Sunday, August 2, 2015

ಹುಡುಕಾಟದ ಹಾದಿಯಲ್ಲಿ- ಭಾಗ ೪

ಹುಡುಕಾಟದ ಹಾದಿಯಲ್ಲಿ ಭಾಗ ೧
ಹುಡುಕಾಟದ ಹಾದಿಯಲ್ಲಿ ಭಾಗ ೨
ಹುಡುಕಾಟದ ಹಾದಿಯಲ್ಲಿ ಭಾಗ ೩


"ಹಲೋ, ನಾನು ಸಂತೋಷ ಹತ್ತಿರ ಮಾತನಾಡಬಹುದೇ" ಎಂದು ಅತ್ತ ಕಡೆಯಿಂದ ಬಂದ ಹೆಣ್ಣು ಧ್ವನಿ ಉಲಿಯಿತು.

"ನಾನೇ ಸಂತೋಷ, ಹೇಳಿ ಏನಾಗಬೇಕಿತ್ತು?"

"ಹಾಯ್ ಸಂತೋಷ್, ನಾನು ಪ್ರೀತಿ, ಐಬಿಎಂ ಕಂಪನಿಯಿಂದ. ನೀವು ನಮ್ಮ ಕಂಪನಿಗೆ ಕೊಟ್ಟ ಇಂಟರ್ವೂವ್ ನಲ್ಲಿ ಸಿಲೆಕ್ಟ ಆಗಿದ್ದಿರಾ. ಶುಭಾಷಯಗಳು. ನಿಮ್ಮ ಆಫರ್ ಲೆಟರ್ ರೆಡಿ ಇದೆ. ನಿಮ್ಮ ಮಿಂಚಂಚೆಗೆ ಒಂದು ಪ್ರತಿಯನ್ನು ಕಳಿಸಿದ್ದೇವೆ. ನಿಮಗೆ ಒಪ್ಪಿಗೆಯಾದಲ್ಲಿ ಉತ್ತರಿಸಿ"

ಸಂತೋಷನಿಗೆ ತನ್ನ ಕಿವಿಗಳನ್ನು ನಂಬಲಾಗಲಿಲ್ಲ. ಹೌದು ಎರಡು ತಿಂಗಳ ಹಿಂದೆ, ಆ ಕಂಪನಿಗೆ ಇಂಟರ್ವೂವಗೆ ಹೋಗಿದ್ದು ನಿಜ. ಅಲ್ಲಿ ಮೂರು ಸುತ್ತು ಇಂಟರ್ವೂವ್ ಕೊಟ್ಟಿದ್ದು ನಿಜ. ಆದರೆ ಅಲ್ಲಿ ಸಿಲೆಕ್ಟ ಆಗುತ್ತೇನೆ, ಎಂದುಕೊಂಡಿರಲಿಲ್ಲ. ಯಾಕೆಂದರೆ ಅದೇ ರೀತಿ ಅವನು ಅದೆಷ್ಟೋ ಕಂಪನಿಗಳಿಗೆ ಇಂಟರ್ವೂವ್ ಕೊಟ್ಟು ಬಂದಿದ್ದ. ಎಲ್ಲ ಕಡೆ ಆಮೇಲೆ ಕರೆ ಮಾಡುತ್ತೇವೆ ಎಂದು ಕಳಿಸಿದ್ದರೇ ಹೊರತು ಯಾರು ಕರೆ ಮಾಡಿರಲಿಲ್ಲ. ಎರಡು ತಿಂಗಳ ಹಿಂದೆ ಆ ಕಂಪನಿಗೆ ಇಂಟರ್ವೂವ್ ಕೊಟ್ಟಾಗಲೂ ಅವರು ಹೀಗೆಯೇ ಹೇಳಿ ಕಳಿಸಿದ್ದರು.

"ಓಹ್ ಧನ್ಯವಾದಗಳು ಪ್ರೀತಿ. ಖಂಡಿತ. ನೋಡುತ್ತೇನೆ."

