Monday, February 13, 2017

ಬಂದು ಜೊತೆಯಾಗದಿರು

ಬರದಿರು,
ಬಂದು
ಜೊತೆಯಾಗದಿರು
ನೀ ನನ್ನ ,

ಕತೆಯಾಗುವೆ
ನೀ,
ನನ್ನ ಜೊತೆ
ಇನ್ನಾರಿಗೋ
ಚಿನ್ನ!

                          -ಮಂಜು ಹಿಚ್ಕಡ್

Wednesday, February 8, 2017

ಧನ್ಯೋಸ್ಮಿ

ನನಗೆ ದಿನಾ ಬರೆಯೋ ಚಾಳಿ ಎಂದಿಗೂ ಇಲ್ಲ, ಎಲ್ಲೋ ಅಪರೂಪಕ್ಕೆ ಒಮ್ಮೆ ಏನೋ ನೆನಪಾಗಿ ಬರೆಯ ಬೇಕೆನಿಸಿದಾಗ ಮಾತ್ರ ನನ್ನ ಬರವಣಿಗೆ. ಮನಸ್ಸಿಗೆ ತೋಚಿದ್ದನ್ನೇ ಗೀಚುತ್ತೇನೆ, ಅದು ಸರಿ ತಪ್ಪು ಎನ್ನುವ ನಿರ್ಧಾರ ನನಗಿಲ್ಲ, ಅದೂ ಬೇಕು ಇಲ್ಲ. ಹಾಗೆ ಮನಸ್ಸಿನ ಮೂಲೆಯಲ್ಲಿದ್ದುದ್ದನ್ನು ಗೀಚಲು ಪ್ರಾರಂಭಿಸಿ ಅದೆಷ್ಟೋ ವರ್ಷಗಳಾಗಿದ್ದವು. ಹಾಗೆ ಗೀಚಿದ್ದು ಒಮ್ಮೊಮ್ಮೆ ಎಲ್ಲೋ ಬಿದ್ದು ಗೆದ್ದಲು ಹಿಡಿದಿದ್ದು ಇದೆ. ಬರವಣಿಗೆ ಕೇವಲ ನನ್ನ ಹವ್ಯಾಸಕ್ಕೆ ಮಾತ್ರ ಸೀಮೀತವಾಗಿದ್ದುದರಿಂದಲೂ ಅಥವಾ ಅದನ್ನು ಕೂಡಿಡುವ ಆಸೆ ಅಂದು ನನಗಿಲ್ಲದ್ದರಿಂದಲೋ ಏನೋ, ಹಾಗೆ ಗೀಚಿದ್ದರಲ್ಲಿ ಅದೆಷ್ಟೋ ಬರಹಗಳು ಎಲ್ಲೋ ಬಿದ್ದು ಗೆದ್ದಲು ಹಿಡಿದಿದ್ದು ಉಂಟು.

ಒಮ್ಮೆ ಹೀಗೆ ಅಂತರ್ಜಾಲದಲ್ಲಿ ಅದೇನೋ ಹುಡುಕುತ್ತಿರುವಾಗ ಯಾರದೋ ಬ್ಲಾಗಿನ ಕಿಡಕಿ ತೆರೆದು ಕೊಂಡಿತು. ಹಾಗೆ ಅದರೊಳಗೆ ಇಣುಕಿ ನೋಡುತ್ತಾ ಹೋದ ಹಾಗೆ, ಅದರೊಂದಿಗೆ ಇನ್ನೊಂದಿಷ್ಟು ಬ್ಲಾಗಗಳ್ ಅನಾವರಣವಾಯಿತು. ಮುಂದೆ ಅವೇ ನನಗೆ ನನ್ನದೇ ಆದ ಬ್ಲಾಗ್ ಅನ್ನು ತೆರೆಯಲು ಪ್ರೇರೆಪಣೆಯಾಯಿತು. ಬರೆದು ಎಲ್ಲೋ ಇಟ್ಟ ಹಳೆಯ ತುಣುಕುಗಳ ಜೊತೆಗೆ ಹೊಸ ಬರಹಗಳು ಸೇರಿ ಈ ಬ್ಲಾಗ್ " ಹೀಗೆ ಸುಮ್ಮನೆ " ಹುಟ್ಟಿ ಬೆಳೆಯತೊಡಗಿತು.

