Monday, July 13, 2015

ಹುಡುಕಾಟದ ಹಾದಿಯಲ್ಲಿ

ಹುಡುಕಾಟದ ಹಾದಿಯಲ್ಲಿ:ಭಾಗ ೨
ಹುಡುಕಾಟದ ಹಾದಿಯಲ್ಲಿ:ಭಾಗ ೩
ಹುಡುಕಾಟದ ಹಾದಿಯಲ್ಲಿ:ಭಾಗ ೪
"ನಮಸ್ಕಾರ ಸರ್, ನಾನು ಸಂತೋಷ ಅಂತ, ನಿಮ್ಮ ಕಂಪನಿಯಲ್ಲಿ ಹೊಸಬರಿಗೆ  ಸಂದರ್ಶನ ಇವತ್ತು ನಡೆಯುತ್ತಿದೆ ಎಂದು ನನ್ನ ಗೆಳೆಯರಿಂದ ತಿಳಿಯಿತು. ಆ ಸಂದರ್ಶನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ." ಎಂದು ಹೇಳುತ್ತಾ ತನ್ನ ಬ್ಯಾಗಿನಲ್ಲಿದ್ದ ಬಾಯೋಡಾಟಾವನ್ನು ತೆಗೆದು ಸೆಕ್ಯೂರಿಟಿ ಗೇಟಿನಲ್ಲಿದ್ದ ಸೆಕ್ಯೂರಿಟಿ ಗಾರ್ಡಗೆ ಕೊಡಲು ಹೋದ.

ಸೆಕ್ಯೂರಿಟಿ ಗಾರ್ಡ ಅದನ್ನು ತೆಗೆದು ಕೊಳ್ಳದೇ, ಅವನಿಗೆ "ನಮಗೆ ತಿಳಿದ ಮಟ್ಟಿಗೆ ಇಂದು ಇಲ್ಲಿ ಯಾವುದೇ ಸಂದರ್ಶನ ನಡೆಯುವ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ. ಒಂದು ನಿಮಿಷ ನಿಲ್ಲಿ, ನಾನು ವಿಚಾರಿಸುತ್ತೇನೆ," ಎಂದು ಸೆಕ್ಯೂರಿಟಿ ಕೌಂಟರನಿಂದ ಇಂಟರಕಾಮ್ ಮೂಲಕ ಯಾರಿಗೋ ಕರೆ ಮಾಡಿ ಇಟ್ಟು " ನೋಡಿ ಸಂತೋಷ ಇಲ್ಲಿ ಯಾವುದೇ ಇಂಟರವ್ಯೂನ ವ್ಯವಸ್ಥೆಯಾಗಿಲ್ಲ. ಬಹುಶಃ ನಮ್ಮ ಐಟಿ. ಪಿ. ಎಲ್ ಅಥವಾ ವೈಟ್ ಪೀಲ್ಡ್ ಗಳಲ್ಲಿರುವ ನಮ್ಮ ಉಳಿದ ಬ್ರಾಂಚಗಳಲ್ಲಿ ಇಂಟರವ್ಯೂವ ನಡಿತಾ ಇದ್ದರೂ ಇರಬಹುದು. ನೀವು ಅಲ್ಲಿಗೆ ಹೋಗಿ ಬೇಕಿದ್ದರೆ ವಿಚಾರಿಸಬಹುದು." ಎಂದು ಹೇಳಿ ತನ್ನ ಕೆಲಸದಲ್ಲಿ ಮಗ್ನನಾದ.

