Saturday, November 30, 2013

ಬಯಕೆಗಳು!

ಹುಟ್ಟಿನಲ್ಲಲ್ಲದಿರೂ
ಹುಟ್ಟಿನನಂತರ ಜನ್ಮತಳೆಯುವವು
ಹಲವಾರು ಬಯಕೆಗಳು
ಮಳೆಗಾಲದ ಜವುಗು ಭೂಮಿಯಲಿ
ಒಂದಾದ ಮೇಲೊಂದರಂತೆ
ಜನ್ಮತಳೆವ ನಾಯಿಕೊಡೆಗಳಂತೆ
ಈ ನಮ್ಮ ಮನದ ಮೂಲೆಯಲ್ಲಿ.

ಆಕಾರ, ಪ್ರಾಕಾರವಿಲ್ಲದಿರೂ,
ಬಣ್ಣ, ರೂಪವಿಲ್ಲದಿರೂ
ನಮ್ಮ ರೂಪ ಬದಲಾಯಿಸುವಂತೆ
ಮಾರ್ಪಡಿಸುವವು
ತಾವು ಒಳಹೊಕ್ಕ ಮನಸನ್ನು ಆಗಾಗ.

ಒಂದೊಂದು ಬಯಕೆಗಳಿಗೂ
ಒಂದೊಂದು ವೇಷ
ಹಲವು ಬಯಕೆಗಳು
ಕೇವಲ ಆಶೆಗಳಾಗಿ
ಕೊನೆಗೊಳ್ಳುವವು,
ಒಳಹೊಕ್ಕ ವ್ಯಕ್ತಿಯ ಮರೆವಿನೊಂದಿಗೆ.

ಕೆಲವು ಅತಿಯಾಗಿ
ಪ್ರತಿಯಿಲ್ಲದಂತಾಗಿ
ಅಳಿದು ಹೋಗುವವು
ಕಾಲದೊಂದಿಗೆ.

ಕೆಲವಂತು ಆಕಾಂಕ್ಷೆಗಳಾಗಿ
ಕೈಗೆಟುಕದ ಹುಳಿದ್ರಾಕ್ಷಿಯಂತಾಗಿ
ಕಾಡುತ್ತಲೇ ಹೋಗುವವು
ಬದುಕು ಸಾಗುವವರೆಗೆ.

ಅಪರೂಪಕ್ಕೆಂಬಂತೆ,
ಅಲ್ಲೊಂದು, ಇಲ್ಲೊಂದು ಬಯಕೆಗಳು
ಗುರಿಯಾಗಿ ಮಾರ್ಪಟ್ಟು
ಒಂದಡೆಯೂ ನಿಲ್ಲದಂತೆ
ಓಡಿಸುವವು ಮನಸನ್ನ
ಗುರಿಯ ಸೇರುವವರೆಗೆ,
ಮತ್ತೊಂದು ಗುರಿಯೆಡೆಗೆ!

--ಮಂಜು ಹಿಚ್ಕಡ್

Saturday, November 23, 2013

ಸೈಕಲ್ ಪಥ..

ಸೈಕಲ್ ಪಥವಂತೆ ಇದು
ಸೈಕಲ್ಲುಗಳೇ ಕಾಣಲ್ಲ ಇಲ್ಲಿ
ಗುಳಿ ಬಿದ್ದ ರಸ್ತೆ
ಅರ್ಧಂಬರ್ಧ ಸೈಕಲ್ಲುಗಳ
ಚಿತ್ರಗಳು, ಕಾಣಿಸುವವು ಅಲ್ಲಲ್ಲಿ.

ಚಿತ್ರಗಳಲ್ಲಿದ್ದಷ್ಟು ಸೈಕಲ್ಲುಗಳಿದ್ದರೆ
ಸಾಕಿತ್ತು ಇಂದು ಇಲ್ಲಿ
ಹೊಗೆ ದೂಳು ಸ್ವಲ್ಪ ಕಡಿಮೆಯಾಗಿ
ಇಂದನವೂ ಸ್ವಲ್ಪ ಉಳಿಯುತಿತ್ತು.

ಸೈಕಲ್ ತುಳಿಯುವವರಾರು
ಆಗಲೇ ತುಳಿಯುತ್ತಿದ್ದೇವಲ್ಲ
ಕನಸು ಕಾಣುವ ಅಮಾಯಕರನು
ಇನ್ನೆಲ್ಲಿಯ ಬಿಡುವುಂಟು ನಮಗೆ.

ಹೊಂಡ ತುಂಬಿದ ಆ
ರಸ್ತೆಗಳನು ಅತಿಕ್ರಮಿಸಿ ನಿಂತಿವೆ
ಅಲ್ಲೊಂದು ಇಲ್ಲೊಂದು ಕಾರುಗಳು
ಆ ರಸ್ತೆಯೂ ತಮ್ಮದೆಂಬಂತೆ.

ಸೈಕಲ್ ಪಥವಲ್ಲ ಇದು
ಕಾರು ಆಟೋಗಳಿಗಾಗಿ
ಮೀಸಲಿಟ್ಟಂತೆ ಇರುವ
ಉಚಿತ ಪಾರ್ಕಿಂಗ್ ಸೇವೆ.
ತೆರಿಗೆಯ ಹೆಸರಲ್ಲಿ
ಸುಲಿದ ಹಣವಲ್ಲವೇ ಇದು
ಅಷ್ಟಾದರೂ ಮಾಡ ಬೇಕಲ್ಲವೇ?

--ಮಂಜು ಹಿಚ್ಕಡ್ 

ಪಾತ್ರ ಅನ್ವೇಷಣಾ.

ನಾನು ವಿಮರ್ಷಕನಲ್ಲ, ಆದರೂ ಬದರಿನಾಥರ ಕವಿತೆಗಳನ್ನು ಓದಿದ ಮೇಲೆ, ಅವುಗಳ ಬಗ್ಗೆ ಒಂದೆರಡು ಮಾತುಗಳನ್ನಾಡದೇ ಹೋದರೆ ತಪ್ಪಾದೀತು ಎನ್ನುವುದು ನನ್ನ ಅನಿಸಿಕೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಗೆಳೆಯ ಬದರಿಯವರ ಚೊಚ್ಚಲ ಕವನ ಸಂಕಲನ "ಪಾತ್ರ ಅನ್ವೇಷಣಾ". ಈ ಕವನ ಸಂಕಲನದ ಏನಿದೆ, ಏನಿಲ್ಲ? ಇಲ್ಲಿ ಪ್ರೀತಿಯ ಸೆಳತವಿದೆ, ನೋವಿದೆ, ಬದುಕಿನ ವಿವಿಧ ಮಜಲುಗಳನ್ನು ನೋಡಿದ ಅನುಭವವಿದೆ, ಕಾಳಜಿಯಿದೆ, ಸಂಬ್ರಮವಿದೆ ಹೀಗೆ ಎಲ್ಲವೂ ಇವೆ.

