Friday, November 28, 2014

ಕತೆಗಾರನ ಬದುಕು ಕತೆಯಾದಾಗ!

ಬಹಳ ದಿನಗಳ ನಂತರ ಅದೇಕೋ ನನಗೆ ಬಸಲೆ ಸೊಪ್ಪಿನ ಸಾರಿನ ಆಸೆಯಾಗಿ, ಬಸಲೆ ಸೊಪ್ಪು ತರಲು ಮೊನ್ನೆ ಭಾನುವಾರ ಜಯನಗರದ ನಾಲ್ಕನೇ ಹಂತದ ಕಾಂಪ್ಲೆಕ್ಸನಲ್ಲಿರುವ ಮಂಗಳೂರು ಸ್ಟೋರ್ಸಗೆ ಹೋದೆ. ಊರಲ್ಲಿ ಆಗಿದ್ದರೆ ಮನೆಯ ಹಿತ್ತಲಲ್ಲಿ ಬೆಳೆದ ಬಸಲೆ ಬಳ್ಳಿಯಿಂದ ಸೊಪ್ಪು ತೆಗೆದು ಸಾರು ಮಾಡಬಹುದಿತ್ತು. ಆದರೆ ಬೆಂಗಳೂರಿನಲ್ಲಿ ಹಾಗಲ್ಲವಲ್ಲ, ಇರೋ ೩೦*೪೦ ಅಡಿಯ ಜಾಗದಲ್ಲಿ ಒಂದಿಂಚು ಬಿಡದೆ ಐದಾರು ಮಹಡಿಯ ಕಟ್ಟಡ ಕಟ್ಟಿ, ಆದರಲ್ಲಿ ಏಳೆಂಟು ಮನೆಮಾಡಿ ಬಾಡಿಗೆ ಎಣಿಸುವ ಇಂದಿನ ಕಾಲದಲ್ಲಿ ಬಸಲೆ ಬೆಳೆಯಲು ಜಾಗವೆಲ್ಲಿ.

ಮಂಗಳೂರು ಸ್ಟೋರ್ಸನಿಂದ ಒಂದು ಕಟ್ಟು ಬಸಲೆ ಜೊತೆಗೆ ಪತ್ರೊಡೆ ಮಾಡಲು ಐದಾರು ಕೆಸುವಿನ ಎಲೆ ತೆಗೆದುಕೊಂಡು ಅಲ್ಲಿಂದ ಹೊರಟು, ಮನೆಗೆ ಹೋಗಲು ಆಟೋ ಸಿಗುತ್ತದಾ ಎಂದು ಆ ಕಡೆಯಿಂದ ಬರುವ ಖಾಲಿ ಆಟೋಗಳನ್ನು ನೋಡುತ್ತಾ, ರಸ್ತೆಯಲ್ಲಿ ಹರಿದು ಬರುವ ವಾಹನಗಳನ್ನು ತಪ್ಪಿಸಿಕೊಳ್ಳುತ್ತಾ ಕೂಲ್ ಜೌಂಟ್ ಸಿಗ್ನಲ್ ಹತ್ತಿರ ನಡೆಯಲಾರಂಭಿಸಿದೆ. ಕಾಂಪ್ಲೆಕ್ಸ ಎದುರುಗಿನ ರಸ್ತೆ ದಾಟಿ ಇನ್ನೇನು ಹತ್ತು ಅಡಿ ನಡೆದಿರಬೇಕು, ಅಷ್ಟರಲ್ಲಿ ದೂರದಲ್ಲಿ ನನಗೆ ಅಭಿಮುಖವಾಗಿ ನಡೆದು ಬರುತ್ತಿರುವ ವ್ಯಕ್ತಿ ನನ್ನ ಗಮನ ಸೆಳೆದ. ಆ ವ್ಯಕ್ತಿ ದೂರದಿಂದ ನೋಡುವಾಗ ನನಗೆ ತುಂಬಾ ಪರಿಚಯವಿರುವ ವ್ಯಕ್ತಿಯಂತೆ ಗೋಚರಿಸಿದ್ದರಿಂದ ನನ್ನ ಕಾಲುಗಳು ಮುಂದೆ ಹೋಗಲು ಬಯಸಿದ್ದರೂ ನನ್ನ ಮನಸ್ಸು ಮುಂದೆ ಹೋಗದಂತೆ ತಡೆದು ಅಲ್ಲೇ ನಿಲ್ಲಿಸಿತು. ಹೌದು ಆತ ಕತೆಗಾರ ಗೋವಿಂದಣ್ಣನಲ್ಲವೇ? ಇದ್ದರೂ ಇರಬಹುದು. ಆದರೆ ಅವನು ಇಲ್ಲೇನು ಮಾಡಲು ಬಂದಿದ್ದಾನೆ? ಇವನು ಹೇಳುವ ಕತೆಗಳನ್ನು ಕೇಳಿ ಅವನ ಕತೆಯನ್ನು ಯಾರಾದರೂ ಸಿನಿಮಾ ಮಾಡಲು ಕರೆದಿರಬಹುದೇ? ಮತ್ತೊಮ್ಮೆ ಮನಸ್ಸಿಗೆ ಅವನಿರಲಿಕ್ಕಿಲ್ಲ ಅನ್ನಿಸಿತಾದರೂ, ನೋಡಿ ನಿರ್ಧರಿಸಿಯೇ ಹೋಗುವ ಮನಸ್ಸಾಗಿ ಅಲ್ಲಿಯೇ ನಿಂತೆ. ಅವನು ಬರುವ ವೇಗವನ್ನು ಗಮನಿಸಿದರೆ ಅವನು ನಾನಿರುವ ಜಾಗವನ್ನು ಸೇರಲು ಒಂದೈದು ನಿಮಿಷಗಳಾದರೂ ಬೇಕೆನಿಸಿ, ಅಲ್ಲಿಯವರೆಗೆ ಸುಮ್ಮನೆ ನಿಲ್ಲುವುದೇನು ಎಂದುಕೊಂಡು. ಅಲ್ಲೇ ಪಕ್ಕದಲ್ಲೇ ಹಸಿ ಕಡ್ಲೆಕಾಯಿ ಬೇಯಿಸುತ್ತಿದ್ದ ಹೆಂಗಸಿನ ಬಳಿಸಾರಿ ಹತ್ತು ರೂಪಾಯಿ ಕೊಟ್ಟು ಬೇಯಿಸಿದ ಕಡ್ಲೆಕಾಯಿ ತೆಗೆದುಕೊಂಡು ತಿನ್ನುತ್ತಾ ದೂರದಲ್ಲಿ ಬರುತ್ತಿರುವ, ಮನಸ್ಸಿಗೆ ಪರಿಚಿತ ಅನ್ನಿಸಿದ ವ್ಯಕ್ತಿಯನ್ನು ಕಾಯುತ್ತಾ ನಿಂತೆ. ಒಂದೊಂದು ಕಡ್ಲೆಕಾಯಿ ಬೀಜ ಬಾಯಿ ಸೇರುತ್ತಿದ್ದ ಹಾಗೆ ಇಲ್ಲಿಯವರೆಗೆ ಸುಮ್ಮನಿದ್ದ ಮನಸ್ಸು ಕತೆಗಾರ ಗೋವಿಂದಣ್ಣನ ಬಗ್ಗೆಯೇ ಯೋಚಿಸ ತೋಡಗಿತು.

                             -------*-*-*-------
ನಾನು ಮತ್ತು ಗೋವಿಂದಣ್ಣ ಹೇಳಿ ಕೊಳ್ಳಲು ಹೆಸರಿಗೆ ಒಂದೇ ಊರಿನವರಾದರೂ, ನಮ್ಮದು ಅರೆ ಮಲೆನಾಡಾದ್ದರಿಂದ ನಮ್ಮ ಮನೆಗೂ ಅವನ ಮನೆಗೂ ಒಂದು ಒಂದುವರೆ ಮೈಲಿಗಳಷ್ಟು ದೂರ. ನಮ್ಮಿಬ್ಬರ ಮನೆಗಳ ನಡುವಿನ ಅಂತರದಲ್ಲಿ ಇರೋದು ಅಂದರೆ ನಮ್ಮ ಮನೆಯ ಗದ್ದೆ ತೋಟಗಳು, ನಂತರ ಒಂದು ಚಿಕ್ಕ ತೊರೆ, ತೊರೆ ದಾಟಿದ ಮೇಲೆ ಸಿಗುವ ಒಂದು ಚಿಕ್ಕ ಕಾಡಿನ ಹಾಸು, ನಂತರ ಅವನ ಮನೆಯ ಗದ್ದೆ, ತೋಟಗಳು ಇವಿಷ್ಟು ಬಿಟ್ಟರೆ ಬೇರೆ ಯಾರ ಮನೆಗಳಿಲ್ಲ. ಗೋವಿಂದಣ್ಣ ನಮ್ಮ ಮನೆಗೆ ಬಂದು ಹೋಗುವುದು, ನಮ್ಮ ತಂದೆ ಅವರ ಮನೆಗೆ ಹೋಗಿ ಬರುವುದು ಇತ್ತಾದರೂ ನಾವು ಮಕ್ಕಳು ಅವರ ಮನೆಗೆ ಹೋಗಿ ಬರುತ್ತಿದ್ದುದು ಅಷ್ಟಕಷ್ಟೇ. ಗೋವಿಂದಣ್ಣ ನಮ್ಮ ಮನೆಗೆ ಬಂದಾಗಲೆಲ್ಲಾ ಮಾತಿನ ನಡುವೆ ಒಂದೆರಡು ಕತೆ ಹೇಳಿಯೇ ಹೋಗುವುದು ಕಾಯಂ ಆಗಿತ್ತು. ಕತೆ ಎಂದರೆ ರಾಮಾಯಣ, ಮಹಾಭಾರತದ ಕತೆಗಳಾಗಲೀ, ಅಥವಾ ಪಂಚತಂತ್ರದ ಕತೆಗಳಾಗಲೀ ಅಥವಾ ಯಕ್ಷಗಾನದ ಪ್ರಸಂಗದ ಕತೆಗಳಾಗಲೀ ಆಗಿರಲಿಲ್ಲ. ಅವು ಅಲ್ಲಿ ನಮ್ಮೂರಿನ ಮನೆಗಳಲ್ಲಿಯೋ ಅಥವಾ ಅಕ್ಕ ಪಕ್ಕದ ಊರುಗಳ ಮನೆಗಳಲ್ಲಿಯೋ ನಡೆದಿರಬಹುದಾದ, ನಡೆಯದೇ ಇರಬಹುದಾದ, ಅವನ ಊಹೆಗೆ ನಿಲುಕಬಹುದಾದ, ನಿಲುಕದೇ ಇರಬಹುದಾದ ವಿಷಯಗಳೇ ಅವನ ಕತೆಗಳು.

