Saturday, January 21, 2017

ಬದುಕು-ಬವಣೆ: ಭಾಗ ೨

ಬದುಕು-ಬವಣೆ: ಭಾಗ ೧

ಅವರು ಒಂದು ನಿಮಿಷ ಎಂದು ಒಳಗಡೆ ಹೋದವರು ಹದಿನೈದು ಇಪ್ಪತ್ತು ನಿಮಿಷವಾದರೂ ಹೊರಬರಲಿಲ್ಲ. ಒಳಗೆ ಒಲೆಯ ಮೇಲೆ ಮೀನು ಸಾರು ಕುದಿಯುತ್ತಿರುವಾಗ ಇಲ್ಲಿ ಹೊರಗೆ ನಾಗಿಯ ಮನಸ್ಸು ಮಗನ ಜ್ವರದ ನೆನಪಿನಿಂದ ಕುದಿಯುತಿತ್ತು. ಯಾವಾಗ ಅಮ್ಮನವರು ಹೊರಗೆ ಬರುತ್ತಾರೋ, ಅಮ್ಮ ಅವರು ರೊಕ್ಕ ಕೊಡಬಹುದೋ ಹೇಗೆ? ದೇವರ ದಯೆಯಿಂದ ರೊಕ್ಕ ಕೊಟ್ಟು ಬೇಗ ಕಳಿಸಿ ಬಿಟ್ಟರೆ ತಾನು ಮುಂದೆ ಕೆಲಸ ಮಾಡುವ ಶಾಂತಮ್ಮನವರ ಮನೆಗಾದ್ರೂ ಹೋಗಬಹುದಿತ್ತು, ಹೀಗೆ ಎಲ್ಲಾ ಕಡೆನೂ ತಡವಾದರೆ ಮನೆಗೆ ಹೋಗಲು ಸಂಜೆಯಾಗುತ್ತದೆ. ಹನ್ಮು ಮಲಗಿದವನು ಎದ್ದು ಬಿಟ್ಟನೋ ಏನೋ? ಸೊಸೆ ಮನೆ ಕಡೆ ಒಮ್ಮೆಯಾದರೂ ಹೋಗಿ ನೋಡಿ ಬಂದರೆ ಸಾಕಿತ್ತು. ಹೀಗೆ ಯೋಚಿಸುತ್ತಾ ಕುಳಿತವಳಿಗೆ, "ಏನೇ ನಾಗಿ, ಹಿಂಗೆ ಬಂದದೆ?" ಎಂದು ಹೊರಬಂದ ಗೌರಿ ಕೇಳಿದಾಗ ನಾಗಿ ಯೋಚನೆಯಿಂದ ಹೊರಬಂದಳು. ಒಮ್ಮೇಲೆ ಕೇಳಿದ ಗೌರಿಯ ಪ್ರಶ್ನೆಗೆ ಹಣ ಕೇಳಲೋ, ಬೇಡವೋ ಎಂದು ತಿಳಿಯದೇ ಅಮ್ಮನವರ ಮುಖ ನೋಡಿದಳು. ನಾಗಿ ಏನನ್ನು ಉತ್ತರಿಸದೇ ಇದ್ದುದನ್ನು ನೋಡಿ ಗೌರಿ,

"ನಾಗಿ ಅವ್ರು ಹೊರ್ಗೆ ಹೋಗರ್ ಬರುಕೆ ಇಟ್ಟುತ್ತ್ ಆತಿದಾ ಏನಾ? ಹೆಂಗೂ ನೀ ಮನಿಗೆ ಬರುದ್ ಬಂದಿ, ಮಾತ್ರೆ ಕೊಟ್ಗಿಗೆ ಹೋಗೆ ಸಿಗ್ಣಿ ತಿಗ್ದಿಟ್ಟೆ ಬರುವಾ?"

ಅಮ್ಮನವರು ಹಾಗೆ ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ ನಾಗಿಗೆ. ಇಲ್ಲ ಎಂದು ಬಿಟ್ಟರೆ ರೊಕ್ಕ ಕೊಡದೇ ಹಾಗೆ ಕಳಿಸಿ ಬಿಟ್ಟರೆ ಎನಿಸಿ, "ಆಯ್ತ್ರಾ, ಉಡ್ತೇರೆ". ಎಂದು ಹೇಳಿ ಮನೆಯ ಹಿತ್ತಲಿನ ತುದಿಯಲ್ಲಿದ್ದ ಕೊಟ್ಟಿಗೆಯ ಕಡೆ ಹೋದಳು.

ಕೊಟ್ಟಿಗೆಗೆ ಹೋಗಿ ದನದ ಸಿಗಣಿ ತೆಗೆದು, ಒಣ ದರುಕು ಹಾಗಿ ಹೊರಬರುವ ಹೊತ್ತಿಗೆ ಇನ್ನೂ ಹದಿನೈದು ಇಪ್ಪತ್ತು ನಿಮಿಷಗಳು ಕಳೆದು ಹೋದವು. ಊರಿಗೆ ಬರುವ ಒಂದು ಗಂಟೆಯ ಬಸ್ಸಿಗೆ ಬಂದ ಜನರನ್ನು ನೋಡಿ, ಗಂಟೆ ಒಂದಾಯ್ತು ಅನಿಸಿ, ಬೇಗ ಬೇಗನೆ ಅಮ್ಮನವರ ಮನೆ ಕಡೆ ಹೆಜ್ಜೆಯಿಟ್ಟಳು.