ಪಾಚಿ ಬೆಳೆದ ಹೊಂಡದಲ್ಲಿ ಹೇಗೆ ಆ ಹೊಂಡದ ಆಳವನ್ನು ತಿಳಿಯಲಾಗುವುದಿಲ್ಲವೋ ಹಾಗೆ, ನಮ್ಮ ಜೊತೆಯಲ್ಲೇ ಇದ್ದು ನಮ್ಮ ವಿರುದ್ದ ಪಿತೂರಿ ನಡೆಸುವ ಹಿತ ಶತ್ರುಗಳನ್ನು ಅರಿಯುವುದು ಕಷ್ಟ ಎನ್ನುವ ಈ ಕೆಳಗಿನ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ ಗೆಳೆಯ ಬದರಿನಾಥ ಪಲವಳ್ಳಿಯವರ "ಪಾತ್ರ ಅನ್ವೇಷಣಾ" ಕವನ ಸಂಕಲನ.

ಎಲ್ಲೆಲ್ಲಿ ವಾಮನರೋ
ಪಿತೂರಿ ಸಾಧಕರೋ
ಬುಡ ಘಾತುಕರೋ
ತಿಳಿಯಲ್ಲ್ ಪಾಚಿ ಹೊಂಡ...

ಹೀಗೆ ಪ್ರಾರಂಭವಾಗುವ ಕವನ ಸಂಕಲನ, ಸೇದು ಹೊಗೆಯುಗುಳುವ ಧೂಮಪಾನದ ಜೊತೆಗೆ ಮದ್ಯಪಾನದಂತಹ ಚಟಗಳು ಮನುಷ್ಯನನ್ನು ಬಹು ಬೇಗ ಚಟ್ಟ ಹತ್ತಿಸಿ ಮನೆ ಮುಂದೆ ಹೊಗೆಯಾಡಿಸುವುಂತೆ ಮಾಡೀತು ಎನ್ನುವ ಎಚ್ಚರಿಕೆಯೊಂದಿಗೆ ಮುಕ್ತಾಯವಾಗುತ್ತದೆ.

ಚಟ ಚಟ್ಟವ ಹತ್ತಿಸೀತು,
ಸೇದಿದರೆ ಧೂಮಪಾನ
ಜೊತೆಗೆ ಮದ್ಯಪಾನ
ಮನೆ ಮುಂದೆ ಹಾಕ್ತಾರೆ
ಹೊಗೆ ಜೋಪಾನ!

ಆರಂಭ ಮುಕ್ತಾಯಗಳ ನಡುವೆ ಇಂತಹ ಹಲವು ಸಾಲುಗಳಿರುವ ೯೮ ಕವನಗಳ , ಕವನ ಸಂಕಲನ " ಪಾತ್ರ ಅನ್ವೇಷಣಾ". ಒಂದೊಂದು ಸಾಲಲ್ಲೂ ಒಂದೊಂದು ಬಗೆಯ ಅರ್ಥ, ಭಾವಾರ್ಥಗಳು ಹುದುಗಿಕೊಂಡಿವೆ ಎನ್ನುವುದು ಒಂದೊಂದು ಸಾಲುಗಳನ್ನು ಓದಿದಾಗಲೂ ಭಾಸವಾಗುತ್ತದೆ. ಅಂತಹುಗಳಲ್ಲಿ ನನಗಿಷ್ಟವಾದ ಒಂದೆರಡು ತುಣುಕುಗಳನ್ನು ಇಲ್ಲಿ ಪ್ರಕಟಿಸಿದ್ದೇನೆ.

ಇಂದಿನ ರಸ್ತೆಯ ಪಯಣದಲ್ಲಿ ಅಂಗಾಂಗಳಿಗೆ ಯಾವುದೇ ಹಾನಿಯಾಗದೇ, ಮನೆಗೆ ಜೀವಂತವಾಗಿ ತಲುಪಿಸಿ ಬಿಡು ಎಂದು, ತಮ್ಮ "ಪಾಪಿಷ್ಠ ಕೆಟ್ಟ ರಸ್ತೆ..." ಎಂಬ ಕವನದಲ್ಲಿ ಹೀಗೆ ಬರೆಯುತ್ತಾರೆ,

ಪಾಪಿಷ್ಠ ಕೆಟ್ಟ ರಸ್ತೆ ಇದು
ಬ್ರೇಕು ಬ್ರೇಕಿಗೂ ಭೂನರಕ
ಜೋರು ಗೇರೂ ಕಂಗಾರು,
ದಾಟಿಸಿ ಬಿಡು ಲೆಕ್ಕಿಗನೇ
ಬದುಕಲಿನ್ನೂ ಬೇಜಾರಿದೆ
ಸವಿಯಲು ಮಧುಪಾನ!
ಜೀವಂತ ತಲುಪಿಸಿ ಬಿಡು
ಮನೆಗೆ ಪೂರ್ಣ ಅಂಗಾಂಗ....

ನಾಳೆಗೆ ಬಾಡಿ ಹೋಗುವ ಮಾವಿನ ಎಲೆಯನ್ನು ಹಣಕೊಟ್ಟು ತಂದು ಅದರಿಂದ ತೋರಣ ಕಟ್ಟಿ ಪಜೀತಿಪಟ್ಟಿಕೊಳ್ಳುವುದಕ್ಕಿಂತ ಪ್ಲಾಸ್ಟಿಕಿನ ಸಿದ್ದ ತೋರಣವೇ ಬಾಗಿಲಿಗೆ ಓಳ್ಳಯದಲ್ಲವೇ, ಬಾಡುವುದಿಲ್ಲ, ತೋರಣ ಕಟ್ಟುವ ಪಜೀತಿಯಿಲ್ಲ, ಈ ವರ್ಷದನ್ನು ಮುಂದಿನ ವರ್ಷವೂ ಬಳಸಬಹುದಲ್ಲ ಎಂದು "ಬಂತು ಉಗಾದಿ" ಎನ್ನುವ ಕವನದಲ್ಲಿ ಹೀಗೆ ಹೇಳುತ್ತಾರೆ,

ಮಾವಿನ ಎಲೆ ತೋರಣ
ತಂದು ಕಟ್ಟುವ ಪಜೀತಿ
ಪ್ಲಾಸ್ಟಿಕಿನ ಸಿದ್ದ ತೋರಣ
ಅಲಂಕರಿಸಲಿ ಬಾಗಿಲಿಗೆ!

ಕಾರಾಗೃಹದಲ್ಲಿ ಕುಳಿತು ಭಗವದ್ಗೀತೆ ಪಠಿಸಿದರೆ ಮೈದಾನದಲ್ಲಿ ಮೈ ಮಾರಿಕೊಂಡು ಕಳ್ಳಾಟವಾಡಿದ್ದು ಕಳೆದು ಹೋಗುತ್ತದೆಯೇ ಎಂದು ಬದರಿಯವರು ಹೀಗೆ ಬರೆಯುತ್ತಾರೆ,

ಕಾರಾಗೃಹದಲಿ ಕುಳಿತು
ಭಗವದ್ಗೀತೆ ಪಠಿಸಿದರೆ
ಕಳೆಯುವುದೇ ಮೈದಾನದಲಿ
ಮೈಮಾರಿಕೊಂಡ ಕಳ್ಳಾಟ.

