Wednesday, January 29, 2014

ಯೋಗೇಶನ ಕಾರು ಪುರಾಣ....

ಸುಮಾರು ಮೂರು ತಿಂಗಳ ನಂತರ, ಗಣೇಶ ಹಬ್ಬದ ರಜೆಗಾಗಿ ಯೋಗೇಶ್ ತನ್ನ ಸಂಸಾರ ಸಮೇತ ಊರಿಗೆ ಹೊರಟಿದ್ದ. ಬಸ್ ಅಲ್ಲಿ ಟಿಕೇಟ್ ಸಿಗದ ಕಾರಣ, ತನ್ನ ಕಾರನ್ನೇ ತೆಗುದುಕೊಂಡು ಹೊರಟಿದ್ದ. ಬೆಂಗಳೂರಿನಿಂದ ಊರಿಗೆ ಸಾಕಷ್ಟು ಬಸ್ಸಿವೆ. ಆದರೆ ಈಗ ಹಬ್ಬದ ಸಮಯ ಆದ್ದರಿಂದ, ಬಸ್ನಲ್ಲಿ ಟಿಕೇಟ್ ಸಿಗೋದೇ ಕಷ್ಟವಾಗಿತ್ತು. ಟಿಕೇಟ ಧರವನ್ನು ಕೂಡ ಯಧ್ವಾ ತಧ್ವಾ ಏರಿಸಿದ್ದರು ಕೂಡ. ಹೇಗೂ ಕಾರ್ ತೆಗೆದು ಕೊಂಡು ಹೋಗಿ, ತನ್ನ ಕಾರನ್ನು, ಸಂಸಾರವನ್ನು ಊರಲ್ಲೇ ಬಿಟ್ಟು, ದೀಪಾವಳಿಗೆ ಮತ್ತೆ ಹೋದಾಗ ಕಾರು ತೆಗೆದುಕೊಂಡು, ಸಂಸಾರವನ್ನು ಕರೆದುಕೊಂಡು ಬಂದರಾಯಿತು ಎಂದು, ಕಾರು ತೆಗೆದು ಕೊಂಡು ಹೊರಟಿದ್ದ. ಊರು ತಲುಪಲು ಇನ್ನು ಕೇವಲ ಮೂರು ನಾಲ್ಕು ಕಿಲೋ ಮೀಟರ್ ದೂರ ಉಳಿದಿತ್ತು. ಆಗಲೇ ಸಪ್ಟಂಬರ್ ತಿಂಗಳ ಮಳೆ, ಅಷ್ಟೇನು ಹರೀತವಿಲ್ಲದಿದ್ದರೂ, ಚಿಕ್ಕದಾಗಿ ಎಡೆ ಬಿಡದೇ ಬೀಳುತಿತ್ತು. ಮನಸ್ಸಲ್ಲಿ ಊರು ತಲುಪಲಿದ್ದೇನೆ ಅನ್ನುವ ರೋಮಾಂಚನ ಬೇರೆ. ಅವನ ಊರೀಗೆ ಹೋಗುವಾಗ, ಪಟ್ಟಣದ ಮಧ್ಯದಲ್ಲಿದ್ದ ಗಣೇಶ ದೇವಸ್ಥಾನವನ್ನೇ ಬಳಸಿ ಹೋಗಬೇಕಾಗಿತ್ತು. ಪ್ರತೀ ಸಾರಿ ಆ ಗಣೇಶ ದೇವಸ್ಥಾನವನ್ನು ಬಳಸಿ ಹೋಗುವಾಗಲೂ, ಅದೇ ಆ ಹಳೆಯ ನೆನಪು ಮತ್ತೆ ಮತ್ತೆ ಕಾಡುತಿತ್ತು. ಆ ಘಟನೆ ನಡೆದು ಆಗಲೇ ಇಪ್ಪತ್ತು ವರ್ಷಗಳು ಕಳೆದಿವೆ. ಆದರೂ, ಮೊನ್ನೆ ಮೊನ್ನೆ ನಡೆದಿದೆ ಅನ್ನುವಂತಿದೆ. ಅದನ್ನು ನೆನೆದಾಗಲೆಲ್ಲ ಮನಸ್ಸು ಆ ಘಟನೆಯನ್ನೇ ಮತ್ತೆ, ಮತ್ತೆ ಮೆಲುಕು ಹಾಕುತಿತ್ತು. ಇಂದು ಹಾಗೆ ಅದೇ ನೆನಪು ಮತ್ತೆ ಮತ್ತೆ ಕಾಡ ತೊಡಗಿತು.
ಕಾಲೇಜಿನಿಂದ ತನ್ನ ತರಗತಿಯನ್ನು ಮುಗಿಸಿ, ಮನೆಗೆ ಹೋಗಲು ಬಸ್ ನಿಲ್ದಾಣಕ್ಕೆ ಹೋಗಿತಿದ್ದ ಯೋಗೇಶನಿಗೆ ಹಿಂದಿನಿಂದ ಯಾರೋ ಬಂದು ತನ್ನ ಕಿಸೆಗೆ ಎನೋ ತುರುಕಿದ ಅನುಭವವಾಯಿತು. ಏನೆಂದು ನೋಡಿದ. ಅದೇ ತನ್ನ ಹೈಸ್ಕೂಲು ಸಹಪಾಠಿ ನವೀನ , ಅವನ ಮುಂದೆ ನಿಂತಿದ್ದ. ನವೀನ್ ಹತ್ತನೇ ತರಗತಿಯವರೆಗೆ ಓದಿ, ಮುಂದೆ ಓದಲಾಗದೇ ಆಟೋ ಒಡಿಸುತಿದ್ದ.
"ಏನೋ ಯೋಗೇಶ್, ಕಾಲೇಜಿಗೆ ಹೋಗಿ ಬರ್ತಾ ಇದ್ದಿಯಾ?" ಎಂದು ಕೇಳಿದ. ವಾರಕ್ಕೆರಡುಬಾರಿಯಾದರೂ ನವೀನ , ಯೋಗೇಶನಿಗೆ ಸಿಗುತ್ತಿದ್ದ. ಮೊದಲಿನ ಸಲಿಗೆ ಇನ್ನೂ ಹಾಗೆಯೇ ಇದ್ದಿತು.
"ಹೌದು, ನವೀನ್" ಎಂದು ಉತ್ತರವಿತ್ತ ಯೋಗೇಶ್. ಹಾಗೆ ಮುಂದುವರಿಸುತ್ತಾ, "ಏನೋ ಇದು, ಕಿಸೆಯಲ್ಲಿ ತುರುಕಿದ್ದು"
"ಹೇಯ್, ನಿನಗೆ ಗೊತ್ತಿಲ್ವೇನೋ, ನಮ್ಮ ಆಟೋ ಚಾಲಕರವತಿಯಿಂದ, ವರ್ಷಂಪ್ರತಿಯಂತೆ ಗಣೇಶೋತ್ಸವ ಆಚರಿಸುತ್ತಿದ್ದುದು. ಪ್ರತಿ ವರ್ಷ ಗಣೇಶೋತ್ಸವದಲ್ಲೂ ಲಾಟರಿ ಇಟ್ಟು ಮಾರಾಟ ಮಾಡುವುದು, ಅದೇ ರೀತಿ ಈ ವರ್ಷವು ಲಾಟರಿ ಇಟ್ಟಿದ್ದೇವೆ ಕಣೋ, ಹಾಂ, ಹಾಗೆ ಇನ್ನೊಂದು, ಈ ವರ್ಷ ಮೊದಲ ಬಹುಮಾನ 'ಮಾರುತಿ' ಕಾರು ಇಟ್ಟಿದ್ದೇವೆ ಕಣೋ.ಅದೇ ಲಾಟರಿ ಟಿಕೇಟನ್ನೇ ನಿನ್ನ ಕಿಸೆಯಲ್ಲಿ ತುರುಕಿದ್ದು"
ಒಂದು ಕ್ಷಣ ಯೋಗೇಶನಿಗೆ ಏನು ಹೇಳಬೇಕಂದೇ ತೋಚಲಿಲ್ಲ. ಲಾಟರಿ ಟಿಕೇಟಗೆ ಕೊಡಲು ಹಣವಾದರೂ ಎಲ್ಲಿದೆ. ಮೊದಲೇ ಬಡ ಕುಟುಂಬ, ಹಾಗೋ, ಹೀಗೋ ಕುಡಿಸಿಟ್ಟ ಹಣ ಕಾಲೇಜು ಫೀ, ಬಸ್ ಪಾಸ್ಗೆ ಆಗಿಬಿಡತ್ತೆ. ಇನ್ನು ಇವಕ್ಕೆಲ್ಲ ಎಲ್ಲಿದೆ ರೊಕ್ಕ. ಬೇಡ ಅನ್ನಲು ಸಂಕೋಚ. ಗೆಳೆಯ ನವೀನನಿಗೂ ಇವೆಲ್ಲ ಗೊತ್ತಿಲ್ಲದ ವಿಷಯವೇನಲ್ಲ. ಯೋಗೇಶ್ ಒಂದು ಕ್ಷಣ ಯೋಚಿಸಿ, ತನ್ನ ಕಿಸೆಯಲ್ಲಿದ್ದ್ದ ಲಾಟರಿ ಟಿಕೇಟನ್ನು ಹೊರಗೆ ತೆಗೆದು, "ಬೇಡ ಕಣೋ ನವೀನ್, ನಿನಗೆ ಗೊತ್ತಲ್ಲ, ನನ್ನ ಹತ್ತಿರ ಇವಕ್ಕೆಲ್ಲ ಹಣ ಇಲ್ಲಾ ಎಂದು"
"ನೀನೇನು, ನನಗೆ ಹೊಸಬನೇನೋ? ನಿನ್ನ ಹತ್ತಿರ ಇದ್ದಾಗ ಕೊಡುವಿಯಂತೆ ತಗೋ. ನನಗೂ ಇಷ್ಟು ಟಿಕೇಟು ಮಾರಾಟ ಮಾಡಬೇಕು ಅಂತಾ ತಾಕೀತು ಮಾಡಿದ್ದಾರೆ. ಅದಕ್ಕೆ ನಿನಗೊಂದು ಕೊಟ್ಟಿದ್ದೇನೆ. ಇಟ್ಟುಕೋ, ಸಮಯ ಬಂದಾಗ ಕೊಡುವಿಯಂತೆ. ಅಗೋ ಅಲ್ಲಿ ಗಿರಾಕಿ ಬಂದಿದ್ದಾರೆ, ಹೋಗ್ತಿನಿ" ಎಂದು ಹೊರಟ.
ಯೋಗೇಶ್ ಬಸ್ ನಿಲ್ದಾಣಕ್ಕೆ ಹೋದ, ಆಗಲೇ ಬಸ್ಸು ಹೊರಡುವುದರಲ್ಲಿತ್ತು. ಈ ಬಸ್ಸನ್ನ ಕಳೆದುಕೊಂಡರೆ, ಇನ್ನೂ ಎರಡು ಗಂಟೆ ಬಸ್ ನಿಲ್ದಾಣದಲ್ಲಿ ಕಳೀಬೇಕಾಗುತ್ತದೆ ಎಂದು ಓಡಿ ಹೋಗಿ ಬಸ್ ಹತ್ತಿದ. ಬಸ್ ಹೊರಟಿತು. ಲಾಟರಿ ಟಿಕೇಟು ತೆಗೆದು ನೋಡಿದ, ಅದರಲ್ಲಿ ನವೀನ್ ಹೇಳಿದ ಹಾಗೆ ಬಂಪರ್ ಬಹುಮಾನ ಮಾರುತಿ ೮೦೦ ಎಂದು ಬರೆದಿತ್ತು. ಅದರ ಜೊತೆಗೆ ಇನ್ನೂ ಐದಾರು ವಸ್ತುಗಳನ್ನು ಇಟ್ಟಿದ್ದರು. ಹಾಗೆ ಲಾಟರಿ ಟಿಕೇಟನ್ನು ಕಿಸೆಗೆ ತೂರಿಸಿ ಕುಳಿತ.
ಯೋಗೇಶ್ ಒಬ್ಬ ಬಡ ರೈತ ಮನತನದಿಂದ ಬಂದವನು. ಮನೆಯಲ್ಲಿ ಸದಾ ಬಡತನ. ತಂದೆಗೆ ಗದ್ದೆ ತೋಟಗಳನ್ನು ಬಿಟ್ಟರೆ ಬೇರೆ ಜಗತ್ತೇ ಗೊತ್ತಿಲ್ಲ. ಯೋಗೇಶ್ ಬಿಡುವಿದ್ದಾಗ ಗದ್ದೆ ತೋಟಗಳಲ್ಲಿ ಕೆಲಸಮಾಡಿಕೊಂಡು, ತಾಯಿಗೂ ಅವಳ ಕೆಲಸದಲ್ಲಿ ಸಹಾಯ ಮಾಡುತಿದ್ದ. ತಾವೇ ದುಡಿದು ಬೇಸಾಯ ಮಾಡುತಿದ್ದರಿಂದ ಮನೆಗೆ ಬೇಕಾಗುವ ಖರ್ಚಿಗೆ ಅಷ್ಟೇನು ತೊಂದರೆ ಇರಲಿಲ್ಲ. ಮಗನ ಕಾಲೇಜು ಫೀ ಮತ್ತು ಬಸ್ನ ಪಾಸ್ಗೆ ವರ್ಷದ ಕೊನೆಗೆ ಬಂದ ಮಾವಿನ ಮರದ ಗುತ್ತಿಗೆಯ ಹಣದಿಂದಲೋ, ಅಥವಾ ಅಲ್ಪ ಸ್ವಲ್ಪ ಉಳಿಸಿ ಮಾರಿದ ತೆಂಗಿನ ಕಾಯಿಯಿಂದಲೋ ಹೊಂದಿಸಿ ಕೊಡುತಿದ್ದರು. ಹಾಗಾಗಿ ಯೋಗೇಶ್ ಕಾಲೇಜಿಗೆ ಬಸ್ನ್ ಪಾಸ್ನ್ ಸಹಾಯದಿಂದಲೇ ಹೋಗಿ ಬರುತಿದ್ದ. ಎಲ್ಲೋ ಹತ್ತೋ-ಇಪ್ಪತ್ತೋ ಎಲ್ಲಾದರೂ ಉಳಿದರೆ ತನ್ನ ಪೆನ್ನಿಗೋ, ಪಠ್ಯ ಪುಸ್ತಕಕ್ಕೋ ಕಾದಿಡುತಿದ್ದ ಅಷ್ಟೇ.