ಮನೆಯ ಹತ್ತಿರ ಬಂದವಳೇ, "ಉಡ್ತೇರೋ, ಸಿಗ್ಣೇ ತಿಗ್ದ್ ತರ್ಕ್ ಹಾಕ್ ಬಂದೇ, ಬತ್ತೇ ಆಗೋ?" ರೊಕ್ಕ ಹೇಗೆ ಕೇಳಲಿ ಎಂದನಿಸಿ ಒಲ್ಲದ ಮನಸ್ಸಿಂದ ಸುಮ್ಮನೇ ಹೋಗುವವಳೆಂತೆ ನಟಿಸಿದಳು.

"ನಿಲ್ಲೆ ನಾಗಿ ಬಂದೆ, ಮಾತ್ರ ತಡಿಯೆ, ಹೋಗಕ್".

"ಇಲ್ರಾ ಅಮ್ಮೋರೆ, ಮಗಗ್ ಗಂಜಿ ಕುಟ್ಬಿಟ್ ಹಾಂಗೇ ಬಂದಿದ್ನ್ರಾ. ಈಗ ಹೆಂಗೇವ್ನೋ ಏನೋ, ಅಲ್ಲಿ ನೋಡ್ಕಣುಕು ಯಾರು ಇಲ್ಲಾ."

"ಗುತ್ತಾಯ್ತೆ ಮಾರಾಯ್ತಿ, ಮಾತ್ರೆ ನಿಲ್ಲೆ ಬಂದೆ. ಅನ್ನಕ್ಕೆ ಅಕ್ಕಿ ಹಾಕಿಕೆ ಬತ್ತಿ."

ಗೌರಿ ಬೇಗ ಬೇಗ ಅನ್ನಕ್ಕೆ ಅಕ್ಕಿ ಹಾಕಿ ಹೊರ ಬಂದು, "ನಾಗಿ, ಹನಿ ಸಾರ್ ಕುಡ್ತಿ, ತಕಂಡೆ ಹೋಗಕ ಆಗಾ" ಎಂದು ಹೇಳಿ, ಒಳಕ್ಕೆ ಹೋಗಿ ಒಂದು ಹಳೆಯ ಪಾತ್ರೆಯಲ್ಲಿ ಒಂದೆರಡು ಮೀನು ಹೋಳು ೩-೪ ಸವಟು ಸಾರು ಹಾಕಿಕೊಂಡು, ಗಂಡನ ಅಂಗಿಯ ಕಿಸೆಯಿಂದ ಕೈಗೆ ಸಿಕ್ಕ ನೂರರ ೨ ನೋಟುಗಳನ್ನು ತಂದು ನಾಗಿಗೆ ಕೊಡುತ್ತಾ, "ನಾಗಿ ಈ ರೊಕ್ಕ ಸಾಕಾತಿದಾ ಏನಾ? ಅವ್ರು ಮನಿಲೆ ಇಲ್ಲಾ, ಏನಾರೂ ಬೇಕಂದ್ರೆ ಬಾ. ನಿಂಕೋಡೆ ಬರುಕಾಗಲಾ ಅಂದ್ರೆ ಯಾರ್ಕೋಡರು ಹೇಳಕಳ್ಸ ಅವ್ರ ಕುಟ್ಟ ಬರುರ" ಎಂದು ಹೇಳಿ ಕಳಿಸಿದಳು.

ನಾಗಿ ರೊಕ್ಕವನ್ನು ಸೊಂಟಕ್ಕೆ ಸಿಕ್ಕಿಸಿದ ಸುಕ್ಕುಗಟ್ಟಿದ ಸಿರೆಯ ಸೆರಗಿಗೆ ಸಿಕ್ಕಿಸಿ, ಮೀನು ಸಾರಿನ ಪಾತ್ರೆಯನ್ನು ಕೈಯಲ್ಲಿ ಹಿಡಿದು " ಬತ್ರೆನ್ರಾ ಹಾಂಗಾರ" ಎಂದು ಹೇಳಿ ಶಾಂತಿಯ ಮನೆಗೆ ಹೋದಳು.

ಶಾಂತಿಯ ಮನೆಗೆ ಹೋದರೆ ಮನೆಯ ಬೀಗ ಹಾಕಿತ್ತು. ನಾಗಿ ಬಂದಿಲ್ಲ ಎಂದು ತುರ್ತು ಕೆಲಸಕ್ಕಾಗಿ ಇಟ್ಟುಕೊಂಡ ನಾಗಿಯ ಮನೆಯ ಪಕ್ಕದ ಸೇವಂತಿ ಬಾವಿಯಿಂದ ನೀರು ಸೇದು ಬಚ್ಚಲು ಮನೆಯ ಹಂಡಿಗೆ ನೀರು ತುಂಬಿಸುತಿದ್ದದನ್ನು ನೋಡಿ,

"ಸೇವಂತಿ ಶಾಂತಮ್ಮೋರು ಎಲ್ಲಿಗ್ ಹೋಗೇರೇ?" ಎಂದು ಕೇಳಿದಳು.

