Saturday, December 28, 2013

ಯಕ್ಷಗಾನ, ಇಂದು ನಮ್ಮಿಂದ ನಿಧಾನವಾಗಿ ಮರೆಯಾಗುತ್ತಿದೆಯೇ?

ಜನವರಿ ೨೬ ಹತ್ತಿರ ಬರುತ್ತಿದ್ದಂತೆ ನನಗೆ ನೆನಪಾಗುವುದು ನಮ್ಮೂರಲ್ಲಿ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದೊಡನೆ, ನಮ್ಮೂರಲ್ಲಿ ಯಾವ ಪ್ರಸಂಗ ನಡೆಯಲಿದೆ, ಅದರಲ್ಲಿ ಯಾರು - ಯಾರು ಭಾಗವಹಿಸುತಿದ್ದಾರೆ, ಹಿಮ್ಮೆಳದಲ್ಲಿ ಯಾರಿದ್ದಾರೆ, ಮ್ಮುಮ್ಮೆಳದಲ್ಲಿ ಯಾರಿದ್ದಾರೆ, ವಿಧೂಷಕರೂ ಯಾರು, ಶ್ತ್ರೀ ಪಾತ್ರದಲ್ಲಿ ಯಾರಿದ್ದಾರೆ, ಎಂದೆಲ್ಲ ತಿಳಿದುಕೊಳ್ಳುವ ಕುತೂಹಲ. ಪ್ರಸಂಗ ನಿಶ್ಚಯವಾದೊಡನೆ, ಅದರ ಕರ ಪತ್ರಕ್ಕಾಗಿ ಹುಡುಕಾಟ. ಸಿಕ್ಕೊಡನೆ, ಅದರ ಒಂದೊಂದು ಶಬ್ಧವನ್ನು ಬಿಡದೇ ಓದುವುದು. ಶಾಲೆಗೆ ಹೋಗಿ ಗಣರಾಜೋತ್ಸವದ ಧ್ವಜ ಹಾರಾಟ ಮುಗಿಸಿದ ತಕ್ಷಣ ಮನೆಗೆ ಬಂದು, ಊಟದ ಶಾಸ್ತ್ರ ಮಾಡಿ, ಬಯಲಾಟ ನಡೆಯುವ ಸ್ಥಳಕ್ಕೆ ಆಗಮಿಸುವುದು. ಅಲ್ಲಿ ಚಪ್ಪರ ಹಾಕುವುದರಿಂದ ಹಿಡಿದು, ಬಜನೆ ಪ್ರಾರಂಭವಾಗುವವರೆಗೂ ಅಲ್ಲಿದ್ದು ಮತ್ತೆ ಮನೆಗೆ ಬಂದು ಮತ್ತೆ ರಾತ್ರಿ ಊಟದ ಶಾಸ್ತ್ರ ಮಾಡಿ, ಹಣ್ಣು ಹಂಪಲುಗಳ ಸವಾಲು ಪ್ರಾರಂಭವಾಗುತ್ತಿದಂತೆ ಮತ್ತೆ ಬಯಲಾಟದ ಸ್ಥಳಕ್ಕೆ ಹಾಜಾರ್. ಆಟ ಪ್ರಾರಂಭವಾಗುವುದರೊಳಗೆ ಎಲ್ಲಿ ಯಾವ ಅಂಗಡಿ ಇದೆ, ಏನೇನು ಇಟ್ಟು ಕೊಂಡಿದ್ದಾರೆ, ಎಲ್ಲ ವಿಕ್ಷಿಸಿ ಬರುವುದಷ್ಟೇ ನಮ್ಮ ಕೆಲಸ, ತೆಗೆದುಕೊಳಲ್ಲಂತು ಆಗುತ್ತಿರಲಿಲ್ಲ. ಯಾಕೆಂದರೆ ಆಗ ನಾವೆಲ್ಲ ಯಕ್ಷಗಾನ ನೋಡಲು ಬರುತ್ತಿದ್ದುದು ಬರೀ ಕೈಯಲ್ಲಿ. ಎಲ್ಲೋ ಅಪರೂಪಕ್ಕೆ ೨೫ ಪೈಸೆನೋ, ೫೦ ಪೈಸೆನೋ ಸಿಕ್ಕರೆ ನಮ್ಮ  ಖುಷಿಗೆ ಮಿತಿಯೇ  ಇರುತ್ತಿರಲಿಲ್ಲ. ಸಿಕ್ಕ ಹಣದಲ್ಲಿ ಹುರಿದ ಕಡಲೆಯನ್ನೋ, ಚೊಕಲೇಟನ್ನೋ ತೆಗೆದುಕೊಳ್ಳುತ್ತಾ, ಅಲ್ಲಿ ಇಲ್ಲಿ ಸುತ್ತಾಡುತ್ತಾ, ಆಮೇಲೆ ಯಕ್ಷಗಾನ ಪ್ರಾರಂಭವಾದ ಒಂದೆರಡು ಗಂಟೆಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಹೋಗಿ ಮಲಗಿಬಿಡುತ್ತಿದ್ದೆವು. ಆಗಾಗ ಏಳುತ್ತಾ ಮತ್ತೆ ಮಲಗುತ್ತಾ, ಕಡೆಯಲ್ಲಿ ಮಂಗಳ ಹಾಡು ಕಿವಿಗೆ ಬಿಳುತ್ತಿದ್ದಂತೆ ಎದ್ದು ಕಣ್ಣೊರಿಸುತ್ತಾ ಮನೆಗೆ ಬಂದು ಬಿಡುತ್ತಿದ್ದೆವು. ಆಗ ಮನೆಯಲ್ಲಿ ಅಪ್ಪ- ಅಮ್ಮನ್ನ ಬಿಟ್ಟರೆ ನಮ್ಮನ್ನ ಕೇಳುವವರಾರಿರಲಿಲ್ಲ, ನಾವು ಮಾಡಿದ್ದೇ ರಾಜ್ಯ. ಆಗಿನ್ನು ಮೀಸೆ ಮೂಡದ, ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳು. ನನಗಿನ್ನು ನೆನಪಿದೆ ಮೊದಲ ಯಕ್ಷಗಾನ ನಡೆಯುತ್ತಿದ್ದದು, ನಮ್ಮೂರ ಕೆಳಗಿರುವ ಗದ್ದೆ ಬಯಲಲ್ಲಿ. ಮೊದಲು ಯಕ್ಷಗಾನಗಳು ನಡೆಯುತ್ತಿದ್ದುದು ಬಯಲಲ್ಲಿ ಆದ್ದರಿಂದ ಅದಕ್ಕೆ ಬಯಲಾಟ ಅಂತ ಕರೆಯುತ್ತಿದ್ದರು ಅನಿಸುತ್ತೆ. ಹಾಗೆ ಯಾವುದಾದರೂ ಮೇಳದವರು ಬಂದು ನಡೆಸಿಕೊಡುವ ಯಕ್ಷಗಾನಕ್ಕೆ ಮೇಳದ ಆಟ ಅಂತಾ ಹೇಳುತ್ತಿದ್ದರು.

