Tuesday, July 28, 2015

ಹುಡುಕಾಟದ ಹಾದಿಯಲ್ಲಿ ಭಾಗ ೩


ಆತ ತೋರಿಸಿದ ದಾರಿಯಲ್ಲಿ ಒಂದೆರಡು ನೂರು ಮೀಟರ್ ನಡೆದೊಡೊನೆ ಅವನು ಹುಡುಕುತಿದ್ದ ವಿಳಾಸ ಸಿಕ್ಕಿತು. ಅವನು ಕಂಪನಿಯ ಗೇಟಿನ ಹತ್ತಿರ ಹೊರಡುವ ಹೊತ್ತಿಗೆ ಅವನ ಗಡಿಯಾರದಲ್ಲಿ ೯ ಹೊಡೆದಿತ್ತು. ಗೇಟಿನತ್ತ ನೋಡಿದ ಗೇಟಿನ್ನು ಮುಚ್ಚೇ ಇತ್ತು. ಇಂಟರ್ವೂವ್ಗೆ ಬಂದ ಜನ ಸಾಲಾಗಿ ಆರು ಸಾಲುಗಳಲ್ಲಿ ನಿಂತಿದ್ದರು. ಆತ ಹೋಗಿ ಒಂದು ಸಾಲಿನ ತುದಿಯನ್ನು ನೋಡಿ ನಿಂತುಕೊಂಡ. ಒಂದೊಂದು ಸಾಲಿನಲ್ಲೂ ಮೂನ್ನೂರಕ್ಕೂ ಹೆಚ್ಚು ಜನ ನಿಂತಿದ್ದರೂ. ಅವನು ಒಂದು ನಿಂತ ಕೆಲವೇ ನಿಮಿಷಗಳಲ್ಲಿ ಅವನು ನಿಂತ ಸಾಲು ಬೆಳೆಯುತ್ತಲೇ ಇತ್ತು. ತಿರುಗಿ ನೋಡಿದ ಅವನ ಹಿಂದೆ ನೂರಕ್ಕೂ ಹೆಚ್ಚು ಜನ ನಿಂತಿದ್ದರು. ಗೇಟಿನ ಎದುರಿಗೆ ನಿಂತಿದ್ದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉದ್ಯೋಗಿಯೊಬ್ಬರು ಚಿಕ್ಕದಾದ ಧ್ವನಿವರ್ಧಕ ಹಿಡಿದು ಏನೇನೋ ಕೂಗುತ್ತಿದ್ದರೂ ಆ ಅಭ್ಯರ್ಥಿಗಳ ಗಲಾಟೆಯಲ್ಲಿ ಅದೇನೆಂದು ಹಿಂದಿನವರಿಗೆ ತಿಳಿಯುತ್ತಿರಲಿಲ್ಲ. ಜನ ಹಿಂದಿನಿಂದ, ಮುಂದಿನಿಂದ ತಳ್ಳುತ್ತಲೇ ಇದ್ದರು. "ಹಾಳಾದ್ದು ನೌಕರಿ ಒಂದು ಸಿಕ್ಕರೆ ಇವೆಲ್ಲ ತಾಪತ್ರಯ ವಿರುತ್ತಿತ್ತೇ" ಎಂದಿತು ಅವನ ಮನಸ್ಸು.

ಗಂಟೆ ೯-೩೦ ಗೇಟಿನತ್ತ ನೋಡಿದ ಸಾಲು ಹಾಗೇ ಇತ್ತು, ಯಾರು ಮುಂದೆ ಗೇಟನ್ನು ದಾಟಿ ಹೋಗಿರಲಿಲ್ಲ. ಹಿಂದೆ ನೋಡಿದ ಸಾಲು ಅವನ ಮುಂದಿದ್ದಕ್ಕಿಂತ ದೊಡ್ಡದಾಗಿ ಬೆಳೆದಿತ್ತು. ಅಂತೂ ಬೆಂಗಳೂರಿನಲ್ಲಿ ಈಗ ತಾನು ಒಂಟಿಯಲ್ಲ. ನನಗೂ ನನಗೆ ತಿಳಿಯದ ರೀತಿಯಲ್ಲಿ ಇಷ್ಟೊಂದು ಜನ ಗೆಳೆಯರಿದ್ದಾರೆ ಎನಿಸಿತು. ಬೆಂಗಳೂರಿನಲ್ಲೇನು ನಿರುದ್ಯೋಗಿಗಳಿಗೆ ಕೊರತೆಯೇ, ಪೋನ್ ರಿಂಗ್ ಆಯಿತು. ಎತ್ತಿ ನೋಡಿದ ಪ್ರಕಾಶನ ನಂಬರ್.

"ಹಲೋ" ಎಂದ

"ಹಲೋ ಸಂತೋಷ ಎಲ್ಲಿದ್ದಿಯಾ?" ಎಂದು ಕೇಳಿದ ಪ್ರಕಾಶ.

"ನಾನು ಇಲ್ಲೇ ಸಾಲಲ್ಲಿ ನಿಂತಿದ್ದೇನೆ" ಎಂದು ಹಿಂದೆ- ಮುಂದೆ, ಅಕ್ಕ-ಪಕ್ಕ ಎಲ್ಲಾ ನೋಡಿ "ನೀನೆಲ್ಲಿದ್ದಿಯಾ?" ಎಂದು ಕೇಳಿದ.

"ನಾನು ಮೂರನೇ ಸಾಲಿನಲ್ಲಿ ಇದ್ದೇನೆ, ನನಗಿಂತ ಮುಂದೆ ೧೭-೧೮ ಜನ ಇದ್ದಾರೆ"

"ಹೌದಾ, ನಾನು ತುಂಬಾ ಹಿಂದೆ ಇದ್ದೇನೆ ಕಣೋ, ಐದನೇ ಸಾಲಿನಲ್ಲಿ ನಿಂತಿದ್ದೇನೆ. ನನಗಿಂತ ಮುಂಚೆ ತುಂಬಾ ಜನರಿದ್ದಾರೆ" ಎಂದ.

"ಓಹ್ ಹಾಗಾ, ಇಂಟರ್ವೂವ್ ಹತ್ತು ಗಂಟೆಗಂತೆ, ಇನ್ನೊಂದು ಅರ್ಧ ಗಂಟೆಯಲ್ಲಿ ೫೦-೫೦ ಜನರ ಗುಂಪು ಮಾಡಿ ಒಳಗೆ ಬಿಡುತ್ತಾರಂತೆ."

"ಓಹ್, ಓಕೆ", ಎಂದು "ಇಂಟರ್ವೂವ್ ಆದ ಮೇಲೆ ಹೇಳು" ಎಂದು ಪೋನಿಟ್ಟ ಸಂತೋಷ.

