Sunday, February 23, 2014

ಮನದಾಳದ ಮಾತುಗಳು

ಎರಡಡಿ ಮೂರಡಿ ಜಾಗದಲ್ಲಾಗುವ
ಚರ್ಚೆಯ ಕಾವು,
ಎರುತ್ತಲೇ ಹೋಗುವುದು ನಿಶೆಯೊಂದಿಗೆ
ಮೆದುಳ ಹೊಕ್ಕ ಮಧುವಿನ ನಶೆಯೊಂದಿಗೆ.

ರಸ ರಸ ಒಳಸೇರಿದಾಗ
ಪಾದರಸದಂತ ಹುರುಪು
ಕಣ್ಣು ಕೆಂಪಾದರೇನಂತೆ?
ನಾಲಿಗೆ ತೊದಲಿದರೇನಂತೆ?
ಕುಂದಲಾರದು ಮಾತಿನ ಹೊಳಪು.

ಕುಡಿದು ಕುಡಿದು
ತಲೆ ಸುತ್ತಿ ಬಂದರೂ, ವಾಕರಿಕೆ
ಮತ್ತೆ ಮತ್ತೆ ಬೇಕೆನ್ನುವ ಬಯಕೆ
ಒಮ್ಮೆ ರುಚಿ ನೋಡಿದ
ಈ ಹಾಳು ಮನಕೆ.

ಅಲ್ಲಿ ಸೇರಿದ ಎಲ್ಲರದು ಒಂದೇ ತತ್ವ
ಪ್ರತಿ, ಪ್ರತಿ ಹನಿಗೂ ಅದರದೇ ಮಹತ್ವ.
ಚರ್ಚೆಯುಂಟು ಇಲ್ಲಿ, ಇರ್ಷೆಯಿಲ್ಲ
ಕೂಡಿ ಕುಡಿಯಲು, ಸಂಬಂಧ ಬೇಕಿಲ್ಲ.

ಇದು ಕಾಲಾತೀತ, ಸಮಯಾತೀತ
ಹಣದ ಹಂಗಿಲ್ಲ, ವಯಸ್ಸಿನ ಹಮ್ಮಿಲ್ಲ
ಹೊರಬರುವವು ಮಾತುಗಳು
ತಾವು ತಾವಾಗೇ.

ಒಮ್ಮೆ ಗೂಡಾರ್ಥ, ಒಮ್ಮೆ ಭಾವಾರ್ಥ
ಒಮ್ಮೆ ಆವೇಗ, ಒಮ್ಮೆ ಭಾವೋಧ್ವೇಗ
ಹೊರ ಬರುತಲೇ ಇರುವವು
ಮನದ ಮಾತುಗಳು, ಸಾಲು ಸಾಲಾಗಿ
ಹಸಿರು ದೀಪ ಪ್ರಜ್ವಲಸಿದೊಡೆ
ಹೊರ ಬರುವ ವಾಹನಗಳಂತೆ

--ಮಂಜು ಹಿಚ್ಕಡ್

Saturday, February 15, 2014

ಮನವಿಲ್ಲದ ತನುವೇಕೆ?

ಮನವು ಬೇಡದ ನಿನಗೆ
ತನುವೇಕೆ ಗೆಳೆಯ
ತನುವ ಅರಿಯುವ ಮೊದಲು
ಮನವ ಅರಿ ನೀ ಗೆಳೆಯ.

ಮನವಿಲ್ಲದ ತನುವ

ಒಲವಿಲ್ಲದ ನಲಿವ
ನಿತ್ಯ ಧಾರೆ ಎರೆಯಲು
ನಾ ಬೆಲೆವೆಣ್ಣಲ್ಲ
ನಿನ್ನ  ಬಾಳ ಸಂಗಾತಿ ಗೆಳೆಯ.

--ಮಂಜು ಹಿಚ್ಕಡ್

Monday, February 10, 2014

ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ !

ನಾನೂ ಹುಟ್ಟಿದೂರ ಬಿಟ್ಟು ಸುಮಾರು ಹದಿಮೂರು ವರ್ಷಗಳಾಗುತ್ತಾ ಬಂತು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಹದಿಮೂರು ವರ್ಷ ಕೂಡ ಪೂರ್ತಿಯಾಗುತ್ತದೆ. ಹಾಗಂತ ನಾನು ಊರನ್ನ ಸಂಪೂರ್ಣ ಮರೆತವರಲ್ಲಿ ಒಬ್ಬನಂತೂ ಆಗಿರಲಿಲ್ಲ. ರಜೆ ಇದ್ದಾಗ ಆಗಾಗ ಹೋಗಿ ಬರುತ್ತಿದ್ದೇನೆ. ಈಗ ಒಂದು ವರ್ಷದಲ್ಲಂತೂ ಕನಿಷ್ಟ ಆರೇಳು ಭಾರಿ ಹೋಗಿ ಬಂದಿದ್ದೆ. ನನ್ನ ಸಂಪೂರ್ಣ ಸಂಸಾರ ಅಲ್ಲಿದ್ದುದು ಒಂದು ಕಾರಣ ಇರಬಹುದೇನೋ. ಹಾಗಂತ ನನ್ನ ಊರೇನು ಒಂದೆರಡು ಗಂಟೆಯ ಪ್ರಯಾಣವೇನಲ್ಲ. ಕನಿಷ್ಟ ಹತ್ತು ಗಂಟೆಗಳ ಪ್ರಯಾಣ. ಬೆಂಗಳೂರಿಂದ ಐದುನೂರಾ ಐವತ್ತು ಕಿಲೋ ಮೀಟರ್ ದೂರದಲ್ಲಿ ಸಹ್ಯಾದ್ರಿಯ ತಪ್ಪಲಲ್ಲಿರುವ, ಉತರ ಕನ್ನಡ ಜಿಲ್ಲೆಯ ಅಂಕೋಲಾ ತಾಲುಖಿನ ಒಂದು ಚಿಕ್ಕ ಹಳ್ಳಿ. ಅದಕ್ಕೆ ಹಿಚ್ಕಡ್ ಅಂತಾ ಎಲ್ಲರೂ ಕರೆಯುತ್ತಿದ್ದರಿಂದ, ನಾವು ಹಿಚ್ಕಡ ಅಂತಾನೇ ಕರೆಯುತ್ತಿದ್ದವು. ಯಾಕೆ ಆ ಹೆಸರು ಬಂತು ಅನ್ನುವುದು, ಇದುವರೆಗೂ ಯಾರಿಗೂ ತಿಳಿಯದ ವಿಷಯ. ನಾನೂ ಕೂಡ ಈ ಊರಿಗೆ ಹಿಚ್ಕಡ ಅಂಥಾ ಬರಲು ಕಾರಣಗಳೇನು ಎಂದು ಹಲವರನ್ನು ಕೇಳಿದ್ದೇನೆ. ಕೆಲವರ ಪ್ರಕಾರ ಒಂದು ಕಾಲದಲ್ಲಿ ಬಹಳಷ್ಟು ಕಾಡಿದ್ದರಿಂದ ಹೆಚ್ಚು ಕಾಡು ಅಥವಾ ನಾಡವರ ಭಾಷೆಯಲ್ಲಿ ಹಿಚ್ಚು ಕಾಡು ಎಂದು ಕರೆಯುತ್ತಿದ್ದುದು ಮುಂದೆ ಹಿಚ್ಕಡ ಅಂಥಾ ಆಗಿರಬೇಕು. ಒಂದು ಕಾಲದಲ್ಲಿ ಇಲ್ಲಿ ಬೆಟ್ಟ ಇದ್ದುದರಿಂದ ಕಡವೆಗಳು ಯಥೇಚ್ಚವಾಗಿ ಓಡಾಡಿಕೊಂಡಿದ್ದವು. ಇಲ್ಲಿ ವಾಸಿಸುವ ಬಹುತೇಕ ಜನ ನಾಡವರೇ ಆಗಿದ್ದ ಅವರು ಕಡವೆಗಳಿಗೆ ಕಡ ಅಂಥಾನು ಕರೆಯುತ್ತಿದ್ದರು. ಹಾಗಾಗಿ ಹೆಚ್ಚು ಕಡವೆ ಎನ್ನುವ ಪದ ಹಿಚ್ಚುಕಡವಾಗಿ ಮುಂದೆ ಹಿಚ್ಕಡ ಅಂಥಾ ಆಗಿರಬಹುದು. ಇವೆಲ್ಲ ಕೇವಲ ಗಾಳಿ ಮಾತುಗಳೇ ವಿನಃ ಐತಿಹಾಸಿಕ ಪುರಾವೆಗಳು ಯಾವುದು ಇಲ್ಲ. ಹಾಗಂತ ಹಿಚ್ಕಡಕ್ಕೆ ಇತಿಹಾಸವೇ ಇಲ್ಲವೇ ಅಂತಲ್ಲ. ಅದಕ್ಕೆ ತನ್ನದೇ ಆದ ಇತಿಹಾಸವನ್ನ ಹೊಂದಿದೆ. ಇದಕ್ಕೆ ಇಲ್ಲಿರುವ ಪ್ರದೇಶಗಳಲ್ಲಿರುವ ಐತಿಹಾಸಿಕ ಕುರುಹುಗಳೇ ಸಾಕ್ಷಿ.

