Sunday, September 7, 2014

ನೆನೆಯದ ಹೆಸರು ನೆನಪಾದಾಗ.

[೨೭-ಅಗಷ್ಟ-೨೦೧೪ ರಂದು ಅವಧಿಯಲ್ಲಿ ಪ್ರಕಟವಾದ ನನ್ನ ಕತೆ ’ನೆನೆಯದ ಹೆಸರು ನೆನಪಾದಾಗ’ http://avadhimag.com/2014/08/27/%E0%B2%A8%E0%B3%86%E0%B2%A8%E0%B3%86%E0%B2%AF%E0%B2%A6-%E0%B2%B9%E0%B3%86%E0%B2%B8%E0%B2%B0%E0%B3%81-%E0%B2%A8%E0%B3%86%E0%B2%A8%E0%B2%AA%E0%B2%BE%E0%B2%A6%E0%B2%BE%E0%B2%97-%E0%B2%B8%E0%B2%A3/]

ಗಂಡ ಸತ್ತು ಶ್ಮಶಾನ ಸೇರಿದಾಗ ಸುರೇಖಾಗೆ ಇನ್ನೂ ೨೮ರ ಹರೆಯ. ಗಂಡ ಸಾಯುವಾಗ ಬಿಟ್ಟು ಹೋದದ್ದೆಂದರೆ ವಾಸಿಸಲು ಎರಡು ಪಕ್ಕೆಯ ಮನೆ, ಮನೆಯ ಸುತ್ತಲಿನ ನಾಲ್ಕು ಗುಂಟೆಯ ಜಾಗ ಹಾಗೂ ಆರು ವರ್ಷದ ಮಗ ಸಂದೇಶ. ಗಂಡ ಸತ್ತ ಮೇಲೆ ಆತ ಯಾರದೋ ಒತ್ತಾಯಕ್ಕೆ ಮಾಡಿದ ಇನ್ಸೂರನ್ಸ ಹಾಗೂ ಅವನ ಭವಿಷ್ಯನಿಧಿಯಿಂದ ಸ್ವಲ್ಪ ಹಣ ಸೇರಿ ಒಂದೂವರೆ ಲಕ್ಷ ಬಂದಿತ್ತಾದರೂ, ಅದರಲ್ಲಿ ಕೇವಲ ೫೦ ಸಾವಿರದಷ್ಟನ್ನು ತುರ್ತು ಕರ್ಚಿಗೆ ಇಟ್ಟುಕೊಂಡು ಉಳಿದ ಒಂದು ಲಕ್ಷವನ್ನು ಹಾಗೆಯೇ ಬ್ಯಾಂಕಿನಲ್ಲಿ ಇಟ್ಟಿದ್ದಳು. ಗಂಡ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯವರೇ ಅವಳ ಅಸಹಾಯಕತೆಯನ್ನು ನೋಡಿ, ಅವಳ ಬದುಕಿನ ಆಸರೆಗಾಗಿ ಒಂದು ಪರೀಚಾರಿಕೆಯ ಕೆಲಸವನ್ನು ಅದೇ ಆಸ್ಪತ್ರೆಯಲ್ಲಿ ಕೊಟ್ಟಿದ್ದರು.

