Monday, July 20, 2015

ಹುಡುಕಾಟದ ಹಾದಿಯಲ್ಲಿ:ಭಾಗ ೨

ನಿಮಿಷಕ್ಕೆ ಒಂದರಂತೆ ವೋಲ್ವೋ ಬಸ್ಸುಗಳು ಬಂದರೂ, ಸಾಮಾನ್ಯ ವರ್ಗದ ಬಸ್ಸುಗಳು ಮಾತ್ರ ಬರುತ್ತಿರಲಿಲ್ಲ. ಸಾರಿ, ಮಿಡಿ, ಚೂಡಿ, ಪ್ಯಾಂಟು ಹೀಗೆ ಹಲವಾರು ತರಹದ ಬಣ್ಣ ಬಣ್ಣದ ವಸ್ತ್ರ ಧರಿಸಿ, ಮುಖಕ್ಕೆ ತುಟಿಗೆ ಬಣ್ಣ ಬಳಿದು ಬಸ್ ನಿಲ್ದಾಣಕ್ಕೆ ಬಂದು ಕ್ಷಣ ಮಾತ್ರದಲ್ಲೇ ವೋಲ್ವೋ ಬಸ್ಸಿನಲ್ಲಿ ಮಾಯವಾಗುವ ಮಾಯಾಂಗಿನಿಯರನ್ನು ನೋಡಿದ್ದೇ ನೊಡಿದ್ದು. ಅಲ್ಲಿ ಎಷ್ಟು ನಿಮಿಷ ಕಳೆದರೂ ಬೇಸರವೆನಿಸುತ್ತಿರಲಿಲ್ಲ. ಹಾಗೆ ಅಲ್ಲಿಯೇ ನಿಂತವನಿಗೆ ಹತ್ತು ಹದಿನೈದು ನಿಮಿಷ ಜಾರಿದ್ದು ಗೊತ್ತಾಗಲಿಲ್ಲ. ಅಂತೂ ಅಷ್ಟು ಹೊತ್ತು ಕಾದಮೇಲೆ ಬನಶಂಕರಿ ಕಡೆಯಿಂದ ಐಟಿಪಿಎಲ್ ಕಡೆಗೆ ಹೋಗುವ ಒಂದು ಪುಸ್ಪಕ್ ಬಸ್ ಬಂತು. ಒಂದೇ ಬಾಗಿಲು, ಬಸ್ಸಿನ ಚಾಲಕನೇ ಕಂಡಕ್ಟರ್ ಕೂಡ. ಒಂಥರಾ ೨ ಇನ್ ೧. ಡ್ರೈವರ್ "ಬೇಗ ಬನ್ನಿ, ಬೇಗ ಬನ್ನಿ, ಹತ್ರಿ ಬೇಗ" ಎಂದು ಅಲ್ಲಿದ್ದ ಎಲ್ಲರನ್ನೂ ಆ ಬಸ್ಸಿನೊಳಗೆ ತುರುಕಿಸಿಕೊಂಡ. ಎಲ್ಲರಿಗಿಂತ ಮೊದಲೇ ಒಳಹೊಕ್ಕಿದ್ದರಿಂದ ಆರನೇ ಸಾಲಿನಲ್ಲಿ ಒಂದು ಸ್ಥಳ ಸಿಕ್ಕಿತು. ಅಲ್ಲಿ ಹೋಗಿ ಕುಳಿತ.  ಬಸ್ ಎಚ್ಚೆಸ್ಸಾರ್ ಬಡಾವಣೆಯ ಕೊನೆಯ ನಿಲ್ದಾಣವನ್ನು ಪ್ರವೇಶಿಸುತಿದ್ದಂತೆ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ, ಇದುವರೆಗೆ ಚಾಲಕನಾದವನು ಕಂಡಕ್ಟರನಾದ, "ಟಿಕೇಟ್-ಟಿಕೇಟ್" ಎಂದು ಎಲ್ಲರನ್ನು ವಿಚಾರಿಸಿ ಮತ್ತೆ ತನ್ನ ಸ್ಥಳಕ್ಕೆ ಬಂದು ಕುಳಿತು ಬಸ್ಸು ಬಿಡುವ ಹೊತ್ತಿಗೆ ಇನ್ನೈದು ನಿಮಿಷ ಕಳೆದು ಹೋಯಿತು. ಆಗಲೇ ಒಂದೆರಡು ಸಾಮಾನ್ಯ ವರ್ಗದ ಬಸ್ಸುಗಳೆರಡು ಹಾದು ಹೋದದ್ದನ್ನು ನೋಡಿದ ಸಂತೋಷಗೆ ಇದ್ಯಾವ ಬಸ್ಸನ್ನು ಹತ್ತಿದನೋ ಅನಿಸಿತು. ಸ್ವಲ್ಪ ಕಾದು ಬೇರೆ ಬಸ್ಸು ಹತ್ತಿದ್ದರೆ ಇಷ್ಟೊತ್ತಿಗೆ ಬೆಳಂದೂರಿನ ಹತ್ತಿರ ಇರಬಹುದಾಗಿತ್ತು. ಇವನು ಇದೇ ರೀತಿ ನಿಲ್ಲುತ್ತಾ ಹೋದರೆ ನಾನು ಸಂದರ್ಶನಕ್ಕೆ ಸಮಯಕ್ಕೆ ಸರಿಯಾಗಿ ಹೋದ ಹಾಗೆಯೇ.