ಸಂತೋಷ ತಾನು ಕಟ್ಟಿದ ಕೈ ಗಡಿಯಾರವನ್ನು ನೋಡಿದ ಅದರಲ್ಲಿ "ಏಳು ಗಂಟೆ" ಎಂದು ತೋರಿಸುತ್ತಿದ್ದರೂ, ನಿಜವಾದ ಸಮಯ "೬-೪೫" ಎಂದು ಅವನಿಗೆ ತಿಳೀದಿತ್ತು. ಅವನಿಗೆ ಯಾವಾಗಲೂ ಗಡಿಯಾರದ ಸಮಯವನ್ನು ಮುಂದಿಟ್ಟೇ ಅಭ್ಯಾಸ. ಇನ್ನೂ ಸಂದರ್ಶನ ಪ್ರಾರಂಭವಾಗಲೂ ೨ಗಂಟೆಗಿಂತಲೂ ಹೆಚ್ಚಿನ ಸಮಯವಿದ್ದರೂ ಅದು "ವಾಕ್ ಇನ್" ಆದುದರಿಂದ ಬಹಳ ಜನ ಬರುತ್ತಾರೆಂದು ಅವನಿಗೂ ಗೊತ್ತು. ಇದೇ ರೀತಿ ಕಳೆದ ಒಂದು ವರ್ಷದಿಂದ ಇಂತಹ ಅದೆಷ್ಟೋ ವಾಕ್ ಇನಗಳಿಗೆ ಹೋದ ಅನುಭವವಿತ್ತಲ್ಲವೇ ಅವನಿಗೆ. ಹಾಗಾಗಿಯೇ ಆತ ಬೇಗನೇ ಎದ್ದು ತನ್ನ ರೂಮಿನ ಸ್ನೇಹಿತರಿಗೂ ತಿಳಿಸದೇ ರೂಮಿನಿಂದ ಹೊರಟು ಬಂದಿದ್ದ. ಸಂದರ್ಶನಕ್ಕೆ ಇನ್ನೂ ಎರಡುಗಂಟೆಳಿವೆಯಾದರೂ ತಾನೂ ಅಲ್ಲಿಗೆ ಹೋಗುವುದು ತಡವಾದರೆ ನೂಕು ನುಗ್ಗಲಾಗುತ್ತದೆ. ಏನು ಮಾಡುವುದು ಎಂದು ಎಂದು ವಿಚಾರಮಾಡುತ್ತಾ ಒಂದೆರಡು ನಿಮಿಷ ನಿಂತವನು. ಒಮ್ಮೆ ಹೋಗಿ ನೋಡಿಯೇ ಬಿಡೋಣವೆಂದು ಬಸ್ ನಿಲ್ದಾಣದತ್ತ ಹೊರಟ.

ನಿನ್ನೆ ಸಾಯಂಕಾಲವಷ್ಟೇ ಅವನಿಗೆ ಈ ಸಂದರ್ಶನದ ಬಗ್ಗೆ ತಿಳಿದದ್ದು. ಆವನ ಹಾಗೆಯೇ ನೌಕರಿ ಹುಡುಕುತಿದ್ದ ಅವನ ಸ್ನೇಹಿತ ಪ್ರಕಾಶ ಅವನಿಗೆ ಕರೆಮಾಡಿ " ನಾಳೆ ಆ ಕಂಪನಿಯಲ್ಲಿ ಇಂಟರ್ವ್ಯೂವ್ ಇದೆ ಅಂತೆ, ನಾನು ಇಲ್ಲಿ ಯಾರೋ ಇಬ್ಬರು ಉತ್ತರ ಭಾರತದ ಕಡೆಯ ಹುಡುಗರು ಮಾತನಾಡುವುದನ್ನು ಕೇಳಿಸಿಕೊಂಡೆ. ನಾನು ಹೋಗುತಿದ್ದೇನೆ, ನೀನು ಬರುತ್ತೀಯಾ?" ಎಂದು ಕೇಳಿದಾಗ "ಹೂಂ, ಆಯ್ತು ಬರುತ್ತೇನೆ" ಎಂದು ಹೇಳಿ, ಎಡ್ರೆಸ್ ಕೂಡ ಕೇಳುವುದನ್ನು ಮರೆತು ಫೋನ್ ಇಟ್ಟು ಬಿಟ್ಟ. ಆದರೆ ಅವನಿಗೆ ಆ ಕಂಪನಿ ಎಲ್ಲಿ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ರಾತ್ರಿ ತನ್ನ ರೂಂನ ಸಹಪಾಟಿಯೊಂದಿಗೆ ಕೇಳಿದಾಗ, ಅವನು ಅದು ಬಹುಶಃ ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಇರಬಹುದು. ನಾನು ಒಮ್ಮೆ ನೋಡಿದ ಹಾಗಿದೆ, ಎಂದು ಹೇಳಿದ್ದಷ್ಟನ್ನೇ ಕೇಳಿ ಅಲ್ಲಿಗೆ ಬಂದಿದ್ದ. ಅವನ ಸ್ನೇಹಿತನಿಗೆ ಕರೆ ಮಾಡಿ ಕೇಳೋಣವೆಂದರೆ ಕರೆನ್ಸಿ ಬೇರೆ ಇಲ್ಲ. ಕರೆನ್ಸಿ ಹಾಕೋಣವೆಂದರೆ ಕಿಸೆಯಲ್ಲಿ ಇದ್ದುದೇ ೧೭೦ ರೂಪಾಯಿ. ಕರೆನ್ಸಿಗೆ ರೊಕ್ಕ ಕರ್ಚು ಮಾಡಿದರೆ ಮಧ್ಯದಲ್ಲಿ ಬೇರೆ ಯಾವುದಕ್ಕಾದರೂ ಹಣ ಬೇಕಾದರೆ ಎಂದು ಕರೆನ್ಸಿ ಬೇರೆ ಹಾಕಿರಲಿಲ್ಲ. ಅವನ ಹತ್ತಿರ ಬಸ್ ಪಾಸ್ ಇದ್ದುದರಿಂದ ಬಸ್ಸಿನಲ್ಲಿ ಓಡಾಡುವುದಕ್ಕಂತೂ ತೊಂದರೆ ಇರಲಿಲ್ಲ.

