Thursday, October 22, 2015

ಮತ್ತೆ ಬಾರದಿರಲೀ

ನಮ್ಮ ಸೋದರ ಮಾವ ಮನೆ, ಊರು ಬಿಟ್ಟು ಹೊರಟು ಹೋದದ್ದು ನನಗೆ ತಿಳಿದದ್ದು, ಮಾನ ಮನೆ ಬಿಟ್ಟು ಹೋಗಿ ಒಂದುವಾರವಾದ ಮೇಲೆಯೇ, ಅದೂ ಮಾವನೂರಿನ ಕೆಲವರು ಮಾವ ಬೆಂಗಳೂರಿನಲ್ಲಿ ಇರಬಹುದೇನೋ ಎಂದು ಹುಡುಕಿಕೊಂಡು ಬೆಂಗಳೂರಿನ ನನ್ನ ರೂಮಿಗೆ ಬಂದ ಮೇಲೆಯೇ. ಊರಿನಲ್ಲಿ ಯಾರೋ "ಬೆಂಗಳೂರಿಗೆ ಹೋಗಿರಬಹುದೇನೋ ಒಮ್ಮೆ ಅಲ್ಲಿ ಹುಡುಕಿ ನೋಡಿ" ಎಂದು ಹೇಳಿದ್ದನ್ನು ನಂಬಿಕೊಂಡು ಬೆಂಗಳೂರಿಗೆ ಬಂದಿದ್ದರೂ ಪಾಪ. ಪಕ್ಕದ ಮನೆಯಲ್ಲಿ ಇರುವವನು ಯಾರು ಎಂದು ತಿಳಿದುಕೊಳ್ಳಲು ವರ್ಷ ಹಿಡಿಯುವಾಗ, ಈ ವಿಶಾಲವಾದ ಬೆಂಗಳೂರಿನಲ್ಲಿ ಒಂದೆರಡು ವಾರದಹಿಂದೆ ಬಂದು ಸೇರಿಕೊಂಡಿದ್ದರೂ, ಅವನನ್ನು ಹುಡುಕುವುದೆಂದರೇನು ಅಷ್ಟು ಸುಲಭವೇ. ಹಾಗಂತ ಹೇಳಿ ಅವರನ್ನು ಅಷ್ಟಕ್ಕೆ ಕಳಿಸಿಬಿಡಲು ಆದೀತೇ. ಅವರೊಟ್ಟಿಗೆ ನಾನು ಹುಡುಕಬೇಕಾದುದ್ದು, ಅಳಿಯನಾದ ನನ್ನ ಕರ್ತವ್ಯವಲ್ಲವೇ? ಹಾಗಂತ ಹುಡುಕುವುದಾದರೂ ಎಲ್ಲಿ? ನನಗೆ ತಿಳಿದ ಎಲ್ಲರನ್ನೂ ಸಂಪರ್ಕಿಸಿದ್ದಾಯಿತು. ಬೆಂಗಳೂರಿನಲ್ಲಿರುವ ಎಲ್ಲಾ ಸಂಬಂಧಿಕರ ಮನೆಯ ಬಾಗಿಲನ್ನು ತಟ್ಟಿ ಬರಿಗೈಲಿ ವಾಪಸ್ ಬಂದಿದ್ದಾಯ್ತು. ಪೇಸ್ ಬುಕ್ಕಲ್ಲಿ, ವಾಟ್ಸ್ ಅಪನಲ್ಲಿ ಮಾವನ ಪೋಟೋ ಹಾಕಿ, ಸಿಕ್ಕರೆ ತಿಳಿಸಿ ಎಂದು ಸಂದೇಶ ಕಳಿಸಿದ್ದಾಯ್ತು. ಆದರೆ ಮಾವನ ಸುಳಿವು ಸಿಗದಾಯ್ತು.

ಊರಿಂದ ಬಂದವರು ಎಂದ ಮೇಲೆ ಎಲ್ಲಾ ಅವರ ಮೇಲೆ ಬಿಟ್ಟು ಬಿಡಲಾದೀಟೇ. ನಾನು ಒಂದು ವಾರ ರಜೆ ಹಾಕಿ, ಅವರಜೊತೆ ಓಡಾಡಿದ್ದಾಯಿತು. ಅವರ ಊಟ, ತಿಂಡಿ, ಚಹಾಕ್ಕೆ, ಕೊನೆಗೆ ಅವರು ಊರಿಗೆ ಹೊರಡಲು ಬೇಕಾಗುವ ಟಿಕೇಟನ್ನು ನಾನೇ ಹಣ ಕೊಟ್ಟು ತಂದದ್ದು ಆಯ್ತು. ಅವರೆಲ್ಲ ಊರಿಂದ ಬರುವ ಒಂದೆರಡು ದಿನ ಮೊದಲು ಬಂದ ತಿಂಗಳ ಸಂಬಳವೂ ಖಾಲಿಯಾಗುತ್ತಾ ಬಂದಿತ್ತು. ಇನ್ನೂ ಹುಡುಕುವುದರಲ್ಲಿ ನನಗಾಗಲೀ, ಊರಿಂದ ಬಂದವರಿಗಾಗಲೀ ಈಗ ಯಾವ ಊತ್ಸಾಹವಾಗಲೀ, ಆಸಕ್ತಿಯಾಗಲೀ ಇರಲಿಲ್ಲ. "ಎಲ್ಲೋಗ್ತಾನೆ, ತಕಂಡೆ ಹೋದದ್ದ ಖರ್ಚಾದ್ಮೆಲೆ,ಆವ್ನಾಗೇ ಬತ್ಯಾ ಬಿಡಿ" ಎಂದು ತಮ್ಮಷ್ಟಕ್ಕೆ, ತಾವೇ ಸಮಾಧಾನ ಮಾಡಿಕೊಂಡು ಅವರೂ ಊರಿಗೆ ಹೊರಟರು.