ಸುರೇಖಾ ಮಗನನ್ನು ಖಾಸಗಿ ಶಾಲೆಗೆ ಸೇರಿಸಿ ಓದಿಸುವುದು ಕಷ್ಟವೆಂದು ತಿಳಿದು ಅಲ್ಲಿಯೇ ಸಮೀಪದ ಸರ್ಕಾರಿ ಶಾಲೆಗೆ ಸೇರಿಸಿದ್ದಳು. ಸಂದೇಶ ಓದಲು ತುಂಬಾ ಚುರುಕಾಗಿದ್ದರಿಂದ, ಪ್ರತಿ ತರಗತಿಯನ್ನೂ ಪ್ರಥಮ ಶ್ರೇಣಿಯಲ್ಲಿಯೇ ಪಾಸಾಗುತ್ತಾ ಸಾಗಿದ. ಮಗನ ಓದು ಬರಹವನ್ನು ಗಮನಿಸುತ್ತಿದ್ದ ಸುರೇಖಾಗೂ ಮಗನೆಂದರೆ ತುಂಬಾ ಅಚ್ಚು ಮೆಚ್ಚು. ಅವನು ಕೇಳಿದ್ದಕ್ಕಾವುದಕ್ಕೂ ಇಲ್ಲ ಅಂದಿದ್ದೇ ಇಲ್ಲ. ತಾನು ದುಡಿದು ಸಂಪಾದಿಸುತ್ತಿದ್ದುದು                     ಕಡಿಮೆ ಪಗಾರವಾದರೂ ಮಗನಿಗೆ ಯಾವುದೇ ಕುಂದು ಕೊರತೆ ಬಾರದ ರೀತಿಯಲ್ಲಿ ನೋಡಿಕೊಂಡಲು. ಮುಂದೆ ಮಗ ಹತ್ತನೇ ತರಗತಿಯನ್ನು ಉನ್ನತ ಶ್ರೆಣಿಯಲ್ಲಿ ಪಾಸು ಮಾಡಿದಾಗ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾರಾದರೂ ಆಸ್ಪತ್ರೆಯಲ್ಲಿ ಅವಳ ಮಗನ ಬಗ್ಗೆ ಹೇಳಿ ಹೋಗಳಿದರಂತೂ ಅವಳು ತಾನು ನೆಲದ ಮೇಲೆ ಇದ್ದೆನೇಯೇ ಅನ್ನುವ ಪರೀಜ್ನಾನವೇ ಇಲ್ಲದ ರೀತಿಯಲ್ಲಿ ಓಡಾಡುತ್ತಿದ್ದಳು.

ಸಂದೇಶ ಮೆಟ್ರಿಕ್ ಮುಗಿಸಿ ಸಮೀಪದ ಸರ್ಕಾರಿ ಕಾಲೇಜನ್ನು ಸೇರಿದ. ಕಾಲೇಜಿನಲ್ಲಿ ಅವನಿಗೆ ಅವನದೇ ತರಗತಿಯ ರೇಣುಕಾ ಎನ್ನುವ ಹುಡುಗಿಯ ಪರೀಚಯವಾಯಿತು. ರೇಣುಕಾನು ಕೂಡ ಓದಿನಲ್ಲಿ ಇವನಷ್ಟೇ ಚುರುಕಾಗಿದ್ದಳು. ಇಬ್ಬರೂ ಒಟ್ಟಿಗೆ ಜೊತೆಯಲ್ಲಿ ಲೈಬ್ರರಿಗೆ ಹೋಗಿ ಓದುವುದು, ತರಗತಿಯ ಪಾಠದ ಬಗ್ಗೆ ಚರ್ಚಿಸುವುದನ್ನು ಮಾಡುತಿದ್ದರು. ರೇಣುಕಾ ರಶಾಯನ ಶಾಸ್ತ್ರ, ಜೀವಶಾಸ್ತ್ರದಲ್ಲಿ ಅವನಿಗಿಂತ ಉತ್ತಮವಾಗಿದ್ದರೆ, ಆತ ಗಣಿತ ಮತ್ತು ಬೌತಶಾಸ್ತ್ರಗಳಲ್ಲಿ ಚೆನ್ನಾಗಿದ್ದ. ಹೀಗಾಗಿ ಅವರಿಬ್ಬರೂ ಕೂಡಿ ಚರ್ಚಿಸಿ ರಚಿಸಿದ ಟಿಪ್ಪಣಿಗಳು ಇಬ್ಬರಿಗೂ ಉಪಯುಕ್ತವಾಗಿದ್ದವು. ಮುಂದೆ ಇವರಿಬ್ಬರ ಪರೀಚಯ ಸ್ನೇಹಕ್ಕೆ ತಿರುಗಿ ಒಬ್ಬರಿಗೊಬ್ಬರು ಬಿಟ್ಟಿರದ ಸ್ಥಿತಿ ತಲುಪಿ ಪ್ರೀತಿಯತ್ತ ಮುಖ ಮಾಡಿದ್ದರೂ್, ತಮ್ಮ ತಮ್ಮ ದ್ಯೇಯಕ್ಕೆ ಮಹತ್ವವನ್ನು ನೀಡಿದ್ದರಿಂದ ಅವರು ಆ ಬಗ್ಗೆ ಚರ್ಚಿಸಿರಲಿಲ್ಲ. ಇಬ್ಬರೂ ಪಿಯೂಸಿಯಲ್ಲಿ ಚೆನ್ನಾಗಿ ಓದಿ ಉನ್ನತ ಶ್ರೇಣಿಯಲ್ಲಿಯೇ ಪಾಸಾದರು. ಸಂದೇಶನಿಗಿಂತ ರೇಣುಕಾ ಪಿಯೂಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದರೂ ಮುಂದೆ ಬಿ.ಎಸ್.ಸಿಯನ್ನು ಆರಿಸಿಕೊಂಡು ಅದೇ ಕಾಲೇಜಿನಲ್ಲಿ ಓದತೊಡಗಿದಳು. ಸಂದೇಶ ತಾನು ಇಂಜಿನಿಯರ್ ಆಗಬೇಕೆಂಬ ಕನಸು ಹೊತ್ತು ಸುರತ್ಕಲನ ಇಂಜಿನಿಯರಿಂಗ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡ. ಮಗನಿಗೆ ಇಂಜಿನಿಯರಿಂಗ್ ಸೀಟು ಸಿಕ್ಕಾಗ ಸುರೇಖಾಗೆ ಖುಸಿಯಾದರೂ ಅವನನ್ನು ಓದಿಸುವುದು ಹೇಗೆ ಎನ್ನುವುದೇ ಚಿಂತೆಯಾಗಿ ಕಾಡಿತು.