ಮಡಿವಾಳರ ಮೆನೆಯ ಪಕ್ಕದಲ್ಲಿರುವ ಜಟಕನ ದೇವಸ್ಥಾನದ ಸ್ಥಳ ಒಂದು ಕಾಲದಲ್ಲಿ ಜೈನರ ಬಸದಿಯಾಗಿದ್ದು, ಇಲ್ಲಿರುವ ಅನೇಕ ಜೈನ ಭಾವಿಗಳು (ಕಿರಿದಾದ ಭಾವಿಗಳು) ಒಂದು ಕಾಲದಲ್ಲಿ ಹಿಚ್ಕಡದಲ್ಲಿ ಜೈನಧರ್ಮ ಪ್ರಚಲಿತದಲ್ಲಿತ್ತು ಎನ್ನುವುದನ್ನ ತೋರಿಸುತ್ತದೆ. ಮುಂದೆ ಇದೇ ಜೈನ ಧರ್ಮವನ್ನ ಅನುಸರಿಸುತ್ತಿದ್ದ ನಮ್ಮ ಪೂರ್ವಜರು ಮತ್ತೆ ಹಿಂದೂ ಧರ್ಮವನ್ನ ಸ್ವಿಕರಿಸಿ ಮುಂದೆ ಹಿಂದೂಗಳಾಗಿ ಪರಿವರ್ತನೆಯನ್ನ ಹೊಂದಿರುವುದು ಎದ್ದು ಕಾಣುತ್ತದೆ. ಹಾಗೆ ಹಿರೇಗದ್ದೆ ಪ್ರದೇಶವು ನಮ್ಮ ಪೂರ್ವಿಕರ ವಾಸಸ್ಥಳವಾಗಿದ್ದು ನಂತರ ಈಗ ವಾಸಿಸುತ್ತಿರುವ ಸ್ಥಳಗಳಿಗೆ ತಮ್ಮ ವಾಸಸ್ಥಳವನ್ನ ವಿಸ್ಥರಿಸಿಕೊಂಡಿರಬಹುದು. ಆಗಿನ ಕಾಲಕ್ಕನುಗುಣದ ಇತಿಹಾಸವನ್ನ ಹೋಲಿಸಿದರೆ ಹಿರೇಗದ್ದೆ ಜನ ಜೀವನಕ್ಕೆ ವಾಸಕ್ಕೆ ಯೋಗ್ಯವಾದ ಸ್ಥಳವಾಗಿತ್ತು. ಮೂರು ಕಡೆಗಳಿಂದಲೂ ಬೆಟ್ಟಗುಡ್ಡಗಳಿಂದ ಆವ್ರತ್ತವಾಗಿದ್ದ ಕಣಿವೆ ಪ್ರದೇಶ, ವರ್ಷಕ್ಕೆ ಮೂನ್ನೂರಾ ಅರವತೈದು ದಿನವು ನೀರು ಹರಿಸುತ್ತಿದ್ದ, ಎರಡೆರಡು ಅಬ್ಬಿಗಳು (ನೀರಿನ ಬುಗ್ಗೆಗಳು). ಒಂದು ಇವತ್ತಿಗೂ ಜೀವಂತವಾಗಿದ್ದು, ಗಾಂವಕರ ಮನೆಯ ಒಡೆತನದ ಜಾಗದಲ್ಲಿದ್ದು. ಇನ್ನೊಂದು ಕರನ ಮನೆಯ ಒಡೆತನದಲ್ಲಿರುವ ಜಾಗದಲ್ಲಿತ್ತು. ಆದರೆ  ಇವತ್ತು ಮಣ್ಣು ಮುಚ್ಚಿಯೋ ಅಥವಾ ವಾತಾವರಣದ ಬದಲಾವಣೆಯಿಂದಾಗಿಯೋ ಕರನಮನೆಯವರ ಜಾಗದಲ್ಲಿರುವ ಅಬ್ಬಿ ಮುಚ್ಚಿ ಹೋಗಿದ್ದೆ. ಇನ್ನೂ ಅಲ್ಲಿ ಆಯಾ ಮನೆತನದ ಒಡೆತನದಲ್ಲಿರುವ ತೋಟ ಗದ್ದೆಗಳು ಇವತ್ತಿಗೂ ಇವೆ. ಇವೆಲ್ಲ ಸನ್ನಿವೇಶಗಳನ್ನ ನೋಡಿದರೆ ಒಂದು ಕಾಲದಲ್ಲಿ ನಾಡವರ ಹಿರೆಗದ್ದೆ ಪ್ರದೇಶದಲ್ಲಿ ವಾಸವಾಗಿದ್ದರೂ ಅನ್ನುವುದನ್ನು ಸೂಚಿಸುತ್ತದೆ. ಹಾಗೆಯೇ ಹೆಸರೂ ಕೂಡ ಅದನ್ನೇ ಹೇಳುತ್ತದೆ. ಹಿರೇಗದ್ದೆ ಅಂದರೆ ಹಿರಿಯರ ಗದ್ದೆ ಅಥವಾ ಹಿರೀಯರು ಸಾಗುವಳಿ ನಡೆಸಿದ್ದ ಗದ್ದೆ ಅಂಥಾ.

ರಾಜರಾಮ ಮೋಹನರಾಯರು ಸತಿಸಹಗಮನ ಪದ್ದತಿಯನ್ನ ನಿಷೇಧಿಸುವುದಕ್ಕೆ ಮೊದಲೇ ಇಲ್ಲಿ ವಾಸವಾಗಿರುವ ಒಂದು ಕಾಲದಲ್ಲಿ ಯೋಧರಾಗಿದ್ದ ನಾಡವರಲ್ಲೂ ಆ ಪದ್ದತಿ ಇಲ್ಲಿರುವ ಮಾಹಾಸತಿ ಮನೆಯೇ ಸಾಕ್ಷಿ. ದಕ್ಷಿಣದಿ ಹರಿಯುವ ಗಂಗಾವಳಿಯ ತಟದಲ್ಲಿ ಯುದ್ಧದಲ್ಲಿ ಮಡಿದ ತಮ್ಮ ಪೂರ್ವಿಕರ ನೆನಪಿಗಾಗಿ ಕಟ್ಟಿದ ಬೊಮ್ಮಯ್ಯ, ಬೀರ ದೇವರುಗಳು ಒಂದು ಕಾಲದಲ್ಲಿ ಇಲ್ಲಿಯ ನಾಡವರು ಯೋಧರಾಗಿದ್ದರು ಎನ್ನುವುದನ್ನ ಇನ್ನಷ್ಟು ದೃಡ ಪಡಿಸುತ್ತದೆ. ಹಾಗಿದ್ದರೆ ಈ ದೇವಾಲಯಗಳೆಲ್ಲವೂ ನದಿಯ ತೀರದಲ್ಲಿರುವ ಕಾರಣವೇನು? ಸುತ್ತಲು ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದ್ದ ಹಿಚ್ಕಡಕ್ಕೆ ಅಂದು ಪೂರ್ವ ಹಾಗೂ ಉತ್ತರ ದಿಕ್ಕುಗಳಿಂದ ವೈರಿಗಳಿಂದ ದಾಳಿ ನಡೆಸುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಅನೂಕೂಲಕರವಾದ ಪ್ರದೇಶವೆಂದರೆ ದಕ್ಷಿಣದಲ್ಲಿ ಹರಿಯುವ  ಗಂಗಾವಳಿ ನದಿಯ ಪ್ರದೇಶ ಹಾಗೂ ನದಿಯ ಮುಖಜವಾದ ಭೂಮಿ ಸಮತಟ್ಟಾಗಿದ್ದುದರಿಂದ ರಣರಂಗಕ್ಕೂ ಸೂಕ್ತವಾದ ಸ್ಥಳ. ಬಹುಷಃ ಇದೇ ಕಾರಣಕ್ಕೆ ಇಲ್ಲಿ ಬಹುತೇಕ ಯುದ್ಧಗಳು ಇದೇ ನದಿ ಮುಖಜ ಪ್ರದೇಶದಲ್ಲಿ ನಡೆದು, ಇಲ್ಲಿಯೇ ನಾಡವರ ಹಿರಿಯರು ತಮ್ಮ ವೀರ ಮರಣಗೈದಿರಬಹುದು. ಹಾಗೆಯೇ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದಂತಹ ಪೋರ್ಚುಗಿಸರು ಹಿಂದು ದೇವಾಲಯಗಳ ಮೇಲೆ ದಾಳಿ ಮಾಡಿತ್ತಿದ್ದರಿಂದ, ಅವರನ್ನು ಎದುರಿಸಲು ನಾಡವರು ನದಿ ಮುಖಜ ಪ್ರದೇಶಗಳಲ್ಲಿ ಬಂದು ವಾಸಿಸಿ, ಅವರೋಡನೆ ಇಲ್ಲಿಯೂ ಸೆಣೆಸಾಟ ನಡೆಸಿರಬಹುದು.