ನಾನದೆಷ್ಟೇ ತಲೆ ಕೆಡಿಸಿಕೊಂಡರು, ಮಾವ ಮನೆ ಬಿಟ್ಟು ಹೋದುದ್ದೇಕೆ ಎಂದು ಹೊಳೆಯಲಿಲ್ಲ. ಅವನು ಮನೆ ಬಿಟ್ಟು ಹೋದುದ್ದಾದರೂ ಏಕೆ? ಹೆಂಡತಿಯ ಕಾಟ ಎನ್ನಲು, ಹೆಂಡತಿ ಮಾವನಿಗಿಂತ ತುಸು ಹೆಚ್ಚೇ ಒಳ್ಳೆಯವಳು. ಇನ್ನೂ ಸಾಲ ಸೂಲ? ಅದೇಗೆ ಸಾದ್ಯ, ನಮ್ಮ ಅಜ್ಜ ಬಿಟ್ಟು ಹೋದ ಆಸ್ತಿ ಇದೆಯಲ್ಲ. ಅದು ಅವನು, ಅವನ ಮಕ್ಕಳು ಕುಳಿತು ತಿಂದರೂ ಕರಗದು ಅಷ್ಟಿದೆ. ನನಗೆ ತಿಳಿದ ಮಟ್ಟಿಗೆ ಅವನಿಗಿರುವ ಹುಚ್ಚೆಂದರೆ ಯಕ್ಷಗಾನ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಯಕ್ಷಗಾನ ಎಲ್ಲಿದ್ದಿತೋ ಅಲ್ಲಿ ಮಾವನಿರುತ್ತಿದ್ದ. ಅಷ್ಟೇ ಅಲ್ಲಾ, ವರ್ಷಕೊಮ್ಮೆ ಅವರೂರಿನಲ್ಲಿ ವಾರಗಟ್ಟಲೆ ಮೇಳದವರನ್ನು ಕರಿಸಿ ಸ್ವಂತ ಖರ್ಚಿನಲ್ಲಿ ಯಕ್ಷಗಾನ ಸಪ್ತಾಹ, ಅದು ಇದು ಮಾಡಿಸುತ್ತಿದ್ದುದು ಉಂಟು. ಕೇವಲ ಒಂದು ಯಕ್ಷಗಾನದ ಹುಚ್ಚಿನಿಂದಲೇ ಊರು ಬಿಟ್ಟು ಹೋಗಲು ಸಾದ್ಯವೇ?

ಯಾಕೆ ಮನೆ ಬಿಟ್ಟು ಹೋಗಿರಬಹುದು ಎಂದು ಮನೆಗೆ ಬಂದವರನ್ನು ಕೇಳಿದ್ದಾಗ, ಒಬ್ಬಬ್ಬೊರು ಒಂದೊಂದು ರೀತಿಯಲ್ಲಿ ಉತ್ತರ ಕೊಟ್ಟಿದ್ದರು. ನಿಮ್ಮ ಮಾವ ತಾನು ಮಾಡಿದ ತಪ್ಪಿನಿಂದಲೇ ಊರು ಬಿಟ್ಟ ಎಂದು ಒಬ್ಬ. ಯಕ್ಷಗಾನ, ಯಕ್ಷಗಾನ ಎಂದು ಊರು ಸುತ್ತುತ್ತಾ ವಾರಗಟ್ಟಲೇ ಮನೆಗೆ ಹೋಗುತ್ತಿರಲಿಲ್ಲವಂತೆ. ಯಕ್ಷಗಾನದ ಜೊತೆಗೆ ಇಸ್ಪೀಟಿನ ಚಟವು ಇದೆಯಂತೆ. ಕೆಲಸ ಮಾಡದೇ ಬರೀ ಚಟದಿಂದಲೇ ಜೀವನ ಸಾಗೀತೇ ಹೇಗೆ. ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ನೀಡಿದ್ದೂ ಆಯ್ತು. ಕಾರಣಗಳು ಬೇರೆ ಬೇರೆ ಎನಿಸಿದರೂ, ಒಂದಕ್ಕೊಂದು ಸಂಭಂಧವಿದ್ದ ಹಾಗೆ ಎನಿಸಿತು. ಆದರೆ ಚಿಕ್ಕಂದಿನಿಂದ, ಇತ್ತೀಚೆಗೆ ಐದಾರು ವರ್ಷಗಳ ಕೆಳಗೆ ಮಾವನನ್ನು ನೋಡಿದ ನನಗೆ ಮಾವನಿಗೆ ಅಷ್ಟೊಂದು ಚಟವಿರಲಿಕ್ಕಿಲ್ಲ ಎನಿಸಿತು. ಅವರೆಲ್ಲಾ ಒಂದೊಂದು ಕಾರಣ ಹೇಳುವುದನ್ನು ಕೇಳಿ ಇದ್ದರೂ ಇರಬಹುದೇನೋ ಅನಿಸಿ ಮನಸ್ಸು ಗೊಂದಲಕ್ಕಿಡಾಯಿತು.

