Tuesday, October 6, 2015

ಮರೆಯಲಾಗದ ಬಾಲ್ಯದ ಮಳೆಗಾಲದ ನೆನಪುಗಳು

ಒಮ್ಮೆ ಮಳೆಗಾಲ ಶುರುವಾಗಿ ಮಣ್ಣಿನ ಗಮಲು ಮೂಗಿಗೆ ಬಡಿಯಿತೆಂದರೆ ತಕ್ಷಣ ನೆನಪಾಗುವುದು ನಮ್ಮ ಕಡೆಯ ಮಳೆಗಾಲದ್ದು. ನಮ್ಮ ಕಡೆ ಮಳೆಗಾಲ ಶುರುವಾದರೆ ಸಾಕು, ಮನೆಯ ಹೊರಗಡೆ ನೀರು ನಿಲ್ಲದ, ನೀರು ಕಾಣದ ಸ್ಥಳಗಳು ಸಿಗುವುದು ಕಡಿಮೆ. ಅಂತ ನಿಂತ ನೀರಲ್ಲಿ ಆಡುವುದೆಂದರೆ  ಯಾವ ಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ. ನೀರಲ್ಲಿ ಆಟವಾಡುವುದೆಂದರೆ ದೊಡ್ಡವರಿಗೆ ಇಷ್ಟವಾಗುವಾಗ ಮಕ್ಕಳಿಗೆ ಇಷ್ಟವಾಗದಿರುತದೆಯೇ? ನಾವು ಕೂಡ ಚಿಕ್ಕವರಾಗಿರುವಾಗ, ಇತರೆ ಮಕ್ಕಳಂತೆ ನೀರಲ್ಲಿ ಆಟವಡಿಯೇ ಬೆಳೆದವರೇ, ಹಾಗೆ ನೆನೆಪಿರುವ ಒಂದಿಷ್ಟು ಘಟನೆಗಳನ್ನು ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇನೆ.

ನಮ್ಮ ಊರಲ್ಲಿ ಮಳೆ ಬಂತೆಂದರೆ, ನಮ್ಮ ಮನೆಯ ಸುತ್ತ ಮುತ್ತಲೆಲ್ಲ ಒರತೆಗಳು ಹುಟ್ಟಿಕೊಂಡು, ಭೂಮಿಯಿಂದ ನೀರು ಜಿನುಗಲು ಪ್ರಾರಂಭವಾಗುತ್ತದೆ. ಆ ಒರತೆಯಿಂದ ಹರೀವ ನೀರು ಹರಿದು ಗದ್ದೆ ಸೇರುವ ಸಲುವಾಗಿಯೇ ನಮ್ಮ ಮನೆಯ ಪಕ್ಕದಲ್ಲಿ ಚಿಕ್ಕ ಕಾಲುವೆ ಇದೆ. ಮಳೆ ನಿಂತು ಹತ್ತು-ಹದಿನೈದು ದಿನ ಕಳೆದರೂ ಆ ಕಾಲುವೆಯಲ್ಲಿ ಹರಿವ ನೀರು ನಿಲ್ಲುತ್ತಿರಲಿಲ್ಲ. ಹಾಗೆ ಹರಿವ ನೀರಿನಲ್ಲಿ ದಿನ ನಿತ್ಯ ಆಡಿ ಕಾಲು ಹುಣ್ಣಾಗಿ ಮನೆಯಲ್ಲಿ ದೊಡ್ಡವರಿಂದ ಬೈಸಿಕೊಂಡರೂ ನಾವು ಆಟವಾಡುವದನ್ನು ನಿಲ್ಲಿಸುತ್ತಿರಲಿಲ್ಲ. ಒರತೆಗಳು ಜಿನುಗುವ ಜಾಗದಲ್ಲಿ ಕೋಲು ದೂಡಿ ಆ ಒರತೆಗಳನ್ನು ದೊಡ್ಡದಾಗಿ ಮಾಡುವುದು, ಹರಿವ ನೀರಿಗೆ ಒಡ್ದು ಕಟ್ಟಿ ನಿಲ್ಲಿಸುವ ವಿಫಲ ಪ್ರಯತ್ನ ಮಾಡುವುದು, ಆ ಹರಿವ ನೀರಲ್ಲಿ ಈ ಕಡೆಯಿಂದ ಆ ಕಡೆ ನೀರು ಎರೆಚಾಡುತ್ತಾ ಓಡಾಡುವುದು ಹೀಗೆ ಒಂದೇ, ಎರಡೇ. ಹಾಗೆ ನೀರಲ್ಲಿಯೇ ಇದ್ದು ಬಿಡುತ್ತಿದ್ದೆವು.