ಅವಳು ಅಲ್ಲಿ ಹೋದಳು, ಇವನು ಇಲ್ಲಿ ಬಂದ, ಅವನಿಗೂ ಅವಳಿಗೂ ಇರಬಹುದಾದ ಸಂಬಂಧ, ಅದ್ಯಾರದೋ ಮಗಳು ಮನೆ ಬಿಟ್ಟು ಓಡಿ ಹೋದದ್ದು, ಅದ್ಯಾರೋ ಗಂಡನನ್ನು ಬಿಟ್ಟು ಬಂದದ್ದು, ಅದ್ಯಾರದೋ ಮನೆಯಲ್ಲಿ ನಡೆದ ಅಣ್ಣ ತಮ್ಮಂದಿರ ಜಗಳ, ಅದ್ಯಾರದೋ ಮನೆ ಒಡೆದು ಪಾಲಾದುದ್ದು, ಅದ್ಯಾರದೋ ಮನೆಯಲ್ಲಿ ನಡೆದ ಅತ್ತೆ ಸೊಸೆಯರ ಜಗಳ. ಇಂತಹುದೇ ವಿಷಯಗಳ ಕುರಿತು ಹಾವ ಭಾವಗಳಿಂದ ಕೂಡಿದ ಕತೆ ಹೇಳುವುದರಲ್ಲಿ ನಿಸ್ಸೀಮನಾಗಿದ್ದ ಗೋವಿಂದಣ್ಣ. ಅವನು ಹೇಳುವ ಕತೆಗಳು ಇಂದಿನ ಯಾವ ಸಿನಿಮಾ ಕತೆಗಳಿಗೂ ಕಡಿಮೆಯಾಗಿರಲಿಲ್ಲ. ಅವನು ಹೇಳುವ ಕತೆಗಳನ್ನು ಕೇಳಿ ನಮ್ಮೂರಿನ ಜನ ಅವನಿಗೆ ಕತೆಗಾರ ಗೋವಿಂದಣ್ಣ ಎಂದು ಹೆಸರಿಟ್ಟಿದ್ದರು.

ನಾವು ಚಿಕ್ಕವರಿದ್ದಾಗ ಇವೆಲ್ಲ ಕತೆಗಳು ನಮಗೆ ಅರ್ಥವಾಗದ್ದರಿಂದ ಅವು ಯಾರಿಗೆ ಸಂಬಂಧಿಸದ ಕತೆಗಳು ಎಂದು ಅರ್ಥವಾಗದೇ ನಮ್ಮಷ್ಟಕ್ಕೆ ನಾವು ಸುಮ್ಮನಾಗಿ ಬಿಡುತಿದ್ದೆವು. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ಅವನ ಕತೆಗಳು ನಮಗೂ ಅರ್ಥವಾಗ ತೊಡಗಿದ ಮೇಲೆ ಅವನು ಯಾರ ಬಗ್ಗೆ ಕತೆ ಹೇಳುತಿದ್ದಾನೆ ಎನ್ನುವುದು ಸ್ಪಷ್ಟವಾಗತೊಡಗಿದವು. ಒಂದಂತೂ ಸತ್ಯ, ಅವನು ಹೇಳುತ್ತಿದ್ದ ಕತೆಗಳಲ್ಲಿ ಸತ್ಯ ಇತ್ತೋ, ಇಲ್ಲವೋ, ಅದರೆ ಅವನು ಹೇಳುವ ಶೈಲಿಯಿಂದ ಎದುರಿಗೆ ಕೂತಿರುವ ವ್ಯಕ್ತಿ ಒಮ್ಮೆ ಅದು ಸತ್ಯವಾದ ಕತೆ ಎಂದು ನಂಬದಿರಲು ಸಾದ್ಯವಿಲ್ಲದಿರಲಿಲ್ಲ. ಇಲ್ಲದಿದುದನ್ನು ಇದ್ದಂತೆ ನಿಖರವಾಗಿ ಹೇಳಬಲ್ಲವನಾಗಿದ್ದ ಗೋವಿಂದಣ್ಣ. ನಾವು ದೊಡ್ಡವರಾದ ಮೇಲಂತೂ ಅವನೆಲ್ಲಾದರೂ ಕತೆ ಹೇಳುತಿದ್ದರೆ ನಾವು ತಪ್ಪದೇ ಕೇಳುತಿದ್ದೆವು.

                             -------*-*-*-------
ಗೋವಿಂದಣ್ಣ ಹಾಗೂ ಅವನ ಕತೆಗಳ ಯೋಚನೆಯಲ್ಲಿ ಕಡ್ಲೆ ಬೀಜ ತಿನ್ನುತ್ತಾ ನಿಂತವನಿಗೆ, ಆತ ನನ್ನನ್ನು ದಾಟಿ ೧೦ ಹೆಜ್ಜೆ ಮುನ್ನಡೆದಿದ್ದು ಆತ ದಾಟಿ ಹೋದ ಮೇಲೆಯೇ ತಿಳಿದದ್ದು. ಮುಂದೆ ಹೋದವನು ನನ್ನನ್ನು ನೋಡದೇ, ಮಾತನಾಡದೇ ಹೋದುದ್ದರಿಂದ ಆತ ಗೋವಿಂದಣ್ಣನಿರಲಿಕ್ಕಿಲ್ಲ ಎಂದನಿಸಿ ಮನೆಗೆ ಹೋಗೋಣವೆಂದು ಹೆಜ್ಜೆ ತೆಗೆಯಲು ಯತ್ನಿಸಿದವನು, ಏನಾದರಾಗಲೀ ಅವನಿಗಾಗಿ ಇಷ್ಟು ಹೊತ್ತು ಕಾದಿದ್ದೇನೆ, ನೋಡಿಯೇ ಬಿಡೋಣವೆಂದು ಆತನನ್ನು ಹಿಂಬಾಲಿಸಿ ಜೋರಾಗಿ ಹೆಜ್ಜೆ ಹಾಕಿದೆ. ಇನ್ನೇನು ಆತನ ಹತ್ತಿರ ಹತ್ತಿರ ಬರುತ್ತಿದ್ದಂತೆ, ನೋಡೇ ಬಿಡೋಣವೆಂದು, "ಗೋವಿಂದಣ್ಣ, ಗೋವಿಂದಣ್ಣ" ಎಂದು ಧೈರ್ಯ ಮಾಡಿ ಅವನನ್ನು ಕರೆದು ಬಿಟ್ಟೆ. ನಾನು ಕರೆದಿದ್ದೇ ತಡ, ಆತ "ಯಾರು?" ಎನ್ನುತ್ತಾ ಹಿಂತಿರುಗಿದವನು, "ಓಹ್, ನೀನ ಸೀತಾರಾಮನ ಮಗ ಮೋಹನ ಅಲ್ವಾ" ಎಂದ.

ನನಗೆ ನಾನು ಮಾತನಾಡಿಸಿದ್ದು ಗೋವಿಂದಣ್ಣನನ್ನೇ ಎಂದನಿಸಿದಾಗ ಖುಶಿಯಾಗಿ, "ಹೌದ ಗೋವಿಂದಣ್ಣ, ನೀನೇನ್ ಇಲ್ಲೆ? ನಿನ್ನ ಅಲ್ಲೇ ನೋಡ್ದೇ, ನೀ ನನ್ನ ನೋಡ್ದೇ ಹಂಗೆ ಬಂದ್ಬಿಟ್ಟೆ ಅಲ್ಲಾ, ಅದ್ಕೆ ನೀನ ಹೌದಾ, ಅಲ್ವಾ ಅನ್ನಿಸ್ತ್."

"ಹೌದೆ ಆಣ್ಣಗೆ ಗುತ್ತಾಗಲಾ, ನಾನ ಯಾವ್ದೋ ಲಕ್ಸದಲ್ಲೇ ಬತ್ತೇ ಇದದೆ"

"ಇರ್ಲೆ ಬಿಡ ಆಣ್ಣಾ, ನೀನೇನ್ ಇಲ್ಲೆ?"

"ನಾನ್ ಇಲ್ಲೆ ಮೀನ್ ಮಾರ್ಕೆಟ್ಗೆ ಮೀನ್ ತಕಂಡೆ ಹೋಗುವಾ ಅಂತೆ ಬಂದೆ."

ನನಗೆ ತಲೆ ಬುಡ ಅರ್ಥವಾಗಲಿಲ್ಲ. ಊರಿನಲ್ಲಿದ್ದ ಗೋವಿಂದಣ್ಣ ಬೆಂಗಳೂರಿಗೆ ಬರುವುದೆಂದರೇನು? ಬೆಂಗಳೂರಿಗೆ ಬಂದು ಹೀಗೆ ಒಬ್ಬನೇ ಓಡಾಡುವುದೆಂದರೇನು? ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಅರವತ್ತಕ್ಕೂ ಹೆಚ್ಚು ವಸಂತಗಳನ್ನು ಕಳೆದ ಈತ ಬೆಂಗಳೂರಿನಲ್ಲಿ ಒಬ್ಬನೇ ಬಂದು ಮೀನು ತೆಗೆದುಕೊಂಡು ಹೋಗುವುದೆಂದರೇನು? ಇಲ್ಲಿ ಎಲ್ಲಿ ಉಳಿದು ಕೊಂಡಿರಬಹುದು ಎಂದು ಯೋಚಿಸುತ್ತಾ ಹೆಜ್ಜೆ ಹಾಕುತ್ತಿದ್ದ ನಾನು "ಏನ್ ತಮ್ಮಾ, ಖಾಲಿ ಬಸ್ಲೆ ಸುಪ್ಪ ತಕಂಡೆ ಹೋತೆ ಇಂವಿಯಲ್ಲಾ, ಅದ್ರ ಸಂತಿಗೆ ಸಿಟ್ಲಿ ತಕಂಡೆ ಹೋದ್ರೆ ಬೆರ್ಕಿ ಹಾಕುಕರು ಆತತಲಾ", ಎಂದು ಗೋವಿಂದಣ್ಣ ಹೇಳಿದಾಗ ನಾನು ಎಚ್ಚೆತ್ತು,

"ಹ ಹ, ಅದು ಹೌದ, ಬಾ ನೀನು ಹೆಂಗೆ ಆ ಬದಿಗೆ ಹೋತೆ ಇಂವಿಯಲ್ಲಾ, ನಾನು ಬತ್ತಿ ಬಾ" ಎಂದು ಅವನೊಟ್ಟಿಗೆ ಹೊರಟೆ. ಹಾಗೆ ಹೊರಡುವಾಗ ಗೋವಿಂದಣ್ಣ ಏಕೋ ಬದಲಾಗಿದ್ದಾನೆ ಅನಿಸತೊಡಗಿತು. ಮೊದಲು ಆತ ಹೀಗಿರಲಿಲ್ಲಾ ಅಂತೆನಿಸಿತು. ಮೊದಲಾಗಿದ್ದರೆ ಇಷ್ಟೊತ್ತಿಗೆ ಕನಿಷ್ಟ ಒಂದಾದರೂ ಕತೆ ಹೇಳಿ ಮುಗಿಸಿ ಬಿಡುತ್ತಿದ್ದ. ಆದರೆ ಆತ ಈಗ ಏನು ಮಾತನ್ನಾಡದೇ ಸುಮ್ಮನೆ ಬರುತ್ತಿದ್ದ.