ಲಾಟರಿ ಟಿಕೇಟು ಇಟ್ಟುಕೊಂಡು ಆಗಲೇ ತಿಂಗಳುಗಳು ಕಳೆದು ಹೋದವು. ಗಣೇಶ ಹಬ್ಬ ಮುಗಿದು ಆಗಲೇ ಇಪ್ಪತ್ತು ದಿನಗಳಾಗಿದ್ದವು. ಯೋಗೇಶ್ ಕಾಲೇಜಿನಿಂದ ಬರುವಾಗ ಸಿಗುವ ಆಟೋ ನಿಲ್ದಾಣದಲ್ಲಿ ಹಾಕಿದ್ದ ಬಹುಮಾನ ವಿಜೇತ ಲಾಟರಿ ಟಿಕೇಟುಗಳ ನಂಬರಗಳು ಕಾಣಿಸಿದವು. ನಂಬರಗಳ ಕೊನೆಯಲ್ಲಿ 'ಲಾಟರಿ ವಿಜೇತರು ೩೦ ದಿನಗಳ ಒಳಗಾಗಿ, ತಮ್ಮ ಸಾಮಾನುಗಳನ್ನು ತೆಗೆದುಕೊಂಡು ಹೋಗಬೇಕು, ಇಲ್ಲವಾದಲ್ಲಿ ಅದು ಕಂಪನಿಗೆ ಸೇರುತ್ತದೆ'. ಯೋಗೇಶ್ ಕುತುಹಲಕ್ಕಾಗಿ ಆ ಸಂಖ್ಯೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಂಡು ಹೋದ. ಮನೆಯಲ್ಲಿ ತನ್ನಲ್ಲಿ ಇರುವ ಲಾಟರಿ ಟಿಕೇಟಿನಲ್ಲಿರುವ ಸಂಖ್ಯೆಗೂ, ಹಾಳೆಯಲ್ಲಿ ಇರುವ ಸಂಖ್ಯೆಗೂ ತಾಳಿ ಹಾಕಿ ನೋಡಿದ. ಒಮ್ಮೆ ಕುತುಹಲ, ಒಮ್ಮೆ ಆಶ್ಚರ್ಯ. ತನ್ನ ಕಣ್ಣನ್ನು ತಾನೇ ನಂಬದವನಾದ ಒಂದು ಕ್ಷಣ. ಯೋಗೇಶನಿಗೆ ಮೊದಲ ಬಹುಮಾನ ಬಂದಿತ್ತು. ಮೋದಲ ಬಹುಮಾನ ಬಂದಿತ್ತೇನೋ ನಿಜ. ಆದರೆ ಏನು ಮಾಡುವುದು. ಕಾರು ಇಟ್ಟುಕೊಂಡು ಏನು ಮಾಡುವುದು? ಕಾರು ಹೊಡೆಯಲು ಬರಲ್ಲ, ಕಲಿತು ಕೊಳ್ಳಲು ರೊಕ್ಕ ಇಲ್ಲ. ಏನು ಮಾಡುವುದು. ಬಂದ ಬಹುಮಾನವನ್ನು ಬಿಡಲಾದಿತೇ? ಅದು ಇಂತಹ ಕಷ್ಟ ಕಾಲದಲ್ಲಿ. ಮಾರನೇ ದಿನ ಕಾಲೇಜಿಗೆ ಹೋಗುವಾಗ ಲಾಟರಿ ಟಿಕೇಟನ್ನು ಕಿಸೆಯಲ್ಲಿಟ್ಟುಕೊಂಡು, ಮನೆಯಲ್ಲಿ ಸ್ವಲ್ಪ ಲೇಟಾಗಿ ಬರ್ತಿನಿ ಎಂದು ಹೇಳಿ ಹೊರಟ. ಕಾಲೇಜಿಗೆ ಹೋಗಲು ಮನಸ್ಸಾಗಲಿಲ್ಲಿ. ಗೆಳೆಯ ನವೀನನಿಗಾಗಿ ಆಟೋ ನಿಲ್ದಾಣದ ಬಳಿ ಕಾದು ನಿಂತ. ಸುಮಾರು ಒಂದು ಗಂಟೆಯ ನಂತರ ನವೀನ್ ಬಂದ. ನವೀನ್ ಯೋಗೇಶನನ್ನು ನೋಡಿ.
"ಏನೋ ಇಲ್ಲಿ ನಿಂತಿದ್ದಿಯಾ?"
"ಏನಿಲ್ಲ ನವೀನ್, ನಿನ್ನ ಹತ್ತಿರ ಒಂದು ವಿಷಯ ಹೇಳಬೇಕಿತ್ತು"
"ಏನೋ, ಹೇಳೋ, ಅದಕ್ಕೇನೋ ಸಂಕೋಚ"
"ಹಾಗೇನಿಲ್ಲ, ಆದಿನ ನೀನು ಒಂದು ಲಾಟರಿ ಟಿಕೇಟ್ ಕೊಟ್ಟಿದ್ದೆಯಲ್ಲ. ಅದಕ್ಕೆ ಮೊದಲ ಬಹುಮಾನ ಬಂದಿದೆ ಕಣೋ. ಆ ಕಾರನ್ನ ಇಟ್ಕೊಂಡು ನಾನೇನು ಮಾಡಲಿ, ಯಾರಿಗಾದರೂ ಕೊಟ್ಟು, ರೊಕ್ಕ ತೆಗೆದು ಕೊಂಡು ಬಿಡೋಣ"
ನವೀನ್ ಸಂತೋಷದಿಂದ, "ಹೇಯ್! ಶುಭಾಶಯಗಳು ಕಣೋ, ಯಾಕೋ ಹೀಗೆ ಮಾತಾಡ್ತಿದ್ದಿಯಾ, ಮೊದಲು ಕಾರು ತೆಗೆದು ಕೊಳ್ಳೋಣ ಕಣೋ, ಆಮೇಲೆ ನೋಡೋಣ"
"ನನಗೆ ಕಾರು ಹೊಡೆಯೋಕ್ಕೆ ಬರಲ್ಲ, ಅದು ಹೋಗ್ಲಿ ಪೆಟ್ರೋಲಿಗೂ ನನ್ನ ಹತ್ತಿರ ರೊಕ್ಕ ಇಲ್ಲ"
"ಅದಕ್ಯಾಕೆ ಯೋಚನೆ ಮಾಡ್ತಿಯಾ? ನಾನೇ ಒಂದೆರಡು ಲೀಟರ್ ಪೆಟ್ರೋಲ್ ಹಾಕಿ ಕೊಡ್ತಿನಿ, ಆಮೇಲೆ ಕೊಡುವೆಯಂತೆ. ನನಗೂ ಡ್ರೈವಿಂಗ್ ಬರತ್ತೆ, ಬಾ ಹೊರಡೋಣ, ಕಾರು ತೆಗೆದುಕೊಂಡು ಗಣೇಶ್ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರೋಣ" ಎಂದು ಒತ್ತಾಯ ಪೂರ್ವಕವಾಗಿ, ಲಾಟರಿ ಟಿಕೇಟು ಕಮೀಟಿಯ ಹತ್ತಿರ ಕರೆದು ಕೊಂಡು ಬಂದ.
ಸಂಸ್ಥೆಯ ಅಧ್ಯಕ್ಷರಿಗೆ ಟಿಕೇಟು ಕೊಟ್ಟು. ಹಾಗೆ ಕಾರು ತೆಗೆದುಕೊಂಡು ದೇವಸ್ಥಾನದ ಕಡೆ ಹೊರಟರು. ಇನ್ನೇನು ದೇವಸ್ಥಾನ ಒಂದರ್ಧ ಕಿಲೋ ಮೀಟರ್ ಇದೆ, ಎನ್ನುವಾಗ, ಕಾರು ಸ್ವಲ್ಪ ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಬೈಕಗೆ ಡಿಕ್ಕಿ ಹೊಡೆಯಿತು. ಕಾರಿನ ಮುಂಬಾಗದ ಎಡಬಾಗದಲ್ಲಿದ್ದ ಲೈಟ್, ಮಿರರ್, ಇಂಡಿಕೇಟರ್ ಎಲ್ಲಾ ಒಡೆದು ತುಂಡಾಯಿತು. ಮುಂಬಾಗದ ಬೋನೆಟ್ ಸ್ವಲ್ಪ ಒಳ ಸೇರಿತ್ತು. ಆ ಒಂದು ಡಿಕ್ಕಿಗೆ ರಸ್ತೆಯ ಅಕ್ಕ ಪಕ್ಕದಲ್ಲಿದ್ದ ಜನರೆಲ್ಲ ಸೇರಿದ್ದರು. ಇಬ್ಬರ ಹತ್ತಿರನೂ ಲೈಸನ್ಸ್ ಇಲ್ಲಾ, ಇನ್ಸೂರನ್ಸ ಇಲ್ಲ. ಆಮೇಲೆ ಬೈಕ್ ಸವಾರನಿಗೂ, ನವೀನನಿಗೂ ಒಂದು ಒಪ್ಪಂದವೆರ್ಪಟ್ಟು, ಬೈಕ್ ಸವಾರನಿಗೆ ಹತ್ತು ಸಾವಿರ ಕೊಡುವುದಾಗಿ, ಆತ ಕೇಸ್ ಮಾಡಬಾರದಾಗಿಯೂ ಎಂದು ನಿರ್ಧಾರವಾಯಿತು. ಇಷ್ಟೊಂದು ಹಣ ಯೋಗೇಶನ ಹತ್ತಿರ ಇಲ್ಲಾ ಎಂದು ಗೊತ್ತಿರುವುದರಿಂದ ಎಲ್ಲಾ ಹಣವನ್ನು ನವೀನನೇ ತನ್ನ ಆಟೋ ಚಾಲಕ ಗೆಳೆಯರಿಂದ ವ್ಯವಸ್ಥೆಮಾಡಿ, ಆ ಹಣವನ್ನು ಬೈಕ್ ಸವಾರನಿಗೆ ಕೊಟ್ಟು ಕಳಿಸಿದ. ಹಾಗೆ ದೇವಸ್ಥಾನಕ್ಕೆ ಹೋಗಿ ಪೂಜೆಯ ಶಾಸ್ತ್ರವನ್ನು ಮುಗಿಸಿ, ಗ್ಯಾರೇಜಿಗೆ ಬಂದರು. ಆ ಪೇಟೆಯಲ್ಲಿದ್ದುದು ಅದೊಂದೇ ಗ್ಯಾರೇಜು. ಗ್ಯಾರೇಜಿನಾತ ಹತ್ತು ಸಾವಿರ ಕೊಟ್ಟರೆ ಮಾತ್ರ ರಿಪೇರಿ ಮಾಡಿಕೊಡುವುದಾಗಿ ಒಪ್ಪಿದ. ಈ ಹಣವೂ ಕೂಡ ನವೀನದೇ.
ಯೋಗೇಶನಿಗೆ ಇವನ್ನೆಲ್ಲ ನೋಡಿ ತಡೆಯಲಾಗಲಿಲ್ಲಿ, ಕೂಡಲೇ ಇದನ್ನು ಮಾರಿ ಬಿಡಬೇಕು ಎಂದು ನವೀನನ್ನು ಒತ್ತಾಯಿಸಿದ. ಯೋಗೇಶನ ಒತ್ತಾಯಕ್ಕೆ ಮಣಿದು ನವೀನ ನಗರದಲ್ಲಿದ್ದ ಮೋಹನ ಎಂಬ ಕಾರು ಲೇವಾದೇವಿ ವ್ಯವಹಾರಸ್ಥನನ್ನು ಬೇಟಿ ಆದರು.ಮೋಹನ ಇದು, ಸೆಕೆಂಡ್ ಹ್ಯಾಂಡ್ ಕಾರು, ಮೊದಲೇ ಎಕ್ಸಿಡೆಂಟ್ ಬೇರೆ ಆಗಿದೆ, ಹಾಗಿದೆ ಹೀಗಿದೆ ಎಂದು ಮೂರು ಲಕ್ಷದ ಕಾರನ್ನು ಒಂದು ಲಕ್ಷ ಎಪ್ಪತೈದು ಸಾವಿರ ರೂಪಾಯಿಗೆ ಇಳಿಸಿ. ಅದರ್ಲ್ಲಿ ತನಗೆ ಎರಡು ಪರ್ಸೆಂಟ್ ಕಮಿಷನ್ ನೀಡಬೇಕು ಎಂದು ಬೇರೆ ಕೇಳಿದ. ಯೋಗೇಶ್ ಏನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಅದೇನು ಚಿಕ್ಕ ಮೊತ್ತವಾಗಿರಲಿಲ್ಲ. ಸಧ್ಯಕ್ಕೆ ಕಾರು ಅವನ ಕೈ ಇಂದ ಹೋದರೆ ಸಾಕಾಗಿತ್ತು. ಬಂದಷ್ಟು ಬರಲಿ ಎಂದು ಒಪ್ಪಿಯೇ ಬಿಟ್ಟ. ಮೋಹನ ತಾನು ೨೭೫೦ ರೂಪಾಯಿ ಇಟ್ಟುಕೊಂಡು, ಉಳಿದ ೧,೭೨,೨೫೦ ರೂಪಾಯಿಯನ್ನು ಕೊಟ್ಟು ಕಳಿಸಿದ. ಸದ್ಯಕ್ಕೆ ಕಾರು ಪುರಾಣ ಮುಗಿಯಿತ್ತಲ್ಲ ಎಂದು ತಾನು ಒಂದುವರೆ ಲಕ್ಷ ಇಟ್ಟುಕೊಂಡು, ಉಳಿದ ಹಣವನ್ನೂ ತನಗೆ ಆಪತ್ಕಾಲಕ್ಕೆ ಸಹಾಯ ಮಾಡಿದ ನವೀನನಿಗೆ, ಇಷ್ಟೆಲ್ಲ ಬೇಡ ಎಂದರೂ ಕೇಳದೇ ಕೊಟ್ಟು, ಅವನಿಗೆ ಧನ್ಯವಾದ ತಿಳಿಸಿ. ಸಮಾಧಾನದಿಂದ ಮನೆಗೆ ಹೊರಟ. 
--ಮಂಜು ಹಿಚ್ಕಡ್

