Friday, November 28, 2014

ಕತೆಗಾರನ ಬದುಕು ಕತೆಯಾದಾಗ!

ಬಹಳ ದಿನಗಳ ನಂತರ ಅದೇಕೋ ನನಗೆ ಬಸಲೆ ಸೊಪ್ಪಿನ ಸಾರಿನ ಆಸೆಯಾಗಿ, ಬಸಲೆ ಸೊಪ್ಪು ತರಲು ಮೊನ್ನೆ ಭಾನುವಾರ ಜಯನಗರದ ನಾಲ್ಕನೇ ಹಂತದ ಕಾಂಪ್ಲೆಕ್ಸನಲ್ಲಿರುವ ಮಂಗಳೂರು ಸ್ಟೋರ್ಸಗೆ ಹೋದೆ. ಊರಲ್ಲಿ ಆಗಿದ್ದರೆ ಮನೆಯ ಹಿತ್ತಲಲ್ಲಿ ಬೆಳೆದ ಬಸಲೆ ಬಳ್ಳಿಯಿಂದ ಸೊಪ್ಪು ತೆಗೆದು ಸಾರು ಮಾಡಬಹುದಿತ್ತು. ಆದರೆ ಬೆಂಗಳೂರಿನಲ್ಲಿ ಹಾಗಲ್ಲವಲ್ಲ, ಇರೋ ೩೦*೪೦ ಅಡಿಯ ಜಾಗದಲ್ಲಿ ಒಂದಿಂಚು ಬಿಡದೆ ಐದಾರು ಮಹಡಿಯ ಕಟ್ಟಡ ಕಟ್ಟಿ, ಆದರಲ್ಲಿ ಏಳೆಂಟು ಮನೆಮಾಡಿ ಬಾಡಿಗೆ ಎಣಿಸುವ ಇಂದಿನ ಕಾಲದಲ್ಲಿ ಬಸಲೆ ಬೆಳೆಯಲು ಜಾಗವೆಲ್ಲಿ.

ಮಂಗಳೂರು ಸ್ಟೋರ್ಸನಿಂದ ಒಂದು ಕಟ್ಟು ಬಸಲೆ ಜೊತೆಗೆ ಪತ್ರೊಡೆ ಮಾಡಲು ಐದಾರು ಕೆಸುವಿನ ಎಲೆ ತೆಗೆದುಕೊಂಡು ಅಲ್ಲಿಂದ ಹೊರಟು, ಮನೆಗೆ ಹೋಗಲು ಆಟೋ ಸಿಗುತ್ತದಾ ಎಂದು ಆ ಕಡೆಯಿಂದ ಬರುವ ಖಾಲಿ ಆಟೋಗಳನ್ನು ನೋಡುತ್ತಾ, ರಸ್ತೆಯಲ್ಲಿ ಹರಿದು ಬರುವ ವಾಹನಗಳನ್ನು ತಪ್ಪಿಸಿಕೊಳ್ಳುತ್ತಾ ಕೂಲ್ ಜೌಂಟ್ ಸಿಗ್ನಲ್ ಹತ್ತಿರ ನಡೆಯಲಾರಂಭಿಸಿದೆ. ಕಾಂಪ್ಲೆಕ್ಸ ಎದುರುಗಿನ ರಸ್ತೆ ದಾಟಿ ಇನ್ನೇನು ಹತ್ತು ಅಡಿ ನಡೆದಿರಬೇಕು, ಅಷ್ಟರಲ್ಲಿ ದೂರದಲ್ಲಿ ನನಗೆ ಅಭಿಮುಖವಾಗಿ ನಡೆದು ಬರುತ್ತಿರುವ ವ್ಯಕ್ತಿ ನನ್ನ ಗಮನ ಸೆಳೆದ. ಆ ವ್ಯಕ್ತಿ ದೂರದಿಂದ ನೋಡುವಾಗ ನನಗೆ ತುಂಬಾ ಪರಿಚಯವಿರುವ ವ್ಯಕ್ತಿಯಂತೆ ಗೋಚರಿಸಿದ್ದರಿಂದ ನನ್ನ ಕಾಲುಗಳು ಮುಂದೆ ಹೋಗಲು ಬಯಸಿದ್ದರೂ ನನ್ನ ಮನಸ್ಸು ಮುಂದೆ ಹೋಗದಂತೆ ತಡೆದು ಅಲ್ಲೇ ನಿಲ್ಲಿಸಿತು. ಹೌದು ಆತ ಕತೆಗಾರ ಗೋವಿಂದಣ್ಣನಲ್ಲವೇ? ಇದ್ದರೂ ಇರಬಹುದು. ಆದರೆ ಅವನು ಇಲ್ಲೇನು ಮಾಡಲು ಬಂದಿದ್ದಾನೆ? ಇವನು ಹೇಳುವ ಕತೆಗಳನ್ನು ಕೇಳಿ ಅವನ ಕತೆಯನ್ನು ಯಾರಾದರೂ ಸಿನಿಮಾ ಮಾಡಲು ಕರೆದಿರಬಹುದೇ? ಮತ್ತೊಮ್ಮೆ ಮನಸ್ಸಿಗೆ ಅವನಿರಲಿಕ್ಕಿಲ್ಲ ಅನ್ನಿಸಿತಾದರೂ, ನೋಡಿ ನಿರ್ಧರಿಸಿಯೇ ಹೋಗುವ ಮನಸ್ಸಾಗಿ ಅಲ್ಲಿಯೇ ನಿಂತೆ. ಅವನು ಬರುವ ವೇಗವನ್ನು ಗಮನಿಸಿದರೆ ಅವನು ನಾನಿರುವ ಜಾಗವನ್ನು ಸೇರಲು ಒಂದೈದು ನಿಮಿಷಗಳಾದರೂ ಬೇಕೆನಿಸಿ, ಅಲ್ಲಿಯವರೆಗೆ ಸುಮ್ಮನೆ ನಿಲ್ಲುವುದೇನು ಎಂದುಕೊಂಡು. ಅಲ್ಲೇ ಪಕ್ಕದಲ್ಲೇ ಹಸಿ ಕಡ್ಲೆಕಾಯಿ ಬೇಯಿಸುತ್ತಿದ್ದ ಹೆಂಗಸಿನ ಬಳಿಸಾರಿ ಹತ್ತು ರೂಪಾಯಿ ಕೊಟ್ಟು ಬೇಯಿಸಿದ ಕಡ್ಲೆಕಾಯಿ ತೆಗೆದುಕೊಂಡು ತಿನ್ನುತ್ತಾ ದೂರದಲ್ಲಿ ಬರುತ್ತಿರುವ, ಮನಸ್ಸಿಗೆ ಪರಿಚಿತ ಅನ್ನಿಸಿದ ವ್ಯಕ್ತಿಯನ್ನು ಕಾಯುತ್ತಾ ನಿಂತೆ. ಒಂದೊಂದು ಕಡ್ಲೆಕಾಯಿ ಬೀಜ ಬಾಯಿ ಸೇರುತ್ತಿದ್ದ ಹಾಗೆ ಇಲ್ಲಿಯವರೆಗೆ ಸುಮ್ಮನಿದ್ದ ಮನಸ್ಸು ಕತೆಗಾರ ಗೋವಿಂದಣ್ಣನ ಬಗ್ಗೆಯೇ ಯೋಚಿಸ ತೋಡಗಿತು.