"ಸಂತೋಷ ಹಾಗೆ ಇನ್ನೊಂದು ವಿಷಯ, ಆಪರ್ ಲೆಟರನಲ್ಲಿ ನೋಡಿ, ನಿಮಗೆ ಒಪ್ಪಿಗೆ ಆದಲ್ಲಿ ಆ ಮೇಲ್ಗೆ ಉತ್ತರಿಸಿ. ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ಈ ನಂಬರಗೆ ಕರೆ ಮಾಡಬಹುದು".

"ಖಂಡಿತ ಪ್ರೀತಿ, ನಾನು ಏನಾದರೂ ಬೇಕಿದ್ದಲ್ಲಿ ಕರೆ ಮಾಡುತ್ತೇನೆ." ಎಂದು ಹೇಳಿ ಮತ್ತೊಮ್ಮೆ ಧ್ಯನ್ಯವಾದಗಳನ್ನು ತಿಳಿಸಿ ಮೊಬೈಲ ಇಟ್ಟ. ಮನಸ್ಸು ಸ್ವಲ್ಪ ಸಮಾಧಾನಗೊಂಡಿತ್ತು. ಪೆಟ್ಟಿಗೆ ಅಂಗಡಿಯವನಿಗೆ ರೊಕ್ಕ ಕೊಟ್ಟು, ಅವನ ಹಾಗೆ ಅಲ್ಲಿಗೆ ಚಹಾ ಕುಡಿಯಲು ಬಂದವರೊಬ್ಬರಿಗೆ, ಅಲ್ಲಿ ಯಾವುದಾದರೂ ಇಂಟರನೆಟ್ ಸೆಂಟರ್ ಇದೆಯಾ ಎಂದು ವಿಚಾರಿಸಿದ.

ಒಂದಿಷ್ಟು ಜನರನ್ನು ವಿಚಾರಿಸಿದ ಮೇಲೆ, ಅಲ್ಲಿ ಹತ್ತಿರದಲ್ಲಿ ಯಾವುದೇ ಇಂಟರನೆಟ್ ಸೆಂಟರಗಳಿಲ್ಲವೆಂದು, ಮಾರತಹಳ್ಳಿಗೆ ಹೋದರೆ ಬೇಕಾದಷ್ಟು ಇಂಟರನೆಟ್ ಸೆಂಟರಗಳು ಸಿಗುತ್ತವೆಂದು ಮಾರತಳ್ಳಿಯ ಕಡೆ ಹೊರಡುವ ಬಸ್ ಹತ್ತಲು ಬಸ್ ನಿಲ್ದಾಣಕ್ಕೆ ಹೋದ. ಅವನು ಬಸ್ ನಿಲ್ದಾಣ ತಲುಪುತಿದ್ದಂತೆ ಐ.ಟಿ.ಪಿ.ಎಲ್ ಕಡೆಯಿಂದ ಒಂದು ಪುಸ್ಬಕ ಬಸ್ ಬಂತು. ಅದನ್ನು ಹತ್ತಿ ಕುಳಿತ. ಮದ್ಯಾಹ್ನ ಅಷ್ಟೋಂದು ಟ್ರಾಪಿಕ್ ಇರದ ಕಾರಣ ೧೫-೨೦ ನಿಮಿಷದಲ್ಲಿ ಬಸ್ ಮಾರತಹಳ್ಳಿ ತಲುಪಿತು. ಮಾರತಹಳ್ಳಿ ಸೇತುವೆಯ ಹತ್ತಿರ ಇಳಿದು ಅಲ್ಲಿದ್ದ ಒಬ್ಬರನ್ನು ವಿಚಾರಿಸಿ ಅವರು ತೋರಿಸಿದ ನೆಟ್ ಸೆಂಟರಗೆ ಹೋದ ಸಂತೋಷ.