ಬಸ್ಸು ಬೆಳೆಂದೂರು ತಲುಪುವ ಹೊತ್ತಿಗೆ ಸಂತೊಷನ ಗಡಿಯಾರದಲ್ಲಿ ಸಮಯ ಎಂಟುಗಂಟೆಯಾಗಿತ್ತು. ಆಗಿನ್ನೂ ಎಂಟು ಗಂಟೆಯೂ ಆಗಿರದ ಕಾರಣ ಅಷ್ಟೊಂದು ಟ್ರಾಪಿಕ್ ಇರಲಿಲ್ಲ. ಇದೇ ವೇಗದಲ್ಲಿ ಹೊರಟರೆ ಇನ್ನರ್ಧ ಗಂಟೆಯಲ್ಲಿ ಐಟಿಪಿಎಲ್ ತಲುಪಬಹುದೆನಿಸಿ ಮೊಬೈಲ್ ಕೈಗೆತ್ತಿಕೊಂಡು ಅದರಲ್ಲಿ ಆಟವಾಡತೊಡಗಿದ. ತುಂಬಾ ಹೊತ್ತು ಆಡಲು ಮನಸ್ಸಾಗದೇ ಮತ್ತೆ ಮೊಬೈಲನ್ನು ಕಿಸೆಗೆ ತುರುಕಿದ. ಬಸ್ಸು ಮಾರತಹಳ್ಳಿ ದಾಟಿ ವೈಟಪೀಲ್ಡ ಹತ್ತೀರ ಹತ್ತೀರ ಬಂದಿತ್ತು. ಕಿಸೆಯಲ್ಲಿ ತುರುಕಿದ ಮೊಬೈಲ್ ಬಡಿದುಕೊಳ್ಳಲು ಪ್ರಾರಂಭಿಸಿತು. ಮೊಬೈಲ್ ಎತ್ತಿ ನೋಡಿದ ಅವನು ಒಂದು ಹತ್ತು ದಿನಗಳ ಹಿಂದೆ ಇಟ್ಟ ರಿಮೈಂಡರ್ ಅದು. ಓದಿ ನೋಡಿದ "ಕಾಲ್ ರಮೇಶ್" ಎಂದಿದ್ದನ್ನು ನೋಡಿದವನಿಗೆ ಈಗ ತಾನು ರಮೇಶ ಎನ್ನುವವರಿಗೆ ಇಂದು ಕರೆ ಮಾಡಬೇಕು ಎಂದಿದ್ದು ನೆನಪಾಯಿತು. ಆದರೆ ಈಗ ಕರೆ ಮಾಡಲು ಕರೆನ್ಸಿ ಇಲ್ಲ. ಆ ಮೇಲೆ ಇಂಟರ್ವೂವ್ ಮುಗಿದ ಮೇಲೆ ಕರೆನ್ಸಿಹಾಕಿ ಮಾತನಾಡೋಣ ಎಂದುಕೊಂಡು ಮೊಬೈಲ್ ಒಳಗಿಡಲು ಹೋದವನು ಮತ್ತೆ ಕರೆ ಮಾಡಲು ಮರೆತು ಹೋದರೆ ಎಂದು ರಿಮೈಂಡರ್ನ ಸಮಯವನ್ನು ಬೆಳಿಗ್ಗೆ ೮-೩೦ಕ್ಕೆ ಎಂದಿದ್ದುದ್ದನ್ನು ಸಾಯಂಕಾಲ ೬-೩೦ ಕ್ಕೆ ಎಂದು ಬದಲಾಯಿಸಿ ಮತ್ತೆ ಕಿಸೆಗೆ ತುರುಕಿದ.