"ಏನೋ ಮಗ್ಳ ಮನಿಗ ಅಂತೇ, ಹತ್ತಗಂಟೆ ಬಸ್ಸೇಗ ಹೋಗೇರ. ಬರುಕ ಸಂಜೇ ಆತಿದ ಅಂದಾಗ ಮಾಡೇದ್ರಪಾ" ಅಂದಳು ಸೇವಂತಿ.

"ಹೌದಾ?" ಎಂದು ಕೇಳಿ ಹೊರಟಳು ಸಾವಿತ್ರಮ್ಮನ ಮನೆಯ ಕಡೆ.

ಹೀಗೆ ಐದಾರು ಮನೆ ಸುತ್ತಿ ಸೀತಕ್ಕನ ಮನೆಗೆ ಬರುವ ಹೊತ್ತಿಗೆ ಮಧ್ಯಾಹ್ನ ಮೂರು ದಾಟಿತ್ತು. ಎಲ್ಲಿ ಹೋದರು ಅವಳಿಗೆ ಮಗನದೇ ಯೋಚನೆ. ಯಾವತ್ತು ಜ್ವರ ಬಿಡುವುದೋ? ಯಾವತ್ತು ಮಗ ಹುಷಾರು ಆಗುವನೋ ಎನ್ನುವುದೇ ಚಿಂತೆ. ಸೀತಕ್ಕನ ಮನೆಗೆ ಬರುವ ಹೊತ್ತಿಗೆ ಸೀತಕ್ಕ ಗಂಡನಿಗೆ ಊಟ ಬಡಿಸಿ, ತಾನು ಉಂಡು ಪಾತ್ರೆಗಳನ್ನೆಲ್ಲ ತೊಳೆದು ಟಿವಿ ಹಚ್ಚಿಕೊಂಡು, ನಿನ್ನೆ ರಾತ್ರಿ ನೋಡಿದ ದಾರವಾಹಿಗಳ ಮರು ಪ್ರಸಾರವನ್ನು ಮತ್ತೊಮ್ಮೆ ಮಧ್ಯಾಹ್ನ ನೋಡತೊಡಗಿದ್ದಳು. ದಿನಾ ನೋಡುತಿದ್ದಳು ಕೂಡ.

ಅಂಕೋಲೆಯಲ್ಲಿ ಚಿಕ್ಕ ಆಸ್ಪತ್ರೆಯಿಟ್ಟುಕೊಂಡ ಕಿರಿಯ ಮಗ ಹರೀಶನನ್ನು ಬಿಟ್ಟರೆ ಉಳಿದವರೆಲ್ಲ ದೂರ ದೂರದ ಊರುಗಳಲ್ಲಿ ನೌಕರಿ ಮಾಡುತ್ತಿದ್ದರು. ( ಹರೀಶ ಅಂಕೋಲೆಯಲ್ಲಿದ್ದರೂ ಮನೆಗೆ ಹಗಲಲ್ಲಿ ಊಟಕ್ಕೆ ಬರುತ್ತಿರಲಿಲ್ಲ. ಅಪರೂಪಕ್ಕೆ ಯಾವಾಗಲೋ ಒಮ್ಮೆ ಬಿಡುವಿದ್ದರೆ ಮಾತ್ರ ಮನೆಗೆ ಊಟಕ್ಕೆ ಬರುತ್ತಿದ್ದ. ಹಾಗಾಗಿ ಸೀತಾ ಮಗ ಮಧ್ಯಾಹ್ನ ಊಟಕ್ಕೆ ಬರಲಿ, ಬರದೇ ಇರಲಿ ಅವನಿಗಾಗಿ ಅಡುಗೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಒಂದೊಮ್ಮೆ ಮಗ ಹಸಿದು ಬಂದರೆ ಹಾಗೆ ಹೊರಟು ಬಿಡಬೇಕಾಗುತ್ತಲ್ಲ ಎನ್ನುವ ಚಿಂತೆ) ಮಧ್ಯಾಹ್ನ ಊಟವಾದ ಮೇಲೆ ಗಂಡ ಸ್ವಲ್ಪ ಹೊತ್ತು ಮಲಗಿ ಬಿಡುತ್ತಿದ್ದರಿಂದ ಸೀತಕ್ಕನ ಬೇಸರಕ್ಕೆ ದೂರದರ್ಶನದ ಆ ನಿನ್ನೆಯ ಧಾರವಾಹಿಗಳೇ ಗತಿ.

(ಮುಂದುವರೆಯುವುದು...)

No comments:

Post a Comment