Tuesday, January 28, 2014

ವರ್ಷ ಹತ್ತು ಕಳೆದರೂ, ಬತ್ತದ ನೆನಪು!

ಇಂದಿಗೆ ಹತ್ತು ವರ್ಷಗಳ ಹಿಂದೆ, ಆಗಿನ್ನೂ ನಾನು ಬೆಂಗಳೂರಿಗೆ ಬಂದ ಹೊಸತು. ಮನದಲ್ಲಿ ಏನೇನೋ ಆಶೆಗಳು, ತವಕಗಳು, ದುಗುಡಗಳು. ಒಮ್ಮೊಮ್ಮೆ ಏನೂ ಇಲ್ಲ ಎನ್ನುವ ಆತಂಕ, ಮತ್ತೊಮ್ಮೆ ಏನು ಇಲ್ಲದಿದ್ದರೂ ಎಲ್ಲಾ ಇವೆ ಎನ್ನುವ ಉತ್ಸಾಹ. ಎಂ.ಸಿ.ಏ. ಪದವಿಯ ಕೊನೆಯ ಶಿಕ್ಷಣಾವಧಿಯ ವಿದ್ಯಾರ್ಥಿಯಾಗಿ, ಏನಾದರೂ ಒಂದು ಪ್ರೊಜೆಕ್ಟ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬಂದವ ನಾನು. ಪರಿಚಿತರಿದ್ದರೂ ಅಪರಿಚಿತ ಎನಿಸುವ ಊರು, ಅಪರಿಚಿತ ರಸ್ತೆಗಳು, ಅಪರಿಚಿತ ಜನರು. ಇವೆಲ್ಲವುಗಳ ಮದ್ಯೆ ನಾನು ಬೆರಳಣಿಕೆಯಷ್ಟೇ ಜನರಿಗೆ ಪರಿಚಿತನಾಗಿ, ಹಲವರಿಗೆ ಅಪರಿಚಿತನಾಗಿ ಬೆಂಗಳೂರು ಎನ್ನುವ ಮಾಯಾಲೋಕದೊಳಗೆ ಸೇರಿಕೊಂಡಿದ್ದೆ. ಬಂದ ಹೊಸದರಲ್ಲಿ ಎಲ್ಲವೂ ವಿಶ್ಮಯ, ಎಲ್ಲೆಲ್ಲೂ ವಾಹನಗಳಿಂದ ಕಿಕ್ಕಿರಿದು ತುಂಬಿರುವ ರಸ್ತೆಗಳು, ಹತ್ತು ಇಪ್ಪತ್ತು ಮಾರಿಗೆ ಒಂದು ಸಿಗ್ನಲಗಳು. ಬಸಿರಾದ ಹೆಂಗಸಿನಂತೆ ಜನರನ್ನು ತುಂಬಿಕೊಂಡು ಓಡಾಡುವ ಬಿಎಂಟಿಸಿ ಬಸ್ಸುಗಳು. ರಸ್ತೆಯ ಮಗ್ಗುಲಗಳಲ್ಲಿ ಅಲ್ಲಲ್ಲಿ ಕಾಣ ಸಿಗುವ ಚಿಕ್ಕ ಪುಟ್ಟ ಉದ್ಯಾನವನಗಳು. ಒಂದು ಉದ್ಯಾನವನ್ನು ದಾಟಿ ಐವತ್ತು ಅರವತ್ತು ಮೀಟರ್ ಹೋದರೆ ಇನ್ನೊಂದು ಉದ್ಯಾನವನ. ಆ ಎಲ್ಲಾ ಉದ್ಯಾನವನಗಳನ್ನ ನೋಡಿದ ಮೇಲೆ ಅನಿಸುತಿತ್ತು, ಬಹುಷಃ ಇದಕ್ಕೆ ಬೆಂಗಳೂರನ್ನು "ಉದ್ಯಾನ ನಗರಿ" ಎಂದು ಕರೆದಿರಬೇಕೆಂದು.

ಬೆಂಗಳೂರಿಗೆ ಬಂದ ಒಂದು ತಿಂಗಳಲ್ಲಿಯೇ ಬಹುಪಾಲು ಬೆಂಗಳೂರನ್ನೂ ನೋಡಿಯಾಗಿತ್ತು, ಊರಿಂದ ಬರುವಾಗ ತಂದ ಕಾಸು ಕಾಲಿಯಾಗುತ್ತಾ ಬಂದಿತ್ತು, ಆದರೆ ಕೈಯಲ್ಲಿ ಪ್ರೊಜೆಕ್ಟ ಆಗಲಿ, ಕೆಲಸವಾಗಲಿ ಇರಲಿಲ್ಲ. ಮೊದಲಿನ ತರಹ ಸುತ್ತಾಡುವ ಆಸಕ್ತಿ ಕೂಡ ಕಡಿಮೆಯಾಗುತ್ತಾ ಬಂತು. ಬಂದ ಒಂದು ತಿಂಗಳಿಗೆ ಬೇಜಾರು ಬರಲು ಪ್ರಾರಂಭವಾಯಿತು. ಬೇಜಾರು ಎಂದು ವಾಪಸ್ ಊರಿಗೆ ಹೋಗುವಂತಿಲ್ಲ, ಪ್ರೊಜೆಕ್ಟ ಮುಗಿಸಿಯೇ ಹೋಗಬೇಕು. ಅಲ್ಲಿ ಇಲ್ಲಿ ಸುತ್ತಾಡಿದ್ದೇ ಬಂತು, ಪ್ರೊಜೆಕ್ಟ ಮಾತ್ರ ಸಿಗುತ್ತಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಪ್ರೊಜೆಕ್ಟ ಕೊಡಿಸುತ್ತೇನೆಂದು ಕೊಟ್ಟ ಬರವಸೆಗಳು ಬರವಸೆಗಳಾಗಿಯೇ ಉಳಿದ್ದವು. ಪ್ರೊಜೆಕ್ಟಗಾಗಿ ಸುತ್ತದ ಪ್ರದೇಶವಿರಲಿಲ್ಲ. ಬಿಟಿಎಂನಿಂದ ಕಾಲು ನಡಿಗೆಯಲ್ಲಿ ಹೊರಟರೆ ಕೋರಮಂಗಲ, ಬೊಮ್ಮನಹಳ್ಳಿ, ಎಚ್.ಎಸ್.ಆರ್. ಲೆ ಔಟಗಳನ್ನೆಲ್ಲ ಸುತ್ತಾಡಿ, ಸುಸ್ತಾಗಿ ರಾತ್ರಿ ನಿರಾಶರಾಗಿ ಮನೆ ತಲುಪುತಿದ್ದೆವು ಕೈಯಲ್ಲಿ ಪ್ರೊಜೆಕ್ಟ ಇಲ್ಲದೇ. ಮುಂದೇನು ಮಾಡುವುದು ಎಂದು ತಲೆ ಕೆರೆದುಕೊಂಡರೆ ತೆಲೆ ಹುಣ್ಣಾಗುತಿತ್ತೇ ಹೊರತು ಮನಸ್ಸಿಗೆ ಏನು ತೋಚುತ್ತಿರಲಿಲ್ಲ.

ಇಂತಹ ಬೇಸರದ ಸಂದರ್ಭಗಳಲ್ಲಿ ಮನೆಯಲ್ಲಿ ಕುಳಿತು ಕೊಳ್ಳಲು ಆಗದೇ, ಮನೆಯಿಂದ ಹೊರಬಂದು ಎಲ್ಲಿ ಹೋಗುವುದು ಎಂದು ತಿಳಿಯದೇ, ವಿಜಯನಗರದ ಬಸ್ ನಿಲ್ದಾಣದ ಕಲ್ಲು ಬೆಂಚಿನ ಮೇಲೆ ಗಂಟೆ ಗಟ್ಟಲೆ ಕುಳಿತಿದ್ದಿದೆ. ಅಲ್ಲಿ ಹಾಗೆ ಕುಳಿತಾಗ ಮನಸ್ಸಿಗೆ ಅದೇನೋ ಹಿತ. ನನ್ನಂತೆ ಅದೆಷ್ಟೋ ಜನ ಹಾಗೆ ಕುಳಿತಿರುತಿದ್ದರು. ಕೆಲವರು ಯಾವುದೋ ಸ್ಥಳದ, ಯಾವುದೋ ನಂಬರಿನ ಬಸ್ಸಿನಲ್ಲಿ ಬರಲಿರುವ ತಮ್ಮ ಪರಿಚಿತರಿಗಾಗಿ ಕಾದು ಕುಳಿತಿದ್ದರೆ, ಕೆಲವರು ಅಲ್ಲಿಗೆ ಹೋಗಲಿರುವ ಬಸ್ಸುಗಳಿಗೆ ಕಾದು ಕುಳಿತಿರುತಿದ್ದರು. ಕೆಲವು ಹುಡುಗರಂತು ಅಲ್ಲಿಗೆ ಬಣ್ಣ ಬಣ್ಣದ ಧಿರಿಸು ತೊಟ್ಟು ಬರುವ ಹುಡುಗಿಯರನ್ನೇ ನೋಡಲು ಬಂದು ಕುಳಿತಿರುತಿದ್ದರು. ತಮ್ಮ ಬಾಳಿನ ಮುಸ್ಸಂಜೆಯಲ್ಲಿದ್ದ ಕೆಲವರು ಮನೆಯಲ್ಲಿ ವೇಳೆ ವ್ಯಯಿಸಲಾಗದೇ ಇಲ್ಲಿ ಸುಮ್ಮನೆ ಬಂದು ಕುಳಿತು ಹೋಗುತಿದ್ದರು.

ನಮ್ಮ ಬದುಕಿನ ಪಯಣದಲ್ಲಿ ಜೊತೆ ಬಂದು ಹೋಗುವ ಅದೆಷ್ಟೋ ರೀತಿಯ ನಡತೆಯ ವ್ಯಕ್ತಿಗಳನ್ನು ಆ ಬಸ್ ನಿಲ್ದಾಣದಲ್ಲಿ ಒಂದೆರಡು ಗಂಟೆ ನಿಂತರೆ ನೋಡಬಹುದು. ಒಂದೊಂದು ಕ್ಷಣಕ್ಕೂ ಒಂದೊಂದು ರೀತಿಯ ಜನರನ್ನ ಅಲ್ಲಿ ನೋಡಬಹುದು. ಅಲ್ಲಿ ಬರುವ ಪ್ರತಿಯೊಂದು ಜೀವಿಯಲ್ಲೂ ಒಂದೊಂದು ತೆರನಾದ ಭಾವನೆ, ಕೆಲವರಿಗೆ ಇನ್ನೂ ಏಕೆ ಬಸ್ಸು ಬರಲಿಲ್ಲ ಎನ್ನುವ ಚಿಂತೆಯಾದರೆ, ಇನ್ನೂ ಕೆಲವರಿಗೆ ಬಸ್ಸು ಇಷ್ಟು ಬೇಗ ಬಂದಿತೇಕೆ ಎನ್ನುವ ಚಿಂತೆ. ಇಂದ್ರಪ್ರಸ್ಥ ಹೊಟೇಲಿನ ಎದುರಿಗೆ, ಬಸ್ ನಿಲ್ದಾಣದ ಪಕ್ಕದಲ್ಲಿ ಹಳೆಯ ಇಂಗ್ಲೀಷು ಪುಸ್ತಕ ಮಾರುವ ಆತನಿಗೆ, ಅಲ್ಲೇ ಪಕ್ಕದಲ್ಲಿ ಬಸ್ಸಿಗಾಗಿ ಕಾದು ನಿಂತು ಹಾಳು ಹರಟೆ ಹೊಡೆಯುವ ಜನರಲ್ಲಿ ಒಂದಿಬ್ಬರಾದರೂ ಬಂದು ತನ್ನ ಪುಸ್ತಕ ಕೊಳ್ಳಬಾರದೇ ಎನ್ನುವ ಚಿಂತೆ. ಬಸ್ ನಿಲ್ದಾಣದ ನಡುವಲ್ಲಿ ಎಸ್.ಟಿ.ಡಿ. ಇಟ್ಟುಕೊಂಡವನಿಗೆ, ಈ ಹಾಳು ಮೊಬೈಲಗಳು ಬಂದು ಜನ ತನ್ನಿದ್ದಲ್ಲಿಗೆ ಕರೆ ಮಾಡಲು ಬರುವುದನ್ನು ಕಡಿಮೆ ಮಾಡಿ ಬಿಟ್ಟರಲ್ಲಾ ಎನ್ನುವ ಚಿಂತೆ. ಆ ಒಂದು ರೂಪಾಯಿ ಹಾಕಿ ಕರೆ ಮಾಡುವ ಆ ಫೋನಿಗೆ ದಿನಾ ಅಷ್ಟೊಂದು ಒಂದು ರೂಪಾಯಿಯನ್ನು ಎಲ್ಲಿಂದ ತಂದು ಹಾಕುವುದು ಅದೂ ಈ ಚಿಲ್ಲರೆಯ ಅಭಾವದ ಕಾಲದಲ್ಲಿ ಎನ್ನುವ ಚಿಂತೆ ಆ ಕಾಯಿನ್ ಬೂತ್ ಇಟ್ಟು ಕೊಂಡವನಿಗೆ. ಆ ಚಪ್ಪಲಿ ಹೊಲಿಯುವನಲ್ಲಿ ಒಂದು ಚಪ್ಪಲಿ ಹೊಲಿಯಲು ಬಿಟ್ಟು, ಉಳಿದ ಇನ್ನೊಂದು ಎತ್ತರದ ಹಿಮ್ಮಡಿಯ ಚಪ್ಪಲಿಯನ್ನು ಕಾಲಲ್ಲೇ ಧರಿಸಿ, ಕಿವಿಗೆ ಮೊಬೈಲ್ ತೂರಿಸಿ ಮಾತನಾಡುತ್ತಾ ಬೆಳ್ಳಕ್ಕಿಯಂತೆ ನಿಂತ ಆ ಚಲುವೆಗೆ, ಇವನಿಗೆ ಇನ್ನೆಷ್ಟು ಹೊತ್ತು ಬೇಕಪ್ಪಾ ಆ ಚಪ್ಪಲಿಯ ಕಳಚಿದ ಹಿಮ್ಮಡಿ ಹೊಲಿಯಲು ಎನ್ನುವ ಚಿಂತೆ.