                             -------*-*-*-------
ನಾನು ಮತ್ತು ಗೋವಿಂದಣ್ಣ ಹೇಳಿ ಕೊಳ್ಳಲು ಹೆಸರಿಗೆ ಒಂದೇ ಊರಿನವರಾದರೂ, ನಮ್ಮದು ಅರೆ ಮಲೆನಾಡಾದ್ದರಿಂದ ನಮ್ಮ ಮನೆಗೂ ಅವನ ಮನೆಗೂ ಒಂದು ಒಂದುವರೆ ಮೈಲಿಗಳಷ್ಟು ದೂರ. ನಮ್ಮಿಬ್ಬರ ಮನೆಗಳ ನಡುವಿನ ಅಂತರದಲ್ಲಿ ಇರೋದು ಅಂದರೆ ನಮ್ಮ ಮನೆಯ ಗದ್ದೆ ತೋಟಗಳು, ನಂತರ ಒಂದು ಚಿಕ್ಕ ತೊರೆ, ತೊರೆ ದಾಟಿದ ಮೇಲೆ ಸಿಗುವ ಒಂದು ಚಿಕ್ಕ ಕಾಡಿನ ಹಾಸು, ನಂತರ ಅವನ ಮನೆಯ ಗದ್ದೆ, ತೋಟಗಳು ಇವಿಷ್ಟು ಬಿಟ್ಟರೆ ಬೇರೆ ಯಾರ ಮನೆಗಳಿಲ್ಲ. ಗೋವಿಂದಣ್ಣ ನಮ್ಮ ಮನೆಗೆ ಬಂದು ಹೋಗುವುದು, ನಮ್ಮ ತಂದೆ ಅವರ ಮನೆಗೆ ಹೋಗಿ ಬರುವುದು ಇತ್ತಾದರೂ ನಾವು ಮಕ್ಕಳು ಅವರ ಮನೆಗೆ ಹೋಗಿ ಬರುತ್ತಿದ್ದುದು ಅಷ್ಟಕಷ್ಟೇ. ಗೋವಿಂದಣ್ಣ ನಮ್ಮ ಮನೆಗೆ ಬಂದಾಗಲೆಲ್ಲಾ ಮಾತಿನ ನಡುವೆ ಒಂದೆರಡು ಕತೆ ಹೇಳಿಯೇ ಹೋಗುವುದು ಕಾಯಂ ಆಗಿತ್ತು. ಕತೆ ಎಂದರೆ ರಾಮಾಯಣ, ಮಹಾಭಾರತದ ಕತೆಗಳಾಗಲೀ, ಅಥವಾ ಪಂಚತಂತ್ರದ ಕತೆಗಳಾಗಲೀ ಅಥವಾ ಯಕ್ಷಗಾನದ ಪ್ರಸಂಗದ ಕತೆಗಳಾಗಲೀ ಆಗಿರಲಿಲ್ಲ. ಅವು ಅಲ್ಲಿ ನಮ್ಮೂರಿನ ಮನೆಗಳಲ್ಲಿಯೋ ಅಥವಾ ಅಕ್ಕ ಪಕ್ಕದ ಊರುಗಳ ಮನೆಗಳಲ್ಲಿಯೋ ನಡೆದಿರಬಹುದಾದ, ನಡೆಯದೇ ಇರಬಹುದಾದ, ಅವನ ಊಹೆಗೆ ನಿಲುಕಬಹುದಾದ, ನಿಲುಕದೇ ಇರಬಹುದಾದ ವಿಷಯಗಳೇ ಅವನ ಕತೆಗಳು.