ನನಗಿನ್ನೂ ನೆನಪಿದೆ, ಮೊದಲು ನಮ್ಮೂರಲ್ಲಿ ಜನವರಿ ೨೬ ರಂದು ಒಂದು ಆಟವಾದರೆ, ಹಾಗೆ ಮಾರ್ಚ, ಎಪ್ರಿಲ್ ನಲ್ಲಿ ಬಜನೆ ಆಟ, ಹಾಗೆ  ಮೇ ನಲ್ಲಿ ಮಕ್ಕಳ ಆಟಗಳು ನಡೆಯುತ್ತಿದ್ದವು. ನಾವು ಚಿಕ್ಕವರಿದ್ದಾಗ ಹೊಸ್ತೋಟ ಮಂಜುನಾಥ ಭಾಗವತರು ಬಂದು ನಮ್ಮೂರಲ್ಲೇ ಉಳಿದು, ನಮ್ಮೂರ ಯುವಕ ಸಂಘದಲ್ಲಿ ಚಿಕ್ಕ-ಚಿಕ್ಕ ಮಕ್ಕಳಿಗೆಲ್ಲ ಯಕ್ಷಗಾನ ಹೇಳಿಕೊಟ್ಟು ಅವರಿಂದ ಒಂದು ಆಟ ಆಡಿಸಿ ಹೋಗುತ್ತಿದ್ದರು. ಆದರೆ ಕ್ರಮೇಣ ಅವರಿಗೆ ವಯಸ್ಸಾದಂತೆ ಅವರು ಬರುವುದು -ಉಳಿಯುವುದು ಇಲ್ಲಿ ಕಷ್ಟವಾದ್ದರಿಂದ, ಅವರು ಇಲ್ಲಿಗೆ ಬರುವುದು ತಪ್ಪಿಹೋಯಿತು. ಹಾಗೆ ಮುಂದೆ ಬಜನೆ ಆಟ ಮತ್ತು ೨೬ರ ಎರಡು ಆಟಗಳನ್ನೂ ಒಂದು ಗೂಡಿಸಿ ವರ್ಷಕ್ಕೆ ಒಂದೇ ಆಟವಾಗಿ ಮಾರ್ಪಟ್ಟಿತು. ಅಷ್ಟೇ ಅಲ್ಲ ಮೊದಲು ವರ್ಷಕ್ಕೆ ಒಂದಾದರೂ ಮೇಳದ ಆಟವಾಗುತ್ತಿತ್ತು. ಆದರೆ ಇವತ್ತು ಅವೆಲ್ಲ ನಿಂತೂ ಹೋಗಿವೆ. ಕಾರಣಗಳು ಹಲವು, ಅದರಲ್ಲಿ ಮೊದಲನೆಯದಾಗಿ ನುರಿತ ಯಕ್ಷಗಾನ ಪಟುಗಳ ಕೊರತೆ, ಇವತ್ತು ಯಕ್ಷಗಾನ ನೋಡುವುದನ್ನ ಬಿಟ್ಟರೆ ಅದನ್ನ ಕಲಿಯಬೇಕು ಅನ್ನುವ ಆಸಕ್ತಿ ನಮ್ಮ ಜನತೆಯಲ್ಲಿ ಕಡಿಮೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಅಂದರೆ ಇವತ್ತಿನ ಚಲನಚಿತ್ರ, ದೂರದರ್ಶನ, ರೇಡಿಯೋಗಳಿಲ್ಲದ ಸಮಯದಲ್ಲಿ ಯಕ್ಷಗಾನ ಒಂದು ಮನರಂಜನೆಯ ಸಾಧನವಾಗಿತ್ತು. ಕ್ರಮೇಣ ಚಲನಚಿತ್ರ ಯಕ್ಷಗಾನವನ್ನ ಹಿಂದಿಕ್ಕಿ, ತನ್ನ ಮುನ್ನಡೆಯನ್ನ ಸಾಧಿಸತೊಡಗಿತು. ಹಾಗೆ ಮುಂದೆ ದೂರದರ್ಶನ ಎಲ್ಲವನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಅಷ್ಟೇ ಅಲ್ಲ ನೂರಾರು ಚಾನೆಲಗಳು, ನೂರಾರು ಧಾರವಾಹಿಗಳು ಇವೆಲ್ಲವು ಯಕ್ಷಗಾನವನ್ನ ಹಿಂದ್ದಿಕ್ಕಿ ಮುನ್ನಡೆಯನ್ನು ಸಾಧಿಸಿವೆ. ಜನ ಇವತ್ತು ದೂರ ದರ್ಶನಗಳ ದಾಸರಾಗುತ್ತಿದ್ದಾರೆ. ವೇಷಧರಿಸಿ ಕುಣಿದು, ರಾತ್ರಿಯೆಲ್ಲ ನಿದ್ದೆಗೆಟ್ಟು ಮನರಂಜನೆ ನೀಡುವ ಕಲಾವಿಧರು ಕಡಿಮೆಯಗುತ್ತಿದ್ದಾರೆ. ಕೆಲವು ಸಂಸ್ಥೆಗಳು ಯಕ್ಷಗಾನವನ್ನು ಜೀವಂತ ಇಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಇದು ಇವತ್ತಿನ ದೂರದರ್ಶನಗಳ ಮುಂದೆ, ತನ್ನ ಜನಪ್ರೀಯತೆಯನ್ನ ಕಳೆದುಕೊಳ್ಳುತ್ತಿದೆ. ಮುಂದೆ ಹೀಗಾದಲ್ಲಿ ಯಕ್ಷಗಾನ, ಅವನತಿಯ ಹಂತಕ್ಕೆ ತಲುಪಿದ್ದಲ್ಲಿ ಆಶ್ಚರ್ಯವೇನಿಲ್ಲ. ಹೀಗೆ ಮುಂದುವರೆದರೆ ಮುಂದೆ ನಮ್ಮ ಮಕ್ಕಳಿಗೆ ಯಕ್ಷಗಾನ ಹೀಗಿತ್ತು, ಹಾಗಿತ್ತು ಅಂತಾ ತೋರಿಸಲು ಸಾಕ್ಷಿಗಳಿರಲಿಕ್ಕಿಲ್ಲ.

ಇಷ್ಟೆಲ್ಲ ಹೇಳಿ ಯಕ್ಷಗಾನ ಅಂದರೇನು ಅಂತ ಹೇಳದಿದ್ದಲ್ಲಿ ಈ ಲೇಖನ ಪೂರ್ತಿಯಾಗುವುದಿಲ್ಲ. ಮಾನವ ಸಮಾಜ ಜೀವಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಮನುಷ್ಯ ಒಂದು ಕಡೆ ನೆಲೆನಿಂತು, ಸಮಾಜ ಜೀವಿಯೊಡನೆ ತನಗಿರುವ ವಿಶ್ರಾಂತಿ ಸಮಯವನ್ನ ಮನರಂಜನೆಗಾಗಿ ಉಪಯೋಗಿಸಿಕೊಳ್ಳುತ್ತಿದ್ದ. ಹಾಗೆ ಮನರಂಜನಾ ಸಮಯದಲ್ಲಿ ಉದ್ಭವಿಸಿದ ಕಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ತಲೆ ತಲಾಂತರದಿಂದ ಹರಿದು ಬಂದ ಜನಪದ ಕಲೆಗಳೆನಿಸಿಕೊಂಡಿವೆ. ಮಾನವ ವಿಕಾಶದೊಂದಿಗೆ ಕೆಲವು ಕಲೆಗಳು ಅವನತಿಯನ್ನ ಹೊಂದಿದ್ದರೆ, ಕೆಲವು ಕಲೆಗಳು ಇನ್ನೂ ಜೀವಂತವಾಗಿವೆ. ಅಂತಹ ಕಲೆಗಳಲ್ಲಿ ಯಕ್ಷಗಾನವು ಒಂದು. ಯಕ್ಷಗಾನ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜನರ ಒಂದು ಜಾನಪದ ಕಲೆ. ಇದು ಎಂದು, ಎಲ್ಲಿ, ಯಾವಾಗ ಹುಟ್ಟಿತು, ಹೇಗೆ ಹುಟ್ಟಿತು, ಅನ್ನುವುದು ಇನ್ನೂ ನಿಗೂಡ. ಜನರಿಂದ ಜನರಿಗಾಗಿ ತಲೆತಲಾಂತರದಿಂದ ನಡೆದು ಬಂದ ಜಾನಪದ ಕಲೆ. ಕೇರಳದ ಕಥಕ್ಕಳಿಗೆ ಸ್ವಲ್ಪ ಹತ್ತಿರದಲ್ಲಿರುವ ಕಲೆ.