ಇಬ್ಬರೂ ಮೀನು ಮಾರುಕಟ್ಟೆಗೆ ಬಂದು ಮೀನು ತೆಗೆದು ಕೊಂಡು ಅಲ್ಲಿಂದ ಹೊರ ಬಂದೆವು. ಮೀನು ಮಾರು ಕಟ್ಟೆಯಿಂದ ಹೊರಬಂದರೂ ಗೋವಿಂದಣ್ಣ ಮಾತನ್ನಾಡದ್ದನ್ನು ನೋಡಿ, ನನಗೆ ಸುಮ್ಮನಿರಲಾಗದೇ, "ಗೋವಿಂದಣ್ಣ ಇಲ್ಲೆ , ಎಲ್ಲಿ ಇರ್ತಿ?" ಎಂದೆ.

ಗೋವಿಂದಣ್ಣ ಏನನ್ನೋ ಅನುಮಾನಿಸುತ್ತಾ, " ಇಲ್ಲೇ ಮಯ್ಯಾಸ್ ಹೊಟೇಲ್ ಇದ ಅಲ್ಲಾ, ಅದ್ರ ಹಿಂದೆ, ೩-೪ ಮನಿ ದಾಟಿದ್ರೆ ನಮ್ಮ ಮನೆ ಸಿಕ್ತಿದ. ಆ ಮನಿಲೆ ೩ನೇ ಪ್ಲೋರ್ ನಲ್ಲೆ ನಾವ್ ಇರ್ತವ್" ಅಂದ.

ಆತ ಅಷ್ಟು ನಿಖರವಾಗಿ ಹೇಳುತ್ತಿದ್ದಾನೆ ಅಂದರೆ ಅದು ನಿಜವಿರಬಹುದು ಅನಿಸಿತು. ಆತನ ಮಾತಿನಲ್ಲಿ ಆಗಾಗ ಇಣುಕಿ ಮರೆಯಾಗುವ ಇಂಗ್ಲೀಷ ಪದಗಳನ್ನು ಗಮನಿಸಿದರೆ ಆತನಿಗಾಗಲೇ ಬೆಂಗಳೂರಿನ ಪ್ರಭಾವ ಸ್ವಲ್ಪ ಬೀರಿದೆ ಅನಿಸಿ, "ಹೌದೆ ಅಲ್ಲೆ ಯಾರ್ ಮನಿಲೆ ಇರ್ತಿ?" ಎಂದು ಕೇಳಿದೆ.

"ಮಗ್ಳ ಮನಿಲೆ" ಎಂದವನು ಮತ್ತೇನನ್ನು ಹೇಳಲು ಮನಸ್ಸಿಲ್ಲ ಎನ್ನುವವನಂತೆ, "ಮೀನ ತಕಂಡೆ ಬಾಳ ಹುತ್ತ ಆಯ್ತ, ಮನಿ ಬದಿಗೆ ಹೋತಿ ಆಗಾ" ಎಂದ.

ಆತ ಹಾಗೆ ಹೇಳಿದಾಗ ನನಗೆ ಮತ್ತೇನನ್ನು ಕೇಳುವ ಮನಸ್ಸಾಗದೇ, ನನ್ನ ವಿಸಿಟಿಂಗ್ ಕಾರ್ಡ ಕೊಟ್ಟು, ಅದರಲ್ಲಿರುವ ನನ್ನ ಮೊಬೈಲ್ ನಂಬರ್ ತೋರಿಸಿ, ಆ ನಂಬರಿಗೆ ಕರೆ ಮಾಡುವಂತೆ ತಿಳಿಸಿ, "ಮನಿ ಬದಿಗೆ ಬಾರಾ" ಎಂದು ಹೇಳಿದೆ.

ಆತ "ಹೋ, ಆಯ್ತ. ಬತ್ತಿ ಅಗಾ" ಎಂದು ಹೇಳಿ ಅಲ್ಲಿ ನಿಲ್ಲದೇ ಅವನ ಮನೆಯತ್ತ ಹೊರಟ. ನಾನು ಕೂಡ ಬಹಳ ಹೊತ್ತು ಅಲ್ಲಿ ನಿಲ್ಲಲಾರದೇ ಮನೆಯತ್ತ ಹೊರಟೆ.

                              -------*-*-*-------

ಗೋವಿಂದಣ್ಣನನ್ನು ನೋಡಿ ಮಾತನಾಡಿಸಿದಾಗಿನಿಂದ ನನ್ನ ಮನಸ್ಥಿತಿಯೇಕೋ ಸರಿ ಇರಲಿಲ್ಲ. ಅಂದು ಊರಲ್ಲಿ ಉತ್ಸಾಹದಿಂದ ಕತೆ ಹೇಳುವ ಗೋವಿಂದಣ್ಣನಿಗೂ, ಇಂದು ನನಗೆ ಸಿಕ್ಕ ಗೋವಿಂದಣ್ಣನಿಗೂ ಅಜಗಜಾಂತರ ವ್ಯತ್ಯಾಸವಿದೆ ಅನಿಸಿತು. ನಾನು ಕಳೆದೆರಡು ವರ್ಷದಲ್ಲಿ ಅದೆಷ್ಟು ಭಾರಿ ಊರಿಗೆ ಹೋಗಿದ್ದೆನಾದರೂ ಮನೆಯಲ್ಲಿ ಗೋವಿಂದಣ್ಣನ ವಿಷಯ ಬರದಿದ್ದುದರಿಂದ, ನಾನು ಅವನ ಬಗ್ಗೆ ಇಲ್ಲಿಯವರೆಗೆ ಯೋಚಿಸಿಯೇ ಇರಲಿಲ್ಲ. ಈಗ ಆತ ಕಾಣಿಸಿಕೊಂಡಾಗಿನಿಂದ ಮನಸ್ಸು ಸರಿ ಇರಲಿಲ್ಲ. ಮನೆಗೆ ಕರೆ ಮಾಡಿದರೆ ವಿಷಯ ತಿಳಿದರೂ ತಿಳಿಯಬಹುದೇನೋ ಅನಿಸಿ, ಮನೆಗೆ ಕರೆ ಮಾಡಿದೆ.

ಅಮ್ಮ ಕರೆಯನ್ನು ಸ್ವೀಕರಿಸಿ, "ಏನಪ್ಪಾ ಆರಾಂ? ಯಾವಾಗ್ಲೂ ಸಂಜಿಗೆ ಪೋನ್ ಮಾಡುವಂವಾ, ಇಂದೇನ್ ಇಟ್ಟೊತ್ತಿಗೆ ಪೋನ್ ಮಾಡಿ? ಯಾಕೆ ಆಪೀಸ್ ಇಲ್ವಾ ಹೆಂಗೆ?"

"ಇವತ್ತೆ ಆಯ್ತಾರಾ ಅಮ್ಮಾ, ಆಪೀಸಿಗೆ ರಜೆ."

"ಹೋ! ಅದೆ ಮರ್ತೆ ಹೋಗತ್, ಏನ್ ಇಟ್ಟೊತ್ತಿಗೆ ಪೋನ್ ಮಾಡಿ, ಏನಾರು ವಿಶೇಷ?"

"ಅಮ್ಮಾ, ಇಂದೆ ನಮ್ಮೂರ್ ಗೋವಿಂದಣ್ಣ ಸಿಕ್ಕದಾ, ಅದೇ ಕತೆಗಾರ ಗೋವಿಂದಣ್ಣ."

ಅಮ್ಮಾ ಆಶ್ಚರ್ಯದಿಂದ "ಹೌದೆ? ಹೆಂಗೀವಾ? ಆರಾಂ ಇವ್ನೆ?"

"ಹ, ಆರಾಂ ಇಂವಾ, ಆದ್ರೆ ಯಾಕೋ ಮುದ್ಲನಂಗೆ ಇಲ್ಲಾ. ಇಟ್ಟ ಬೇಕೋ ಅಟ್ಟೇ ಮಾತಾಡೆ ಹೋದಾ. ಯಾಕೋ ಬೆಜಾರ್ದಲ್ಲೆ ಇದ್ದಂಗೆ ಇದ್ದಾ."

"ಹೌದಪ್ಪಾ, ಆಗೆ ಆಂವಾ ಎಲ್ಲಾರ್ ಮನೀದು ಕತೆ ಹೇಳ್ತದಾ, ಏಗೆ ಆವ್ನ ಮನಿದೇ ಕತಿ ಆಗ್ಬಿಟ್ಟಿದ."

