Tuesday, May 5, 2015

ಹಾಗಾಗಿಯೇ ಈ ಮುಂಜಾವಿನ ನಡಿಗೆ!

ಇಂದು ಬೆಳಿಗ್ಗೆ ಬೆಂಗಳೂರಿನಿಂದ ಬಂದ ಬಸ್ಸು ಅಂಕೋಲಾ ತಲುಪಿದಾಗ ಸಮಯ ೬-೧೫. ಹೊಸ ರಸ್ಥೆಯಾಗುತಿದ್ದುದರಿಂದ ನಾನು ಹತ್ತಿ ಬಂದ ಖಾಸಗಿ ಬಸ್ಸನ್ನು ಕಣಕಣೇಶ್ವೇರ ದೇವಸ್ಥಾನದ ಬಳಿಯೇ ಕೊನೆಯ ನಿಲ್ದಾಣವೆಂದು ನಿಲ್ಲಿಸಿದ್ದರಿಂದ ಬೇರೆ ವಿಧಿಯಿಲ್ಲದೇ ಬಸ್ಸು ಇಳಿದೊಡನೆಯೇ ಮನೆಯ ಸೇರುವ ತವಕದೊಂದಿಗೆ .ಕಣಕಣೇಶ್ವರ ದೇವಸ್ಥಾನದಿಂದ ನಡೆದು ಬಸ್ ನಿಲ್ದಾಣದತ್ತ ಮುಖಮಾಡಿ ಹೊರಟೆ. ನಿನ್ನೆಯ ದಿನ ಸ್ವಲ್ಪ ಮಳೆ ಬಂದು ಇಳೆ ತೊಯ್ದಿದರಿಂದಲೋ, ಅಥವಾ ಮುಂಜಾವಿನ ತುಸು ಚಳಿ ಇನ್ನೂ ಸ್ವಲ್ಪ ಇದ್ದುದರಿಂದಲೋ ಏನೋ ಬೇಸಿಗೆಯಾಗಿದ್ದರೂ  ಬೇಸಿಗೆ ಅಂತೆನಿಸಲಿಲ್ಲ. ಅಂಕೋಲೆಯ ನೆಲಕ್ಕೆ ಕಾಲಿಟ್ಟೊಡನೆ ಮಲಗಿರುವ ಮೈಮೇಲಿನ ಬೆವರಗ್ರಂಥಿಗಳು ಎಚ್ಚರಗೊಂಡು ಎಡೆಬಿಡದೇ ಸದಾ ಜಿನುಗುವ ಬೆವರಹನಿಗಳು ಇಂದೇಕೋ ಜಿನುಗುತ್ತಿರಲಿಲ್ಲ.

ಕಣಕಣೇಶ್ವರ ದೇವಸ್ಥಾನದಿಂದ ಹೊರಟ ನಾನಿನ್ನೂ ಮೀನು ಪೇಟೆಯವರೆಗೂ ತಲುಪಿರಲಿಲ್ಲ, ಹಿಂದಿನಿಂದ ಯಾರೋ ಕೂಗಿದಂತಾಗಿ ಹಿಂದಿರುಗಿ ನೋಡಿದೆ. ಯಾರೋ ಒಬ್ಬಾತ ನನ್ನನ್ನು ಕರೆದು "ಆಟೋ ಬೇಕಾ" ಎಂದು ಕೇಳಿದ. "ಹೌದು" ಎಂದೆ. "ಐದು ನಿಮಿಷ" ಎಂದವನು ಯಾರಿಗೋ ಕರೆ ಮಾಡಿದ. ಎರಡು ನಿಮಿಷ ಕಳೆಯುವುದರಲ್ಲಿ ಆಟೋ ನನ್ನ ಮುಂದೆ ಪ್ರತ್ಯಕ್ಷವಾಗಿ ನಿಂತಿತ್ತು. ಆಟೋದವನು ಎಲ್ಲಿಗೆ ಎಂದು ಕೇಳಿದಾಗ, "ಹಿಚ್ಕಡ್" ಎಂದು ಹೇಳಿ ಕುಳಿತೆ. ಮೀಟರ್ ಹಾಕುವುದು ನಮ್ಮ ಕಡೆಯ ಆಟೋದವರ ವಾಡಿಕೆಯಲ್ಲದ ಕಾರಣ, ಮರು ಮಾತನಾಡದೆ ಸುಮ್ಮನೆ ಕುಳಿತೆ. ಆಟೋ ಹೊರಟಿತು ನನ್ನನ್ನು ನನ್ನ ಕೈಲಿರುವ ಚೀಲವನ್ನು ಹೊತ್ತು ನಮ್ಮೂರ ಮುಖವಾಗಿ.