ಅವಳು ಅಲ್ಲಿ ಹೋದಳು, ಇವನು ಇಲ್ಲಿ ಬಂದ, ಅವನಿಗೂ ಅವಳಿಗೂ ಇರಬಹುದಾದ ಸಂಬಂಧ, ಅದ್ಯಾರದೋ ಮಗಳು ಮನೆ ಬಿಟ್ಟು ಓಡಿ ಹೋದದ್ದು, ಅದ್ಯಾರೋ ಗಂಡನನ್ನು ಬಿಟ್ಟು ಬಂದದ್ದು, ಅದ್ಯಾರದೋ ಮನೆಯಲ್ಲಿ ನಡೆದ ಅಣ್ಣ ತಮ್ಮಂದಿರ ಜಗಳ, ಅದ್ಯಾರದೋ ಮನೆ ಒಡೆದು ಪಾಲಾದುದ್ದು, ಅದ್ಯಾರದೋ ಮನೆಯಲ್ಲಿ ನಡೆದ ಅತ್ತೆ ಸೊಸೆಯರ ಜಗಳ. ಇಂತಹುದೇ ವಿಷಯಗಳ ಕುರಿತು ಹಾವ ಭಾವಗಳಿಂದ ಕೂಡಿದ ಕತೆ ಹೇಳುವುದರಲ್ಲಿ ನಿಸ್ಸೀಮನಾಗಿದ್ದ ಗೋವಿಂದಣ್ಣ. ಅವನು ಹೇಳುವ ಕತೆಗಳು ಇಂದಿನ ಯಾವ ಸಿನಿಮಾ ಕತೆಗಳಿಗೂ ಕಡಿಮೆಯಾಗಿರಲಿಲ್ಲ. ಅವನು ಹೇಳುವ ಕತೆಗಳನ್ನು ಕೇಳಿ ನಮ್ಮೂರಿನ ಜನ ಅವನಿಗೆ ಕತೆಗಾರ ಗೋವಿಂದಣ್ಣ ಎಂದು ಹೆಸರಿಟ್ಟಿದ್ದರು.