ಅವರೆಲ್ಲ ಊರಿಗೆ ಹೋದ ಮೇಲೆ ಮನೆಗೆ ಕರೆ ಮಾಡಿ ಅಮ್ಮನಿಗೆ ಕೇಳಿದೆ. ಅಮ್ಮ "ದುಡಿದೇ, ಅಪ್ಪಾ ಮಾಡಿಟ್ಟ ಆಸ್ತಿಯೆಲ್ಲಾ ಚಟಕ್ಕೆ ಹಾಳ್ ಮಾಡ್ ಬಿಟ್ಟ. ಕಡಿಗೆ ಹೆಂಡತಿ ತಾಳಿನೂ ಅಡ ಇಟ್ಟ, ಓಡಿ ಹೋಗಿನ ಕಡಾ ನಮ್ಮಣ್ಣ. ಪಾಪ ಅವ್ಳ ಆದದಕ್ಕೆ ಇಟ್ಟ ದಿನ ಆವ್ನಾ ಸಹಿಸಕಂಡಿದ ಪಾಪ. ಆವ್ನನೇನೋ ಊರ ಬಿಟ್ಟ ಹೋದ, ಆದ್ರೆ ಆವ್ನ ಹೆಂಡತಿ, ಮಕ್ಳ ಗತಿ ಏನ್?" ಎಂದು ಹೇಳಿ ಅತ್ತಾಗ ನನ್ನ ಕಣ್ಣಂಚಿನಲ್ಲೂ ನೀರು ಜಿನುಗದಿರಲಿಲ್ಲ.
-------- + --------- + ----------- + ----------
ಮಾವ ಊರು ಬಿಟ್ಟು ಹೋಗಿ ಆಗಲೇ ಒಂದೆರಡು ತಿಂಗಳು ಕಳೆದು ಹೋಗಿದ್ದವು. ಆಗಲೇ ಒಂದೆರಡು ತಿಂಗಳು ಕಳೆದು ಹೋದದ್ದರಿಂದಲೋ ಏನೋ, ನನಗೂ ಮಾವನ ನೆನೆಪು ಅಷ್ಟಾಗಿ ಕಾಡುತ್ತಿರಲಿಲ್ಲ. ನಮ್ಮ ಮನೆಯವರೂ ಅವನ ವಿಷಯವನ್ನು ಬಹುತೇಕ ಮರೆತಿದ್ದರೂ. ನಾನು ಊರಿಗೆ ಹೋಗದೇ ಬಹಳ ದಿನಗಳಾದುದರಿಂದ, ಒಮ್ಮೆ ಊರಿಗೆ ಹೋಗಿ ಬರುವ ಮನಸ್ಸಾಗಿ ಊರಿಗೆ ಹೊರಟೆ. ಊರಿಗೆ ಹೋದವನು ಒಮ್ಮೆ ಅತ್ತೆಯನ್ನು ಅವಳ ಮಕ್ಕಳನ್ನು ಮಾತನಾಡಿಸಿಕೊಂಡು ಬರೋಣವೆಂದು ಅವರ ಮನೆಯತ್ತ ಹೊರಟೆ.

ನಾನು ಅವರ ಮನೆಯ ಅಂಗಳ ತಲುಪಿದಾಗ ಅತ್ತೆ ಮನೆಯ ಪ್ರಾಂಗಣದಲ್ಲಿ ಹೊಲಿಗೆಯಂತ್ರದ ಮೇಲೆ ಕುಳಿತು ಬಟ್ಟೆ ಹೊಲೆಯುತ್ತಿದ್ದಳು. ನಾನು ಬರುವುದನ್ನು ನೋಡಿ "ಏನ್ ರಮೇಶಾ, ಅಪ್ರೂಪಾ ಆಗ್ಬಿಟ್ಟಿ, ಯಾವಾಗ ಬಂದೆ? ಬಾ ಬಾ " ಎಂದು ಕರೆದರು.    
                                                                                                                                                                                                                                                                         ಅತ್ತೆ ನನನ್ನು ಕರೆದದ್ದನ್ನು ಕೇಳಿ ಒಳಗೆ ಓದುತ್ತಾ ಕುಳಿತ ಮಕ್ಕಳು "ರಮೇಶ ಭಾವ, ರಮೇಶ ಭಾವ" ಎನ್ನುತ್ತಾ ಹೊರಕ್ಕೆ ಓಡಿ ಬಂದು, ನನ್ನ ಕೈ ಎಳೆದುಕೊಂಡು ಒಳಗೆ ಹೊರಟರು.

ಒಳಗೆ ಅಡಿಯಿಡುವಾಗ ಅತ್ತೆಯ ಕತ್ತು ಅಕಸ್ಮಾತ್ ಆಗಿ ಕಣ್ಣಿಗೆ ಬಿದ್ದು, ಅತೆಯ ಕತ್ತಿನಲ್ಲಿ ಚಿನ್ನದ ಮಂಗಳ ಸೂತ್ರದ ಬದಲಿಗೆ, ನೂಲಿನಲ್ಲಿ ಪೋಣಿಸಿದ ಕರಿಮಣಿ ದಾರ ಕಣ್ಣಿಗೆ ಬಿದ್ದು, ಅಮ್ಮ ಹೇಳಿದ್ದು ನೆನಪಾಯ್ತು. ಅಂತೂ ಮಾವ ಏನೋ ಮಾಡಿ, ಗುಲ್ಲೆಬ್ಬಿಸಿ ಹೊರಡಿದ್ದಂತೂ ನಿಜವೆನಿಸಿತು.