ಕಳೆದ ಅರ್ಧ ಗಂಟೆಯಿಂದ ನಿಂತ ಬಸನಲ್ಲಿ ಕುಳಿತ ಪ್ರಯಾಣಿಕರಿಗೆ, ಟಿಕೇಟ್ ತೆಗೆದು ಚಹಾ ಕುಡಿಯಲು ಹೋದ ಆ ಕಂಡಕ್ಟರ್ ಹಾಗೂ ಚಾಲಕ ಎಷ್ಟು ಹೊತ್ತಿಗೆ ಬರುತ್ತಾರೋ ಎನ್ನುವ ಚಿಂತೆ. ಅದರಲ್ಲೂ ಹಿಂದೆ ಬಂದ ಬಸ್ಸುಗಳಲ್ಲ ಕಾಲಿ ಕಾಲಿ ಹೋಗುತ್ತಿರುವಾಗ ಅಷ್ಟು ಬೇಗ ಬಂದು ಈ ಬಸ್ಸು ಹತ್ತಬಾರದಿತ್ತು, ಏಕೆ ಹತ್ತಿ ಬಿಟ್ಟೇನಪ್ಪ ಎನ್ನುವ ಚಿಂತೆ.

ಜಯನಗರದಿಂದ ಕೊಡಬೇಕಾದ ಚಿಲ್ಲರೆಯನ್ನು, ಮುಂದಿನ ನಿಲ್ದಾಣದಲ್ಲಿ ಚಿಲ್ಲರೆ ಕೊಡುತ್ತೇನೆ ಈಗ ಚಿಲ್ಲರೆ ಇಲ್ಲ ಎಂದು ಕಾಡಿಸಿ ಕಾಡಿಸಿ, ವಿಜಯನಗರ ಬಂದೊಡನೆ ಆತನೊಂದಿಗೆ ಹಿಂದಿನ ಬಾಗಿಲಲ್ಲಿ ಇಳಿದ ಕಂಡಕ್ಟರ್ ಚಿಲ್ಲರೆ ಕೊಡದೇ, ಇವನು ಚಿಲ್ಲರೆ ಕೇಳುತ್ತಿದ್ದರೂ ಲಕ್ಷಕೊಡದೇ ಮುಂದಿನ ಬಾಗಿಲಲ್ಲಿ ಹತ್ತಿ ಹೆಂಗಳೆಯರ ಮದ್ಯೆ ತೂರಿಕೊಂಡಾಗ, ಟಿಕೇಟ್ ಹಿಂಬಾಗದಲ್ಲಿ ೪೨ ಎಂದು ಬರೆದಿದ್ದ ಕಂಡಕ್ಟರನ ಹಸ್ತಾಕ್ಷಾರ, ಕಂಡಕ್ಟರ್ ಆತನಿಗೆ ಕೊಡಬೇಕಾದ ಚಿಲ್ಲರೆಯನ್ನು ನೆನಪಿಸುತಿತ್ತು. ಅದನ್ನು ಮತ್ತೆ ಮತ್ತೆ ನೋಡಿದ ಆತನಿಗೆ ಹಾಳು ಕಂಡಕ್ಟರ್ ಚಿಲ್ಲರೆ ಕೊಡದೇ ಹೋದನಲ್ಲ ಎನ್ನುವ ಚಿಂತೆ.

"ಈ ಬಸ್ ಮೆಜೆಸ್ಟಿಕ್ ಹೋಕ್ಕೇತ್ತೇನ್ರೀ" ಎಂದು ಮೆಜೆಸ್ಟಿಕ್ ಕಡೆ ಹೋಗುವ ಬಸ್ಸುಗಳನ್ನು ತೋರಿಸಿ ಒಂದಿಬ್ಬರು ಬೆಂಗಳೂರಿಗರನ್ನು ಕೇಳಿದಾಗ ಅವರ "ನೋ ಐಡಿಯಾ" ಎನ್ನುವ ಉತ್ತರ ಅರ್ಥವಾಗದೇ ಓಡಾಡುತ್ತಿದ್ದ ಉತ್ತರ ಕರ್ನಾಟಕದ ಆತನಿಗೆ, ಅಲ್ಲಿದ್ದ ಯಾರೋ ಒಬ್ಬ "ಆ ಬಸ್ ಹೋಕ್ಕೇತ್ರೀ, ಬನ್ರಿ" ಎಂದಾಗ, ಆತ ಏನೋ ಒಂದು ರೀತಿಯ ತನ್ನವರೆನ್ನುವ ಆತ್ಮೀಯತೆ ಆ ಉತ್ತರ ಕರ್ನಾಟಕದವನಿಗೆ. ಅಂತೂ ಇಷ್ಟು ಜನರಲ್ಲಿ ಒಬ್ಬನಾದರೂ ತಮ್ಮ ಊರ ಕಡೆಯವನು ಇದ್ದಾನಲ್ಲ ಎನ್ನುವ ಸಂತೋಷ.

ಸುಮಾರು ವರ್ಷಗಳಿಂದ ಬಿಡಿ ಹೂ ತಂದು, ಬಸ್ ನಿಲ್ದಾಣದ ಪಕ್ಕದಲ್ಲಿ ಒಂದಿಷ್ಟು ಕಡಲೆಕಾಯಿಯೊಂದಿಗೆ ಆ ಬಿಡಿ ಹೂಗಳನ್ನು ಪೋಣಿಸಿ ಮಾಲೆ ಕಟ್ಟುತ್ತಾ ಕುಳಿತು ಕೊಳ್ಳುವ ಆಕೆಗೆ, ಈ ಕಡಲೆಕಾಯಿ ಕೇಳಲು ಬರುವ ಜನ ತಾವು ಮುಡಿಯಲು ಅಲ್ಲದಿದ್ದರೂ ದೇವರಿಗೆ ಮುಡಿಸಲಾದರೂ ಈ ಹೂವ ಕೊಳ್ಳಬಾರದೇ ಎನ್ನುವ ಆಶೆ. ಕಡಲೆಕಾಯಿ ಉಳಿದರೆ ನಾಳೆ ಮಾರಬಹುದು, ಆದರೆ ಇಂದಿನ ಹೂವು ನಾಳೆಗೆ ಬಾಡುತ್ತದಲ್ಲ ಎನ್ನುವ ಚಿಂತೆ ಆಕೆಯ ಮೊಗದಲ್ಲಿ.

ಯಾರದೋ ಬರುವಿಗಾಗಿ ಕಳೆದರ್ಧ ಗಂಟೆಯಿಂದ ಕಾಯುತ್ತಾ ಕುಳಿತ ಆತನಿಗೆ, "ಥೂ, ಹಾಳಾದವರು, ಬಸ್ಸು ಹತ್ತಿದ ಮೇಲೆ ಫೋನು ಮಾಡುವುದನ್ನು ಬಿಟ್ಟು ಮನೆಯಲ್ಲಿರುವಾಗಲೇ ಫೋನು ಮಾಡುತ್ತಾರೆ" ಎಂದು ಬರುವವರಿಗಾಗಿ ಬಯ್ಯುತ್ತಾ ಕುಳಿತರೂ, ಅವರು ಇನ್ನರ್ಧ ಗಂಟೆ ಬಿಟ್ಟು ಬಂದು "ಕ್ಷಮಿಸಿ ಲೇಟಾಯ್ತು" ಎಂದಾಗ. "ಇರಲಿ ಪರವಾಗಿಲ್ಲ" ಎಂದು ಹುಸಿ ನಗೆ ಸೂಸಿ ಆತ್ಮೀಯತೆ ತೋರುವ ನಾಟಕೀಯತೆ.

ಕಳೆದ ಹತ್ತು ನಿಮಿಷದಿಂದ ಬಸ್ ನಿಲ್ದಾಣದ ಪಕ್ಕದಲ್ಲಿ ಆಟೋ ನಿಲ್ಲಿಸಿ ನಿಂತ ಆ ಕಾಲಿ ಆಟೋ ಚಾಲಕನಿಗೆ, ಬಸ್ಸಿಗಾಗಿ ಕಾಯುತ್ತಾ ನಿಂತ ಆ ನೂರಾರು ಜನರಲ್ಲಿ ಒಬ್ಬರಾದರೂ ಬಂದು ತನ್ನ ಆಟೋ ಹತ್ತಬಾರದೇ ಎನ್ನುವ ತವಕ. ಆಗ ತಾನೇ ಕಾಲೇಜು ಸೇರಿ ಸಿಗರೇಟು ಹೊತ್ತಿಸಲು ಕಲಿತ ಆತ, ಎಲ್ಲಿ ತನ್ನ ಪರಿಚಿತರಿಗೆ ಸಿಕ್ಕಿ ಹಾಕಿ ಕೊಳ್ಳುತ್ತೇನೋ ಎಂದು ಬಸ್ ನಿಲ್ದಾಣದ ಹಿಂಬಾಗದಲ್ಲಿ, ಇಂದ್ರಪ್ರಸ್ಥ ಹೊಟೇಲಿನ ಪಕ್ಕದ ಬೀಡಾ ಅಂಗಡಿಯ ಪಕ್ಕದಲ್ಲಿ ನಿಂತು, ಆ ಕಡೆ, ಈ ಕಡೆ ನೋಡುತ್ತಾ, ಹೆದರುತ್ತಾ ಉಗಿ ಬಂಡೆಯಂತೆ ಹೊಗೆ ಬಿಡುತ್ತಾ ನಿಂತಿದ್ದ.

ಈ ಎಲ್ಲ ಘಟನೆಗಳನ್ನು ಹತ್ತು ವರ್ಷಗಳ ಹಿಂದೆ ನಾನೂ ಬೆಂಗಳೂರಿಗೆ ಬಂದ ಹೊಸತರಲ್ಲಿ ನೋಡಿದ್ದು, ಅನುಭವಿಸಿದ್ದು. ನಾನು ವಿಜಯನಗರ ಬಿಟ್ಟು ಜೇ.ಪಿ.ನಗರ ಸೇರಿ ಆಗಲೇ ಐದಾರು ವರ್ಷಗಳು ಕೂಡ ಕಳೆದು ಹೋಗಿವೆ. ವಿಜಯನಗರದ ಬಸ್ ನಿಲ್ದಾಣವು ಮೊದಲಿಗಿಂತ ಹೆಚ್ಚು ದೊಡ್ಡದಾಗಿ ಬೆಳೆದಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಶೃಂಗಾರಗೊಂಡಿದೆ. ಆದರೆ ಹೊಸದಾಗಿ ಬಂದ ಬೆಂಗಳೂರಿಗರಿಗೆ ಮಾತ್ರ ಆ ಬಸ್ ನಿಲ್ದಾಣ ನನಗಾದ ಅದೇ ಅನುಭವವನ್ನು ನಿಡುವುದರಲ್ಲಿ ಎರಡು ಮಾತಿಲ್ಲ. ವ್ಯಕ್ತಿ ಬದಲಾಗಬಹುದು, ವ್ಯಕ್ತಿಯ ಭಾವನೆಗಳು, ನೋಡುವ ನೋಟಗಳು, ವ್ಯಕ್ತಿಯ ಹಾವ ಭಾವ ಎಲ್ಲವೂ ಬದಲಾಗಬಹುದು. ಆದರೆ ಹಳೆಯ ಅನುಭವಗಳು, ನೋಡಿ ಅನುಭವಿಸಿದ ಘಟನೆಗಳು, ಆಗಾಗ ಕಾಡುವ ಹಳೆಯ ನೆನಪುಗಳು ಇವೆಲ್ಲ ಬದಲಾಗಲು ಸಾದ್ಯವಿಲ್ಲ ಅಲ್ಲವೇ?

--ಮಂಜು ಹಿಚ್ಕಡ್ 

Saturday, January 25, 2014

ಹೀಗೊಂದು ಕೋರಿಕೆ!

ಗಿಡವಿರಬಹುದು ನಾನು,
ಕಿತ್ತು ಎಸೆಯದಿರು ನನ್ನ.
ಯೋಚಿಸು ಮತ್ತೊಮ್ಮೆ
ಚಿವುಟಿ ಎಸೆಯುವ ಮುನ್ನ.

ಬೆಳೆದು ದೊಡ್ಡದಾಗಿ ಕೊಡುವೆ
ನಾ ನಿನಗೆ ಹಣ್ಣನ್ನ.
ಒಂದೊಮ್ಮೆ ಹಣ್ಣಿಲ್ಲದೇ ಇದ್ದರೂ
ಕಾಯುವೆ ನೆರಳಾಗಿ ನಾನಿನ್ನ.

ಕತ್ತರಸಿ ಎಸೆಯದಿರು ಚಿನ್ನ
ನನ್ನ ಅಂಗಾಂಗಗಳನ್ನ
ನಾ ಬದುಕಿ ಬಾಳಿದರೆ ತಾನೆ
ನಿನ್ನ ಬದುಕು ಸಂಪನ್ನ.

ನಾನಿರಲು ನಿನಗೆ
ಒಂದಲ್ಲ ಎರಡಲ್ಲ
ಹಲವಾರು ಉಪಯೋಗ
ಕತ್ತರಿಸಿ ಅನುಭವಿಸದಿರು
ಕ್ಷಣಿಕ ವೈಭೊಗ.

ನೀ ಬೆಳೆದು ಬೆಳೆಸು
ನಿನ್ನ ಜೊತೆಯಲ್ಲೇ
ಮೋಡ ನಿಲ್ಲಿಸಿ, ಮಳೆ ಸುರಿಸಿ
ಕಾಪಾಡುವೆ ನಿನ್ನ
ನನ್ನ ನೆರಳಲ್ಲೇ.

ನೀನೂ ಬೆಳೆದು ನಿಲ್ಲು.
ಜೊತೆಗೆ ನನ್ನವರನು ಬೆಳೆಸು
ಇಂದಿಲ್ಲದಿದ್ದರೇನಂತೆ ಮುಂದೊಮ್ಮೆ
ನನಸಾಗುವುದು ನಿನ್ನ ಕನಸು.

--ಮಂಜು ಹಿಚ್ಕಡ್

Wednesday, January 15, 2014

ನೀ ನನ್ನ ಜೊತೆಗಿರಲು...

ಆ ನಿನ್ನ ನಯನಗಳು
ನನ್ನನೇಕೋ ಕೆಣಕುತಿವೆ
ಆ ನಯನಗಳ ನೋಟಕೆ
ಅದರಗಳೇಕೋ ಅದರುತಿವೆ.

ಆ ಪ್ರೀತಿ ಹಂದರದಿ
ಭಿತಿಗೆ ಎಡೆಯುಂಟೆ
ಆ ಸರಸದ ನೋಟದಲಿ
ವಿರಸಕ್ಕೆ ಎಡೆಯುಂಟೆ.

ಆ ನಿನ್ನ ಮೌನದ ನೋಟಕೆ
ಮಾತಿಗೆ ಎಡೆಯುಂಟೆ
ಪ್ರೀತಿಗೆ ಮೌನದ ಲೇಪಕೆ
ಮಾತು ಬೇಕೆನಿಸುವುದುಂಟೆ.