ನಾವು ಚಿಕ್ಕವರಿದ್ದಾಗ ಇವೆಲ್ಲ ಕತೆಗಳು ನಮಗೆ ಅರ್ಥವಾಗದ್ದರಿಂದ ಅವು ಯಾರಿಗೆ ಸಂಬಂಧಿಸದ ಕತೆಗಳು ಎಂದು ಅರ್ಥವಾಗದೇ ನಮ್ಮಷ್ಟಕ್ಕೆ ನಾವು ಸುಮ್ಮನಾಗಿ ಬಿಡುತಿದ್ದೆವು. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ಅವನ ಕತೆಗಳು ನಮಗೂ ಅರ್ಥವಾಗ ತೊಡಗಿದ ಮೇಲೆ ಅವನು ಯಾರ ಬಗ್ಗೆ ಕತೆ ಹೇಳುತಿದ್ದಾನೆ ಎನ್ನುವುದು ಸ್ಪಷ್ಟವಾಗತೊಡಗಿದವು. ಒಂದಂತೂ ಸತ್ಯ, ಅವನು ಹೇಳುತ್ತಿದ್ದ ಕತೆಗಳಲ್ಲಿ ಸತ್ಯ ಇತ್ತೋ, ಇಲ್ಲವೋ, ಅದರೆ ಅವನು ಹೇಳುವ ಶೈಲಿಯಿಂದ ಎದುರಿಗೆ ಕೂತಿರುವ ವ್ಯಕ್ತಿ ಒಮ್ಮೆ ಅದು ಸತ್ಯವಾದ ಕತೆ ಎಂದು ನಂಬದಿರಲು ಸಾದ್ಯವಿಲ್ಲದಿರಲಿಲ್ಲ. ಇಲ್ಲದಿದುದನ್ನು ಇದ್ದಂತೆ ನಿಖರವಾಗಿ ಹೇಳಬಲ್ಲವನಾಗಿದ್ದ ಗೋವಿಂದಣ್ಣ. ನಾವು ದೊಡ್ಡವರಾದ ಮೇಲಂತೂ ಅವನೆಲ್ಲಾದರೂ ಕತೆ ಹೇಳುತಿದ್ದರೆ ನಾವು ತಪ್ಪದೇ ಕೇಳುತಿದ್ದೆವು.

                             -------*-*-*-------
ಗೋವಿಂದಣ್ಣ ಹಾಗೂ ಅವನ ಕತೆಗಳ ಯೋಚನೆಯಲ್ಲಿ ಕಡ್ಲೆ ಬೀಜ ತಿನ್ನುತ್ತಾ ನಿಂತವನಿಗೆ, ಆತ ನನ್ನನ್ನು ದಾಟಿ ೧೦ ಹೆಜ್ಜೆ ಮುನ್ನಡೆದಿದ್ದು ಆತ ದಾಟಿ ಹೋದ ಮೇಲೆಯೇ ತಿಳಿದದ್ದು. ಮುಂದೆ ಹೋದವನು ನನ್ನನ್ನು ನೋಡದೇ, ಮಾತನಾಡದೇ ಹೋದುದ್ದರಿಂದ ಆತ ಗೋವಿಂದಣ್ಣನಿರಲಿಕ್ಕಿಲ್ಲ ಎಂದನಿಸಿ ಮನೆಗೆ ಹೋಗೋಣವೆಂದು ಹೆಜ್ಜೆ ತೆಗೆಯಲು ಯತ್ನಿಸಿದವನು, ಏನಾದರಾಗಲೀ ಅವನಿಗಾಗಿ ಇಷ್ಟು ಹೊತ್ತು ಕಾದಿದ್ದೇನೆ, ನೋಡಿಯೇ ಬಿಡೋಣವೆಂದು ಆತನನ್ನು ಹಿಂಬಾಲಿಸಿ ಜೋರಾಗಿ ಹೆಜ್ಜೆ ಹಾಕಿದೆ. ಇನ್ನೇನು ಆತನ ಹತ್ತಿರ ಹತ್ತಿರ ಬರುತ್ತಿದ್ದಂತೆ, ನೋಡೇ ಬಿಡೋಣವೆಂದು, "ಗೋವಿಂದಣ್ಣ, ಗೋವಿಂದಣ್ಣ" ಎಂದು ಧೈರ್ಯ ಮಾಡಿ ಅವನನ್ನು ಕರೆದು ಬಿಟ್ಟೆ. ನಾನು ಕರೆದಿದ್ದೇ ತಡ, ಆತ "ಯಾರು?" ಎನ್ನುತ್ತಾ ಹಿಂತಿರುಗಿದವನು, "ಓಹ್, ನೀನ ಸೀತಾರಾಮನ ಮಗ ಮೋಹನ ಅಲ್ವಾ" ಎಂದ.

ನನಗೆ ನಾನು ಮಾತನಾಡಿಸಿದ್ದು ಗೋವಿಂದಣ್ಣನನ್ನೇ ಎಂದನಿಸಿದಾಗ ಖುಶಿಯಾಗಿ, "ಹೌದ ಗೋವಿಂದಣ್ಣ, ನೀನೇನ್ ಇಲ್ಲೆ? ನಿನ್ನ ಅಲ್ಲೇ ನೋಡ್ದೇ, ನೀ ನನ್ನ ನೋಡ್ದೇ ಹಂಗೆ ಬಂದ್ಬಿಟ್ಟೆ ಅಲ್ಲಾ, ಅದ್ಕೆ ನೀನ ಹೌದಾ, ಅಲ್ವಾ ಅನ್ನಿಸ್ತ್."

