Sunday, January 19, 2025

ಯಕ್ಷಗಾನಂ! ವಿಶ್ವಗಾನಂ!

ಹಾಡು, ಸಂಗೀತ, ನೃತ್ಯ, ಅಭಿನಯ, ಪಾತ್ರಕ್ಕೆ ಹಾಗೂ ಸನ್ನಿವೇಶಕ್ಕೆ ತಕ್ಕಂತ ವೇಷ ಭೂಷಣ, ನವರಸಭರಿತಾವಾದ ಸಂಭಾಷಣೆ ಇವೆಲ್ಲವುಗಳಿಂದ ಮಿಳಿತವಾಗಿರಬಹುದಾದ ಏಕೈಕ ಜನಪದ ಕಲೆ ಎಂದರೆ ಅದು ಯಕ್ಷಗಾನ ಅಂದರೆ ತಪ್ಪಾಗಲಿಕ್ಕಿಲ್ಲ. ಹಾಗಾಗಿಯೇ ಏನೋ, ಇದು ಒಮ್ಮೆ ನೋಡಿದವರನ್ನ ತನ್ನತ್ತ ಸೆಳೆದು, ಅವರನ್ನ ಮಂತ್ರಮುಗ್ದಗೊಳಿಸಿ ಮತ್ತೊಮ್ಮೆ ಮಗದೊಮ್ಮೆ ನೋಡಿ ಆನಂದಿಸುವಂತೆ ಮಾಡಿಬಿಡುತ್ತದೆ ಏನೋ. ಚಿತ್ರರಂಗದ ಮೇರು ಕಲಾವಿದೆಯಾದ ಉಮಾಶ್ರೀಯವರನ್ನು ಕೂಡ ಯಕ್ಷರಂಗದಲ್ಲಿ ಮೊನ್ನೆ ಮೊನ್ನೆ ಅಷ್ಟೇ ಅಭಿನಯಿಸುವಂತೆ ಮಾಡಿದ್ದು ಇದಕ್ಕೆ ಒಂದು ಉದಾಹರಣೆ ಅಷ್ಟೇ. ಇಂತಹ ಅದೆಷ್ಟೋ ಹವ್ಯಾಸಿಕಲಾವಿದರು ತಮ್ಮ ವ್ರತ್ತಿಗಳ ಜೋತೆಯಲ್ಲಿ ಯಕ್ಷಗಾನವನ್ನು ಪ್ರವತ್ತಿಯಾನ್ನಿಯಾಗಿ ತೆಗೆದುಕೊಂಡವರಿದ್ದಾರೆ. ಹಾಗಾಗಿಯೇ ಒಂದಾನೊಂದು ಕಾಲದಲ್ಲಿ ಕೇವಲ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಿಗೆ ಸಿಮಿತವಾಗಿದ್ದ ಯಕ್ಷಗಾನ ಇಂದು ವಿಶ್ವಗಾನವಾಗಿ ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವುದು. ಅದಕ್ಕೆ ಊರು ಬಿಟ್ಟು ಪರ ಊರುಗಳಲ್ಲಿ ನೆಲೆನಿಂತಿರುವ ಜನ ಹಾಗು ಇಂದಿನ ಸಾಮಾಜಿಕಜಾಲತಾಣಗಳು ಕಾರಣವಿರಬಹುದೇನೋ.


                                                       ಚಿತ್ರ ಕ್ರಪೆ: ವಿಕಿಪಿಡಿಯ 

ನಮ್ಮ ಊರುಗಳಲ್ಲಿ ಅದೆಷ್ಟೋಕಡೆಗಳಲ್ಲಿ ಹರಕೆಯ ಆಟಗಳು, ಯಕ್ಷ ಸಪ್ತಾಹಗಳು ಇಂದಿಗೂ ನಡೆದುಕೊಂಡು ಬರುತ್ತಿರುವುದು ಸಾದನೆಯೇ ಸರಿ. ಬದಲಾದ ಪರಿಸರ ಮತ್ತು ಸನ್ನಿವೇಶಗಳಲ್ಲಿ ಯಕ್ಷಗಾನ ಇನ್ನೂ ಜೀವಂತವಾಗಿ ಉಳಿದು ಆಳುತ್ತಾ ಬೆಳೆಯುತ್ತಿರುವುದಕ್ಕೆ ಇದೂ ಒಂದು ಕಾರಣವಿರಬಹುದು. ನಮ್ಮಲ್ಲಿಯ ಕೆಲವು ಊರುಗಳಲ್ಲಿ ಹರಕೆಯ ಆಟದ ಜೊತೆ ಪ್ರತೀವರ್ಷ ನಿರ್ದಿಷ್ಟಗೊಳಿಸಲಾದ ದಿನದಂದು ಯಕ್ಷಗಾನಗಳನ್ನು ನಡೆಸುವು ಪರಿಪಾಟವಿದ್ದು, ಅದು ಇಂದಿಗೂ ಮುಂದುವರೆದಿದೆ. ಅಂತಹುದೇ ಒಂದು ಸಂಪ್ರದಾಯ ನಮ್ಮ ಊರಿನಲ್ಲಿಯೂ ಇಂದಿಗೂ ಮುಂದುವರೆದಿದ್ದೂ, ಅದು ಪ್ರತೀವರ್ಷ ಜನವರಿ ೨೬ ರಂದು ನಡೆಯುತ್ತದೆ.