ಎಂದಿನ ಅಭ್ಯಾಸದಂತೆ ಆಟೋದಲ್ಲಿ ಕುಳಿತು ಹೊರಗಿನ ಮುಂಜಾವಿನಲ್ಲಿ ಆಗತಾನೇ ಅರಳುತ್ತಿರುವ ಪರಿಸರವನ್ನು ವೀಕ್ಷಿಸುತ್ತಾ ಹೊರಟೆ. ನಾ ನೋಡುತ್ತಾ ಬೆಳೆದ ಊರಿನ ಪರಿಸರ ಮೊದಲಿನಂತಿರದೇ ಸಾಕಷ್ಟು ಬದಲಾದಂತೆ ಅನಿಸದಿರಲಿಲ್ಲ. ಅನಿಸುವುದೇನು ಬದಲಾಗಿದೆ ಕೂಡ. ಮುಂಜಾವಿನ ಸೂರ್ಯ ಆಗತಾನೇ ಕೆಂಪು ಬಣ್ಣವನ್ನು ತೊಟ್ಟು ಪೂರ್ವದಲ್ಲಿ ಕರಬಂಧ ಸತ್ಯಾಗ್ರಹಕ್ಕೆ ಒಂದಕ್ಕೊಂದು ಕೈಹಿಡಿದು ನಿಂತತೆ ತೋರುವ ಸಹ್ಯಾದ್ರಿಗಳ ಶ್ರೇಣಿಯಿಂದ ಮೆಲ್ಲಗೆ ಮೇಲೇರುತ್ತಾ ಬರುತಿದ್ದ. ಅದರಲ್ಲೇನು ಬದಲಾವಣೆ ಇರಲಿಲ್ಲ, ಆದರೆ ಒಂದು ಕಾಲದಲ್ಲಿ ವರ್ಷಕ್ಕೆ ಎರಡು ಬಾರಿ ಬೇಸಾಯಗೊಳ್ಳುತ್ತಿದ್ದ ರಸ್ತೆಯ ಇಕ್ಕಲದ ಗದ್ದೆಗಳು ಇಂದು ಮೂರು ಗುಂಟೆಯ ಸೈಟುಗಳಾಗಿ ವಿಭಜನೆಗೊಂಡು, ಅಲ್ಲಲ್ಲಿ ಎರಡೆರಡು ಅಂತಸ್ತಿನ ಸಿಮೆಂಟ್ ಮನೆಗಳು ಮೆಲೆದ್ದಿದ್ದವು. ಸದಾ ಹಸಿರು ಹೊದ್ದು ಮಲಗಿರುತಿದ್ದ ಹಲಸದ ಗುಡ್ಡದಲ್ಲಿ ಇಂದು ಹಸಿರಿರಲಿಲ್ಲ. ಬದಲಾಗಿ ದೂರದಿಂದ ಕಪ್ಪನೆ ಕಾಣುವ ನೆಲದ ನಡುವಿಂದ ಕೆಂಪನೆಯ ಮಣ್ಣು ಹೊರಹೋಗುತಿತ್ತು ಲಾರಿಗಳಲ್ಲಿ. ರಸ್ತೆಯ ಅಗಲೀಕರಣದ ಹೆಸರಲ್ಲಿ ರಸ್ತೆಯ ಅಕ್ಕಪಕ್ಕದ ಗಿಡಗಳೆಲ್ಲ ಕೊಡಲಿ ಪೆಟ್ಟಿಗೆ ಉದುರಿ ನೆಲದ ಮೇಲೆ "ಸೇಪ್ಟಿ" ಮಾಪನದಲ್ಲಿ ಅಳೆಯುವ ನಾಟಾಗಳಾಗಿ ಮಲಗಿದ್ದವು. ಎಲ್ಲಕ್ಕಿಂತ ಮಿಗಿಲಾದ ಬದಲಾವಣೆಯೆಂದರೆ ಅಲ್ಲಿನ ಜನರ ಮುಂಜಾವಿನ ನಡಿಗೆ. ಪ್ರತೀ ಐವತ್ತು ಅರವತ್ತು ಮೀಟರಗೆ ಒಬ್ಬರು ಕೈಯಲ್ಲಿ ಕೋಲು ಹಿಡಿದು ಮುಂಜಾವಿನ ನಡಿಗೆಯಲ್ಲಿ ತೊಡಗಿದ್ದು. ಬಹುಷಃ ಲಿಂಗಬೇಧವಿಲ್ಲದೇ ನಡೆದಂತಹ ಅತ್ಯಂತ ವೇಗವಾದ ಬದಲಾವಣೆಯೆಂದರೆ ಇದೇ ಇರಬಹುದೇನೋ.