ನಮ್ಮೂರ ಸರ್ವೋಧಯ ಒಂದು ಕಾಲದಲ್ಲಿ ಅರಬ್ ಇಂದ ಭಾರತಕ್ಕೆ ಬರುತ್ತಿದ್ದ ಕುದುರೆ ವ್ಯಾಪಾರಿಗಳಿಗೆ ಅರವಟ್ಟಿಗೆಯ ಕೇಂದ್ರವಾಗಿತ್ತು. ವಿಜಯನಗರದ ಅರಸರ ಕಾಲದಲ್ಲಿ ಅಂಕೋಲಾದ ವಾಸರೆ ಮತ್ತು ಕುದ್ರಿಗೆಗಳು ಅರಬ್ ದಿಂದ ಬಂದ ಕುದುರೆ ಮತ್ತು ಕತ್ತೆಗಳ ವ್ಯಾಪಾರ ಕೇಂದ್ರವಾಗಿತ್ತು. ಸಮುದ್ರದಿಂದ ಆಮದು ಮತ್ತು ರಪ್ತುಗಳಾಗುವ ವಸ್ತುಗಳು ಹಿಚ್ಕಡದ ಮೂಖಾಂತರವೇ ಸಾಗಾಟವಾಗುತ್ತಿದ್ದವು ಎನ್ನುವುದಕ್ಕೆ ನಮ್ಮೂರ ಮುಳ್ಳಾಕೇರಿ ಗುಡ್ಡದ ಮೇಲೆ ಪಾಳು ಬಿದ್ದ ರಸ್ತೆಯಾಕಾರದ ಸುಮಾರು ಉದ್ದದ ಸಮತಟ್ಟದ ಪ್ರದೇಶವನ್ನ ಇಂದಿಗೂ ಕಾಣಬಹುದು.[ನಮ್ಮ ತಂದೆಯವರು ಒಮ್ಮೆ ಹೇಳುತ್ತಿದ್ದರು, ಅವರು ಒಂದು ಕಾಲದಲ್ಲಿ ಹಿಲ್ಲೂರಲ್ಲಿ ವಾಸವಾಗಿದ್ದ ಸಮಯದಲ್ಲಿ, ಆಗಿನ್ನೂ ಹಿಲ್ಲೂರಿಗೆ ಬಸ್ಸಿನ ಸೌಕರ್ಯಗಳು ಅಷ್ಟಾಗಿರದ ಕಾಲದಲ್ಲಿ, ಆಗ ಹಿಚ್ಕಡದಿಂದ ಹಿಲ್ಲೂರಿಗೆ ನಡೆದುಕೊಂಡು ಹೋಗಲು ಒಂದು ಮಾರ್ಗವಿತ್ತಂತೆ, ಅಲ್ಲಿ ಒಂದು ಎತ್ತಿನ ಗಾಡಿ ಸಾಗುವಷ್ಟು ಅಗಲದ ರಸ್ತೆ ಇತ್ತು ಅಂತೆ. ಬಹುಷಃ ಸಮುದ್ರದಿಂದ ಆಮದಾಗುವ ವಸ್ತುಗಳು ಇದೇ ದಾರಿಯಲ್ಲಿ ಸಾಗಿ, ಸಿರಸಿಯ ಮುಖಾಂತರ ವಿಜಯನಗರವನ್ನ ಸೇರುತ್ತಿರಬೇಕು]. ಇವೆಲ್ಲವೂ ನನ್ನ ಅನಿಸಿಕೆಗಳೇ ಹೊರತು, ಇವಕ್ಕೆ ಯಾವುದೇ ಪುರಾವೆಗಳು, ಸಾಕ್ಷಾಧಾರಗಳು ಕಡಿಮೆ ಇದ್ದುದರಿಂದ ಇದು ಸದ್ಯಕ್ಕೆ ಅನಿಸಿಕೆಗಳೆಂದು ಕರೆಯುವುದೇ ವಾಸಿ.

ಇನ್ನೂ ಸ್ವಾತಂತ್ಯ್ದದ ಹೋರಾಟದ ವಿಷಯಕ್ಕೆ ಬಂದರೆ, ಹಿಚ್ಕಡದ ಮನೆ ಮಂದಿಯಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೋರಾಡಿ ತಮ್ಮದೇ ಆದಂತಹ ಕಾಣಿಕೆಯನ್ನ ನಿಡಿದ್ದು ಕೂಡ ಇಂದು ಇತಿಹಾಸ.

ಭೌಗೋಳಿಕವಾಗಿಯೂ ನನ್ನೂರು ಒಂದು ಸುಂಧರವಾದ ಊರು, ವರ್ಷಕ್ಕೆ  ಮೂನ್ನೂರಾ ಅರವತ್ತೈದು ದಿನವೂ ತುಂಬಿ ಹರಿಯುವ ಗಂಗಾವಳಿ ನದಿ. ಅದರ ನಡುವಿನ ನಡುಗಡ್ಡೆ ಕೂರ್ವೆ. ದೂರದ ಮುಳ್ಳಾಕೇರಿ ಗುಡ್ಡದ ತುದಿಯಲ್ಲಿ ನಿಂತು ನೋಡಿದರೆ, ತೆಂಗಿನ ಮರಗಳನ್ನ ತುಂಬಿಕೊಂದು ಬಂದ ಹಡಗು ನದಿಯ ನಡುಭಾಗದಲ್ಲಿ ನಿಶ್ಚಲವಾಗಿ ನಿಂತಂತೆ ತೋರುತ್ತದೆ. ಇನ್ನೂ ಕೂರ್ವೆಯ ಒಳ ಭಾಗವನ್ನ ಪ್ರವೇಶಿಸಿದರೆ, ಸೂರ್ಯ ರಶ್ಮಿಗಳು ನೆಲ ಪ್ರವೇಶಿಸದ ರೀತಿಯಲ್ಲಿ ಬೆಳೆದು ನಿಂತ ತೆಂಗಿನ ಮರಗಳು, ಅವುಗಳ ನಡುವಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಡಿಸಲು ಮನೆಗಳು, ಅಲ್ಲಲ್ಲಿ ವಿರಳವಾಗಿ ಕಾಣ ಸಿಗುವ ಇತರ ಗಿಡಗಳಾದ ಬಾಳೆ, ಅಡಿಕೆಗಳು. ಸೂತ್ತಲೂ ಉಪ್ಪು ನೀರಿನಿಂದಾವೃತ್ತವಾದರೂ ನಡುವಲ್ಲಿ ಸಿಹಿ ನೀರಿನ ಭಾವಿಗಳು.ಆಗಾಗ ಕೂರ್ವೆಗೆ ಹೋಗಿ ಬರುವಂತೆ ಮಾಡುತ್ತಲೇ ಇರುತ್ತದೆ. ಗಂಗಾವಳಿ ನದಿ ದಂಡೆಯ ಮೇಲಿರುವ ಜುಗಾದೇವಿ ದೇವಸ್ಠಾನ, ಆ ಜುಗಾದೇವಿ ದೇವಸ್ಠಾನದ ಹಿಂಬಾಗದಿಂದ ಸೂರ್ಯೋಧಯವನ್ನೂ, ಮುಂಬಾಗದಿಂದ ಸೂರ್ಯಾಸ್ಥವನ್ನೂ ನೋಡುವುದೇ ಎಲ್ಲಿಲ್ಲದ ಸೊಗಸು. ಜುಗಾದೇವಿ ದೇವಸ್ಠಾನದ ಪ್ರಾಂಗಣದಲ್ಲಿ ಕುಳಿತು ಸುತ್ತಲ ನಿಸರ್ಗವನ್ನು ನೋಡುವುದೆಂದರೆ ನನಗೆ ಎಲ್ಲಿಲ್ಲದ ಸಂತೋಷ.