ಇಂದಿಗೆ ಸರಿಯಾಗಿ ಮೂರುವರೆ ವರ್ಷಗಳ ಹಿಂದೆ ಹುಟ್ಟಿಕೊಂಡ ಬ್ಲಾಗ್ ಇಂದು ಅರವತ್ತು ಸಾವಿರಕ್ಕೂ ಹೆಚ್ಚಿನ ಪುಟವೀಕ್ಷಣೆಯನ್ನು ಮೀರಿ ಮುಂದೆ ಸಾಗುತ್ತಿದೆ. ಇದಕ್ಕೆ ಮೂಲ ಕಾರಣ ನಿಮ್ಮೆಲ್ಲರ ಸಲಹೆ, ಪ್ರೋತ್ಸಾಹ ಹಾಗೂ ಹಾರೈಕೆ. ಅದು ಅಂದಿನಂತೆ, ಇಂದಿಗೂ, ಮುಂದಿಗೂ ಇರುತ್ತದೆ ಎನ್ನುವ ಬರವಸೆ ಸದಾ ನನಗಿದೆ. ನನ್ನ ಈ ಬರವಣಿಗೆಯ ಪಥದಲ್ಲಿ ಬಂದು ನಿಂತು ಓದಿ ಹಾರೈಸಿದ ತಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕವಾದ ಅನಂತಾನಂತ ಧನ್ಯವಾದಗಳು.

ಇಂತಿ ನಿಮ್ಮವ,

ಮಂಜು ಹಿಚ್ಕಡ್

Sunday, February 5, 2017

ಬದುಕು-ಬವಣೆ: ಭಾಗ ೩

ಬದುಕು-ಬವಣೆ: ಭಾಗ ೧ 
ಬದುಕು-ಬವಣೆ: ಭಾಗ ೨
ದೂರದರ್ಶನದಲ್ಲಿ ಬರುತ್ತಿದ್ದ ಧಾರವಾಹಿಯನ್ನು ನೋಡುವುದರಲ್ಲಿ ಮಗ್ನಳಾಗಿದ್ದ ಸೀತಕ್ಕನಿಗೆ ನಾಗಿ ಮನೆಯ ಕಂಪೌಂಡ ಹಾಕಿದ ಗೇಟು ತೆರೆದು ಒಳ ಬರುವುದಕ್ಕೆ ಮೊದಲೇ "ಉಡ್ತೆರೋ" ಎಂದು ಕರೆದಿದ್ದು ಕೇಳಲಿಲ್ಲ. ನಾಗಿಗೂ ಸೀತಮ್ಮನವರು ಒಳಗೆಲ್ಲೋ ಕೆಲಸ ಮಾಡುತ್ತಿರಬಹುದೆಂದೆನಿಸಿ, ಗೇಟು ತೆರೆದು ಒಳಬಂದು ಮತ್ತೆ ಗೇಟು ಮುಚ್ಚಿ ಜಗುಲಿಯ ಬಳಿ ಬಂದು ಒಳಗಡೆ ದ್ರಷ್ಟಿ ಬೀರುತ್ತಾ ಮತ್ತೊಮ್ಮೆ "ಉಡ್ತೆರೋ" ಎಂದು ಕೂಗಿದಳು. ಈಗ ಕೂಗಿದ ಕರೆ ಸೀತಕ್ಕನ ಕರ್ಣ ಪಟಲಗಳನ್ನು ತಲುಪಿ, ಬಾಯಿಂದ "ಓ, ಯಾರ್ ನಾಗಿನೇ" ಎನ್ನುವ ಪದಗಳು ಹೊರಬಂದವೇ ಹೊರತು, ಕಣ್ಣುಗಳು ದೂರದರ್ಶನ ನೋಡುವುದನ್ನು ಬಿಟ್ಟು ಕೊಡಲಿಲ್ಲ. ಅಷ್ಟರಲ್ಲೇ ಬಂದ ಜಾಹಿರಾತುಗಳು ಧಾರವಾಹಿಯ ಗುಂಗಿನಿಂದ ಸೀತಕ್ಕನನ್ನು ಹೊರಕ್ಕೆಳೆದು ತಂದವು. ಈಗ ಸೀತಕ್ಕನಿಗೆ ನಾಗಿ ಕರೆದಿದ್ದು ನೆನಪಾಯ್ತು.

"ನಾಗಿ ಬಾರೆ, ಹನ್ಮು ಹೆಂಗೀವಾ ಏಗೆ?" ಎಂದಳು.