ಹೀಗೆ ಇಂತಹ ಹಲವಾರು ಸುಂದರ ಸಾಲುಗಳು ಈ ಕವನ ಸಂಕಲನದಲ್ಲಿದೆ. ತಮ್ಮ ಕವನ ಸಂಕಲನದ ಒಂದು ಪ್ರತಿಯನ್ನು ನನಗೆ ನೀಡಿ, ಆ ಕವನ ಸಂಕಲನದ ಕವನಗಳನ್ನು ಓದಲು ಅವಕಾಶ ಮಾಡಿಕೊಟ್ಟ ಗೆಳೆಯ ಬದರಿಯವರಿಗೆ ಹಾಗೂ ಅದನ್ನು ಪ್ರಕಟಿಸಿದ ಕುಶಿ ಪ್ರಕಾಶನ ಬಳಗಕ್ಕೂ ನನ್ನ ಅಭಿನಂದನೆಗಳು. ಬದರಿಯವರಿಂದ ಹಾಗೂ ಅವರ ಕವನಗಳಿಗೆ ಪುಸ್ತಕ ರೂಪಕೊಟ್ಟು ಪ್ರಕಟಿಸಿದ ಕುಶಿ ಪ್ರಕಾಶನ ಇವರಿಂದ ಇಂತಹ ಹಲವು ಕವನ ಸಂಕಲನಗಳು ಮೂಡಿ ಬರಲಿ ಎಂದು ಹಾರೈಸಿ, ಶುಭಕೋರುತ್ತೇನೆ.

--ಮಂಜು ಹಿಚ್ಕಡ್

ಅಂಕೋಲಾ ಬಸ್ ನಿಲ್ದಾಣದ ಒಂದಿಷ್ಟು ಸವಿ ನೆನಪುಗಳು!

ಇಂದಿಗೆ ಹನ್ನೆರಡು ವರ್ಷಗಳು ಕಳೆದು ಹೋದವು ನಾನು ನ್ನನ್ನೂರನ್ನ ಬಿಟ್ಟು, ಹಾಗಂತ ನಾನು ಸಂಪೂರ್ಣ ಊರು ಬಿಟ್ಟವನೇನಲ್ಲ. ಆಗಾಗ ರಜೆ ಇದ್ದಾಗ ಊರಿಗೆ ಹೋಗಿ ಬರ್ತಾ ಇದ್ದಿನಿ, ಇರ್ತಿನಿ ಕೂಡ. ಪ್ರತಿ ಬಾರಿ ಊರಿಗೆ ಹೋದಾಗಲು ಮೊದಲು ನೆನಪಾಗುವುದು ಅಂಕೋಲಾ ಬಸ್ ನಿಲ್ದಾಣ. ಊರಿಗೆ ಹೋದಾಗ ಒಮ್ಮೆಯಾದರೂ ಅಂಕೋಲಾ ಬಸ್ ನಿಲ್ದಾಣಕ್ಕೆ ಹೋಗಿ ಬರಲೇ ಬೇಕು. ಅಲ್ಲಿಗೆ ಹೋಗದೇ ತಿರುಗಿ ಬೆಂಗಳೂರಿಗೆ ಬಂದರೆ ಏನನ್ನೋ ಬಿಟ್ಟು ಬಂದ ಹಾಗೆ, ಅಂಕೋಲಾ ಬಸ್ ನಿಲ್ದಾಣದ ಮಹಿಮೆಯೇ ಹಾಗೆ. ಅಂಕೋಲಾ ಬಸ್ ನಿಲ್ದಾಣ ಅಂದ ತಕ್ಷಣ ನೆನಪಾಗುವುದು ಬಸ್ ನಿಲ್ದಾಣದ ಮುಂದಿರುವ ತೇಗದ ಮರ, ಅದರ ಅಕ್ಕ ಪಕ್ಕದಲ್ಲಿರುವ ಜೈಹಿಂದ ಹೈಸ್ಕೂಲ್ ಮೈದಾನ ಹಾಗೂ ಗಾಂದಿ ಮೈದಾನಗಳು, ಹಿಂಬಾಗದ ಕೋಟೆ ಬೇಣ, ಬಸ್ ನಿಲ್ದಾಣದ ಒಳಗಿದ್ದ ಪೈ ಬುಕ್ ಸ್ಟಾಲ್ ಇತ್ಯಾದಿ ಇತ್ಯಾದಿ.

ಬಸ್ ನಿಲ್ದಾಣದ ಬಲಭಾಗಲ್ಲಿ ಜೈಹಿಂದ್ ಹೈಸ್ಕೂಲ್ ಮೈದಾನ, ಇದೊಂದು ಐತಿಹಾಸಿಕ ಮೈದಾನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಅಂಕೋಲೆಯಲ್ಲಿ ಉಪ್ಪಿನ ಸತ್ಯಾಗೃಹ ನಡೆದಿದ್ದು ಇದೇ ಮೈದಾನದಲ್ಲಿ. ಅಂಕೋಲೆಗೆ ಕರ್ನಾಟಕದ ಬಾರ್ಡೋಲಿ ಎನ್ನುವ ಹೆಸರು ಬರಲು ಈ ಮೈದಾನದಲ್ಲಿ ನಡೆದ ಅಂದಿನ ರಾಜಕೀಯ ಚಟುವಟಿಕೆಗಳೇ ಕಾರಣ ಎಂದರೆ ತಪ್ಪಾಗಲಾರದು. ಈ ಮೈದಾನದಲ್ಲಿ ಯಾವಾಗಲೂ ಒಂದಲ್ಲ, ಒಂದು ಕ್ರೀಡೆಗಳು ನಡೆಯುತ್ತಲೇ ಇರುತ್ತಿದ್ದವು. ಒಮ್ಮೊಮ್ಮೆ ರಾತ್ರಿ ಯಕ್ಷಗಾನ ಬಯಲಾಟಗಳು ನಡೆಯುತಿದ್ದವು. ಅಂಕೋಲಾದಲ್ಲಿ ಬಹುತೇಕ ಯಕ್ಷಗಾನಗಳು ನಡೆಯುವುದು ಇದೇ ಮೈದಾನದಲ್ಲಿ. ಅದರಲ್ಲೂ ಮೇಳದ ಆಟಗಳೇ ಜಾಸ್ತಿ.

