ಲ. ಆ ವಯಸ್ಸಿನಲ್ಲಿ ಅದನ್ನು ತಿಳಿಯುವ ವ್ಯವಧಾನವೂ ಇರಲಿಲ್ಲ. ಹುಡುಗ ಮುಂಡೇವು ತಿನ್ನುವುದು, ಆಡುವುದು ಬಿಟ್ಟರೆ ಇನ್ನೇನು ತಿಳಿಯುತ್ತದೆ? ನಮಗೆ ಆಕೆ ಬೆಳಸೆ ಅಜ್ಜಿ ಅಂತ ಗೊತ್ತಿತ್ತೇ ಹೊರತು, ಬೆಳಸಯಲ್ಲಿ ಆಕೆಯ ಮನೆ ಎಲ್ಲಿ ಎನ್ನುವುದು ತಿಳಿದಿರಲಿಲ್ಲ.
ಆಕೆ ಹೀಗೆ ತಿಂಗಳೂ ಬರುತ್ತಿದ್ದವಳೂ, ಕೊನೆಗೆ ಕಡಿಮೆ ಮಾಡುತ್ತಾ ಹೋಗಿ, ಬರುವುದನ್ನೇ ನಿಲ್ಲಿಸಿ ಬಿಟ್ಟಿದ್ದಳು. ಆವಳು ಊರಿಗೆ ಬರುವುದನ್ನು ನಿಲ್ಲಿಸಿದ ಹೊತ್ತಿಗೆ ನಾವು ಹೈಸ್ಕೂಲು ಮೆಟ್ಟಿಲೇರಿದ್ದೆವು, ಆಗ ತಾನೆ ತಿಳುವಳಿಕೆ ಮೂಡುತ್ತಿದ್ದ ಕಾಲ. ಅವಳು ಊರಿಗೆ ಬರುವುದನ್ನು ಬಿಟ್ತು ಆಗಲೇ ಒಂದೆರಡು ವರ್ಷಗಳೇ ಕಳೆದಿದ್ದವು. ಒಮ್ಮೆ ಹೀಗೆ ಅಮ್ಮನ ಜೊತೆಯಲ್ಲಿ ಬೆಳಸಗೆ ಹೋದಾಗ ಆಕೆ ಸಿಕ್ಕಳು. ಆಗ ಆಕೆ ನನ್ನನ್ನೂ, ನಮ್ಮಮ್ಮನನ್ನೂ ನೋಡಿ ತುಂಬಾ ಕುಸಿ ಪಟ್ಟಳು. ನನಗೆ ಬೇಡ ಅಂದರೂ ಹೋಗಿ ಪಕ್ಕದ ಅಂಗಡಿಯಿಂದ ಬಿಸ್ಕೆಟ್ ಪ್ಯಾಕೆಟ್ ತಂದು ಕೊಟ್ಟಳು. ಆಗ ಆಕೆಯ ಜೊತೆ ಯಾರೋ ದೂರದ ಸಂಬಂದಿಗಳಿದ್ದು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಕೇಳಿ ತಿಳಿದ ನಮ್ಮ ಅಮ್ಮನಿಗೆ ಸ್ವಲ್ಪ ಸಮಾಧಾನವಾಗಿತ್ತು.
ನಾನು ಊರಿಗೆ ಬರುತ್ತಾ ನಮ್ಮಮ್ಮನಿಗೆ ಆಕೆ ಯಾರು, ಈಗೇಕೆ ನಮ್ಮ ಮನೆಗೆ ಬರುವುದಿಲ್ಲ ಎಂದು ಕೇಳಿದಾಗ. ನಮ್ಮ ಅಮ್ಮ ಆಕೆಯ ಬಗ್ಗೆ ಹೇಳತೊಡಗಿದಳು. ಆಕೆಯ ಹೆಸರು ಅದೇನು ಅಂತಾ ನಮ್ಮ ಅಮ್ಮನಿಗೂ ತಿಳಿದಿರಲಿಲ್ಲ. ಆಗಾಗ ಆಕೆ ಬರುತ್ತಿದ್ದುರಿಂದ ಅಕ್ಕ-ತಂಗಿ ಅಂತಾನೇ ಕರೀತಾ ಇದ್ದರೂ. ಸುಮಾರು ವರ್ಷಗಳ ಹಿಂದೆ ಆಕೆಯ ಗಂಡನನ್ನು ದೂರದ ಶಿರ್ಶಿಯೋ, ಸಿದ್ದಾಪುರದಿಂದಲೋ ಬೆಳಸೆಯ ದೇವಸ್ಥಾನಗಳ ಪೂಜೆಗಾಗಿ ಕರೆದುಕೊಂಡು ಬಂದು, ಬೆಳಸೆಯ ವಿಠೋಬ ದೇವಸ್ಥಾನದ ಹಿಂದುಗಡೆ ಇರುವ ಮನೆಯಲ್ಲಿ ವಾಸ್ಥವ್ಯಕ್ಕೆ ಎಡೆ ಮಾಡಿ ಕೊಟ್ಟಿದ್ದರು. ಆತ ಬೆಳಸಗೆ ಬಂದಾಗ ಆತನಿಗೆ ೧೭-೧೮ ವರ್ಷ. ಕ್ರಮೇಣ ಆತ ದೇವಸ್ಥಾನಗಳ ಪೂಜೆ ಮಾಡಿಕೊಂಡು ಅಲ್ಲಿಯೇ ನೆಲೆಸಿದನಂತೆ. ಆತ ಸೂಕ್ತ ವಯಸ್ಸಿಗೆ ಬಂದ ಮೇಲೆ ಮನೆಯವರೆಲ್ಲ ಸೇರಿ ಆಕೆ ಯೊಂದಿಗೆ ಮದುವೆ ಮಾಡಿಸಿದ್ದರಂತೆ.
ಮದುವೆಯಾಗಿ ಅದೆಷ್ಟು ವರ್ಷಕಳೆದರೂ ಅವರಿಗೆ ಮಕ್ಕಳಗಲಿಲ್ಲವಂತೆ. ಮಕ್ಕಳಿಲ್ಲದ್ದರಿಂದ ಅವಳಿಗೆ ಮಕ್ಕಳೆಂದರೆ ಆಕೆಗೆ ತುಂಬಾ ಪ್ರೀತಿಯಂತೆ. ಮಕ್ಕಳಿಲ್ಲದಿದ್ದರೂ ಒಳ್ಳೆಯ ರೀತಿಯಲ್ಲೇ ಸಾಗುತಿದ್ದ ಅವಳ ದಾಂಪತ್ಯಕ್ಕೆ ಅದೇನಾಯಿತು ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದ ಹಾಗೆ ಅವಳ ಗಂಡನಿಗೆ ಯಾವುದೋ ಕಾಯಿಲೆ ಬಂದು ತೀರಿಕೊಂಡನಂತೆ. ಅವಳ ಗಂಡ ತೀರಿಕೊಂಡ ಮೇಲೆ, ಗಂಡನ ಕಡೆಯವರಾಗಲೀ, ಆಕೆಯ ಕಡೆಯವರಾಗಲೀ ಬಂದು ಹೋಗುವುದನ್ನೇ ನಿಲ್ಲಿಸಿಬಿಟ್ಟರಂತೆ. ಕೂಡಿಟ್ಟ ಹಣವೆಲ್ಲ ಎಷ್ಟು ದಿನ ಅಂತ ಇರುತ್ತೆ. ವಯಸ್ಸು ಆಗಲೇ ಅರವತ್ತು ದಾಟಿತ್ತು. ಮನೆಯಲ್ಲಿ ಬೇರೆ ಉತ್ಪನ್ನಗಳು ಇರಲಿಲ್ಲ. ಹಾಗಾಗಿ ಆಕೆ ಅವರಿವರಿಗೆ ಸಣ್ಣ ಪುಟ್ಟ ಸಹಾಯ ಮಾಡಿ ಕೊಟ್ಟೋ, ಅಥವಾ ಅವರಿವರ ಸಾಯದಿಂದಲೋ ಹೊಟ್ಟೆ ಹೊರೆದು ಕೊಳ್ಳುತ್ತಿದ್ದಳು. ಹೀಗೆ ಸಹಾಯದ ನಿರೀಕ್ಷೆಯಿಂದ ನಮ್ಮೂರಿಗೂ ಬರುತ್ತಿದ್ದಳಂತೆ. ನಮ್ಮೂರಿನಲ್ಲೂ ಆಕೆಯ ಪರಿಸ್ಥಿತಿ ಗೊತ್ತಿದ್ದರಿಂದ ಆಕೆಗೆ ಸಹಾಯ ಮಾಡುತ್ತಿದ್ದರೂ. ತಾನು ಬರುವಾಗ ಹಾಗೆ ಸುಮ್ಮನೆ ಬರುತ್ತಿರಲಿಲ್ಲ, ಮಕ್ಕಳಿಗಾಗಿ ಚಾಕಲೇಟನ್ನೋ, ಹುರಿದ ಕಡಲೆಯನ್ನೋ ತೆಗೆದುಕೊಂಡು ಬರುತ್ತಿದ್ದಳು. ಆಕೆ ಬ್ರಾಹ್ಮಣಳಾಗಿದ್ದರಿಂದ ಮಡಿ ಜಾಸ್ತಿಯಂತೆ, ಹಾಗಾಗಿ ಎಲ್ಲೂ ಊಟ ಮಾಡಲ್ಲವಂತೆ. ಕೆಲವು ವರ್ಷಗಳನಂತರ ಆಕೆಗೆ ವಯಸ್ಸಾಗಿ ಇನ್ನೂ ಆಕೆಗೆ ಹೊರಗಡೆ ಹೋಗುವುದು ಕಷ್ಟ ಅಂತಾ ಗೊತ್ತಾದ ಮೇಲೆ ಆಕೆಯ ತವರು ಮನೆಯ ಕಡೆಯವರಾರೋ ಬಂದು ಅವಳ ಜೊತೆ ಇರುತ್ತಿದ್ದಾರಂತೆ ಅಂತ ಅಮ್ಮ ಆಕೆಯ ಬಗ್ಗೆ ಹೇಳಿದಳು.
ಅಮ್ಮ ಆಕೆಯ ಬಗ್ಗೆ ಹೇಳಿದನಂತರ ಅವಳ ಮೇಲೆ ಒಂದು ರೀತಿಯ ಕರುಣೆ ಮೂಡತೊಡಗಿತು. ಅಪರೂಪಕ್ಕೊಮ್ಮೆ ಬೆಳಸಗೆ ಹೋದಾಗ, ಅವಳ ಮನೆಯ ಕಡೆ ಆಕೆ ಇದ್ದಾಳೆಯೇ ಇಲ್ಲವೇ ಎಂದು ನೋಡಿ ಹೋಗುವುದು ವಾಡಿಕೆಯಾಗಿ ಬಿಟ್ಟಿತ್ತು. ಅವಳು ಹೊರಗಡೆ ಇದ್ದರೆ ಅವಳನ್ನು ಮಾತನಾಡಿಸಿಯೇ ಹೋಗುತ್ತಿದ್ದೆ. ಆಮೇಲೆ ನಾವು ಬೆಳೆದು ದೊಡ್ಡವರಾದ ಹಾಗೆ ಓದು, ಕೆಲಸ ಎಂದು ಊರಿಂದ ಹೊರಗಡೆ ಬಂದ ಮೇಲೆ ಆ ಕಡೆ ಹೋಗುವುದು ಕಡಿಮೆಯಾಗಿ ಬಿಟ್ಟಿತು. ಆಕೆಯೂ ನಮ್ಮೂರಿಗೆ ಬರುವುದನ್ನು ಬಿಟ್ಟು ಬಹಳ ವರ್ಷಗಳೇ ಆದ್ದರಿಂದ ಆಕೆಯ ನೆನಪು ನಮ್ಮ ಮನೆಯಲ್ಲಿ, ನಮ್ಮ ಊರೀನ ಇತರೆ ಮನೆಗಳಲ್ಲಿಯೂ ಆಕೆಯ ನೆನಪು ಮಾಸತೋಡಗಿತ್ತು. ಆದರೆ ನನ್ನ ಮನಸ್ಸಲ್ಲಿ ಆಕೆಯ ನೆನಪು ಹಾಗೆ ಅಚ್ಚಳಿಯದೇ ಉಳಿದುಕೊಂಡು ಬಿಟ್ಟಿತು. ಬಹಳ ದಿನಗಳಿಂದ ಆಕೆಯನ್ನು ನೋಡದ ನಾನು ಆಕೆ ತೀರಿ ಹೋಗಿರಬಹುದೆಂದು ತಿಳಿದಿದ್ದೆ. ಆದರೆ ಆಕೆ ಆ ಮನೆಯಲ್ಲಿ ಈಗ ಇನ್ನೂ ಇದ್ದಾಳೆಂದು ನನ್ನ ಗೆಳೆಯರೊಬ್ಬರಿಂದ ತಿಳಿದುಬಂತು. ನಾನು ಆಕೆಯನ್ನು ನೋಡಿ ಬಹಳದಿನಗಳಾದರೇನೆಂತೆ, ಆಕೆ ನನ್ನ ಸಮೀಪವೇ ಇಲ್ಲದಿದ್ದರೇನಂತೆ ಆದರೆ ಆಕೆ ಮತ್ತು ಆಕೆಯ ಪ್ರೀತಿಯನ್ನು ನಾನು ಹೇಗೆ ಮರೆಯಲು ಸಾದ್ಯ?