ತನ್ನ ಮೇಲ್ ಗೆ ಬಂದ ಆಪರ್ ಲೆಟರನ್ನು ನೋಡಿದ. ಸಂಬಳ ಚೆನ್ನಾಗಿಯೇ ಇತ್ತು. ಇನ್ನೊಂದು ಹದಿನೈದು ದಿನದಲ್ಲಿ ಸೇರಿಕೊಳ್ಳುವಂತೆ ತಿಳಿಸಿದ್ದರು. ಇನ್ನೊಮ್ಮೆ ಮತ್ತೊಮ್ಮೆ ಆಪರ್ ಲೆಟರನ್ನು ಪರಿಶೀಲಿಸಿ ನೋಡಿದ. ಎಲ್ಲವೂ ಅವನಿಗೆ ಒಳ್ಳೆಯದೆನಿಸಿತು. ಹೇಗೂ ನೌಕರಿ ಇಲ್ಲ ತಡಮಾಡುವುದು ಏಕೆ ಎಂದು ಅವರು ಹೇಳಿದ ದಿನವೇ  ಸೇರಿಕೊಳ್ಳುವುದಾಗಿ ಆ ಮೇಲ್ಗೆ ಉತ್ತರಿಸಿ, ನೆಟ್ ಸೆಂಟರಿನಿಂದ ಹೊರಗೆ ಬಂದು ಮಾರತ ಹಳ್ಳಿ ಬ್ರಿಜಗೆ ಬಂದು ಜಯನಗರ ಅಥವಾ ಜೇಪಿನಗರದ ತಮ್ಮ ರೂಮಿನ ಸಮೀಪದ ಕಡೆ ಹೋಗುವ ಬಸ್ಸುಗಳಿಗಾಗಿ ಕಾದು ನಿಂತ.

ಈಗ ಅವನ ಮನಸ್ಸು ಶಾಂತಗೊಂಡಿತ್ತು. ಆಗಿನ ಉದ್ವೇಗವಾಗಲೀ ಉದ್ಯೋಗದ ಚಿಂತೆಯಾಗಲೀ ಇಲ್ಲ. ಹಾಗಾಗಿ ಬಸ್ಸಿಗಾಗಿ ಅಷ್ಟೋಂದು ಆತುರವಿರಲಿಲ್ಲ. ಅಂತೂ ಹತ್ತು -ಹದಿನೈದು ನಿಮಿಷದಲ್ಲೇ ಬಸ್ಸು ಬಂತು. ಈಗ ಆಪೀಸಿನ ಸಮಯವಲ್ಲದ ಕಾರಣ ಬಸ್ಸುಕಳು ಆಗಿನಷ್ಟು ರಷ್ ಆಗಿರಲಿಲ್ಲ. ಬಸ್ ಏರಿದ, ಮದ್ಯದಲ್ಲಿ ಒಂದು ಸೀಟ್ ಸಿಕ್ಕಿತು. ಹೋಗಿ ಕುಳಿತ.

ಅವನು ಜಯನಗರದ ಇಸ್ಟ್ ಎಂಡ್ ಅಲ್ಲಿ ಇಳಿದು ಮನೆತಲುಪುವ ಹೊತ್ತಿಗೆ ನಾಲ್ಕು ಗಂಟೆಯಾಯಿತು.ಮನೆ ತಲಿಪುತಿದ್ದಂತೆ ಪ್ರಕಾಶನ ಕಾಲ್ ಬಂತು. ಆ ಕಡೆಯಿಂದ ಪ್ರಕಾಶ "ಹಾಯ್ ಸಂತೋಷ,ಇಂಟರವ್ಯೂವ್ ಏನಾಯ್ತೋ?" ಎಂದು ಕೇಳಿದ.

"ನಂದಿರಲೀ ನಿಂದೇನಾಯ್ತು?" ಎಂದು ಕೇಳಿದ ಸಂತೋಷ.