ಹತ್ತು ನಿಮಿಷ ಕಳೆಯುವುದರಲ್ಲಿ, ಸಾಲಿನಲ್ಲಿ ಸ್ವಲ್ಪ ಬದಲಾವಣೆ ಆದಂತಾಯಿತು. ಅವನ ಮುಂದಿದ್ದ ಕೆಲವು ಜನ ಮುಂದಕ್ಕೆ ಹೋದರು. ಅಸ್ಪಷ್ಟವಾಗಿ ಕಾಣುತಿದ್ದ ಗೇಟಿನತ್ತ ನೋಡಿದ, ಗೇಟಿನಿಂದ ಒಳಗೆ ಕೆಲವರು ಒಳ ಹೋಗುತ್ತಿರುವುದು ಕಾಣಿಸಿತು. ಹೀಗೆ ಒಂದು ತಾಸು ಕಳೆಯುವಷ್ಟರಲ್ಲಿ, ಮೂರು ಬಾರಿ ಲೈನ್ ಮುಂದಕ್ಕೆ ಹೊರಟಿತು. ಮೊದಲು ಅಸ್ಪಷ್ಟವಾಗಿ ಕಾಣುತಿದ್ದ ಗೇಟಿನ ಭಾಗ ಈಗ ಮೊದಲಿನದಕ್ಕಿಂತ ಸ್ವಲ್ಪ ಜಾಸ್ತಿ ಎನ್ನುವಷ್ಟು ಕಾಣಿಸುತಿತ್ತು. ಒಳಗೆ ಹೋದವರಾರು ಇಲ್ಲಿಯವರೆಗೆ ಹೊರಗೆ ಬಂದಿರಲಿಲ್ಲ. ಎಲ್ಲರೂ ಮುಂದಿನ ತಮ್ಮ ಸರತಿಗಾಗಿ ಕಾಯುತ್ತಾ ಕುಳಿತರು.

ಗಂಟೆ ಹನ್ನೊಂದಾಯ್ತು, ಹನ್ನೊಂದುವರೆ ಆಯ್ತು ಆದರೆ ಸಾಲು ಮುಂದಕ್ಕೆ ಹೋಗಲಿಲ್ಲ. ಆಗ ಸಾಲಿನಲ್ಲಿ ಗುಸು ಗುಸು ಸುರುವಾಯ್ತು. ಮುಂದುದ್ದವನನ್ನು ಏನೆಂದು ಕೇಳಿದ. "ಕಳೆದ ಒಂದುವರೆ ಗಂಟೆಯಿಂದ ಯಾರನ್ನು ಒಳಗೆ ಬೀದುತ್ತಿಲ್ಲವಂತೆ. ಆಗಳೇ ೩೦೦ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಒಳಗಡೆ ಇದ್ದಾರಂತೆ ಅವರಲ್ಲಿ ಯಾರು ಹೊರಗೆ ಬಂದಿಲ್ಲ. ಅವರು ಒಳಗಿದ್ದವರಲ್ಲೇ ಕೆಲವರನ್ನು ಆಯ್ದುಕೊಂಡು ಉಳಿದವರನ್ನು ಹೊರಗೆ ಕಳಿಸಬಹುದು ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ" ಎಂದ. ಸಂತೋಷನಿಗೂ ಅದು ನಿಜವಿರಬಹುದೆನಿಸಿದರೂ ಏನಾದರಾಗಲೀ ನೋಡೋಣವೆಂದು ಅಲ್ಲಿಯೇ ನಿಂತ.

ಹನ್ನೆರಡು ಗಂಟೆಯ ಹೊತ್ತಿಗೆ ಇನ್ನೊಮ್ಮೆ ಕೆಲವರನ್ನು ಒಳಗಡೆ ಬಿಟ್ಟು ಮತ್ತೆ ಗೇಟು ಹಾಕಿದರು. ಮತ್ತರ್ಧ ಗಂಟೆ ಯಾರನ್ನೂ ಒಳಗೆ ಬಿಡಲಿಲ್ಲ. ಹಿಂದೆ ನೋಡಿದ ಅವನ ಹಿಂದೆ ಸಾಲಿನಲ್ಲಿ ೫೦೦ಕ್ಕೂ ಹೆಚ್ಚು ಜನ ನಿಂತಿದ್ದರೂ. ಮುಂದೆ ನೋಡಿದ ಮುಂದೆ ಏನಿಲ್ಲವೆಂದರೂ ಒಂದೊಂದು ಸಾಲಿನಲ್ಲಿ ೧೫೦ಕ್ಕೂ ಹೆಚ್ಚು ಜನರಿರಬಹುದು. ಒಂದೊಂದು ಸಾಲಿನಲ್ಲಿ ೧೫೦ಜನ ಅಂದರೆ ಆರು ಸಾಲಿನಲ್ಲಿ ೯೦೦ಕ್ಕೂ ಹೆಚ್ಚು ಜನರಿದ್ದಾರೆ. ಇದೇ ರೀತಿ ಗಂಟೆಗೆ ೧೦೦ ಜನರನ್ನು ಒಳಗೆ ಬಿಟ್ಟರೂ ಇನ್ನೂ ಆರು ಗಂಟೆಗಳಾದರೂ ಬೇಕು. ಹೀಗೆ ಲೆಕ್ಕಾಚಾರ ಹಾಕುತ್ತಾ ನಿಂತವನನ್ನು ಹಿಂದಿನಿಂದ ನಿಂತವರು ಭಲವಾಗಿ ತಳ್ಳಿದರು. ಅವನು ಆಯತಪ್ಪಿ ಪಕ್ಕದಲ್ಲಿ ಬಿದ್ದ. ಬಿದ್ದವನು ಏಳುವಷ್ಟರಲ್ಲಿ ಇನ್ನಿಬ್ಬರು ಬಿದ್ದ ಅವನ ಬೆನ್ನ ಮೇಲೆ ತಮ್ಮ ಹೆಜ್ಜೆಯ ಗುರುತು ಹಾಕಿ ಮುಂದೆ ಹೊರಟುಹೋಗಿದ್ದರು. ಎದ್ದು ಏನಾಯ್ತು ಎಂದು ನೋಡುವಷ್ಟರಲ್ಲಿ ಅವನ ಹಿಂದೆ ಮುಂದೆ ಇದ್ದ ಸಾಲೇ ಇರಲಿಲ್ಲ. ಎಲ್ಲರೂ ಗೇಟಿನತ್ತ ಹೊರಟು ಒಬ್ಬರಿಗೊಬ್ಬರು ನೂಕುತ್ತಾ ನಿಂತಿದ್ದರೂ. ಅವನ ಅಲ್ಲೇ ಪಕ್ಕದಲ್ಲಿ ನಿಂತು ತನ್ನ ಪ್ಯಾಂಟು, ಅಂಗಿಯನ್ನು ನೋಡಿಕೊಂಡ. ಇಂಟರ್ವೂವ್ ಎಂದು ತೊಟ್ಟುಬಂದ ಬಿಳಿಯ ಅಂಗಿ ಕೆಲವು ಕಡೆ ಕೆಂಪಗಾಗಿತ್ತು. ಕೈಯ ತೋಳಿನ ಭಾಗದಲ್ಲಿ ಚಿಕ್ಕದಾಗಿ ಹರಿದಿತ್ತು. ಮುಂದೆ ನೋಡಿದ, ಕೆಲವರು ಆಗಲೇ ಗೇಟು ಹತ್ತಿ ಒಳಹೋಗಲು ಪ್ರಯತ್ನಿಸುತಿದ್ದರು. ಆ ಕಂಪನಿಯ ಸುತ್ತ ಮಾತ್ರ ಇದ್ದ ಸೆಕ್ಯೂರಿಟಿ ಗಾರ್ಡಗಳೆಲ್ಲ ಎಷ್ಟೇ ಪ್ರಯತ್ನಿಸಿದರೂ ಆ ನೂಕು ನುಗ್ಗಲನ್ನು ತಡೆಯಲು ಆಗುತ್ತಿರಲಿಲ್ಲ. ಬಹುಶಃ ಆಗಲೇ ಕಂಪನಿಯವರು ಪೋಲಿಸರಿಗೆ ಕರೆ ನೀಡಿರಬೇಕು. ನಾಲ್ಕಾರು ಪೋಲೀಸ್ ಜೀಪುಗಳು ಬಂದವು. ಜನ ದಿಕ್ಕಾ ಪಾಲಾಗಿ ಓಡ ತೊಡಗಿದರು. ಇನ್ನೂ ನಿಂತು ಪ್ರಯೋಜನವಿಲ್ಲವೆಂದು ಆ ಸ್ಥಳವನ್ನು ಬಿಟ್ಟು ಹೊರಗೆ ಬಂದು, ಚಿಕ್ಕ ಪೆಟ್ಟಿಗೆ ಅಂಗಡಿಯ ಬಳಿ ನಿಂತ. ಅಂಗಿ ಪ್ಯಾಂಟು ತೊಳೆಯಲು ಅರ್ಧ ಬಾರು ಸೋಪು ಬೇಕೆನಿಸಿತು ಆತನಿಗೆ. ಬೆಳಿಗ್ಗೆಯಿಂದ ಏನು ತಿನ್ನದೇ ಇದ್ದುದರಿಂದ ಹೊಟ್ಟೆ ತಾಳ ಹಾಕುತಿತ್ತು.