"ನನಗೆ ಏನೇನು ಅರ್ಥವಾಗದೇ "ಹಂಗಂದ್ರೆ, ಏನಮ್ಮಾ, ಸ್ವಲ್ಪ ಬಿಡ್ಸ ಹೇಳ್" ಅಂದಾಗ, ಅಮ್ಮಾ,

"ಏನ್ ಹೇಳುದ್ ಮಗಾ, ನಿಂಗೆ ಆವ್ನ ಮಗ್ಳ ಪ್ರೀಯಾ ಗುತ್ತಲಾ, ನಿಂಗಿಂತಾ ಉಂದ ವರ್ಷಾನಾ, ಎರ್ಡ ವರ್ಷನಾ ಏನಾ ಚಿಕ್ಕೋಳ, ಅವ್ಳ ಇಂಜಿನಿಯರ್ ಓದ್ ಬೇಕಾದ್ರೆ ಯಾರನ್ನೋ ಲವ್ ಮಾಡಿ, ಮನಿಯೋರ್ ಬೇಡಾ ಅಂದ್ರೂ ಕೇಳ್ದೇ ಕೊನೆಗೆ ಅವನನ್ನೇ ಮದ್ವೆಯಾಗಿ ಪುನಾದಲ್ಲೆಲ್ಲೋ ಇದ್ಲಂತೆ. ಆದ್ರೆ ಏಗುಂದ್ ಎರ್ಡ ವರ್ಷದ ಹಿಂದೆ ಗಂಡನ್ ಬಿಟ್ಟೆಕಂಡೆ ೫ ವರ್ಷದ್ ಮಗ್ನ ಕರ್ಕಂಡೆ ಬೆಂಗಳೂರಲ್ಲೆ ಬಂದೀದ ಅಂತೆ. ಊರಿಗೂ ಬರುದ್ ಕಡ್ಮಿ. ಅದ್ನ ಹಚ್ಕಂಡೆ ಪಾಪ ಗೋವಿಂದಣ್ಣನ ಹೆಂಡತಿ ಶಾರದೆ ಕುರ್ಗೆ, ಕುರ್ಗೆ ಆರಾಂ ತಪ್ಪೆ, ಏನ್ ಮಾಡ್ದ್ರೂ ಕಡ್ಮಿ ಆಗ್ದೇ ಸತ್ತೇ ಹೋದ್ಲ. ಅಮ್ಮಾ ಸತ್ತ ಹೋದಾಗ ಬಂದೋಳ ಆಪ್ನ ಕರ್ಕಂಡೆ ಬೆಂಗಳೂರಿಗೆ ಹೋದೋಳ ಮತ್ತೆ ಬರ್ಲಾ. ಈಲ್ಲಿರು ಗದ್ದೆ ತೋಟ ಎಲ್ಲಾ ಗೋವಿಂದಣ್ಣನ ಮಗಾ ಜಗದೀಶನೇ ನೋಡ್ಕಂಡೆ ಹೋತೆ ಇಂವಾ. ಬೆಂಗಳೂರಿಗೆ ಹೋದ್ಮೇಲೆ ಗೋವಿಂದಣ್ಣ ಎರ್ಡ ಮೂರ್ ಸಲಾ ಊರಿಗೆ ಬಂದ ಹೋಗಿಯಾ ಅಂತೆ ಜನಾ ಹೇಳ್ತರ, ಆದ್ರೆ ನಾವ್ಯಾರು ಆವ್ನಾ ನೋಡಲಾ"

ಅಮ್ಮಾ ಒಂದೇ ಉಸಿರಲ್ಲೇ ಅವನ ಕತೆಯನ್ನು ಹೇಳಿ ಮುಗಿಸಿದಳು, ನನಗೆ ಮತ್ತೆ ಮಾತನ್ನಾಡಲು ಮನಸ್ಸಾಗದ ಕಾರಣ "ಓಹ್ ಹೌದೆ ಇಷ್ಟೆಲ್ಲಾ ಆಗಿದೆ" ಎನ್ನುತ್ತಾ "ಆಯ್ತ ಹಂಗಾರೆ, ಆಮೆಲೆ ಸಂಜಿಗೆ ಮತ್ತೆ ಪೋನ್ ಮಾಡ್ತಿ" ಎಂದು ಅಮ್ಮನ ಉತ್ತರಕ್ಕೂ ಕಾಯದೇ ಪೋನಿಟ್ಟೆ.

ಮನಸ್ಸು ಹಳಿ ತಪ್ಪಿದ ರೈಲಿನಂತಾಗಿತ್ತು. ಒಂದೊಂದು ಬಾರಿ ಒಂದೊಂದು ಯೋಚನೆಗಳು. ಮೊದಲ ಯೋಚನೆಗೂ, ಎರಡನೆಯ ಯೋಚನೆಗೂ ಸಂಬಂಧವಿಲ್ಲದ ರೀತಿಯಲ್ಲಿ ಒಂದೊಂದೇ ಯೋಚನೆಗಳು. ಬದುಕು ಎಷ್ಟು ತಿರುವುಗಳಿಂದ ಕೂಡಿದೆಯಲ್ಲ, ಒಂದೊಂದು ತಿರುವಲ್ಲೂ ಒಂದೊಂದು ತೆರನಾದ ಬದಲಾವಣೆ. ಒಮ್ಮೆ ಯಾರದೋ ಬದುಕು ನಮಗೆ ಕತೆಯಾದರೆ, ಕೆಲವೊಮ್ಮೆ ನಮ್ಮ ಬದುಕು ಇನ್ನೋರ್ವರಿಗೆ ಕತೆಯಾಗುತ್ತದೆ. ಯಾರಿಗೆ ಗೊತ್ತು ಯಾರ ಬದುಕು, ಯಾರಿಗೆ, ಯಾವಾಗ, ಎಂದು, ಎಲ್ಲಿ ಕತೆಯಾಗುತ್ತದೆ ಎಂದು. ಇನ್ನೊಬ್ಬರ ಬದುಕನ್ನೇ ನೋಡಿ ನಾವು ಕತೆ ಕಟ್ಟುತ್ತೇವೆ, ಬರೆಯುತ್ತೇವೆ, ಹೇಳುತ್ತೇವೆ, ಮುಂದೊಂದು ದಿನ ನಮ್ಮ ಬದುಕು ಕೂಡ ಇನ್ನೊಬ್ಬರಿಗೆ ಕತೆಯಾಗಬಹುದು ಎಂದು ಯೋಚಿಸದೇ.

--ಮಂಜು ಹಿಚ್ಕಡ್

Tuesday, November 18, 2014

ವಿದ್ಯುತ್ತು

ಏನಿದ್ದರೇನು ನಮ್ಮ ವಿದ್ವತ್ತು
ಮನೆಯಲ್ಲಿದ್ದರೆ ತಾನೇ ವಿದ್ಯುತ್ತು
ಮನೆಗೆ ಬಂದು ಬರೆಯುವ ಚಿಂತೆ
ಮನೆ ತಲುಪುವಷ್ಟರಲ್ಲಿ ವಿದ್ಯುತ್ತೇ ನಾಪತ್ತೆ....


--ಮಂಜು ಹಿಚ್ಕಡ್

Wednesday, November 12, 2014

ಈ ಜೀವನ!

ನಮ್ಮ ಈ ಜೀವನ.
ನೀನಿತ್ತ ಬಿಕ್ಷೆಯೋ,
ನಾನಿತ್ತ ರಕ್ಷೆಯೋ,
ಎಂದು ಹುಡುಕಿ,ಹುಡುಕಿ
ಸವೆದು ಹೋಗಿದೆ
ನನ್ನ ಪಾದರಕ್ಷೆ.

--ಮಂಜು ಹಿಚ್ಕಡ್

Thursday, November 6, 2014

ಜೋಡಿ ಕೋಣಗಳು!

[೨೬-ಅಕ್ಟೋಬರ್-೨೦೧೪ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಕತೆ ’ಜೋಡಿ ಕೋಣಗಳು’]

ದನಗಳಿಗೆ ಒಂದಿಷ್ಟು ಹಸಿ ಹುಲ್ಲು ಕೊಯ್ದುತಂದು ಮೇವಿನ ವ್ಯವಸ್ಥೆ ಮಾಡಿ, ಹಾಸಲು ಒಂದಿಷ್ಟು ಸೊಪ್ಪು ತರಲು ಬಂದ ವಿಠ್ಠಲಿನಿಗೆ ಸ್ವಲ್ಪ ಸುಸ್ತಾದಂತೆ ಅನಿಸಿ ಮರದ ಕೆಳಗೆ ಕುಳಿತೆ. ಸ್ವಲ್ಪ ಸುಸ್ತಾದಂತೆ ಅನಿಸಿ ಅಲ್ಲಿಯೇ ಮರದ ಕೆಳಗೆ ಕುಳಿತ. ಕಳೆದ ಒಂದು ವಾರದಿಂದ ಬೆಂಬಿಡದೇ ಸುರಿಯುತ್ತಿದ್ದ ಮಳೆ ಕಳೆದೆರಡು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಬಾಂದಳದ ಸೂರ್ಯ ಮೋಡಗಳ ನಡುವೆ ಆಗಾಗ ಕಣ್ಣು ಮುಚ್ಚಾಲೆಯಾಟವಾಡುತ್ತಿದ್ದ. ಆ ಹೊನ್ನೆ ಮರದ ಕೆಳಗೆ ಕುಳಿತು, ಸೊಂಟಕ್ಕೆ ಕಟ್ಟಿದ ಚಿಂಚೆಯಿಂದ (ಚಿಕ್ಕದಾದ ಚೀಲದಿಂದ) ಎಲೆ ಆಡಿಕೆ ತೆಗೆದು ಬಾಯಿಗೆ ಹಾಕಿ ಮೆಲ್ಲುತ್ತಾ ಕುಳಿತ ಅವನಿಗೆ ಈ ಬಾರಿ ಗದ್ದೆ ಕೊಯ್ಲು ಮುಗಿದು, ಶೇಂಗಾ ಹೋಟಿ ಪ್ರಾರಂಭವಾಗುವುದರೊಳಗಾಗಿ ಈಗಿರುವ ಹಳೆಯ ಎತ್ತುಗಳನ್ನು ಬದಲಿಸಬೇಕು ಎನ್ನುವ ಯೋಚನೆ ಮತ್ತೆ ಕಾಡತೊಡಗಿತು. ಇದು ಇಂದು ನಿನ್ನೆಯ ಯೋಚನೆಯೇನಲ್ಲ, ಆ ಯೋಚನೆ ಬಂದು ಆಗಲೇ ಆರೇಳು ತಿಂಗಳುಗಳಾಗಿದ್ದವು. ಈಗಿನ ತುಟ್ಟಿ ಕಾಲದಲ್ಲಿ ಅದೇನು ಅಷ್ಟು ಸುಲಭದ ಮಾತಾಗಿರಲಿಲ್ಲ. ಮೊದಲು ಮಳೆಗಾಲದ ಹೋಟಿಗೆ ಎತ್ತುಗಳನ್ನು ಬದಲಿಸಬೇಕು ಎಂದುಕೊಂಡು ಗೇರುಬೀಜ, ಶೇಂಗಾ ಮಾರಿದ ಹಣವನ್ನೆಲ್ಲ ಹಾಗಿಯೇ ಇಟ್ಟುಕೊಂಡು ಕುಳಿತಿದ್ದ. ಆದರೆ ಈಗಿರುವ ಎತ್ತುಗಳಿಗೆ ಸಕಾಲದಲ್ಲಿ ಯಾವುದೇ ಗಿರಾಕಿಗಳು ಬರದ ಕಾರಣ ಅದೇ ಎತ್ತುಗಳಲ್ಲಿಯೇ ಮಳೆಗಾಲದ ಬೇಸಾಯ ಮಾಡಿ ಮುಗಿಸಿದ್ದ. ಎತ್ತುಗಳಿಗೇನು ವಯಸ್ಸಾಗಿರಲಿಲ್ಲ ಇನ್ನೂ ಒಂದೆರಡು ವರ್ಷ ಹೋದರೂ ಪರವಾಗಿರಲಿಲ್ಲ, ಆದರೆ ಇನ್ನೆರಡು ವರ್ಷ ಬೇಸಾಯ ಮಾಡಿ ಎತ್ತುಗಳನ್ನು ಮಾರುವ ಬದಲು ಈಗಲೇ ಮಾರಿದರೆ ಒಳ್ಳೆಯದು, ಸ್ವಲ್ಪ ರೇಟದರೂ ಇದ್ದಿತೂ ಎನ್ನುವ ಭಾವನೆ ಇದ್ದಿತಾದರೂ, ಆ ಎಡಕ್ಕೆ ಕಟ್ಟುವ ಮಂಜ ಎತ್ತು, ಬಲಕ್ಕೆ ಕಟ್ಟುವ ಹುಬ್ಬನಿಗಿಂತ ಸ್ವಲ್ಪ ಎಡ, ನಡಿಗೆಯಲ್ಲೂ ಸ್ವಲ್ಪ ನಿಧಾನ. ಈ ಎತ್ತುಗಳು ಅದೇನೇ ಎಂದರೂ ಆ ಹಳೆಯ ಕೋಣದ ಜೋಡಿಯಿದ್ದಂತೆ ಯಾವ ಎತ್ತಿನ ಜೋಡಿಗಳು ಬರಲಾರದೂ ಎನ್ನಿಸಿತು.