"ಹೇ, ಟೆಸ್ಟ್ ಬರೆದು, ಆಮೇಲೆ ಮೂರು ಸುತ್ತು ಇಂಟರವ್ಯೂವ್ ಮುಗಿಸುವಷ್ಟರಲ್ಲಿ ಇಷ್ಟೊತ್ತಾಯಿತು ನಂದು. ಇಂಟರವ್ಯೂವ್ ಆಗಿದೆ ಇನ್ನೊಂದು ವಾರದಲ್ಲಿ  ಆಪರ್ ಲೆಟರ್ ಕೋಡುತ್ತೇವೆಯೆಂದು ಎಚ್. ಅರ್ ಹೇಳಿದ್ದಾರೆ. ಆದರೂ ನೋಡಬೇಕು."

"ಓಹ್ ಗುಡ್, ಒಳ್ಳೆಯ ಸುದ್ದಿ. ಗುಡ್ ಲಕ್"

"ಧನ್ಯವಾದಗಳು, ಸಂತೋಷ. ನಿಂದೇನಾಯ್ತು? ಈಗ ಎಲ್ಲಿದ್ದೀಯಾ?"

"ಹೇಯ್ ನಂದೂ ಸೆಲೆಕ್ಟ್ ಆಗಿ ಆಪರ್ ಲೆಟರ್ ಬಂತು, ಆದರೆ ಇಂದು ಹೋದ ಕಂಪನಿಯಿಂದಲ್ಲ. ಎರಡು ತಿಂಗಳ ಹಿಂದೆ ಇಂಟರವ್ಯೂವ ಕೊಟ್ಟ ಎಕ್ಸೆಂಚರ್ ಕಂಪನಿಯಿಂದ. ನನಗೆ ಇನ್ನೊಂದು ಹದಿನೈದು ದಿನದಲ್ಲಿ ಸೇರಿಕೊಳ್ಳಲು ತಿಳಿಸಿದ್ದಾರೆ".

"ಓಹ್ ಗ್ರೇಟ್ ಕಂಗ್ರಾಚೂಲೇಸನ್ಸ. ಅಂತೂ ಇಂದು ವರ್ಷ ಕಷ್ಟ ಪಟ್ಟಿದಕ್ಕೆ  ಒಂದ್ ಫಲ ಸಿಕ್ಕಿತು."

"ಥೆಂಕ್ಯೂ ಕಣೋ, ಬಹುಶಃ ಇಬ್ಬರೂ ಒಟ್ಟಿಗೆ ಬೇರೆ ಬೇರೆ ಕಂಪನಿಗೆ ಸೇರುತ್ತಿದ್ದೇವೆ ಅನೆಸುತ್ತೆ."

"ಹೌದು ನೀನು ಹೇಳುವುದು ಸತ್ಯ. ನೋಡೋಣ. ನಾಡಿದ್ದು ಶನಿವಾರ ಸಿಗುತ್ತೇನೆ." ಎಂದು ಹೇಳಿ ಪ್ರಕಾಶ ಕಾಲ್ ಇಟ್ಟ.

ಸಂತೋಷ ರೂಂಗೆ ಬಂದರೆ, ರೂಂನಲ್ಲಿ ಯಾರು ಇರಲಿಲ್ಲ. ಎಲ್ಲರೂ ಅವರವರ ಕೆಲಸಕ್ಕೆ ಹೋಗಿದ್ದರೂ. ಅವರು ಬರುವುದು ಇನ್ನೂ ಏಳು ಗಂಟೆಯ ನಂತರವೇ. ಅವರು ಬರುವ ಹೊತ್ತಿಗೆ ತನ್ನ ಬಟ್ಟೆಯಲ್ಲ ತೊಳೆದು ಹತ್ತಿರದ ಹೋಟೇಲಿಗೆ ಹೋಗಿ ಒಂದಿಷ್ಟು ತಿಂಡಿ ತಿಂದು ಬರೋಣವೆಂದುಕೊಂಡು ತನ್ನ ಬಳಿ ಇದ್ದ ಇನ್ನೊಂದು ಡ್ಯೂಪ್ಲಿಕೇಟ್ ಕೀ ಇಂದ ರೂಮ್ ಬಾಗಿಲು ತೆಗೆದು ಒಳಹೋಗಿ ಬಟ್ಟೆ ತೆಗೆದು ಬೇರೆ ಬಟ್ಟೆ ತೊಟ್ಟು ಕಳಚಿದ ಬಟ್ಟೆಗಳನ್ನು ನೀರಲ್ಲಿ ನೆನೆಹಾಕಿ, ಬೇಗ ತಿಂಡಿ ತಿಂದು ಬರೋಣವೆಂದು ಹೊರಗೆ ಹೊರಟ.