ಪೆಟ್ಟಿಗೆ ಅಂಗಡಿಯ ಬಳಿ ನಿಂತವನು ಸಮಯ ನೋಡಿದ ಗಂಟೆ ಒಂದುವರೆ ದಾಟಿತ್ತು. ಬೆಳಿಗ್ಗೆಯಿಂದ ಏನು ತಿನ್ನದೇ ಇದ್ದುದರಿಂದ ಹೊಟ್ಟೆ ತಾಳ ಹಾಕುತಿತ್ತು. ಪೆಟ್ಟಿಗೆ ಅಂಗಡಿಯವನಿಂದ ಚಹಾ ಒಂದು ಬನ್ ತೆಗೆದುಕೊಂಡು ಚಹಾದಲ್ಲಿ ಬನ್ ನೆನೆಸಿಕೊಂಡು ತಿನ್ನುತ್ತಾ ನಿಂತವನು. ಮೊಬೈಲ್ನಲ್ಲಿ ಬರುತ್ತಿರುವ ಕರೆಯನ್ನು ಕೇಳಿ. ಬಹುಶಃ ಪ್ರಕಾಶ ಇವೊತ್ತಿಗೆ ಇಂಟರ್ವೂವ್ ಮುಗಿಸಿ ಕರೆ ಮಾಡುತ್ತಿರಬೇಕು ಎಂದುಕೊಂಡು ಮೊಬೈಲನ್ನು ಎತ್ತಿದ. ಯಾವುದೋ ಗೊತ್ತಿಲ್ಲದ ನಂಬರ್ನಿಂದ ಕರೆ ಬರುತಿತ್ತು. ಬಹುಶಃ ಯಾವುದೋ ಜಾಹಿರಾತಿನ ಕರೆ ಇರಬಹುದು ಎಂದು ಮೊಬೈಲನ್ನು ಕಿಸಿಯಲ್ಲಿ ತುರುಕಲು ಹೊರಟವನು, ನೋಡಿಯೇ ಬಿಡೋಣವೆಂದು, "ಹಲೋ" ಎಂದ.

-ಮುಂದುವರೆಯುವುದು....