ಕಲಘಟಿಕೆಯಿಂದ ತಂದ ಹಿಂದಿನ ಎರಡು ಜೊತೆ ಎತ್ತುಗಳಿಗಿಂತ, ಹಿಲ್ಲೂರಿನ ಸುಬ್ರಾಯನ ಕಡೆಯಿಂದ ತಂದ ಹಳೆಯ ಕೋಣದ ಜೋಡಿಗಳೇ ಭಲವಾಗಿದ್ದವೂ ಎನಿಸಿತು. ಅಂದು ಆ ಹಳೆಯ ಕೋಣದ ಜೋಡಿಗಳಿದ್ದಾಗ, ತನ್ನ ಬೇಸಾಯ ಮುಗಿದ ಮೇಲೆ ಅದೆಷ್ಟೋ ಜನರಿಗೆ ಊಳಿಕೊಟ್ಟು ಸ್ವಲ್ಪ ಮನೆ ಕರ್ಚಿಗೆ ಎಂದು ಹಣ ಮಾಡಿಕೊಂಡದ್ದು ಇತ್ತು. ಆಗೆಲ್ಲ ಕಬ್ಬಿನ ಗಾಣದ ಸಮಯದಲ್ಲಿ ಗಾಣಕ್ಕೆ ಅಪರೂಪಕ್ಕೆ ನಮ್ಮ ಕೋಣಗಳನ್ನು ಕಟ್ಟಿದಾಗ, ಅವುಗಳ ಸಾಮರ್ಥ್ಯವನ್ನು ನೋಡಿ ಅದೆಷ್ಟೋ ಜನ ಹುಬ್ಬೇರಿಸಿದ್ದು ಇತ್ತು. ಹಾಗೆ ಅಪರೂಪಕ್ಕೆ ಕಬ್ಬಿನ ಗಾಣಕ್ಕೆ ತನ್ನ ಕೋಣಗಳನ್ನು ಕಟ್ಟಿದ್ದೂ ಕೂಡ ತಪ್ಪಾಯಿತೆಂದು ಈಗ ಎನಿಸುತ್ತಿದೆ.  ಆ ದಿನ ಇನ್ನೂ ಸರಿಯಾಗಿ ನೆನಪಿದೆ ಆತನಿಗೆ, ವಾಸರೆಯ ತಿಮ್ಮಣ್ಣನ ಗಾಣಕ್ಕೆ ಕೋಣ ಕಟ್ಟಿದ್ದಾಗ ಅವರ ಗಾಣ ನೋಡಲು ಬಂದಿದ್ದ ಆತನ ಹೆಂಡತಿಯ ಚಿಕ್ಕವ್ವಿಯ ಮಗ ಹೂವಣ್ಣ. ಬಂದವನು ತನ್ನ ಹೆಂಡತಿಯ ಸಂಬಂಧಿಕನಾಗಿದ್ದರಿಂದ ಸ್ವಲ್ಪ ಹೆಚ್ಚಾಗಿಯೇ ಮಾತನಾಡಿಸಿದ್ದ. ಅದೇ ತಪ್ಪಾಗಿದ್ದು. ಆ ಜನರೇ ಹಾಗೇ ಅವರಿಗೆ ತಮ್ಮ ಕೆಲಸವಿದ್ದಾಗಲೇ ಸಂಬಂಧವನ್ನು ನೆನೆಯುತ್ತಾರೆ ಎನ್ನುವುದು ಆಗ ತಿಳಿದಿರಲಿಲ್ಲ. ಅವರ ಮದುವೆಯಲ್ಲಿ ಇದೇ ಹೂವಣ್ಣನ ಮನೆಯವರು ಹೊಸ ಮದುಮಕ್ಕಳಿಗೆ ಒಂದೊಂದು ಸ್ಟಿಲಿನ ತಾಟು ಹಾಕಿ, ಉಡುಗೆರೆ ಹೊದ್ದು, ಹೊರಟು ಹೋದವರು, ಹೊಸ ಮದುಮಕ್ಕಳೆಂದು ಊಟಕ್ಕೂ ಕರೆದಿರಲಿಲ್ಲ. ಒಂದೆರಡು ಬಾರಿ ಅವನೂರ ಬಂಡಿ ಹಬ್ಬಕ್ಕೆ ಕರೆದಾಗ ಬಂದು ಕೋಳಿ ಆಸಿ ಉಂಡು ಹೋದರೇ ಹೊರತು ಅವರೂರಿನ ಬಂಡಿ ಹಬ್ಬಕ್ಕೆ ಎಂದು ಕರೆದಿರಲಿಲ್ಲ. ಇದೆಲ್ಲ ಗೊತ್ತಿದ್ದರೂ ಅಂತಹ ವ್ಯಕ್ತಿ ಅಲ್ಲಿಗೆ ಬಂದಾಗ ’ನಾನ್ಯಾಕೆ ಮಾತನಾಡಿಸಿದನೋ’ ಎಂದು ಅರ್ಥವಾಗಲಿಲ್ಲ. ಆಗ ಮಾತನಾಡಿದ್ದೇ ತಪ್ಪು ಎಂದು ಈಗ ಎನ್ನಿಸುತ್ತಿದೆಯಾದರೂ ಏನು ಮಾಡಲು ಆಗತ್ತೆ. ಕೆಟ್ಟ ಮೇಲೆ ಬುದ್ದಿ ಬಂದರೆ ಏನು ಪ್ರಯೋಜನ. ಮತ್ತೆ ಕೆಡದಂತೆ ನೋಡಬಹುದೇ ಹೊರತು ಕೆಟ್ಟು ಕಳೆದುಕೊಂಡದ್ದು ಮತ್ತೆ ಬರುತ್ತದೆಯೇ?

ಅಂದು ಗಾಣಕ್ಕೆ ಕಟ್ಟಿದ ಆ ಕೋಣಗಳನ್ನು ನೋಡಿದ ಹೂವಣ್ಣನ ಕಣ್ಣು ಅವನ ಕೋಣಗಳ ಮೇಲೆ ಇತ್ತು ಎನ್ನುವುದು ವಿಠ್ಠಲನಿಗೆ ನಂತರ ತಿಳಿಯಿತು. ಒಂದೆರಡು ದಿನಗಳು ಕಳೆದ ಮೇಲೆ ಇನ್ನೇನು ಗಾಣ ಮುಗಿಯುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ, ವಿಠ್ಠಲ ತನ್ನ ಕೋಣಗಳನ್ನು ಊರಿಗೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಿದ್ದ. ಆಗ ಅವನಿದ್ದಲ್ಲಿಗೆ ಬಂದ ಹೂವಣ್ಣ " ತಮ್ಮಾ ನಾಡ್ದಿಗೆ ನಮ್ಮ ಮನಿಲೂ ಗಾಣ ಇಟ್ಕಂಡಿ, ನೀ ಮಾತ್ರೆ ನಿನ್ನ ಕೋಣ್ಗೋಳ ನನ್ನ ಗಾಣಕ್ಕೆ ಕಟ್ಟದ್ರರೆ ಆಣ್ಗೂ ಇಟ್ಟ ಅನುಕೂಲ ಆತತ್" ಎಂದಾಗ, ವಿಠ್ಠಲನಿಗೆ ಅರ್ಧಂಬರ್ಧ ಮನಸ್ಸಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ "ಬೇಡಾ ಅಣ್ಣಾ, ಮೂರ್ನಾಲ್ಕ ದಿನಾ ಆಯ್ತ, ನಾನ್ ಮನಿ ಇಂದೆ ಹೊರ್ಗೆ ಬಂದೆ. ಪಾಪ ಕೊಣ್ಗೋಳಿಗೂ ತ್ರಾಸ್ ಆಗಿರ್ತಿದ" ಅಂದ.

"ತಮ್ಮಾ ನಂದೇನ್ ಬಾಳ್ ದಿವ್ಸಾ ಆಗುದಿಲ್ವಾ, ಬೇಕರೇ ತಂಗಿಗೆ ಇಲ್ಲಿಂದೆ ಯಾರ್ಕೋಡರು ಹೇಳ್ ಕಳಿಸ್ತಿ, ನಾ ಹೇಳಿದ್ರೆ ತಂಗಿ ಏನ್ ಬೇಡಾ ಅನ್ನುಲಾ" ಎಂದ.