"ಜ್ವರಾ ಬಿಡ್ತೆನೇ ಇಲ್ಲ್ರಾ, ಎಂತಾ ಮಾಡುದ ಅಂದ್ ತಿಳಿತೇನೇ ಇಲ್ರಾ".

"ಅಂಕೋಲಿಗರೂ ಕರ್ಕಂಡೆ ಹೋಗ್ಬಾರೆ, ನನ್ನ ಮಗ್ನ ಆಸ್ಪತ್ರಿಗರೂ ಕರ್ಕಂಡೆ ಹೋಗ್ಬಾ. ರಾತ್ರಿಗೆ ಬಂದಗೆ ಮಗಗೆ  ಹೇಳ್ತಿ. ಇಟ್ಟ ದಿವ್ಸಾ ಅಂದೆ ನೋಡ್ತಿ, ಒಂದ್ಸಲಾ ರಕ್ತಾ ಚಕಪ್ ಮಾಡ್ಸ".

"ಗೌರಿ ಒಡ್ತೆರೋ ಹಂಗೇ ಹೇಳ್ತಾ ಇದದ್ರಾ. ಅವ್ರು ಅಂಕೋಲಿಗೆ ಕರ್ಕಂಡ ಹೋಗುಕ ಹೇಳರ. ಆದ್ರೆ ಹಂಗೆ ಆತಿದಾ, ರೊಕ್ಕ ಬೆಡ್ರಾ".

"ಅದು ಹೌದ, ಆದ್ರೆ ನನ್ನ ಮಗ್ನ ಆಸ್ಪತ್ರಿಗೆ ನಿಂಗೆ ಯಾರ ರೊಕ್ಕ ಕುಡ ಅಂದರ".

"ಹಂಗಲ್ರಾ, ಒಡ್ತೆರೋ"

"ಹಂಗೂ ಇಲ್ಲಾ, ಹಿಂಗೂ ಇಲ್ಲಾ. ಸುಮ್ನೆ ನನ್ನ ಮಗ್ನ ಆಸ್ಪತ್ರಿಗೆ ಕರ್ಕಂಡೆ ಹೋಗ, ನಾ ಎಲ್ಲಾ ಹೇಳ್ತಿ. ಅಂವ್ಗೆನ್ ನೀವ್ ಹೊಸ್ಬರೆ. ಅಂವ್ಗೂ ನೀವ್ ಗುತ್ತಿದ್ದೋರೆ ಅಲ್ಲಾ".

"ಆದ್ರೂ ಉಡ್ತೇರೇ" ಇನ್ನೂ ಅವಳ ಮಾತು ಮುಗಿದಿರಲಿಲ್ಲ, ಅಷ್ಟರಲ್ಲಿ ಸೀತಕ್ಕ ಅವಳ ಮಾತನ್ನು ತಡೆದು " ಆದ್ರೂ ಇಲ್ಲ, ಏನು ಇಲ್ಲ. ನಾ ಹೇಳ್ದ ಮೇಲೆ ಮುಗಿತ್. ಅದಿರ್ಲೆ, ನೀನ್ ಏಗೆ ಇಲ್ಲಿಗೆ ಹೋಗದೆ,  

"ನಿಮ್ಕೋಡ ನಾ ವಾದಾ ಮಾಡುದ್ ಇತ್ತಾ, ನಿವೇಳ್ದಂಗೆ ಆಗ್ಲೆ" ಎಂದಳು ನಾಗಿ.

ಅದೇನೋ ನೆನಪಾದವಳಂತೆ ಸೀತಕ್ಕ ನಾಗಿಗೆ "ಅಲ್ವೆ ನೀನ ಉಂಡ್ಯಾ ಹೆಂಗೆ?"

"ಇಲ್ರಾ ಉಡ್ತೆರೋ, ಮಗಗ್ ಗಂಜಿ ಉಣ್ಸಿಟ್ಟ, ಬ್ಯಾಗ ಬರುವಾ ಅಂದೆ ಹೋದ್ರ, ಇಟ್ಟುತ್ತಾಯ್ತು".