"ಹೌದೆ ಆಣ್ಣಗೆ ಗುತ್ತಾಗಲಾ, ನಾನ ಯಾವ್ದೋ ಲಕ್ಸದಲ್ಲೇ ಬತ್ತೇ ಇದದೆ"

"ಇರ್ಲೆ ಬಿಡ ಆಣ್ಣಾ, ನೀನೇನ್ ಇಲ್ಲೆ?"

"ನಾನ್ ಇಲ್ಲೆ ಮೀನ್ ಮಾರ್ಕೆಟ್ಗೆ ಮೀನ್ ತಕಂಡೆ ಹೋಗುವಾ ಅಂತೆ ಬಂದೆ."

ನನಗೆ ತಲೆ ಬುಡ ಅರ್ಥವಾಗಲಿಲ್ಲ. ಊರಿನಲ್ಲಿದ್ದ ಗೋವಿಂದಣ್ಣ ಬೆಂಗಳೂರಿಗೆ ಬರುವುದೆಂದರೇನು? ಬೆಂಗಳೂರಿಗೆ ಬಂದು ಹೀಗೆ ಒಬ್ಬನೇ ಓಡಾಡುವುದೆಂದರೇನು? ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಅರವತ್ತಕ್ಕೂ ಹೆಚ್ಚು ವಸಂತಗಳನ್ನು ಕಳೆದ ಈತ ಬೆಂಗಳೂರಿನಲ್ಲಿ ಒಬ್ಬನೇ ಬಂದು ಮೀನು ತೆಗೆದುಕೊಂಡು ಹೋಗುವುದೆಂದರೇನು? ಇಲ್ಲಿ ಎಲ್ಲಿ ಉಳಿದು ಕೊಂಡಿರಬಹುದು ಎಂದು ಯೋಚಿಸುತ್ತಾ ಹೆಜ್ಜೆ ಹಾಕುತ್ತಿದ್ದ ನಾನು "ಏನ್ ತಮ್ಮಾ, ಖಾಲಿ ಬಸ್ಲೆ ಸುಪ್ಪ ತಕಂಡೆ ಹೋತೆ ಇಂವಿಯಲ್ಲಾ, ಅದ್ರ ಸಂತಿಗೆ ಸಿಟ್ಲಿ ತಕಂಡೆ ಹೋದ್ರೆ ಬೆರ್ಕಿ ಹಾಕುಕರು ಆತತಲಾ", ಎಂದು ಗೋವಿಂದಣ್ಣ ಹೇಳಿದಾಗ ನಾನು ಎಚ್ಚೆತ್ತು,

"ಹ ಹ, ಅದು ಹೌದ, ಬಾ ನೀನು ಹೆಂಗೆ ಆ ಬದಿಗೆ ಹೋತೆ ಇಂವಿಯಲ್ಲಾ, ನಾನು ಬತ್ತಿ ಬಾ" ಎಂದು ಅವನೊಟ್ಟಿಗೆ ಹೊರಟೆ. ಹಾಗೆ ಹೊರಡುವಾಗ ಗೋವಿಂದಣ್ಣ ಏಕೋ ಬದಲಾಗಿದ್ದಾನೆ ಅನಿಸತೊಡಗಿತು. ಮೊದಲು ಆತ ಹೀಗಿರಲಿಲ್ಲಾ ಅಂತೆನಿಸಿತು. ಮೊದಲಾಗಿದ್ದರೆ ಇಷ್ಟೊತ್ತಿಗೆ ಕನಿಷ್ಟ ಒಂದಾದರೂ ಕತೆ ಹೇಳಿ ಮುಗಿಸಿ ಬಿಡುತ್ತಿದ್ದ. ಆದರೆ ಆತ ಈಗ ಏನು ಮಾತನ್ನಾಡದೇ ಸುಮ್ಮನೆ ಬರುತ್ತಿದ್ದ.

ಇಬ್ಬರೂ ಮೀನು ಮಾರುಕಟ್ಟೆಗೆ ಬಂದು ಮೀನು ತೆಗೆದು ಕೊಂಡು ಅಲ್ಲಿಂದ ಹೊರ ಬಂದೆವು. ಮೀನು ಮಾರು ಕಟ್ಟೆಯಿಂದ ಹೊರಬಂದರೂ ಗೋವಿಂದಣ್ಣ ಮಾತನ್ನಾಡದ್ದನ್ನು ನೋಡಿ, ನನಗೆ ಸುಮ್ಮನಿರಲಾಗದೇ, "ಗೋವಿಂದಣ್ಣ ಇಲ್ಲೆ , ಎಲ್ಲಿ ಇರ್ತಿ?" ಎಂದೆ.