ಸಾವಿರಾರು ವರ್ಷಗಳ ಹಿಂದಿನ ಮಾತು, ಅಂದು ಭಾರತದ ಸಾಂಸ್ಕ್ರತಿಕ ಲೋಕದಲ್ಲಿ ಸಂಸ್ಕ್ರತ ರಾರಾಜಿಸುತ್ತಿದ್ದ ಕಾಲ. ಅಂದು ಸಂಸ್ಕ್ರತ ಕೇವಲ ಮೇಲ್ವರ್ಗದವರ ಭಾಷೆಯಾಗಿದ್ದರಿಂದ ಅಂದಿನ ಬಹುತೇಕ ಗ್ರಂಥಗಳು ಸಂಸ್ಕ್ರತದಲ್ಲೆ ಇದ್ದುದರಿಂದ ಸ್ತ್ರೀ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಅಂಥ ಒಂದು ಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಸಂಸ್ಕ್ರತವನ್ನ ಹಾಡು - ಕುಣಿತ ಮತ್ತು ಮಾತಿನ ಮೂಲಕ ಜನಸಾಮಾನ್ಯರಿಗೆ ತಿಳಿಹೇಳುವ ಮೂಲಕ ಯಕ್ಷಗಾನ ಉಗಮವಾಗಿರಬಹುದು. ಮುಂದೆ ಕ್ರಮೇಣ ಹಳೆಗನ್ನಡ ಬೆಳೆಯುತ್ತಿದ್ದ ಹಾಗೆ ಹಳೆಗನ್ನಡದ ಹಾಡುಗಳನ್ನ, ನವೀನ ಕನ್ನಡದಲ್ಲಿ ಜನಸಾಮಾನ್ಯರಿಗೆ ತಿಳಿಹೇಳುತ್ತಾ ಯಕ್ಷಗಾನ ಬದಲಾಗುತ್ತಾ ಬಂದಿರಬಹುದು ಎನ್ನುವುದು ನನ್ನ ಅನಿಸಿಕೆ. ಒಂದು ಕಾಲದಲ್ಲಿ ಕೇವಲ ಪೌರಾಣಿಕ ಪ್ರಸಂಗಗಳಿಗೆ ಮೀಸಲಾಗಿದ ಯಕ್ಷಗಾನ ಇವತ್ತು ಸಾಮಾಜಿಕ ಪ್ರಸಂಗಗಳತ್ತಲೂ ಹೆಜ್ಜೆ ಹಾಕುತ್ತಿದೆ.

ಯಕ್ಷಗಾನದಲ್ಲಿ ನ್ರತ್ಯವಿದೆ, ಸಂಗೀತವಿದೆ, ತಾಳ ಮದ್ದಳೆಗಳಿವೆ, ಮಾತಿದೆ, ತನ್ನದೇ ಆದ ವೇಷ ಭೂಷಣವಿದೆ, ಹಾಸ್ಯ ಶ್ರಂಗಾರಗಳಿವೆ. ತನ್ನದೇ ಆದ ಒಂದು ವಿಭಿನ್ನತೆಯನ್ನ ಹೊಂದಿದೆ. ಆದರೆ ಇಂದು ಅಂತಹ ಮಹಾನ ಕಲೆ ತನ್ನ ಅವನತಿಯತ್ತ ಮುಖಮಾಡಿ ನಿಂತಿದೆ. ಶಿವರಾಮ ಕಾರಂತರಂತಹ ಕೆಲವು ಬುದ್ದಿಜೀವಿಗಳು ಇದನ್ನ ಜೀವಂತ ಇಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಕಷ್ಟ ಸಧ್ಯದ ಮಾತು. ಯಕ್ಷಗಾನ ಜೀವಂತ ಇಡಬೇಕು ಅಂತಾದಲ್ಲಿ ಊರಿಗೊಬ್ಬ ಶಿವರಾಮ ಕಾರಂತರೂ ಹುಟ್ಟಿ ಬಂದರೆ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಈಗ ದೇವಸ್ಥಾನಗಳಲ್ಲಿ ಭಜನೆಗಳ ಬದಲಾಗಿ ಧ್ವನಿಮುದ್ರಿಕೆಗಳನ್ನ ಬಳಸಲಾಗುತ್ತದೆಯೋ, ಹಾಗೆ ಮುಂದೆ ಯಕ್ಷಗಾನ ಅಂದರೆ ಹೀಗಿತ್ತು, ಹಾಗಿತ್ತು ಅಂತಾ ಛಾಯಾಚಿತ್ರವನ್ನೊ, ಅಥವಾ ಧ್ವನಿ ಚಿತ್ರಗಳನ್ನು ತೋರಿಸಬೇಕಾದ ಅವಶ್ಯಕತೆ ಬರಬಹುದಾದಂತಹ ಪ್ರಸಂಗ ಬಂದರೂ ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ.

--ಮಂಜು ಹಿಚ್ಕಡ್

Monday, December 23, 2013

ಅಕ್ಷರಗಳು!

ಮನಸಿನ ಭಾವಗಳು
ಮನದ ತಿರುಳುಗಳು
ಹೇಳಲಾಗದೇ, ಹೇಳಲಿರಲಾಗದೇ
ಸೋತು ತೊಳಲಾಡಿ,
ಹೀಗೆ ಸುಮ್ಮನೆ ಗೀಚಿದ
ಅಕ್ಷರದ ರೂಪಗಳಿವು.

ಒಮ್ಮೆ ಸುಮ್ಮನೆ
ಒಮ್ಮೆ ಭಿಮ್ಮನೆ
ಆಗೊಮ್ಮೆ, ಈಗೊಮ್ಮೆ
ಅಲ್ಲಿ, ಇಲ್ಲಿ, ಎಲ್ಲಂದರಲ್ಲಿ
ಹೀಗೆ ಸುಮ್ಮನೆ
ಗೀಚಿದ ಅಕ್ಷರಗಳಿವು.

ಬಿಳಿಯ ಹಾಳೆಯ ಮೇಲೆ
ಒಮ್ಮೊಮ್ಮೆ ಈ
ಅಕ್ಷರಗಳದೇ ಕಾರುಬಾರು
ಮತ್ತೊಮ್ಮೆ ಯೋಚಿಸಿದರೂ
ಬರಲಾರೆನೆಂದು ಅದರ ತಕರಾರು.

ಒಮ್ಮೆ ಹೊರಬರಲು
ಎಲ್ಲಿಲ್ಲದ ಆವೇಶ
ಮತ್ತೊಮ್ಮೆ ಬರಲೋ, ಬೇಡವೋ
ಎನ್ನುವ ಮೀನಾ ಮೇಷ.
ಗೀಚಿದ್ದು ಅಕ್ಷರವಾದಾಗ
ಮನಕೇಕೋ ಹರುಷವೋ, ಹರುಷ.