"ಹೌದೆ ನಿಲ್ಲ ಹಂಗಾರೆ ಬಂದೆ" ಎಂದು ಒಳ ಹೋದಳು ಸೀತಕ್ಕ.  
ಹರೀಶ ಅಂಕೋಲೆಯಲ್ಲಿಯೇ ಇದ್ದರೂ ದಿನಾ ಮನೆಗೆ ಹಗಲಿನ ಹೊತ್ತಿನಲ್ಲಿ ಊಟಕ್ಕೆ ಬರುತ್ತಿರಲಿಲ್ಲ. ಅಪರೂಪಕೊಮ್ಮೆ ಯಾವಾಗಲೋ ಒಂದು ದಿನ ಊಟಕ್ಕೆ ಬರುತ್ತಿದ್ದ. ಅದೂ ತಿಂಗಳಿಗೆ ಒಂದೆರಡು ದಿನವಾದರೆ ಹೆಚ್ಚು. ಹಾಗಾಗಿ ಸೀತಕ್ಕನಿಗೆ ಮಗ ಮನೆಗೆ ಬರಲಿ ಅಥವಾ ಬರದೇ ಇರಲಿ ಮಗ ಬಂದರೆ ಇರಲಿ ಎಂದು ಸ್ವಲ್ಪ ಜಾಸ್ತಿಯೇ ಅಡಿಗೆ ಮಾಡಿಡುವುದು ವಾಡಿಕೆ. ಮಗ ಬಂದಿಲ್ಲವೆಂದರೆ ರಾತ್ರಿ ಬೆಳಿಗ್ಗೆ ಮಿಕ್ಕಿದ್ದ ಅನ್ನವನ್ನು ತಾನೇ ಊಟಮಾಡುತ್ತಿದ್ದಳು. ಇಂದು ಮನೆಗೆ ಬಂದ ನಾಗಿಯನ್ನು ನೋಡಿ ಒಳಗೆ ಮಿಕ್ಕಿದ್ದ ಅಡಿಗೆ ನೆನಪಾಗಿ ಒಳಗೆ ಬಂದಿದ್ದಳು. ಒಳಗೆ ಬಂದು ಒಂದು ಪಾತ್ರೆಯಲ್ಲಿ ಅನ್ನವನ್ನು, ಇನೊಂದು ಪಾತ್ರೆಯಲ್ಲಿ ಸ್ವಲ್ಪ ಸಾರನ್ನು ತಂದು ನಾಗಿಗೆ ಕೊಟ್ಟಳು.

ನಾಗಿ ಸಿತಕ್ಕ ಕೊಟ್ಟ ಅಡಿಗೆಯನ್ನು, ಗೌರಕ್ಕ ಕೊಟ್ಟ ಸಾರನ್ನು ತೆಗೆದುಕೊಂಡು ಅವಳ ಮನೆಯೆಡೆಗೆ ಹೋಗಬೇಕು ಅಂತಿದ್ದವಳನ್ನು ನಿಲ್ಲಿಸಿದಳು ಸೀತಕ್ಕ.

"ನಿಲ್ಲೆ ಹಂಗೆ ಹೋಗ್ಬಿಟ್ಟೆ, ಬಾರೆ ಹೋಗಕ" ಎಂದಳು. ಸೀತಕ್ಕ ಹಾಗೆ ಕರೆದಾಗ, ಮನೆಗೆ ಹೋಗಬೇಕೆಂದಿದ್ದ ನಾಗಿಯ ಹೆಜ್ಜೆಗಳು ಅಲ್ಲಿಯೇ ನಿಂತವು. ಒಳಗೆ ಹೋಗಿ ಹೊರ ಬಂದ ಸೀತಕ್ಕ "ತಕಾ ಹಿಡಿ, ನಿಂಗೆ ಎಂತಾಕ್ಕರು ಬೇಕಾಗುದ ಇದ್ರ ಇಟ್ಕಾ" ಎಂದು ಐದು ನೂರರ ಎರಡು ನೋಟುಗಳನ್ನು ತಂದು ನಾಗಿಯ ಕೈಗಿಟ್ಟಳು.