ಮಾತಿಗೆ ಮೌನದ ಲೇಪವಿರಲು
ಸರಸಕ್ಕೆ ವಿರಸದ ಲೇಪವಿರಲು
ಹೊತ್ತು ಕಳೆದದ್ದು ತಿಳಿಯುವುದುಂಟೆ
ಜನ್ಮ ಕಳೆದರೂ ಮುಗಿಯುವುದುಂಟೆ
ಈ ಸರಸ ಸಲ್ಲಾಪ.

ನೀ ಹತ್ತಿರ ಸುಳಿಯುತ್ತಿರಲು
ಮೈ ಮನಸುಗಳು ನಿಂತಲ್ಲಿ ನಿಲ್ಲದೇ
ನಿನ್ನ ಸುತ್ತ ಸುತ್ತುತ್ತಲೇ ಇರುತ್ತವೆ
ಗಡಿಯಾರದ ಮುಳ್ಳುಗಳಂತೆ

ಕಂಡ ಕನಸುಗಳ ದಾರಿಯಲಿ
ನೀ ನನ್ನ ಜೊತೆಗಿರಲು
ಈ ಬದುಕು ಸಗ್ಗವಾಗಿರದೇ
ನರಕ ಆಗುವುದುಂಟೆ.

--ಮಂಜು ಹಿಚ್ಕಡ್

Saturday, January 11, 2014

ಕಳೆದು ಹೋದವರು

ಈ ಮೊಬೈಲುಗಳು ಎಂದು ನಮ್ಮ ದೇಶಕ್ಕೆ ಬಂತೋ ಅಂದಿನಿಂದ ಪ್ರಾರಂಭವಾದ ಮೊಬೈಲ್ ಹಾವಳಿ ಇತ್ತೀಚೆಗಂತು ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಅನ್ನಿಸಿಬಿಟ್ಟಿದೆ. ಒಮ್ಮೊಮ್ಮೆ ಕರೆಗಳ ಕಾಟ ನೋಡಿ ಈ ಮೊಬೈಲ್ ಸಾಕಪ್ಪ ಸಾಕು ಅನಿಸಿದರೂ ಮತ್ತೊಮ್ಮೆ ಯಾಕಪ್ಪ ಒಂದಾದರೂ ಕರೆ ಬರಬಾರದಿತ್ತೇ ಅನ್ನಿಸಿ ಬಿಡುವಂತೆ ಮಾಡುತ್ತದೆ. ಎಲ್ಲಾದರೂ ಹೋಗುವಾಗ ಮೊಬೈಲ್ ಏನಾದರೂ ಮನೆಯಲ್ಲಿ ಬಿಟ್ಟು ಹೋದರೆ ನಮ್ಮ ಪೇಚಾಟವನ್ನು ನೋಡುವವರಿಲ್ಲ. ಮೊಬೈಲ್ ಕೈಯಲ್ಲಿ ಇದ್ದಾಗ ಒಂದೇ ಒಂದು ಕರೆ ಬಾರದಿದ್ದರೂ ಕೈಯಲ್ಲಿ ಇಲ್ಲದ್ದಿದ್ದಾಗ, ಕರೆ ಬಾರದಿದ್ದರೂ ಕರೆ ಬಂದಂತೆ ಅನಿಸುತ್ತದೆ. ಯಾಕಪ್ಪ ಮೊಬೈಲ್ ಬಿಟ್ಟು ಬಂದೆ, ಏನಾದರೂ ಮುಖ್ಯವಾದ ಕರೆ ಬಂದು ಬಿಟ್ಟಿತೇನೋ ಅನ್ನಿಸಿ ಮನಸ್ಸೆನ್ನೆಲ್ಲ ಚಡಪಡಿಸುವಂತೆ ಮಾಡಿಬಿಡುತ್ತದೆ.

ರಘುರಾಮನಿಗೆ ಮಾತ್ರ ಈ ಮೊಬೈಲ್ ಇತ್ತೀಚಿಗೆ ತೀರಾ ಕಿರಿಕಿರಿಯನ್ನುಂಟು ಮಾಡಿ ಬಿಟ್ಟಿದೆ. ಕಛೇರಿಯಲ್ಲಿ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದಾಗ, ಕಛೇರಿಯೇ ಮೊಬೈಲನ್ನು, ಸಿಮ್ ಕಾರ್ಡನ್ನು ಕೊಟ್ಟಿತ್ತು. ಆ ಮೊಬೈಲನಿಂದ ಯಾವ ಮೊಬೈಲಗೆ ಕರೆ ಮಾಡಿದರೂ ಅದರ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸುತ್ತಿತ್ತು. ಮೊದ ಮೊದಲು ಕಂಪನಿಯಲ್ಲಿ ಮೊಬೈಲ್ ಕೊಟ್ಟಾಗ ತುಂಬಾ ಸಂತೋಷವಾಗಿತ್ತು. ಯಾರ ಜೊತೆ ಬೇಕಾದರೂ ಎಷ್ಟು ಹೊತ್ತು ಬೇಕಾದರೂ ಪುಕ್ಕಟ್ಟೆ ಮಾತನಾಡಬಹುದು ಎನಿಸಿತ್ತು. ಆದರೆ ಕ್ರಮೇಣ ದಿನಗಳು ಉರುಳಿದ ಹಾಗೆ, ಅವನ ಸಂಬಳದ ಜೊತೆಗೆ ಹುದ್ದೆ ಹಾಗೂ ಕೆಲಸದ ಒತ್ತಡಗಳು ಹೆಚ್ಚಾಗುತ್ತಾ ಹೋದ ಹಾಗೆ ಸ್ನೇಹಿತರ, ಬಂಧುಗಳ ಕರೆಗಳಿಗಿಂತ ಕಛೇರಿಯ ಕರೆಗಳು ಹೆಚ್ಚಾಗುತ್ತಾ ಹೋದಂತೆ ಯಾತಕ್ಕಾದರೂ ಈ ಮೊಬೈಲನ್ನು ತೆಗೆದುಕೊಂಡೆನೋ ಅನಿಸಿಬಿಟ್ಟಿತು. ಕಂಪನಿಯ ಕರೆಗಳಷ್ಟೇ ಅಲ್ಲದೇ ಕಂಪನಿಯ ಗ್ರಾಹಕರ ಕರೆಗಳು ಬರುತ್ತಿದ್ದವು. ಹೋಗಲಿ ಕಛೇರಿಯ ಸಮಯದಲ್ಲಷ್ಟೇ ಆದರೆ ಪರವಾಗಿಲ್ಲ, ಕಛೇರಿಯಿಂದ ಮನೆಗೆ ಬಂದರೂ, ಊಟ ಮಾಡುತ್ತಿದ್ದರೂ ಈ ಕರೆಗಳು ಬರುತ್ತಲೇ ಇರುತ್ತವೆ. ಈಗೀಗ ಈ ಮೊಬೈಲೇ ಅನಿಷ್ಟ ಅನ್ನಿಸಿ ಬಿಟ್ಟಿದೆ ರಘುರಾಮನಿಗೆ.

ಇಂದು ಕಛೇರಿಯನ್ನು ಬಿಟ್ಟು ಮನೆಗೆ ಬರುವಾಗ ಒಂದೆರಡು ಗ್ರಾಹಕರ ಕರೆಗಳು ಬಂದಿದ್ದವು, ತಾನು ಕಾರು ಚಲಾಯಿಸುತ್ತಲೇ, ಇಯರ್ ಫೋನನ ಸಹಾಯದಿಂದ ಆ ಕರೆಗಳಿಗೆ ಉತ್ತರಿಸುತ್ತಾ, ಉತ್ತರಿಸುತ್ತಾ ಮನೆ ತಲುಪಿದ್ದೇ ತಿಳಿಯಲಿಲ್ಲ. "ಥೂ, ಹಾಳಾದ ಕರೆಗಳು, ಯಾಕೆ ಬರುತ್ತವೋ ಜೀವ ತಿನ್ನಲು" ಎನ್ನುತ್ತಾ ಮನೆ ಪ್ರವೇಶಿಸಿದ. ಕಛೇರಿಯ ಧಿರಿಸನ್ನೆಲ್ಲಾ ತೆಗೆದು ಬಿಳಿಯ ಪಂಚೆ ಸುತ್ತಿ, ಸ್ನಾನದ ಕೊಠಡಿ ಸೇರಿದ. ತಲೆಗೆ ಸ್ವಲ್ಪ ತಣ್ಣೀರನ್ನು ಎರೆದುಕೊಂಡು ಸ್ನಾನ ಮಾಡಿದ ಮೇಲೆ ಮನಸ್ಸಿಗೆ ಸ್ವಲ್ಪ ಹಿತವೆನಿಸಿತು. ಸ್ನಾನ ಮುಗಿಸಿ ದೇವರ ಕೋಣೆಯ ಎದುರಿಗೆ ಬಂದು ಸಂದ್ಯಾವಂದನೆ ಮಾಡಲು ಕುಳಿತ.

ರಘುರಾಮ ರಾತ್ರಿ ಬೇಕಾದರೆ ಊಟ ಬಿಡುತ್ತಿದ್ದನೇ ಹೊರತು, ದಿನಾ ಸಂದ್ಯಾವಂದನೆ ಮಾತ್ರ ತಪ್ಪಿಸುತ್ತಿರಲಿಲ್ಲ. ಅದು ಹುಟ್ಟಿನಿಂದಲೇ ನಡೆದು ಬಂದ ವಿಧಿ ವಿಧಾನ. ರಘುರಾಮ ಗಣಪತಿ ಬಟ್ಟರ ಇಬ್ಬರು ಗಂಡು ಮಕ್ಕಳಲ್ಲಿ ಕಿರಿಯವನು. ಗಣಪತಿ ಬಟ್ಟರು ತಮ್ಮ ತಂದೆಯಂತೆ, ಪೂಜೆ, ಹೋಮ, ಹವನ ಮುಂತಾದ ವೈಧಿಕ ಕಾರ್ಯಗಳನ್ನು ಮಾಡಿ, ಅದರಿಂದ ಬಂದ ಆದಾಯದಿಂದ ತಮ್ಮ ಸಂಸಾರವನ್ನು ನಡೆಸಿಕೊಂಡು, ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿದ್ದರು. ಹಿರಿಯ ಮಗ ಪರಶುರಾಮ ತನ್ನ ಊರಾದ ಶಿರ್ಶಿಯಲ್ಲಿಯೇ ಬಿ. ಎಸ್.ಸಿ ಮುಗಿಸಿ, ಮುಂದೆ ವೇದಾಭ್ಯಾಸ ಮಾಡಿ ತಂದೆಯಂತೆಯೇ ತಾನು ವೈಧಿಕ ಕಾರ್ಯಗಳನ್ನು ಮಾಡಿಕೊಂಡು ತಂದೆ ತಾಯಿಯರೊಂದಿಗೆ ಊರಲ್ಲಿಯೇ ವಾಸವಾಗಿದ್ದರು. ಕಿರಿಯ ಮಗ ರಘುರಾಮ ಶಿರ್ಶಿಯಲ್ಲಿ ಪಿಯುಸಿ ಮುಗಿಸಿ, ಒಳ್ಳೆಯ ಅಂಕಗಳನ್ನು ತೆಗೆದುಕೊಂಡು, ಧಾರವಾಡದಲ್ಲಿ ಇಂಜಿನಿಯರಿಂಗ ಓದಿ, ಬೆಂಗಳೂರಿನ ಪ್ರತಿಷ್ಟಿತ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತಿದ್ದ. ಮಕ್ಕಳಿಬ್ಬರಿಗೂ ಚಿಕ್ಕವರಿದ್ದಾಗಿನಿಂದಲೂ ಸಂದ್ಯಾವಂದನೆ ಮಾತ್ರ ದಿನವೂ ತಪ್ಪದ ರೀತಿಯಲ್ಲಿ ಬೆಳೆಸಿದ್ದರೂ ಗಣಪತಿ ಬಟ್ಟರು. ಮನೆಯ ಸಂಪ್ರದಾಯದಿಂದಲೋ, ತಂದೆಯ ಮೇಲಿನ ಅಭಿಮಾನದಿಂದಲೋ ಸಂದ್ಯಾವಂದನೆಯನ್ನು ಮಾತ್ರ ಒಂದು ದಿನವೂ ತಪ್ಪದ ರೀತಿಯಲ್ಲಿ ನೋಡಿಕೊಂಡಿದ್ದ ರಘುರಾಮ. ಕಂಪನಿಯ ಕಾರ್ಯದ ನೀಮಿತ್ತ ಒಂದೆರಡು ಬಾರಿ ಹೊರದೇಶಕ್ಕೆ ಹೋದಾಗಲೂ ತನ್ನ ಸಂದ್ಯಾವಂದನೆಯನ್ನು ಮಾತ್ರ ತಪ್ಪಿಸಿರಲಿಲ್ಲ. ಅದೆಷ್ಟೇ ಮುಖ್ಯವಾದ ಕೆಲಸವಿರಲಿ ಸಂದ್ಯಾವಂದನೆಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ ರಘುರಾಮ.