ಒಮ್ಮೆ ಕಥೆಯಾಗಿ
ಒಮ್ಮೆ ಕವಿತೆಯಾಗಿ
ಹೊರ ಬರುವವು
ಒಂದೊಂದು ಅಕ್ಷರಗಳು
ರೂಪಾಂತರವಾಗಿ.
ವ್ಯಕ್ತಿಯ, ವ್ಯಕ್ತಿತ್ವದ
ಬಿಂಬವಾಗಿ.

--ಮಂಜು ಹಿಚ್ಕಡ್ 

Friday, December 20, 2013

ನಿನ್ನ ಪ್ರೀತಿ.

ಹೊತ್ತಿರದ ಹೊತ್ತಿನಲಿ
ಗೊತ್ತಿರದ ವೇಳೆಯಲಿ
ಸುಮ್ಮನೆ ಒಳಹೊಕ್ಕು
ಮನವ ತಣಿಸುವುದು
ನಿನ್ನ ಪ್ರೀತಿ.

ದರವಿರದೇ ಸ್ವರವಿರುವ
ಉಸಿರಲ್ಲಿ ಹೆಸರ ನೆನಪಿಡುವ
ನಡು ಹಗಲ, ನಡು ಬಿಸಿಲಲ್ಲೂ
ಕನಸ ತೋರಿಸುವುದು
ನಿನ್ನ ಪ್ರೀತಿ.

ಒಲವಲ್ಲಿ ನಲಿವಿಟ್ಟು
ನಲಿವಲ್ಲಿ ಕನಸಿಟ್ಟು
ಕನಸಲ್ಲಿ ಬದುಕಿಟ್ಟು
ಮನವ ತಣಿಸುವುದು
ನಿನ್ನ ಪ್ರೀತಿ!

ಕಂಡ ಕಂಡಲ್ಲೆಲ್ಲಾ
ನಿನ್ನಯ ರೂಪ
ಹೋದ ಹೋದಲ್ಲೆಲ್ಲಾ
ನಿನ್ನಯ ನೆನಪು
ನೀ ಜೊತೆಯಿರದರೇನಂತೆ
ತಾವು ಜೊತೆಯಿರುವು
ನಾನಿರುವಲ್ಲೆಲ್ಲಾ.

--ಮಂಜು ಹಿಚ್ಕಡ್

Monday, December 16, 2013

ನಾ ಬರಲಾರೆ ಈಗ!

ನಿಮ್ಮೂರವರೆಗೆ ನಾನೀಗ
ಬರಲಾರೆ ಗೆಳೆಯ
ಬರಲು ನೀಡು ನನಗೆ
ಒಂದಿಷ್ಟು ಸಮಯ.

ನಿಮ್ಮೂರು ಬರೀಯ ಊರಲ್ಲ
ಊರ ತುಂಬ ಇಹವು
ವರದಿಗಾರರ ಸೂರು.

ಮೊದಲನೆಯ ಮನೆಯ
ಸುಬ್ಬಮ್ಮನಿಗೆ ಒಮ್ಮೆ
ತಿಳಿದರೆ ಸಾಕಂತೆ
ವಿಷಯ ಪರವೂರಿಗೂ
ಹೋಗಿ ತಲುಪುವುದಂತೆ.

ಕೆಳ ಮನೆಯ ಶಾರದಮ್ಮ
ಇನ್ನೂ ಚುರುಕಂತೆ
ಅವಳಿಗೆ ಒಮ್ಮೆ ತಿಳಿದರೆ ಸಾಕಂತೆ
ಹೋಗಿ ತಿಳಿಸಿ ಬರುವಳು
ಪ್ರತೀ ಮನೆಗೂ
ಜೀವಂತ ಪತ್ರಿಕೆಯಂತೆ.

ಆ ಮೂಲೆಮನೆ ವೆಂಕಮ್ಮ
ಇನ್ನೂ ಭಿಷಣವಂತೆ
ಇಲಿ ಹೋದರೆ, ಹುಲಿ ಹೋಯಿತು
ಎಂದು ಹೇಳುವವಳಂತೆ
ನಡೆಯಲಾರದ್ದನ್ನೂ ಬಾಯಲ್ಲಿಯೇ
ನಡೆಸಿ ಬಿಡುವವಳಂತೆ
ಇಂದಿನ ಚುನಾವಣೆಯ ಸಮೀಕ್ಷೆಯಂತೆ.

ಇಂದು ನಾ ಬಂದರೆ
ಆ ವರದಿಗಾರರ ಬಾಯಲ್ಲಿ
ಈ ನಮ್ಮ ನಿರ್ಮಲ ಪ್ರೀತಿ
ಹಾದರದಂತೆ ಕಂಡರೂ ತಪ್ಪಿಲ್ಲ
ಅವರ ನಾಲಿಗೆಗೆ ಸಿಕ್ಕು, ನಮ್ಮ ಪ್ರೀತಿ
ಬೆತ್ತಲಾಗದೇ ಉಳಿಯಲ್ಲ.

ನಾ ಬರಲಿಲ್ಲ ಎಂದು
ನೀ ಚಿಂತಿಸದಿರು ಇಂದು
ನೀ ಹೋಗು ಈಗ
ನಾ ಬರುವೆ ಇಂದಲ್ಲ, ಮುಂದೆ
ನೀ ತಾಳಿಕಟ್ಟಿ
ನಾ, ನಿನ್ನವಳಾದ ದಿನದಂದು.

--ಮಂಜು ಹಿಚ್ಕಡ್

Thursday, December 12, 2013

ಹುಟ್ಟು-ಸಾವು

ಹುಟ್ಟು:
ನಾ ಬಯಸದೇ
ಈ ಭೂಮಿಗೆ ಬಂದು
ಬಯಸಿದವರ ಮೊಗದಲ್ಲಿ
ಸಂತೋಷ ತಂದು.

ನವ ವಸಂತಗಳವರೆಗೆ
ಗರ್ಭ ಹೊತ್ತವಳ
ಕಾಡಿಸಿ, ಸತಾಯಿಸಿ ಈ
ಲೋಕಕೆ ಬಂದು.
ಜಾತಿ ಗೊತ್ತಿಲ್ಲ
ಹಣದ ಹಂಗಿಲ್ಲ
ಹೆಣ್ಣೋ, ಗಂಡೋ
ನನಗೆ ತಿಳಿದಿಲ್ಲ
ಮುಂದಿಡುವ ಹೆಸರು
ನನಗೇ ಗೊತ್ತಿಲ್ಲ
ಕನಸುಗಳಿಲ್ಲ, ಕಲ್ಪನೆಗಳಿಲ್ಲ
ನಗುವೋ, ಅಳುವೋ
ನನಗೆ ಪ್ರಶ್ನೆಯೇ ಎಲ್ಲ.

ಸಾವು:
ಈಗ ತನು ಒಪ್ಪಿದರೂ
ಮನ ಒಪ್ಪದು.
ಒಂದೊಮ್ಮೆ ಬಯಸಿ ಕರೆದರೂ
ನಮ್ಮ ಬಳಿ ಬಾರದು

ಸಾವಿರ ಕಲ್ಪನೆಗಳುಂಟು
ಆದರೆ ಉತ್ತರವಿಲ್ಲ.
ಮನಸು ಬಯಸಿದ್ದಲ್ಲ ಕನಸುಗಳೇ
ಹೊರತು ಎಂದು ನನಸಾಗಲ್ಲ.