ಇನ್ನೂ ಕಾನಮೂಲೆ ಪ್ರದೇಶವಂತೂ ಎಷ್ಟು ಹೊಗಳಿದರೂ ಸಾಲದು. ಗಂಗಾವಳಿ ನದಿ ಮತ್ತು ಕಾನ ಮೂಲೆ ಗುಡ್ಡೆಗಳೆರಡು ಸಂಧಿಸುವ ಸುಂದರ ಪ್ರದೇಶ. ಆ ಪ್ರದೇಶದಲ್ಲಿ ಇರುವ ಬೊಮ್ಮಯ್ಯ ದೇವರ ಗುಡಿ, ಅದರ ಮುಂದೆ ಜುಳು ಜುಳು ಹರಿಯುವ ಗಂಗಾವಳಿ ನದಿ. ಹಿಂದೊಮ್ಮೆ ಕಾನ ಮೂಲೆ ಗುಡ್ಡದ ಪ್ರದೇಶ ದಟ್ಟ ಕಾನನದ ಪ್ರದೇಶವಾಗಿತ್ತು. ಇಂದು ಅದು ಬರೀ ಕುರುಚಲ ಗಿಡಗಳ ಗುಡ್ಡವಾಗಿ ಉಳಿದು ಕೊಂಡಿದೆ. ಹಿಚ್ಕಡದ ಕಣಿವೆ ಪ್ರದೇಶಗಳಾದ ಹಿರೇಗದ್ದೆ ಮತ್ತು ಮೋಡುಕಟ್ಟೆ ಪ್ರದೇಶಗಳು ಯಾವತ್ತು ಹರಿಧ್ವರ್ಣದಿಂದ ತುಂಬಿ ತುಳುಕುತ್ತಿರುತ್ತವೆ. ನನ್ನ ನೆಚ್ಚಿನ ಮುಳ್ಳಾಕೇರಿ ಗುಡ್ಡವನ್ನು ಎಷ್ಟು ಹೊಗಳಿದರು ಸಾಲದು. ಚಿಕ್ಕವರಿದ್ದಾಗ ಆಗಾಗ ಈ ಗುಡ್ಡವನ್ನು ಏರಿ, ಅಲ್ಲಿ ಸಿಗುವ ಮುಳ್ಳು ಹಣ್ಣುಗಳನ್ನು ಆರಿಸಿ ತಿನ್ನುವುದೆಂದರೆ ಅದೆನೋ ಸಂತೋಷ. ಗುಡ್ಡದ ತುದಿಯಲ್ಲಿರುವ ಬಂಡೆಯ ಮೇಲೆ ಕುಳಿತು ಸುತ್ತಲೂ ಕಾಣುವ ಮನೆಗಳನ್ನೂ, ಸುಂದರ ಬಯಲನ್ನೂ, ನದಿಯನ್ನೂ ದೂರದಲ ಕ್ಷಿತಿಜದಲ್ಲಿ ಕಾಣುವ ಅರಬ್ಬೀ ಸಮುದ್ರವನ್ನೂ ನೋಡುವುದೆಂದರೆ ಅದೇನೋ ಸಂತೋಷ. ಈಗಲೂ ಊರಿಗೆ ಹೋದಾಗ ಎರಡು ಮೂರು ಸಾರಿಯಾದರೂ ಗುಡ್ಡವೇರಿ ಬರುತ್ತೇನೆ. ಪ್ರಕೃತಿಯ ತುದಿಯಲ್ಲಿ ಕುಳಿತು ಪ್ರಕೃತಿಯನ್ನು ನೋಡುವಾಗ ಸಿಗುವ ಸುಖ ಬೇರೆಲ್ಲೂ ಸಿಗಲಾರದು.

ಊರ ನಡುಬಾಗ ಬೆಳೆದ ತೆಂಗು, ಮಾವು, ಆಡಿಕೆ, ಹಲಸು ಇತ್ಯಾದಿ ಮರಗಳಿಂದ ಆವೃತ್ತವಾಗಿದ್ದು, ಎತ್ತರದ ಪ್ರದೇಶದಿಂದ ನೋಡಿದರೆ ಯಾರ ಮನೆ ಎಲ್ಲಿದೆ ಎಂದು ಗುರುತಿಸುವುದು ಕಷ್ಟ. ಊರ ನಡುವಿರುವ ಬಾಣಸ ಕೆರೆಯಂತೂ, ಸಹರದ ಈಜು ಕೊಳವಿದ್ದಂತೆ. ಊರ ಬಹು ಜನ ಯುವಕರು, ಮಕ್ಕಳು ಈಜು ಕಲಿಯುವುದು ಇದೇ ಕೆರೆಯಲ್ಲಿ. ಮಳೆಗಾಲ ಬಂತೆಂದರೆ ತುಂಬಿ ಹರಿಯುವ ಕೆರೆ. ನಾವೆಲ್ಲಾ ಚಿಕ್ಕವರಿರುವಾಗ ಯಾವಾಗ ಮಳೆ ಪ್ರಾರಂಭವಾಗುತ್ತದೋ ಆಗಿನಿಂದ ದಿನಾ ಬಾಣಸಕೆರೆಗೆ ಹೋಗಿ, ಕೆರೆ ಎಷ್ಟು ತುಂಬಿದೆ ಎಂದು ನೋಡಿ ಬರುವುದು. ಒಮ್ಮೆ ಕೆರೆ ತುಂಬಿದ್ದು ಗೊತ್ತಾದರೆ ಸಾಕು, ನಾವು ನಮ್ಮ ವಯಸ್ಸಿನ ಹುಡುಗರನ್ನೆಲ್ಲ ಕರೆದುಕೊಂಡು ಬಾಣಸಕೆರೆಗೆ ಈಜಾಡಲು ಹೋಗುತ್ತಿದ್ದೆವು. ಅದೂ ಶನಿವಾರ ಭಾನುವಾರಗಳೆಂದರೆ ನಮಗೆ ಎಲ್ಲಿಲ್ಲದ ಸಡಗರ. ಬೆಳಿಗ್ಗೆ ಎಂಟು ಗಂಟೆಗೆ ಹೋದವರು ಮನೆ ತಲುಪುವುದು ಮಧ್ಯಾಹ್ನ ಎರಡು ಗಂಟೆ ನಂತರವೇ. ಎಷ್ಟೋ ಸಾರಿ ನಮ್ಮ ಪಾಲಕರು ನಮ್ಮನ್ನು ಹುಡುಕಿಕೊಂಡು ಬಂದು ನಮ್ಮನ್ನ ಊಟಕ್ಕೆ ಕರೆದೊಯ್ದಿದ್ದೂ ಇದೆ. ಹಾವಸೆಗಳು ಬೆಳೆದು ದೊಡ್ಡದಾಗಿ, ನೀರ ಮೇಲ್ಮೈ ಮೇಲೆ ತೇಲಾಡುವವರೆಗೂ ನಮ್ಮ ಈಜಾಟ ಮುಂದುವರೆಯುತ್ತಿತ್ತು. ಅಪರೂಪಕ್ಕೊಮ್ಮೆ ಬೆಂಗಳೂರಲ್ಲಿ ಈಜು ಕೊಳಕ್ಕೆ ಹೋದರೂ ನನಗೆ ಆ ಬಾಣಸಕೆರೆಯಲ್ಲಿ ಈಜಾಡಿದಷ್ಟು ಸಂತೋಷ ಸಿಗುವುದಿಲ್ಲ. ಇವೆಲ್ಲಾ ಕಾರಣಕ್ಕೇ ಏನೋ ನನಗೆ ನಾನು ಹುಟ್ಟಿದ ಊರೆಂದರೆ ಎಲ್ಲಿಲ್ಲದ ಪ್ರೀತಿ. ಅಲ್ಲಿ ನಾ ಪಡೆದ ಅನುಭವಗಳು ನನಗೆ ಜಗತ್ತಿನ ಯಾವ ಮೂಲೆಗೆ ಹೋದರೂ ಸಿಗಲಾರದು. ಹಾಗಾಗಿ ನನಗೆ ನಾನು ಹುಟ್ಟಿದ ಹಿಚ್ಕಡವು ನನಗೆ ಸ್ವರ್ಗಕ್ಕಿಂತ ಮಿಗಿಲಾದ್ದುದ್ದು ಹಾಗೂ ಪವಿತ್ರವಾದುದ್ದು.