ಗಂಡ ಸತ್ತಾಗ ಸಿಕ್ಕ ಹಣ, ಮತ್ತು ಅದರ ಬಡ್ಡಿ ಹಾಗೂ ತಾನೂ ಕೂಡಿಟ್ಟ ಹಣ ಸೇರಿಸಿ ಹೇಗಾದರೂ ಮಾಡಿ ಎರಡು-ಮೂರು ವರ್ಷ ಓದಿಸಬಹುದು. ಆದರೆ ಮುಂದೆ ಏನು ಮಾಡುವುದು ಎನ್ನಿಸಿದಾಗ ಯಾರೋ ಅವಳಿಗೆ ಮಗನ ಓದಿಗಾಗಿ ಶೈಕ್ಷಣಿಕ ಸಾಲದ ಬಗ್ಗೆ ತಿಳಿಸಿದರು. ಅವಳು ಕೆಲಸ ಮಾಡುವ ವೈದ್ಯರೊಬ್ಬರು ಅವನ ಹೊಸ್ಟೇಲ್ ಖರ್ಚನ್ನು ತಾವು ವಹಿಸಿಕೊಳ್ಳುವುದಾಗಿಯೂ ಭರವಸೆ ಇತ್ತರು. ಅವರ ಮಗನ ಶೈಕ್ಷಣಿಕ ಸಾಲವನ್ನು ತಾವು ತಮಗೆ ಪರೀಚಯವಿರುವ ಬ್ಯಾಂಕಿನಲ್ಲಿ ಕೊಡಿಸುವುದಾಗಿ ಹೇಳಿ ಕೊಡಿಸಿದರು.

ಅಂತೂ ಸಂದೇಶ ಸುರತ್ಕಲನ ಇಂಜಿನಿಯರಿಂಗ ಕಾಲೇಜು ಸೇರಿದ. ರೇಣುಕಾ ಅವಳು ಪಿಯುಸಿ ಓದಿದ ಕಾಲೇಜನಲ್ಲಿ ಬಿ.ಎಸ್.ಸಿಯನ್ನು ಸೇರಿದಳು. ಇಬ್ಬರು ದೂರ ದೂರವಿದ್ದರೂ ತಮ್ಮ ತಮ್ಮಲ್ಲಿ ಪತ್ರ ವಿನೀಮಯವನ್ನು ಇಟ್ಟುಕೊಂಡಿದ್ದರು. ಸಂದೇಶ ಆಗಾಗ ಊರಿಗೆ ಬಂದಾಗ ಅವಳೊಂದಿಗೆ ಒಂದಿಷ್ಟು ವೇಳೆ ಕಳೆದು ಹೋಗುತ್ತಿದ್ದ. ಹಾಗೂ ಹೀಗೂ ಮಾಡಿ ಮೂರು ವರ್ಷ ಕಳೆದವು. ಅವಳು ಬಿ.ಎಸ್.ಸಿ ಮುಗಿಸಿ ಎಂ.ಎಸ್.ಸಿ ಮಾಡಲು ಬೆಂಗಳೂರನ್ನು ಸೇರಿದಳು. ಅದೇ ವೆಳೆಗೆ ಆಕೆಯ ಕೈಯಲ್ಲಿ ಒಂದು ಮೊಬೈಲ್ ಕೂಡ ಬಂದಿತ್ತು. ಆತನ ಕೈಯಲ್ಲಿ ಮೊಬಲ್ ಇಲ್ಲದಿದ್ದರೂ ಹೊರಗೆ ಹೋಗಿ ಸ್ವಲ್ಪ ಹೊತ್ತು ಅವಳ ಜೊತೆ ಪೋನನಲ್ಲಿ ಮಾತಾಡಿ ಬರುತ್ತಿದ್ದ. ಅವಳ ಎಂ.ಎಸ್.ಸಿ ಮುಗಿಯುವಷ್ಟರಲ್ಲಿ ಅವನಿಗೆ ಇಂಜಿನಿಯರಿಂಗ ಮುಗಿಯುವಷ್ಟರಲ್ಲೇ ಕೆಲಸ ಸಿಕ್ಕಿದುದ್ದರಿಂದ ಇಂಜಿನಿಯರಿಂಗ ಮೂಗಿಸಿದೊಡನೆಯೇ ಬೆಂಗಳೂರು ಸೇರಿದ. ಮಗನಿಗೆ ಓದುತ್ತಿರುವಾಗಲೇ ಕೆಲಸ ಸಿಕ್ಕಿದ್ದನ್ನು ಕೇಳಿ ತಿಳಿದ ಸುರೇಖಾನ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರೊಂದಿಗೂ ಅದನ್ನು ಹೇಳಿಕೊಂಡು ಸಂತೋಷ ಪಟ್ಟಿದ್ದೇ ಪಟ್ಟಿದ್ದು.