"ಇಟ್ಟ ವರ್ಷ ಆಯ್ತು ನಿನ್ನ ನೋಡ್ದೆ, ಬಾ ಕುತ್ಕಾ. ಚಾ ಮಾಡ್ಕಂಡೆ ಬತ್ತಿ ಕುಳ್ಳ"ಎಂದು ಅತ್ತೆ ಅಡಿಗೆ ಕೋಣೆಗೆ ಹೊರಟಳು. ನಾನು ಬರುವಾಗ ದಾರಿಯಲ್ಲಿ ಸಿಗುವ ಸಂದೀಪ ಶೆಟ್ಟಿಯ ಅಂಗಡಿಯಿಂದ ತಂದ, ಚೊಕಲೇಟು, ಬಿಸ್ಕೇಟುಗಳನ್ನು ಮಕ್ಕಳಿಗೆ ಕೊಟ್ಟು ಆಡಲು ಕಳಿಸಿ, ಸುಮ್ಮನೆ ಪ್ರಾಂಗಣದಲ್ಲಿ ಕುಳಿತು, ಪ್ರಾಂಗಣದಿಂದ ಕಾಣುವ ತೋಟ, ಗದ್ದೆಗಳನ್ನು ನೋಡುತ್ತಾ ಕುಳಿತೆ.

ನಾನು ಚಿಕ್ಕಂದಿನಿಂದ ನೋಡಿದ, ಆಡಿದ ತೋಟ ಅಂದಿನಂತಿರಲಿಲ್ಲ. ದೊಡ್ಡ ದೊಡ್ಡ ತೆಂಗಿನ ಮರಗಳೆಲ್ಲಾ ಕಾಯಿಗಳಿಲ್ಲದೇ ಒಣಗಿ ನಿಂತಿದ್ದವು. ಅಂದು ಕಣ್ತುಂಬಾ ಕಾಣುವ ಅಡಿಕೆ ಮರಗಳಲ್ಲಿ, ಅಲ್ಲೊಂದು, ಇಲ್ಲೊಂದು ತಪ್ಪಿ ಉಳಿದಂತೆ ಕಾಣುತಿದ್ದವು. ದಟ್ಟವಾದ ತೋಟದ ಕಾರಣ ಮುಂದೆ ಕಾಣದಿದ್ದ ಗದ್ದೆಗಳನ್ನು ಈಗ ಮನೆಯಿಂದಲೇ ಕುಳಿತು ನೋಡಬಹುದಿತ್ತು. ನೀರು ಹಾಯಿಸಲು ಅಜ್ಜ ಮಾಡಿದ್ದ ದೊಡ್ಡ ದೊಡ್ಡ ತೋಡುಗಳು, ಒಡೆದು ಮಣ್ಣಾಗಿ ಮರದ ಬುಡ ಸೇರಿದ್ದವು. ಅವೆಲ್ಲವು ಒಂದೊಂದಾಗಿ ಮಾವ ಏಕೆ ಮನೆ ಬಿಟ್ಟು ಹೋಗಿರಬೇಕು ಎನ್ನುವುದನ್ನು ಗೌಪ್ಯವಾಗಿ ಸೂಚಿಸುತ್ತಿದ್ದವು.

ಹಾಗೆ ನೋಡುತ್ತಾ ಕುಳಿತಿದ್ದವನಿಗೆ ಅತ್ತೆ ಚಾ ಮಾಡಿಕೊಂಡ ಬಂದದ್ದು ತಿಳಿದದ್ದು "ತಕಾ, ಚಾ ಕುಡಿ, ಅಲ್ಲೆ ನೋಡುಕೆ ಏನು ಇಡ್ಲಾ" ಎಂದು ಹೇಳಿದಾಗಲೇ.

ಅತ್ತೆ ಚಾ ಕೊಟ್ಟು ನನ್ನ ಎದುರಿನ ಕುರ್ಚಿಯ ಮೇಲೆ ಕುಳಿತಳು. ನಾನು ಅತ್ತೆ ಕೊಟ್ಟ ಚಾ ಕುಡಿಯುತ್ತಾ ಏನು ಮಾತನಾಡನೇಕೆಂದು ತಿಳಿಯದೇ ಸುಮ್ಮನೆ ಕುಳಿತೆ. ಸ್ವಲ್ಪ ಹೊತ್ತಿನಲ್ಲಿ ಅತ್ತೆಯೇ ಮಾತಿಗೆಳೆದಳು.
" ಏನ್ ಅಮ್ಮಾ ಆರಾಂ ಇದೆ? ಅಪ್ಪಾ?"
"ಎಲ್ಲಾರೂ ಆರಂ ಇವ್ರ ಅತ್ತೆ"
"ಹೌದೆ, ನೀ ಯಾವಾಗ ಬಂದೆ? ಏನ್ ಅಪರೂಪ ಆಗ್ಬಿಟ್ಟೆ, ನಿನ್ನ ನೋಡ್ದೆ ಐದಾರು ವರ್ಷ ಆಯ್ತೋ ಏನೋ?"

"ನಾ ಬಂದೆ ಮೂರ್ನಾಲ್ಕ ದಿನ ಆಯ್ತ. ಈ ಆಯ್ತಾರೆ ಹೋಗ್ಬೇಕ್. ಕೆಲ್ಸಾ ಬಾಳ್ ಆತೀದ್ ಹಾಂಗಾಕಂಡೆ ಬರುಕೇ ಆಗುಲಾ, ಏಗೆ ಬಂದವಾ, ಹಂಗೆ ಮಾತಾಡ್ಡಕಂಡೆ ಹೋಗ್ವಾ ಅಂದೆ ಬಂದೆ."

"ನೋಡುಕೆ ಏನು ಇಡ್ಲಾ, ನಿಮ್ಮ ಮಾವಾ" ಎಂದು ಮತ್ತೆ ಅಳಲು ಸುರು ಹಚ್ಚಿಕೊಂಡರು ಅತ್ತೆ,

"ಏಗೆ ಏನ್ಮಾಡುಕೆ ಆತೀದ್ ಅತ್ತೆ? ಆದ್ರೂ ಮಾವಾ ಹಂಗೆ ಮಾಡುಕೆ ಇಲ್ಲಾಗತ" ಎಂದು ನನ್ನದೇ ಆದ ರೀತಿಯಲ್ಲಿ ಸಮಾಧಾನ ಪಡಿಸಲು ಪ್ರಯತ್ನಿಸಿದೆ.