ಬಸ್ ನಿಲ್ದಾಣದ ಎಡಬಾಗದಲ್ಲಿ ಗಾಂದಿ ಮೈದಾನ. ೨೮-ಪೆಬ್ರುವರಿ-೧೯೩೪ ರಲ್ಲಿ ಮಹಾತ್ಮಾ ಗಾಂದಿಯವರು ಅಂಕೋಲಾಕ್ಕೆ ಬೆಟ್ಟಿ ಕೊಟ್ಟಾಗ ಇದೇ ಸ್ಥಳದಲ್ಲಿ ಅಂಕೋಲಾ ಜನತೆಯನ್ನುದ್ದೇಸಿಸಿ ಮಾತನ್ನಾಡಿದ್ದರಿಂದ ಆ ಸ್ಥಳಕ್ಕೆ ಗಾಂದಿ ಮೈದಾನ ಎಂದು ಕರೆಯುತ್ತಾರೆ. ಇಂದು ಅಲ್ಲಿ ಮೈದಾನವಿಲ್ಲ, ಒಂದು ಕಾಲದಲ್ಲಿ ಪಾಳು ಬಿದ್ದಿದ್ದ  ಮೈದಾನದಲ್ಲಿ ಇವತ್ತು ಸುಂಧರ ಉದ್ಯಾನವನವಿದೆ, ಹಾಗೆ ಅದರ ಪಕ್ಕದಲ್ಲಿ ಗಾಂದಿ ಭವನವಿದೆ.

ಹಾಗೆ ಬಸ್ ನಿಲ್ದಾಣದ ಹಿಂದೆ, ಪಾಳು ಬಿದ್ದ ಕೋಟೆ ಇದೆ, ಸರ್ಪ ಮಲ್ಲಿಕನ ಅಥವಾ ಸರ್ಫ್-ಉಲ್-ಮಲ್ಲಿಕನ ಕಾಲದಲ್ಲಿ ಅಂದರೆ ೧೬೫೦-೧೬೭೨ ಇಸ್ವಿಯ ನಡುವಲ್ಲಿ ಕಟ್ಟಿದ ಕೋಟೆ ಎನ್ನುತ್ತಾರೆ. ಆದರೆ ಇಂದು ಕೋಟೆಯ ಬಹುಬಾಗ ಪಾಳು ಬಿದಿದ್ದು, ಅಲ್ಲಲ್ಲಿ ಅವುಗಳ ಅವಶೇಷಗಳನ್ನು ಕಾಣಬಹುದು.

ಇವೆಲ್ಲವುಗಳ ನಡುವಲ್ಲಿ ನಮ್ಮ ಪುಟ್ಟ ಅಂಕೋಲಾ ಬಸ್ ನಿಲ್ದಾಣ. ಬಸ್ ನಿಲ್ದಾಣದ ಮುಂಬಾಗ ಹಳ್ಳಿ ಕಡೆ ಹೋಗುವ ಲೋಕಲ್ ಬಸ್ಸುಗಳಿಗೂ , ಹಿಂಬಾಗ ದೂರದ ಊರಿಗೆ ಹೋಗಿ ಬರುವ ವೇಗದೂತ ಬಸ್ಸುಗಳಿಗೆ ಮೀಸಲಾಗಿತ್ತು. ಲೋಕಲ್ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಒಂದು ತೇಗದ ಮರ, ಅದು ಎಷ್ಟು ವರ್ಷಗಳಿಂದ ಅಲ್ಲಿದೆ ಎನ್ನುವುದು ನನಗೂ ಸರಿಯಾಗಿ ತಿಳಿದಿಲ್ಲ. ಚಿಕ್ಕವರಿದ್ದಾಗ ನಮ್ಮ ತಂದೆಯವರ ಜೊತೆ ಅಂಕೋಲಾಕ್ಕೆ ಹೋದಾಗ ಅದೇ ತೇಗದ ಮರದ ಕೆಳಗೆ ನಿಂತು, ಊರಿಗೆ ಹೋಗುವ ಬಸ್ಸುಗಳಿಗಾಗಿ ಕಾಯ್ತಾ ನಿಲ್ಲುತ್ತಿದ್ದೆವು. ಬಸ್ ಏನಾದ್ರೂ ತಪ್ಪಿ ಹೋದರೆ ಇನ್ನೊಂದು ಬಸ್ಸಿಗಾಗಿ ಕಾಯುತ್ತಾ ಅಥವಾ ಹತ್ತಿರದ ಕಣಗಿಲ ಊರಿಗೆ ಹೋಗುವ ಬಸ್ಸಿಗೋ, ಇಲ್ಲಾ ನಮ್ಮ ಊರಿನ ಕ್ರಾಸ್ ವರೆಗೆ ಹೋಗುವ ಬಸ್ಸುಗಳಿಗೆ ಕಾಯುತ್ತಲೋ ನಿಲ್ಲುತಿದ್ದೆವು.

ಬಸ್ ನಿಲ್ದಾಣದ ಒಳಗೆ ಆಗಿರುವ ಪೈ ಬುಕ್ ಸ್ಟಾಲ್ ಅಂತೂ ಅಂದು ತುಂಭಾ ಪ್ರಸಿದ್ದವಾಗಿತ್ತು. ಅಂಕೋಲಾದ ಬಹುತೇಕ ಜನ ವೃತ್ತ ಪತ್ರಿಕೆಗಳನ್ನು, ವಾರ ಪತ್ರಿಕೆಗಳನ್ನು ಕೊಂಡು ತಂದು ಓದುತಿದ್ದುದು ಇದೇ ಬುಕ್ ಸ್ಟಾಲ್ನಿಂದ. ನಾವು ಕಾಲೇಜಿಗೆ ಹೋಗುವಾಗ ಆಗಾಗ ಬಂದು, ಇವತ್ತಿನ ಸುದ್ದಿಗಳೇನು? ಮುಖಪುಟದಲ್ಲಿ ಏನಿದೆ? ಎಂದು ಬುಕ್ ಸ್ಟಾಲ್ ಎದುರುಗಡೆ ನಿಂತು ಹೊರಗಿನಿಂದಲೇ ಕಣ್ಣಾಡಿಸುತಿದ್ದೆವು. ಹೀಗೆ ಕಣ್ಣಾಡಿಸುತ್ತಾ ನಿಂತಾಗ ಅದೆಷ್ಟೋ ಬಾರಿ ಪೈ ಮಾಮನಿಂದ (ಬುಕ ಸ್ಟಾಲ್ನ್ ಮಾಲಿಕ) ಬೈಸಿ ಕೊಂಡದ್ದು ಇದೆ.