ಹಾಗಾಗಿಯೇ ನನಗೆ ಜನವರಿ ೨೬ ಹತ್ತಿರ ಬರುತ್ತಿದ್ದಂತೆ ಮೊದಲು ನೆನಪಾಗುವುದು ನಮ್ಮೂರಲ್ಲಿ ಪ್ರತೀವರ್ಷ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದರೆ ಸಾಕು, ನಮ್ಮೆಲ್ಲರ ಕುತುಹಲ  ಅದೊಂದೆ, ಅದೇನಂದರೆ, ನಮ್ಮೂರಲ್ಲಿ ಈ ವರ್ಷದ ಪ್ರಸಂಗ ಯಾವುದು, ಅದರಲ್ಲಿರುವ ಕಲಾವಿದರುಗಳು ಯಾರು - ಯಾರು, ಹಿಮ್ಮೆಳದಲ್ಲಿ ಯಾರಿದ್ದಾರೆ, ಮುಮ್ಮೇಳದಲ್ಲಿ ಯಾರಿದ್ದಾರೆ, ವಿಧೂಷಕರೂ ಯಾರು, ಶ್ತ್ರೀ ಪಾತ್ರದಲ್ಲಿ ಯಾರಿದ್ದಾರೆ, ಎಂದೆಲ್ಲ ತಿಳಿದುಕೊಳ್ಳುವ ಕುತೂಹಲ. ಪ್ರಸಂಗ ನಿಶ್ಚಯವಾದೊಡನೆ, ಅದರ ಕರ ಪತ್ರಕ್ಕಾಗಿ ಹುಡುಕಾಟ. ಸಿಕ್ಕೊಡನೆ, ಅದರ ಒಂದೊಂದು ಶಬ್ಧವನ್ನು ಬಿಡದೇ ಓದುವುದು. 

ಜನವರಿ ೨೬ರಂದು ಶಾಲೆಗೆ ಹೋಗಿ ಗಣರಾಜೋತ್ಸವದ ಧ್ವಜ ಹಾರಾಟ ಮುಗಿಸಿದ ತಕ್ಷಣ ಮನೆಗೆ ಬಂದು, ಊಟದ ಶಾಸ್ತ್ರ ಮಾಡಿ, ಬಯಲಾಟ ನಡೆಯುವ ಸ್ಥಳಕ್ಕೆ ಆಗಮಿಸುವುದು. ಅಲ್ಲಿ ಚಪ್ಪರ ಹಾಕುವುದರಿಂದ ಹಿಡಿದು, ಭಜನೆ ಪ್ರಾರಂಭವಾಗುವವರೆಗೂ ಅಲ್ಲಿದ್ದು ಮತ್ತೆ ಮನೆಗೆ ಬಂದು ಮತ್ತೆ ರಾತ್ರಿ ಊಟದ ಶಾಸ್ತ್ರ ಮಾಡಿ, ಹಣ್ಣು ಹಂಪಲುಗಳ ಸವಾಲು ಪ್ರಾರಂಭವಾಗುತ್ತಿದಂತೆ ಮತ್ತೆ ಬಯಲಾಟದ ಸ್ಥಳಕ್ಕೆ ಹಾಜಾರ್. ಆಟ ಪ್ರಾರಂಭವಾಗುವುದರೊಳಗೆ ಎಲ್ಲಿ ಯಾವ ಅಂಗಡಿ ಇದೆ, ಏನೇನು ಇಟ್ಟು ಕೊಂಡಿದ್ದಾರೆ, ಎಲ್ಲ ವಿಕ್ಷಿಸಿ ಬರುವುದಷ್ಟೇ ನಮ್ಮ ಕೆಲಸ, ತೆಗೆದುಕೊಳಲ್ಲಂತು ಆಗುತ್ತಿರಲಿಲ್ಲ. ಯಾಕೆಂದರೆ ಆಗ ನಾವೆಲ್ಲ ಯಕ್ಷಗಾನ ನೋಡಲು ಬರುತ್ತಿದ್ದುದು ಬರೀ ಕೈಯಲ್ಲಿ. ಎಲ್ಲೋ ಅಪರೂಪಕ್ಕೆ ೨೫ ಪೈಸೆನೋ, ೫೦ ಪೈಸೆನೋ ಸಿಕ್ಕರೆ ನಮ್ಮ  ಖುಷಿಗೆ ಮಿತಿಯೇ  ಇರುತ್ತಿರಲಿಲ್ಲ. ಸಿಕ್ಕ ಹಣದಲ್ಲಿ ಹುರಿದ ಕಡಲೆಯನ್ನೋ, ಚೊಕಲೇಟನ್ನೋ ತೆಗೆದುಕೊಳ್ಳುತ್ತಾ, ಅಲ್ಲಿ ಇಲ್ಲಿ ಸುತ್ತಾಡುತ್ತಾ, ಆಮೇಲೆ ಯಕ್ಷಗಾನ ಪ್ರಾರಂಭವಾದ ಒಂದೆರಡು ಗಂಟೆಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಹೋಗಿ ಮಲಗಿಬಿಡುತ್ತಿದ್ದೆವು. ಆಗಾಗ ಏಳುತ್ತಾ ಮತ್ತೆ ಮಲಗುತ್ತಾ, ಕಡೆಯಲ್ಲಿ ಮಂಗಳ ಹಾಡು ಕಿವಿಗೆ ಬಿಳುತ್ತಿದ್ದಂತೆ ಎದ್ದು ಕಣ್ಣೊರಿಸುತ್ತಾ ಮನೆಗೆ ಬಂದು ಬಿಡುತ್ತಿದ್ದೆವು. ಆಗ ಮನೆಯಲ್ಲಿ ಅಪ್ಪ- ಅಮ್ಮನ್ನ ಬಿಟ್ಟರೆ ನಮ್ಮನ್ನ ಕೇಳುವವರಾರಿರಲಿಲ್ಲ, ನಾವು ಮಾಡಿದ್ದೇ ರಾಜ್ಯ. ಆಗಿನ್ನು ಮೀಸೆ ಮೂಡದ, ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳು. ನನಗಿನ್ನು ನೆನಪಿದೆ ಮೊದಲ ಯಕ್ಷಗಾನ ನಡೆಯುತ್ತಿದ್ದದು, ನಮ್ಮೂರ ಕೆಳಗಿರುವ ಗದ್ದೆ ಬಯಲಲ್ಲಿ. ನಂತರ ಅದು ಬಸ್ ನಿಲ್ದಾಣದ ಪಕ್ಕದಲ್ಲಿ ನಡೆಯುತ್ತಿತ್ತು. ಮುಂದೆ ರಂಗಮಂದಿರ ಕಟ್ಟಿದ ಮೇಲೆ ರಂಗಮಂದಿರಕ್ಕೆ ಬದಲಾಯಿತು. ಈ ಎಲ್ಲ ಕಡೆಗಳಲ್ಲಿಯೂ ಕುಳಿತು ನೋಡಿ ಆನಂದಿಸಿದ ನಾವೇ ಧನ್ಯರು. 