"ಮಾಡುಕೆ ಇನ್ನೇನು ಇಲ್ಲಾ ಅಂದೇ ಹೋಗಿರ್ ಬೇಕ್" ಎಂದಳು.

"ಹಂಗಲಾ ಅತ್ತೆ, ಮನೆ ಬಿಟ್ಟೋಗುವಂತದ ಏನಾಗತ" ಎಂದಾಗ, ಅತ್ತೆ.

"ಅಂತೂ ಏಗಾದ್ರೂ ಬುದ್ದಿ ಬಂತಲ್ಲ" ಎಂದಳು.

ಅವಳು ಹಾಗೆ ಹೇಳುವಾಗ ಅವಳೆಷ್ಟು ನೊಂದಿರಬಹುದೆನಿಸಿತು. ಮಾವ ಬಿಟ್ಟು ಹೋದ ಕಾರಣ ತಿಳಿಯುವ ಮನಸ್ಸಾಗಿ ಮತ್ತೆ ಅತ್ತೆಯನ್ನು "ಮಾವ ಮನೆ ಬಿಟ್ಟು ಹೋದದ್ ಯಾಕೆ? ಎಲ್ಲಾರ್ದೂ ಮರ್ಯಾದಿ ಕಳಿಯುಕೆ ಅಲ್ಲಾ" ಅಂದೆ.

"ಮರ್ಯಾದಿ ಕಳುಕೆ ಮರ್ಯಾದಿ ಏನ್ ತುಂಬೇ ಇತ್ತೆ ತಮ್ಮಾ ನಿಮ್ಮ ಮಾವಂಗೆ. ಅವ್ರ ಮರ್ಯಾದಿ ಕಳ್ಳಂಡೆ ಅಲ್ಲಾ ಓಡ್ ಹೋದದ್"

"ಅಂದ್ರೆ, ಅರ್ಥಾ ಆಗಲ್ಲಾ ಅತ್ತೆ" ಎಂದೆ.

"ನೀ ಇಂದೆ ಇಲ್ಲೇ ಇರ್, ಊಟ ಮಾಡ್ಕಂಡೆ ನಾಳಗೆ ಹೋಗಕ. ನಿಂಗೆ ಅವ್ರ ಬಗ್ಗೆ ಏನೂ ಗುತ್ತಿಲ್ಲಾ ಅಲ್ಲಾ, ನಾ ಎಲ್ಲಾ ಹೇಳ್ತಿ" ಎಂದು ಅತ್ತೆ ಹೇಳಿದಾಗ ಬಂದು ಹಾಗೆ ಹೋಗಬೇಕು ಎಂದು ಬಂದವನಿಗೆ ಹಾಗೆ ಬಿಟ್ಟು ಬರಲು ಮನಸ್ಸಾಗಲಿಲ್ಲ.
---------- + --------- + ---------- + -------------- + -----------
ರಾತ್ರಿ ಊಟವಾದ ಮೇಲೆ ಅತ್ತೆ ಒಂದೊಂದಾಗಿ  ಮಾವನ ಗುಣಗಳನ್ನು ಬಣ್ಣಿಸತೊಡಗಿದಳು. ನಾನು ತಿಳಿದ ಹಾಗೆ ಮಾವ ಗುಣದಲ್ಲಿ ಒಳ್ಳೆಯವನೇ, ಆದರೆ ಅವನ ಹವ್ಯಾಸಗಳೇ, ಚಟಗಳಾಗಿ ಅವನನ್ನು ಹಾಳು ಮಾಡಿ ಬಿಟ್ಟಿದ್ದವು. ಯಕ್ಷಗಾನದ ಹುಚ್ಚಿನಿಂದಾಗಿ ಮಾವ ಊರೂರು ಅಲೆಯತೊಡಗಿದ. ರಾತ್ರಿ ಯಕ್ಷಗಾನದ ನಿದ್ದೆ ತಪ್ಪಿಸಲು ಇಸ್ಪೀಟು ಆಡುವುದನ್ನು ಕಲಿತ. ಮೊದ ಮೊದಲು ಹೀಗೆ ಇಸ್ಪೀಟು ಆಡುತ್ತಿದ್ದವನು, ಆಮೇಲೆ ಗೆಳೆಯರ ಒತ್ತಾಯಕ್ಕೆ ಹಣವಿಟ್ಟು ಆಡಲು ಪ್ರಾರಂಭಿಸಿದ. ಹವ್ಯಾಸ ಕ್ರಮೇಣ ಚಟವಾಗಿ ಬೆಳೆಯತೊಡಗಿತು. ಚಟ ಅಷ್ಟಕ್ಕೆ ನಿಲ್ಲಲಿಲ್ಲ. ಮುಂದೆ ಕ್ರಿಕೆಟ್, ಬೆಟ್ಟಿಂಗ್ ಚಟ ಕೂಡ ಅಂಟಿಸಿಕೊಂಡ. ಆ ಚಟದಿಂದಾಗಿ ಮಾವ ದಿನೇ ದಿನೇ ಒಂದೊಂದೇ ವಸ್ತುವನ್ನು ಕಳೆದು ಕೊಳ್ಳತೊಡಗಿದವು. ಮೊದಲು ಚಟಕ್ಕೆ ಬಲಿಯಾದುದ್ದು ಅಜ್ಜ ಕೂಡಿಟ್ಟ ಹಣ. ಆಮೇಲೆ ಹೆಂಡತಿಯ ಒಡವೆ, ಕ್ರಮೇಣ ತೋಟದ ಮೇಲಿನ ಗದ್ದೆ, ಕೆಳಗಿನ ಗದ್ದೆಗಳು ಬಲಿಯಾದವು. ಹೀಗೆ ಅಜ್ಜ ಮಾಡಿಟ್ಟ ಆಸ್ತಿ ಕ್ರಮೇಣ ಕರಗತೊಡಗಿತು. ಕೊನೆಗೆ ಉಳಿದದ್ದೆಂದರೆ ಉಳಿದುಕೊಂಡ ಮನೆ ಹಾಗೂ ಅದಿರುವ ಹತ್ತು ಗುಂಟೆಯ ಜಾಗ ಮಾತ್ರ. ಅದೇಗೆ ಅದೊಂದು ತಪ್ಪಿ ಉಳಿಯಿತೆನ್ನುವುದೇ ಆಶ್ಚರ್ಯ. ಒಳ್ಳೆಯ ಮನೆತನದಿಂದ ಬಂದ ಅತ್ತೆ ಅವನ ಚಟಕ್ಕೆ ಸೋತು ಸುಮ್ಮನೆ ಕೂರಬೇಕಾಯಿತು. ಗಂಡನನ್ನು ನಂಬಿ ಕುಳಿತರೆ ಕಷ್ಟವೆಂದು ತಿಳಿದು ಹೋಲಿಗೆ ಕಲಿತು, ಹೋಲಿಗೆಯಂತ್ರ ಇಟ್ಟುಕೊಂಡು ತಾನೇ ದುಡಿದು ಮಕ್ಕಳನ್ನು ಓದಿಸತೊಡಗಿದಳು.