ಸಂದೇಶನಿಂಗತೂ ಈಗ ಕೈತುಂಬ ಸಂಬಳ. ತಾನು ಸೇರಿದ ಕಂಪನಿಯಲ್ಲಿ ಅವನಿಗೆ ಕಾಯಂ ಕೂಡ ಆಗಿತ್ತು. ರೇಣುಕಾ ಕೂಡ (ಜೀವರಶಾಯನ ಶಾಸ್ತ್ರದಲ್ಲಿ) ಎಂ.ಎಸ್.ಸಿ ಮುಗಿಸಿ ಉತ್ತಮವಾದ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಳು. ಈಗೀಗ ಇಬ್ಬರೂ ಒಬ್ಬರನ್ನು ಒಬ್ಬರೂ ಬಿಟ್ಟಿರದ ಸ್ಥಿತಿ ತಲುಪಿದ್ದರೂ. ಈ ಮದ್ಯೆ ರೇಣುಕಾಗೆ ಮದುವೆಯ ಪ್ರಸ್ಥಾಪಗಳು ಬರ ಹತ್ತಿದವು. ರೇಣುಕಾಳ ತಂದೆ ಸಾಕಷ್ಟು ಶ್ರೀಮಂತರಲ್ಲದಿದ್ದರೂ, ಸಂದೇಶನ ಮನೆಯಷ್ಟು ಬಡವರಾಗಿರಲಿಲ್ಲ. ಹೇಗಾದರೂ ಮಾಡಿ ರೇಣುಕಾಳನ್ನು ಒಳ್ಳೆಯ ಸ್ಥಿತಿವಂತ ಹುಡುಗನಿಗೆ ಮದುವೆ ಮಾಡಿ ಕೊಟ್ಟರೆ, ಉಳಿದ ಇನ್ನೊಬ್ಬ ಮಗಳನ್ನು ಅದೇ ರೀತಿ ಮದುವೆ ಮಾಡಬಹುದು ಎನ್ನುವುದು ಅವರ ಅನಿಸಿಕೆ. ಮನಸ್ಸಲೇ ಪ್ರೀತಿ ಚಿಗುರಿದ್ದ ರೇಣುಕಾಗೆ ತಂದೆ ತರುತಿದ್ದ ಗಂಡುಗಳು ಇಷ್ಟವಾಗದೇ ಮದುವೆಯನ್ನು ದೂರ ತಳ್ಳುತಿದ್ದಳು. ತನ್ನ ಪ್ರೀತಿಯ ಬಗ್ಗೆ ಹೇಳದಿದ್ದರೂ ತನಗೆ ಬರುತ್ತಿರುವ ಗಂಡಗಳ ಬಗ್ಗೆ ಸಂದೇಶನಲ್ಲಿ ಆಗಾಗ ಹೇಳಿಕೊಳ್ಳುತಿದ್ದಳು.