ಸಂದ್ಯಾವಂದನೆಗೆ ಕುಳಿತು ಒಂದೆರಡು ನಿಮಿಷ ಕಳೆದಿರಲಿಲ್ಲ, ಮೊಬೈಲ್ ರಿಂಗಗುಡಲು ಪಾರಂಭವಾಯಿತು. ಸಂದ್ಯಾವಂದನೆ ಮುಗಿಸಿ ನೋಡಿದರಾಯಿತು ಎಂದು ದೃಡ ಮನಸ್ಸಿನಿಂದ ಕುಳಿತ. ಇನ್ನೈದು ನಿಮಿಷ ಕಳೆಯುವುದರಲ್ಲಿ ಮತ್ತೆ ಮೊಬೈಲ್ ಸದ್ದು, "ಯಾರಪ್ಪ ಇದು? ಕಛೇರಿಯಿಂದ ಯಾರಾದರೂ ಕರೆ ಮಾಡಿರಬಹುದೇ, ಎನ್ನುವ ಯೋಚನೆ ಮನಸ್ಸಿನಲ್ಲಿ ಸುಳಿಯಿತಾದರೂ, ಯಾರಾದ್ದಾದರೇನು ಆಮೇಲೆ ನೋಡಿದರಾಯಿತು" ಎಂದು ನಿಶ್ಚಯಿಸಿ ಸಂದ್ಯಾವಂದನೆಯತ್ತ ಗಮನಹರಿಸಿದ. ಹತ್ತು ಹದಿನೈದು ನಿಮಿಷ ಕಳೆಯುವದರಲ್ಲಿ ಮತ್ತೆರಡು ಬಾರಿ ಮೊಬೈಲ್ ರಿಂಗಣಿಸಿತು. ಯಾರಪ್ಪ ಇದು ಸರಿಯಾಗಿ ಸಂದ್ಯಾವಂದನೆ ಮಾಡುವ ಸಮಯದಲ್ಲಿಯೇ ಕರೆ ಮಾಡುತ್ತಿರುವುದು ಎನಿಸಿತ್ತಾದರೂ, ಕರೆ ಮಾಡುವವರಿಗೇನು ಗೊತ್ತು ನಾನು ಈಗ ಸಂದ್ಯಾವಂದನೆ ಮಾಡುತ್ತಿರುವುದು ಎನಿಸಿ ಸುಮ್ಮನಾದ. ಬಹಳ ಹೊತ್ತು ಕುಳಿತುಕೊಳ್ಳುವ ವ್ಯವಧಾನವಿಲ್ಲದೇ ಗಡಿಬಿಡಿಯಿಂದ ಸಂದ್ಯಾವಂದನೆಯ ಶಾಸ್ತ್ರ ಮುಗಿಸಿ ಮೇಲೆದ್ದ. ಮನಸ್ಸಿನ ಪೂರ್ತಿ ಮೊಬೈಲ್ ಕರೆಗಳೆ ತುಂಬಿಕೊಂಡಿದ್ದವು. ಹೋಗಿ ಮೊಬೈಲ್ ಎತ್ತಿ ನೋಡಿದ. ಆಗಲೇ ಹತ್ತು ಮಿಸ್ಡ ಕಾಲಗಳಿದ್ದವು. ಸಮಯ ನೋಡಿದ ಆಗಲೇ ರಾತ್ರಿ ೧೨:೩೦ ಕಳೆದಿತ್ತು. ಇದು ನಿನ್ನೆಯ ದಿನದ ಸಂದ್ಯಾವಂದನೆಯೋ, ನಾಳೆಯ ದಿನದ್ದೋ ಅರ್ಥವಾಗಲಿಲ್ಲ.

ಮೊಬೈಲ್ ಎತ್ತಿಕೊಂಡು ಮಿಸ್ಡ ಕಾಲ್ ಬಂದ ಸಂಖ್ಯೆಗಳನ್ನು ಪರಿಶೀಲಿಸಿದ. ಎಲ್ಲಾ ಒಂದೇ ನಂಬರಿನಿಂದ ಬಂದ ಕರೆಗಳು. ಯಾವುದು ವಿದೇಶಿ ಕರೆಗಳಿಲ್ಲ ಎಂದೊಡನೆ ಸಮಧಾನವೆನಿಸಿತು. ಇಷ್ಟು ರಾತ್ರಿಯಲ್ಲಿ ಯಾರಿರಬಹುದು ಕರೆಮಾಡಿದ್ದು? ಕಛೇರಿಗೆ ಸಂಬಂಧ ಪಟ್ಟವರ್ಯಾರಾದರೂ ಕರೆ ಮಾಡಿರಬಹುದೇ ಎನ್ನುವ ಸಂಸಯ ಬಂದು, ಕರೆ ಬಂದ ನಂಬರಿಗೆ ತಾನು ವಾಪಸ್ ಕರೆಮಾಡಿದ. ಆ ಮೊಬೈಲ್ ರಿಂಗಾಗಿ ಕಟ್ಟಾಯಿತು ಬಿಟ್ಟರೆ ಯಾರು ಕರೆಯನ್ನು ಸ್ವಿಕರಿಸಲಿಲ್ಲ. "ಹಾಳಾದವ್ರು ಯಾಕಾದ್ರೂ ರಾತ್ರಿ ಕರೆ ಮಾಡಿ ಜೀವ ತಿನ್ನುತ್ತಾರಪ್ಪ" ಎಂದು ಬಯ್ಯುತ್ತಾ ಎದ್ದು ಅಡಿಗೆ ಕೋಣೆಗೆ ಹೋದ. ಹೊಟ್ಟೆ ತಾಳ ಹಾಕುತ್ತಿತ್ತು. ತಾನು ಕಡೆಯ ಬಾರಿ ತಿಂದಿದ್ದು ಯಾವಾಗ ಎಂದು ನೆನಪಿಸಿಕೊಂಡ. ಸಾಯಂಕಾಲ ೫ ಗಂಟೆಗೆ ಆಪೀಸಿನ ಕ್ಯಾಪಟೇರಿಯಾದಲ್ಲಿ ಗೆಳೆಯರೊಂದಿಗೆ ಸೇರಿ ಒಂದು ಸಮೋಸಾ ತಿಂದು ಚಹಾ ಕುಡಿದಿದ್ದು ನೆನಪಾಯಿತು. ತಾನು ಕಳೆದ ಎಂಟು ಗಂಟೆಯಿಂದ ಏನನ್ನ್ಉ ತಿಂದಿಲ್ಲ ಎಂದು ನೆನೆಸಿಕೊಂಡೊಡನೆ ಹೊಟ್ಟೆ ಹಸಿವಿನಿಂದ ತಾಳ ಹಾಕಲು ಸುರು ಮಾಡತೊಡಗಿತು. ತಿನ್ನಲು ಏನಿದೆ ಎಂದು ಹುಡುಕಿದ, ಸಿಗಲಿಲ್ಲ, ಬೇಸರವಾಯಿತು.ಹೊರಗೆ ಹೋಗಿ ತಿನ್ನೋಣವೆಂದುಕೊಂಡರೆ, ಈಗ ಯಾವ ಹೊಟೇಲು ತೆರೆದಿರುತ್ತದೆ. ಮತ್ತೊಮ್ಮೆ ಮನೆಯಲ್ಲಿದ್ದ ಡಬ್ಬಿಯೆನ್ನೆಲ್ಲಾ ಹುಡುಕಿದ, ಅಕ್ಕಿ, ಬೇಳೆ, ತರಕಾರಿಗಳಿದ್ದವಾದರೂ ಈಗ ಅದರಿಂದ ಊಟ ತಯಾರಿಮಾಡುಕೊಳ್ಳುವಷ್ಟು ವ್ಯವಧಾನವಿರಲಿಲ್ಲ.

"ತಥ್, ಹಾಳಾದ್ದು, ಹಸಿವೆಯಾದಾಗಲೇ ಕೈ ಕೊಡುತ್ತವೆ" ಎನಿಸಿಬಿಟ್ಟಿತು. ನೀರನ್ನಾದರೂ ಕುಡಿದು ಮಲಗೋಣ ಎಂದು ನೀರ ಬಾಟಲಿಯನ್ನು ಎತ್ತಿಕೊಂಡು ನಾಲ್ಕಾರು ಗುಟುಕು ನೀರು ಕುಡಿಯುತ್ತದ್ದಂತೆ, ಒಂದು ವಾರದ ಹಿಂದೆ ತಂದು ಅರ್ಧ ಉಪಯೋಗಿಸಿ ಶೀತಕದಲ್ಲಿ ಇಟ್ಟ ಮ್ಯಾಗಿ ಪೊಟ್ಟಣದ ನೆನಪಾಯಿತು. ಕುಡಿಯುವ ನೀರನ್ನು ಅರ್ಧಕ್ಕೆ ನಿಲ್ಲಿಸಿ, ಶೀತಕದ ಬಾಗಿಲು ತೆರೆದು ಮ್ಯಾಗಿ ಪೊಟ್ಟಣ ಇದೆ ಎನ್ನುವುದನ್ನು ನೋಡಿ ಖಾತ್ರಿ ಮಾಡಿಕೊಂಡ. ಬಾಣಲೆಯಲ್ಲಿ ನೀರು ಕಾಸಲು ಇಟ್ಟು ಬಾಟಲಿಯಲ್ಲಿ ಉಳಿದ ನೀರಲ್ಲಿ ಸ್ವಲ್ಪ ನೀರು ಕುಡಿದ. ಕಾದ ಬಾಣೆಲೆಗೆ ಮ್ಯಾಗಿ ಹಾಕಿ ಸ್ವಲ್ಪ ಕದಡಿ, ಮ್ಯಾಗಿ ಬೆಂದೊಡನೆ ಅದನ್ನು ತಟ್ಟೆಗೆ ಸುರುದ. ಅದೇ ಅವನಿಗೆ ಇವತ್ತಿನ ರಾತ್ರಿಯ ಊಟ. ಮ್ಯಾಗಿ ತಿಂದೊಡನೆ ಹೊಟ್ಟೆ ಸ್ವಲ್ಪ ತಣ್ಣಗೆ ಎನಿಸಿತು. ಮ್ಯಾಗಿ ಮಾಡಿದ ಬಾಣಲೆಯನ್ನು, ತಿಂದ ತಟ್ಟೆಯನ್ನು ನಾಳೆ ತೊಳೆದರಾಯಿತು ಎಂದು ಸಿಂಕ್ ಒಳಗೆ ಎಸೆದು ಬಂದ. ಹಾಸಿಗೆ ಹಾಸಿ ಸಮಯ ನೋಡಿದ ,ಸಮಯ ಆಗಲೇ ಒಂದೂವರೆ ದಾಟಿತ್ತು. ಬೆಳಿಗ್ಗೆ ಬೇರೆ ಬೇಗ ಏಳಬೇಕು ಎಂದು ಮಲಗಿದ.

ಬೆಳಿಗ್ಗೆ ಆಗಿನ್ನೂ ೬:೩೦ ಗಂಟೆ, ಚಳಿಗಾಲದ ಚಳಿಗೆ ಸೋತು ಮುಸುಕು ಹೊದ್ದು ಮಲಗಿದ್ದ ರಘುರಾಮನಿಗೆ ಎಚ್ಚರವಾದರೂ ಏಳಲು ಮನಸ್ಸು ಬರಲಿಲ್ಲ. ಇನ್ನು ಸ್ವಲ್ಪ ಹೊತ್ತು ಹೀಗೆ ಮಲಗಿರೋಣ ಎಂದು ಮಲಗಿದ ಅವನನ್ನು ಮೊಬೈಲ್ ಕರೆ ಮತ್ತೆ ಎಬ್ಬಿಸಿತು. "ಥೂ, ಇದೊಂದು ಮಲಗೊಕ್ಕು ಬಿಡಲ್ಲ, ಹಾಳಾದುದ್ದು." ಎಂದು ಶಾಪ ಹಾಕುತ್ತಾ ಹೋಗಿ ಬಂದ ಕರೆಯನ್ನು ನೋಡಿದ. ಹೌದು ಅದೇ ನಂಬರ್, ನಿನ್ನೆ ರಾತ್ರಿ ಹತ್ತು ಬಾರಿ ಕರೆ ಬಂದದ್ದು ಇದೇ ಮೊಬೈಲನಿಂದ. ಮೊಬೈಲ್ ಕರೆಯನ್ನು ಸ್ವಿಕರಿಸಿ "ಹಲೋ, ಯಾರಿದು?" ಎಂದ.

"ಏನೋ ಗೂಬೆ, ಮರೆತು ಬಿಟ್ಟೆಯಾ, ಯಾಕೋ ಹೀಗಾದೆ, ಒಂದು ವರ್ಷ ಆಯಿತಲ್ಲವೇನೋ ನಾವಿಬ್ಬರೂ ಮಾತನ್ನಾಡಿ."

ಹೆಣ್ಣು ಧ್ವನಿ, ಹೌದು ಈ ಧ್ವನಿಯನ್ನು ಎಲ್ಲೋ ಕೇಳಿದ್ದೇನೆ ಅನಿಸಿತು, ಯಾರಾಗಿರಬಹುದು? ನೆನಪಿಸಿಕೊಳ್ಳಲು ಯತ್ನಿಸಿದ. ಎಷ್ಟೇ ಮೆದುಳನ್ನು ಕಲಕಾಡಿದರೂ, ಆಪೀಸಿನ ಕರೆಗಳೇ ಜ್ನಾಪಕಕ್ಕೆ ಬರುತ್ತಿದ್ದವೇ ವಿನಃ ಮತ್ಯಾವ ಹೆಸರು ನೆನಪಿಗೆ ಬರುತ್ತಿಲ್ಲ. ಯಾರಪ್ಪ ಈಕೆ ಎಂದು ನೆನಸಿಕೊಳ್ಳಲು ಯತ್ನಿಸಿದರು ಅವಳ ಹೆಸರು ನೆನಪಿಗೆ ಬರಲಿಲ್ಲ, ಹೆಸರು ಗೊತ್ತಿಲ್ಲ ಎಂದರೆ ಎಲ್ಲಿ ತನ್ನ ಮರ್ಯಾದೆ ಹೋಗುತ್ತೋ ಎಂದನಿಸಿ, "ಹೋ! ನೆನಪಾಯ್ತು ಹೇಳಿ, ಚೆನ್ನಾಗಿದ್ದಿರಾ?" ಎಂದು ಕೇಳಿದ.

"ಏನೋ ರಘು ಇದು, ಬಹುವಚನದಲ್ಲಿ ಮಾತನ್ನಾಡಿಸುತ್ತಿದ್ದಿಯಾ? ಯಾಕೋ, ಏನಾಯ್ತೋ ನಿನಗೆ? ನಾನು ಚೆನ್ನಾಗಿದ್ದಿನಿ ಕಣೋ, ನೀನು ಹೇಗಿದ್ದಿಯಾ ಹೇಳು" ಎಂದಳು ಆಕೆ.

ಯಾರೀಕೆ, ನನಗೆ ತುಂಬಾ ಪರಿಚಯವಿರುವಂತೆ ಮಾತನ್ನಾಡುತ್ತಿದ್ದಾಳಲ್ಲ, ನಮ್ಮ ಆಪೀಸಿನವರ್ಯಾರಾದರೂ ನನಗೆ ಯಾಮಾರಿಸುತ್ತಿರಬಹುದೇ? ಅಥವಾ ನನ್ನ ಸಂಬಂಧಿಕರ್ಯಾರಾದರೂ ಇರಬಹುದೇ? ಎನೇ ಇರಲಿ ಕೇಳೇ ಬಿಡೋಣ ಎಂದನಿಸಿ, "ಕ್ಷಮಿಸಿ, ನಿಮ್ಮ ಹೆಸರು ಜ್ನಾಪಕಕ್ಕೆ ಬರುತ್ತಿಲ್ಲ."