--ಮಂಜು ಹಿಚ್ಕಡ್ 

Tuesday, July 22, 2014

ಗುರು ಇಲ್ಲದಿರೇನಂತೆ

ಗುರು ಇಲ್ಲದಿರೇನಂತೆ
ಮುಂದೆ ಗುರಿ ಇದೆಯಲ್ಲ.
ಇಂದು ಸೋತರೇನಂತೆ,
ಮುಂದೆ ಗೆಲುವಿದೆಯಲ್ಲ.
ಸಾಧಿಸುವ ಛಲ, ಆತ್ಮ ವಿಶ್ವಾಸ
ಇವೆರಡಿದ್ದರೆ ಗೆಳೆಯ
ನೀನೆಂದು ಹೆದರಬೇಕಿಲ್ಲ.

--ಮಂಜು ಹಿಚ್ಕಡ್

Saturday, July 19, 2014

ಕವಿತೆ ಬರೆಯುವುದು.

ಕವಿತೆ ಬರೆಯುವುದು
ಸ್ಪರ್ಧೆ ಪ್ರತಿಸ್ಪರ್ಧೆಗಾಗಿಯಲ್ಲ
ಪ್ರಸಸ್ಥಿ ಪುರಸ್ಕಾರಗಳಿಗಲ್ಲ
ಪೂಜೆ ಪುನಸ್ಕಾರಕ್ಕಲ್ಲ
ಮನಕೆ ಹೊಕ್ಕ ಭಾವನೆಗಳ ಹೊರಗೆಡುಹಿ
ಮನಸ ತಣ್ಣಗಾಗಿಸಲು
ಉಸಿರು ಸದಾ ಹಸಿರಾಗಿರಸಲು


--ಮಂಜು ಹಿಚ್ಕಡ್

Monday, July 14, 2014

ನಿರೀಕ್ಷೆ!

ಆತರಿಸಿ, ಕಾತರಿಸಿ
ಓಡೋಡಿ ಬರುವವಳೇ
ಇಂದೇಕೆ ಸಣ್ಣ
ನಿನ್ನ ನಡಿಗೆ.

ಆತುರದಿ, ಕಾತರದಿ
ಕಾಯ್ದುಕುರುವ ಹುಡುಗ
ಇನ್ನೂ ಮಿತಿ ಇರಲಿ
ನಿನ್ನ ಸಲಿಗೆ.