ಬದುಕಿನ ಪ್ರಜ್ನೆ ಬಂದು,
ಬಾಳು ಕಟ್ಟುವಾಗ
ಈ ಜೀವನದ ಕನಸೆಲ್ಲ
ಬರೀ ಹಣ ಹಣ ಹಣ
ಇಂದು ಸಾವು ಬಂದಾಗ
ನಾವೀಗ ಕರೆಯಲು
ಹೆಸರಿಲ್ಲದ ಬರೀಯ ಹೆಣ.

--ಮಂಜು ಹಿಚ್ಕಡ್

Monday, December 9, 2013

ಶೀತಕ್ಕೆರಡು ಸಲಹೆ!

ಅವನಿಗೆ ಶೀತ, ನೆಗಡಿಯಂತೆ
ಮೂಗು ಕೂಡ ಸೋರುತ್ತಿದೆಯಂತೆ
ಗಂಟಲ ನೋವು ಉಂಟಂತೆ
ಅದಕೆ ಆ ಈರ್ವರ ಸಲಹೆ ಹೀಗಂತೆ

ಆತ:
ನಿನ್ನೆ ಕುಡಿದಿರಬೇಕು ಆತ
ತಂಪು ಬಿಯರು
ಇಲ್ಲಾ ಜಾಸ್ತಿ ತಿಂದಿರಬೇಕು
ಎಣ್ಣೆ ಹಾಕಿದ ಸಾರು.

ಇಂದು ಹಾಕಿದರೆ ಸಾಕು
ಬಿಸಿನೀರ ಜೊತೆಗೆ
ಒಂದೆರಡು ಪೆಗ್ಗು ರಮ್ಮು
ಕಡಿಮೆಯಾಗಿಯೇ ಹೋಗುವವು,
ನಾಳೆ ಶೀತ ನೆಗಡಿ ಕೆಮ್ಮು.

ಈತ:
ಮಾತ್ರೆ ಸೈರಪ್ಪು ಏಕೆ
ಅವುಗಳೆಂದರೆ ಏಕೋ ವಾಕರಿಕೆ
ಹಾಕಿ ಕುಡಿದರೆ ಸಾಕು
ಜೇನುತುಪ್ಪಕ್ಕೆ ಒಂದೆರಡು
ಹನಿ ಲಿಂಬೆರಸ
ಇವುಗಳ ಮುಂದೆ
ಬಿಯರು, ಬ್ರಾಂದಿ,
ರಮ್ಮುಗಳೆಲ್ಲವೂ ಏಕೆ

--ಮಂಜು ಹಿಚ್ಕಡ್

Friday, December 6, 2013

ಅವಲಂಬನೆ!

ನನ್ನ ಮನೆಯಂಗಳದಿ
ನಾಲ್ಕಾರು ಹೂ ಕುಂಡಗಳು
ಬಿಸಿಲು ಕಂಡಿಲ್ಲ
ಮಳೆ ನೀರು ನೋಡಿಲ್ಲ
ಕಾತರಿಸಿ ಕುಳಿತಿವೆ
ನನ್ನಕೆಯೊಡ್ಡುವ
ಬೊಗಸೆ ನೀರಿಗಾಗಿ!

ವಿದ್ಯುತ್ ದೀಪದ ಅರಿವುಂಟು
ದಿನಕರನ ಅರಿವಿಲ್ಲ
ಮಣ್ಣು ಗೊಬ್ಬರದ ಚಿಂತೆ
ಎಂದೂ ಕಾಡಿಲ್ಲ
ಆ ರೀತಿ ಬೆಳಸಿಹಳು ನನ್ನಾಕೆ!

ಪಂಕದ ಗಾಳಿಗೆ ಮೈಯೊಡ್ಡಿ
ಕುಣಿಯುತಿಹ ಇವಕೆ
ಹೊರಗಾಳಿ, ಬಿರುಗಾಳಿಯ
ಅರಿವಿಲ್ಲ ಇವಕೆ!

ಹುಟ್ಟುತ್ತ ಸ್ವಾವಲಂಬಿಗಳಿವು
ಆದರೂ ಅವಲಂಬನೆಯ ಬದುಕು
ನನ್ನವಳ ಆಸರೆಯ
ನಂಬಿ ಬದುಕಬೇಕು
ಇವು ತಮ್ಮದಲ್ಲದ ತಪ್ಪಿಗೆ!

--ಮಂಜು ಹಿಚ್ಕಡ್

Tuesday, December 3, 2013

ಅಂದು ಸವಿದ ಆ ನಾಟಿ ಮಾವಿನ ಹಣ್ಣುಗಳು!

ಅಂದು ನಾವು ಚಿಕ್ಕವರಿದ್ದಾಗ ನಮ್ಮೂರಿನ ಮೂಡಣ ದಿಕ್ಕಿನಲ್ಲಿ ನೂರಾರು ಜಾತಿಯ ನಾಟಿ ಮಾವಿನ ಮರಗಳಿದ್ದವು. ಜನವರಿ, ಪೆಬ್ರುವರಿ ತಿಂಗಳು ಮುಗಿಯುವ ಹೊತ್ತಿಗೆ ಮರಗಳೆಲ್ಲ ಹೂ ಬಿಟ್ಟು, ಎಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಆ ಹೂವುಗಳೆಲ್ಲ ಕಾಯಾಗಿ, ಹಣ್ಣಾಗುತ್ತಿದ್ದವು. ಆಗ ನಮಗೆಲ್ಲ ಬೇಸಿಗೆಯ ರಜೆ, ಆ ರಜೆ ನಮಗೆ ಮಾವಿನ ಹಣ್ಣನ್ನು ತಿನ್ನಲೆಂಬಂತೇ ಇದ್ದಂತಿತ್ತು. ಒಂದೊಂದು ಮರಕ್ಕು ಒಂದೊಂದು ತರಹದ ಹಣ್ಣುಗಳು, ಕೆಲವು ಅರ್ಧ ಅಂಗುಲದಷ್ಟು ಚಿಕ್ಕದಾಗಿದ್ದರೆ, ಕೆಲವು ಐದಾರು ಅಂಗುಲದಷ್ಟು ದೊಡ್ಡ ಹಣ್ಣುಗಳು. ಐದಾರು ಮರದ ಹಣ್ಣುಗಳು ಹುಳಿ ಎನಿಸಿದರೂ, ಉಳಿದ ಮರಗಳ ಹಣ್ಣುಗಳು ಸಿಹಿಯಾಗಿದ್ದವೂ. ಕೆಲವು ಹಣ್ಣುಗಳು ತುಂಬಾ ರುಚಿಯಿದ್ದರೂ ಆ ಹಣ್ಣುಗಳ ಅರ್ಧದಷ್ಟು ಸೊನೆ ತುಂಬಿರುತಿತ್ತು. ಅದೆಂತಹ ಸೊನೆಯೆಂದರೆ ಸಂಪೂರ್ಣ ತುಟಿ, ಬಾಯಿಗಳೆಲ್ಲವೂ ಹುಣ್ಣಾಗುವಷ್ಟು ಸೊನೆ. ಕೆಲವು ಹಣ್ಣುಗಳ ಗೊರಟೆಗಳು ಒಳಗೆ ತುಂಬಾ ದೊಡ್ಡದಾಗಿದ್ದರೆ, ಕೆಲವಕ್ಕಂತೂ ತುಂಬಾ ಚಿಕ್ಕ ಗಾತ್ರದ ಗೊರಟೆಗಳು. ಕೆಲವು ಹಣ್ಣುಗಳಿಗಂತೂ ತುಂಬಾ ಬಿಗಿಯಾದ ನಾರುಗಳಿದ್ದರೂ ರುಚಿ ತುಂಬಾ ಸೊಗಸಾಗಿರುತಿತ್ತು. ರಸ ಎಳೆಯಲು ಸಾಧ್ಯವಾಗದೇ, ಸಿಪ್ಪೆ ಸುಲಿದು ತಿನ್ನುತಿದ್ದೆವು. ಕೆಲವು ಮರಕ್ಕೆ ಮಾರ್ಚ-ಎಪ್ರಿಲಗಳಲ್ಲಿ ಹಣ್ಣು ಬಿಡುತಿದ್ದರೆ, ಕೆಲವು ಮರಗಳಿಗೆ ಮಳೆಗಾಲ ಪ್ರಾರಂಬವಾಗುತಿದ್ದಂತೆ ಹಣ್ಣು ಬಿಡಲು ಆರಂಭವಾಗುತಿದ್ದವು. ಹೀಗೆ ಒಂದೊಂದು ತರನಾದ ಮಾವಿನ ಮರಗಳು ನಮ್ಮ ಊರಿನಲ್ಲಿದ್ದವು.

