Sunday, December 1, 2013

ತಾಂಬೂಲದ ಮಹಿಮೆ!

ಹಚ್ಚ ಹಸುರಿನ ಎಲೆಯ ಮೇಲೆ
ಒಂದಿಷ್ಟು ಬಿಳಿ ಸುಣ್ಣ ನೇವರಿಸಿ.
ನಾಲ್ಕಾರು ತುಂಡು ಅಡಿಕೆಗಳನು ಹಾಕಿ
ಮೆಲ್ಲಗೆ ಸುತ್ತಿಟ್ಟು ಬಾಯಿಗೆ ಸೇರಿಸಿ.

ಮಸಾಲೆ ಅರಿಯುವ ರುಬ್ಬುಕಲ್ಲಿನಂತೆ
ಅಲ್ಲಲ್ಲಿ ಕರಿ ಹಿಡಿದ ಹಲ್ಲುಗಳಿಂದ
ಅಗಿದು, ಅಗಿದು ಹೊರಸೂಸಿದರೆ ಆ ತಾಂಬೂಲ
ಕೆಂಪು ರಕ್ತಕಣಗಳಿಗಿಂತ ಮಿಗಿಲಾಗಿ
ಕಾಣುವುದು ಉಗಿದ ಆ ಜಿಹ್ವಾಜಲ

ಉಗಿದದ್ದು ಭೂಮಿ ತಲುಪಬೇಕಂದಿಲ್ಲ
ಯಾರ ಮೈ, ಬೆನ್ನ ಸವರಿದರೇನು?
ಯಾವ ಗೋಡೆಗೆ ತಗುಲಿ ಕೆಂಬಣ್ಣವಾದರೇನು?
ಬಸ್ಸಾದರೇನು? ಗಿಡ ಮರವಾದರೇನು?
ಕ್ಷಣಾರ್ಧದಲ್ಲಿ ಉಗಿದವ ನಾಪತ್ತೆ
ಉಗಿದ ಸಾಕ್ಷಿಯಿಲ್ಲದಂತೆ.

ಒಂದೊಮ್ಮೆ ಉಗಿಸಿಕೊಂಡಲ್ಲಿ ಮುಗಿಯಿತು
ಧರಿಸಿದ ಧಿರಿಸು ತೋಳೆಯಲು ಬೇಕು
ಒಂದರ್ಧ ಬಾರು ಸೋಪು
ಒಂದರ್ಧ ಗಂಟೆಯ ಸಮಯ
ನಮ್ಮದಲ್ಲದ ತಪ್ಪಿಗಾಗಿ.

--ಮಂಜು ಹಿಚ್ಕಡ್

No comments:

Post a Comment