ರೊಕ್ಕ ಬೇಡ ಅನ್ನಬೇಕೆನಿಸಿತ್ತಾದರೂ, ಸದ್ಯದ ಪರಿಸ್ಥಿತಿಯ ಅರಿವಿದ್ದ ನಾಗಿ ಬೇಡ ಅನ್ನದೇ ತೆಗೆದುಕೊಂಡು ಸೀರೆಯ ಸೆರಗಿಗೆ ಸಿಕ್ಕಿಸಿ ಮನೆಯತ್ತ ಹೊರಟಳು. ಮನೆಗೆ ಬಂದು ಮಗೆನಿಗೆ ಸೀತಕ್ಕ ಕೊಟ್ಟ ಅನ್ನವನ್ನು, ಗೌರಕ್ಕ ಕೊಟ್ಟ ಸಾರಿನೊಂದಿಗೆ ಕಲಿಸಿ ಮಗನಿಗೊಂದಿಷ್ಟು ಊಟ ಮಾಡಿಸಿ ಔಷದ ಕೊಟ್ಟು ತಾನು ಹೋಗಿ ಸ್ನಾನದ ಶಾಸ್ತ್ರ ಮಾಡಿ ಬಂದು ತನ್ನ ಹೊಟ್ಟೆಗೂ ಒಂದಿಷ್ಟು ಸೇರಿಸಿದಳು. ಎರಡು ಪಾತ್ರೆ ತೊಳೆದು ಬರುವ ಹೊತ್ತಿಗೆ ಸೂರ್ಯ ಪಶ್ಚಿಮ ದಿಗಂತದ ಅಂಚಿನಲ್ಲಿದ್ದ. ರಾತ್ರಿಯ ಊಟಕ್ಕೆ ಒಂದಿಷ್ಟು ಅನ್ನ ಮಾಡಿದರೆ ಸಾಕು, ಗೌರಮ್ಮ ಹಾಗೂ ಸೀತಮ್ಮೊರು ಕೊಟ್ಟ ಸಾರು ರಾತ್ರಿಯ ಊಟಕ್ಕು ಸಾಕೆನಿಸಿತು. ಮಗನು ಮಲಗಿದ್ದಲ್ಲಿಗೆ ಹೋಗಿ ನೋಡಿದಳು, ಮಗ ಆಗಲೇ ನಿದ್ದೆ ಹೋಗಿದ್ದ. ಅವನ ಸ್ಥಿತಿ ನೋಡಿ ಇನ್ನಷ್ಟು ಕರಳು ಕಿವುಚಿ ಬಂದಂತಾಯಿತು. ಕೂದಲು ಬಾಚಿಕೊಳ್ಳೋಣವೆನಿಸಿ ಗೋಡೆಗೆ ನೇತುಹಾಕಿದ ಕನ್ನಡಿಗೆ ಸಿಕ್ಕಿಸಿದ ಬಾಚಣಿಗೆಯನ್ನು ಹಿಡಿದು ಹೊರಬಂದು ಸುಕ್ಕು ಗಟ್ಟಿದ ಕೂದಲನ್ನು ಬಾಚಿಕೊಳ್ಳುತ್ತ ಕುಳಿತಳು.

ಅತ್ತೆ ಕೂದಲು ಬಾಚುತ್ತಾ ಕುಳಿತದ್ದನ್ನು ತನ್ನ ಮನೆಯ ಕಿಟಕಿಯಿಂದ ನೋಡಿದ ಗಿರಿಜೆ ಹೊರಬಂದು,

"ಅತ್ತೆ, ಹನ್ಮುಗ ಜ್ವರ ಬಿಟ್ಟೇದಾ?" ಎಂದು ಕೇಳಿದಳು.

"ಇಲ್ವೇ, ಅದ್ ಕಡ್ಮೀನೇ ಆತೇ ಇಲ್ಲಾ. ನಾಳಗ ಅಂಕೋಲಿಗ ಸೀತಮ್ಮೊರ ಮಗ್ನ ಆಸ್ಪತ್ರೆಗ ಕರ್ಕಂಡ ಹೋತೆ".

"ಹೌದಾ, ಅದೇ ಚಲೋ ಅತ್ತೆ. ಅಲ್ಲೋದ್ರ ಏನಾದ್ರೂ ಗುತ್ತಾತೇದಾಬೆಲಾ".

"ಹಂಗೆ ಮಾಡ್ತೇನೇ" ಎಂದು ಹೇಳಿ "ನಾಳಗಿಂದ ಮಾತ್ರ ಮನೆಕಡೆ ನೋಡ್ತೇ ಇರೆ".

"ಆಯ್ತೆ ಅತ್ತೆ" ಎಂದು ಹೇಳಿ ಒಳನಡೆದಳು ಗಿರಿಜೆ, ತನ್ನ ಕೆಲಸದ ನೆನಪಾಗಿ.


(ಮುಂದುವರೆಯುವುದು...)

--ಮಂಜು ಹಿಚ್ಕಡ್