ಓಡಿ ಹೋಗುವ ಮೊದಲು ಹೆಂಡತಿ ಕಷ್ಟ ಪಟ್ಟು ದುಡಿದು ಮಕ್ಕಳ ಹೆಸರಲ್ಲಿ ಕೂಡಿಟ್ಟ ಹಣವನ್ನು ಬರಿದು ಮಾಡಿ ಹೊರಟು ಹೋಗಿದ್ದ. ಇಷ್ಟೆಲ್ಲವನ್ನು ಹೇಳಿ ಮುಗಿಸಿದ ಅತ್ತೆ ಒಮ್ಮೇಲೆ ಅಳತೊಡಗಿದಳು. ಅವಳ ಕಣ್ಣಿನಿಂದ ಉದುರುತಿದ್ದ ಒಂದೊಂದು ಹನಿಗಳು ಅವಳು ಮಾವನಿಂದಾಗಿ ಅನುಭವಿಸಿದ ಕಷ್ಟಗಳನ್ನು ಸೂಚಿಸುತ್ತಿದ್ದವು. ನಾನು ಅದೆಷ್ಟೇ ಧೈರ್ಯ ಹೇಳಿದರೂ ಅವಳನ್ನು ಸಮಧಾನ ಪಡಿಸಲಾಗಲಿಲ್ಲ.

ಅಂತೂ ಆದಿನ ಕಳೆದು ಮಾರನೆ ದಿನ ಬೆಳಿಗ್ಗೆ ಚಹಾ ಕುಡಿದು ಅಲ್ಲಿಂದ ಹೊರಟುನಿಂತೆ. ನಾನು ಹೊರಡುವಾಗ ಅತ್ತೆ "ಆಗಾಗ ಬತ್ತೇ ಇರ್" ಎಂದು ಹೇಳಿದಾಗ, "ಆಯ್ತು ಅತ್ತೆ, ಮುದ್ದಾಂ" ಎಂದು ಹೇಳಿ ಹೊರಗೆ ಬಂದೆ.

ನಾನು ಇನ್ನೇನು ಅಂಗಳಕ್ಕೆ ಬಂದು, ದಣಪೆಯ ಹತ್ತಿರ ಹತ್ತಿರ ಬಂದಿರಬೇಕು. ಅತ್ತೆ ನನ್ನ ಬಳಿ ಬಂದು "ನಿನ್ನ ಹತ್ತಿರ ಉಂದ ಮಾತ್ " ಎಂದಾಗ ನಾ "ಹೇಳ ಅತ್ತೆ" ಎಂದು ನಿಂತೆ,

"ಏನಿಲ್ಲ ದಯವಿಟ್ಟೆ ನಿಮ್ಮ ಮಾವನನ್ನು ಹುಡುಕ್ಸು ಪ್ರಯತ್ನ ಮಾತ್ರ ಮಾಡ್ಬೇಡ್. ಅವ್ರು ಏಗೆ ಬಿಟ್ಟೋಗು ಬದಲು ಮುದ್ಲೆ ಬಿಟ್ಟೋಗಿದ್ರೆ ಸ್ವಲ್ಪನಾದ್ರೂ ಉಳಿತತ್. ಏಗಾದ್ರೂ ಮನಿ-ಜಾಗ ಇದೆ. ಏಗೆ ಮತ್ತೆ ವಾಪದ್ ಬಂದ್ರೆ ಇದ್ದ ಮನಿನೂ ಇರುಲಾ, ಅದ್ಕೆ ಹೇಳ್ದೆ" ಎಂದಾಗ ಅವಳ ಮಾತಿನಲ್ಲಿ ತಪ್ಪಿಲ್ಲವೆನಿಸಿ "ಆಯ್ತು ಅತ್ತೆ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟು ಬಂದೆ.                