ಜನವರಿ ೨೬ ಮತ್ತೆ ಬರುತ್ತಿದೆ, ಮತ್ತೆ ಯಕ್ಷಗಾನ ಬರುತ್ತಿದೆ, ಮತ್ತೆ ಊರು ನೆನಪಾಗುತ್ತಿದೆ. ಅಂದು ಕಾಸಿರಲಿಲ್ಲ, ಉತ್ಸಾಹವಿತ್ತು, ಹುಮ್ಮಸ್ಸಿತ್ತು, ನಾವು ಮಾಡಿದರೆ, ಇಲ್ಲ ಓದಿದರೆ ಅಷ್ಟೇ ಕೆಲಸ, ಇಲ್ಲ ಸಂಪೂಣ೯ ಬಿಡುವಿತ್ತು , ದೇಹ ಮತ್ತು ಮನಸ್ಸು ಊರಲ್ಲೇ ಇತ್ತು. ಆದರೆ ಇಂದು ಕಾಸಿದೆ, ಉತ್ಸಾಹವಿದೆ, ಮನಸ್ಸಿದೆ, ಆದರೆ ದೇಹ ಬೇರೆ ಯಾವುದೋ ಊರಲ್ಲಿ ಬಿಡುವಿಲ್ಲದ ಕೆಲಸದೊಳಗೆ ಹುದುಗಿ ಹೋಗಿದೆ. ಮನಸ್ಸು - ಹುಮ್ಮಸ್ಸು ಇದ್ದರೂ ಹೋಗುವಂತಿಲ್ಲ.

ಈ ವರ್ಷ ಮೂರುದಿನದ ಯಕ್ಷಗಾನವಂತೆ. ಯಕ್ಷಗಾನವನ್ನು ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಆದಕ್ಕೆ ಬೇಕಾಗುವ ಅತಿಥಿ ಕಲಾವಿದರನ್ನು ಆರಿಸಿ ತರುವುದು, ಅದಕ್ಕೆ ತಗಲುವ ವೆಚ್ಚ ಕೂಡ ಕಡಿಮೆ ಏನಲ್ಲ. ಅಂತದ್ದರಲ್ಲಿಯೂ ಇಂದಿಗೂ ಆ ಯಕ್ಷಗಾನವನ್ನ ಇಂದಿಗೂ ಊರ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವುದು ಒಂದು ಸಾಧನೆಯೇ ಸರಿ. ಅಂತಹ ಸಾದನೆಯ ಗರಿಯನ್ನು ಹೊತ್ತು ಮುನ್ನೆಡಿಸಿಕೊಂಡು ಹೋಗುತಿರುವ ನನ್ನೆಲ್ಲ ಊರ ನಾಗರಿಕರಿಗೆ ನನ್ನದೊಂದು ಸಲಾಮ್!