--ಮಂಜು ಹಿಚ್ಕಡ್

Monday, July 20, 2015

ಹುಡುಕಾಟದ ಹಾದಿಯಲ್ಲಿ:ಭಾಗ ೨

ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ಸುಗಳು ಬಂದರೂ, ಸಾಮಾನ್ಯ ವರ್ಗದ ಬಸ್ಸುಗಳು ಮಾತ್ರ ಬರುತ್ತಿರಲಿಲ್ಲ. ಸಾರಿ, ಮಿಡಿ, ಚೂಡಿ, ಪ್ಯಾಂಟು ಹೀಗೆ ಹಲವಾರು ತರಹದ ಬಣ್ಣ ಬಣ್ಣದ ವಸ್ತ್ರ ಧರಿಸಿ, ಮುಖಕ್ಕೆ ತುಟಿಗೆ ಬಣ್ಣ ಬಳಿದು ಬಸ್ ನಿಲ್ದಾಣಕ್ಕೆ ಬಂದು ಕ್ಷಣ ಮಾತ್ರದಲ್ಲೇ ವೋಲ್ವೋ ಬಸ್ಸಿನಲ್ಲಿ ಮಾಯವಾಗುವ ಮಾಯಾಂಗಿನಿಯರನ್ನು ನೋಡಿದ್ದೇ ನೊಡಿದ್ದು. ಅಲ್ಲಿ ಎಷ್ಟು ನಿಮಿಷ ಕಳೆದರೂ ಬೇಸರವೆನಿಸುತ್ತಿರಲಿಲ್ಲ. ಹಾಗೆ ಅಲ್ಲಿಯೇ ನಿಂತವನಿಗೆ ಹತ್ತು ಹದಿನೈದು ನಿಮಿಷ ಜಾರಿದ್ದು ಗೊತ್ತಾಗಲಿಲ್ಲ. ಅಂತೂ ಅಷ್ಟು ಹೊತ್ತು ಕಾದಮೇಲೆ ಬನಶಂಕರಿ ಕಡೆಯಿಂದ ಐಟಿಪಿಎಲ್ ಕಡೆಗೆ ಹೋಗುವ ಒಂದು ಪುಸ್ಪಕ್ ಬಸ್ ಬಂತು. ಒಂದೇ ಬಾಗಿಲು, ಬಸ್ಸಿನ ಚಾಲಕನೇ ಕಂಡಕ್ಟರ್ ಕೂಡ. ಒಂಥರಾ ೨ ಇನ್ ೧. ಡ್ರೈವರ್ "ಬೇಗ ಬನ್ನಿ, ಬೇಗ ಬನ್ನಿ, ಹತ್ರಿ ಬೇಗ" ಎಂದು ಅಲ್ಲಿದ್ದ ಎಲ್ಲರನ್ನೂ ಆ ಬಸ್ಸಿನೊಳಗೆ ತುರುಕಿಸಿಕೊಂಡ. ಎಲ್ಲರಿಗಿಂತ ಮೊದಲೇ ಒಳಹೊಕ್ಕಿದ್ದರಿಂದ ಆರನೇ ಸಾಲಿನಲ್ಲಿ ಒಂದು ಸ್ಥಳ ಸಿಕ್ಕಿತು. ಅಲ್ಲಿ ಹೋಗಿ ಕುಳಿತ.  ಬಸ್ ಎಚ್ಚೆಸ್ಸಾರ್ ಬಡಾವಣೆಯ ಕೊನೆಯ ನಿಲ್ದಾಣವನ್ನು ಪ್ರವೇಶಿಸುತಿದ್ದಂತೆ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ, ಇದುವರೆಗೆ ಚಾಲಕನಾದವನು ಕಂಡಕ್ಟರನಾದ, "ಟಿಕೇಟ್-ಟಿಕೇಟ್" ಎಂದು ಎಲ್ಲರನ್ನು ವಿಚಾರಿಸಿ ಮತ್ತೆ ತನ್ನ ಸ್ಥಳಕ್ಕೆ ಬಂದು ಕುಳಿತು ಬಸ್ಸು ಬಿಡುವ ಹೊತ್ತಿಗೆ ಇನ್ನೈದು ನಿಮಿಷ ಕಳೆದು ಹೋಯಿತು. ಆಗಲೇ ಒಂದೆರಡು ಸಾಮಾನ್ಯ ವರ್ಗದ ಬಸ್ಸುಗಳೆರಡು ಹಾದು ಹೋದದ್ದನ್ನು ನೋಡಿದ ಸಂತೋಷಗೆ ಇದ್ಯಾವ ಬಸ್ಸನ್ನು ಹತ್ತಿದನೋ ಅನಿಸಿತು. ಸ್ವಲ್ಪ ಕಾದು ಬೇರೆ ಬಸ್ಸು ಹತ್ತಿದ್ದರೆ ಇಷ್ಟೊತ್ತಿಗೆ ಬೆಳಂದೂರಿನ ಹತ್ತಿರ ಇರಬಹುದಾಗಿತ್ತು. ಇವನು ಇದೇ ರೀತಿ ನಿಲ್ಲುತ್ತಾ ಹೋದರೆ ನಾನು ಸಂದರ್ಶನಕ್ಕೆ ಸಮಯಕ್ಕೆ ಸರಿಯಾಗಿ ಹೋದ ಹಾಗೆಯೇ.

ಬಸ್ಸು ಬೆಳೆಂದೂರು ತಲುಪುವ ಹೊತ್ತಿಗೆ ಸಂತೊಷನ ಗಡಿಯಾರದಲ್ಲಿ ಸಮಯ ಎಂಟುಗಂಟೆಯಾಗಿತ್ತು. ಆಗಿನ್ನೂ ಎಂಟು ಗಂಟೆಯೂ ಆಗಿರದ ಕಾರಣ ಅಷ್ಟೊಂದು ಟ್ರಾಪಿಕ್ ಇರಲಿಲ್ಲ. ಇದೇ ವೇಗದಲ್ಲಿ ಹೊರಟರೆ ಇನ್ನರ್ಧ ಗಂಟೆಯಲ್ಲಿ ಐಟಿಪಿಎಲ್ ತಲುಪಬಹುದೆನಿಸಿ ಮೊಬೈಲ್ ಕೈಗೆತ್ತಿಕೊಂಡು ಅದರಲ್ಲಿ ಆಟವಾಡತೊಡಗಿದ. ತುಂಬಾ ಹೊತ್ತು ಆಡಲು ಮನಸ್ಸಾಗದೇ ಮತ್ತೆ ಮೊಬೈಲನ್ನು ಕಿಸೆಗೆ ತುರುಕಿದ. ಬಸ್ಸು ಮಾರತಹಳ್ಳಿ ದಾಟಿ ವೈಟಪೀಲ್ಡ ಹತ್ತೀರ ಹತ್ತೀರ ಬಂದಿತ್ತು. ಕಿಸೆಯಲ್ಲಿ ತುರುಕಿದ ಮೊಬೈಲ್ ಬಡಿದುಕೊಳ್ಳಲು ಪ್ರಾರಂಭಿಸಿತು. ಮೊಬೈಲ್ ಎತ್ತಿ ನೋಡಿದ ಅವನು ಒಂದು ಹತ್ತು ದಿನಗಳ ಹಿಂದೆ ಇಟ್ಟ ರಿಮೈಂಡರ್ ಅದು. ಓದಿ ನೋಡಿದ "ಕಾಲ್ ರಮೇಶ್" ಎಂದಿದ್ದನ್ನು ನೋಡಿದವನಿಗೆ ಈಗ ತಾನು ರಮೇಶ ಎನ್ನುವವರಿಗೆ ಇಂದು ಕರೆ ಮಾಡಬೇಕು ಎಂದಿದ್ದು ನೆನಪಾಯಿತು. ಆದರೆ ಈಗ ಕರೆ ಮಾಡಲು ಕರೆನ್ಸಿ ಇಲ್ಲ. ಆ ಮೇಲೆ ಇಂಟರ್ವೂವ್ ಮುಗಿದ ಮೇಲೆ ಕರೆನ್ಸಿಹಾಕಿ ಮಾತನಾಡೋಣ ಎಂದುಕೊಂಡು ಮೊಬೈಲ್ ಒಳಗಿಡಲು ಹೋದವನು ಮತ್ತೆ ಕರೆ ಮಾಡಲು ಮರೆತು ಹೋದರೆ ಎಂದು ರಿಮೈಂಡರ್ನ ಸಮಯವನ್ನು ಬೆಳಿಗ್ಗೆ ೮-೩೦ಕ್ಕೆ ಎಂದಿದ್ದುದ್ದನ್ನು ಸಾಯಂಕಾಲ ೬-೩೦ ಕ್ಕೆ ಎಂದು ಬದಲಾಯಿಸಿ ಮತ್ತೆ ಕಿಸೆಗೆ ತುರುಕಿದ.

