Sunday, June 28, 2015

ಬದುಕಿನ ಪಯಣ

ಬಸ್ಸು ಈಗ ಬಹುಶಃ ಚಿತ್ರದುರ್ಗದ ಹತ್ತಿರ, ಹತ್ತಿರ ಬಂದಿರಬಹುದೇನೋ ಎಂದುಕೊಳ್ಳುತ್ತಾ ತನ್ನ ಪಕ್ಕದ ಕಿಟಕಿಯನ್ನು ಸರಿಸಿ ಹೊರಗೆ ನೋಡಿದ. ಹುಣ್ಣಿಮೆಯ ತಿಂಗಳ ಬೆಳಕಲ್ಲಿ ಎತ್ತ ನೋಡಿದರೂ ಬಯಲು ಬಯಲಾಗಿ ಕಾಣುವ ಬಯಲು ಸೀಮೆಯ ಬಯಲು ಪ್ರದೇಶವೇ ಕಾಣುತ್ತಿತ್ತೇ ಹೊರತು, ಬಸ್ಸು ಎಲ್ಲಿಯವರೆಗೆ ಬಂದು ತಲುಪಿದೆ ಎನ್ನುವುದು ತಿಳಿಯಲಿಲ್ಲ. ಹೊರಗಿನ ತಂಗಾಳಿ ಬಸ್ಸಿನ ವೇಗಕ್ಕೆ ರಭಸವಾಗಿ ಬಳ ನುಗ್ಗುತ್ತಿದುದರಿಂದ, ಕಿಟಕಿಯನ್ನು ಹಾಗೆ ತೆಗೆದಿಡಲು ಮನಸ್ಸು ಬಾರದೇ, ಮತ್ತೆ ಮುಚ್ಚಿದ. ಚಳಿಗಾಲವಾಗಿದ್ದರಿಂದಲೋ ಏನೋ, ಹೊಟ್ಟೆ ತುಂಬಾ ನೀರು ತುಂಬಿ, ತೊಡೆಗಳ ಮದ್ಯದಲ್ಲಿ ಕೋಲಾಹಲವನ್ನೆಬ್ಬಿಸುತ್ತಿತ್ತು. ಬಸ್ಸು ನಿಲ್ಲಿಸಿದರೆ ಸಾಕು ಒಮ್ಮೆ ಹೊರಹೋಗಿ ಟ್ಯಾಂಕ್ ಖಾಲಿ ಮಾಡಿ ಬಂದು ಬಿಡಬೇಕು ಎಂದುಕೊಂಡು ಮತ್ತೆ ಕುಳಿತ. ಸಮಯ ಎಷ್ಟಾಗಿರಬಹುದು ಎಂದು ನೋಡೋಣವೆಂದುಕೊಂಡು ಕಿಟಕಿಯ ಗ್ಲಾಸಿನಿಂದ ಒಳತುರುಕುವ ಚಂದ್ರನ ಬೆಳಕಿಗೆ ತನ್ನ ಕೈಗಡಿಯಾರವನ್ನು ಒಡ್ಡಿದ. ಗಂಟೆ ಎರಡು ಕಳೆದು ಮೂರರತ್ತ ವಾಲಿದಂತೆ ಕಂಡಿತೆ ಹೊರತು ಸರಿಯಾಗಿ ಸಮಯವನ್ನು ಗುರುತಿಸಲಾಗಲಿಲ್ಲ. ಸ್ವಲ್ಪ ಹೊತ್ತಾದರೂ ಮಲಗೋಣವೆಂದು ಕುಳಿತ ಕುರ್ಚಿಗೆ ಸ್ವಲ್ಪ ಒರಗಿದ. ಬಸ್ಸಿನಲ್ಲಿ ಮಲಗಿ ಅಭ್ಯಾಸವಿಲ್ಲದ್ದರಿಂದಲೇ ಏನೋ ನಿದ್ದೆ ಹತ್ತಿರ ಸುಳಿಯಲಿಲ್ಲ. ನಿದ್ದೆ ಹತ್ತಿರ ಬರುತ್ತೇನೆ ಎಂದರೂ ಹೊಟ್ಟೆಯ ತಳಭಾಗದಲ್ಲಾಗುತ್ತಿರುವ ಕೋಲಾಹಲ ನಿದ್ದೆಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ.