--ಮಂಜು ಹಿಚ್ಕಡ್

Saturday, July 27, 2024

ಚಂದ್ರಗುಪ್ತ ಮೌರ್ಯ - ಓದಿ ಮರೆಯಲಾಗದ ಒಂದು ಐತಿಹಾಸಿಕ ಕಾದಂಬರಿ.

 
                                  

        ಕಳೆದವಾರ ಜಯನಗರದ  ನಾಲ್ಕನೇ ಬಡಾವಣೆಯಲ್ಲಿರುವ ಟೋಟಲ್ ಕನ್ನಡ ಪುಸ್ತಕ ಮಳಿಗೆಗೆ ಹೋದಾಗ "ಚಂದ್ರಗುಪ್ತ ಮೌರ್ಯ" ಎನ್ನುವ ಹೊತ್ತಿಗೆ ತನ್ನ ಹೊದಿಕೆಯಿಂದಲೇ ನನ್ನ ಕಣ್ಣು ಸೆಳೆಯಿತು. ಇತಿಹಾಸದಲ್ಲಿ ಸ್ವಲ್ಪ ಆಸಕ್ತಿ ಹೊಂದಿರುವ ನನಗೆ ಆ ಹೊತ್ತಿಗೆಯನ್ನು ನೋಡಿದ ತಕ್ಷಣ ಓದುವ ಮನಸ್ಸಾಗದೇ ಇರಲು ಸಾದ್ಯವಾಗದೇ ಆ ಹೊತ್ತಿಗೆಯನ್ನು ನನ್ನ ಕೈಗೆತ್ತಿಕೊಂಡೆ. ಎಂದಿನ ವಾಡಿಕೆಯಂತೆ, ಅಲ್ಲೇ ನಿಂತು ಹೊತ್ತಿಗೆಯ ಲೇಖಕರು ಯಾರು  ಎಂದು ನೋಡಿದೆ, ಬಳಿಕ ಬೆನ್ನುಡಿ, ಮುನ್ನುಡಿಯಲ್ಲಿ ಏನಿದೆ ಎಂದು ನೋಡಿ ಓದಿದೆ.


        ಇದು ಹಿಲ್ಡಾ ಸೆಲಿಗ್ಮೆನ್ ಅವರು ಬರೆದಂತ "ಪಿಕಾಕ್ಸ್ ಕಾಲಿಂಗ್" ಎನ್ನುವ ಐತಿಹಾಸಿಕ ಕಾದಂಬರಿಯ ಅನುವಾದ. ಮೂಲ ಕೃತಿಯ ಬರಹಗಾರರ ಬಗ್ಗೆ ತಿಳಿದಿದ್ದು ಅತ್ಯಲ್ಪವೇ ಆದರೂ ಅನುವಾದಕರ ಪರಿಚಯ ಮೊದಲಿನಿಂದಲೂ ಇದೆ. ಅವರು ಎಂದಿಗೂ ಮುಖಾ ಮುಖಿಯಾಗಿ ಬೇಟಿಯಾಗದೇ ಇದ್ದರೂ ಮುಖ ಪುಸ್ತಕದಲ್ಲಿ ಅವರ ಪರಿಚಯವಿದೆ. ಅವರ ಅದೆಷ್ಟೋ ಲೇಖನಗಳನ್ನ ಓದಿ ಮೆಚ್ಚಿಕೊಂಡವರಲ್ಲಿ ನಾನು ಒಬ್ಬ. ನನ್ನ ಜಿಲ್ಲೆಯವರು, ನಮ್ಮೂರಿನವರು ಅನ್ನುವ ಅಭಿಮಾನ ನನಗೆ. ಅದ್ಯಾಪಕರಾಗಿ ನನಗೆ ಅವರ ಕುದ್ದುನಿಂತು ವಿದ್ಯೆ ಕಲಿಸದೇ ಇದ್ದರೂ, ಅವರ ಸಹೋದರ ನನಗೆ ಕಾಲೇಜಿನಲ್ಲಿ ಬೌತಶಾಸ್ತ್ರವನ್ನು ಬೋಧಿಸಿದ ಗುರುಗಳು ಆದ, ಒಳ್ಳೆಯ ಸಾಹಿತಿಗಳು ಆದ   ಮೋಹನ್ ಹಬ್ಬು. ಅವರ ಸಹೋದರ ಉದಯಕುಮಾರ ಹಬ್ಬು ಅವರೇ ಈ ಕೃತಿಯ ಅನುವಾದಕರು.