ಈಗ ಅವನ ಮನಸ್ಸಿನಲ್ಲಿ ಬೆಳಗ್ಗಿನ ಗಲಿಬಿಲಿಯಾಗಲೀ, ಉದ್ವೇಗಗಳಾಗಲೀ ಇಲ್ಲ. ಮನಸ್ಸು ಸಂಪೂರ್ಣ ಶಾಂತಗೊಂಡಿತ್ತು. ಎಲ್ಲಾ ಕಳೆದು ಕೈಯಲ್ಲಿ ೬೫ ರೂಪಾಯಿ ಇದ್ದರೂ ಈಗ ಅವನಲ್ಲಿ ಅದರ ಚಿಂತೆಯಿಲ್ಲ. ಅಂತೂ ನೌಕರಿಯ ಹುಡುಕಾಟಕ್ಕೆ ಸ್ವಲ್ಪ ವಿರಾಮ ಸಿಕ್ಕಿದ್ದರಿಂದ ಮನಸ್ಸು ಪ್ರಪುಲ್ಲಗೊಂಡಿತ್ತು. ಅಬ್ಬಾ ನೌಗರಿ ಇಲ್ಲದ ಸ್ಥೀತಿ ಮನುಷ್ಯನನ್ನು ಎಷ್ಟು ಅಧೀರನನ್ನಾಗಿ ಮಾಡಿಬಿಡುತ್ತದಲ್ಲಾ. ಅದೇ ಒಂದು ಉದ್ಯೋಗ ಸಿಕ್ಕ ಖುಸಿ ಮನಸ್ಸನ್ನು, ಮನುಷ್ಯನನ್ನು ಎಷ್ಟು ನೆಮ್ಮದಿಯಲ್ಲಿಡುತ್ತದಲ್ಲ. ಉದ್ಯೋಗವಿಲ್ಲದ ಸಮಯದಲ್ಲಿ ಮನಸ್ಸು ಉದ್ಯೋಗವನ್ನು ಬಿಟ್ಟು ಬೇರೇನು ಬಯಸುವುದಿಲ್ಲ. ಉದ್ಯೋಗದ ಹುಡುಕಾಟ  ಆ ಸಮಯದಲ್ಲಿ ಹಸಿವೆಯನ್ನು ದೂರ ಸರಿಸುತ್ತದೆ ಎನ್ನುವುದು ಇಂದಿನ ಉದಾಹರಣೆ ಎಂದು ಮನಸ್ಸಲೇ ಅಂದುಕೊಳ್ಳುತ್ತಾ ಹೋಟೇಲ್ ತಲುಪಿ ಬಹುದಿನಗಳ ಹಿಂದೆ ತಿಂದ ತನಗಿಷ್ಟವಾದ ಮಸಾಲಾ ದೋಸೆಯನ್ನು ಒರ್ಡರ ಮಾಡಿ ಅದರ ಬರುವಿಕೆಯನ್ನೇ ಕಾಯುತ್ತಾ ಕುಳಿತ.

--ಮಂಜು ಹಿಚ್ಕಡ್

No comments:

Post a Comment