ಕಾಲೇಜು ದಿನಗಳಲ್ಲಿ ಕಾಲೇಜು ಮುಗಿಸಿ, ಬೇಗ ಬೇಗನೇ ಬಂದು ಬಸ್ ನಿಲ್ದಾಣ ತಲುಪುತಿದ್ದೆವು. ಕಾಲೇಜಿನ ದಿನಗಳಲ್ಲಿ ಈ ಬಸ್ ನಿಲ್ದಾಣದಲ್ಲಿ ಸುತ್ತಾಡುವುದೆಂದರೆ ಎಲ್ಲಿಲ್ಲದ ಸಂತೋಷ. ಬಣ್ಣ ಬಣ್ಣದ ಬಟ್ಟೆ ಧರಿಸಿ ತಮ್ಮ ತಮ್ಮ ಊರಿಗೆ ಹೋಗುವ ಬಸ್ಸುಗಳನ್ನು ಕಾಯುತ್ತಾ ಒಂದು ಕಡೆ ಸಾಲಾಗಿ ನಿಂತಿರುವ ಹುಡುಗಿಯರನ್ನು ನೋಡುತ್ತಾ ನಿಂತರೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ನಮ್ಮೂರ ಬಸ್ಸು ಬಂದು ಬಿಟ್ಟರೆ ಈ ಹಾಳಾದ ಬಸ್ಸು ಇಷ್ಟು ಬೇಗ ಬರಬೇಕಿತ್ತೇ ಎಂದು ಹಲವು ಬಾರಿ ಅನ್ನಿಸಿದ್ದು ಉಂಟು. ಆಗ ಯಾವ ಹುಡುಗಿ ಯಾವ ಊರಿನವಳು, ಅವಳ ಊರಿನ ಬಸ್ಸು ಎಷ್ಟೊತ್ತಿಗೆ ಬರುತ್ತದೆ ಎನ್ನುವುದು ಆ ಬಸ್ ನಿಲ್ದಾಣದ ನಿರ್ವಾಹಕರಿಗಿಂತ ನಮಗೆ ಜಾಸ್ತಿ ತಿಳಿದಿತ್ತು ಅನ್ನುವುದು ತಪ್ಪಾಗಲಾರದು. ಅಷ್ಟರಮಟ್ಟಿಗೆ ನಮಗೆ ಬಸ್ಸುಗಳ ವೇಳೆ ತಿಳಿದಿತ್ತು. ಈಗಲೂ ಅಂಕೋಲಾ ಬಸ್ಸು ನಿಲ್ದಾಣಕ್ಕೆ ಹೋದಾಗ ಆಗಿನ ಈ ನೆನಪುಗಳು ಆಗಾಗ ಕಾಡುತ್ತಲೇ ಇರುತ್ತದೆ.

ಆಗಾಗ ಅಪರೂಪಕ್ಕೆ ಕುಳಿತು ತಿಂಡಿ ತಿಂದು ಹೊರಬರುತಿದ್ದ ಅಂಕೋಲಾ ಬಸ್ ನಿಲ್ದಾಣದ ಕ್ಯಾಂಟಿನ್. ಕಾಲೇಜು ವಿದ್ಯಾರ್ಥಿಗಳಿಂದಾಗಿ ತುಂಬಿ ಸಾಗುವ ಅವೆರ್ಸಾ, ತದಡಿ-ಗೋಕರ್ಣ, ಬೆಲೇಕೇರಿ ಬಸ್ಸುಗಳು. ಅಪರೂಪಕ್ಕೆ ನಮ್ಮ ಕೈಯಲ್ಲಿ ಇತರೆ ಸಾಮಾನುಗಳಿದ್ದರೆ, ಅದು ನಮ್ಮ ಸುತ್ತಾಟಕ್ಕೆ ತೊಂದರೆಯಾಗುತ್ತದೆ ಎಂದು ನಮ್ಮ ಸಾಮಾನುಗಳನ್ನು ಇಟ್ಟು ಹೋಗುತಿದ್ದ ಬಸ್ ನಿಲ್ದಾಣದ ಒಳಗಿನ ಸಂತೋಷನ ಅಂಗಡಿ ಇವೆಲ್ಲ ಮರೆಯುತ್ತೇನೆ ಎಂದರೂ ಹೇಗೆ ಮರೆಯಲು ಸಾದ್ಯ.

--ಮಂಜು ಹಿಚ್ಕಡ್

Thursday, November 21, 2013

ಕಲಿತು ಬಾಳು ನೀ ಕನ್ನಡ!

ನೆಲವು ನಮ್ಮದು, ಜಲವು ನಮ್ಮದು
ಪ್ರೀತಿ ನಮ್ಮದು, ಕಿರ್ತಿ ನಿಮ್ಮದು
ಗಾಳಿ ನಮ್ಮದು, ಕೂಳು ನಮ್ಮದು
ಭಾಷೆ ಏಕೆ ಬೇಕು ನಿಮ್ಮದು?

ಕುಡಿಯಲು ಬೇಕು ನಿಮಗೆ
ಕಾವೇರಿಯ ನೀರು
ವಾಸಿಸಲು ಬೇಕು ನಿಮಗೆ
ಕನ್ನಡಿಗರ ಸೂರು.

ಮರೆಯದಿರು ಗೆಳೆಯ
ಇದು ನಿನ್ನ ತವರಲ್ಲ
ನೀ ವಾಸಿಸುವ ಊರು.
ಇನ್ನೂ ತಡವೇಕೆ?
ಕಲಿತು ಏರು
ನೀ ಕನ್ನಡದ ತೇರು.

ಇಲ್ಲಾರಿಗೆ ಬೇಕು
ನಿನ್ನ ಎನ್ನಡ, ಎಕ್ಕಡ.
ಇಲ್ಲಿರುವವರೆಗಾದರೂ ನೀ
ಕಲಿತು ಬಾಳು, ಕನ್ನಡ ಕನ್ನಡ!

--ಮಂಜು ಹಿಚ್ಕಡ್
ನವೆಂಬರ್ ೧, ೨೦೧೩

ಇಂಟರ್ನೆಟ್, ಅಲ್ಲಿರುವುದೆಲ್ಲಾ ಹಳಸಿದ್ದಾದರೆ?

ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು ಕಂಡಿದ್ದೇ ನಿಜ ಎಂದು ಸಾಧಿಸುವ ಜಿಜ್ನಾಸು ಆತ. ಆತ ನನಗೇನು ಅಪರಿಚಿತ ವ್ಯಕ್ತಿ ಏನಲ್ಲ, ಹಾಗಂತ ತುಂಭಾ ಬೇಕಾದಷ್ಟು ಪರಿಚಿತನಂತು ಅಲ್ಲ. ವಯಸ್ಸಿನಿಂದಲೂ ನನಗಿಂತ ಹದಿನೈದು ಇಪ್ಪತ್ತು ವರ್ಷ ದೊಡ್ಡವನು. ಮಕ್ಕಳೆಲ್ಲ ಆಗಲೇ ಕಾಲೇಜಿನಲ್ಲಿ ಒದುತ್ತಿದ್ದರು. ಆತ ನನಗೆ ಸ್ವಲ್ಪ ಮಟ್ಟಿಗೆ ಪರಿಚಿತನಾದ್ದರಿಂದ ಮತ್ತೆ ಇಂಟರ್ನೆಟ್ ಬಗ್ಗೆ ಮಾತು ಮುಂದುವರೆಸಲು ಮುಂದಾದೆ. ಅಷ್ಟರಲ್ಲೇ ಆ ವ್ಯಕ್ತಿ ನನ್ನನ್ನು ತಡೆದು, "ಅಲ್ಲಾ, ಇಂಟರ್ನೆಟ್ ಅಲ್ಲಿ ಏನಿರುತ್ತೆ? ಅದೊಂತರಹ ಹಳಸಿದ ಅನ್ನದ ತರಹ. ಎಲ್ಲರೂ ಓದಿ, ನೋಡಿ ಬಿಟ್ಟಿರುವುದೇ ಅಲ್ಲಿರುವುದು, ಅದರಲ್ಲಿ ಹೊಸದೇನು ಇರುವುದಿಲ್ಲ, ಅದರಲ್ಲಿರುವುದೆಲ್ಲ ಹಳಯದೇ" ಎಂದು ಬಿಟ್ಟ. ನನಗೆ ಆತನ ಮಾತು ಸಹ್ಯವಾಗದೇ, ಚಿಕ್ಕ ಧ್ವನಿಯಲ್ಲಿ ಆತನನ್ನು ಕೇಳಿದೆ "ನಾವು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣ? ಅದು ಹಳಸಿದ್ದಲ್ಲವೇನು?" ಎಂದು. ಆತನಲ್ಲಿ ಉತ್ತರವಿರಲಿಲ್ಲ. ನನ್ನ ಮಾತು ಕೇಳಿಸಿಕೊಂಡ ನನ್ನ ಪರಿಚಿತರ ಮನೆಯಾಕೆಗೆ ನನ್ನ ಮನೆಯಾಕೆಗೆ ಅರ್ಥವಾಗಿ, ನಕ್ಕು ಚಹಾಮಾಡುವ ನೆಪದಿಂದ ಒಳಗೆ ಹೋದಳು.

ಅದೊಂದು ಚಿಕ್ಕ ಪ್ರಶ್ನೆಯಾದರೂ, ನನ್ನ ಮನದಾಳದಲ್ಲಿ ಹೊಕ್ಕು ಬಹಳದಿನಗಳಿಂದ ಕೊರೆಯುತಿತ್ತು. ಇಂಟರ್ನೆಟಲ್ಲಿರುವುದೆಲ್ಲಾ ಹಳೆಯದೇ, ಹಳಸಿದ್ದೇ ನಿಜ ಒಪ್ಪಿಕೊಳ್ಳೋಣ, ಆದರೆ ನಾವು ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣ, ಇದೇನು ಹೊಸತೇ? ನಾವು ಓದುವಾಗಿನ ವಿಷಯಗಳನ್ನು, ನಮ್ಮ ತಮ್ಮಂದಿರೂ, ನಮ್ಮ ತಂಗಿಯರೂ ಕೂಡ ಓದಲಿಲ್ಲವೇ? ಇನ್ನೂ ನಮ್ಮ ಇತಿಹಾಸ ಇದೇನು ಹೊಸತೇ, ಎಲ್ಲರೂ ಓದಿದ ಇತಿಹಾಸವನ್ನೇ ನಾವು ಓದಲಿಲ್ಲವೇ? ನಮ್ಮ ಸಂವಿಧಾನ, ನಮ್ಮ ಭಾಷೆ, ನಮ್ಮ ವಿಜ್ನಾನ ಇವುಗಳಲ್ಲಿ ಎಷ್ಟು ಹೊಸತಿದೆ? ಇವುಗಳಲ್ಲೂ ಬಹುಪಾಲು ಹಳೆಯದೇ ಅಲ್ಲವೇ? ಹಾಗಂತ ಇವುಗಳನ್ನು ನಾವು ನಮ್ಮ ಮಕ್ಕಳಿಗೆ ಹೇಳಿ ಕೊಡುವುದಿಲ್ಲವೇ? ನಮ್ಮ ರಾಮಾಯಣ, ಮಹಾಭಾರತಗಳು, ಪಂಚತಂತ್ರ ಕಥೆಗಳು ಇವೆಲ್ಲವೂ ಹಳತಲ್ಲದೇ ಹೊಸದೇನಲ್ಲವಲ್ಲ.

ಇನ್ನೂ ಈ ಜಗತ್ತಿನಲ್ಲಿ ಹೊಸತು ಎನ್ನುವುದಾದರೂ ಎಷ್ಟಿದೆ? ಒಂದೊಮ್ಮೆ ಹೊಸದೊಂದು ಘಟನೆ ನಡೆದರೂ, ಅದು ಎಷ್ಟು ದಿನ ಹೊಸತಾಗಿರುತ್ತದೆ. ಘಟನೆ ನಡೆಯುವುದೇ ತಡ, ದಿನಕ್ಕೆ ಹತ್ತಿಪ್ಪತ್ತು ಭಾರಿ ಬ್ರೆಕಿಂಗ್ ಸುದ್ದಿಯಾಗಿ ದೂರದರ್ಶನದಲ್ಲಿ ಬಿತ್ತರವಾಗುತ್ತಿರುತ್ತದೆ. ಹಾಗಂತ ನಾವು ದೂರದರ್ಶನವನ್ನು ಮತ್ತೆ ಮತ್ತೆ ನೋಡುವುದಿಲ್ಲವೇ. ಇಂದು ದೂರದರ್ಶನದಲ್ಲಿ ಹತ್ತಾರು ಭಾರಿ ಪ್ರಸಾರವಾದ ಸುದ್ದಿ, ಮರುದಿನ ಮತ್ತೆ ವ್ರತ್ತ ಪತ್ರಿಕೆಯಲ್ಲಿ ಪ್ರಕಟವಾದಾಗ ನಾವದನ್ನು ಮತ್ತೆ ಓದುವುದಿಲ್ಲವೇ? ಅದೇ ವ್ರತ್ತ ಪತ್ರಿಕೆ ನಾಳೆ ಹಳತಾಗಿ ರದ್ದಿಯಾದ ಮೇಲೂ ಅದೇ ಸುದ್ದಿ ಮತ್ತೆ ವಾರ ಪತ್ರಿಕೆಯಲ್ಲಿ ಪ್ರಕಟವಾಗುವುದಿಲ್ಲವೇ?