ಇನ್ನು ಶಾಲೆಗೆ ಹೋದರೂ ಅಷ್ಟೇ, ಎಲ್ಲೆಲ್ಲಿ ನೀರು ಹರಿಯುತ್ತೆ, ಅಲ್ಲಿ ಹೋಗಿ ನೀರು ನಿಲ್ಲಿಸಿ, ಆ ನೀರು ಒಂದೆ ಕಡೆ ಹರಿದು ಹೋಗುವಂತೆ ಬಿಟ್ಟು, ಎತ್ತರದಿಂದ ಆ ನೀರು ಬೀಳುವ ಸ್ಥಳದಲ್ಲಿ ಮಾವಿನ ಎಲೆಯನ್ನೋ, ಹಲಸಿನ ಎಲೆಯನ್ನೋ ಇಟ್ಟು ನೀರು ಜಲಪಾತದಂತೆ ಬಿಡುವುದು. ಶಾಲೆಯಿಂದ ಮನೆಗೆ ಬರುವಾಗ ರಸ್ಥೆಯ ಇಕ್ಕೆಲಗಳಲ್ಲಿ ಹರಿಯುವ ಕಾಲುವೆಗಳಲ್ಲಿ ಕಾಗದದ ದೋಣೆ ಬಿಡುವುದು, ನೀರಿನಲ್ಲಿ ಈಜಾಡುವ ಮೀನಿನ ಮರಿಗಳನ್ನು ಹಿಡಿಯುವ ವ್ಯರ್ಥ ಪ್ರಯತ್ನ ಮಾಡುವುದು, ಒಮ್ಮೊಮ್ಮೆ ಕೊಡೆ ಇದ್ದರೂ ಸುಮ್ಮನೆ ಕೊಡೆ ಮಡಿಚಿ ನೆನೆಯುತ್ತಾ ಬರುವುದು.

ಹಾಗೆಯೇ ಆಗಾಗ ನೆನಪಾಗುವ ಇನ್ನೊಂದು ಸಂಗತಿಯೆಂದರೆ ನಮ್ಮ ಮನೆಯಿಂದ ಅಣತಿ ದೂರದಲ್ಲಿರುವ ಪಕ್ಕದ ಮನೆಯವರ ಜಾಗದಲ್ಲಿ ಬೇಸಿಗೆಯಲ್ಲಿ ಯಾವುದೋ ಕಟ್ಟಡ ಕಟ್ಟುವುದಕ್ಕಾಗಿ ಚಿಕ್ಕದಾದ ಹೊಂಡ(ಗುಳಿ) ತೋಡಿದ್ದರೂ. ಅದು ಚಿಕ್ಕದೆಂದರೂ ೩ ಅಡಿ ಆಳವಿದ್ದು, ೪-೫ ಅಡಿ ಉದ್ದಗಲವಿತ್ತು. ಯಾವುದೋ ಕಾರಣದಿಂದ ಕಟ್ಟಡ ಕಟ್ಟದೇ ಖಾಲಿ ಬಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಂಡಿತ್ತು. ನಾವಾಗ ೭-೮ ವರ್ಷದ ಮಕ್ಕಳು. ಈಜು ಕೂಡ ಬರುತ್ತಿರಲಿಲ್ಲ. ಆಗ ನಮಗೆ ಆ ನೀರು ತುಂಬಿದ ಹೊಂಡವೇ ಈಜು ಕೊಳ. ಶಾಲೆ ಬಿಟ್ಟು ಬಂದೊಡನೆ ಒಮ್ಮೆ ಹೋಗಿ ಅದರಲ್ಲಿ ಬಿದ್ದು ಎದ್ದು ಬಂದಿಲ್ಲ ಎಂದರೆ ತಿಂದ ಅನ್ನ ಮೈಗೆ ಒಗ್ಗುತ್ತಿರಲಿಲ್ಲ. ಶನಿವಾರ, ಭಾನುವಾರಗಳಲ್ಲಂತು ಬೆಳಿಗ್ಗೆಯಿಂದ ಸಂಜೆಯವೆರೆಗೂ ಅಲ್ಲೇ.