ಅದೆಷ್ಟೇ ತಮ್ಮ ಪ್ರೀತಿಯನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅದೂ ತುಂಬಾ ದಿನ ಮುಚ್ಚಿಟ್ಟುಕೊಳ್ಳುಲಾಗಲಿಲ್ಲ. ಒಂದು ಭಾನುವಾರ ಇಬ್ಬರೂ ಇಸ್ಕಾನ ದೇವಸ್ಥಾನಕ್ಕೆ ಹೋಗಿದ್ದಾಗ ರೇಣುಕಾಳ ಬ್ಯಾಗಲಿದ್ದ ಮೊಬೈಲ್ ಜಾರಿ ಕೆಳಗೆ ಬಿದ್ದುದು ರೇಣುಕಾಳ ಗಮನಕ್ಕು, ಸಂದೇಶನ ಗಮನಕ್ಕು ಬಾರಲಿಲ್ಲ. ಅವರ ಹಿಂದೆ ನಿಂತ ಆಕೆ ಮೊಬೈಲನ್ನು ಎತ್ತಿಕೊಂಡು, ಸಂದೇಶನಿಗೆ "ನಿಮ್ಮಾಕೆಯ ಮೊಬೈಲ್ ಕೆಳಗೆ ಬಿದ್ದಿತ್ತು, ತಗೊಳ್ಳಿ"ಎಂದು ಕೊಟ್ಟಳು.

ಅವಳು ಹಾಗೆ ಹೇಳಿದಾಗ, ರೇಣುಕಾ ಮತ್ತು ಸಂದೇಶನಿಗೆ ನಗೂ ತಡೆಯಲಾಗಲಿಲ್ಲ. ಇಬ್ಬರಲ್ಲೂ ಯಾಕೆ ಅವಳು ಹೇಳಿದ ಹಾಗೆ ಆಗಬಾರದು ಅನಿಸಿತು. ದೇವಸ್ಥಾನದಿಂದ ಹೊರಗೆ ಬಂದು ಹೊಟೇಲಿನಲ್ಲಿ ಟೀ ಕುಡಿಯುತ್ತಿದ್ದಾಗ ಆಕೆ ಹೇಳಿದ ಮಾತು ನೆನಪಿಗೆ ಬಂದು ರೇಣುಕಾಗೆ ನಗೆ ತಡೆಯಲು ಆಗದೇ ತನ್ನಷ್ಟಕ್ಕೆ ತಾನೇ ನಗುತ್ತಿದ್ದಳು. ಸಂದೇಶ ಏನೆಂದು ಕೇಳಿದಾಗ ದೇವಸ್ಥಾನದಲ್ಲಿ ಮೊಬೈಲ್ ಕೊಡುತ್ತಾ ಆಕೆ ಹೇಳಿದ "ನಿಮ್ಮಾಕೆಯ" ಎನ್ನುವ ಶಬ್ದವನ್ನು ಒತ್ತಿ ಒತ್ತಿ ಹೇಳಿದಾಗ, ಸಂದೇಶ "ಅದರಲ್ಲಿ ತಪ್ಪೇನಿದೆ, ಈಗ ಅಲ್ಲದಿದ್ದರೂ ಮುಂದೆ ಆಗಬಹುದಲ್ಲವೇ" ಅಂದ. ಆತ ಹಾಗೆ ಹೇಳಿದ್ದನ್ನು ಕೇಳಿ ಅವಳಿಗೂ ಸಂತೋಷವಾಯಿತು. ಅಂತೂ ಇಬ್ಬರಿಗೂ ಪರಸ್ಪರ ಮನಸ್ಸಿರುವುದು ಅರೀಕೆಯಾಯಿತು.