        ಪುಸ್ತಕದ ಮುಖಪುಟ, ಪುಸ್ತಕದ ಹೆಸರು, ಅನುವಾದಕರ ಹೆಸರು ಇವಿಷ್ಟು ನನಗೆ ಆಸಕ್ತಿಯನ್ನು ಕೆರಳಿಸಲು ಸಾಕಿತ್ತು. ತಡಮಾಡದೇ ಪುಸ್ತಕವನ್ನು ಮನೆಗೆ ಕೊಂಡುತಂದೆ. ಆದಿನ ಶನಿವಾರ, ವಾರಾಂತ್ಯದ ಮೊದಲದಿನ, ಹೊರಗೆ ಪುರುಸೊತ್ತು ಕೊಡದೇ ಸುರಿಯುತ್ತಿರುವ ಬೆಂಗಳೂರಿನ ಆಷಾಡದ ಜಿಟಿ ಜಿಟಿ ಮಳೆ. ಮದ್ಯಾಹ್ನದ ಊಟ ಮುಗಿಸಿ ಪುಸ್ತಕವನ್ನು ಕೈಗೆತ್ತಿಕೊಂಡು ಓದಲು ಕುಳಿತೆ. ಓದುತ್ತಾ ಕುಳಿತೆ.


        ಒಂದು ಅಧ್ಯಾಯ ಇನ್ನೊಂದಕ್ಕೆ ಮುನ್ನುಡಿಯಾಗುತ್ತಾ ಸಾಗಹತ್ತಿತು. ಒಂದು ಅಧ್ಯಾಯವನ್ನು ಮುಗಿಸುತ್ತಿದಂತೆ ಇನ್ನೊಂದು ಅಧ್ಯಾಯವನ್ನು ಓದುವ ಕುತುಹಲ, ಅಷ್ಟು ಚೆನ್ನಾಗಿ ಅನುವಾದಗೊಂಡ ಪುಸ್ತಕವದು. ವಿಕ್ಟೋರಿಯ ಕಾಲಘಟ್ಟದಲ್ಲಿ ಇಂಗ್ಲಿಷಿನಲ್ಲಿ ರಚಿಸಲ್ಪಟ್ಟ ಕೃತಿಯನ್ನು , ಇಂಗ್ಲಿಷ ಅಧ್ಯಾಪಕರೊಬ್ಬರು ಸುಲಲಿತವಾಗಿ ಇಂದಿನ ಕಾಲದ ಆಧುನಿಕ ಕನ್ನಡಕ್ಕೆ ಅನುವಾದಿಸಿದ್ದಂತೂ ಒಂದು ಮಹಾನ್ ಸಾಧನೆಯೆಂದರೆ ತಪ್ಪಾಗಲಾರದೇನೋ. 


        ಹಿಮಾಲಯದ ತಪ್ಪಲಿನಲ್ಲಿ ಆಳ್ವಿಕೆ ನಡೆಸುತಿದ್ದ ಹಿಮವಂತ ರಾಜ ಮಗದದ ದೋರೆ ನಂದರಿಂದ ಸೋತು ಹತನಾದಾಗ, ಆತನ ರಾಣಿ ಮುರಾ, ಅಲ್ಲಿಂದ ತಪ್ಪಿಸಿಕೊಂಡು, ನಂದರಿಗೆ ಗೊತ್ತಾಗದ ರೀತಿಯಲ್ಲಿ ಮಗು ಬೆಳೆಯಲಿ ಎಂದು ಒಂದು ರಾತ್ರಿ ಬೆಟ್ಟ ಗುಡ್ಡಗಳನ್ನು ಸುತ್ತಿ ಹತ್ತಿರವಿರುವ ಕಾಡಿನಲ್ಲಿ, ದನಗಳಿಗೆ ನೀರು ಕುಡಿಯಲು ಇಟ್ಟಿರುವ ಮರಿಗೆಯನ್ನು ನೋಡಿ, ಆ ಮರಿಗೆಯನ್ನ ಕಾಡಹೂವುಗಳಿಂದ ತೊಟ್ಟಿಲ ರೀತಿ ಸಿಂಗರಿಸಿ ಆ ಮಗುವನ್ನು ಆ ಮರಿಗೆಯಲ್ಲಿ ಮಲಗಿಸಿ ಅದರ ಪಕ್ಕ ತಮ್ಮ ವಂಶದ ಸುರಿಗೆಯನ್ನು ಜನರಿಗೆ ತಿಳಿಯಲಿ ಎಂದು ಅಲ್ಲಿಯೇ ಹೂತಿಟ್ಟು ಹೊರಟುಬಿಡುತ್ತಾಳೆ. 