ಮೊಬೈಲನಲ್ಲಿ ರಮೇಶನ ಹೆಸರು ನೋಡಿದೊಡನೆ ರಮೇಶನ ನೆನಪಾಯಿತು. ರಮೇಶ ಅವನ ತಂದೆಯ ದೂರದ ಸಂಬಂಧವಾದರೂ ಅವರಲ್ಲಿ ಒಳ್ಳೆಯ ಭಾಂದವ್ಯವಿತ್ತು. ಆಗಾಗ ರಮೇಶನ ತಂದೆ ತಾಯಿಯರೂ ಇವನ ಮನೆಗೆ ಬರುತಿದ್ದರು. ಇವನ ತಂದೆ ತಾಯಿಯರು ಅವರ ಮನೆಗೆ ಹೋಗುತಿದ್ದರು. ರಮೇಶ ವಯಸ್ಸಿನಲ್ಲಿ ಸಂತೋಷನಿಗಿಂತಲೂ ನಾಲ್ಕೈದು ವರ್ಷದೊಡ್ಡವನಾಗಿದ್ದರೂ ಒಳ್ಳೆಯ ಸ್ನೇಹಿತರಂತೆಯೇ ಇದ್ದರು. ಮೊದ ಮೊದಲು ಚಿಕ್ಕವರಾಗಿದ್ದಾಗ ಇವರು ಅವರವರ ತಂದೆ ತಾಯಿಯರೊಂದಿಗೆ ಒಬ್ಬರ ಮನೆಗೆ ಇನ್ನೊಬ್ಬರು ಹೋಗುತಿದ್ದರು. ಆಮೇಲೆ ದೊಡ್ಡವರಾದ ಮೇಲೆ ದೂರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಹೋಗಲಾಗುತ್ತಿರಲಿಲ್ಲ. ಈಗ ಸಂತೋಷ ಮತ್ತು ರಮೇಶ ನೋಡಿ ಆಗಲೇ ಆರೇಳು ವರ್ಷಗಳೇ ಆಗಿ ಹೋಗಿದ್ದವು. ರಮೇಶನ ಮದುವೆಯ ಸಂದರ್ಭದಲ್ಲಿ ಸಂತೋಷನಿಗೆ ಪರೀಕ್ಷೆಗಳಿದ್ದುದರಿಂದ ಮದುವೆಗೂ ಹೋಗಿರಲಿಲ್ಲ. ಈಗ ರಮೇಶ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದು ತನ್ನ ಸಂಸಾರ ಕೆಲಸ ಎನ್ನುವುದರಲ್ಲೇ ಬ್ಯೂಸಿಯಾಗಿದ್ದ.

ಸಂತೋಷ ಬೆಂಗಳೂರಿಗೆ ಬಂದ ಹೊಸತರಲ್ಲಿ, ರಮೇಶಗೆ ಕಾಲ್ ಮಾಡಿದ್ದ. ತನ್ನ ಬಗ್ಗೆ ಹೇಳಿಕೊಂಡು, ಅವನ ಕಂಪನಿಯಲ್ಲಿ ಓಪ್ನಿಂಗ್ಸ್ ಇದ್ದರೆ ತಿಳಿಸು ಎಂದು ಕೂಡ ಕೇಳಿದ್ದ. ಆಗ ರಮೇಶ ಅವನ ಬಯೋಡಾಟಾ ಕಳಿಸಿಕೊಡು ಎಂದು ಕೇಳಿ ಬಯೋಡಾಟಾ ತರಿಸಿಕೊಂಡವನು. ಪ್ರತಿಸಾರಿ ಸಂತೋಷ ಅದರ ಬಗ್ಗೆ ಕೇಳಲು ಹೋದರೆ, "ಈಗ ಸದ್ಯಕ್ಕೆ ಏನು ಓಪನಿಂಗ್ಸ್ ಇಲ್ಲ. ಇದ್ದರೆ ಹೇಳುತ್ತೇನೆ" ಎಂದು ಹೇಳುತ್ತಲೇ ಇದ್ದ. ಸಂತೋಷನ ಸ್ನೇಹಿತರಿಬ್ಬರು ರಮೇಶನ ಕಂಪನಿಯನ್ನು ಸೇರಿದಾಗ ಕೇಳಿದಾಗಲು ರಮೇಶ ತಮ್ಮ ಕಂಪನಿಯಲ್ಲಿ ಈಗ ಸದ್ಯಕ್ಕೆ ಓಪನಿಂಗ್ಸ್ ಇಲ್ಲ ಎಂದು ಹೇಳಿದ್ದ. ಆದರೆ ಅವನ ಗೆಳೆಯರು, ಅವನ ಗೆಳೆಯರ ಗೆಳೆಯರು ಬೇರೆ ಬೇರೆ ಮೂಲಗಳಿಂದ ಅದೇ ಕಂಪನಿಯನ್ನು ಸೇರಿದಾಗ ಮಾತ್ರ ಬೇಸರವಾಗದಿರಲಿಲ್ಲ. ಸಂತೋಷನ ಓರಗೆಯವನಾದ ರಮೇಶನ ನೆಂಟನೂ ಕೂಡ ರಮೇಶನ ಮುಖಾಂತರ ರಮೇಶನ ಕಂಪನಿಗೆ ಸೇರಿದ ಮೇಲೆ ರಮೇಶನ ಮೇಲೆ ಬೇಸರ ಮೂಡಿ ಅವನಿಗೆ ಕರೆ ಮಾಡುವುದನ್ನೇ ನಿಲ್ಲಿಸಿದ್ದ.

ಆದರೆ ಒಂದು ತಿಂಗಳ ಹಿಂದೆ ಸಂತೋಷನ ಮನೆಗೆ ಬಂದಿದ್ದ ರಮೇಶನ ತಂದೆ ಸಂತೋಷನ ತಂದೆಗೆ "ಏನು ನಿಮ್ಮಮಗನಿಗೆ ಇನ್ನೂ ನೌಕರಿ ಸಿಗಲಿಲ್ಲವೇ? ನಿಮ್ಮ ಮಗ ಆ ಬಗ್ಗೆ ಪ್ರಯತ್ನನೇ ಮಾಡುತ್ತಿಲ್ಲ ಇರಬೇಕು. ನನ್ನ ಮಗನನ್ನು ಕೇಳಿದಾಗ ಗೊತ್ತಾಯಿತು. ನಮ್ಮ ಮಗೆ ಅದೆಷ್ಟೋ ಇಂಟರ್ವೂವ್ ಕೊಡಿಸಿದರೂ ನಿಮ್ಮ ಮಗ ಸಿಲೆಕ್ಟ ಆಗಲಿಲ್ಲವಂತೆ. ಅವನು ಕಂಪ್ಯೂಟರ್ ಸೈನ್ಸ್ ಓದಿದ್ದರೂ ಆ ಬಗ್ಗೆ ಕೇಳಿದರೆ ಏನೂ ಗೊತ್ತಿಲ್ಲವಂತೆ. ಅವನಿಗೆ ಮಾತನಾಡಲು ಬರುವುದು ಅಷ್ಟಕಷ್ಟೇ ಅಂತೆ. ಹಾಗಾಗಿ ನಿಮ್ಮ ಮಗನಿಗೆ ಹೇಸಿಗೆಯಾಗಿ ನಮ್ಮ ಮಗನಿಗೆ ಕರೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾನಂತೆ" ಎಂದು ದೂರಿ ಹೋದಾಗ ಸಂತೋಷನ ತಂದೆ ಸಂತೋಷನ ಮಾತನ್ನು ಕೇಳದೇ, ಸಂತೋಷನಿಗಿಷ್ಟು ಬಯ್ದು, ಮತ್ತೆ ರಮೇಶನಿಗೆ ಕರೆ ಮಾಡುವಂತೆ ಹೇಳಿದ್ದರೂ ಹಾಗೆ ಒಲ್ಲದ ಮನಸ್ಸಿನಿಂದ ಅವನಿಗೆ ಕರೆ ಮಾಡಲು ನಿರ್ಧರಿಸಿದ. ಹಾಗೆ ನಿರ್ಧರಿಸಿ ಹತ್ತು ದಿನವಾದರೂ ಕರೆ ಮಾಡಲಾಗದೇ ಆ ರಿಮೈಂಡರನ್ನು ಮುಂದುಡುತ್ತಲೇ ಬಂದಿದ್ದ.