"ಹೇ, ಕೋತಿ ನಾನು ಕಣೋ, ನಾನು ನಿನ್ನ ಕ್ಲಾಸಮೇಟ್ ಶಿಲ್ಪಾ, ಏನೋ ಇಷ್ಟು ಬೇಗ ಮರೆತು ಬಿಟ್ಟೆಯಾ?"

ಈಗ ನೆನಪಾಯಿತು ಆತನಿಗೆ, ಅದೆಷ್ಟು ದಿನವಾಯಿತು ಅವಳ ಹತ್ತಿರ ಮಾತನ್ನಾಡಿ. ಕೊನೆಯ ಬಾರಿ ಕರೆ ಮಾಡಿದಾಗ ಒಂದೆರಡು ಮಾತನ್ನಾಡಿ, ಆಮೇಲೆ ಮಾಡುತ್ತೇನೆ ಎಂದವನು ಕರೆ ಮಾಡಿರಲೇ ಇರಲಿಲ್ಲ. ಅದಾಗಲೇ ಅವಳ ಬಳಿ ಮಾತನ್ನಾಡಿ ಒಂದು ವರ್ಷ ಕಳೆದಿದ್ದು ಅವನಿಗೆ ಜ್ನಾಪಕಕ್ಕೆ ಬರಲಿಲ್ಲ.

"ಏನೋ, ಇನ್ನಾದರೂ ನೆನಪಾಯಿತೋ ಹೇಗೆ" ಎಂದಾಗ ನೆನಪಿನ ಲೋಕದಿಂದ ಹೊರಬಂದವನಂತೆ ತೊದಲುತ್ತಾ, "ಹೇ ಶಿಲ್ಪಾ, ಸಾರಿ ಕಣೇ, ನಿದ್ದೆಯ ಗುಂಗಿನಲ್ಲಿ ನಿನ್ನ ನೆನಪೇ ಆಗಲಿಲ್ಲ" ಎಂದು ಒಂದು ಚಿಕ್ಕ ಸುಳ್ಳನ್ನು ಎಸೆದ.

"ಆಯ್ತು ಬಿಡೋ, ಇರಲಿ" ಎನ್ನುತ್ತಾ "ಹುಟ್ಟು ಹಬ್ಬದ ಶುಭಾಶಯಗಳು" ಎಂದಳು.

ಆಗಲೇ ನೆನಪಾಗಿದ್ದು ಆತನಿಗೆ ಇಂದು ತನ್ನ ಹುಟ್ಟಿದ ದಿನವೆಂದು ಈಗ ನೆನಪಾಯಿತು, ಕಳೆದ ಬಾರಿ ನೆನಪು ಮಾಡಿದ್ದು ಕೂಡ ಈಕೇನೆ ಎಂದು ಅವನಿಗೆ ಈಗ ನೆನಪಾಯಿತು.

ಕಾಲೇಜಿನಲ್ಲಿ ಓದುವಾಗ ಒಮ್ಮೆ ಶಿಲ್ಪಾ "ನಿನ್ನ ಹುಟ್ಟಿದ ದಿನ ಯಾವಾಗ" ಎಂದು ಕೇಳಿದಾಗ, "೧೮ ಜನವರಿ" ಎಂದು ಹೇಳಿದ್ದನಾದರೂ, ಅವಳು ಹೀಗೆ ಕೇಳಿರಬೇಕು ಎಂದು ತಿಳಿದು ಅವಳಿಗೆ ತನ್ನ ಹುಟ್ಟಿದ ದಿನಾಂಕವನ್ನು ತಿಳಿಸಿದ್ದ. ಅವಳಿಗೆ ತನ್ನ ಸ್ನೇಹಿತರ ಹುಟ್ಟಿದ ದಿನಾಂಕವನ್ನು ಒಂದಡೆ ಕೂಡಿಟ್ಟು, ಅವರು ಹುಟ್ಟಿದ ದಿನದಂದು, ಅವರಿಗೆ ಶುಭಾಶಯ ತಿಳಿಸುವುದು ಅವಳ ಹವ್ಯಾಸ ಎಂದು ಅವನಿಗೆ ತಿಳಿದಿದ್ದು, ಅವಳು ಆ ವರ್ಷ ಅವನ ಹುಟ್ಟಿದ ದಿನದಂದು ಅವನಿಗೆ ಹುಟ್ಟಿದ ಹಬ್ಬದ ಶುಭಾಶಯವನ್ನು ತಿಳಿಸಿದಾಗಲೇ. ಅಂದಿನಿಂದ ಇಂದಿನವರೆಗೂ ತಪ್ಪದೇ ಅವನ ಹುಟ್ಟಿದ ದಿನದಂದು ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಳು ಶಿಲ್ಪಾ.

ಇಂದು ಕೂಡಾ ಆಕೆ ಕರೆ ಮಾಡಿದ್ದು ಅವನಿಗೆ ಶುಭಾಶಯ ತಿಳಿಸಲೆಂದೇ. ರಾತ್ರಿ ಹನ್ನೆರಡು ಹೊಡೆಯುತ್ತಿದ್ದ ಹಾಗೆ ಅವನಿಗೆ ಕರೆ ಮಾಡಲು ಪ್ರಯತ್ನಿಸಿದಳು. ಎಂಟು ಹತ್ತು ಬಾರಿ ಪ್ರಯತ್ನಿಸಿದಾಗಲೂ ಆತ ಕರೆ ಸ್ವಿಕರಿಸದೇ ಇದ್ದುದನ್ನು ತಿಳಿದು, ಬಹುಷಃ ಆತ ಮಲಗಿರಬಹುದು ಎಂದು ತಾನು ಮಲಗಿದ್ದಳು. ರಘುರಾಮ ರಾತ್ರಿ ಕರೆ ಮಾಡಿದಾಗ ಅವಳು ಆಗಲೇ ಮಲಗಿದ್ದಳು. ಬೆಳಿಗ್ಗೆ ಎದ್ದು ಆತನ ಕರೆ ನೋಡಿ ನೆನಪಾಗಿ ಮತ್ತೆ ಕರೆ ಮಾಡಿದ್ದಳು. ಅವನ ಹುಟ್ಟಿದ ದಿನದ ನೆನಪು ಆತನಿಗೆ ಇಲ್ಲದಿದ್ದರೂ ಆಕೆಗೆ ನೆನಪಿತ್ತು.

ತನ್ನ ಹುಟ್ಟಿದ ದಿನವನ್ನು ನೆನಪಿಸಿದ್ದಕ್ಕಾಗಿ ಅವಳಿಗೆ ಧನ್ಯವಾದಗಳನ್ನು ತಿಳಿಸಿದ. ಆಪೀಸಿನ ನೆನಪಾಗಿ ಮತ್ತೆ ಕರೆ ಮಾಡುವುದಾಗಿ ಹೇಳಿ ಮೊಬೈಲ್ ಇಟ್ಟು ಸ್ನಾನದ ಕೋಣೆ ಸೇರಿದ. ಸ್ನಾನ ಮಾಡಿ ತಯಾರಿಗೊಂಡು ಆಪೀಸಿನತ್ತ ಪ್ರಯಾಣ ಬೆಳೆಸಿದ. ಇಂದೇಕೋ ಆತ ಮೊದಲಿನಂತಿರಲಿಲ್ಲ. ತಾನು ಎಲ್ಲೋ ಕಳೆದು ಹೋಗಿದ್ದೇನೆ ಅನಿಸಿತು. ಆಪೀಸು, ಸಂಬಳ, ಅಪ್ರೈಸಲ್, ಪ್ರೊಜೆಕ್ಟ, ಕ್ಲೈಂಟ್, ರಿಲೀಸಗಳ ಮಧ್ಯೆ ತಾನೆಲ್ಲೋ ಕಳೆದು ಹೋಗಿದ್ದೇನೆ ಅನಿಸಿತು. ತಾನು ಸಂಪೂರ್ಣ ಕಳೆದು ಹೋಗುವವರೆಗೆ ಎಚ್ಚೆತ್ತು ಕೊಳ್ಳಬೇಕು ಎನಿಸಿ, ಆಪೀಸಿನತ್ತ ಹೋಗುತ್ತಿದ್ದ ಕಾರನ್ನು ಲಾಲ್ ಬಾಗ್ ನತ್ತ ತಿರುಗಿಸಿದ. ಲಾಲ್ ಬಾಗನ ಒಳ ಪ್ರವೇಶಿಸಿ, ಮುಂದೆ ಹೋಗಿ ಕಲ್ಲು ಬಂಡೆಯ ಮೇಲೆ ಕುಳಿತ. ಮನಸ್ಸಿಗೆ ಅದೇಕೋ ನೆಮ್ಮದಿ ಅನಿಸತೊಡಗಿತು. ಅದೆಷ್ಟು ವರ್ಷವಾಯಿತು ಈ ಲಾಲ್ ಬಾಗಗೆ ಬಂದು, ನೆನಪಾಗಲಿಲ್ಲ. ಬೆಂಗಳೂರಿಗೆ ಬಂದ ಹೊಸತರಲ್ಲಿ ಲಾಲ್ ಬಾಗ್ ಎನ್ನುವ ಹೂದೋಟದ ಸ್ವರ್ಗಕ್ಕೆ ಮನಸೋತು ಮೂರ್ನಾಲ್ಕು ಬಾರಿ ಬಂದಿದ್ದ. ಅದರೆ ಇತ್ತೀಚೆಗೆ ಕೆಲಸದ ನಡುವಲ್ಲಿ ಕಳೆದು ಹೋದ ಅವನಿಗೆ ಲಾಲ್ ಬಾಗ್ ನೆನಪಾಗಿರಲಿಲ್ಲ.

ಕಂಪನಿಯಲ್ಲಿನ ತನ್ನ ಸಹೋದ್ಯೋಗಿಗೆ ಕರೆ ಮಾಡಿ, "ನನಗೆ ಹುಷಾರು ಇಲ್ಲಾ, ಆಪೀಸಿಗೆ ಬರಲ್ಲಾ, ಒಂದು ವಾರದ ಮೇಲೆ ಬರುತ್ತೇನೆ, ಮ್ಯಾನೇಜರಗೆ ತಿಳಿಸು" ಎಂದು ಹೇಳಿ ಕರೆ ಕಟ್ ಮಾಡಿದ. ಮೊಬೈಲ್ ಆಪ್ ಮಾಡಿ ಆ ದಿನವನ್ನೆಲ್ಲಾ ಲಾಲ್ ಬಾಗನಲ್ಲೇ ಕಳೆದ. ಯಾಕೋ ಮನಸ್ಸು ಹಿಡಿತಕ್ಕೆ ಬಂದಂತೆ ಅನಿಸಲಿಲ್ಲ. ಮನೆ, ಊರಿನ ನೆನಪಾಯಿತು, ಊರಿಗೆ ಹೋಗಿ ಅದಾಗಲೇ ಏಳೆಂಟು ತಿಂಗಳುಗಳು ಕಳೆದು ಹೋಗಿದ್ದವು. ಕೆಲಸದ ನಡುವೆ ಮನೆಯ ನೆನಪಾಗಿರಲಿಲ್ಲ. ಲಾಲ್ ಬಾಗನಿಂದ ನೇರವಾಗಿ ಮನೆಗೆ ಬಂದು, ಬಟ್ಟೆಯನ್ನೆಲ್ಲಾ ಸ್ಯೂಟ್ ಕೆಸಗೆ ತುಂಬಿ. ಆ ಸ್ಯೂಟ್ ಕೆಸನ್ನು ಕಾರಿನ ಡಿಕ್ಕಿಗೆ ಹಾಕಿ, ಕಾರನ್ನು ತೆಗೆದು ಕೊಂಡು ಶಿರ್ಶಿಯತ್ತ ನಡೆದ. ಒಂದು ವಾರದ ಮಟ್ಟಿಗಾದರೂ ನೆಮ್ಮದಿಯಾಗಿರೋಣವೆಂದು.

--ಮಂಜು ಹಿಚ್ಕಡ್

Tuesday, January 7, 2014

ಸಮಾನತೆ, ಸಮಬಾಳ್ವೆ

ಬಾಯಲ್ಲಿ ಸಮಾನತೆ
ಸಮಬಾಳ್ವೆಯ ಮಂತ್ರ
ಹಿಂದಡೆ ಎಲ್ಲವನು
ಮುಚ್ಚಿಡುವ ತಂತ್ರ.

ಸಮಾನತೆ, ಸಮಬಾಳ್ವೆಗಳು
ಬಿಳಿಯ ಹಾಳೆಯ ಮೇಲಿನ
ಕಪ್ಪು ಅಕ್ಷರಗಳು ಮಾತ್ರ.

ಇವು ಓದುವುದಕ್ಕೂ
ಮಾತನ್ನಾಡುವುದಕ್ಕೂ ಮಾತ್ರ
ಅನುಸರಿಸಿ ನಡೆಯುವದಕ್ಕಲ್ಲ
ಕೇವಲ ತೋರಿಕೆಗೆ ಮಾತ್ರ.

--ಮಂಜು ಹಿಚ್ಕಡ್

Saturday, January 4, 2014

ಬೆಳ್ಳಗಿರುವುದೆಲ್ಲಾ ಹಾಲಲ್ಲ..

ಬಣ್ಣ ಕಪ್ಪಿರಬಹುದು
ಹಾಗಂತ ಕಾಗೆ ಕೋಗಿಲೆಯಲ್ಲ
ಮುಖಚರ್ಯೆ ಹೋಲುತಿರಬಹದು
ಹಾಗಂತ ಬೆಕ್ಕು ಹುಲಿಯಲ್ಲ.

ದಾನಿಯ ಮುಖವಾಡ ಹೊತ್ತವರೆಲ್ಲ
ದಾನಶೂರ ಕರ್ಣರೆನ್ನುವುದು ಸಲ್ಲ
ಮುಖವಾಡ ಕಳಚಿ ಎಸೆಯಬಹುದು
ಆದರೆ ನೈಜತೆಯನ್ನಲ್ಲ.

ಬಣ್ಣ ಬಣ್ಣದ ಪೋಷಾಕು
ತೊಟ್ಟು ಪೋಸು ಕೊಟ್ಟೊಡನೆ
ಆತನನ್ನು ಪೋಷಕ ಎನ್ನಲಾದಿತೇ?

ಸಿಂಹಾಸನ ಏರಿದವರನ್ನೆಲ್ಲಾ
ಸಿಂಹ ಎನ್ನುವುದಾದರೆ
ಒಂದೊಮ್ಮೆ ನಾಯಿ
ಸಿಂಹಾಸನ ಏರಿದರೆ
ಆ ಶ್ವಾನಕ್ಕೂ ಸಿಂಹ ಎನ್ನಲಾದಿತೇ?