--ಮಂಜು ಹಿಚ್ಕಡ್

Wednesday, February 5, 2014

ನಮ್ಮೂರಿನ ಮಾಸ್ತಿಕಲ್ಲು ಹಾಗೂ ಅದರ ಮೇಲಿನ ಬರಹಗಳು...

ಮೊನ್ನೆ ನಮ್ಮೂರು ಹಿಚ್ಕಡಕ್ಕೆ ಹೋಗಿದ್ದೆ. ನಮ್ಮೂರಿನ ಉತ್ತರದಿಕ್ಕಿನಲ್ಲಿ ಒಂದು ದೊಡ್ಡ ಮರವಿದ್ದು (ಗೊಂಬಳಿ ಮರ) ಅದರ ಕೆಳಗೆ ಒಂದು ಮಾಸ್ತಿಕಲ್ಲು ಇದ್ದು, ಅದನ್ನು ನಾನು ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೆನಾದರೂ ಅದರ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ. ಆದರೆ ಮೊನ್ನೆ ಊರಿಗೆ ಹೋದಾಗ ಅದನ್ನು ಮತ್ತೊಮ್ಮೆ ನೋಡುವ ಉದ್ದೇಶದಿಂದ ಮತ್ತೆ ಆ ಕಲ್ಲನ್ನು ನೋಡಲು ಹೋಗಿದ್ದೆ. ಈ ಬಾರಿ ಹೋದಾಗ ಅದನ್ನು ಸ್ವಲ್ಪ ಹತ್ತಿರದಿಂದಲೇ ನೋಡಿದ್ದೆ. ಹತ್ತಿರದಿಂದ ಗಮನಿಸಿದಾಗ ನನಗೆ ಒಮ್ಮೇಲೆ ಆಶ್ಚರ್ಯ. ಅದರ ಮೇಲ್ಬಾಗದಲ್ಲಿ ಇತರೆ ವೀರಗಲ್ಲಿನಂತೆ ಒಂದು ಲಿಂಗ,ಆ ಲಿಂಗಕ್ಕೆ ಹಾಲೆರೆಯುವ ಹೆಂಗಸು, ಲಿಂಗದ ಪಕ್ಕದಲ್ಲಿ ನಂದಿ, ನಂದಿಯ ಮೇಲ್ಬಾಗದಲ್ಲಿ ಜೈನ ಸ್ಥಂಬವಿದ್ದು. ಆದರ ಕೆಳಗೆ ಒಂದು ಶಾಸನವಿದೆ. ಶಾಸನ ಅರ್ದಂಬರ್ದ ಅಳಿಸಿ ಹೋಗಿದ್ದರಿಂದ ಅದನ್ನು ಓದಲು ಸಾದ್ಯವಾಗಲಿಲ್ಲ. ಆ ಮಾಸ್ತಿಕಲ್ಲಿನ ಮಧ್ಯಭಾಗದಲ್ಲಿ ಏಳು ಹೆಂಗಸಿನ ಕೆತ್ತನೆಯಿದ್ದು, ಬಹುತೇಕ ಇವು ಸಪ್ತ ಕನ್ನಿಕೆಯರಿರಬಹುದೆನ್ನುವುದು ನನ್ನ ಅನಿಸಿಕೆ. ಅ ಕಲ್ಲಿನ ಕೆಳಭಾಗದಲ್ಲಿ ಯೋಧ ಹಾಗೂ ಆತನ ಪತ್ನಿಯರ ಕೆತ್ತನೆಯಿರಬಹುದು. ನಮ್ಮ ಭಾಗದಲ್ಲಿ ಇತರೆ ಕೆಲವು ಕಡೆ ದೊರೆತ ಬಹಳಷ್ಟು ವೀರಗಲ್ಲುಗಳಲ್ಲಿಯ ಶಾಸನಗಳ ಪ್ರಕಾರ ಆ ಕಲ್ಲುಗಳು ವಿಜಯನಗರದ ಕಾಲಕ್ಕೆ ಸಂಬಂಧಿಸಿದ್ದು, ನಮ್ಮೂರಿನ ವೀರಗಲ್ಲು ಕೂಡ ಆ ಇತರೆ ವೀರಗಲ್ಲಿನಂತೆಯೇ ಇರುವುದರಿಂದ ಬಹುಷಃ ನಮ್ಮೂರಿನ ವೀರಗಲ್ಲು ಕೂಡ ಆ ಕಾಲದ್ದೇ ಇರಬಹುದು. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾಕಷ್ಟು ಮಹಾಸತಿ ವೀರಗಲ್ಲುಗಳು ಇವೆ, ಕೆಲವು ವೀರಗಲ್ಲುಗಳು ಸಿಕ್ಕಿವೆ, ಕೆಲವು ವೀರಗಲ್ಲುಗಳು ಭೂಮಿಯಲ್ಲಿ ಹುದುಗಿ ಹೋಗಿವೆ. ಅಂತಹ ವೀರಗಲ್ಲುಗಳನ್ನು ಅಭ್ಯಸಿಸಿದರೆ ಬಹುಷಃ ನಮ್ಮ ಹಳ್ಳಿಗಳ ಇತಿಹಾಸದ ಮಾಹಿತಿಯನ್ನು ಸಂಗ್ರಹಿಸುವುದು ಕಷ್ಟವಾಗಲಾರದು ಎನ್ನುವುದು ನನ್ನ ಅನಿಸಿಕೆ.










--ಮಂಜು ಹಿಚ್ಕಡ್ 

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ!