        ಮಾರನೇ ದಿನ ಅಲ್ಲಿಗೆಬಂದ ಕುರಿಗಾಹಿಗಳಿಗೆ ಮಗುವಿನ ಧ್ವನಿ ಕೇಳಿ ಮರಿಗೆಯ ಬಳಿಗೆ ಬರುತ್ತಾರೆ. ಕುರಿಗಾಹಿಗಳ ನಾಯಕ ಆ ಮಗುವನ್ನು ಹಾಗೂ ಸುರಿಗೆಯನ್ನು ನೋಡಿದಾಗ ಅದು ತಮ್ಮ ರಾಜವಂಶದ ಕುಡಿ ಎಂದು ಮಗುವನ್ನು ತಮ್ಮಹಟ್ಟಿಗೆ ತೆಗೆದುಕೊಂಡು ಹೋಗುತ್ತಾರೆ. ಮರಿಗೆಯ ಹತ್ತಿರ ಇರುವಾಗ , ಆ ಮಗುವನ್ನು ಪ್ರೀತಿಯಿಂದ ನೆಕ್ಕಿದ ತಮ್ಮ ಪ್ರೀತಿಯ ಎತ್ತಿನ ಹೆಸರಾದ ಚಂದ್ರನನ್ನ ಆ ಮಗುವಿಗೆ ಇಡುತ್ತಾರೆ. ಕುರಿಗಾಹಿಗಳಿಂದ ನಾಮಾಂಕಿತನಾದ ಮಗು ಚಂದ್ರಗುಪ್ತ ಮುಂದೆ ಚಂದ್ರಗುಪ್ತ ಮೌರ್ಯನಾಗಿ, ಸ್ನೇಹಿತ ಕೌಟಿಲ್ಯನೋಡಗೂಡಿ ನಂದರನ್ನ ಸೋಲಿಸಿ ಬೃಹತ್ ಮೌರ್ಯ ಸಾಮ್ರಾಜ್ಯವನ್ನ ಸ್ಥಾಪಿಸುತ್ತಾನೆ. ಮುಂದೆ ತನ್ನ ಸಾಮ್ರಾಜ್ಯವನ್ನ ಉತ್ತರದಿಂದ ದಕ್ಷಿಣದ ವರೆಗೆ ವಿಸ್ತರಿಸಿ ಸುಮಾರು ೨೪ ವರ್ಷಗಳ ರಾಜ್ಯವನ್ನಾಳುತ್ತಾನೆ. ತದನಂತರ ಅಶೋಕ ಹುಟ್ಟಿದಮೇಲೆ ತನ್ನ ರಾಜ್ಯಬಾರವನ್ನು ತನ್ನ ಮಗ ಬಿಂದುಸಾರನಿಗೆ ಒಪ್ಪಿಸಿ, ಶ್ರವಣಬೆಳಗೊಳಕ್ಕೆ ಬಂದು ಜೈನದೀಕ್ಷೆಯನ್ನು ಪಡೆದು , ಜೈನಮುನಿಯಾಗಿ ತನ್ನ ಉಳಿದ ಜೀವಿತದ ಅಂತ್ಯದವರೆಗೂ ಅಲ್ಲಿಯೇ ಕಳೆಯುತ್ತಾನೆ. ಇದು ಕೃತಿಯ ಸಾರಂಶ.


        ಇಲ್ಲಿ ವಿಮರ್ಷೆ ಅಂತ ಬಂದರೆ ಅದು ಮೂಲಕೃತಿಗೆ ಸಂಬದಿಸಿದ್ದೇ ಬಿಟ್ಟರೆ ಅನುವಾದಿದ ಕೃತಿಗಲ್ಲ. ಉದಾಹರಣೆಗೆ, ಇದರಲ್ಲಿ ಬರುವ ಕೆಲವು ಪ್ರಸಂಗಗಳನ್ನು ಗಮನಿಸಿದಾಗ, ಇಲ್ಲಿ ಎಲ್ಲಿಯೂ ಗ್ರೀಕ್ ದೊರೆಗಳು ಸೋಲುವುದಿಲ್ಲ ಎನ್ನುವುದು. ಉದಾಹರಣೆಗೆ ಅಲೆಕ್ಸಾಂಡರ್ ಹಾಗೂ ಪೌರವನ ನಡುವೆ ನಡೆದ ಯುದ್ದದಲ್ಲಿ ಅಲೆಕ್ಸಾಂಡರ್ ಗೆದ್ದೂ ಕೂಡ ಪೌರವನಿಗೆ ರಾಜ್ಯವನ್ನು ಮರಳಿ ನೀಡಿದ್ದು ಎನ್ನುವುದು, ಮುಂದೆ ಚಂದ್ರಗುಪ್ತ ಮತ್ತು ಸೆಲ್ಯೂಕಸ್ ನಡುವೆ ಯುದ್ದ ನಡೆಯಲೇ ಇಲ್ಲ . ಸೆಲ್ಯೂಕಸ್ ಮೌರ್ಯ ಸೇನೆಯನ್ನ ನೋಡಿ ವಿಚಲಿತಗೊಂಡು ಸಂಧಾನ ಮಾಡಿಕೊಂಡು ತಾನು ಆಳುತ್ತಿದ್ದ ಕೆಲವು ಪ್ರದೇಶಗಳನ್ನು ಚಂದ್ರಗುಪ್ತನಿಗೆ ಬಿಟ್ಟು ಕೊಟ್ಟ ಎನ್ನುವುದು. ಯುದ್ದವೇ ನಡೆಯದೇ, ತಾನು ಸೋಲದೇ, ಅದು ಹೇಗೇ ತನ್ನ ಸಾಮ್ರಾಜ್ಯದ ಭಾಗಳನ್ನು ಬಿಟ್ಟು ಕೊಡಲು ಸಾಧ್ಯ. ಕೆಲವು ಇತಿಹಾಸಗಳ ಪ್ರಕಾರ ಚಂದ್ರಗುಪ್ತ ಸೆಲ್ಯೂಕಸನನ್ನು ಸೋಲಿಸಿ ತನ್ನ ಸಾಮ್ರಾಜ್ಯವನ್ನು ಈಗಿನ ಸಿರಿಯಾವರೆಗೆ ವಿಸ್ತರಿಸಿದ ಎನ್ನುವುದು. ಇನ್ನೂ ಕೆಲವು ಇತಿಹಾಸಗಳ ಪ್ರಕಾರ ಗೀಕ್ ಸಾಹಿತ್ಯಗಲ್ಲಿ ಉಲ್ಲೇಕಿಸಿದ ಸಂದ್ರಕೋಸ್ ಎನ್ನುವ ಪದ ಗುಪ್ತ ದೊರೆ ಸಮುದ್ರಗುಪ್ತನಿಗೆ ಸಂಬಂದಿಸಿರಬಹುದೇ ಹೊರತು ಮೌರ್ಯರ ಚಂದ್ರಗುಪ್ತನಿಗೆ ಸಂಬಂದಿಸಿದ್ದಲ್ಲ ಎನ್ನುವುದು. 