ಹೊಟ್ಟೆ ಖಾಲಿ ಮಾಡದೇ ನಿದ್ದೆ ಬರಲಾರದು ಎಂದುಕೊಂಡವ ಡ್ರೈವರ್ನಿಗೆ ಸ್ವಲ್ಪ ಹೊತ್ತು ಬಸ್ಸು ನಿಲ್ಲಿಸಲು ಹೇಳಿ, ಹೊಟ್ಟೆ ಖಾಲಿ ಮಾಡಿ ಬಂದು ಬಿಡಬೇಕೆಂದು ನಿರ್ಧರಿಸಿ ಸೀಟಿನಿಂದ ಎದ್ದು ಡ್ರೈವರ್ನ ಬಳಿ ಹೋಗಿ ಸ್ವಲ್ಪ ಹೊತ್ತು ಬಸ್ಸು ನಿಲ್ಲಿಸುವಂತೆ ಬೇಡಿಕೊಂಡ. ಡ್ರೈವರ್ ಇವನ ಮುಖವನ್ನು ಕೂಡ ನೋಡದೇ "ಒಂದು ಹತ್ತು ನಿಮಿಷ ತಡಕೊಳ್ಳಿರಿ. ಟೋಲ್ ದಾಟಿದ ಮೇಲೆ ನಿಲ್ಲಿಸುತ್ತೇನೆ" ಎಂದ.