ಮಾರ್ಚ ತಿಂಗಳಲ್ಲಿ ನಮ್ಮ ಪರೀಕ್ಷೆಗಳು ಮುಗಿದೊಡನೆ, ನಮ್ಮ ಮಾವಿನ ಹಣ್ಣಿನ ಬೇಟೆ ಪ್ರಾರಂಭವಾಗುತ್ತಿತ್ತು. ಯಾವ ಯಾವ ಮರಕ್ಕೆ ಹೂಬಿಟ್ಟಿದೆ, ಯಾವ ಮರಕ್ಕೆ ಹಣ್ಣುಗಳಾಗಿವೆ ಎಂಬೆಲ್ಲ ವಿವರಗಳನ್ನು ಸಂಗ್ರಹಿಸಿ ಹೊರಡುತ್ತಿದ್ದೆವು. ಬೆಳಿಗ್ಗೆ ಮಾವಿನ ಹಣ್ಣಿನ ಮರ ಸುತ್ತಿ ಹಣ್ಣು ತಿಂದು ಮನೆಗೆ ಬರುವಾಗ ಮಧ್ಯಾಹ್ನವಾಗುತಿತ್ತು. ಹೊಟ್ಟೆ ಪೂರ್ತಿ ಮಾವಿನ ಹಣ್ಣು ತಿಂದದ್ದರಿಂದ ಊಟವು ಅಷ್ಟಕಷ್ಟೇ. ಆ ಸುಡು ಬೇಸಿಗೆಯಲ್ಲಿ ಊಟವು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಮಧ್ಯಾಹ್ನ ಒಂದಿಷ್ಟು ಗಂಜಿ, ಬೆರಕೆ ಹಾಕಿದ ಬಸಲೆ ಹುಳಗಾ ತಿಂದು, ಮಲಗಬೇಕೆನಿಸಿದರೆ ಒಂದಿಷ್ಟು ಹೊತ್ತು ಮಲಗಿ, ಇಲ್ಲಾ ಅಂದರೆ ಮತ್ತೆ ಮಾವಿನ ಹಣ್ಣು ಹುಡುಕಿ ಹೋಗುತಿದ್ದೆವು.
.                  
ಆಗ ನಮಗೆ ಜೋರಾಗಿ ಗಾಳಿ ಬಿಸಿದರೆ ಅಥವಾ ಮಂಗಗಳ ಹಾರಾಟ ಜಾಸ್ತಿಯಾಗಿದ್ದರೆ ತುಂಬಾ ಸಂತೋಷವಾಗುತಿತ್ತು. ಆ ಸಂದರ್ಭದಲ್ಲಿ ಮರದ ಕೊಂಬೆಗಳೆಲ್ಲ ಅಲುಗಾಡಿ ಹಣ್ಣಾದ ಮಾವೆಲ್ಲವು ನೆಲಕುದುರುತ್ತಿದ್ದುದರಿಂದ ನಮಗೆಲ್ಲ ಸಂತೋಷ. ಒಂದೊಂದು ಹಣ್ಣು ಬಿದ್ದಾಗಲೂ, ಓಡಿ, ಓಡಿ ಹೋಗಿ ಆರಿಸಿ ತಂದು ತಿನ್ನುವುದು, ಅದರಲ್ಲೂ ಚಿಕ್ಕ ಹಣ್ಣುಗಳಾಗಿದ್ದರೆ, ಮೇಲಿನ ಸೊನೆ ತೆಗೆದು ಇಡಿ ಹಣ್ಣನ್ನೆ ಬಾಯಿಯಲ್ಲಿ ಸ್ವಾಹ ಮಾಡಿ, ಗೊರಟೆಯನ್ನು ಹೊರಗೆಸೆಯುವುದು. ಅದು ಕೂಡ ಇನ್ನೊಂದು ಮಾವಿನ ಹಣ್ಣು ಬಿಳುವವರಿಗೆ, ಇಲ್ಲಾ ಸಿಹಿಯ ಅಂಸ ಸಂಪೂರ್ಣ ಮಾಯವಾಗಿ ಸಪ್ಪೆಯಾಗುವರೆಗೆ, ನಮ್ಮ ಬಾಯಲ್ಲಿಯೇ ಬದ್ರವಾಗಿರುತಿತ್ತು.    