ಮೊದಮೊದಲು ತಿಂಗಳಿಗೊಮ್ಮೆ ಊರಿಗೆ ಹೋಗುತ್ತಿದ್ದ ಸಂದೇಶ ಕ್ರಮೇಣ ಎರಡು ತಿಂಗಳಿಗೊಮ್ಮೆಯಾಗಿ, ಮೂರು ತಿಂಗಳಿಗೊಮ್ಮೆಯಾಗಿ, ಈಗಿಗ ಏಳು ತಿಂಗಳಿಗೋ, ವರ್ಷಕ್ಕೋ ಒಮ್ಮೆ ಊರಿಗೆ ಹೋಗಿ ಬರುತ್ತಿದ್ದ. ರಜಾ ಇದ್ದರೂ ಕೆಲಸ ಇದೆ ಎಂದು ಅಮ್ಮನಿಗೆ ಸುಳ್ಳು ಹೇಳಿ ರೇಣುಕಾಳೊಂದಿಗೆ ಬೆಂಗಳೂರು ಸುತ್ತುತ್ತಾ, ಹರಟೆ ಹೊಡೆಯುತ್ತಾ ಕಾಲಕಳೆಯುತ್ತಿದ್ದ. ಅಮ್ಮನಿಗೂ ಕೂಡ ಮಗ ಕೆಲಸದ ನೀಮಿತ್ತ ಊರಿಗೆ ಬರುತ್ತಿಲ್ಲ ಎಂದು ತಿಳಿದಳು. ಇಲ್ಲಿ ಬಂದು ತನ್ನನ್ನು ನೋಡದಿದ್ದರೇನಂತೆ, ಅಲ್ಲೆ ಉಳಿದು ಬೆಳೆದರೆ ಸಾಕು ಎಂದು ಮನಸ್ಸಿನಲ್ಲಿಯೇ ಹರಿಸಿದಳು.

ಈ ಮದ್ಯೆ ಸಂದೇಶ ಒಂದೆರಡು ಬಾರಿ ಅಮೇರಿಕಾ, ಇಂಗ್ಲೆಂಡ ಎಂದು ವಿದೇಶ ಪ್ರಯಾಣ ಮಾಡಿ ಬಂದ. ಹಾಗೆ ಹೋಗಿ ಬರುವಾಗ ಅಮ್ಮನಿಗಾಗಿ ಏನನ್ನೂ ತರದಿದ್ದರೂ ರೇಣುಕಾಳಿಗಾಗಿ ಮರೆಯದೇ ಒಂದು ಮೊಬೈಲ್, ಸುಗಂಧ ದ್ರವ್ಯದ ಶಿಸೆ, ಸೌದರ್ಯವರ್ಧಕದ ಸಾಮಾನುಗಳನ್ನು ತಂದು ಕೊಡುತ್ತಿದ್ದ. ರೇಣುಕಾಳು ಮನೆಯಲ್ಲಿ ತಾನು ಮದುವೆಯಾದರೆ ಸಂದೇಶನನ್ನೆ ಎಂದು ಸರಾಸಾಗಾಟವಾಗಿ ಹೇಳಿ ಬಿಟ್ಟಳು. ಮೊದಮೊದಲು ಆಕೆಯ ಮನೆಯವರು ವಿರೋಧಿಸಿದ್ದರಿಂದ ಇಬ್ಬರು ಬೆಂಗಳೂರಿನಲ್ಲಿ ರಿಜಿಸ್ಟರ ಮದುವೆ ಮಡಿಕೊಂಡು ಒಟ್ಟಿಗೆ ವಾಸಿಸತೊಡಗಿದರು. ತಾನು ಮದುವೆಯಾದ ವಿಷಯವನ್ನು ಅಮ್ಮನಿಗೆ ಹೇಳದೇ ಮುಚ್ಚಿಟ್ಟ ಸಂದೇಶ. ಆಮೇಲೆ ಅವರಿವರ ಬಾಯಿಂದ ಅಮ್ಮನಿಗೆ ಸುದ್ಧಿ ಮುಟ್ಟಿದಾಗ, ಅಮ್ಮ ಅತ್ತು ಕೇಳಿದರೆ ಹೌದು ಎಂದು ಅಷ್ಟು ಹೇಳಿ ಸುಮ್ಮನಾದ. ಸುರೇಖಾಳಿಗೆ ಹೇಗೂ ಮಗ ತನಗೆ ಹೇಳದೇ ಮದುವೆಯಾಗಿದ್ದಾನೆ ಸುಖವಾಗಿದ್ದರೆ ಸಾಕು ಎನಿಸಿತು.