        ಈ ಕಾದಂಬರಿಯಲ್ಲಿ ಎಲ್ಲಿಯೂ ಚಂದ್ರಗುಪ್ತ ಮತ್ತು ಗ್ರೀಕ್ ಕನ್ಯೆ ಹೆಲನರ ಮದುವೆಯ ಪ್ರಸ್ತಾಪ ಬರುವುದಿಲ್ಲ. ಚಂದ್ರಗುಪ್ತ ಒಂದು ಕನ್ಯೆಯನ್ನು ವರಿಸಿದ ಪ್ರಸಂಗ ಬರುತ್ತದಾದರೂ, ಅದು ಹೆಲನ್ಗೆ ಸಂಬಂದಿಸಿದ್ದು ಎಂದು ತಿಳಿದುಬರುವುದಿಲ್ಲ. ಪೂರ್ವದ ಒಬ್ಬ ಹಿಂದೂ ಸಾಮ್ರಾಟ ಪಶ್ಚಿಮದ ಕನ್ಯೆಯನ್ನು ವರಿಸಿದ್ದ ಎಂದು ಹೇಳಲು ಸಂಕೋಚವೋ ಗೊತ್ತಿಲ್ಲ.


        ಇನ್ನೂ ಚಂದ್ರಗುಪ್ತನ ತಾಯಿಯಿಂದ ಮೌರ್ಯ ಎನ್ನುವ ಹೆಸರು ಬಂತು ಎನ್ನುವುದು ಎಷ್ಟು ಸತ್ಯವೋ ಗೊತ್ತಿಲ್ಲ. ಮುರಾ ಹಿಮವಂತ ರಾಜ್ಯದ ರಾಣಿ ಎನ್ನುವುದು ಸತ್ಯಕ್ಕೆ ಎಷ್ಟು ಹತ್ತಿರವಿದೆ  ಎನ್ನುವುದು . ಕೆಲವು ಇತಿಹಾಸಗಳ ಪ್ರಕಾರ ಮುರಾ ನಂದರ ರಾಣಿವಾಸಕ್ಕೆ ಸೇರಿದ ಹೆಂಗಸು ಎನ್ನುವುದು, ಇದು ಕೂಡ ಸತ್ಯಕ್ಕೆ ಎಷ್ಟು ಹತ್ತಿರವಿದೆ ಎನ್ನುವುದು ಗೊತ್ತಿಲ್ಲ.


        ಈ ಇತಿಹಾಸಎನ್ನುವುದು ಹಾಗೆ. ಇದು ಹೀಗೆ ಇರಬಹುದು ಎಂದು ಹೇಳುತ್ತದಯೇ ಹೊರತು, ಹೀಗೆ ಎಂದು ಹೇಳುವುದಿಲ್ಲ. ಇನ್ನೂರು ಮುನ್ನೂರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಎಲ್ಲಿದ್ದರೂ, ಅವರು ಇಲ್ಲೀಯೇ ನೆಲಸಿದ್ದರೇ, ಅಥವಾ ಬೇರೇ ಪ್ರದೇಶಗಳಿಂದ ಇಲ್ಲಿಗೆ ವಲಸೇ ಬಂದವರೇ, ಒಂದೊಮ್ಮೆ ವಲಸೆಬಂದಿದ್ದರೆ ಅವರೆಲ್ಲಿಂದ ಬಂದವರು ಮತ್ತು ಯಾಕೆ ಇಲ್ಲಿಗೆ ಬಂದರು ಎನ್ನುವುದು ನಮಗೆ ತಿಳಿದಿರುವುದಿಲ್ಲ. ಅಲ್ಪ ಸ್ವಲ್ಪ ತಿಳಿದಿದ್ದರೂ ಅದು ತಲೆ ತಲಾಂತರದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹೇಳಿಕೊಂಡು ಬಂದ ವಿಷಯವಾಗಿರಬಹುದು. ಆ ಕತೆ ಒಬ್ಬರಿಂದ ಇನ್ನೊಬ್ಬರ ಕಿವಿಗೆ ತಲುಪುವ ಹೊತ್ತಿಗೆ ಅದೆಷ್ಟು ಮಾರ್ಪಟ್ಟಿರುತ್ತೆ ಎಂದು ತಿಳಿದಿರುವುದಿಲ್ಲ. ಅಂತಾದ್ದರಲ್ಲಿ ಸುಮಾರು ೨೪೦೦ ವರ್ಷಗಳ ಹಿಂದೆ ನಡೆದುಹೋದ ಘಟನೆಗಳನ್ನು ಇದು ಹೀಗೆ, ಇದು ಹಾಗೆ ಎಂದು ಹೇಳಲು ಸಾಧ್ಯವಿಲ್ಲ. ಅಳಿದುಳಿದ ಕೆಲವೇ ಕೆಲವು ಶಾಸನಗಳ ಹಾಗೂ ಗ್ರಂಥಗಳ ಆಧಾರದಮೇಲೆ, ಇದು ಹೀಗಿರಬಹುದು ಎನ್ನಬಹುದು ಹೊರತೂ ಹೀಗೆ ಎಂದಲ್ಲ.