-ಮಂಜು ಹಿಚ್ಕಡ್

Tuesday, October 6, 2015

ಮರೆಯಲಾಗದ ಬಾಲ್ಯದ ಮಳೆಗಾಲದ ನೆನಪುಗಳು

ಒಮ್ಮೆ ಮಳೆಗಾಲ ಶುರುವಾಗಿ ಮಣ್ಣಿನ ಗಮಲು ಮೂಗಿಗೆ ಬಡಿಯಿತೆಂದರೆ ತಕ್ಷಣ ನೆನಪಾಗುವುದು ನಮ್ಮ ಕಡೆಯ ಮಳೆಗಾಲದ್ದು. ನಮ್ಮ ಕಡೆ ಮಳೆಗಾಲ ಶುರುವಾದರೆ ಸಾಕು, ಮನೆಯ ಹೊರಗಡೆ ನೀರು ನಿಲ್ಲದ, ನೀರು ಕಾಣದ ಸ್ಥಳಗಳು ಸಿಗುವುದು ಕಡಿಮೆ. ಅಂತ ನಿಂತ ನೀರಲ್ಲಿ ಆಡುವುದೆಂದರೆ  ಯಾವ ಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ. ನೀರಲ್ಲಿ ಆಟವಾಡುವುದೆಂದರೆ ದೊಡ್ಡವರಿಗೆ ಇಷ್ಟವಾಗುವಾಗ ಮಕ್ಕಳಿಗೆ ಇಷ್ಟವಾಗದಿರುತದೆಯೇ? ನಾವು ಕೂಡ ಚಿಕ್ಕವರಾಗಿರುವಾಗ, ಇತರೆ ಮಕ್ಕಳಂತೆ ನೀರಲ್ಲಿ ಆಟವಡಿಯೇ ಬೆಳೆದವರೇ, ಹಾಗೆ ನೆನೆಪಿರುವ ಒಂದಿಷ್ಟು ಘಟನೆಗಳನ್ನು ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇನೆ.

ನಮ್ಮ ಊರಲ್ಲಿ ಮಳೆ ಬಂತೆಂದರೆ, ನಮ್ಮ ಮನೆಯ ಸುತ್ತ ಮುತ್ತಲೆಲ್ಲ ಒರತೆಗಳು ಹುಟ್ಟಿಕೊಂಡು, ಭೂಮಿಯಿಂದ ನೀರು ಜಿನುಗಲು ಪ್ರಾರಂಭವಾಗುತ್ತದೆ. ಆ ಒರತೆಯಿಂದ ಹರೀವ ನೀರು ಹರಿದು ಗದ್ದೆ ಸೇರುವ ಸಲುವಾಗಿಯೇ ನಮ್ಮ ಮನೆಯ ಪಕ್ಕದಲ್ಲಿ ಚಿಕ್ಕ ಕಾಲುವೆ ಇದೆ. ಮಳೆ ನಿಂತು ಹತ್ತು-ಹದಿನೈದು ದಿನ ಕಳೆದರೂ ಆ ಕಾಲುವೆಯಲ್ಲಿ ಹರಿವ ನೀರು ನಿಲ್ಲುತ್ತಿರಲಿಲ್ಲ. ಹಾಗೆ ಹರಿವ ನೀರಿನಲ್ಲಿ ದಿನ ನಿತ್ಯ ಆಡಿ ಕಾಲು ಹುಣ್ಣಾಗಿ ಮನೆಯಲ್ಲಿ ದೊಡ್ಡವರಿಂದ ಬೈಸಿಕೊಂಡರೂ ನಾವು ಆಟವಾಡುವದನ್ನು ನಿಲ್ಲಿಸುತ್ತಿರಲಿಲ್ಲ. ಒರತೆಗಳು ಜಿನುಗುವ ಜಾಗದಲ್ಲಿ ಕೋಲು ದೂಡಿ ಆ ಒರತೆಗಳನ್ನು ದೊಡ್ಡದಾಗಿ ಮಾಡುವುದು, ಹರಿವ ನೀರಿಗೆ ಒಡ್ದು ಕಟ್ಟಿ ನಿಲ್ಲಿಸುವ ವಿಫಲ ಪ್ರಯತ್ನ ಮಾಡುವುದು, ಆ ಹರಿವ ನೀರಲ್ಲಿ ಈ ಕಡೆಯಿಂದ ಆ ಕಡೆ ನೀರು ಎರೆಚಾಡುತ್ತಾ ಓಡಾಡುವುದು ಹೀಗೆ ಒಂದೇ, ಎರಡೇ. ಹಾಗೆ ನೀರಲ್ಲಿಯೇ ಇದ್ದು ಬಿಡುತ್ತಿದ್ದೆವು.

ಇನ್ನು ಶಾಲೆಗೆ ಹೋದರೂ ಅಷ್ಟೇ, ಎಲ್ಲೆಲ್ಲಿ ನೀರು ಹರಿಯುತ್ತೆ, ಅಲ್ಲಿ ಹೋಗಿ ನೀರು ನಿಲ್ಲಿಸಿ, ಆ ನೀರು ಒಂದೆ ಕಡೆ ಹರಿದು ಹೋಗುವಂತೆ ಬಿಟ್ಟು, ಎತ್ತರದಿಂದ ಆ ನೀರು ಬೀಳುವ ಸ್ಥಳದಲ್ಲಿ ಮಾವಿನ ಎಲೆಯನ್ನೋ, ಹಲಸಿನ ಎಲೆಯನ್ನೋ ಇಟ್ಟು ನೀರು ಜಲಪಾತದಂತೆ ಬಿಡುವುದು. ಶಾಲೆಯಿಂದ ಮನೆಗೆ ಬರುವಾಗ ರಸ್ಥೆಯ ಇಕ್ಕೆಲಗಳಲ್ಲಿ ಹರಿಯುವ ಕಾಲುವೆಗಳಲ್ಲಿ ಕಾಗದದ ದೋಣೆ ಬಿಡುವುದು, ನೀರಿನಲ್ಲಿ ಈಜಾಡುವ ಮೀನಿನ ಮರಿಗಳನ್ನು ಹಿಡಿಯುವ ವ್ಯರ್ಥ ಪ್ರಯತ್ನ ಮಾಡುವುದು, ಒಮ್ಮೊಮ್ಮೆ ಕೊಡೆ ಇದ್ದರೂ ಸುಮ್ಮನೆ ಕೊಡೆ ಮಡಿಚಿ ನೆನೆಯುತ್ತಾ ಬರುವುದು.