"ಅದ್ಕಲ್ವಾ ಅಣ್ಣಾ ನಂಗೂ ಸ್ವಲ್ಪೆ ಮನಿ ಬದಿಗೆ ಕೆಲ್ಸ ಇದ, ತೋಟಕ್ಕೆ ನೀರ್ ಹಾಕ್ಬೇಕ್, ಕಾಯು ಇನ್ನೂ ಕುಯ್ಸಲಾ, ಬೆಣದ್ ಬದಿಗೆ ಹೋಗ್ದೇ, ಗೆರ್ಬೇಜಾ ಕುಯ್ದೇ ಉಂದ ವಾರ ಆಗೋಯ್ತ, ಅಲ್ಯಾರದ್ರೂ ಹುಕ್ಕದ್ರೆ ಮುಗ್ದೇ ಹೋಯ್ತ, ಉಂದ ಬೇಜಾನೂ ಇಡುಲಾ"

"ನಂಗೂ ಆರ್ಥಾ ಆತೀದಾ ತಮ್ಮಾ, ಆದ್ರೆ ಏನ್ ಮಾಡುದ್, ನಮ್ಮ್ದು ಉಂದೇ ವಾರ್ಲಾ ಆತಿದ್, ನಮ್ಮ ತಮ್ಮನ ವಾರ್ಲಾನೂ ಇಲ್ಲಾ ಏಗೆ, ಅಲ್ವಾ ಸಂಬಂಧಿಕರ್  ಆದ ಮೇಲೆ ಒಬ್ಬರಿಗೊಬ್ಬರ್ ಸಹಾಯ ಮಾಡ್ದೇ ಇದ್ರೆ ಹೆಂಗೆ? ನೀನೇ ಬರ್ಬೇಕ್ ಅನ್ನುದ್ ಇಲ್ಲಾ, ನಿನ್ನ ಕೊಣ್ಗೋಳ್ ಕುಟ್ರು ಸಾಕ, ನಾನೇ ತಕಂಡೆ ಹೋಗೆ ಗಾಣಕ್ಕೆ ಕಟ್ಟತಿ, ನೀ ಬೇಕರೆ ನಿಂದೆಲ್ಲಾ ಕೆಲ್ಸಾ ಮುಗ್ಸಕಂಡೆ ಬಂದೆ ಕೊಣ್ಗೋಳ್ ಹುಡ್ಕಂಡೆ ಹೋಗಕ್."

ವಿಠ್ಠಲಿನಿಗೂ ಒಂದು ಸಾರಿ ಇವನು ಇನ್ನೂ ಬಿಡುವುದಿಲ್ಲ ಅನ್ನಿಸಿ, "ಆಯ್ತ ಹಂಗಾರೆ, ನೀನ್ ಕೊಣ್ಗೋಳ್ ಹುಡ್ಕಂಡೆ ಹೋಗ, ನಂಗೆ ಗಾಣ ಮುಗದದ್ದೇ ಹೇಳ್ ಕಳ್ಸ್ ನಾ ಬಂದೆ ತಕಂಡೆ ಹೋಗ್ವೆ" ಎಂದ.

ಅವನು ಅದ್ಯಾವ ಗಳಿಗೆಯಲ್ಲಿ ಒಪ್ಪಿಗೆ ಕೊಟ್ಟನೋ, ಅದೇ ತಪ್ಪಾಗಿ ಹೋಯಿತು ಅನಿಸಿದ್ದು ನಂತರವೇ. ಹೂವಣ್ಣನಿಗೆ ಬೇಕಾಗಿದ್ದೂ ಅದೇ, ಖುಸಿಯಿಂದ ಕೋಣಗಳನ್ನು ಹೊಡೆದು ಕೊಂಡು ಹೋದ. ಗಾಣ ಮುಗಿದ ಮೇಲೆ ಅವನ ಪಾಲಿಗೆ ಬಂದ ಒಂದಿಷ್ಟು ಕಬ್ಬು, ಅವೆ ಬೆಲ್ಲ ತೆಗೆದುಕೊಂಡು ಅವನ ಊರಿಗೆ ಹೋದ ವಿಠ್ಠಲ. ಊರಿಗೆ ಬಂದು ಆಗಲೇ ಹದಿನೈದು ದಿನಗಳು ಕಳೆದಿದ್ದವೂ. ಅವನಿಗೂ ಊರ ಕಡೆ ಸ್ವಲ್ಪ ಕೆಲಸವಿದ್ದುದರಿಂದ ಹೂವಣ್ಣನ ಬಗ್ಗೆಯಾಗಲೀ, ಕೋಣಗಳ ಬಗ್ಗೆಯಾಗಲೀ ಯೋಚಿಸಲು ಹೋಗಿರಲಿಲ್ಲ. ’ಕೆಲಸ ಮುಗ್ದ ಕೂಡ್ಲೇ ಹೇಳ್ ಕಳಸ್ತಿ’ ಎಂದು ಕೋಣಗಳನ್ನು ಹೊಡೆದುಕೊಂಡು ಹೋಗುವಾಗ ಹೇಳಿದವನು ಎರಡು ವಾರ ಕಳೆದರೂ ಸುದ್ದಿ ಕಳಿಸಿರಲಿಲ್ಲ. ತನ್ನ ಹಾಗೆ ಅವನು ಕೆಲಸದಲ್ಲಿ ಮುಳುಗಿರಬೇಕು ಎಂದು ಕೊಂಡವನು, ’ಹೆಂಗೂ ಎರ್ಡವಾರ ಕಳ್ದೆ ಆಗಿದ್, ಇನ್ನುಂದ್ ವಾರ ಬಿಟ್ಟೇ ನೋಡ್ವಾ, ಸುದ್ದಿ ಬಂದ್ರೂ ಬಂತ’ ಎಂದು ತನ್ನಷ್ಟಕ್ಕೆ ಹೇಳಿಕೊಂಡು ಸುಮ್ಮನಾದ. ಮತ್ತೆ ಇನ್ನೆರಡೂ ವಾರ ಕಳೆದರೂ ಹೂವಣ್ಣನಿಂದ ಸುದ್ದಿ ಬರದೇ ಇದ್ದಾಗ, ಇನ್ನೂ ತಡ ಮಾಡುವುದು ಬೇಡ ಎಂದು, ಆ ದಿನ ಬೆಳಿಗ್ಗೆ ಹೆಂಡತಿಗೆ ಹೂವಣ್ಣನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೊರಟ.

ಹೂವಣ್ಣನ ಮನೆ ತಲುಪಿದಾಗ ಮಟ ಮಟ ಮಧ್ಯಾಹ್ನ. ಬೇಸಿಗೆಯ ದಿನಗಳು ಕಾಲಿಟ್ಟದ್ದರಿಂದ ಬಾಯಾರಿಕೆಯ ಜೊತೆಗೆ ಹಸಿವೂ ಕೂಡ ಕಾಡುತ್ತಿತ್ತು. ಹೇಗೂ ಹೂವಣ್ಣನ ಮನೆ ಇದೆಯಲ್ಲ ಅಂದು ಅಲ್ಲಿಯವರೆಗೂ ತಡೆದುಕೊಂಡು ಬಂದಿದ್ದ. ಹೂವಣ್ಣನ ಮನೆ ತಲುಪಿದಾಗ ಹೂವಣ್ಣ ಮನೆಯ ಜಗುಲಿಗೆ ಹೊಂದಿಕೊಂಡ ಚಿಟ್ಟೆಯ ಮೇಲೆ ಕುಳಿತಿದ್ದ. ವಿಠ್ಠಲ ಅವನ ಮನೆ ಬಾಗಿಲವರೆಗೂ ಬಂದರೂ, ನೋಡಿಯೂ ನೋಡದವನಂತೆ ಕುಳಿತಿದ್ದ. ಇವನೇ ಏನು ವಾಸ್ರೆ ಗಾಣದಲ್ಲಿ ಸಂಬಂಧದ ಬಗ್ಗೆ ಮಾತನಾಡಿದ್ದು ಎನ್ನುವ ಸಂದೇಹ ಬರದೇ ಇರಲಿಲ್ಲ. ಮನೆಯವರೆಗೆ ಬಂದವರನ್ನು ಮಾತನ್ನಾಡಿಸಲು ಮನಸ್ಸಿಲ್ಲದವರಿಗೆ ಸಂಬಂಧದ ಅರ್ಥ ತಿಳಿದಿರುತ್ತದೆಯೇ. ಅವರ ಮನೆಯವರೆಗೆ ಅವನ ಕೋಣಗಳಿಗಾಗಿ ಅವನೇ ಬಂದಿದ್ದರಿಂದ ಅವನಾದರೂ ಮಾತನಾಡಿಸಬೇಕಲ್ಲವೇ.

ಹಾಗಾಗಿ ಆತ "ಹೂವಣ್ಣ" ಎಂದು ಕರೆದ. "ಹೂಂ" ಎನ್ನುವುದನ್ನು ಬಿಟ್ಟರೆ ಮತ್ಯಾವ ಮಾತು ಬರಲಿಲ್ಲ ಹೂವಣ್ಣನ ಬಾಯಿಂದ.

ಇನ್ನೂ ತಡಮಾಡುವುದು ಬೇಡ ಎಂದು "ಆಣ್ಣಾ ಗಾಣ ಎಲ್ಲಾ ಮುಗಿತೆ?" ಎಂದು ಪೀಠಿಕೆ ಹಾಕಿ, "ಗಾಣಾ ಮುಗ್ದ್ರೆ ಕೋಣ ತಕಂಡೆ ಹೋಗ್ಲೆ?" ಎಂದ ವಿಠ್ಠಲ.

ಅದಕ್ಕೆ ಹೂವಣ್ಣ " ಹ, ಗಾಣಾ ಮುಗಿತ, ಆದ್ರೆ ಕೋಣ ತಕ್ಕಂಡೆ ಹೋಗುಕೆ ಕೊಣ್ಗೋಳ್ ಇರ್ಬೇಕಲ್ಲಾ?" ಎಂದಾಗ ವಿಠ್ಠಲಿನಿಗೆ ಅವನ ಮಾತಿನ ಅರ್ಥವಾಗದೇ "ಹಂಗಂದ್ರೆ, ಕೊಣವ ಇಲ್ಲೆ ಹೋಗವ್" ಎಂದು ಕೇಳಿದ.