ಗೋವಿಂದಣ್ಣ ಏನನ್ನೋ ಅನುಮಾನಿಸುತ್ತಾ, " ಇಲ್ಲೇ ಮಯ್ಯಾಸ್ ಹೊಟೇಲ್ ಇದ ಅಲ್ಲಾ, ಅದ್ರ ಹಿಂದೆ, ೩-೪ ಮನಿ ದಾಟಿದ್ರೆ ನಮ್ಮ ಮನೆ ಸಿಕ್ತಿದ. ಆ ಮನಿಲೆ ೩ನೇ ಪ್ಲೋರ್ ನಲ್ಲೆ ನಾವ್ ಇರ್ತವ್" ಅಂದ.

ಆತ ಅಷ್ಟು ನಿಖರವಾಗಿ ಹೇಳುತ್ತಿದ್ದಾನೆ ಅಂದರೆ ಅದು ನಿಜವಿರಬಹುದು ಅನಿಸಿತು. ಆತನ ಮಾತಿನಲ್ಲಿ ಆಗಾಗ ಇಣುಕಿ ಮರೆಯಾಗುವ ಇಂಗ್ಲೀಷ ಪದಗಳನ್ನು ಗಮನಿಸಿದರೆ ಆತನಿಗಾಗಲೇ ಬೆಂಗಳೂರಿನ ಪ್ರಭಾವ ಸ್ವಲ್ಪ ಬೀರಿದೆ ಅನಿಸಿ, "ಹೌದೆ ಅಲ್ಲೆ ಯಾರ್ ಮನಿಲೆ ಇರ್ತಿ?" ಎಂದು ಕೇಳಿದೆ.

"ಮಗ್ಳ ಮನಿಲೆ" ಎಂದವನು ಮತ್ತೇನನ್ನು ಹೇಳಲು ಮನಸ್ಸಿಲ್ಲ ಎನ್ನುವವನಂತೆ, "ಮೀನ ತಕಂಡೆ ಬಾಳ ಹುತ್ತ ಆಯ್ತ, ಮನಿ ಬದಿಗೆ ಹೋತಿ ಆಗಾ" ಎಂದ.

ಆತ ಹಾಗೆ ಹೇಳಿದಾಗ ನನಗೆ ಮತ್ತೇನನ್ನು ಕೇಳುವ ಮನಸ್ಸಾಗದೇ, ನನ್ನ ವಿಸಿಟಿಂಗ್ ಕಾರ್ಡ ಕೊಟ್ಟು, ಅದರಲ್ಲಿರುವ ನನ್ನ ಮೊಬೈಲ್ ನಂಬರ್ ತೋರಿಸಿ, ಆ ನಂಬರಿಗೆ ಕರೆ ಮಾಡುವಂತೆ ತಿಳಿಸಿ, "ಮನಿ ಬದಿಗೆ ಬಾರಾ" ಎಂದು ಹೇಳಿದೆ.

ಆತ "ಹೋ, ಆಯ್ತ. ಬತ್ತಿ ಅಗಾ" ಎಂದು ಹೇಳಿ ಅಲ್ಲಿ ನಿಲ್ಲದೇ ಅವನ ಮನೆಯತ್ತ ಹೊರಟ. ನಾನು ಕೂಡ ಬಹಳ ಹೊತ್ತು ಅಲ್ಲಿ ನಿಲ್ಲಲಾರದೇ ಮನೆಯತ್ತ ಹೊರಟೆ.

                              -------*-*-*-------

ಗೋವಿಂದಣ್ಣನನ್ನು ನೋಡಿ ಮಾತನಾಡಿಸಿದಾಗಿನಿಂದ ನನ್ನ ಮನಸ್ಥಿತಿಯೇಕೋ ಸರಿ ಇರಲಿಲ್ಲ. ಅಂದು ಊರಲ್ಲಿ ಉತ್ಸಾಹದಿಂದ ಕತೆ ಹೇಳುವ ಗೋವಿಂದಣ್ಣನಿಗೂ, ಇಂದು ನನಗೆ ಸಿಕ್ಕ ಗೋವಿಂದಣ್ಣನಿಗೂ ಅಜಗಜಾಂತರ ವ್ಯತ್ಯಾಸವಿದೆ ಅನಿಸಿತು. ನಾನು ಕಳೆದೆರಡು ವರ್ಷದಲ್ಲಿ ಅದೆಷ್ಟು ಭಾರಿ ಊರಿಗೆ ಹೋಗಿದ್ದೆನಾದರೂ ಮನೆಯಲ್ಲಿ ಗೋವಿಂದಣ್ಣನ ವಿಷಯ ಬರದಿದ್ದುದರಿಂದ, ನಾನು ಅವನ ಬಗ್ಗೆ ಇಲ್ಲಿಯವರೆಗೆ ಯೋಚಿಸಿಯೇ ಇರಲಿಲ್ಲ. ಈಗ ಆತ ಕಾಣಿಸಿಕೊಂಡಾಗಿನಿಂದ ಮನಸ್ಸು ಸರಿ ಇರಲಿಲ್ಲ. ಮನೆಗೆ ಕರೆ ಮಾಡಿದರೆ ವಿಷಯ ತಿಳಿದರೂ ತಿಳಿಯಬಹುದೇನೋ ಅನಿಸಿ, ಮನೆಗೆ ಕರೆ ಮಾಡಿದೆ.