 ಹತ್ತು ನಿಮಿಷ ತಾನೆ ಹೇಗೂ ಇಷ್ಟು ಹೊತ್ತು ತಡೆದುಕೊಂಡಿದ್ದೇನೆ. ಇನ್ನೊಂದು ಹತ್ತು ನಿಮಿಷ ತಡೆದು ಕೊಂಡರಾಯಿತು ಎಂದುಕೊಂಡು ಮತ್ತೆ ಸೀಟಿನಲ್ಲಿ ಬಂದು ಕುಳಿತ. ಹತ್ತು ನಿಮಿಷ, ಟೋಲ್ ದಾಟಿದ ಮೇಲೆ ನಿಲ್ಲಿಸುತ್ತೇನೆ ಎಂದವನು ಟೋಲ್ ದಾಟಿ ಅರ್ಧಗಂಟೆ ಕಳೆದರೂ ಡ್ರೈವರ್ ನಿಲ್ಲಿಸಲಿಲ್ಲ. ಅವನ ಅವಸರ ಅವನಿಗೆ ಬಿಟ್ಟರೆ, ಬೇರೆ ಯಾರಿಗೆ ಗೊತ್ತಾಗಬೇಕು. ಎಲ್ಲರ ಬಳಿಯೂ ಹೇಲಿ ಕೊಳ್ಳಲು ಅದೇನು ಸಂಭ್ರಮದ ವಿಷಯವೇ. ಕುಳಿತು ಕುಳಿತು ಅವಸರ ಹೆಚ್ಚಾಗುತಿತ್ತೇ ಹೊರತು ಬಸ್ಸು ಮಾತ್ರ ನಿಲ್ಲಲಿಲ್ಲ. ಇನ್ನೂ ಕುಳಿತರೆ ತಡೆದುಕೊಳ್ಳುವುದು ಕಷ್ಟ ಎಂದನಿಸಿ, ಡ್ರೈವರ್ನನನ್ನ ಧಬಾಯಿಸಿಯಾದರೂ ಬಸ್ಸು ನಿಲ್ಲಿಸಬೇಕೆಂದು ಮತ್ತೆ ಹೊರಡುವ ಹೊತ್ತಿಗೆ "ಫಟ್" ಎನ್ನುವ ಶಬ್ಧ ಬಸ್ಸಿನ ಹಿಂದುಗಡೆಯ ಚಕ್ರದಿಂದ ಬಂತು. ಈಗ ಬಸ್ಸು ನಿಲ್ಲಿಸದೇ ಬೇರೆ ಗತಿಯಿಲ್ಲದ ಕಾರಣ ಡ್ರೈವರ್ನಿಗೆ ಬಸ್ಸು ನಿಲ್ಲಿಸಲೇ ಬೇಕಿತ್ತು. ಬಸ್ಸು ನಿಂತಿದ್ದೇ ತಡ ಗಿರೀಶ ಎಲ್ಲರಿಗಿಂತ ಮೊದಲು ಬಸ್ಸು ಇಳಿದ. ಬಸ್ಸಿನ ಹಿಂದೆ ಏನಾಗಿದೆ ಎಂದು ತಿಳಿಯುವ ಅವಸರಕ್ಕಿಂತ ಟ್ಯಾಂಕ್ ಖಾಲಿ ಮಾಡಬೇಕಾದ ಅವಸರ ಹೆಚ್ಚಾಗಿದ್ದರಿಂದ ಬಸ್ಸಿನ ಬಗ್ಗೆ ಯೋಚಿದದೇ, ಸ್ವಲ್ಪ ದೂರಕ್ಕೆ ಹೋಗಿ ಟ್ಯಾಂಕ್ ಖಾಲಿ ಮಾಡಿದ. ಹೊಟ್ಟೆಯ ಊರಿ ಸ್ವಲ್ಪ ಕಡಿಮೆಯಾದಂತೆ ಅನಿಸಿತು. ಟ್ಯಾಂಕ್ ಖಾಲಿ ಮಾಡಿದವನೇ ಬಸ್ಸಿನ ಹಿಂದಿನ ಚಕ್ರದ ಬಳಿ ಬಂದು ನಿಂತ. ಹಿಂದಿನ ಚಕ್ರ ಪಂಕ್ಚರ್ ಆಗಿದ್ದರಿಂದ ಚಕ್ರದ ಹೊಟ್ಟೆ ಬಿರಿದುಕೊಂಡು ಬಿಟ್ಟಿತು.

ಬಸ್ಸಿನ ಚಕ್ರವನ್ನು ಬದಲಿಸಿ ಇನ್ನೊಂದು ಚಕ್ರವನ್ನು ಹೊಂದಿಸುವವರೆಗೆ ಇನ್ನರ್ಧ ಗಂತೆ ಕಳೆದಿತ್ತು. ಚಂದ್ರನಾಗಲೇ ಪೂರ್ವದಿಕ್ಕನ್ನು ಬದಲಾಯಿಸಿ ಪಶ್ಚಿಮದ ದಿಕ್ಕಿನ ಮಡಿಲನ್ನು ಸೇರಿದ್ದ. ರಸ್ತೆ ಬದಿಯ ದೀಪದ ಸಹಾಯದಿಂದ ಸಮಯ ನೋಡಿದ, ಗಂಟೆ ಮೂರು ದಾಟಿತ್ತು. ಬಸ್ಸಿನ ನಿರ್ವಾಹಕ ಬಂದು ಹತ್ತಿ, ಹತ್ತಿ ಎಲ್ಲರನ್ನೂ ಅವಸರ ಪಡಿಸಿದ್ದರಿಂದ, ಎಲ್ಲರಂತೆ ಗಿರೀಶನು ಬಸ್ಸು ಹತ್ತಿ, ಅಂದಿನ ಮಟ್ಟಿಗೆ ಅವನದಾದ ಆಸನದಲ್ಲಿ ಆಸೀನನಾದ. ಬಸ್ಸು ಬೆಂಗಳೂರಿನತ್ತ ಚಲಿಸತೊಡಗಿತು. ಹೊಟ್ಟೆಯ ಊರಿ ಸ್ವಲ್ಪ ಕಡಿಮೆಯಾದ್ದರಿಂದ ಸ್ವಲ್ಪ ಹಿತವೆನಿಸತೊಡಗಿತು. ಹಾಗೆ ಸೀಟಿಗೆ ಒರಗಿದ ನಿದ್ದೆ ಮಾಡೋಣವೆಂದು. ನಿದ್ದೆ ಹತ್ತಿರ ಸುಳಿಯಲು ಪ್ರಯತ್ನಿಸಿ ಸೋತು ದೂರ ಸರಿಯಿತು. ಮನಸ್ಸು ಒಮ್ಮೆ ಮುಂದಕ್ಕೂ, ಒಮ್ಮೆ ಹಿಂದಕ್ಕೂ ಒಲಾಡತೊಡಗಿತು. ಮನಸ್ಸು ನೆಮ್ಮದಿಯಾಗಿದ್ದರೆ ತಾನೆ ನಿದ್ದೆ ಸುಳಿಯಲು ಸಾದ್ಯ.