ಮೊಬೈಲನಲ್ಲಿ ರಮೇಶನ ಹೆಸರು ನೋಡಿದೊಡನೆ ರಮೇಶನ ನೆನಪಾಯಿತು. ರಮೇಶ ಅವನ ತಂದೆಯ ದೂರದ ಸಂಬಂಧವಾದರೂ ಅವರಲ್ಲಿ ಒಳ್ಳೆಯ ಭಾಂದವ್ಯವಿತ್ತು. ಆಗಾಗ ರಮೇಶನ ತಂದೆ ತಾಯಿಯರೂ ಇವನ ಮನೆಗೆ ಬರುತಿದ್ದರು. ಇವನ ತಂದೆ ತಾಯಿಯರು ಅವರ ಮನೆಗೆ ಹೋಗುತಿದ್ದರು. ರಮೇಶ ವಯಸ್ಸಿನಲ್ಲಿ ಸಂತೋಷನಿಗಿಂತಲೂ ನಾಲ್ಕೈದು ವರ್ಷದೊಡ್ಡವನಾಗಿದ್ದರೂ ಒಳ್ಳೆಯ ಸ್ನೇಹಿತರಂತೆಯೇ ಇದ್ದರು. ಮೊದ ಮೊದಲು ಚಿಕ್ಕವರಾಗಿದ್ದಾಗ ಇವರು ಅವರವರ ತಂದೆ ತಾಯಿಯರೊಂದಿಗೆ ಒಬ್ಬರ ಮನೆಗೆ ಇನ್ನೊಬ್ಬರು ಹೋಗುತಿದ್ದರು. ಆಮೇಲೆ ದೊಡ್ಡವರಾದ ಮೇಲೆ ದೂರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಹೋಗಲಾಗುತ್ತಿರಲಿಲ್ಲ. ಈಗ ಸಂತೋಷ ಮತ್ತು ರಮೇಶ ನೋಡಿ ಆಗಲೇ ಆರೇಳು ವರ್ಷಗಳೇ ಆಗಿ ಹೋಗಿದ್ದವು. ರಮೇಶನ ಮದುವೆಯ ಸಂದರ್ಭದಲ್ಲಿ ಸಂತೋಷನಿಗೆ ಪರೀಕ್ಷೆಗಳಿದ್ದುದರಿಂದ ಮದುವೆಗೂ ಹೋಗಿರಲಿಲ್ಲ. ಈಗ ರಮೇಶ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದು ತನ್ನ ಸಂಸಾರ ಕೆಲಸ ಎನ್ನುವುದರಲ್ಲೇ ಬ್ಯೂಸಿಯಾಗಿದ್ದ.