ಬೆಳ್ಳಗಿರುವುದೆಲ್ಲಾ ಹಾಲಾಗುವುದಾದರೆ
ಸುಣ್ಣದ ನೀರು ಕೂಡ ಬೆಳ್ಳಗಿಹುದಲ್ಲಾ.

ಮುಖವ ಮೆತ್ತಿದ ಬಣ್ಣದ ಲೇಪ
ಬೆವರಿಂದ ಅಳಿಸಿ ಹೋದಾಗ
ಅದೇ ಬೂದಿ ಮುಚ್ಚಿದ
ಇದ್ದಲಿಯ ಬಣ್ಣ
ಸುಣ್ಣದಂತಿರಲು ಸಾಧ್ಯವಿಲ್ಲವಲ್ಲ..

--ಮಂಜು ಹಿಚ್ಕಡ್

Thursday, January 2, 2014

ವಿರಹ ನೂರು ತರಹ!

ಗಣಕಯಂತ್ರದ ಮುಂದೆ ಅದು ಇದು ನೋಡುತ್ತಾ ಕುಳಿತ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಸಮಯ ಆಗಲೇ ಹತ್ತು ದಾಟಿತ್ತು. ಹೊಟ್ಟೆ ಒಂದಡೆ ಹಸಿವಿನಿಂದ ತಾಳಹಾಕುತಿತ್ತು. ಎದ್ದು ಅಡಿಗೆ ಕೋಣೆಗೆ ಹೋದೆ, ತಿನ್ನಲು ಏನಾದರು ಇದೆಯಾ ನೋಡಿದೆ, ಆಗ ನೆನಪಾಯಿತು ಬೆಳಿಗ್ಗೆ ಅಡಿಗೆ ಮಾಡದೇ ಹೊರಗಡೆ ತಿಂದು ಬಂದಿದ್ದು. ಶೀತಕದ ಬಾಗಿಲು ತೆರೆದೆ, ಅಂತು ನಿನ್ನೆ ಮಾಡಿದ ಸಾಂಬಾರ ಸ್ವಲ್ಪ ಇತ್ತು. ಅಬ್ಬಾ! ಇದಾದರು ಇದೆಯಲ್ಲ ಅಂದುಕೊಂಡು, ಸ್ವಲ್ಪ ಅನ್ನಕ್ಕಿಟ್ಟೆ. ನಿನ್ನೆ ರಾತ್ರಿ ಉಂಡು ತೊಳಯದೇ ಇದ್ದ ಪಾತ್ರೆಗಳನ್ನು ತೊಳೆಯುವುದೋ,ಬೇಡವೋ ಅನ್ನುವ ಇಬ್ಬಗೆಯ ಮನಸ್ಸಿಂದ ತೊಳೆದು ಪಕ್ಕಕ್ಕಿಟ್ಟು ಬರುವ ಹೊತ್ತಿಗೆ ಕುಕ್ಕರ ತನ್ನ ಕೆಲಸ ಅನ್ನುವದನ್ನು ಜ್ನಾಪಿಸತೊಡಗಿತು. ಮೂರುಸಾರಿ ಒಂದೇ ಸಮನೇ ಕೂಗಿಕೊಂಡ ಮೇಲೆ ಅದನ್ನು ಬಂದು ಮಾಡಿದೆ. ಶೀತಲಯಂತ್ರದಲ್ಲಿದ್ದ ಸಾಂಬಾರನ್ನು ತೆಗೆದು ಬಿಸಿ ಮಾಡಿದೆ. ಕುಕ್ಕರ ತನ್ನಸ್ಟಕ್ಕೇ ತಾನೇ ಏದುಸಿರು ಬಿಡುತ್ತಾ ಭದ್ರವಾಗಿ ಒಲೆಯ ಮೇಲೆ ಕುಳಿತಿತ್ತು. ಅದರ ಉಸಿರು ನಿಲ್ಲುವರೆಗೂ ಕಾಯುವಷ್ಟು ವ್ಯವಧಾನ  ನನಗಿರಲಿಲ್ಲ. ಅಂತೂ ಅದರ ಕವಾಟವನ್ನು ಎತ್ತಿ ಅದರ ಉಸಿರನ್ನ ನಿಲ್ಲಿಸಿದೆ. ಬೇಗ ಬೇಗ ಅದನ್ನ ಬಿಡಿಸಿ, ಅದರಲ್ಲಿದ್ದ ಅನ್ನವನ್ನ ತಟ್ಟೆಗೆ ಸುರಿವಿ, ಸಾಂಬಾರನ್ನ ಹಾಕಿಕೊಂಡು, ಅಡಿಗೆ ಕೋಣೆಯಲ್ಲೇ ನಿಂತು ಊಟ ಮಾಡಿ ಮುಗಿಸಿದೆ. ಬಟ್ಟಲಿಗೆ ಸ್ವಲ್ಪ ನೀರು ಹಾಕಿ ಅಲ್ಲೇ ತೊಳೆಯಲು ಇಟ್ಟು ಹೊರಗೆ ಬಂದೆ. ಅಂದು ಊಟ ಮಾಡಿದ ಬಟ್ಟಲನ್ನು ಅಂದೇ ತೊಳೆಯುವ ಅಭ್ಯಾಸವಿಲ್ಲದ್ದರಿಂದಲೋ ಅಥವಾ ತೊಳೆಯುವ ಮನಸ್ಸಿಲ್ಲದ್ದರಿಂದಲೋ ಅದನ್ನ ಹಾಗೇ ಅಲ್ಲೇ ಬಿಟ್ಟುಬರುವುದು ನನ್ನ ದೈನಂದಿನ ಅಭ್ಯಾಸ.

ಬಹುಷಃ ಬಹುತೇಕ ಒಂಟಿಜೀವಿಗಳ ಬದುಕು ಹೀಗೇ ಇರಬಹುದೇನೋ? ಈ ಒಂಟಿತನವೇ ಹಾಗೆ ಏನು ಮಾಡಲು ಮನಸ್ಸು ಬರುವುದಿಲ್ಲ. ಮನಸ್ಸು ಬಂದರೂ ಆಸಕ್ತಿ ಇರುವುದಿಲ್ಲ. ಒಂಟಿತನದಲ್ಲೂ ಎರಡು ವಿಧ ಒಂದು ಮದುವೆಯ ಮೊದಲಿನ ಒಂಟಿತನ, ಇನ್ನೊಂದು ಮದುವೆಯ ನಂತರದ ಒಂಟಿತನ. ನನಗೆ ಇವೆರಡರಲ್ಲೂ ಅನುಭವ ಇದ್ದುದರಿಂದಲೋ ಏನೋ, ಇವೆರಡರ ನಡುವೆ ಅಜಗಜಾಂತರವಾದ ವ್ಯತ್ಯಾಸ ಎದ್ದು ಕಾಣುತ್ತದೆ. ಮದುವೆಗೆ ಮೊದಲಾದರೆ ಒಬ್ಬಂಟಿ  ಇದ್ದಾಗ ಎಲ್ಲೋ ಒಬ್ಬನೇ ಹೊರಗಡೆ ಸುತ್ತಾಡಿ ಬರಬಹುದಿತ್ತು. ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಷ್ಟೇ ಹೊತ್ತಿಗೆ ಬಂದರೂ ಕೇಳುವವರು ಏನ್ನುವವರು ಯಾರು ಇರುತ್ತಿರಲಿಲ್ಲ. ಆಗ ಏನು ಮಾಡಿದರು ಕೇಳುವವ್ರಾರು ಅನ್ನುವ ಭಾವನೆ ಬೇರೆ. ಆದರೆ ಮದುವೆಯ ನಂತರ ಅದು ಕಷ್ಟ. ಎಲ್ಲೋ ಹೊರಗಡೆ ಹೋಗಿ ಸ್ವಲ್ಪ ತಡವಾದರೂ ಹೆಂಡತಿಯಿಂದ ಕರೆ ಬರುತ್ತದೆ. ಎಲ್ಲಿದ್ದಿರಾ? ಏನು ಮಾಡ್ತಾ ಇದ್ದಿರಾ? ಇನ್ನೂ ಮನೆಗೆ ಹೋಗಿಲ್ವಾ? ಊಟ ಮಾಡಿದ್ದಿರಾ? ಏನು ಮಾಡಿದ್ದಿರಾ? ಹಾಗೆ ಹೀಗೆ ಇತ್ಯಾದಿ, ಇತ್ಯಾದಿ…..

ಹೆಂಡತಿ ಮಗಳು ಊರಿಗೆ ಹೋಗಿ ಅದಾಗಲೇ ಹದಿನೈದು ದಿನಗಳಾಗಿದ್ದವು. ಬರಲು ಇನ್ನೂ ಹದಿನೈದು ದಿನಗಳಾದರೂ ಆಗಬಹುದೇನೋ ಎಂದು ನೆನಸಿಕೊಂಡಾಗಲಂತೂ ಮನಸ್ಸಿಗೆ ಇನ್ನೂ ಬೇಸರವಾಗತೊಡಗಿತು. ಇನ್ನುಳಿದ ದಿನಗಳನ್ನ ಕಳೆಯುವುದು ಹೇಗೆ ಎನ್ನುವ ಚಿಂತೆ. ಅದು ವಾರದ ನಡುದಿನಗಳಾದರೆ ಪರವಾಗಿಲ್ಲ ಅಷ್ಟೊಂದು ಒಂಟಿತನ ಕಾಡುವುದಿಲ್ಲ. ಕಛೇರಿಯಲ್ಲೇ ಸ್ವಲ್ಪ ಜಾಸ್ತಿ ಸಮಯ ಕಳೆದು ಮನೆಗೆ ಬರಬಹುದಿತ್ತು. ಆದರೆ ವಾರಾಂತ್ಯಗಳೆಂದರೆ ಅದೇನೋ ಬೇಸರ ಜುಗುಪ್ಸೆಗಳೇ ಜಾಸ್ತಿ. ಮನಸ್ಸೆಂಬುದು ಹುಚ್ಚರ ಸಂತೆಯಂತಿರುತ್ತದೆ.

ಅದೇ ಹೆಂಡತಿ ಮಗಳಿದ್ದರೆ ಸಾಕು ಸಮಯ ಹೋದದ್ದೆ ಗೊತ್ತಾಗುತ್ತಿರಲಿಲ್ಲ. ಹೆಂಡತಿಯೊಂದಿಗೆ ಮಾತನ್ನಾಡುತ್ತಲೋ ಅಥವಾ ಜಗಳವಾಡುತ್ತಲೋ, ಇಲ್ಲಾ ಮಗುವಿನೊಂದಿಗೆ ಆಟವಾಡುತ್ತಲೋ ಸಮಯ ಕಳೆಯ ಬಹುದಿತ್ತು. ಆದರೆ ಈಗ? ಇರುವ ಸಮಯವನ್ನ ಕಳೆಯುವುದು ಹೇಗೆ ಅನ್ನುವುದೇ ಚಿಂತೆ. ಕೆಲವೊಮ್ಮೆ ಹೆಂಡತಿ ಜೊತೆಯಲ್ಲಿದ್ದಾಗ ಮಾತನ್ನಾಡಿದುದಕ್ಕಿಂತ ಜಗಳವಾಡಿದ್ದೇ ಜಾಸ್ತಿ. ಈಗ ಅನ್ನಿಸುತ್ತದೆ, ಅಯ್ಯೋ! ಅವಳಿರಬಾರದಿತ್ತೇ ಅಂತ. ಅದಕ್ಕೇ ಹಿಂದಿನವರು ಹೇಳಿರಬೇಕು "ಹತ್ತಿರವಿರುವುದಕ್ಕಿಂತ ದೂರವಿದ್ದಷ್ಟು ಪ್ರೀತಿ ಜಾಸ್ತಿ" ಅಂತ.

ಈ ವಿರಹ ವೇದನೆಯೇ ಹೀಗೆ, ಅದು ಕಾಡಿದಾಗ ಏನು ಮಾಡಲು ಸಾದ್ಯವಾಗುವುದಿಲ್ಲ. ದೂರದರ್ಶನದ ಮುಂದೆ ಕುಳಿತರೆ, ಕೈಯಲ್ಲಿದ್ದ ರಿಮೋಟ ಮನಸ್ಸಿಗಿಂತ ವೇಗವಾಗಿ ಚಾನೆಲಗಳನ್ನ ಬದಲಿಸುತ್ತಿರುತ್ತದೆ. ಅದಾಗಿ ಬದಲಿಸುತ್ತಿದೆಯೋ ಅಥವಾ ನಾನೇ ಬದಲಿಸುತ್ತಿದ್ದೆನೋ ಅನ್ನುವುದು ಅನುಭವಕ್ಕೆ ಬಾರದ ರೀತಿಯಲ್ಲಿ ಬದಲಾಗುತ್ತಿರುತ್ತದೆ. ಇನ್ನೂ ಗಣಕಯಂತ್ರದ ಮುಂದೆ ಕುಳಿತರಂತೂ ಅದೇನು ಮಾಡುತಿದ್ದೇನೆ ಅನ್ನುವುದು ಗೊತ್ತಾಗುವುದಿಲ್ಲ. ಹೊಟ್ಟೆಗೆ ಹಸಿವು ಎನ್ನಿಸುವುದಿಲ್ಲ. ಓದು ಬರಹಗಳಲ್ಲಾಗಲಿ ಅಥವಾ ಇನ್ನಾವುದೇ ಕೆಲಸಗಳಲ್ಲಾಗಲಿ ಆಸಕ್ತಿ ಇರುವುದಿಲ್ಲ. ಒಮ್ಮೆ ವಿರಹ ವೇದನೆ ಒಕ್ಕರಿಸಿದರೆ ಸಾಕು, ಅದು ಮನುಷ್ಯನನ್ನ ಒಂದಲ್ಲ ಎರಡಲ್ಲ ನೂರಾರು ತರಹದಲ್ಲಿ ಕಾಡತೊಡಗುತ್ತದೆ. ಅದಕ್ಕೇ ಅಲ್ಲವೇ ಕವಿಗಳು ಹಾಡಿದ್ದು..
"ವಿರಹಾ ನೂರು ನೂರು ತರಹ
ವಿರಹಾ ಪ್ರೇಮ ಕಾವ್ಯದಾ ಕಹಿ ಬರಹ"

--ಮಂಜು ಹಿಚ್ಕಡ್