ಊರಿಂದ ಬಂದು ೧೫ ದಿನ ಆಗಿತ್ತು, ಊರಿಂದ ಹೊತ್ತು ತಂದ ಚೀಲ ಹಾಗೆ ದಿವಾನದ ಮೇಲೆ ಇತ್ತು.  ಎರಡು ಶನಿವಾರ ಎರಡು ಭಾನವಾರಗಳು ಕಳೆದರೂ ಆ ಬ್ಯಾಗ ಅಲ್ಲಿ ಏನಿದೆ, ಅದರಲ್ಲಿರು ಬಟ್ಟೆ ಬರೆಗಳನ್ನು ತೆಗೆದಿಡಬೇಕು ಎನ್ನುವ ಪರಿಜ್ನಾನವು ಇರಲಿಲ್ಲ. ಅದೇ ನನ್ನ ಹೆಂಡತಿ ಆಗಿದ್ದರೆ ಬಂದ ತಕ್ಷಣ ಬಟ್ಟೆ ಬದಲಿಸುವುದಕ್ಕೂ ಮೊದಲೆ, ತಂದ ಚೀಲವನ್ನೆಲ್ಲ ಬಿಚ್ಚಿ ಇರುವ ವಸ್ತುಗಳನ್ನೆಲ್ಲ ತೆಗೆದು ಒಂದಡೆ ಜೋಡಿಸುವುದು ಅವಳ ಅಭ್ಯಾಸ. ಅವಳೇ ಎಲ್ಲ ಮಾಡುತ್ತಿರುವದರಿಂದ, ನಾನೇನು ಮಾಡುತ್ತಿರಲಿಲ್ಲ. ಅದೇ ಅಭ್ಯಾಸವಾಗಿಬಿಟ್ಟಿದೆ. ಹೆಂಡತಿ ಊರಿಗೆ ಹೋಗಿ ಆಗಲೇ ಒಂದು ವರ್ಷ ಆಗ್ತಾ ಬಂತು. ಅವಳು ಊರಿಗೆ ಹೋದಾಗಲೇ ಗೊತ್ತಾಗಿದ್ದು, ಅವಳು ಎರಡು ತಿಂಗಳ ಬಸುರಿ ಅಂತ. ಆ ಮೇಲೆ ವೈಧ್ಯರು ಅವಳು ದೂರ ಪ್ರಯಾಣ ಮಡಬಾರದು ಅಂತಾ ಹೇಳಿದ ಮೇಲೆ ಅವಳ ವಾಸ್ತವ್ಯ ಊರಲ್ಲೆ ಆಗಿಬಿಟ್ಟಿತ್ತು. ಹಾಗಾಗಿ ನಾನು ಬೆಂಗಳೂರಲ್ಲೆ ಇದ್ದು, ಆಗಾಗ ಹೋಗಿ ಅವಳನ್ನು ನೋಡಿಕೊಂಡು ಬರುತ್ತಿದ್ದೆ. ಇವಾಗ ಹೋಗಿದ್ದು ಅವಳನ್ನು, ನನ್ನ ಪುಟ್ಟ ಮಗಳನ್ನು ನೋಡಿ ಬರಲು. ಇನ್ನೇನು ಒಂದೆರಡು ತಿಂಗಳಲ್ಲಿ, ಅವರಿಬ್ಬರೂ ಬೆಂಗಳೂರಿಗೆ ಬರುವವರಿದ್ದರಿಂದ ಸ್ವಲ್ಪ, ಸಾಮಾನನ್ನೂ ಇಗಲೇ ತೆಗೆದು ಕೊಂಡು ಹೋಗುವುದರಿಂದ ಅಮೇಲೆ ಸ್ವಲ್ಪ ಭಾರ ಕಡಿಮೆ ಆಗುತ್ತೆ ಅಂತ, ನನ್ನ ಹೆಂಡತಿ ಹೇಳಿದ್ದರಿಂದ, ಒಂದು ಬ್ಯಾಗ ತುಂಬಾ ಅವಳ ಮತ್ತು ಮಗಳ ಬಟ್ಟೆಗಳನ್ನು, ಊಳಿದ ಸಾಮಾನುಗಳನ್ನು ತುಂಬಿಟ್ಟಿದ್ದಳು. ಅದನ್ನೇ ನಾನು ತೆಗೆದುಕೊಂಡು ಬಂದು, ನನ್ನ ರೂಮಲ್ಲಿ ಇಟ್ಟಿದು. ಆ ಬ್ಯಾಗನ್ನ ನೋಡಿದಾಗ, ಅಲ್ಲಿರುವ ಸಾಮಾನುಗಳನ್ನು ತೆಗೆದಿಡಬೇಕು ಅಂದುಕೊಳ್ಳುತ್ತೇನೆ. ಆಮೇಲೆ ಏನೋ ಒಂಥರ ಆಲಸ್ಯ, ಆಮೇಲೆ ತೆಗದರಾಯಿತ್ತು ಎಂದುಕೊಳ್ಳುತ್ತಾ ಹಾಗೆ ಬಿಟ್ಟುಬಿಡುವುದು. ಹಾಗೆ ಅಂದುಕೊಳ್ಳುತ್ತಾ ಎರಡು ವಾರಗಳು ಕಳೆದು ಹೋಗಿದ್ದರಿಂದ ಇವತ್ತು, ಅಲ್ಲಿರುವ ಸಾಮಾನುಗಳನ್ನೆಲ್ಲ ತೆಗೆದು ಜೋಡಿಸಿ ಇಟ್ಟಿದ್ದೆ.

ಇದು ಕೇವಲ ಒಂದು ಉದಾಹರಣೆ ಅಷ್ಟೇ, ಈ ರೀತಿ ಅನೇಕ ಘಟನೆಗಳು ನಡೆದು ಹೋಗಿವೆ. ಒಮ್ಮೆ ನಮ್ಮ ಮಾವ ಮತ್ತು ನನ್ನ ನೆಂಟ (ಹೆಂಡತಿಯ ತಮ್ಮ) ಇಬ್ಬರು ಬೆಂಗಳೂರಿಗೆ ಬರುವವರಿದ್ದರು. ಆಗ ನನ್ನ ಹೆಂಡತಿ ಊರಲ್ಲೆ ಇದ್ದಳು. ನನಗೆ ಇವರು ಬರುವ ಸುದ್ದಿಯನ್ನು ಕೇಳಿದಾಗ, ನಾನೊಮ್ಮೆ ದಿಗ್ಬ್ರಾಂತನಾಗಿಬಿಟ್ಟೆ, ಏನು ಮಾಡುವುದೆಂದು. ಯಾಕೆ ಅಂತಾ ಕೇಳ್ತಾ ಇದ್ದಿರಾ, ನಾವು ವಾಸವಾಗಿರುವ ಮನೆ, ಒಂದು ರೀತಿ ಭೂತ ಬಂಗಲೆಯಾಗಿ ಬಿಟ್ಟಿತ್ತು. ನನ್ನ ಮನೆಯಲ್ಲಿ ಹೆಂಡತಿ ಇಲ್ಲ ಅನ್ನೋದನ್ನ ಬಿಟ್ಟರೆ, ಊಳಿದೆಲ್ಲ ಕ್ರೀಮಿ, ಕೀಟಗಳು ವಾಸವಾಗಿದ್ದವು. ಜೇಡು ಹುಳುಗಳಿಗಂತು, ಯಾರೂ ಪ್ರತಿಸ್ಪರ್ಧಿಗಳಿರಲಿಲ್ಲ. ಮನೆ ತುಂಬ, ಬಲೆ ನೇಯ್ದಿದ್ದವು. ಜೀರಲೆಗಳಂತು ತಮ್ಮ ಸಂಸಾರವನ್ನು ಬೇಕಾಬಿಟ್ಟಿ ಬೆಳೆಸಿದ್ದವು. ಅಡಿಗೆ ಕೋಣೆಯಂತು, ನೀರು ಕಾಣದೆ ಹಾಗೆ ಉಳಿದು ಬಿಟ್ಟಿತ್ತು. ಕಸಬರಿಗೆಯಂತೂ ಒಂದು ಮೂಲೆಯಲ್ಲಿ ಬದ್ರವಾಗಿ ಕುಳಿತಿತ್ತು. ನಾನಂತೂ ಅದರ ತಂಟೆಗೆ ಹೋಗದೆ ಒಂದು ತಿಂಗಳಾಗಿತ್ತು. ನನ್ನ ಹಾಸಿಗೆ ದಿಂಬುಗಳು ನೀರು ಕಾಣದೇ ಏಳೆಂಟು ತಿಂಗಳುಗಳಾಗಿದ್ದವು.