ತನ್ನ ಮದುವೆಯಾದ ವಿಷಯ ಅಮ್ಮನಿಗೆ ತಿಳಿದಾಗ ಅಮ್ಮ ತನ್ನ ಮದುವೆಯನ್ನು ಒಪ್ಪಲಾರಳು ಎಂದು ತಿಳಿದ ಸಂದೇಶ ತಾನು ಊರಿಗೆ ಹೋಗುವುದನ್ನೇ ನಿಲ್ಲಿಸಿದ. ತನ್ನ ಮನೆ ಹಾಗೂ ಬಡತನದ ಸ್ಥಿತಿಯಲ್ಲಿದ್ದ ಅಮ್ಮನ ಬಗ್ಗೆ ಜಿಗುಪ್ಸೆ ಜಾಸ್ತಿಯಾಗಿತ್ತು. ಈಗೀಗ ಅಭಿವ್ರದ್ದಿ ಹೊಂದುತ್ತಿರುವ ಅವನ ಶ್ರೇಯಸ್ಸನ್ನು ನೋಡಿ, ಹೆಂಡತಿಯ ಮನೆಯವರು ಅವನಿಗೆ ಹತ್ತಿರವಾಗತೊಡಗಿದರೂ. ತನ್ನ ಮನೆಯ ಬಡತನಕ್ಕಿಂತ ಹೆಂಡತಿಯ ಮನೆಯ ಸಿರಿತನ ಅವನಿಗೆ ಹೆಚ್ಚು ರುಚಿಸಿತು.

ಮತ್ತೊಮ್ಮೆ ವಿದೇಶಕ್ಕೆ ಹೋಗುವುದು ಬಂದಾಗ ಹೆಂಡತಿಯನ್ನು ಜೊತೆಯಲ್ಲೇ ಕರೆದುಕೊಂಡು ಹೋದ. ಬರುವಾಗ ಹೆಂಡತಿಯ ಮನೆಯವರಿಗೆ ಅದು ಇದೂ ಅಂತ ಹಲವು ಕಾಣಿಕೆಗಳನ್ನು ತಂದು ನೀಡಿದ. ಈ ನಡುವೆ ಅವನಿಗೆ ಒಂದು ಮಗುವಾಯಿತು. ಅಮ್ಮನಿಗೆ ಆ ವಿಷಯ ತಿಳಿದು ಖುಷಿ ಎನಿಸಿತು. ಮಗ ಮನೆಗೆ ಬಾರದಿದ್ದರೇನಂತೆ ಖುಸಿಯಾಗಿದ್ದಾನಲ್ಲ ಎಂದು ತನ್ನಷ್ಟಕ್ಕೆ ತಾನು ಸಂತೋಷ ಪಟ್ಟಳು. ಆತನ ಹೆಂಡತಿಯ ತಂಗಿಯ ಮದುವೆ ನಿಶ್ಚಯವಾದಾಗ, ತನ್ನ ಹೆಂಡತಿಯ ತಂಗಿಯ ಮದುವೆಗಾಗಿ ಊರಿಗೆ ಬರಲಿರುವ ಮಗ ತನ್ನ ಮನೆಗೆ ಬರಬಹುದು ಎಂದು ಹಂಬಲಿಸಿ ಕಾದಳು. ಆದರೆ ಆತ ಹೆಂಡತಿಯ ಮನೆಗೆ ಬಂದವನು  ಮದುವೆ ಮುಗಿಸಿ ಹೆಂಡತಿಯ ಮನೆಯಿಂದಲೇ ವಾಪಸ್ ಬೆಂಗಳೂರಿಗೆ ಹೋದಾಗ, ಇನ್ನೂ ಮತ್ತೆ ಮಗ ತನ್ನನ್ನು ನೋಡಲು ಬರುವುದು ಕನಸೇ ಎನಿಸಿತು ಅವಳಿಗೆ.