ಅಮ್ಮ ಕರೆಯನ್ನು ಸ್ವೀಕರಿಸಿ, "ಏನಪ್ಪಾ ಆರಾಂ? ಯಾವಾಗ್ಲೂ ಸಂಜಿಗೆ ಪೋನ್ ಮಾಡುವಂವಾ, ಇಂದೇನ್ ಇಟ್ಟೊತ್ತಿಗೆ ಪೋನ್ ಮಾಡಿ? ಯಾಕೆ ಆಪೀಸ್ ಇಲ್ವಾ ಹೆಂಗೆ?"

"ಇವತ್ತೆ ಆಯ್ತಾರಾ ಅಮ್ಮಾ, ಆಪೀಸಿಗೆ ರಜೆ."

"ಹೋ! ಅದೆ ಮರ್ತೆ ಹೋಗತ್, ಏನ್ ಇಟ್ಟೊತ್ತಿಗೆ ಪೋನ್ ಮಾಡಿ, ಏನಾರು ವಿಶೇಷ?"

"ಅಮ್ಮಾ, ಇಂದೆ ನಮ್ಮೂರ್ ಗೋವಿಂದಣ್ಣ ಸಿಕ್ಕದಾ, ಅದೇ ಕತೆಗಾರ ಗೋವಿಂದಣ್ಣ."

ಅಮ್ಮಾ ಆಶ್ಚರ್ಯದಿಂದ "ಹೌದೆ? ಹೆಂಗೀವಾ? ಆರಾಂ ಇವ್ನೆ?"

"ಹ, ಆರಾಂ ಇಂವಾ, ಆದ್ರೆ ಯಾಕೋ ಮುದ್ಲನಂಗೆ ಇಲ್ಲಾ. ಇಟ್ಟ ಬೇಕೋ ಅಟ್ಟೇ ಮಾತಾಡೆ ಹೋದಾ. ಯಾಕೋ ಬೆಜಾರ್ದಲ್ಲೆ ಇದ್ದಂಗೆ ಇದ್ದಾ."

"ಹೌದಪ್ಪಾ, ಆಗೆ ಆಂವಾ ಎಲ್ಲಾರ್ ಮನೀದು ಕತೆ ಹೇಳ್ತದಾ, ಏಗೆ ಆವ್ನ ಮನಿದೇ ಕತಿ ಆಗ್ಬಿಟ್ಟಿದ."

"ನನಗೆ ಏನೇನು ಅರ್ಥವಾಗದೇ "ಹಂಗಂದ್ರೆ, ಏನಮ್ಮಾ, ಸ್ವಲ್ಪ ಬಿಡ್ಸ ಹೇಳ್" ಅಂದಾಗ, ಅಮ್ಮಾ,

"ಏನ್ ಹೇಳುದ್ ಮಗಾ, ನಿಂಗೆ ಆವ್ನ ಮಗ್ಳ ಪ್ರೀಯಾ ಗುತ್ತಲಾ, ನಿಂಗಿಂತಾ ಉಂದ ವರ್ಷಾನಾ, ಎರ್ಡ ವರ್ಷನಾ ಏನಾ ಚಿಕ್ಕೋಳ, ಅವ್ಳ ಇಂಜಿನಿಯರ್ ಓದ್ ಬೇಕಾದ್ರೆ ಯಾರನ್ನೋ ಲವ್ ಮಾಡಿ, ಮನಿಯೋರ್ ಬೇಡಾ ಅಂದ್ರೂ ಕೇಳ್ದೇ ಕೊನೆಗೆ ಅವನನ್ನೇ ಮದ್ವೆಯಾಗಿ ಪುನಾದಲ್ಲೆಲ್ಲೋ ಇದ್ಲಂತೆ. ಆದ್ರೆ ಏಗುಂದ್ ಎರ್ಡ ವರ್ಷದ ಹಿಂದೆ ಗಂಡನ್ ಬಿಟ್ಟೆಕಂಡೆ ೫ ವರ್ಷದ್ ಮಗ್ನ ಕರ್ಕಂಡೆ ಬೆಂಗಳೂರಲ್ಲೆ ಬಂದೀದ ಅಂತೆ. ಊರಿಗೂ ಬರುದ್ ಕಡ್ಮಿ. ಅದ್ನ ಹಚ್ಕಂಡೆ ಪಾಪ ಗೋವಿಂದಣ್ಣನ ಹೆಂಡತಿ ಶಾರದೆ ಕುರ್ಗೆ, ಕುರ್ಗೆ ಆರಾಂ ತಪ್ಪೆ, ಏನ್ ಮಾಡ್ದ್ರೂ ಕಡ್ಮಿ ಆಗ್ದೇ ಸತ್ತೇ ಹೋದ್ಲ. ಅಮ್ಮಾ ಸತ್ತ ಹೋದಾಗ ಬಂದೋಳ ಆಪ್ನ ಕರ್ಕಂಡೆ ಬೆಂಗಳೂರಿಗೆ ಹೋದೋಳ ಮತ್ತೆ ಬರ್ಲಾ. ಈಲ್ಲಿರು ಗದ್ದೆ ತೋಟ ಎಲ್ಲಾ ಗೋವಿಂದಣ್ಣನ ಮಗಾ ಜಗದೀಶನೇ ನೋಡ್ಕಂಡೆ ಹೋತೆ ಇಂವಾ. ಬೆಂಗಳೂರಿಗೆ ಹೋದ್ಮೇಲೆ ಗೋವಿಂದಣ್ಣ ಎರ್ಡ ಮೂರ್ ಸಲಾ ಊರಿಗೆ ಬಂದ ಹೋಗಿಯಾ ಅಂತೆ ಜನಾ ಹೇಳ್ತರ, ಆದ್ರೆ ನಾವ್ಯಾರು ಆವ್ನಾ ನೋಡಲಾ"