ನಮ್ಮ ನೀರಾಟ ಇಷ್ಟಕ್ಕೇ ನಿಲ್ಲಲಿಲ್ಲ. ಮುಂದೆ ಈಜು ಕಲಿತ ಮೇಲೆ, ಮಳೆಗಾಲದಲ್ಲಿ ಕೆರೆ, ಭಾವಿಗಳಲ್ಲಿ ಈಜಾಡುತ್ತಾ ಕಾಲಕಳೆದೆವು. ಕಾಲೇಜು ಮುಗಿದು ಹೆಚ್ಚಿನ ಓದಿಗೆ ದಾರವಾಡದ ಮಡಿಲು ಸೇರಿದ ಮೇಲೆ ಇದು ನಿಂತು ಬಿಟ್ಟಿತು.

ಆಗ ಅದೇಷ್ಟೇ ಮಳೆಯಲ್ಲಿ ನೆನೆದರೂ, ನೀರಲ್ಲಿ ಆಟವಾಡಿದರೂ ನೆಗಡಿ ಜ್ವರ ಬರುತಿದ್ದುದು ಕಡಿಮೆಯೇ. ಚಿಕ್ಕವರಿರುವಾಗ ವರ್ಷಕ್ಕೊಂದೆರಡು ಸಾರಿ ನೆಗಡಿ, ವರ್ಷಕೊಮ್ಮೆ ಜ್ವರ ಬರುವುದು ಬಿಟ್ಟರೆ, ಅಂತಹ ಕಾಯಿಲೆ ಕಸಾಲೆಗಳು ಬರುತಿರಲಿಲ್ಲ. ಆದರೆ ಈಗ ಒಮ್ಮೆ ಬೆಂಗಳೂರಿನ ಹನಿ ಮಳೆಯಲ್ಲಿ ಸ್ವಲ್ಪನೆನೆದರೂ ಸಾಕು, ನೆಗಡಿಯಾಗಿ ಮಳೆ ನೀರಿಗಿಂತ ಜಾಸ್ತಿ ನೀರು ಮೂಗಿನಿಂದಲೇ ಇಳಿಯುತ್ತದೆ. ಅದಕ್ಕೆ ಬಹುಶಃ ಇಲ್ಲಿಯ ವಾತಾವರಣದ ಪ್ರಭಾವವೂ ಇರಬಹುದೇನೋ. ಅದೇನೇ ಇರಲಿ ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದು ಅಸ್ವಾಧಿಸುವ ಆ ಮಳೆಗಾಲಕ್ಕೂ, ಕಾಂಕ್ರೆಟ್ ಕಾಡುಗಳ ನಡುವಲ್ಲಿ ಹುಟ್ಟಿ ಬೆಳೆದು ಅಸ್ವಾಧಿಸುವ ಮಳೆಗಾಲಕ್ಕೂ ಅಜಗಜಾಂತರ ವ್ಯತ್ಯಾಸ.

-ಮಂಜು ಹಿಚ್ಕಡ್

No comments:

Post a Comment