"ಐಟಿಪಿಎಲ್ ಲಾಸ್ಟ ಸ್ಟಾಪ್ ಇಳಿರಿ, ಇಳಿರಿ" ಎಂದು ಡ್ರೈವರ್ ಕಮ್ ಕಂಡಕ್ಟರ್ ಹೇಳಿದಾಗ ಸಂತೊಷ ಆ ನೆನಪುಗಳಿಂದ ಹೊರಬಂದು, ಬಸ್ಸಿನಿಂದ ಇಳಿದು ಹೊರಬಂದ. ಸುತ್ತಲೂ ನೋಡಿದ. ಸಂದರ್ಶನ ನೀಡಬೇಕಾದ ಯಾವುದೇ ಕಂಪನಿಗಳು ಅವನು ಇಳಿದ ಸ್ಥಳದಲ್ಲೆಲ್ಲೂ ಕಾಣಲಿಲ್ಲ. ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇದ್ದ ಚಹಾ ಅಂಗಡಿಯಲ್ಲಿ ನಿಂತು ಆ ವಿಳಾಸವನ್ನು ಕೇಳಿದ. ಆತ ತಮಿಳರವನು ಬೆಂಗಳೂರಿನಲ್ಲಿ ಇದ್ದು ಅದೆಷ್ಟು ವರ್ಷವಾಗಿದೆಯೋ, ಕನ್ನಡ ಮಾತ್ರ ಬರುತ್ತಿರಲಿಲ್ಲ. ಬಹುಶಃ ಬೆಂಗಳೂರಿನಲ್ಲಿ ಅದರ ಅವಸ್ಯಕತೆಯಿಲ್ಲ ಎಂದು ತಿಳಿದುದ್ದರಿಂದ ಆತ ಕಲಿತಿರಲಿಕ್ಕಲ್ಲ. ರಮೇಶ ಆ ಕಂಪನಿಯ ವಿಳಾಸವನ್ನು ಕೇಳಿದೊಡನೆ ತಮಿಳಿನಲ್ಲಿಯೇ " ಈಂಗ್ ಸ್ಟೇಟ್ ಪೋ" ಎಂದು ಅವನ ಕೈಯಿಂದ ಒಂದು ದಾರಿಯನ್ನು ತೋರಿಸಿ ಅದೇ ದಾರಿಯಲ್ಲಿ ನೇರವಾಗಿ ಹೋಗುವಂತೆ ತಿಳಿಸಿದ.

-ಮುಂದುವರೆಯುವುದು....

--ಮಂಜು ಹಿಚ್ಕಡ್

Monday, July 13, 2015

ಹುಡುಕಾಟದ ಹಾದಿಯಲ್ಲಿ

ಹುಡುಕಾಟದ ಹಾದಿಯಲ್ಲಿ:ಭಾಗ ೨
ಹುಡುಕಾಟದ ಹಾದಿಯಲ್ಲಿ:ಭಾಗ ೩
ಹುಡುಕಾಟದ ಹಾದಿಯಲ್ಲಿ:ಭಾಗ ೪
"ನಮಸ್ಕಾರ ಸರ್, ನಾನು ಸಂತೋಷ ಅಂತ, ನಿಮ್ಮ ಕಂಪನಿಯಲ್ಲಿ ಹೊಸಬರಿಗೆ  ಸಂದರ್ಶನ ಇವತ್ತು ನಡೆಯುತ್ತಿದೆ ಎಂದು ನನ್ನ ಗೆಳೆಯರಿಂದ ತಿಳಿಯಿತು. ಆ ಸಂದರ್ಶನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ." ಎಂದು ಹೇಳುತ್ತಾ ತನ್ನ ಬ್ಯಾಗಿನಲ್ಲಿದ್ದ ಬಾಯೋಡಾಟಾವನ್ನು ತೆಗೆದು ಸೆಕ್ಯೂರಿಟಿ ಗೇಟಿನಲ್ಲಿದ್ದ ಸೆಕ್ಯೂರಿಟಿ ಗಾರ್ಡಗೆ ಕೊಡಲು ಹೋದ.

ಸೆಕ್ಯೂರಿಟಿ ಗಾರ್ಡ ಅದನ್ನು ತೆಗೆದು ಕೊಳ್ಳದೇ, ಅವನಿಗೆ "ನಮಗೆ ತಿಳಿದ ಮಟ್ಟಿಗೆ ಇಂದು ಇಲ್ಲಿ ಯಾವುದೇ ಸಂದರ್ಶನ ನಡೆಯುವ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ. ಒಂದು ನಿಮಿಷ ನಿಲ್ಲಿ, ನಾನು ವಿಚಾರಿಸುತ್ತೇನೆ," ಎಂದು ಸೆಕ್ಯೂರಿಟಿ ಕೌಂಟರನಿಂದ ಇಂಟರಕಾಮ್ ಮೂಲಕ ಯಾರಿಗೋ ಕರೆ ಮಾಡಿ ಇಟ್ಟು " ನೋಡಿ ಸಂತೋಷ ಇಲ್ಲಿ ಯಾವುದೇ ಇಂಟರವ್ಯೂನ ವ್ಯವಸ್ಥೆಯಾಗಿಲ್ಲ. ಬಹುಶಃ ನಮ್ಮ ಐಟಿ. ಪಿ. ಎಲ್ ಅಥವಾ ವೈಟ್ ಪೀಲ್ಡ್ ಗಳಲ್ಲಿರುವ ನಮ್ಮ ಉಳಿದ ಬ್ರಾಂಚಗಳಲ್ಲಿ ಇಂಟರವ್ಯೂವ ನಡಿತಾ ಇದ್ದರೂ ಇರಬಹುದು. ನೀವು ಅಲ್ಲಿಗೆ ಹೋಗಿ ಬೇಕಿದ್ದರೆ ವಿಚಾರಿಸಬಹುದು." ಎಂದು ಹೇಳಿ ತನ್ನ ಕೆಲಸದಲ್ಲಿ ಮಗ್ನನಾದ.