ಸಮೀಪದ ಬಸ್ ನಿಲ್ದಾಣಕ್ಕೆ ಬಂದು ಐದು ನಿಮಿಷವಾಗುತ್ತಾ ಬಂದರೂ ಅವನು ಕಾಯುತಿದ್ದ ಬಸ್ ಬರುತ್ತಿರಲಿಲ್ಲ. ಒಂದೆರಡು ವೋಲ್ವೋ ಬಸ್ಸುಗಳು ಬಂದು ಹೋದರೂ ಅವನಿಗೆ ಆ ಬಸ್ಸುಗಳಿಂದ ಪ್ರಯೋಜನವಿರಲಿಲ್ಲ. ಹಾಗಾಗಿ ತನಗೆ ಪ್ರಯೋಜನವಾಗುವಂತಹ, ಅಂದರೆ ತನ್ನ ಪಾಸು ನಡೆಯುವ ಬಸ್ಸಿಗಾಗಿ ಕಾಯುತ್ತಾ ನಿಂತ. ಇನ್ನೈದು ನಿಮಿಷ ಕಳೆಯುವಷ್ಟರಲ್ಲಿ ಅವನು ಕಾಯುತಿದ್ದ ಸಾಮಾನ್ಯ ವರ್ಗದ ಬಸ್ಸು ಬಂತು. ಆ ಬಸ್ಸು ಜನರಿಂದ ತುಂಬಿ ಬಸುರಿ ಹೆಂಗಸಿನಂತಾಗಿದ್ದರಿಂದ ಅವನಿಗೆ ಒಳಗೆ ಸಂಪೂರ್ಣ ಹೋಗಲಾರದೇ ಬಾಗಿಲಿನಲ್ಲೇ ನಿಂತ. ಬಸ್ಸನ ಪಕ್ಕದಲ್ಲಿ ಹಾದು ಹೋಗುವ ಇತರೆ ಕಂಪನಿಯ ಕಾರುಗಳು, ಆ ಕಾರಿನಲ್ಲಿ ನಾಲ್ಕೈದು ಜನ ಕೂಡುವಂತಿದ್ದರೂ, ಒಂದಿಬ್ಬರೂ ಮಾತ್ರ ಆರಾಂ ಆಗಿ ಕುಳಿತು ಓಡಾಡುವುದನ್ನು ನೋಡಿ, ನಾನ್ಯಾವಾಗ ನೌಕರಿ ಹಿಡಿಯುವುದು, ನಾನ್ಯಾವಾಗ ಅವರಂತೆ ಓಡಾಡುವುದು, ಆಗಲೇ ಎಂ.ಎಸ್.ಸಿ ಮುಗಿಸಿ ವರ್ಷ ಕಳೆದರೂ ಇದುವರೆಗೂ ನೌಕರಿ ಇಲ್ಲ. ನನ್ನ ಹಣೆಬರಹಕ್ಕೆ ಈ ಹೊಟ್ಟೆ ತುಂಬಿದ ಬಸ್ಸುಗಳೇ ಗತಿ ಏನೋ? ಹೀಗೆ ಯೋಚಿಸುತಿದ್ದವನಿಗೆ, ಕಂಡಕ್ಟರ್, "ಗಾರೇಪಾಳ್ಯ, ಗಾರೇಪಾಳ್ಯ, ಯಾರ್ರೀ ಗಾರೇಪಾಳ್ಯ ಇಳಿವವರು ಇಳಿರಿ" ಎಂದೂ ಕೂಗಿ ಕೊಂಡಾಗ ತನ್ನ ವಿಚಾರದಿಂದ ಹೊರಬಂದು. ಬಾಗಿಲಿನಿಂದ ಇಳಿದು ಬಸ್ಸಿನಿಂದ ಅಲ್ಲಿ ಇಳಿಯುವವರಿಗೆ ಅವಕಾಶ ಮಾಡಿಕೊಟ್ಟು, ಜನರು ಇಳಿದ ಮೇಲೆ ಮತ್ತೆ ಬಸ್ಸನ್ನು ಏರಿದ.