ಸಂತೋಷ ಬೆಂಗಳೂರಿಗೆ ಬಂದ ಹೊಸತರಲ್ಲಿ, ರಮೇಶಗೆ ಕಾಲ್ ಮಾಡಿದ್ದ. ತನ್ನ ಬಗ್ಗೆ ಹೇಳಿಕೊಂಡು, ಅವನ ಕಂಪನಿಯಲ್ಲಿ ಓಪ್ನಿಂಗ್ಸ್ ಇದ್ದರೆ ತಿಳಿಸು ಎಂದು ಕೂಡ ಕೇಳಿದ್ದ. ಆಗ ರಮೇಶ ಅವನ ಬಯೋಡಾಟಾ ಕಳಿಸಿಕೊಡು ಎಂದು ಕೇಳಿ ಬಯೋಡಾಟಾ ತರಿಸಿಕೊಂಡವನು. ಪ್ರತಿಸಾರಿ ಸಂತೋಷ ಅದರ ಬಗ್ಗೆ ಕೇಳಲು ಹೋದರೆ, "ಈಗ ಸದ್ಯಕ್ಕೆ ಏನು ಓಪನಿಂಗ್ಸ್ ಇಲ್ಲ. ಇದ್ದರೆ ಹೇಳುತ್ತೇನೆ" ಎಂದು ಹೇಳುತ್ತಲೇ ಇದ್ದ. ಸಂತೋಷನ ಸ್ನೇಹಿತರಿಬ್ಬರು ರಮೇಶನ ಕಂಪನಿಯನ್ನು ಸೇರಿದಾಗ ಕೇಳಿದಾಗಲು ರಮೇಶ ತಮ್ಮ ಕಂಪನಿಯಲ್ಲಿ ಈಗ ಸದ್ಯಕ್ಕೆ ಓಪನಿಂಗ್ಸ್ ಇಲ್ಲ ಎಂದು ಹೇಳಿದ್ದ. ಆದರೆ ಅವನ ಗೆಳೆಯರು, ಅವನ ಗೆಳೆಯರ ಗೆಳೆಯರು ಬೇರೆ ಬೇರೆ ಮೂಲಗಳಿಂದ ಅದೇ ಕಂಪನಿಯನ್ನು ಸೇರಿದಾಗ ಮಾತ್ರ ಬೇಸರವಾಗದಿರಲಿಲ್ಲ. ಸಂತೋಷನ ಓರಗೆಯವನಾದ ರಮೇಶನ ನೆಂಟನೂ ಕೂಡ ರಮೇಶನ ಮುಖಾಂತರ ರಮೇಶನ ಕಂಪನಿಗೆ ಸೇರಿದ ಮೇಲೆ ರಮೇಶನ ಮೇಲೆ ಬೇಸರ ಮೂಡಿ ಅವನಿಗೆ ಕರೆ ಮಾಡುವುದನ್ನೇ ನಿಲ್ಲಿಸಿದ್ದ.

ಆದರೆ ಒಂದು ತಿಂಗಳ ಹಿಂದೆ ಸಂತೋಷನ ಮನೆಗೆ ಬಂದಿದ್ದ ರಮೇಶನ ತಂದೆ ಸಂತೋಷನ ತಂದೆಗೆ "ಏನು ನಿಮ್ಮಮಗನಿಗೆ ಇನ್ನೂ ನೌಕರಿ ಸಿಗಲಿಲ್ಲವೇ? ನಿಮ್ಮ ಮಗ ಆ ಬಗ್ಗೆ ಪ್ರಯತ್ನನೇ ಮಾಡುತ್ತಿಲ್ಲ ಇರಬೇಕು. ನನ್ನ ಮಗನನ್ನು ಕೇಳಿದಾಗ ಗೊತ್ತಾಯಿತು. ನಮ್ಮ ಮಗೆ ಅದೆಷ್ಟೋ ಇಂಟರ್ವೂವ್ ಕೊಡಿಸಿದರೂ ನಿಮ್ಮ ಮಗ ಸಿಲೆಕ್ಟ ಆಗಲಿಲ್ಲವಂತೆ. ಅವನು ಕಂಪ್ಯೂಟರ್ ಸೈನ್ಸ್ ಓದಿದ್ದರೂ ಆ ಬಗ್ಗೆ ಕೇಳಿದರೆ ಏನೂ ಗೊತ್ತಿಲ್ಲವಂತೆ. ಅವನಿಗೆ ಮಾತನಾಡಲು ಬರುವುದು ಅಷ್ಟಕಷ್ಟೇ ಅಂತೆ. ಹಾಗಾಗಿ ನಿಮ್ಮ ಮಗನಿಗೆ ಹೇಸಿಗೆಯಾಗಿ ನಮ್ಮ ಮಗನಿಗೆ ಕರೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾನಂತೆ" ಎಂದು ದೂರಿ ಹೋದಾಗ ಸಂತೋಷನ ತಂದೆ ಸಂತೋಷನ ಮಾತನ್ನು ಕೇಳದೇ, ಸಂತೋಷನಿಗಿಷ್ಟು ಬಯ್ದು, ಮತ್ತೆ ರಮೇಶನಿಗೆ ಕರೆ ಮಾಡುವಂತೆ ಹೇಳಿದ್ದರೂ ಹಾಗೆ ಒಲ್ಲದ ಮನಸ್ಸಿನಿಂದ ಅವನಿಗೆ ಕರೆ ಮಾಡಲು ನಿರ್ಧರಿಸಿದ. ಹಾಗೆ ನಿರ್ಧರಿಸಿ ಹತ್ತು ದಿನವಾದರೂ ಕರೆ ಮಾಡಲಾಗದೇ ಆ ರಿಮೈಂಡರನ್ನು ಮುಂದುಡುತ್ತಲೇ ಬಂದಿದ್ದ.