ಸಂತೋಷ ತಾನು ಕಟ್ಟಿದ ಕೈ ಗಡಿಯಾರವನ್ನು ನೋಡಿದ ಅದರಲ್ಲಿ "ಏಳು ಗಂಟೆ" ಎಂದು ತೋರಿಸುತ್ತಿದ್ದರೂ, ನಿಜವಾದ ಸಮಯ "೬-೪೫" ಎಂದು ಅವನಿಗೆ ತಿಳೀದಿತ್ತು. ಅವನಿಗೆ ಯಾವಾಗಲೂ ಗಡಿಯಾರದ ಸಮಯವನ್ನು ಮುಂದಿಟ್ಟೇ ಅಭ್ಯಾಸ. ಇನ್ನೂ ಸಂದರ್ಶನ ಪ್ರಾರಂಭವಾಗಲೂ ೨ಗಂಟೆಗಿಂತಲೂ ಹೆಚ್ಚಿನ ಸಮಯವಿದ್ದರೂ ಅದು "ವಾಕ್ ಇನ್" ಆದುದರಿಂದ ಬಹಳ ಜನ ಬರುತ್ತಾರೆಂದು ಅವನಿಗೂ ಗೊತ್ತು. ಇದೇ ರೀತಿ ಕಳೆದ ಒಂದು ವರ್ಷದಿಂದ ಇಂತಹ ಅದೆಷ್ಟೋ ವಾಕ್ ಇನಗಳಿಗೆ ಹೋದ ಅನುಭವವಿತ್ತಲ್ಲವೇ ಅವನಿಗೆ. ಹಾಗಾಗಿಯೇ ಆತ ಬೇಗನೇ ಎದ್ದು ತನ್ನ ರೂಮಿನ ಸ್ನೇಹಿತರಿಗೂ ತಿಳಿಸದೇ ರೂಮಿನಿಂದ ಹೊರಟು ಬಂದಿದ್ದ. ಸಂದರ್ಶನಕ್ಕೆ ಇನ್ನೂ ಎರಡುಗಂಟೆಳಿವೆಯಾದರೂ ತಾನೂ ಅಲ್ಲಿಗೆ ಹೋಗುವುದು ತಡವಾದರೆ ನೂಕು ನುಗ್ಗಲಾಗುತ್ತದೆ. ಏನು ಮಾಡುವುದು ಎಂದು ಎಂದು ವಿಚಾರಮಾಡುತ್ತಾ ಒಂದೆರಡು ನಿಮಿಷ ನಿಂತವನು. ಒಮ್ಮೆ ಹೋಗಿ ನೋಡಿಯೇ ಬಿಡೋಣವೆಂದು ಬಸ್ ನಿಲ್ದಾಣದತ್ತ ಹೊರಟ.

ನಿನ್ನೆ ಸಾಯಂಕಾಲವಷ್ಟೇ ಅವನಿಗೆ ಈ ಸಂದರ್ಶನದ ಬಗ್ಗೆ ತಿಳಿದದ್ದು. ಆವನ ಹಾಗೆಯೇ ನೌಕರಿ ಹುಡುಕುತಿದ್ದ ಅವನ ಸ್ನೇಹಿತ ಪ್ರಕಾಶ ಅವನಿಗೆ ಕರೆಮಾಡಿ " ನಾಳೆ ಆ ಕಂಪನಿಯಲ್ಲಿ ಇಂಟರ್ವ್ಯೂವ್ ಇದೆ ಅಂತೆ, ನಾನು ಇಲ್ಲಿ ಯಾರೋ ಇಬ್ಬರು ಉತ್ತರ ಭಾರತದ ಕಡೆಯ ಹುಡುಗರು ಮಾತನಾಡುವುದನ್ನು ಕೇಳಿಸಿಕೊಂಡೆ. ನಾನು ಹೋಗುತಿದ್ದೇನೆ, ನೀನು ಬರುತ್ತೀಯಾ?" ಎಂದು ಕೇಳಿದಾಗ "ಹೂಂ, ಆಯ್ತು ಬರುತ್ತೇನೆ" ಎಂದು ಹೇಳಿ, ಎಡ್ರೆಸ್ ಕೂಡ ಕೇಳುವುದನ್ನು ಮರೆತು ಫೋನ್ ಇಟ್ಟು ಬಿಟ್ಟ. ಆದರೆ ಅವನಿಗೆ ಆ ಕಂಪನಿ ಎಲ್ಲಿ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ರಾತ್ರಿ ತನ್ನ ರೂಂನ ಸಹಪಾಟಿಯೊಂದಿಗೆ ಕೇಳಿದಾಗ, ಅವನು ಅದು ಬಹುಶಃ ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಇರಬಹುದು. ನಾನು ಒಮ್ಮೆ ನೋಡಿದ ಹಾಗಿದೆ, ಎಂದು ಹೇಳಿದ್ದಷ್ಟನ್ನೇ ಕೇಳಿ ಅಲ್ಲಿಗೆ ಬಂದಿದ್ದ. ಅವನ ಸ್ನೇಹಿತನಿಗೆ ಕರೆ ಮಾಡಿ ಕೇಳೋಣವೆಂದರೆ ಕರೆನ್ಸಿ ಬೇರೆ ಇಲ್ಲ. ಕರೆನ್ಸಿ ಹಾಕೋಣವೆಂದರೆ ಕಿಸೆಯಲ್ಲಿ ಇದ್ದುದೇ ೧೭೦ ರೂಪಾಯಿ. ಕರೆನ್ಸಿಗೆ ರೊಕ್ಕ ಕರ್ಚು ಮಾಡಿದರೆ ಮಧ್ಯದಲ್ಲಿ ಬೇರೆ ಯಾವುದಕ್ಕಾದರೂ ಹಣ ಬೇಕಾದರೆ ಎಂದು ಕರೆನ್ಸಿ ಬೇರೆ ಹಾಕಿರಲಿಲ್ಲ. ಅವನ ಹತ್ತಿರ ಬಸ್ ಪಾಸ್ ಇದ್ದುದರಿಂದ ಬಸ್ಸಿನಲ್ಲಿ ಓಡಾಡುವುದಕ್ಕಂತೂ ತೊಂದರೆ ಇರಲಿಲ್ಲ.