ಮಗ ಇನ್ನೂ ತನ್ನನ್ನು ನೋಡಲು ಬರಲಾರ ಎಂದು ಮಾನಸಿಕ ಚಿಂತೆಗೆ ಒಳಗಾದ ಸುರೇಖಾ ದಿನೇ ದಿನೇ ಕ್ರಶವಾಗಹತ್ತಿದಳು. ವಯಸ್ಸು ಕೂಡ ಜಾಸ್ತಿಯಾಗಿ ತನ್ನ ಆರೋಗ್ಯದ ಸ್ಥೀಮಿತವನ್ನು ಕಳೆದುಕೊಳ್ಳಲಾರಂಭಿಸಿದಳು. ಮಗ ಬರಬಹುದೇನೋ ಎಂದು ಕನವರಿಸಿದಳು. ಆದರೆ ಸುಖದ ಸಾಗರದಲ್ಲಿ ತೇಲಾಡುತ್ತಿರುವ ಮಗನಿಗೆ ಈಗ ದು:ಖದಲ್ಲಿರುವ ತಾಯಿಯ ನೆನಪಾಗಲಿಲ್ಲ. ಅವನ ಲಕ್ಷವೆಲ್ಲ ಬೆಳೆಯುತ್ತಿರುವ ಅವನ ಮಗನ ಬಗ್ಗೆಯೇ ಹೊರತು ಸೊರಗುತ್ತಿರುವ ತಾಯಿಯ ಬಗ್ಗೆಯಲ್ಲ. ಊಟ ತಿಂಡಿ ನಿದ್ದೆ ಸರಿಯಿರದ ಕಾರಣ ಅವಳ ಆರೋಗ್ಯಸ್ಥಿತಿ ತುಂಬಾ ಹದಗೆಟ್ಟಿತ್ತು. ದೈಹಿಕ ಸ್ಥೀಮಿತವನ್ನು ಕಳೆದುಕೊಂಡ ಸುರೇಖಾಳನ್ನು ಅವಳು ಕೆಲಸಮಾಡುವ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವಳು ಬದುಕಿಸಿಕೊಳ್ಳಲಾಗಲಿಲ್ಲ. ಅವಳು ತೀರಿಹೋದ ವಿಷಯವನ್ನು ಮುಖ್ಯವೈದ್ಯರು ತಮ್ಮ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಮಾತನಾಡಿ, ಸಂದೇಶನ ಮಾವನಿಗೆ ಹೇಳಿ ಕಳಿಸಿದರು. ಸಂದೇಶನ ಮಾವನಿಂದ ಸಂದೇಶನಿಗೆ ಕರೆ ಹೋಯ್ತು. ಇಲ್ಲಿಯವರೆಗೆ ಬಾರದ ಸಂದೇಶ ಊರಿಗೆ ಬಂದ. ತಾಯಿಯ ಅಂತ್ಯಕ್ರೀಯೆಯ ಶಾಸ್ತ್ರ ಮಾಡಿ ಮತ್ತೆ ಬೆಂಗಳೂರಿಗೆ ನಡೆದ.

ಹತ್ತಿಪ್ಪತ್ತು ವರ್ಷ ಬೆಂಗಳೂರಲ್ಲಿ ದುಡಿದ ಸಂದೇಶನಿಗೆ ಬೆಂಗಳೂರು ಈಗೀಗ ಬೇಸರ ಬರಲಾರಂಭಿಸಿತು.ಇನ್ನು ದುಡಿದದ್ದು ಸಾಕು ಎನಿಸಿ ಊರಿಗೆ ಹೋಗುವ ಮನಸ್ಸಾಯಿತು. ಹೇಗಿದ್ದರೂ ಊರ ಮುಖ್ಯ ರಸ್ಥೆಯಲ್ಲಿರುವ ತಾವಿದ್ದ ಮನೆಯ ಜಾಗದ ನೆನಪಾಯಿತು. ಅಲ್ಲಿಯೇ ಮನೆ ಕಟ್ಟಿದರೆ ಹೇಗೆ ಎನಿಸಿತು. ಮಾವನೊಂದಿಗೂ ವಿಷಯ ಪ್ರಸ್ತಾಪಿಸಿದ. ಮಾವನಿಗೂ ಅದು ಹೌದೆನಿಸಿ ಒಪ್ಪಿಗೆಯಿತ್ತ. ಅಲ್ಲಿದ ಎರಡು ಪಕ್ಕೆಯ ಮನೆ ಹೋಗಿ ಎರಡಂತಸ್ತಿನ ಭವ್ಯವಾದ ಮನೆ ನಿರ್ಮಾಣಗೊಂಡಿತು. ಮನೆಯ ಮುಂದೆ ಮನೆಯ ಹೆಸರನ್ನು ಸೂಚಿಸುವ ದೊಡ್ಡದಾದ ಫಲಕವನ್ನು ನೇತು ಹಾಕಲಾಗಿತ್ತು. ಆ ಫಲಕದಲ್ಲಿ ದೊಡ್ಡದಾಗಿ ಬರೆಯಲಾಗಿತ್ತು "ಸುರೇಖಾ ನಿಲಯ" ಎಂದು. ನೋಡಿದ ಜನ ನಕ್ಕರು, ಸಾಯುವರೆಗೂ ನೆನೆಯದ ಹೆಸರು, ಸತ್ತ ಮೇಲೆಯಾದರೂ ನೆನಪಿಗೆ ಬಂತಲ್ಲ ಎಂದು.

ಮಂಜು ಹಿಚ್ಕಡ್

No comments:

Post a Comment