ಹೂವಣ್ಣನಿಗೆ ಮಾತು ಕಲಿಸಬೇಕೇ, ಸುಳ್ಳು ಹೇಳುವುದನ್ನು ಅವನಿಗೆ ಹೇಳಿ ಕೊಡಬೇಕೇ. ಆತ ಈ ರೀತಿಯ ಅದೆಷ್ಟೋ ಗುರುವಿಲ್ಲದ ವಿದ್ಯೆಗಳನ್ನು ಕಲಿತವನಲ್ಲವೇ . ತಕ್ಷಣವೇ ಆತ "ಏನ್ ಹೇಳುದ್ ತಮ್ಮಾ, ನಮ್ಮ ಗಾಣಾ ಮುಗಿತೇ ಇದ್ದಂಗೆ ಅವ್ಕೆ ಯಾರ್ದೋ ದೃಷ್ಠಿ ಬಿಸ್ಟಿ ಆಯ್ತಾ ಏನಾ ಬೆಲಾ, ಕಣ್ಣಲ್ಲೇ ಏನೋ ಹೂವ್ ಬಿದ್ದದ್ದೇ ಹೆಳೆ, ಉಂಥಾರಾ ಮಾಡ್ದಂಗೆ ಮಾಡೆ ಸತ್ತೇ ಹೋಗ್ಬಿಟ್ಟು, ನಿಂಗೆ ಹೇಳ್ಕಳಿಸುವಾ ಅಂದ್ರೆ ಹೆಂಗೆ ಹೇಳುದ್ ಅಂದೆ ತಿಳಿದೇ ಸುಮ್ಗಾಗ್ಬಿಟ್ಟೆ" ಎಂದು ಆಗ ತಾನೆ ಹೊಳೆದ ಸುಳ್ಳನ್ನು ಸತ್ಯದಂತೆ ಬಿಂಬಿಸಿ ಹೇಳಿಯೇ ಬಿಟ್ಟ.

ವಿಠ್ಠಲಿನಿಗೆ ಏನು ಹೇಳಬೇಕೆಂದು ತಿಳಿಯದೇ ಗರಬಡಿದವನ ಹಾಗೆ ನಿಂತು ಬಿಟ್ಟ. "ಅಷ್ಟು ಚಲೋ ಇದ್ದ ಕೊಣ್ಗೋಳಿಗೆ ಇದ್ಕಿದ್ದ ಹಂಗೆ ಏನಾಗುಕೆ ಸಾದ್ಯ. ನಾನೇ ತಪ್ಪ ಮಾಡ್ದೆ, ಕೊಣ್ಗೋಳ ನಾನೇ ತಕಂಡ್ ಬಂದೆ, ಗಾಣಾ ಮುಗ್ಸಕಂಡೆ  ಹುಡ್ಕಂಡೆ ಹೋಗ್ಬೇಕಾಗತ್, ಆದ್ರೆ ಏನ್ ಮಾಡುದ್, ಆವಗೆ ಹಿಂಗೆ ಆತಿದ್ ಅಂದೆ ಗುತ್ತಿಲ್ಲಾ ಆಗತ್ ಅಲ್ಲಾ. ಏಗೆ ಮತ್ತೆ ಮಳಗಾಲದ್ ಹೋಟಿಗೆ ವಾರ್ಲಾ ಇಲ್ಲಿಂದೆ ತರುದ. ತರುಕೆ ರೊಕ್ಕಾನಾದ್ರೂ ಇದೆ." ಹೀಗೆ ಅವನ ಮನಸ್ಸಲ್ಲಿ ಒಂದಿಷ್ಟು ಪ್ರಶ್ನೆಗಳು ಮೂಡಿ ಮರೆಯಾದವು. ಅವನ ಒಳ ಮನಸ್ಸಿಗೆ ಇದು ಸಾದ್ಯವಿಲ್ಲ ಅನ್ನಿಸಿದರೂ ಹೂವಣ್ಣನೊಂದಿಗೆ ವಾದ ಮಾಡಲು ಮನಸ್ಸಾಗದೇ ಹೊರಡಲು ಅನುವಾದ. ಹೂವಣ್ಣನಿಗೂ ವಿಠ್ಠಲ ಹೊರಟು ಹೋದರೆ ಸಾಕಿತ್ತು ಎನಿಸಿತೋ ಏನೋ? ಏನು ಮಾತನ್ನಾಡದೇ ಸುಮ್ಮನೆ ಮತ್ತೆ ಚಿಟ್ಟೆಯ ಮೇಲೆ ಕುಳಿತ. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸುಮ್ಮನೆ ಅಲ್ಲಿಂದ ಹೊರಟ ವಿಠ್ಠಲ. ಮನದಲ್ಲಿ ಮಳೆಗಾಲದ ಹೋಟಿಗೆ ಏನು ಮಾಡುವುದು? ತನ್ನ ಕೋಣಗಳು ನಿಜವಾಗಿಯೂ ಸತ್ತು ಹೋಗಿರಬಹುದೇ? ಹೀಗೆ ತಕ್ಷಣಕ್ಕೆ ಉತ್ತರವಿಲ್ಲದ ಹಲವು ಪ್ರಶ್ನೆಗಳು ಸುಳಿಯ ತೊಡಗಿದವು.

ಮನೆಗೆ ಬಂದರೂ ಊಟ ಮಾಡಲು ಮನಸ್ಸಾಗಲಿಲ್ಲ. ಹೆಂಡತಿಗೆ ನಡೆದದ್ದನ್ನೆಲ್ಲ ಹೇಳಿ, "ಇನ್ಮುಂದೆ ನಿಮ್ಮ ಚಿಕ್ಕವ್ವಿ ಮನಿಯೋರ ಬಂದ್ರೆ ಜಾಸ್ತಿ ಮೆರವಣಿಗೆ ಮಾಡುದ್ ಬ್ಯಾಡಾ" ಎಂದು ಎಚ್ಚರಿಕೆಯನ್ನು ನೀಡಿದ. ಆಮೇಲೆ ಹಾಗೂ ಹೀಗೂ ಮಾಡಿ ಅವನೂರ ಸಹಕಾರಿ ಸಂಘದಿಂದ ಸಾಲ ಮಾಡಿ ಹೊಸ ಎತ್ತುಗಳನ್ನು ಕೊಂಡಿದ್ದ. ಸತ್ಯ ಎಷ್ಟು ದಿನ ಮುಚ್ಚಿಡಲು ಸಾದ್ಯ. ಅದೊಮ್ಮೆ ಹೊರ ಬರಲೇ ಬೇಕು. ಅವನ ಕೋಣದ ವಿಷಯ ಆಗಲೇ ಜನರಿಂದ, ಜನರ ಬಾಯಿಗೆ ಬಿದ್ದು ಸತ್ಯವೂ ಹೊರಗೆ ಬಂದಿತ್ತು. ಅವನ ಕೋಣಗಳು ಹೂವಣ್ಣ ಹೇಳಿದಂತೆ ಸತ್ತು ಹೋಗಿರಲಿಲ್ಲ. ಹೂವಣ್ಣ ಅವಗಳನ್ನು ಕುಮ್ಟೆ ಕಡೆಯ ಅವನ ಪರಿಚಿತರಾರಿಗೋ ತನ್ನದೇ ಕೋಣಗಳೆಂದು ಮಾರಿ ಕೊಟ್ಟಿದ್ದ ಎಂದು ಅವನನ್ನು ಹತ್ತೀರದಿಂದ ಬಲ್ಲವರಿಂದ ತಿಳಿದು ಬಂತು. ಅವನಿಗೆ ನಿಜ ತಿಳಿಯುವ ಹೊತ್ತಿಗೆ ಆ ಘಟನೆ ಮುಗಿದು ಆಗಲೇ ಬಹಳ ದಿನಗಳಾಗಿದ್ದರಿಂದ ಆ ಕುರಿತು ಯೋಚಿಸಲು ಹೋಗಿರಲಿಲ್ಲ. ಇದಾದ ಮೇಲೆ ಒಬ್ಬರ ಮುಖವನ್ನು ಒಬ್ಬರು ನೋಡಿರಲೂ ಇಲ್ಲ.

ಹೀಗೆ ಬಹಳ ಹೊತ್ತಿನಿಂದ ಯೋಚಿಸುತ್ತಾ ಕುಳಿತಿದ್ದ ಅವನಿಗೆ ಹೊತ್ತು ಮೇಲೇರುತ್ತಿರುವುದನ್ನು ನೋಡಿ, ಹೋ ಇಷ್ಟೊತ್ತು ಕುಳಿತು ಬಿಟ್ಟನೇ ಎಂದನಿಸಿ ಸೊಪ್ಪು ಕೊಯ್ಯಲು ಹೊರಟ. ಬೇಗ ಬೇಗ ಒಂದಿಷ್ಟು ಸೊಪ್ಪು ಕೊಯ್ದು ತಂದು ಕೊಟ್ಟಿಗೆಯಲ್ಲಿ ಹಾಸಿ ಬುಟ್ಟಿ ಹಿಡಿದು ಮನೆಯ ಕಡೆಗೆ ಹೊರಟ. ಮನೆಯ ಸಮೀಪ ಬರುತ್ತಿದ್ದಂತೆ, ಮನೆಯ ಜಗುಲಿಯ ಒಳಗೆ ಯಾರೋ ಕುಳಿತು ಮಾತನ್ನಾಡುವುದು ಕೇಳಿಸಿದಂತಾಗಿ ಮನೆಯ ಕಡೆ ಸ್ವಲ್ಪ ಲಕ್ಷ ಕೊಟ್ಟು ಮಾತನ್ನು ಆಲಿಸ ಹತ್ತಿದ.

"ತಂಗಿ ವಿಠ್ಠಲ ಇಟ್ಟೊತ್ತಿಗೆ ಬತ್ಯಾ, ಇನ್ನೂ ತಡಾ ಆತಿದಾ ಹೆಂಗೆ?" ಎಂದು ಕೇಳಿದವನ ಧ್ವನಿ ಎಲ್ಲೋ ಕೇಳಿದಂತಿದೆಯಲ್ಲ. ಬಹುಷಃ ಆತನಿರಬಹುದೇ? ಆತ ಈಗೇಕೆ ಮತ್ತೆ ಇಲ್ಲಿಗೆ ಬಂದ ಎನ್ನಿಸಿ, ನಾಣಿಗೆ ಕೊಟ್ಟಿಗೆಯ ಪಕ್ಕದಲ್ಲಿ ಸೊಪ್ಪಿನ ಮುಟ್ಟಿ ಇಟ್ಟು ಒಳಗೆ ಬರುತ್ತಿದ್ದಂತೆ ವಿಠ್ಠಲನ ಹೆಂಡತಿ, "ಆಣ್ಣಾ ಅವ್ರ ಬರೂಕೆ ಆಯ್ತ" ಎಂದವಳು ವಿಠ್ಠಲನನ್ನು ನೋಡಿ "ಅದೆ ಬಂದೇ ಬಿಟ್ರ" ಎಂದಳು.