ನಮ್ಮ ಮನೆಯ ಅಣತಿ ದೂರದಲ್ಲಿ ಒಂದು ಮಾವಿನ ಮರವಿತ್ತು. ಅದರ ಹಣ್ಣು ಸ್ವಲ್ಪ ಹುಳಿ ಇದ್ದುದರಿಂದ ಅದಕ್ಕೆ ಊರವರೆಲ್ಲ " ಹುಳಿಯಪ್ಪಿ " ಮಾವಿನ ಮರ ಎಂದೇ ಕರೆಯುತ್ತಿದ್ದರೂ. ಬೇಡುವವರಿಗೆ ಕುಸಲಕ್ಕಿಯಾದರೇನು, ಬೆಣತಕ್ಕಿಯಾದರೇನು ಅಂತಾರಲ್ಲಾ, ಹಾಗೆ ಬಾಲ್ಯದಲ್ಲಿ ನಮಗೆ ಮಾವಿನ ಹಣ್ಣು ಸಿಹಿಯಾದರೇನು, ಹುಳಿಯಾದರೇನು? ಎಳೆಯ ಹುಳಿಯ ಮಾವಿನ ಕಾಯಿಯನ್ನೇ ತಿನ್ನುವ ನಮಗೆ, ಈ ಹಣ್ಣು ಅದ್ಯಾವ ಲೆಕ್ಕ. ಆ ಹುಳಿಯಪ್ಪಿ ಮಾವಿನ ಮರದ ಸುತ್ತಲು ನಮ್ಮ ಮನೆಯನ್ನು ಸೇರಿ ನಾಲ್ಕು ಮನೆಗಳು, ನಾಲ್ಕು ಮನೆಗಳಲ್ಲಿ, ಮೂರು ಮನೆಯ ಮಕ್ಕಳು ಹೆಚ್ಚು ಕಡಿಮೆ ನನ್ನ ವಯಸ್ಸಿನವರೇ. ಎಲ್ಲರ ಅಭಿರುಚಿಯೂ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು. ಆ ಮರಕ್ಕೆ ಹಣ್ಣು ಬಿಡಲು ಪ್ರಾರಂಭಿಸಿದಾಗ ನಮ್ಮ ಲಕ್ಷವೆಲ್ಲ ಆ ಮರದತ್ತಲೇ ಕೇಂದ್ರಿಕ್ರತವಾಗಿರುತ್ತಿತ್ತು. ಹಣ್ಣು ಗಾಳಿಗೆ ಕೆಳಕ್ಕೆ ಬಿದ್ದು "ಡಪ್" ಎನ್ನುವ ಶಬ್ಧ ಬಂದರೆ ಸಾಕು, ಶತ್ರು ಸೈನ್ಯದ ಮೇಲೆ ದಾಳಿಯಿಡುವ ಯುದ್ದ ವಿಮಾನಗಳಂತೆ, ನಾವು ಮೂರು ಕಡೆಯಿಂದಲೂ ಅಲ್ಲಿಗೆ ದಾಳಿ ಮಾಡುತಿದ್ದೆವು. ಯುದ್ದದಲ್ಲಿ ಶತ್ರು ಯಾರಿಗೆ ಸೆರೆ ಸಿಕ್ಕರೇನು, ಒಟ್ಟಿನಲಿ ಅದು ಆ ದೇಶಕ್ಕೆ ಹೆಮ್ಮೆ. ಆದರೆ ಇಲ್ಲಿ ಹಾಗಲ್ಲ, ಎಲ್ಲರೂ ಹಣ್ಣಿನ ವಿಷಯದಲ್ಲಿ ಶತ್ರುಗಳೇ. ಸಿಕ್ಕವನಿಗೆ ಗೆದ್ದ ಸಂಭ್ರಮ, ಸಿಗದಿದ್ದವರಿಗೆ ಸಿಗಲಿಲ್ಲ ಎನ್ನುವ ಚಿಂತೆ. ಸೋತರು, ಮುಂದೆ ಬಿಳಲಿರುವ ಹಣ್ಣು ನನಗೆ ಸಿಕ್ಕೀತು ಎನ್ನುವ ಆತ್ಮವಿಶ್ವಾಸ. ಆ ಆತ್ಮವಿಶ್ವಾಸವೇ ಇನ್ನೋಂದು ಹಣ್ಣಿಗಾಗಿ ಮತ್ತೆ ಕಾಯಲು ಪ್ರೇರೇಪಿಸುತ್ತಿತ್ತು.                        

ಅದೆಷ್ಟು ಹಣ್ಣು ತಿನ್ನುತ್ತಿದ್ದೇವೆಂದರೆ, ಮಾವಿನ ಹಣ್ಣಿನ ಸೊನೆಗೆ ಸೀತವಾಗಿ ಮೂಗು ಸೋರುತಿದ್ದರೂ ಮಾವಿನ ಹಣ್ಣನ್ನು ಬಿಡುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ಮಾವಿನ ಹಣ್ಣಿನ ಮೇಲೆ. ಆಗ ಮನೆಯಲ್ಲಿ ಈಸಾಡ ಹಾಗೂ ಹೈಬ್ರಿಡ್ ತಳಿಯ ಮಾವಿನ ಹಣ್ಣುಗಳಿದ್ದರೂ, ನಮಗೆ ಆ ನಾಟಿ ತಳಿಯ ಮಾವಿನ ಹಣ್ಣಿನಷ್ಟು ರುಚಿಯೆನಿಸುತ್ತಿರಲಿಲ್ಲ. ಇಂದು ಊರಿನಲ್ಲಿ ಅಂದಿನಷ್ಟು ನಾಟಿತಳಿಯ ಮಾವಿನ ಮರಗಳಿಲ್ಲ. ಕೆಲವು ಬಹುಗಾತ್ರದ ಮರಗಳು, ಇಂದಿನ ಹೈಬ್ರಿಡ್ ತಳಿಯ ಮಾವುಗಳಿಗಾಗಿ ಹುತಾತ್ಮವಾಗಿ ಬಿಟ್ಟಿವೆ. ಅಂದು ನಾಟಿ ಮಾವಿನ ಹಣ್ಣುಗಳನ್ನು ಸವಿದ ಮೇಲೆ ಹೈಬ್ರಿಡ್ ಹಣ್ಣುಗಳು ಅಷ್ಟೊಂದು ರುಚಿಯೆನಿಸುವುದಿಲ್ಲ. ಅದರಲ್ಲೂ ಇಂದಿನ ಹೈಬ್ರಿಡ್ ಹಣ್ಣುಗಳಲ್ಲಿ ರುಚಿಯಾದರೂ ಎಲ್ಲಿರುತ್ತೆ? ಎಳೆಯ ಕಾಯಿಯನ್ನೇ ಕೊಯ್ದು ರಾಸಾಯನಿಕಗಳನ್ನು ಹಾಕಿ, ಹಣ್ಣಿನಂತೆ ಮಾಡಿ ದುಪ್ಪಟ್ಟು ಬೆಲೆಗೆ ಮಾರುವ ಇಂದಿನ ಹೈಬ್ರಿಡ್ ಹಣ್ಣುಗಳು, ನಾಟಿ ಹಣ್ಣುಗಳ ಮುಂದೆ ರುಚಿಯಲ್ಲಿ ಎಂದೂ ಸರಿಸಾಟಿಯಾಗಲಾರವು ಎನ್ನುವುದು ನನ್ನ ಅನಿಸಿಕೆ. ಈಗಂತೂ ಹೈಬ್ರಿಡ್ ಹಣ್ಣುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಅದರಲ್ಲೂ ಮಾವಿನ ಹಣ್ಣು ಸುರುವಾದ ಹೊಸದರಲ್ಲಂತೂ ಅದರ ಬೆಲೆ ಕೇಳಿದರೆ ಸಾಕು ತಲೆತಿರುಗತ್ತೆ, ಇನ್ನೆಲ್ಲಿ ಆ ಮಾವಿನ ಹಣ್ಣು. ಮಳೆಗಾಲ ಸುರುವಾದರೆ ಆ ಹಣ್ಣುಗಳನ್ನ ತಿನ್ನಲಾಗಲ್ಲ.

ಕೊನೆಯಲ್ಲಿ ಒಂದು ಮಾತು, ನಮ್ಮ ತಂದೆಯವರು ಆಗಾಗ ಹೇಳುತಿದ್ದರು ಅವರು ಚಿಕ್ಕವರಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವೂ ಅಂತ, ಈಗ ನಾನು ಹೇಳುತಿದ್ದೇನೆ ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ತುಂಬಾ ನಾಟಿ ಮಾವಿನ ಮರಗಳಿದ್ದವು ಅಂತ. ನಾವು ಚಿಕ್ಕವರಿರುವಾಗಲೇ ಅಷ್ಟೊಂದು ಮಾವಿನ ಮರಗಳಿದ್ದುದು ನಮ್ಮ ತಂದೆಯವರು ಚಿಕ್ಕವರಿರುವಾಗ ಇನ್ನೆಷ್ಟು ನಾಟಿ ಮಾವಿನ ಮರಗಳಿರಬೇಕು ಅಲ್ಲವೇ!

--ಮಂಜು ಹಿಚ್ಕಡ್

Monday, December 2, 2013

ಮತ್ತೆ ಕಟ್ಟಲಾದಿತೇ ರಾಮರಾಜ್ಯ!

