ಬದುಕು ಭವಣೆ ಬದಲಾಯಿಸಿತೇ
ವಿಧಿಯು ಬರೆದ ಬರಹ
ನೋವು-ನಲಿವು, ಹುಟ್ಟು-ಸಾವು
ಹೀಗೆ ಹತ್ತು-ಹಲವು ತರಹ!
ಸುಖ-ದುಖಗಳೆರಡು ಒಂದೇ
ಎಂದು ಬಾಳಿದರೆ ಬದುಕು
ಅರಿತು ಬಾಳಿದರೆ ತಾನೇ
ಮೂಡುವುದು ಮನದಿ ಬೆಳಕು!
ತನುವು ಬೇಕು, ಮನವು ಬೇಕು
ಈ ಜೀವನ ಸಾಗಲು
ರಾತ್ರಿ-ಹಗಲುಗಳೆರಡು ಬೇಕು
ಒಂದು ದಿನವು ಕಳೆಯಲು!
ಬಣ್ಣ ಬಣ್ಣದ ಲೋಕ ನೋಡಲು ಬೇಕು
ಕಪ್ಪು-ಬಿಳುಪಿನ ನಯನ
ಉಬ್ಬು-ತಗ್ಗುಗಳಿರದೆ ಸಾಗಿತೇ
ನಮ್ಮ ಬದುಕಿನ ಪಯಣ!
-- ಮಂಜು ಹಿಚ್ಕಡ್
No comments:
Post a Comment