-----------------   ೨  ---------------

"ಒಂದುವರೆ ವರ್ಷ ಆಯ್ತು ನೀನು ಬೆಂಗಳೂರಿಗೆ ಹೋಗಿ, ಇದುವರೆಗೂ ಒಂದು ನೌಕರಿ ಹಿಡಿಯಲು ಸಾಧ್ಯವಾಗಲಿಲ್ಲ ನಿನಗೆ. ನಿನ್ನ ವಯಸ್ಸಿನವರೆಲ್ಲ ಆಗಲೇ ನೌಕರಿ ಹಿಡಿದು ಮದುವೆಗೆ ಸಿದ್ದವಾಗಿದ್ದಾರೆ, ಆದರೆ ನೀನಿನ್ನೂ ನೌಕರಿ ಹುಡುಕುತ್ತಲೇ ಇದ್ದೀಯಾ. ನೌಕರಿ ನೌಕರಿ ಎಂದು ಬೆಂಗಳೂರು ಸುತ್ತುವ ಬದಲು ಊರಲ್ಲೇ ಬಂದು ಇದ್ದರೆ ಆಗಲ್ವೇ. ನೋಡು ಇದೇ ಕೊನೆ, ಈಗೇನೋ ಇಂಟರ್ವ್ವೂವ್ ಇದೆ ಎಂದು ಹೋಗುತ್ತಿದ್ದಿಯಾ ಮತ್ತೆ ನೌಕರಿ ಇಲ್ಲದೇ ವಾಪಸ್ ಬಂದು, ಮತ್ತೆ ಬೆಂಗಳೂರಿಗೆ ಹೋಗುತ್ತೇನೆ ಎಂದರೆ ನಾನು ಬಿಡುವುದಿಲ್ಲ. ನೌಕರಿ ಜೊತೆ ಬಂದರೆ ಒಳಿತು, ಇಲ್ಲ ಎಂದರೆ ಬೆಂಗಳೂರು ಕನಸು ಎಂದು ತಿಳಿದುಕೋ" ಎಂದು ಅಪ್ಪ ಬರುವಾಗ ಹೇಳಿದ್ದು ನೆನಪಾಯಿತು.

ಅಪ್ಪ ಹೇಳಿದ್ದರಲ್ಲಿ ತಪ್ಪೇನಿಗೆ. ವಯಸ್ಸಾದ ಕಾಲಕ್ಕೆ ತಮಗೆ ಮಕ್ಕಳು ದಿಕ್ಕಾಗಿರಲಿ ಎಂದು ಅವರು ಬಯಸುವುದು ತಪ್ಪೇ. ಆದರೆ ನಾನೇನು ಮಾಡಲಿ. ನಾನು ಅದೆಷ್ಟೇ ಪ್ರಯತ್ನಿಸಿದರೂ ಕರೆಗಳೇ ಬರುತ್ತಿಲ್ಲ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಕರೆ ಬಂದರೆ ಕೇಳೋದು ನೌಕರಿಯಲ್ಲಿ ಅನುಭವ. ನೌಕರಿ ಇಲ್ಲದೇ ಅನುಭವವಿಲ್ಲ, ಅನುಭವವಿಲ್ಲದೇ ನೌಕರಿ ಇಲ್ಲ. ಇದೊಂದರ ಬೀಜ ವೃಕ್ಷ ನ್ಯಾಯವಿದ್ದಂತೆ.