ನಿನ್ನೆಯವರೆಗೂ
ಹೀಗಿರದ ನೀನು
ಇಂದೇನಾಯ್ತು
ನಿನಗೆ ಚಲುವೆ.

ಹಾಳಾಯ್ತು ಚೆಲುವು
ಕೆಟ್ಟಿತಲ್ಲ ಒಲವು
ಮುಂದಿನ ತಿಂಗಳಂತೆ
ನನ್ನ ಮದುವೆ.

ಕೆಟ್ಟಿದ್ದು ಒಲವಲ್ಲ
ನಿನ್ನೆಯ ಮನವು
ತಿಳಿಹೇಳ ಬಾರದೇನೆ
ನೀ ನಿನ್ನ ಮನೆಗೆ.

ಹೇಳಾಯ್ತು, ಅತ್ತಾಯ್ತು
ಊಟ ಬಿಟ್ಟಾಯ್ತು
ಹೇಳಲೇನು ಉಳಿದಿಲ್ಲ
ಇನ್ನೂ ನನಗೆ.

ಅಳುವೇಕೆ ಗೆಳತಿ
ಮರೆತು ಬಿಡು ನನ್ನ
ಸುಖದಿ ಬಾಳಿನ್ನು
ನೀ ಅವನ ಜೊತೆಗೆ.

ದೇಹ ಹಂಚಬಹುದೇನೋ
ಮನಸ ಹಂಚಲಿ ಹೇಗೆ
ಉಂಟಲ್ಲ ಸಾವು
ಕಟ್ಟ ಕಡೆಗೆ.

ನನ್ನಷ್ಟೇ ಪ್ರೀತಿ
ಅವನಲ್ಲೂ ಇರಬಹುದು
ಹುಡುಕಿನೋಡು ಒಮ್ಮೆ
ನೀ ಒಂದು ಗಳಿಗೆ.

ಇದ್ದರು ಇರಬಹುದು
ಇಲ್ಲದೇ ಇರಬಹುದು
ಹೊಂದಿ ಬಾಳಲೇಬೇಕಲ್ಲ
ನಾನಿನ್ನೂ ಅವನ ಜೊತೆಗೆ.

ಅವನಿರಲಿ, ನಾನಿರಲಿ
ಇನ್ನೂ ಯಾರೇ ಇರಲಿ
ಬರುವವರಿಲ್ಲ ಯಾರು
ಕೊನೆಗೆ ನಮ್ಮ ಜೊತೆಗೆ.

ಯಾರು ಬಂದರೇನು
ಯಾರು ಬರದಿದ್ದರೇನು
ನೀ ಬರಲು ಮರೆಯದಿರು
ನನ್ನ ಮದುವೆ ಮನೆಗೆ.

--ಮಂಜು ಹಿಚ್ಕಡ್

Thursday, July 3, 2014

ನಮ್ಮ ಬದುಕು ನಮಗೆ.

ಕೆಸರಲ್ಲಿ ಅರಳಿನಿಂತ
ಸುಮಕು ಒಂದು ಬದುಕಿದೆ.
ಹೇಗೆ ಇರಲಿ ಅದರ ಬಾಳು
ಅದಕೂ ಒಂದು ಹೆಸರಿದೆ.

ಅದರದಾದ ಬಣ್ಣವದಕೆ
ಅದರದಾದ ಗಂಧವು.
ಅದರದಾದ ರೂಪವದಕೆ
ಅದರದಾದ ಚಂದವು.

ನಮ್ಮ ಬದುಕು ನಮಗೆ
ಅದರ ಬದುಕು ಅದಕೆ
ನಮ್ಮಂತೆ ನಾವಿರುವುದೊಳಿತು
ನಮ್ಮ ಅದರ ಹಿತಕೆ.

ಅದರ ಬದುಕ ಅದಕೆ ಬಿಟ್ಟು
ತೆಪ್ಪಗಿರುವುದು ಒಳಿತು
ಒಳಿತಾಗುವುದು ಇರ್ವರಿಗೂ
ಹೊಂದಿ ಬಾಳಿದರೆ ಕಲೆತು.

--ಮಂಜು ಹಿಚ್ಕಡ್