        ಹಾಗಾಗಿ, ಇಲ್ಲಿ ನಾವು ಹೀಗೆ ಇರಬೇಕಿತ್ತು, ಹಾಗೆ ಇರಬೇಕಿತ್ತು ಎಂದು ನೋಡುವುದರ ಬದಲು ಇದು ಹೀಗೂ ಕೂಡ ಇರಬಹುದು ಎಂದು ನೋಡಿ ಓದಿಕೊಂಡರೆ ಇದೊಂದು ಅದ್ಭುತವಾದ ಕಾದಂಬರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂಲ ಕೃತಿಯಲ್ಲಿ ಹೇಗಿದೆಯೋ ಹಾಗೆ  ಅದನ್ನು ಅತ್ಯತ್ಭುತವಾಗಿ ಕನ್ನಡಕ್ಕೆ ಅನುವಾದ ಮಾಡಿರುವುದು ಒಂದು ಸಾಹಸವೇ ಸರಿ. ಇಂತಹ ಒಂದು ಸಾಹಸಕ್ಕಾಗಿಯೇ ನನಗೆ ಹಬ್ಬು ಅವರು ಇಷ್ಟವಾಗುವುದು. 


        ಇದೊಂದು ಕೇವಲ ಐತಿಹಾಸಿಕ ಕಾದಂಬರಿಯಾಗಿರದೇ ಸದಾ ಸಂಗ್ರಹಿಸಿಟ್ಟು ಕೊಂಡಿರಬಹುದಾದ ಒಂದು ಕೃತಿ ಕೂಡ. ಇಂತಹ ಒಂದು ಸುಂದರವಾದ ಕೃತಿಯನ್ನು ಹೊರತಂದು ನನ್ನಂತ ಓದುಗರಿಗೆ ಓದಿನ ರಸಾಯನ ಬಡಿಸಿದ ಹಬ್ಬು ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಕೃತಿಯ ಮುಂದಿನ ಭಾಗ ಆದಷ್ಟೂ ಬೇಗ ಬಿಡುಗಡೆಯಾಗಿ ನಮ್ಮ ಕೈಸೇರುವಂತಾಗಲಿ ಎಂದು ಆಶಿಸುತ್ತೇನೆ.


        ಮುಖಪುಟ ಎನ್ನುವುದು ಕೃತಿಯ ಮುಖವಿದ್ದಂತೆ. ಓದುಗ ಕೃತಿಯ ಒಳಗಿನ ಅಕ್ಷರಗಳನ್ನು ನೋಡುವ ಮೊದಲು ನೋಡುವುದೇ ಕೃತಿಯ ಮುಖಪುಟವನ್ನ. ಅಂತಹ ಸುಂದರ ಮುಖಪುಟವನ್ನು ರಚಿಸಿಕೊಟ್ಟ ನನ್ನ ಮುಖಪುಟದ ಗೆಳೆಯ ಹಾದಿಮನಿಯವರಿಗೂ ಸಹ ನನ್ನ ಅಭಿನಂದನೆಗಳು. ಹಾಗೆ ಲೇಖಕರನ್ನು ಅವರ ಕೃತಿಯನ್ನು ನಂಬಿ ಅದನ್ನು ಪ್ರಕಟಿಸಿದ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿಯವರಿಗೂ ನನ್ನ ಅಭಿನಂದನೆಗಳು. 


        ಈ ಕೃತಿ ಇನ್ನಷ್ಟು, ಮತ್ತಷ್ಟು, ಮಗದಷ್ಟು ಓದುಗರನ್ನ ಸೇರಲಿ, ಸೇರುತ್ತಲೇ ಇರಲಿ, ಮುದ್ರಣ ಮರುಮುದ್ರಣಗೊಳ್ಳುತ್ತಲೇ ಇರಲಿ ಎಂದು ಆಶಿಸುತ್ತೇನೆ.


ಧನ್ಯವಾದಗಳೊಂದಿಗೆ... 


ಇಂತಿ ನಿಮ್ಮವ,

ಮಂಜು ಹಿಚ್ಕಡ್