ಈ ಭಾರಿ ಎಷ್ಟು ಕಷ್ಟವಾದರೂ ಸರಿ ಇಂಟರ್ವೂವ್ ಪಾಸ್ ಮಾಡಲೇ ಬೇಕು. ಇಂದು ಇಲ್ಲ ಅಂದರೆ ಮುಂದೆಂದೂ ಇಲ್ಲ ಎಂದು ಯೋಚಿಸುತ್ತಾ ಕುಳಿತವನಿಗೆ "ಜಾಲಳ್ಳಿ ಕ್ರಾಸ್", "ಜಾಲಳ್ಳಿ ಕ್ರಾಸ್" ಎಂದು ಬಸ್ಸಿನಲ್ಲಿಯ ಹುಡುಗ ಕೂಗುತ್ತಾ ಬಳ ಬಂದ. "ಒಹ್ ಬಸ್ಸು ಆಗಲೇ ಬೆಂಗಳೂರು ತಲುಪಿತು ಎನಿಸಿತು. ಗಡಿಯಾರ ನೋಡಿದ, ಗಂಟೆ ೭ ಕಳೆದಿತ್ತು. ಆಗಲೇ ಸಾಕಷ್ಟು ಸಮಯವಾಗಿದೆ. ಬಸ್ಸು ಇನ್ನೊಂದು ಗಂಟೆಯೊಳಗೆ ನವರಂಗ ತಲುಪಿದರೆ ಒಳ್ಳೆದು, ಇಲ್ಲಾ ಅಂದರೆ ಜಾಮ್ ಆಗಿ ರೂಮು ಸೇರುವುದೇ ಕಷ್ಟ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. ಒಂದೊಮ್ಮೆ ಮನೆ ಸೇರುವುದು ತಡವಾದರೆ ರೆಡಿಯಾಗಿ ಇಂಟರ್ವೂವ್ಗೆ ಹೋಗಲು ತಡವಾಗುತ್ತದೆ ಎನ್ನುವ ಆತಂಕ ಒಮ್ಮೆ ಮನಸ್ಸನ್ನು ಕಾಡಿ ಮರೆಯಾಯಿತು