ಆ ಜನರ ರಸ್ಸಿನಲ್ಲಿ ಅಲ್ಲಿಯವರೆಗೆ ಅದೂವರೆಗೂ ಬಂದು ತಲುಪಲಾರದ ಕಂಡಕ್ಟರ್, ಮುಂಬಾಗಿಲಿನಿಂದ ಇಳಿದು ಹಿಂಬಾಗಿಲಿನಲ್ಲಿ ಮತ್ತೆ ಹತ್ತಿ " ಟಿಕೇಟ್, ಟಿಕೇಟ್, ಯಾರ್ರಿ ನಿಮ್ದಾಯ್ತೇನ್ರೀ" ಎಂದು ಸಂತೋಷನನ್ನು ಕೆಳಿದಾಗ, "ಪಾಸ್" ಎಂದ.

"ಎಲ್ರಿ ಪಾಸು ತೋರ್ಸ್ರಿ"

"ತಗೊಳ್ಳಿ" ಎಂದು ತೋರಿಸಿ ಮತ್ತೆ ತನ್ನ ಅಂಗಿಯ ಕಿಸೆಯಲ್ಲಿಯೇ  ಇಟ್ಟುಕೊಂಡ. ಹಾಗೆ ಪಾಸನ್ನು ತೆಗೆದು ತೋರಿಸುವಾಗ, ಆ ಪಾಸಿಗೆ ಅಂಟಿಕೊಂಡಿದ್ದ ೨೦ರ ನೋಟೊಂದು ಕೆಳಗೆ ಬಿತ್ತು. ಅವನು ನೋಡುವಷ್ಟರಲ್ಲಿ ಅದು ಮಾಯವಾಗಿ ಇನ್ನಾರದೋ ಕಿಸೆಯನ್ನು ಸೇರಿಯೂ ಆಗಿತ್ತು. "ಥೂತ್, ಇಪ್ಪತ್ತು ರೂಪಾಯಿ ಹೋಯ್ತಲ್ಲ" ಎಂದು ಯೋಚಿಸುವಷ್ಟರಲ್ಲಿ ಬಸ್ಸು ಬೊಮ್ಮನಹಳ್ಳಿ ದಾಟಿ ಸಿಲ್ಕ ಬೋರ್ಡವರೆಗೆ ಬಂದಿತ್ತು. ಆ ಬಸ್ಸು ಮುಂದೆ ಮೆಜೆಸ್ಟಿಕ್ ಹೋಗುತ್ತಿದ್ದುದರಿಂದ ಆತ ಆ ಸಿಲ್ಕ ಬೋಡಿನಲ್ಲಿ ಇಳಿದು, ವೈಟಪೀಲ್ಡ್ ಅಥವಾ ಐಟಿಪಿಎಲ್ ಕಡೆ ಹೊರಡುವ ಬಸ್ಸುಗಳಿಗಾಗಿ ಸಿಲ್ಕಬೋರ್ಡ ಸಿಗ್ನಲ್ ದಾಟಿ ಎಚ್ಚೆಸ್ಸಾರ್ ಕಡೆಯ ರಸ್ತೆಯಲ್ಲಿ ಬಂದು ನಿಂತ.

(ಮುಂದುವರೆಯುವುದು...)

--ಮಂಜು ಹಿಚ್ಕಡ್

No comments:

Post a Comment