೨೫-೩೦ ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. ಅಂದು ಬೇಸಾಯ ಮಾಡದೇ ಖಾಲಿ ಬಿಟ್ಟ ಭೂಮಿಗಳು ಸಿಗುತಿದ್ದುದೇ ಕಡಿಮೆ. ಅತೀ ವಿರಳಕ್ಕೊಬ್ಬರು ಒಂದೊಮ್ಮೆ ಮಕ್ಕಳು ಹೊರಗಿದ್ದು ನೌಕರಿ ಮಾಡುತಿದ್ದರೆ ತಮ್ಮ ಗದ್ದೆಗಳನ್ನು ಗೇಣಿಗೆ ಕೊಡುತಿದ್ದರೂ. ಆದರೆ ಇಂದು ಗೇಣಿಗೆ ಕೊಳ್ಳುವವರಿಗಿಂತ ಗೇಣಿಗೆ ಕೊಡುವವರೇ ಹೆಚ್ಚಾಗಿ ಗದ್ದೆಗಳು ಪಾಡು ಬಿಳುತ್ತಿವೆ. ಇನ್ನೂ ಭೂಮಿಯ ಬೆಲೆಯೂ ಈಗೀನ ಒಂದಂಶದಷ್ಟು ಇರಲಿಲ್ಲ. ಮಾರುತ್ತೆನೆ ಎಂದರೆ ಕೊಳ್ಳುವವರಿರಲಿಲ್ಲ. ಈಗಂತೂ ಕೊಳ್ಳುತ್ತೇನೆ ಎಂದರೂ ಮಾರುವವರಿಲ್ಲ. ಮಾರುವವರಿದ್ದರೂ ಬೆಲೆ ಮಾತನಾಡಿಸುವಂತಿಲ್ಲ. ಅಂದು ಗದ್ದೆ ಮಾಡುತಿದ್ದ ಕಾಲದಲ್ಲಿ, ರಸ್ತೆಯ ಇಕ್ಕಲದಲ್ಲಿ, ನೇಗಿಲು ಹೊತ್ತು ಗದ್ದೆಗೆ ಎತ್ತು ಹೊಡೆದುಕೊಂಡು ಹೋಗುತಿದ್ದುದನ್ನು ಕಾಣಬಹುದಿತ್ತು. ಈಗ ಗದ್ದೆ ಮಾಡುವರೇ ಇಲ್ಲದ ಮೇಲೆ, ಇನ್ನೂ ಬೆಳಿಗ್ಗೆ ನೇಗಿಲು ಹೊತ್ತು ರಸ್ತೆಯ ಇಕ್ಕಲದಲ್ಲಿ ಹೊರಡಬೇಕಾದ ಅಂದಿನ ರೈತರು ಇನ್ನೆಲ್ಲಿ.