ಎಂದಿನಷ್ಟು ಬೆಂಗಳೂರಿನ ಟ್ರಾಪಿಕ್ ಇಂದಿಲ್ಲದ ಕಾರಣದಿಂದಲೋ ಏನೋ ಬಸ್ಸು ನವರಂಗ ತಲುಪಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಲಿಲ್ಲ. ಬಸ್ಸು ನವರಂಗ ತಲುಪಿ, ಅವನು ಅಲ್ಲಿಂದ ತನ್ನ ವಿಜಯನಗರದ ರೂಮು ಸೇರುವ ಹೊತ್ತಿಗೆ ಸಮಯ ೮-೩೦ ದಾಟಿತ್ತು. ಬೇಗ ಬೇಗ ಸ್ನಾನದ ಶಾಸ್ತ್ರ ಮುಗಿಸಿ, ಪ್ಯಾಂಟು ಅಂಗಿ ಧರಿಸಿ ಹೊರ ಬಂದ. ಹೊರ ಬಂದವನೇ ಧರಿಸುವ ಶೂ ನೋಡಿದ, ಶೂ ಸಾಕಷ್ಟು ಕೊಳೆಯಾದಂತೆ ಅನಿಸಿತು. ಶೂ ಕೈಗೆತ್ತಿಕೊಂಡು ಪಾಲಿಷ್ ಮಾಡುವಾಗ ಯಾಕೋ ಶೂ ತುಂಬಾ ಹಳತಾಗಿ ಸವೆದಂತೆ ಕಂಡಿತು. ಬೆಂಗಳೂರಿಗೆ ಬಂದ ಹೊಸತರಲ್ಲಿ, ಇಂಟರ್ವೂವ್ಗೆ ಎಂದು ತೆಗೆದುಕೊಂಡ ಆ ಕರಿಯ ಬಣ್ಣದ ಲೆದರ್ ಶೂ ಗೆ ಅವನು ಇಂಟರ್ವೂವ್ ಕೊಟ್ಟಷ್ಟೇ ಅನುಭವವಾಗಿತ್ತು. ಈಗ ಬೇರೆ ದಾರಿ ಇಲ್ಲ, ಸದ್ಯಕ್ಕೆ ಇದನ್ನೇ ಸ್ವಲ್ಪ ಪಾಲೀಷ್ ಮಾಡಿ ಧರಿಸಿಕೊಂಡು ಹೋಗೋಣ. ನೌಕರಿ ಸಿಕ್ಕ ಮೇಲೆ ಮತ್ತೊಂದು ಶೂ ಕರೀದಿಸಿದರಾಯಿತು ಎಂದುಕೊಂಡು ಅದೇ ಶೂ ಅನ್ನು ಪಾಲೀಷ್ ಮಾಡಿ ಧರಿಸಿದ. ಇಂಟರ್ವೂವ್ಗೆ ಅಂತಲೇ ಆಗಲೇ ಜೋಡಿಸಿಟ್ಟ ಬಯೋಡೇಟಾವನ್ನು, ಕಾಲ್ ಲೆಟರ್ನೊಂದಿಗೆ ತೆಗೆದುಕೊಂಡು ಮೆನೆಯಿಂದ ಹೊರಬಂದ.

ಇದೇ ತನ್ನ ಕೊನೆಯ ಇಂಟರ್ವೂವ್ ಎನ್ನುವ ಕಾರಣದಿಂದಲೋ ಏನೋ ಹಿಂದಿದ್ದ ಹೆದರಿಕೆ, ಆತಂಕ ಇಂದಿರಲಿಲ್ಲ. ಈಗ ಹೆದರಿಕೆಯ ಬದಲು ನೌಕರಿ ಗಿಟ್ಟಿಸಿಕೊಳ್ಳುವ ಛಲವಿತ್ತು. ನೌಕರಿ ಸಿಗದಿದ್ದರೆ ಎನ್ನುವ ಆತಂಕದ ಬದಲಿಗೆ, ಸಿಕ್ಕೆ ಸಿಗುತ್ತದೆ ಎನ್ನುವ ಆತ್ಮ ವಿಶ್ವಾಸವಿತ್ತು. ಒಂದೊಮ್ಮೆ ಸಿಗದಿದ್ದರೂ ಊರಲ್ಲಿಯೇ ಏನಾದರು ಮಾಡುವನೆನ್ನುವ ಭರವಸೆ ಇತ್ತು. ಆ ಒಂದು ಧೈರ್ಯದ ಮೇಲೆಯೇ ದಾಪುಗಾಲು ಇಡುತ್ತಾ ಬಸ್ ನಿಲ್ದಾಣದತ್ತ ಹೊರಟ, ತನ್ನ ಹೊಸ ಬದುಕಿನ ಪಯಣಕ್ಕೆ ಹೊಸ ದಾರಿ ತೋರಲಿರುವ ದಿಕ್ಕಿನಡೆಗೆ ಹೊರಡಬಹುದಾದ ಬಸ್ಸನ್ನು ಬಯಸಿ.

--ಮಂಜು ಹಿಚ್ಕಡ್

No comments:

Post a Comment