ವಿಠ್ಠಲ ಅಷ್ಟೊತ್ತಿಗೆ ಒಳ ಜಗುಲಿಯ ಸಮೀಪಕ್ಕೆ ಬಂದು ಒಳಗೆ ಇಣುಕಿ ನೋಡಿದ. ಹೌದು ಅವನೇ. ಅವನು ಇಷ್ಟು ದಿನ  ಯಾರನ್ನು ನೋಡ ಬಾರದು, ಒಂದೊಮ್ಮೆ ನೋಡಿದರೂ ಮಾತನ್ನಾಡಿಸಬಾರದು ಎಂದು ಕೊಂಡಿದ್ದನೋ, ಅವನು ಮನೆಯ ಒಳಗೆ ಬಂದು ಕುಳಿತಿದ್ದ. ಅವನೆಂದು ಕೆಲಸವಿಲ್ಲದೇ ಬರುವವನಲ್ಲ, ಏನೋ ಯೋಜನೆ ಹಾಕಿ ಯೋಚಿಸಿ ಬಂದಿರ ಬೇಕು ಎನ್ನಿಸಿತು. ಮನೆಯ ಜಗುಲಿಯವರೆಗೆ ಬಂದವನು ಇನ್ನೇನು ಮನೆಯೊಳಗೆ ಅಡಿ ಇಡಬೇಕು ಎನ್ನುವಾಗ ಒಳಗೆ ಕುಳಿತಾತ "ವಿಠಲ, ಏಗ್ ಬಂದೆ, ಬಾ" ಎನ್ನುತ್ತಾ ಅವನ ಮನೆಯಲ್ಲಿ ಅವನನ್ನೇ ಆಹ್ವಾನಿಸಿದ. ವಿಠ್ಠಲ ಏನು ಮಾತನ್ನಾಡದೇ "ಹೂಂ" ಎಂದಷ್ಟೇ ಹೇಳಿ, ತಾಂಬೂಲದ ತಟ್ಟೆಗೆ ಕೈ ಹಾಕಿ ಕವಳ ಹಾಕಲು ಅಣಿಯಾದ. ವಿಠ್ಠಲನು ಅವನನ್ನು ಮಾತನ್ನಾಡಿಸಲಿಲ್ಲ, ಅವನು ವಿಠ್ಠಲನನ್ನು ಮಾತನಾಡಿಸಲಿಲ್ಲ. ಇಬ್ಬರು ತಮ್ಮಷ್ಟಕ್ಕೆ ತಾವೇ ಸುಮ್ಮನೆ ಕುಳಿತಿದ್ದರು. ವಿಠ್ಠಲನ ಹೆಂಡತಿ ಬಂದು "ಏನ್ರೆ, ಮಿಂದ್ಕಂಡರೂ ಬರ್ರಿ, ಗಂಜಿ ಉಣ್ಣಕಿ" ಎಂದು ಅವನಿಗೆ ಸ್ನಾನದ ಎಚ್ಚರ ಮಾಡಿದಳು. ವಿಠಲ ಸ್ನಾನ ಮಾಡಿ ಮುಗಿಸಿ ಬರುವಷ್ಟರಲ್ಲಿ ಮನೆಗೆ ಬಂದು ಕುಳಿತಿದ್ದ ಹೂವಣ್ಣ ಬಟ್ಟಲಿನ ಮುಕ್ಕಾಲು ಭಾಗ ಗಂಜು ಕಾಲಿಯಾಗಿತ್ತು. ವಿಠ್ಠಲ ಊಟಕ್ಕೆ ಕುಳಿತು ಕೊಳ್ಳುವಷ್ಟರಲ್ಲಿ ಅವನ ಊಟವೂ ಮುಗಿದಿತ್ತು. ವಿಠ್ಠಲ ಏನನ್ನು ಕೇಳದೇ ಸುಮ್ಮನೆ ಊಟ ಮಾಡಿ ಹೊರಗೆ ಬಂದ. ಹೂವಣ್ಣ ಏನನ್ನೋ ಹೇಳಲು ಬಂದವನು ಮನಸ್ಸಿನಲ್ಲೇ ಇಷ್ಟೊತ್ತು ಅದನ್ನು ಅಧುಮಿಕೊಂಡು ಕುಳಿತಿದ್ದ. ವಿಠ್ಠಲಿನಿಗೂ ಗೊತ್ತು ಹೂವಣ್ಣ ಹೀಗೆ ಸುಮ್ಮನೆ ಬಂದಿರಲಾರನೆಂದು. ಹಾಗಂತ ಅವನನ್ನು ಕೇಳಿ ತಿಳಿದು ಕೊಳ್ಳುವ ಅವಶ್ಯಕತೆ ವಿಠ್ಠಲಿನಿಗಿರಲಿಲ್ಲ.

ಊಟ ಮಾಡಿ ಬಂದವನು ಸ್ವಲ್ಪ ಹೊತ್ತು ಅಡ್ಡಾಗೋಣವೆಂದು ಮಾಳಿಗೆಗೆ ಹೋಗಲು ಅಣಿಯಾಗುತ್ತಿದ್ದುದನ್ನು ನೋಡಿದ ಹೂವಣ್ಣ ಇನ್ನೂ ತಡ ಮಾಡುವುದು ಬೇಡ ಎಂದುಕೊಂಡು, "ವಿಠಲ, ಯಾರೋ ಹೇಳ್ತೇ ಇದ್ದದ್ರ, ನೀನೇನೋ ವಾರ್ಲಾ ಮಾರ್ಬೇಕ ಅಂತೇ ಇಂವಿ ಕಡಾ. ಕುಡುದೇ ಆದ್ರೆ ಹೇಳ ನಾನೇ ತಕಂಡೆ ಹೋತಿ. ಒಳ್ಳೆ ರೇಟ್ ಹಿಡ್ಕಂಡೆ ಕುಡ್ತಿ" ಎಂದು ಒಂದೇ ಉಸಿರಿನಲ್ಲಿ ಹೇಳಿದ.

ವಿಠ್ಠಲನಿಗೆ ಅರ್ಥವಾಗಿ ಹೋಯಿತು, ಇದಕ್ಕೆ ಆತ ಬಂದಿರಬೇಕೆಂದು. ಹೋಗಿ ಹೋಗಿ ಯಾರಾದ್ರೂ ಇವನಂತೋರಿಗೆ ಮತ್ತೆ ಎತ್ತುಗಳನ್ನು ಕೊಡಕ್ಕೆ ಸಾದ್ಯಾನಾ? ಅದು ಇರುಳು ಕಂಡ ಬಾವಿಗೆ ಹಗಲಲ್ಲಿ ಬೀಳುವುದುಂಟೆ. "ಇಲ್ಲಾ ವಾರ್ಲಾ ಕುಡುಲಾ, ನಿಂಗೆ ಯಾರ್ ಹೇಳದ್ರ ನಾ ವಾರ್ಲಾ ಕುಡ್ತಿ ಅಂದೆ" ಎಂದ

"ಮೊನ್ನಗೆ ನಿಮ್ಮೂರ ಹೊನ್ನಯ್ಯ ಸಿಕ್ಕದ, ನೀನೇನೋ ವಾರ್ಲಾ ಮಾರ್ತೇ ಇಂವಾ ಅಂದ, ಅದ್ಕೆ ಕೇಳುವಾ ಅಂತೆ ಬಂದೆ"

"ಹೌದೆ, ನಾ ಇಲ್ಲಿವರಿಗೂ ಕೊಡ್ಬೇಕ ಅಂತೇ ಇದ್ದೆ, ಏಗೆ ನೋಡಿದ್ರೆ ಕುಡುದೇ ಬ್ಯಾಡಾ ಅನ್ನಿಸ್ತೇ ಇದ. ನಂಗೆ ಹೆಂಗೂ ಉಂದೆರ್ಡ ವರ್ಷ ತೊಂದ್ರೆ ಇಲ್ಲಾ.  ಅವ ಸತ್ರೆ ಇಲ್ಲೇ ಸಾಯ್ತವ. ಬೇರೆ ಕಡಿಗೆ ಹೋಗೆ ಸಾಯುದ್ ಬ್ಯಾಡಾ" ಎಂದಿಷ್ಟು ಹೇಳಿ ತನ್ನ ಕೆಲಸ ಮಾತು ಮುಗಿಯಿತು ಎನ್ನುವಂತೆ ಮಾಳಿಗೆ ಏರಿದ ಮಧ್ಯಾನದ ನಿದ್ದೆಗಾಗಿ.

ಹೂವಣ್ಣ ಮತ್ತೇನನ್ನೂ ಹೇಳದೇ ವಿಠ್ಠಲನ ಹೆಂಡತಿ ಮಾಡಿ ಕೊಟ್ಟ ಚಹಾ ಕುಡಿದು ಹೊರಟು ಹೋದ. ವಿಠ್ಠಲನಿಗೆ ನಿದ್ದೆ ಬಾರದಿದ್ದರೂ ಅವನಿರುವವರೆಗೆ ಕೆಳಗೆ ಬರುವ ಮನಸ್ಸಾಗಲಿಲ್ಲ. ಅವನು ಹೋದ ಮೇಲೆ ಕೆಳಗೆ ಬಂದು ಚಹಾ ಕುಡಿದು ಬೆಳಿಗ್ಗೆ ಹೊರಗೆ ಮೇಯಲು ಬಿಟ್ಟ ದನಗಳು ಬಂದರೆ ಕೊಟ್ಟಿಗೆ ಹತ್ತಿರ ಬಂದರೆ ಕಟ್ಟಿ ಬರುತ್ತೇನೆ ಎನ್ನುವುದಾಗಿ ಹೆಂಡತಿಗೆ ಹೇಳಿ ದನ ಕಟ್ಟಿ ಬರಲು ಕೊಟ್ಟಿಗೆಯತ್ತ ಹೊರಟ.

ಮಂಜು ಹಿಚ್ಕಡ್

Saturday, November 1, 2014

ಕನ್ನಡ

ಜನರಲ್ಲಿ ಉಸಿರಾಗಿ,
ನೆಲದಲ್ಲಿ ಹಸುರಾಗಿ,
ಬದುಕಲ್ಲಿ ಹಸನಾಗಿ,
ಬೆಳೆದು ಬಾಳಲಿ ಕನ್ನಡ.

ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
ಈ ನಮ್ಮ ಕನ್ನಡ.


--ಮಂಜು ಹಿಚ್ಕಡ್