"ಐಟಿಪಿಎಲ್ ಲಾಸ್ಟ ಸ್ಟಾಪ್ ಇಳಿರಿ, ಇಳಿರಿ" ಎಂದು ಡ್ರೈವರ್ ಕಮ್ ಕಂಡಕ್ಟರ್ ಹೇಳಿದಾಗ ಸಂತೊಷ ಆ ನೆನಪುಗಳಿಂದ ಹೊರಬಂದು, ಬಸ್ಸಿನಿಂದ ಇಳಿದು ಹೊರಬಂದ. ಸುತ್ತಲೂ ನೋಡಿದ. ಸಂದರ್ಶನ ನೀಡಬೇಕಾದ ಯಾವುದೇ ಕಂಪನಿಗಳು ಅವನು ಇಳಿದ ಸ್ಥಳದಲ್ಲೆಲ್ಲೂ ಕಾಣಲಿಲ್ಲ. ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇದ್ದ ಚಹಾ ಅಂಗಡಿಯಲ್ಲಿ ನಿಂತು ಆ ವಿಳಾಸವನ್ನು ಕೇಳಿದ. ಆತ ತಮಿಳರವನು ಬೆಂಗಳೂರಿನಲ್ಲಿ ಇದ್ದು ಅದೆಷ್ಟು ವರ್ಷವಾಗಿದೆಯೋ, ಕನ್ನಡ ಮಾತ್ರ ಬರುತ್ತಿರಲಿಲ್ಲ. ಬಹುಶಃ ಬೆಂಗಳೂರಿನಲ್ಲಿ ಅದರ ಅವಸ್ಯಕತೆಯಿಲ್ಲ ಎಂದು ತಿಳಿದುದ್ದರಿಂದ ಆತ ಕಲಿತಿರಲಿಕ್ಕಲ್ಲ. ರಮೇಶ ಆ ಕಂಪನಿಯ ವಿಳಾಸವನ್ನು ಕೇಳಿದೊಡನೆ ತಮಿಳಿನಲ್ಲಿಯೇ " ಈಂಗ್ ಸ್ಟೇಟ್ ಪೋ" ಎಂದು ಅವನ ಕೈಯಿಂದ ಒಂದು ದಾರಿಯನ್ನು ತೋರಿಸಿ ಅದೇ ದಾರಿಯಲ್ಲಿ ನೇರವಾಗಿ ಹೋಗುವಂತೆ ತಿಳಿಸಿದ.

-ಮುಂದುವರೆಯುವುದು....

--ಮಂಜು ಹಿಚ್ಕಡ್

No comments:

Post a Comment