ನನ್ನ ಮಾವನಿಗೆ ದೇವರೆಂದರೆ, ಎಲ್ಲಿಲ್ಲದ ಭಕ್ತಿ. ಹಾಗಂತ ನಾನೇನು ನಾಸ್ತಿಕ ನಾಗಿರಲಿಲ್ಲ. ನಾನು ದೀನಾ ದೇವರಿಗೆ ಉದಿನ ಕಡ್ಡಿ ಕಚ್ಚಿ, ಭಕ್ತಿಯಿಂದ ನಮಸ್ಕರಿಸುವುದು ಅಭ್ಯಾಸ. ಹಾಗೆ ದೀನಾ ಉದಿನ ಕಡ್ಡಿ ಕಚ್ಚಿ -ಕಚ್ಚಿ, ದೇವರ ಸುತ್ತಾ ಉದಿನ ಕಡ್ಡಿಯ ಬುಧಿ ತುಂಬಿಕೊಂಡು ಬಿಟ್ಟಿತ್ತು. ದೇವರ ಫೋಟೋಗಳು, ಮೂರ್ತಿಗಳ ತುಂಬೆಲ್ಲ ಬುದಿ ಮುಚ್ಚಿಕೊಂಡು ಬಿಟ್ಟಿತ್ತು. ಯಾರಾದರೂ ನೋಡಿದರೆ, ನನ್ನ ದೇವರುಗಳೆಲ್ಲ, ಯಾವುದು ಬುದಿ ಮುಚ್ಚಿದ ಹೊಂಡದಿಂದ ಎದ್ದು ಬಂದಂತಿದ್ದವು. ನನಗಂತೂ ಮನೆಯಲ್ಲಿ ಕುಳಿತು ಕೊಳ್ಳೊಕ್ಕೇ ಹೆದರಿಕೆಯಾಗಿ ಬಿಟ್ಟಿತ್ತು. ಆಫೀಸ ಇಂದ ಮನೆಗೆ ಬಂದ ತಕ್ಷಣ, ಬೂಟನ್ನು ತೆಗೆದು, ತಕ್ಷಣ ಒಳಗೆ ಹೋಗಿ ಬಟ್ಟೆಯನ್ನು ಬದಲಾಯಿಸಿ ಬಿಡುತಿದ್ದೆ. ಯಾಕೆಂದರೆ, ಎಲ್ಲಿ ದೂಳು ನನ್ನ ಬಟ್ಟೆಗಳಿಗೆ, ಅಂಟಿಕೊಳ್ಳುತ್ತೋ ಅನ್ನುವ ಭಯ. ಅಷ್ಟೇ ಅಲ್ಲ ಹದಿನೈದು ಇಪ್ಪತ್ತೋ ದಿನಕ್ಕೆ ಬಟ್ಟೆ ತೊಳೆಯುವುದು ತಪ್ಪಿ ಹೋಗಿ ವಾರಕೊಮ್ಮೆ ಬಟ್ಟೆ ತೊಳೆಯಬೇಕಾಗತ್ತೋ ಅಂತಾ.

ಬಹುಷ, ಇಂತಹ ಪರಿಸ್ಥಿತಿಯಲ್ಲಿ ಯಾರಿದ್ದರೂ ಹೆದರುತಿದ್ದರೋ ಏನೋ. ಪುಣ್ಯಕ್ಕೆ ನನ್ನ ಹೆಂಡತಿ ಮಾಡಿದ ಒಂದು ಒಳ್ಳೆಯ ಕೆಲಸ ಅಂದರೆ, ಅವರು ಬರುವುದಕ್ಕೆ ಹದಿನೈದು ದಿನ ಮುಂಚಿತವಾಗಿ ಹೇಳಿದ್ದು. ಅವಳಿಗೆ ಬಹುಷ ನನ್ನ ಪರಿಸ್ಥಿತಿ ಗೊತ್ತಾಗಿರಬೇಕೆನಿಸುತ್ತೆ. ಅವಳೇನಾದರೂ ಎರಡು ದಿನ ಮೊದಲೆನಾದ್ರೂ ಹೇಳಿ ಬಿಟ್ಟದ್ದರೆ ನನ್ನ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿರುತ್ತಿತು. ಇನ್ನೂ ಹದಿನೈದು ದಿನ ಇದೆ ಅನ್ನೊ ಸಮಾಧಾನದಲ್ಲಿ, ಒಂದು ವಾರ ಬೇರೆ ಕಳೆದು ಹೋಗಿತ್ತು. ಇನ್ನುಳೀದುದ್ದು ಒಂದು ವಾರ ಮಾತ್ರ. ಎರಡು ವಾರಾಂತ್ಯಗಳು ಇವೆ ಎನ್ನುವ ದೈರ್ಯವಿತ್ತು. ಏನೇ ಆಗಲಿ ಆಗಿದ್ದು, ಆಗತ್ತೆ ಅನ್ನುವ ದೈರ್ಯದಿಂದ ಕೆಲಸ ಆರಂಭಿಸಿದೆ. ದೇವರ ಕೊಣೆಯನ್ನೆಲ್ಲ ಸ್ವಚ್ಚಗೊಳಿಸಿ, ಅಡಿಗೆ ಕೊಣೆಯನ್ನು ಸ್ವಚ್ಚಗೊಳಿಸೋ ಹೊತ್ತಿಗೆ ಒಂದು ದಿನ ಕಳೆದಿತ್ತು. ಹಾಗೆ ಇನ್ನೊಂದು ದಿನ ಉಳಿದೆಲ್ಲ ರೂಮುಗಳನ್ನು ಸ್ವಚ್ಚಗೊಳಿಸಿದೆ. ಹೀಗೆ ಇನ್ನೊಂದು ದಿನ, ಹಾಸಿಗೆ ದಿಂಬುಗಳನ್ನು ಸ್ವಚ್ಚಗೊಳಿಸಿದೆ. ಅಂತೂ ಒಂದು ವಾರ ಬೇಕಾಗಿತ್ತು. ಸಂಪೂರ್ಣ ಮನೆಯನ್ನು ಸ್ವಚ್ಚಗೊಳಿಸಿ ರೆಡಿ ಮಾಡಲು. ಅಂತೂ ನಮ್ಮ ಮಾವ ಬಂದು ಉಳಿದಿದ್ದು ಕೇವಲ ಒಂದು ಹಗಲು ಒಂದು ರಾತ್ರಿ ಮಾತ್ರ. ಅದೇ ನನ್ನ ಹೆಂಡತಿ ಇದ್ದಿದ್ದರೆ ದಿನಾ ಮನೆಯನ್ನು ಸ್ವಚ್ಚಗೊಳಿಸಿಟ್ಟುಕೊಳ್ಳುವವಳು. ನನ್ನ ಬಟ್ಟೆಗಳನ್ನೆಲ್ಲ ನೋಡಿ ಯಾವುದಾದರೂ ಬಟ್ಟೆ ಕೊಳೆಯಾಗಿದ್ದರೆ ಅದನ್ನು ತೆಗೆದುಕೊಂಡು ಹೋಗಿ ತೊಳೆಯುವುದು ಅವಳ ಅಭ್ಯಾಸ. ಅವಳಿದ್ದಾಗ ನನಗಂತೂ ಯಾವ ಕೆಲಸವು ಇರಲಿಲ್ಲ.

ಇನ್ನೂ ಊಟದ ವಿಷಯದಲ್ಲೂ ಅಷ್ಟೇ, ಹಗಲಲ್ಲಿ ಕಿತ್ತು ಹೋಗಿರೋ ಕಛೇರಿ ಊಟವನ್ನು, ರಾತ್ರಿ ಒಮ್ಮೊಮ್ಮೆ ಹೊರಗಡೆ ಒಮ್ಮೊಮ್ಮೆ ಮನೆಯಲ್ಲೂ ಊಟ ಮಾಡತೊಡಗಿದೆ. ಕಛೇರಿಯ ಊಟವನ್ನು ಎಷ್ಟು ವರ್ಣಿಸಿದರೂ ಸಾಲದು. ಸೋಮವಾರ ಚೆನ್ನಾ ಬಟೋರಾ, ಅಥವಾ ಪುರಿ. ಅದರ ಜೊತೆ, ಬೆಂಡೆಕಾಯಿ ಅಥವಾ ಹೀರೆಕಾಯಿ ಪಲ್ಯ. ಮಂಗಳವಾರ ಚಪಾತಿ ಅದರ ಜೊತೆ ದಾಲ್, ಬುದವಾರ ರುಮಾಲಿ ರೋಟಿ ಅದರ ಜೊತೆ ಚನ್ನಾದಾಲನ ಪಲ್ಲೆ, ಗುರವಾರ ಸೆಟ್ ದೋಸಾ ಅದರ ಜೊತೆ ದಾಲ್, ಶುಕ್ರವಾರ ರೊಟ್ಟಿ ಅದರ ಜೊತೆ ಚಟ್ನಿ ಅಥವಾ ಕ್ಯಾಬೇಜ್ ಪಲ್ಯ. ಇದು ಕೇವಲ ರೋಟಿ ಚಪಾತಿ ಕಥೆಯಾದರೆ ಇನ್ನು ಉಳಿದ ಪದಾರ್ಥಗಳ ಕಥೆ ಹೇಗಿರಬಹುದೆಂದು ನಿವೇ ಉಹಿಸಿ. ಅಂತಹ ಊಟವನ್ನು ವಾರಕ್ಕೆ ಐದು ದಿನವೂ ಮಾಡಬೇಕಾದ ಪರಿಸ್ಥಿತಿ. ಇನ್ನೂ ರಾತ್ರಿ ಊಟದ ಬಗ್ಗೆ ಹೇಳಬೇಕೆಂದರೆ, ರಾತ್ರಿ ಒಂದು ದಿನ ಹೊರಗಡೆಯಿಂದ ಸಾಂಬಾರ ತಂದು, ಮನೆಯಲ್ಲಿ ಅನ್ನ ಮಾಡಿಕೊಂಡು ಎರಡೆರಡು ದಿನ ಊಟ ಮಾಡುತ್ತಿದ್ದೆ. ಒಂದು ದಿನ ಸಾಂಬಾರ ಮಾಡಿಕೊಂಡು ಬಿಟ್ಟರೆ ಅದನ್ನಾ ರೆಪ್ರಿಜರೇಟರನಲ್ಲಿಟ್ಟು ಮೂರ್ನಾಲ್ಕು ದಿನ ಮಾಡಿಕೊಳ್ಳುತ್ತಿದ್ದೆ. ಅದೇ ನನ್ನ ಹೆಂಡತಿ ಇದ್ದರೆ ಈ ಯಾವ ತೊಂದರೆಗಳಿರಲಿಲ್ಲ. ಮದ್ಯಾಹ್ನ - ರಾತ್ರಿ ದಿನಾ ಮನೆಯಲ್ಲೇ ಊಟ ಮಾಡುತಿದ್ದೆ.