ಸಮೀಪದ ಬಸ್ ನಿಲ್ದಾಣಕ್ಕೆ ಬಂದು ಐದು ನಿಮಿಷವಾಗುತ್ತಾ ಬಂದರೂ ಅವನು ಕಾಯುತಿದ್ದ ಬಸ್ ಬರುತ್ತಿರಲಿಲ್ಲ. ಒಂದೆರಡು ವೋಲ್ವೋ ಬಸ್ಸುಗಳು ಬಂದು ಹೋದರೂ ಅವನಿಗೆ ಆ ಬಸ್ಸುಗಳಿಂದ ಪ್ರಯೋಜನವಿರಲಿಲ್ಲ. ಹಾಗಾಗಿ ತನಗೆ ಪ್ರಯೋಜನವಾಗುವಂತಹ, ಅಂದರೆ ತನ್ನ ಪಾಸು ನಡೆಯುವ ಬಸ್ಸಿಗಾಗಿ ಕಾಯುತ್ತಾ ನಿಂತ. ಇನ್ನೈದು ನಿಮಿಷ ಕಳೆಯುವಷ್ಟರಲ್ಲಿ ಅವನು ಕಾಯುತಿದ್ದ ಸಾಮಾನ್ಯ ವರ್ಗದ ಬಸ್ಸು ಬಂತು. ಆ ಬಸ್ಸು ಜನರಿಂದ ತುಂಬಿ ಬಸುರಿ ಹೆಂಗಸಿನಂತಾಗಿದ್ದರಿಂದ ಅವನಿಗೆ ಒಳಗೆ ಸಂಪೂರ್ಣ ಹೋಗಲಾರದೇ ಬಾಗಿಲಿನಲ್ಲೇ ನಿಂತ. ಬಸ್ಸನ ಪಕ್ಕದಲ್ಲಿ ಹಾದು ಹೋಗುವ ಇತರೆ ಕಂಪನಿಯ ಕಾರುಗಳು, ಆ ಕಾರಿನಲ್ಲಿ ನಾಲ್ಕೈದು ಜನ ಕೂಡುವಂತಿದ್ದರೂ, ಒಂದಿಬ್ಬರೂ ಮಾತ್ರ ಆರಾಂ ಆಗಿ ಕುಳಿತು ಓಡಾಡುವುದನ್ನು ನೋಡಿ, ನಾನ್ಯಾವಾಗ ನೌಕರಿ ಹಿಡಿಯುವುದು, ನಾನ್ಯಾವಾಗ ಅವರಂತೆ ಓಡಾಡುವುದು, ಆಗಲೇ ಎಂ.ಎಸ್.ಸಿ ಮುಗಿಸಿ ವರ್ಷ ಕಳೆದರೂ ಇದುವರೆಗೂ ನೌಕರಿ ಇಲ್ಲ. ನನ್ನ ಹಣೆಬರಹಕ್ಕೆ ಈ ಹೊಟ್ಟೆ ತುಂಬಿದ ಬಸ್ಸುಗಳೇ ಗತಿ ಏನೋ? ಹೀಗೆ ಯೋಚಿಸುತಿದ್ದವನಿಗೆ, ಕಂಡಕ್ಟರ್, "ಗಾರೇಪಾಳ್ಯ, ಗಾರೇಪಾಳ್ಯ, ಯಾರ್ರೀ ಗಾರೇಪಾಳ್ಯ ಇಳಿವವರು ಇಳಿರಿ" ಎಂದೂ ಕೂಗಿ ಕೊಂಡಾಗ ತನ್ನ ವಿಚಾರದಿಂದ ಹೊರಬಂದು. ಬಾಗಿಲಿನಿಂದ ಇಳಿದು ಬಸ್ಸಿನಿಂದ ಅಲ್ಲಿ ಇಳಿಯುವವರಿಗೆ ಅವಕಾಶ ಮಾಡಿಕೊಟ್ಟು, ಜನರು ಇಳಿದ ಮೇಲೆ ಮತ್ತೆ ಬಸ್ಸನ್ನು ಏರಿದ.

ಆ ಜನರ ರಸ್ಸಿನಲ್ಲಿ ಅಲ್ಲಿಯವರೆಗೆ ಅದೂವರೆಗೂ ಬಂದು ತಲುಪಲಾರದ ಕಂಡಕ್ಟರ್, ಮುಂಬಾಗಿಲಿನಿಂದ ಇಳಿದು ಹಿಂಬಾಗಿಲಿನಲ್ಲಿ ಮತ್ತೆ ಹತ್ತಿ " ಟಿಕೇಟ್, ಟಿಕೇಟ್, ಯಾರ್ರಿ ನಿಮ್ದಾಯ್ತೇನ್ರೀ" ಎಂದು ಸಂತೋಷನನ್ನು ಕೆಳಿದಾಗ, "ಪಾಸ್" ಎಂದ.

"ಎಲ್ರಿ ಪಾಸು ತೋರ್ಸ್ರಿ"

"ತಗೊಳ್ಳಿ" ಎಂದು ತೋರಿಸಿ ಮತ್ತೆ ತನ್ನ ಅಂಗಿಯ ಕಿಸೆಯಲ್ಲಿಯೇ  ಇಟ್ಟುಕೊಂಡ. ಹಾಗೆ ಪಾಸನ್ನು ತೆಗೆದು ತೋರಿಸುವಾಗ, ಆ ಪಾಸಿಗೆ ಅಂಟಿಕೊಂಡಿದ್ದ ೨೦ರ ನೋಟೊಂದು ಕೆಳಗೆ ಬಿತ್ತು. ಅವನು ನೋಡುವಷ್ಟರಲ್ಲಿ ಅದು ಮಾಯವಾಗಿ ಇನ್ನಾರದೋ ಕಿಸೆಯನ್ನು ಸೇರಿಯೂ ಆಗಿತ್ತು. "ಥೂತ್, ಇಪ್ಪತ್ತು ರೂಪಾಯಿ ಹೋಯ್ತಲ್ಲ" ಎಂದು ಯೋಚಿಸುವಷ್ಟರಲ್ಲಿ ಬಸ್ಸು ಬೊಮ್ಮನಹಳ್ಳಿ ದಾಟಿ ಸಿಲ್ಕ ಬೋರ್ಡವರೆಗೆ ಬಂದಿತ್ತು. ಆ ಬಸ್ಸು ಮುಂದೆ ಮೆಜೆಸ್ಟಿಕ್ ಹೋಗುತ್ತಿದ್ದುದರಿಂದ ಆತ ಆ ಸಿಲ್ಕ ಬೋಡಿನಲ್ಲಿ ಇಳಿದು, ವೈಟಪೀಲ್ಡ್ ಅಥವಾ ಐಟಿಪಿಎಲ್ ಕಡೆ ಹೊರಡುವ ಬಸ್ಸುಗಳಿಗಾಗಿ ಸಿಲ್ಕಬೋರ್ಡ ಸಿಗ್ನಲ್ ದಾಟಿ ಎಚ್ಚೆಸ್ಸಾರ್ ಕಡೆಯ ರಸ್ತೆಯಲ್ಲಿ ಬಂದು ನಿಂತ.

(ಮುಂದುವರೆಯುವುದು...)

--ಮಂಜು ಹಿಚ್ಕಡ್