ಗದ್ದೆ ಮಾಡದ ಮೇಲೆ ಗದ್ದೆಗಳಲ್ಲಿ ಬೇಸಾಯದ ಬೆಳೆಯ ಹಸುರೆಲ್ಲಿ? ನೆಲದ ಬೆಲೆ ಮುಗಿಲೆತ್ತರಕ್ಕೆ ಏರುತ್ತಿರುವಾಗ ಖಾಲಿ ಗದ್ದೆಗಳಿದ್ದೇನು ಪ್ರಯೋಜನ? ಹಾಗಾಗಿ ಗದ್ದೆಗಳು ಸೈಟುಗಳಾಗಿವೆ. ಗದ್ದೆ ಸೈಟು ಆಗಿ, ಅದನ್ನು ದುಪ್ಪಟ್ಟು ಬೆಲೆ ಕೊಟ್ಟು ಕೊಂಡ ಮೇಲೆ ಹಾಗೆ ಇಟ್ಟು ಕೊಳ್ಳಲಾದೀತೇ. ಅಲ್ಲೊಂದು ಮನೆ ಬೇಡವೇ? ಖಾಲಿ ಮನೆ ಇದ್ದರೆ ಸಾಕೇ? ಮನೆಯ ಮುಂದೆ ಕಾರು, ಬೈಕುಗಳು ಬೇಡವೇ? ಕಾರು ಬೈಕುಗಳು ಇದ್ದ ಮೇಲೆ ರಸ್ತೆ ಬೇಡವೇ? ನಾಲ್ಕಾರು ಹತ್ತಾರು ಮನೆಗಳಿಂದ ಹೊರಕ್ಕೆ ಬಂದು ಹೋಗುವ ಬೈಕು ಕಾರುಗಳಿಗೆ ರಸ್ತೆ ಸಪೂರ ಇದ್ದರೆ ಆದೀತೇ? ರಸ್ತೆ ಅಗಲಗೊಳ್ಳ ಬೇಕಲ್ಲವೇ? ರಸ್ತೆ ಅಗಲವಾಗಬೇಕು ಎಂದರೆ, ರಸ್ತೆಯ ಇಕ್ಕಲದ ಗಿಡ ಮರಗಳನ್ನು ಕಡಿಯಬೇಕಲ್ಲವೇ? ರಸ್ತೆಯ ಬಳಿಯ ಮರ ಕಡಿದು ರಸ್ತೆಯನ್ನು ಹಾಗೆ ಬಿಟ್ಟರಾದಿತೇ? ಅದನ್ನು ಸಮತಟ್ಟಾಗಿ ಮಾಡಲು ಮಣ್ಣು ಬೇಕಲ್ಲವೇ? ರಸ್ತೆಯ ಉಬ್ಬರದ ಮಣ್ಣು ಸಾಲದಾದಾಗ ಗುಡ್ಡಗಳ ಮೇಲಿನ ಮಣ್ಣು ಬೇಕಲ್ಲವೇ? ಆ ಮಣ್ಣು ಅಗಿಯಲು ಗುಡ್ಡ ಕಡಿಯಬೇಕಲ್ಲವೇ? ಗುಡ್ಡ ಕಡಿದ ಮೇಲೆ ಅಲ್ಲಿರುವ ಹಸಿರು ಇರುತ್ತದಯೇ? ಇನ್ನೂ ಮನೆಯಿಂದ ಹೊರಹೋಗಲು ಬರಲು ಬೈಕು ಕಾರುಗಳು ಇರುವಾಗ ನಡಿಗೆಗೆ ಅವಕಾಶವೆಲ್ಲಿ. ನಡಿಗೆ ಇಲ್ಲದ ಮೇಲೆ ಮೈ ಬೆಳೆಯಲೇ ಬೇಕೆಲ್ಲ. ಮೈ ಸುಮ್ಮನೆ ಬೆಳೆದಿರುತ್ತದೆಯೇ? ಕಾಯಿಲೆಗಳನ್ನು ತುಂಬಿಕೊಂಡಿರುವುದಿಲ್ಲವೇ? ಕಾಯಿಲೆಗಳು ಕಡಿಮೆಯಾಗಬೇಕು ಎಂದರೆ ಮೈ ಕರಗಬೇಕು. ಮೈಕರಗಬೇಕು ಎಂದರೆ ನಡಿಗೆ ಮಾಡಬೇಕು. ಎಲ್ಲಾ ಕೆಲಸಕ್ಕು ನಡೆದು ಹೋದರೆ ವೇಳೆಯ ಅಭಾವವಾಗುವುದಿಲ್ಲವೇ? ಅದಕ್ಕೆ ಕೆಲಸವಿರದ ಮುಂಜಾವಿನ ವೇಳೆಯೇ ಸೂಕ್ತವಲ್ಲವೇ? ಹಾಗಾಗಿಯೇ ಈ ಮುಂಜಾವಿನ ನಡಿಗೆ.

-ಮಂಜು ಹಿಚ್ಕಡ್

No comments:

Post a Comment