[ಈ ವಾರದ ಪಂಜು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಇನ್ನೊಂದು ಕವನ www.panjumagazine.com/?p=5502]
ಹುಚ್ಚೆದ್ದು ಕುಣಿಯುತಿದೆ
ನಾಡಿನ ಜನತೆ.
ಮರೆಯಾಗಿ ಹೋಗುತಿದೆ
ಒಲವಿನ ಒರತೆ.

ಇತ್ತ ರೋಡಲಿ ಕಾರು
ಅತ್ತ ಬಾರಲಿ ಬೀರು
ಎಲ್ಲಿ ನೋಡಿದರಲ್ಲಿ
ಹಣದ ಕಾರುಬಾರು.

ಮಾನಕ್ಕೆ ಬೆಲೆಯಿಲ್ಲ
ಮಾನವಂತರು ಇಲ್ಲ.
ಆಗಿಹುದು ನಾಡು, ಸುಡುಗಾಡು
ಎರಡು ಮಾತಿಲ್ಲ.

ಹಣಕಾಗಿ ಜನ ಮರಳು
ಹಣಕಾಗಿ ಜಾತ್ರೆ ಮರಳು.
ಮರೆತು ಹೋಗಿದೆ ಇಂದು
ಮಾನವತೆಯ ತಿರುಳು.

ದ್ವೇಷದ ದಳ್ಳುರಿಯಲ್ಲಿ
ಪ್ರೀತಿ ಹೋಗಿದೆ ಸೋತು.
ಪ್ರೀತಿ-ಪ್ರೇಮ ಎನ್ನುವುದು
ಮರೀಚಿಕೆಯ ಮಾತು.

ಬೆಳೆದು ನಿಂತಿದೆ ಅಹಂ
ಇಂದು ಕಾಳ್ಗಿಚ್ಚಿನ ರೀತಿ
ಹುಡುಕಿದರು ಸಿಗಲಾರದು
ಇಲ್ಲಿ ನ್ಯಾಯ ನೀತಿ.

ಅಲ್ಲಿ ಕೊಲೆ ಅಂತೆ
ಇಲ್ಲಿ ಸುಲಿಗೆಯೂ ಅಂತೆ
ಅತ್ತ ಸ್ವಿಸ್ ಬ್ಯಾಂಕಲ್ಲಿ
ನೋಟುಗಳ ಕಂತೆ.

ಅಣ್ಣ-ತಮ್ಮರ ನಡುವೆ
ಅಕ್ಕ-ತಂಗಿಯರ ನಡುವೆ
ಬೆಳೆದು ನಿಂತಿದೆ ವ್ಯಾಜ್ಯ
ಮತ್ತೊಮ್ಮೆ ಹುಟ್ಟಿ ಬಂದರು ರಾಮ
ಕಟ್ಟಲಾಗದು ಮತ್ತೆ ರಾಮರಾಜ್ಯ.

ಛಲದಲ್ಲಿ ದುರ್ಯೋಧನನಾಗು
ದಾನಕ್ಕೆ ನೀ ಕರ್ಣನಾಗು
ಗುರುಭಕ್ತಿಯಲಿ ನೀ
ಏಕವಲವ್ಯನು ಆಗು.

ಮುಳ್ಳಲ್ಲಿರುವ ಹೂವಾಗಿ
ಎಲ್ಲರಿಗೂ ಹಿತವಾಗಿ
ಬಾಳಿದರೆ ನೀ ಬದುಕುವೆ
ಎಂದೆಂದು ಸುಖವಾಗಿ!

--ಮಂಜು ಹಿಚ್ಕಡ್ 

Sunday, December 1, 2013

ಯಾವುದು ಹುಚ್ಚು!

ಪ್ರೀತಿ ಹೆಚ್ಚಾದರೆ ಹುಚ್ಚು
ಮಮತೆ ಹೆಚ್ಚಾದರೆ ಹುಚ್ಚು
ಈಡೇರದ ಬಯಕೆಗಳು ಹೆಚ್ಚಾದರು ಹುಚ್ಚು
ಆಶೆ ಆಕಾಂಕ್ಷೆಗಳು ಹೆಚ್ಚಾದರೂ ಹುಚ್ಚು,
ಎನ್ನುವುದಾದರೆ?
ಹಣ ಐಶ್ವರ್ಯಗಳು ಹೆಚ್ಚಾದರೆ?

ಹೆಚ್ಚಾದ ಪ್ರೀತಿ ಮಮತೆಗಳೆಲ್ಲಾ
ಹುಚ್ಚೆನ್ನುವುದಾದರೆ,
ಹೆಚ್ಚಾದ ಹಣ, ಐಶ್ವರ್ಯಗಳೇಕೆ
ಹುಚ್ಚಲ್ಲ ಸ್ವಾಮಿ.

--ಮಂಜು ಹಿಚ್ಕಡ್

ತಾಂಬೂಲದ ಮಹಿಮೆ!

ಹಚ್ಚ ಹಸುರಿನ ಎಲೆಯ ಮೇಲೆ
ಒಂದಿಷ್ಟು ಬಿಳಿ ಸುಣ್ಣ ನೇವರಿಸಿ.
ನಾಲ್ಕಾರು ತುಂಡು ಅಡಿಕೆಗಳನು ಹಾಕಿ
ಮೆಲ್ಲಗೆ ಸುತ್ತಿಟ್ಟು ಬಾಯಿಗೆ ಸೇರಿಸಿ.

ಮಸಾಲೆ ಅರಿಯುವ ರುಬ್ಬುಕಲ್ಲಿನಂತೆ
ಅಲ್ಲಲ್ಲಿ ಕರಿ ಹಿಡಿದ ಹಲ್ಲುಗಳಿಂದ
ಅಗಿದು, ಅಗಿದು ಹೊರಸೂಸಿದರೆ ಆ ತಾಂಬೂಲ
ಕೆಂಪು ರಕ್ತಕಣಗಳಿಗಿಂತ ಮಿಗಿಲಾಗಿ
ಕಾಣುವುದು ಉಗಿದ ಆ ಜಿಹ್ವಾಜಲ

ಉಗಿದದ್ದು ಭೂಮಿ ತಲುಪಬೇಕಂದಿಲ್ಲ
ಯಾರ ಮೈ, ಬೆನ್ನ ಸವರಿದರೇನು?
ಯಾವ ಗೋಡೆಗೆ ತಗುಲಿ ಕೆಂಬಣ್ಣವಾದರೇನು?
ಬಸ್ಸಾದರೇನು? ಗಿಡ ಮರವಾದರೇನು?
ಕ್ಷಣಾರ್ಧದಲ್ಲಿ ಉಗಿದವ ನಾಪತ್ತೆ
ಉಗಿದ ಸಾಕ್ಷಿಯಿಲ್ಲದಂತೆ.

ಒಂದೊಮ್ಮೆ ಉಗಿಸಿಕೊಂಡಲ್ಲಿ ಮುಗಿಯಿತು
ಧರಿಸಿದ ಧಿರಿಸು ತೋಳೆಯಲು ಬೇಕು
ಒಂದರ್ಧ ಬಾರು ಸೋಪು
ಒಂದರ್ಧ ಗಂಟೆಯ ಸಮಯ
ನಮ್ಮದಲ್ಲದ ತಪ್ಪಿಗಾಗಿ.

--ಮಂಜು ಹಿಚ್ಕಡ್