ಹಾಗೆಯೇ ಆಗಾಗ ನೆನಪಾಗುವ ಇನ್ನೊಂದು ಸಂಗತಿಯೆಂದರೆ ನಮ್ಮ ಮನೆಯಿಂದ ಅಣತಿ ದೂರದಲ್ಲಿರುವ ಪಕ್ಕದ ಮನೆಯವರ ಜಾಗದಲ್ಲಿ ಬೇಸಿಗೆಯಲ್ಲಿ ಯಾವುದೋ ಕಟ್ಟಡ ಕಟ್ಟುವುದಕ್ಕಾಗಿ ಚಿಕ್ಕದಾದ ಹೊಂಡ(ಗುಳಿ) ತೋಡಿದ್ದರೂ. ಅದು ಚಿಕ್ಕದೆಂದರೂ ೩ ಅಡಿ ಆಳವಿದ್ದು, ೪-೫ ಅಡಿ ಉದ್ದಗಲವಿತ್ತು. ಯಾವುದೋ ಕಾರಣದಿಂದ ಕಟ್ಟಡ ಕಟ್ಟದೇ ಖಾಲಿ ಬಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಂಡಿತ್ತು. ನಾವಾಗ ೭-೮ ವರ್ಷದ ಮಕ್ಕಳು. ಈಜು ಕೂಡ ಬರುತ್ತಿರಲಿಲ್ಲ. ಆಗ ನಮಗೆ ಆ ನೀರು ತುಂಬಿದ ಹೊಂಡವೇ ಈಜು ಕೊಳ. ಶಾಲೆ ಬಿಟ್ಟು ಬಂದೊಡನೆ ಒಮ್ಮೆ ಹೋಗಿ ಅದರಲ್ಲಿ ಬಿದ್ದು ಎದ್ದು ಬಂದಿಲ್ಲ ಎಂದರೆ ತಿಂದ ಅನ್ನ ಮೈಗೆ ಒಗ್ಗುತ್ತಿರಲಿಲ್ಲ. ಶನಿವಾರ, ಭಾನುವಾರಗಳಲ್ಲಂತು ಬೆಳಿಗ್ಗೆಯಿಂದ ಸಂಜೆಯವೆರೆಗೂ ಅಲ್ಲೇ.

ನಮ್ಮ ನೀರಾಟ ಇಷ್ಟಕ್ಕೇ ನಿಲ್ಲಲಿಲ್ಲ. ಮುಂದೆ ಈಜು ಕಲಿತ ಮೇಲೆ, ಮಳೆಗಾಲದಲ್ಲಿ ಕೆರೆ, ಭಾವಿಗಳಲ್ಲಿ ಈಜಾಡುತ್ತಾ ಕಾಲಕಳೆದೆವು. ಕಾಲೇಜು ಮುಗಿದು ಹೆಚ್ಚಿನ ಓದಿಗೆ ದಾರವಾಡದ ಮಡಿಲು ಸೇರಿದ ಮೇಲೆ ಇದು ನಿಂತು ಬಿಟ್ಟಿತು.

ಆಗ ಅದೇಷ್ಟೇ ಮಳೆಯಲ್ಲಿ ನೆನೆದರೂ, ನೀರಲ್ಲಿ ಆಟವಾಡಿದರೂ ನೆಗಡಿ ಜ್ವರ ಬರುತಿದ್ದುದು ಕಡಿಮೆಯೇ. ಚಿಕ್ಕವರಿರುವಾಗ ವರ್ಷಕ್ಕೊಂದೆರಡು ಸಾರಿ ನೆಗಡಿ, ವರ್ಷಕೊಮ್ಮೆ ಜ್ವರ ಬರುವುದು ಬಿಟ್ಟರೆ, ಅಂತಹ ಕಾಯಿಲೆ ಕಸಾಲೆಗಳು ಬರುತಿರಲಿಲ್ಲ. ಆದರೆ ಈಗ ಒಮ್ಮೆ ಬೆಂಗಳೂರಿನ ಹನಿ ಮಳೆಯಲ್ಲಿ ಸ್ವಲ್ಪನೆನೆದರೂ ಸಾಕು, ನೆಗಡಿಯಾಗಿ ಮಳೆ ನೀರಿಗಿಂತ ಜಾಸ್ತಿ ನೀರು ಮೂಗಿನಿಂದಲೇ ಇಳಿಯುತ್ತದೆ. ಅದಕ್ಕೆ ಬಹುಶಃ ಇಲ್ಲಿಯ ವಾತಾವರಣದ ಪ್ರಭಾವವೂ ಇರಬಹುದೇನೋ. ಅದೇನೇ ಇರಲಿ ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದು ಅಸ್ವಾಧಿಸುವ ಆ ಮಳೆಗಾಲಕ್ಕೂ, ಕಾಂಕ್ರೆಟ್ ಕಾಡುಗಳ ನಡುವಲ್ಲಿ ಹುಟ್ಟಿ ಬೆಳೆದು ಅಸ್ವಾಧಿಸುವ ಮಳೆಗಾಲಕ್ಕೂ ಅಜಗಜಾಂತರ ವ್ಯತ್ಯಾಸ.

-ಮಂಜು ಹಿಚ್ಕಡ್