ಇವೆಲ್ಲ ಒಂದೊಂದು ಉದಹರಣೆಗಳಷ್ಟೇ. ಇಂತಹ ಘಟನೆಗಳು ಸಾವಿರಾರಿದೆ. ಇದು ಬಹುಷ ನನ್ನದೊಬ್ಬನದೇ ಕಥೆಯಾಗಿರಲಿಕ್ಕಿಲ್ಲ. ಇಂತಹ ಘಟನೆಗಳು ಹಲವರ ಜೀವನದಲ್ಲೂ ನಡೆದಿರಬಹುದು. ತಾಯಿ ಹೇಗೆ ತನ್ನ ಮಗುವಿನ ಬೇಕು ಬೇಡಗಳನ್ನು ಅರ್ಥೈಸಿಕೊಂಡು, ಅವನ ಸಮಸ್ಯೆಗಳಿಗೆ ಸ್ಪಂಧಿಸುತ್ತಳೆ. ಹಾಗೆ ಹೆಂಡತಿ, ತನ್ನ ಗಂಡನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವನ ಹೆಗಲಿಗೆ ತನ್ನ ಹೆಗಲನ್ನ ಕೊಟ್ಟು, ಸಂಸಾರದ ಅರ್ಧಾಂಗಿ ಅನ್ನುವ ಹೆಸರನ್ನ ಗಳಿಸಿಕೊಂಡಿದ್ದಾಳೆ. ಎಂತಹ ದು:ಖವಿರಲಿ, ಸುಖವಿರಲಿ, ನೋವಿರಲಿ, ನಲಿವಿರಲಿ ಎನೇ ಇದ್ದರು ಗಂಡಸು ಹೇಳಿಕೊಳ್ಳುವುದು ಮದುವೆ ಮೊದಲು ತಾಯಿಯಲ್ಲಿ, ಮದುವೆಯ ನಂತರ ಹೆಂಡತಿಯಲ್ಲಿ. ಆದರೆ ಅಂತಹ ವಿಷಯಗಳನ್ನ ಹೇಳಿಕಳ್ಳಲು ಹೆಂಡತಿ ಹತ್ತಿರ ಇಲ್ಲ ಅಂದರೆ ಅವನ ಸ್ಥಿತಿ ಹೇಗಿರಬಹುದೆಂದು ನಿವೇ ಊಹಿಸಿ ಅಂತಹ ಸುಖ ಎಷ್ಟು ಕೋಟಿಕೊಟ್ಟರು ಬಾರದು. ಅದಕ್ಕೆ ಅಲ್ಲವೇ ಷರೀಪರು ಹಾಡಿದ್ದು,
" ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ನನಗದು ಕೋಟಿ ರೂಪಾಯಿ" ಎಂದು.

--ಮಂಜು ಹಿಚ್ಕಡ್ 

Tuesday, February 4, 2014

ಅವನೂರ ಜಾತ್ರೆಯ ನೆನಪಲ್ಲಿ...

ಇಂದು ನನ್ನವನ ಊರಲ್ಲಿ
ಜಾತ್ರೆಯ ಮೆರುಗಂತೆ
ಬಗೆ ಬಗೆಯ ತಿನಿಸುಗಳ
ಮಳಿಗೆಗಳು ಬಂದಿಹೆವೆಯಂತೆ.

ರಸ್ತೆ ಇಕ್ಕೆಲಗಳಲ್ಲಿ ಬಗೆ ಬಗೆಯ
ಅಂಗಡಿಗಳ ಸಾಲು ಸಾಲಂತೆ
ನಡುವೆ ಬಣ್ಣ ಬಣ್ಣದ ಧಿರಿಸು ದರಿಸಿ
ಹೊರಟವರ ಸಾಲು ಸಾಲಂತೆ.

ಅವನೂರ ಜಾತ್ರೆಯೆಂದರೆ
ನನಗೆ ಅವನದೇ ನೆನಪು
ಆಗ ಅವನಿರಲು ನನ್ನ ಹತ್ರ
ನನಗಾಗ ಜಾತ್ರೆ ನೆಪ ಮಾತ್ರ.

ಅಂದು ನನಗಿಷ್ಟವೆಂದು ಆತ
ಜಿಲೇಬಿ, ಬತ್ತಾಸುಗಳ ಪೊಟ್ಟಣಗಳ
ಕೈಗೆ ತೊಡಿಸಿದ ಆ ಹಸಿರು ಬಳೆಗಳ
ಕಿವಿಗೆ ಧರಿಸಲು ಕೊಟ್ಟ
ಆ ಬಣ್ಣ ಬಣ್ಣದ ಓಲೆಗಳ
ನಾ ಎಂದಿಗಾದರೂ ಮರೆಯುವುದುಂಟೆ.

ಅಂದು ಕರೆಯಲು ಬರುವವನು
ಕಳೆದೆರಡು ಬಾರಿ ಬಂದಿಲ್ಲ
ಆತ ಮರೆತಿರಬಹುದು ನನ್ನ
ನನ್ನ ಪ್ರೀತಿ ಇನ್ನೂ ಆರಿಲ್ಲ

ತನ್ನ ಮದುವೆಗೆ ಕರೆಯಲು
ಆತ ಬಂದಿರಲಿಲ್ಲವಲ್ಲ
ಮದುವೆಯ ಕರೆಯೋಲೆ ಕೊಡಲು
ಆತನ ತಂದೆ ಬಂದಿದ್ದನಲ್ಲ.

ಆತ ಆಕೆಯ ಪ್ರೀತಿಯಲಿ
ಹಾಯಾಗಿ ನನ್ನ ಮರೆತಿರಬಹುದು
ಹಾಗಂತ ನಾನು ಮರೆತಿಲ್ಲ
ಮರೆಯಲು ಯತ್ನಿಸಿದರೂ
ಸಾದ್ಯವಾಗುತ್ತಿಲ್ಲವಲ್ಲ.

ಅವನಿಗೆ ನಮ್ಮ ಸಂಬಂಧ
ಬರೀಯ ಸ್ನೇಹವಿರಬಹುದು
ನನಗೆ ಹಾಗಲ್ಲವಲ್ಲ
ಬದುಕಿನ ಪಯಣದಲಿ
ಸ್ನೇಹವೂ ಪ್ರೀತಿಯಾಗಬಹುದು
ಎನ್ನುವುದು ನನ್ನ ಕನಸಟ್ಟೇ
ಎಂದು ನನಸಾಗಿಲ್ಲ
ನನಸಾಗುವುದು ಇಲ್ಲ.

--ಮಂಜು ಹಿಚ್ಕಡ್