ಅಮ್ಮಾ ಒಂದೇ ಉಸಿರಲ್ಲೇ ಅವನ ಕತೆಯನ್ನು ಹೇಳಿ ಮುಗಿಸಿದಳು, ನನಗೆ ಮತ್ತೆ ಮಾತನ್ನಾಡಲು ಮನಸ್ಸಾಗದ ಕಾರಣ "ಓಹ್ ಹೌದೆ ಇಷ್ಟೆಲ್ಲಾ ಆಗಿದೆ" ಎನ್ನುತ್ತಾ "ಆಯ್ತ ಹಂಗಾರೆ, ಆಮೆಲೆ ಸಂಜಿಗೆ ಮತ್ತೆ ಪೋನ್ ಮಾಡ್ತಿ" ಎಂದು ಅಮ್ಮನ ಉತ್ತರಕ್ಕೂ ಕಾಯದೇ ಪೋನಿಟ್ಟೆ.

ಮನಸ್ಸು ಹಳಿ ತಪ್ಪಿದ ರೈಲಿನಂತಾಗಿತ್ತು. ಒಂದೊಂದು ಬಾರಿ ಒಂದೊಂದು ಯೋಚನೆಗಳು. ಮೊದಲ ಯೋಚನೆಗೂ, ಎರಡನೆಯ ಯೋಚನೆಗೂ ಸಂಬಂಧವಿಲ್ಲದ ರೀತಿಯಲ್ಲಿ ಒಂದೊಂದೇ ಯೋಚನೆಗಳು. ಬದುಕು ಎಷ್ಟು ತಿರುವುಗಳಿಂದ ಕೂಡಿದೆಯಲ್ಲ, ಒಂದೊಂದು ತಿರುವಲ್ಲೂ ಒಂದೊಂದು ತೆರನಾದ ಬದಲಾವಣೆ. ಒಮ್ಮೆ ಯಾರದೋ ಬದುಕು ನಮಗೆ ಕತೆಯಾದರೆ, ಕೆಲವೊಮ್ಮೆ ನಮ್ಮ ಬದುಕು ಇನ್ನೋರ್ವರಿಗೆ ಕತೆಯಾಗುತ್ತದೆ. ಯಾರಿಗೆ ಗೊತ್ತು ಯಾರ ಬದುಕು, ಯಾರಿಗೆ, ಯಾವಾಗ, ಎಂದು, ಎಲ್ಲಿ ಕತೆಯಾಗುತ್ತದೆ ಎಂದು. ಇನ್ನೊಬ್ಬರ ಬದುಕನ್ನೇ ನೋಡಿ ನಾವು ಕತೆ ಕಟ್ಟುತ್ತೇವೆ, ಬರೆಯುತ್ತೇವೆ, ಹೇಳುತ್ತೇವೆ, ಮುಂದೊಂದು ದಿನ ನಮ್ಮ ಬದುಕು ಕೂಡ ಇನ್ನೊಬ್ಬರಿಗೆ ಕತೆಯಾಗಬಹುದು ಎಂದು ಯೋಚಿಸದೇ.

--ಮಂಜು ಹಿಚ್ಕಡ್

No comments:

Post a Comment