ಇಲ್ಲಿ ನಮಗೆ ವಿಷಯ ಹಳೆಯದೋ, ಹೊಸತೋ ಮುಖ್ಯವಲ್ಲ. ಕೆಲವರಿಗೆ ಹಳೆತಾಗಿರುವ ವಿಷಯ ಇನ್ನು ಕೆಲವರಿಗೆ ಹೊಸತಾಗಿರಬಹುದು. ಕೆಲವರು ವಿಷಯ ಹಳತಾಗಿದ್ದರೂ ಮತ್ತೆ ಮತ್ತೆ ಓದುವುದಿಲ್ಲವೇ? ಒಂದೇ ವಿಷಯದ ಬಗ್ಗೆ ಹಲವಾರು ಜನ ಹಲವಾರು ರೀತಿ ಬರೆಯುವುದಿಲ್ಲವೇ? ಸೂರ್ಯ ಚಂದ್ರರ ಬಗ್ಗೆ ಅದೆಷ್ಟು ಜನರಿಗೆ ಗೊತ್ತಿಲ್ಲ ಹೇಳಿ, ಅವುಗಳ ಬಗ್ಗೆ ಅದೆಷ್ಟು ಜನ ಕವಿತೆ, ಲೇಖನ ಬರೆದಿಲ್ಲ. ನಮಗೆ ಸೂರ್ಯ ಚಂದ್ರ ಬಗ್ಗೆ ತಿಳಿದಿದೆ ಎಂದು ನಾವದನ್ನು ಓದುವುದಿಲ್ಲವೇ? ಇಲ್ಲಿ ನಮಗೆ ವಿಷಯ ಮುಖ್ಯವಲ್ಲ, ವ್ಯಕ್ತಿಯ ಬರವಣಿಗೆ, ಅವನು ಮಾಡಿದ ವಿಷಯದ ಪ್ರಸ್ತಾಪ ಮುಖ್ಯವಾಗಿರುತ್ತೆ ಅಲ್ಲವೇ?

ಇನ್ನೂ ಇಂಟರ್ನೆಟ್, ಇಂಟರ್ನೆಟ್ ಅಲ್ಲಿ ಏನಿದೆ, ಏನಿಲ್ಲ? ಗೂಗಲ್, ಯಾಹೂ ಮುಂತಾದ ಸರ್ಚ ಇಂಜಿನಗಳ ಸಹಾಯದಿಂದ ಅದೆಷ್ಟು ಉಪಯೋಗಕರ ಮಾಹಿತಿಯನ್ನು ಹುಡುಕಿ ಹೊರತೆಗೆಯಬಹುದು. ಅದಷ್ಟೇ ಏನು? ಇಂಟರ್ನೆಟ್ ಇಂದ ಕ್ಷಣಾರ್ಧದಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದು, ಮನೆಯಲ್ಲೇ ಕುಳಿತು ಸಾಮಾನುಗಳನ್ನು ಖರಿದಿಸಬಹುದು, ಸಂದೇಶ ರವಾನಿಸಬಹುದು, ಎಲ್ಲೋ ಇರುವ ಗೆಳೆಯನ ಜೊತೆ ಮಾತನ್ನಾಡಬಹುದು, ಚಲನ ಚಿತ್ರಗಳನ್ನು ವೀಕ್ಷಿಸಬಹುದು, ಕಳೆದು ಹೋದ ಗೆಳೆತನವನ್ನು ಮತ್ತೆ ಸಂಪಾದಿಸಬಹುದು, ನಿಮ್ಮದೇ ಆದ ವೆಬ್ ಸೈಟ್ಗಳನ್ನು ರಚಿಸಬಹುದು ಹೀಗೆ ಒಂದೇ, ಎರಡೇ. ಇಲ್ಲಿ ಕೆಟ್ಟದ್ದು ಇಲ್ಲ ಅಂತಲ್ಲ, ಇಲ್ಲೂ ಕೆಟ್ಟದ್ದೂ ಇದೆ. ಇಂದು ಕೆಟ್ಟದೆನ್ನುವುದು ಎಲ್ಲಿಲ್ಲ ಹೇಳಿ, ಎಲ್ಲಿ ಒಳೆಯದಿದೆಯೋ, ಅಲ್ಲಿ ಕೆಟ್ಟದ್ದು ಇದೆ. ಒಳ್ಳೆಯದನ್ನು ತೆಗೆದುಕೊಂಡು, ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಮಾತ್ರ ನಮಗೆ ಒಳ್ಳೆಯದಾಗುತ್ತದೆ ಅಲ್ಲವೇ.

ಯಾವುದೇ ವಿಷಯವನ್ನು ಹಳೆಯದು, ಹಳಸಿದ್ದು ಎನ್ನುವುದಕ್ಕೆ ಮೊದಲು, ಅದರಲ್ಲಿ ಏನಿದೆ, ಅದರಿಂದ ನನಗೇನು ಉಪಯೋಗ ಎನ್ನುವುದರ ಬಗ್ಗೆ ಚಿಂತಿಸುವುದು ಒಳ್ಳಯದಲ್ಲವೇ? ಒಂದೇ ವಸ್ತು ಬೇರೆ ಬೇರೆ ಜನರಿಗೆ ಬೇರೆ, ಬೇರೆ ರೀತಿ ಕಾಣಿಸಬಹುದು. ನಮ್ಮ ನಮ್ಮ ಭಾವನೆಗಳಿಗೆ ತಕ್ಕಂತೆ ನಾವು ಗ್ರಹಿಸುವ ವಿಷಯವೂ ಕೂಡ ಬೇರೆ ಬೇರೆಯಾಗಿರುತ್ತದೆ ಅಲ್ಲವೇ? ಹಾಗಾಗಿ ಯಾವುದೇ ವಿಷಯವನ್ನು ಹಳೆಯದ್ದು ಹಳಸಿದ್ದು ಎನ್ನುವುದರ ಮೊದಲು ಅದರ ಬಗ್ಗೆ ಮೊದಲು ಯೋಚಿಸುವುದು ಒಳ್ಳಯದಲ್ಲವೇ? ನಮಗೆ ಗೊತ್ತಿಲ್ಲದ ವಿಷಯವನ್ನು ಎಲ್ಲಿಂದ, ಯಾವಾಗ, ಯಾರಿಂದ ತಿಳಿದರೇನು?

--ಮಂಜು ಹಿಚ್ಕಡ್ 

Monday, November 18, 2013

ನಮ್ಮ ದಾಂಪತ್ಯ!

ದಿನಗಳೆದಂತೆ ಎಲ್ಲಾ
ಹಳತಾಗುವುದಾದರೆ
ಏಕಿನ್ನೂ ಹೊಸತಾಗಿಹುದು
ನಮ್ಮ ದಾಂಪತ್ಯ.

ದಿನಗಳೆದಷ್ಟು
ಹಳತಾದಷ್ಟು
ಹೊಸ ಬಗೆಯ
ಅನುಭವಗಳನು
ಎರೆಯುವುದು
ದಿನ ನಿತ್ಯ.

ಅಪಥ್ಯವೆನಿಸಿದರೂ
ಪಥ್ಯವಾಗದೂ
ನಿನ್ನ ಸಾಂಗತ್ಯ.

ಹಾಗಾಗಿ ಒಮ್ಮೆ
ಹಳತಂತೆ ಕಂಡರೂ
ನಿತ್ಯ ಹೊಸತೆನಿಸುವುದು
ನಮ್ಮ ದಾಂಪತ್ಯ.

--ಮಂಜು ಹಿಚ್ಕಡ್ 

Sunday, November 17, 2013

ಹೆದರಿಕೆ!

ಅವನ ಆ ಬರೀ
ಬಾಯಿ ಮಾತಿಗೆ
ಹೆದರುವ ಕುವರಿ
ನಾನಲ್ಲ ಎಂದವಳು,

ಹೆದರಿ, ಬೆದರಿ, ಬೆವರಿ
ಬಸವಳಿದು ಕುಳಿತಿದ್ದಳು,
ಅವನ ಬಾಯಿ
ಹೊರಸುಸುತ್ತಿದ್ದ ಆ
ಗುಟ್ಕಾ ವಾಸನೆಗೆ.

--ಮಂಜು ಹಿಚ್ಕಡ್ 

Saturday, November 16, 2013

ನಮ್ಮ ಬೆಂಗಳೂರ ಮಳೆ!

ಜಯನಗರದಲ್ಲುಂಟು, ಜೇಪಿ ನಗರದಲ್ಲಿಲ್ಲ
ಕೊಡೆಯಿಲ್ಲದಿರೆ ಉಂಟು, ಕೊಡೆಯಿದ್ದರೆ ಇಲ್ಲ
ಮೋಡಗಳಿಲ್ಲ, ಇಂದು ಮಳೆ ಬಾರದು ಅಂದರೂ
ಇನ್ನೊಂದು ಕ್ಷಣದಲ್ಲೇ ನಮ್ಮ ಮುಂದೆ ಹಾಜರು.

ಒಮ್ಮೊಮ್ಮೆ ಗುಡುಗು-ಮಿಂಚುಗಳ ಓಕುಳಿಯಾಟ
ಆದರೂ ಸುರುವಾಗದು, ಈ ಮಳೆಯ ಆಟ
ಬಾರದು ಎಂದು ಈ ಮಳೆಯ ನಂಬಿ ಹೋದರೆ
ಮಳೆ ಬಂದು, ಸಿಗಲಾರದು ನಿಂತು ಕೊಳ್ಳಲು ಆಸರೆ.

ಒಮ್ಮೆ ಧೋ ಎಂದು ಹೊಯ್ದು
ಉಬ್ಬು ತಗ್ಗುಗಳನ್ನೆಲ್ಲ ತೊಯ್ದು
ಮತ್ತಿನ್ನು ಬರಬಹುದೇನೋ ಎಂದು
ಸುಸ್ತಾಗುವೆವು, ಕಾಯ್ದು-ಕಾಯ್ದು.

ಬಾರದು ಎಂದರು ಬಂದು, ವಾಹನದಟ್ಟಣೆಯ ಹೆಚ್ಚಿಸಿ
ಮನೆಯ ತಲುಪುವವರ ವೇಳೆಯನು ವ್ಯಯಿಸಿ
ನಿಲ್ಲುವುದೆಂದು ಕಾದವರನು ಕಾಯಿಸಿ ಸತಾಯಿಸಿ
ರಸ್ತೆಯಲ್ಲೆಲ್ಲ ನೀರ್ ಕಾಲುವೆಯನು ಹರಿಸಿ.

ರಸ್ತೆಯಲ್ಲಿದ್ದ ಮಣ್ಣು ದೂಳುಗಳೆಲ್ಲದರ ಸಂಹಾರ
ಮಳೆ ನೀರು, ಚರಂಡಿ ನೀರುಗಳ ಸಮ್ಮಿಶ್ರ ಸರ್ಕಾರ
ಹೀಗುಂಟು ನಮ್ಮ ಬೆಂದಕಾಳೂರ ಮಳೆ
ಮಳೆ ಬಂದರೆ ಅಲ್ಲವೇ, ಈ ಇಳೆಗೊಂದು ಕಳೆ.

--ಮಂಜು ಹಿಚ್ಕಡ್

ಆಶಾಭಂಗ!

ನನ್ನ ಮೋಹಕ ನೋಟಕ್ಕೆ 
ನಿನ್ನ ಕುಹಕ ನಗೆಯಾಕೆ?
ನೋಟವನರಿಯದ ನೀನು
ನನ್ನ ಅರಿತೆಯೇನು?
ಬರೀಯ ಆತುರದಿ ಕಾತರಿಸಿ
ಬಳಿ ಬರುವ ನಿನಗೆ
ನಾನಾದರೇನು?
ಹಿತ್ತಲದಿ ಮುರಿದು ಬಿದ್ದಿಹ
ಒಣ ಮರವಾದರೇನು?

--ಮಂಜು ಹಿಚ್ಕಡ್ 

Wednesday, November 13, 2013

ಈ ಬಾಳಿಗೇನು ಬೇಕು?

ಹಲವು ಭಾವ ಬೇಕು ನಮಗೆ 
ಕ್ಷಣಿಕ ಜೀವ ತೇಯಲು.
ಹಲವು ಕನಸು ಬೇಕು ನಮಗೆ,
ಕೆಲವು ನನಸಾಗಲು.

ನಯವು ಬೇಕು, ವಿನಯ ಬೇಕು
ನಮ್ಮ ಭಾವ ತಿಳಿಸಲು
ಒಮ್ಮೆ ನೀತಿ, ಒಮ್ಮೆ ಭೀತಿ
ಈ ಜೀವನ ಸಾಗಲು.

ಬಯಕೆ ಹಲವು ಬೇಕು ನಮಗೆ
ಬದುಕು ಬೆಳಕ ಕಾಣಲು
ಹಲವು ನೋವ ಕಾಣಬೇಕು
ಕೆಲವು ನಲಿವ ಸವಿಯಲು.

ಸುಖವು ಬೇಕು, ದುಖವು ಬೇಕು
ನಮ್ಮ ಬಾಳ ಪಯಣ ಸಾಗಲು
ಧನವು ಬೇಕು, ಮನವು ಬೇಕು
ತನುವು ಬದುಕಿ ಬಾಳಲು.

ಹಲುವು ತರದ ಪ್ರೀತಿ ಬೇಕು
ಬಾಳು ಮಧುರವಾಗಲು
ಛಲವು ಬೇಕು, ನಿಲುವು ಬೇಕು
ನಾವು ಬೆಳೆದು ನಿಲ್ಲಲು.

--ಮಂಜು ಹಿಚ್ಕಡ್ 

ಹಸಿವು!

ಕಣ್ಣು ಮಂಜಾಗಿ
ಉಸಿರು ಬಿಗಿಯಾಗಿ
ಬಾಯೆಲ್ಲಾ ಒಣಗಿ
ಹೊಟ್ಟೆ ತುಂಬಿದ ಗಾಳಿ
ಹೊರ ಬರುತಲಿವೆ
ಬರೀಯ ತೇಗುಗಳಾಗಿ,
ಕಾತರಿಸುತಿದೆ ಮನಸು
ನೀನೊಡ್ಡಲಿರುವ ಆ
ತುತ್ತು ಅನ್ನಕ್ಕಾಗಿ.

--ಮಂಜು ಹಿಚ್ಕಡ್